ಗಂಗಾವತಿ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗಂಗಾವತಿಯ ಅಮರ್ ಗಾರ್ಡನ್ ಸಭಾಂಗಣದಲ್ಲಿ ಜರುಗಿದ ಭಾರತೀಯ ವೈದ್ಯಕೀಯ ಸಂಘದ 91ನೆಯ ರಾಜ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಗೊಂಡಿತು ಎಂದು ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಡಾ|| ಅಮರೇಶ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು.
ಅವರು ಅಕ್ಟೋಬರ್-26 ರವಿವಾರ ಸಮ್ಮೇಳನದ ಆಶಯ ನುಡಿಗಳನ್ನಾಡಿ, ಕಳೆದ ಶುಕ್ರವಾರದಿಂದ ಆರಂಭಗೊಂಡ ಈ ಸಮ್ಮೇಳನವು ರವಿವಾರದಂದು ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಬಂದ ನುರಿತ ತಜ್ಞರಿಂದ ಹಲವು ವೈವಿಧ್ಯಮಯ ವಿಷಯಗಳ ಕುರಿತು ಚಿಂತನ ಮಂಥನ ಹಾಗೂ ಅವರಿಂದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವುದರ ಮೂಲಕ ಕಿರಿಯ ವೈದ್ಯರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಸಿದ್ದಾರೆ ಎಂದು ತಿಳಿಸಿದ ಅವರು ಸಮ್ಮೇಳನಕ್ಕೆ ಆಗಮಿಸಿದ ಸಂಘದ ಪ್ರತಿನಿಧಿಗಳಿಗೆ ಕೃತಜ್ಞತಾ ಸಮರ್ಪಣೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ವೈದ್ಯಕೀಯ ಸಂಘದ ನೂತನ ಅಧ್ಯಕ್ಷ ಡಾ|| ಮಲ್ಲನಗೌಡ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಡಾ|| ನಾಗರಾಜ್ ಲೋಕರೆ, ಖಜಾಂಚಿ ಡಾ|| ಅರವಿಂದ ಕೆ., ಸಹಕಾರ್ಯದರ್ಶಿ ಶ್ರೀ ಡಾ||
ಭಾನು ಪ್ರತಾಪ್ ಹೊಸಕೇರಿ ಇವರುಗಳಿಗೆ ರಾಜ್ಯಾಧ್ಯಕ್ಷ ವೀರಭದ್ರಪ್ಪ ಪ್ರಮಾಣವಚನ ಬೋಧಿಸಿದರೆ, ಈ ಹಿಂದಿನ ಅಧ್ಯಕ್ಷ ಡಾ|| ಎ.ಎಸ್ಎನ್ ರಾಜು ಹಾಗೂ ಕಾರ್ಯದರ್ಶಿ ಡಾ|| ನಾಗರಾಜ್ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಐ ಎಂ ಎ ಸಂಘದ ಮಾಜಿ ಅಧ್ಯಕ್ಷ ವಿವಿ ಚಿನಿವಾಲರ, ಡಾ|| ಮಲ್ಲನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
