ಸಂಸ್ಕಾರಗಳ ಅನುಕರಣೆ ಮಕ್ಕಳ ಶಿಕ್ಷಣದ ಭಾಗವಾಗಬೇಕು: ನಾಗರಾಜ ಗುತ್ತೇದಾರ

ಕೊಪ್ಪಳ: ಕೊಪ್ಪಳದ ಸೇವಾಭಾರತಿಯ ವಿದ್ಯಾವಿಕಾಸ ಪ್ರಕಲ್ಪದ ಮನೆಪಾಠ ಕೇಂದ್ರಗಳ ವಾರ್ಷಿಕೋತ್ಸವವು ಫೆಬ್ರವರಿ-೦೯ ರಂದು ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಜರುಗಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗಂಗಾವತಿಯ ಸಂಕಲ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆ ಬಗ್ಗೆ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಶ್ರದ್ಧಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಮತಿ ಪಟ್ಟಣಶೆಟ್ಟಿ ಅವರು ಸೇವಾಭಾರತಿಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು.

ಸೇವಾಭಾರತಿಯ ವಿಭಾಗ ಸಂಯೋಜಕರಾದ ಪ್ರಾಣೇಶ ಜೋಶಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಜಯಶ್ರೀ ಪಲ್ಲೇದ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ಶಾರದಾ ಕೊರಗಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಪ್ರಕಲ್ಪದ ಸಮಿತಿಯ ಅಧ್ಯಕ್ಷರಾದ ಅಮರೇಶ ಪಾಟೀಲ, ವಿಶ್ವಸ್ತರಾದ ಮಾ. ಬಸವರಾಜ ಡಂಬಳ, ಸಮಿತಿಯ ಕಾರ್ಯದರ್ಶಿಯಾದ ಮಹಾದೇವಪ್ಪ ಕೌಲಗಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮಹಾಲಕ್ಷ್ಮಿ ಕಂದಾರಿ, ದೀಪಾ ಕುಲಕರ್ಣಿ, ಬಸವರಾಜ ಸಮಗಂಡಿ, ಕಾರ್ಯಕರ್ತರಾದ ಗೀತಾ ಐಲಿ, ಹುಲಿಗೆಮ್ಮ ಉಂಕಿ, ವಿದ್ಯಾವಿಕಾಸ ಪ್ರಕಲ್ಪದ ಭಾಗ್ಯನಗರದ ಹಾಗೂ ಕೊಪ್ಪಳದ ಶಿಕ್ಷಕಿಯರು, ಸೇವಾ ಭಾರತಿಯ ಹಿತೈಷಿಗಳ ೩೫೦ ಕ್ಕೊ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ನಂತರ ನಡೆದ ಪಾಲಕರ ಸಭೆಯಲ್ಲಿ ೯೦ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಮಧ್ಯಾಹ್ನ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಾತೆಯರು ಎಲ್ಲಾ ಮಕ್ಕಳಿಗೆ ಮಾತೃ ಭೋಜನದ ಸವಿಯನ್ನು ಉಣಿಸಿದರು. ಊಟದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೆಪಾಠ ಕೇಂದ್ರದ ಮಕ್ಕಳು ಪ್ರತಿಭಾ ಪ್ರದರ್ಶನ ನೀಡಿದರು.
ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading