ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.: ಗೊರೂರು ಅನಂತರಾಜು, ಹಾಸನ

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.: ಗೊರೂರು ಅನಂತರಾಜು, ಹಾಸನ

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಹಾಗೂ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ. ಚಂದ್ರಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಾರ್ಜುನ ತಾಳಗ ಬಯಲು ಸೀಮೆ ಯಕ್ಷಗಾನ ಪ್ರದರ್ಶನ ಮಾಡಲು ಗೌಡರು ದುರ್ಯೋಧನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ನನ್ನ ಗಮನ ಸೆಳೆದರು. ಅವರ ಕಲಾ ಪರಿಚಯ ಮಾಡಲು ಮಾತನಾಡಿಸಿದೆ. ಇವರು ಓರ್ವ ಪ್ರಗತಿ ಪರ ರೈತರೆಂಬುದು ಮಾತುಕತೆ ವೇಳೆ ತಿಳಿಯಿತು. ಅವರು ಮಾತನಾಡುತ್ತಾ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾ ಹೋದರು.

ನಮ್ಮ ತಂದೆ ಹೆಸರು ಸಣ್ಣಸ್ವಾಮಿಗೌಡ, ತಾಯಿ ಕಾಳಮ್ಮ. ನಮ್ಮೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ರಾಮನಹಳ್ಳಿ.
ನಮ್ಮ ತಂದೆ ಸಣ್ಣಸ್ವಾಮಿಗೌಡರು ಬಡ ಕುಟುಂಬದಲ್ಲಿ ಹುಟ್ಟಿ, ಕೇವಲ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರು ಅನಾರೋಗ್ಯದಿಂದ ನಿಧನರಾದಾಗ ನಾನು 9ನೇ ತರಗತಿ ವಿದ್ಯಾರ್ಥಿ. ಆಗಲೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷಿಗೆ ಇಳಿಯಬೇಕಾಯಿತು ಇಳಿದೆನು. ಆರಂಭದಲ್ಲಿ ರಸಗೊಬ್ಬರವನ್ನು ಬಳಸಿ ತಂಬಾಕು ಹಾಗೂ ಇತರೆ ವಾಣಿಜ್ಯ ಬೆಳೆಯನ್ನು ಬೆಳೆಯುವುದರಲ್ಲಿ ಯಶಸ್ಸು ಕಂಡೆ. ಆದರೆ ಇಳುವರಿ ಕಡಿಮೆಯಾಗಿ ಭೂಮಿಯ ಪೌಷ್ಟಿಕತೆ ಕುಂದಿತು. ರೋಗಗಳು, ನೈಸರ್ಗಿಕ ಅನಾಹುತಗಳಿಂದ ಬೆಳೆ ನಷ್ಟವಾಗಿ ಗ್ರಾಮ ತೊರೆದು ಹೋಗುವ ಪರಿಸ್ಥಿತಿ ಉಂಟಾಯಿತು.

ಆ ಸಂದರ್ಭ ಕೃಷಿ ಇಲಾಖೆಯ ಡಾ. ಭಾನುಪ್ರಕಾಶ್ ಏಡಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಸಾವಯವವಾಗಿ ಪುನರುಜ್ಜೀವಗೊಳಿಸಲು ಪ್ರಯತ್ನಿಸಿದೆ. ಸುಮಾರು ಐದು ವರ್ಷಗಳ ಕಾಲ ಶ್ರಮದ ನಂತರ ಭೂಮಿಯನ್ನು ಪೌಷ್ಟಿಕವಾಗಿಸಿ ಸಾವಯವ ಕೃಷಿಗೆ ಪ್ರವೇಶಿಸಿದೆ. ಇದರ ಫಲವಾಗಿ ಸರ್ಕಾರದಿಂದ ವಿವಿಧ ಪ್ರಶಸ್ತಿಗಳು ದೊರಕಿದವು. 2011ರಲ್ಲಿ ತಾಲ್ಲೂಕು ಯುವ ರೈತ ಪ್ರಶಸ್ತಿ, 2012ರಲ್ಲಿ ಶ್ರೀ ಶ್ರೀ ರವಿಶಂಕರ್ ಗುರುಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉತ್ತಮ ರೈತ ಪ್ರಶಸ್ತಿ, 2014ರಲ್ಲಿ ಒಂದು ಎಕರೆಗೆ 480 ಚೀಲ ಶುಂಠಿ ಇಳುವರಿ ಸಾಧನೆ, 2016ರಲ್ಲಿ ಜಿಲ್ಲಾ ಘಟಕದಿಂದ ಪ್ರಶಸ್ತಿ ಪಡೆದೆ.

2018ರಲ್ಲಿ ನನ್ನ ಭೂಮಿಯಲ್ಲಿಯೇ ರೈತ ದಿನಾಚರಣೆ ಆಯೋಜಿಸಲಾಯಿತು, ಅದರಲ್ಲಿ ಕೃಷಿ ಇಲಾಖೆಯ ಸಹಯೋಗದಿಂದ ಹಲವು ರೈತರಿಗೆ ಸನ್ಮಾನ ನೀಡಲಾಯಿತು. 2020 ರಿಂದ 2022ರ ಅವಧಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ, ನಂತರ ಕ್ರಮೇಣ ಜೀವನ ಸಹಜ ಸ್ಥಿತಿಗೆ ಮರಳಿತು. ಈಗ ಆಲೂಗೆಡ್ಡೆ, ಗೆಣಸು, ಕುಂಬಳಕಾಯಿ, ಜೇನು, ಹೈನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮುಂತಾದ ವಿವಿಧ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ.

ಸಾಮಾಜಿಕ ಸೇವೆ: 2022ರಿಂದ ಶಾಲಾ ಮತ್ತು ಕಾಲೇಜುಗಳಿಗೆ ಬಿಸಿ ಊಟಕ್ಕಾಗಿ ತೋಟದ ತರಕಾರಿಗಳನ್ನು ನೀಡುವುದು, ಗಿಡಗಳನ್ನು ನೆಡುವುದು, ಶಾಲಾ ಮಕ್ಕಳಲ್ಲಿ ಸಾವಯವ ಮತ್ತು ಸಹಜ ಕೃಷಿಯ ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿದ್ದೇನೆ.

ಕಲಾ ಕ್ಷೇತ್ರ: ಬಿಡುವಿನ ವೇಳೆಯಲ್ಲಿ ಸಾಮಾಜಿಕ ಹಾಗೂ ಪೌರಾಣಿಕ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತೇನೆ. ಸುಮಾರು 150ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದೇನೆ. ಭೀಮ, ಅರ್ಜುನ, ಶಕುನಿ, ಧರ್ಮರಾಯ, ರಾಜ ವಿಕ್ರಮ, ಗಾಣಿಗ ಶೆಟ್ಟಿ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾಸ್ಯ ಹಾಗೂ ಹೆಣ್ಣು ಪಾತ್ರಗಳನ್ನೂ ನಿಭಾಯಿಸಿದ್ದೇನೆ.

ಸಾಹಿತ್ಯ ಮತ್ತು ಸಂಘಟನೆ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಆರ್.ಬಿ. ಪುಟ್ಟೇಗೌಡ (ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ಹಾಗೂ ಗೊರೂರು ಅನಂತರಾಜು (ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವ ಅಧ್ಯಕ್ಷರು) ಅವರ ಸಹಯೋಗದಲ್ಲಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ.

ಪ್ರಶಸ್ತಿ: ಶ್ರೀನಿಧಿ ಫೌಂಡೇಶನ್, ಬೆಂಗಳೂರು ವತಿಯಿಂದ ಕರುನಾಡ ರತ್ನ ಪ್ರಶಸ್ತಿ., ಕೇರಳದಲ್ಲಿ ಉತ್ತಮ ರೈತ ಸಾಧಕ ಪ್ರಶಸ್ತಿ., ಗೋವಾದಲ್ಲಿ ಕರುನಾಡ ಕರ್ನಾಟಕ ಉತ್ತಮ ರೈತ ಪ್ರಶಸ್ತಿ., ಕಲಾ ಕ್ಷೇತ್ರದಲ್ಲಿ ಕರ್ನಾಟಕ ರತ್ನ ಕಲಾ ಪ್ರಶಸ್ತಿ., ಹಲವು ಸಂಘ ಸಂಸ್ಥೆಗಳಿಂದ ಸೇವಾ ಪ್ರಶಸ್ತಿಗಳು, ಕಲಾ ಪ್ರಶಸ್ತಿಗಳು ಹಾಗೂ ಕೃಷಿ ಪ್ರಶಸ್ತಿಗಳು ದೊರೆತಿವೆ. ಇದೇ ತಿಂಗಳು 26ನೇ ತಾರೀಖು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಇವರ ಕೃಷಿ ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ನಾನು ಅವರಿಗೆ ಅಭಿನಂದನೆಗಳು ತಿಳಿಸಿದೆ. ಗೌಡರು ಧನ್ಯವಾದಗಳು ಸಾರ್ ಎಂದರು.

ಗೊರೂರು ಅನಂತರಾಜು,
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3 ನೇ ಕ್ರಾಸ್
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ -573201

https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading