೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಶ್ಲಾಘನೀಯ: ಲಲಿತಾ ರಾಣಿ

ಗಂಗಾವತಿ: ವಿವಿಧ ಕ್ಷೇತ್ರಗಳಲ್ಲಿ ೩೨ ಸಾಧಕರನ್ನು ಗುರುತಿಸಿ, ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ ಎಂದು ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.

ಅವರು ಭಾನುವಾರ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀ ಚನ್ನಬಸವ ಪ್ರಕಾಶನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಮಹಿಳಾ ಕವನ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದ ೧೦೮ನೇ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟಕ ಪರಶುರಾಮ ಪ್ರಿಯ ಅವರು ಕಳೆದ ೨೫ ವರ್ಷಗಳಿಂದ ಅನೇಕ ಸಂಘ, ಸಂಸ್ಥೆಗಳ ಮೂಲಕ ಉತ್ತಮ ಕಾರ್ಯಕ್ರಮ, ಸಮಾರಂಭ ನಡೆಸುತ್ತಾ ಬಂದಿದ್ದಾರೆ. ಇದು ಸಾಮಾನ್ಯ ಕಾರ್ಯವಲ್ಲ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿ ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಕಸಾಪ ಭವನ ಇದ್ದೂ ಇಲ್ಲದಂತಾಗಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳದ ಕೊರತೆ ಬರಬಾರದು. ಈ ನಿಟ್ಟಿನಲ್ಲಿ ಕಸಾಪ ಪದಾಧಿಕಾರಿಗಳು ಗಮನಹರಿಸಿ ಕಸಾಪ ಭವನ ಸ್ವಚ್ಚತೆ ಕಾಪಾಡಬೇಕು ಎಂದರು.

ಮಾಜಿ ಕಾಡಾ ಅಧ್ಯಕ್ಷ, ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಮಯದಲ್ಲಿ ಪತ್ರಕರ್ತರಾದ ಎಸ್.ಎಂ.ಪಟೇಲ್, ರಾಮಮೂರ್ತಿ ನವಲಿ, ಸಿ.ಮಹಾಲಕ್ಷ್ಮೀ, ಡಾ|| ಶಿವಕುಮಾರ ಮಾಲಿಪಾಟೀಲ್, ಬಿ.ಸಿ.ಐಗೋಳ, ಪಂಚಾಕ್ಷರಕುಮಾರ, ಮಾರುತಿ ಐಲಿ, ಚನ್ನಬಸಪ್ಪ ಬಳಗಾರ ಉಡುಪಿ, ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಹಾವೇರಿ, ವಿಷ್ಣುತೀರ್ಥ ಜೋಶಿ, ವಿ.ಎಸ್.ಶಿವಪ್ಪಯ್ಯನಮಠ ಯಲಬುರ್ಗಾ ಸೇರಿದಂತೆ ೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಂತರ ಪತ್ರಕರ್ತ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದಿಂದ ನಡೆದ ೧೦೮ನೇ ಕವಿಗೋಷ್ಠಿಯಲ್ಲಿ ಶಾಮೀದ್ ಲಾಠಿ, ಶಶಿಕಲಾ ಕುರುಗೋಡು, ಚಿದಾನಂದ ಕೀರ್ತಿ, ಭೀಮನಗೌಡ ಕೇಸರಹಟ್ಟಿ, ಜಯಶ್ರೀ ಹಕ್ಕಂಡಿ ಮತ್ತಿತರರು ಕವನ ವಾಚಿಸಿದರು.

ನಿವೃತ್ತ ಪ್ರಾಚಾರ್ಯ ಬಸವರಾಜ ಐಗೋಳ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ ಆರ‍್ಹಾಳ, ಗುರುರಾಜ ಬೆಳ್ಳುಬ್ಬಿ, ಪಿ.ಎಂ.ಸುಬ್ರಮಣ್ಯಂ, ಎಂ.ಪರಶುರಾಮ ಪ್ರಿಯ, ಕೃಷ್ಣ ಆಶೀಶ್, ರಗಡಪ್ಪ ಹೊಸಳ್ಳಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಶಿಕ್ಷಕ ಸುಂಕಪ್ಪ ಸ್ವಾಗತಿಸಿ, ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರೂಪಿಸಿದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading