‘ತುಂಗಭದ್ರಾ ಅಭಿಯಾನ’ಕ್ಕೆ ೧೦೭ನೇ ಕವಿಗೋಷ್ಠಿ ಬೆಂಬಲ

ಗಂಗಾವತಿ: ನಗರದ ಹೊಸಳ್ಳಿ ರಸ್ತೆ ಮರ‍್ಗದ ಲಿಟಲ್ ಹಾರ್ಟ್ಸ್‌ ಸ್ಕೂಲ್ ಮುಂದಿರುವ ಕನ್ನಡ ಜಾಗೃತಿ ಸಮಿತಿಯ ಶ್ರೀ ಭುವನೇಶ್ವರಿ ಭವನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಿರ್ಮಲ ತುಂಗಭದ್ರಾ ಕುರಿತು ಕವನ ವಾಚಿಸುವ ಮೂಲಕ ಕವಿ ಕವಯತ್ರಿಯರು ನಿರ್ಮಲ ತುಂಗಭದ್ರಾ ಅಭಿಯಾನ’ಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಗಂಗಾವತಿಯ ಕನ್ನಡ ಜಾಗೃತಿ ಸಮಿತಿ ಮತ್ತು ತುಂಗಭದ್ರಾ ಅಭಿಯಾನ ಸಹಯೋಗದಲ್ಲಿ ಕಾವ್ಯಲೋಕ ಸಂಘಟನೆ ‘ನಿರ್ಮಲ ತುಂಗಭದ್ರಾ’ ಶೀರ್ಷಿಕೆಯಡಿ ಆಯೋಜಿಸಿದ್ದ ೧೦೭ನೇ ಕವಿಗೋಷ್ಠಿಯಲ್ಲಿ ಹಿರಿಯ ಕವಿ ಶರಣಪ್ಪ ಮೆಟ್ರಿ, ಶಾಮೀದ್ ಲಾಠಿ, ಭೀಮನಗೌಡ ಕೇಸರಹಟ್ಟಿ, ಮಹಾದೇವ ಮೋಟಿ ಹೊಸಳ್ಳಿ, ಸೋಮಶೇಖರ್ ಕಂಚಿ, ವಿರುಪಣ್ಣ ಢಣಾಪುರ, ಮಂಜುಳ ವೆಂಕಟಗಿರಿ, ಗೋಪಿನಾಥ್ ದಿನ್ನಿ, ಹುಸೇನ್ ಸಾಬ್ ಗುಂಡೂರು, ನೀಲಮ್ಮ ಹಿರೇಮಠ, ಅಜ್ಜಯ್ಯಸ್ವಾಮಿ ವೆಂಕಟಗಿರಿ, ತಾರಾ ಸಂತೋಷ, ಜಡಿಯಪ್ಪ ಮೆಟ್ರಿ, ಶಶಿಕಲಾ, ಮಹ್ಮದ್‌ಮಿಯಾ ವೆಂಕಟಗಿರಿ, ಷಣ್ಮುಖಸ್ವಾಮಿ ಕಡ್ಡಿಪುಡಿ ಮತ್ತಿತರರು ತುಂಗಭದ್ರಾ ನದಿಯ ಸ್ವಚ್ಚತೆ, ರಕ್ಷಣೆ, ನಿರ್ಮಲತೆ ಇನ್ನಿತರ ವಿಷಯಗಳ ಬಗ್ಗೆ ಕವನ ವಾಚಿಸಿ ಗಮನ ಸೆಳೆದರು.
ನವದೆಹಲಿಯ ಸ್ವಾಭಿಮಾನ ಆಂದೋಲನ ಮುಖ್ಯಸ್ಥ ಬಸವರಾಜ ಪಾಟೀಲ ವೀರಾಪುರ ಉದ್ಘಾಟನೆ ನೆರವೇರಿಸಿ ಮಾತನಾಡಿ, ತುಂಗಭದ್ರಾ ಜಲಾಶಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು. ಅಲ್ಲದೇ ಜಲ ರಕ್ಷಣೆ ಯೋಜನೆ ಕಾರ್ಯಗಳ ಮಾಹಿತಿ ನೀಡಿದರು.
ಹಿರಿಯ ಸಾಹಿತಿ, ಶಿಕ್ಷಕ ರಾಘವೇಂದ್ರ ದಂಡಿನ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿನ ಆಗು ಹೋಗುಗಳಿಗೆ ಕವಿಗಳು ಸ್ಪಂದಿಸಬೇಕು. ನಾಡಿನ ನೆಲ, ಜಲ ಉಳಿಸುವ ಹೋರಾಟಗಳಿಗೆ ಕವಿಗಳು ಶುದ್ಧ ಅಂತಃಕರಣದಿಂದ ಕಾವ್ಯ ರಚಿಸುವ ಮೂಲಕ ನೈತಿಕ ಬೆಂಬಲ ನೀಡಬೇಕು. ಕವನದ ವಿಷಯ, ವಸ್ತು, ಲಾಲಿತ್ಯ, ಶಬ್ದಗಳ ಬಳಕೆ ಮೊದಲಾದ ಅಗತ್ಯತೆ ಬಗ್ಗೆ ಕವಿಗಳು ಗಮನ ಹರಿಸಬೇಕು ಎಂದರು.
ರೈತ ಮುಖಂಡ, ನ್ಯಾಯವಾದಿ ತಿಪ್ಪೇರುದ್ರಸ್ವಾಮಿ, ಅಭಿಯಾನ ಸಂಚಾಲಕ, ಕಾವ್ಯಲೋಕ ಗೌರವ ಅಧ್ಯಕ್ಷ ಡಾ|| ಶಿವಕುಮಾರ ಮಾಲಿಪಾಟೀಲ್, ಅಭಿಯಾನ ಪ್ರಮುಖ ಮಂಜು ಕಟ್ಟಿಮನಿ ಮಾತನಾಡಿದರು. ಪ್ರಾಂಶುಪಾಲ ಡಾ. ಶರಣಬಸಪ್ಪ ಕೋಲ್ಕಾರ್ ಜಲ ಸಂಕಲ ಪ್ರತಿಜ್ಞಾ ವಿಧಿ ಬೋಧಿಸಿದರು.
ಅರಳಹಳ್ಳಿಯ ರೇವಣಸಿದ್ದಯ್ಯ ತಾತ ಸಾನಿಧ್ಯ ವಹಿಸಿದ್ದರು. ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಆಶೀಶ್ ಕೃಷ್ಣ ಉಪಸ್ಥಿತರಿದ್ದರು. ತಾರಾ ಸಂತೋಷ ಮೇರವಾಡೆ ನಿರೂಪಿಸಿದರು.

Leave a Reply