ಗೊರೂರು ಅನಂತರಾಜು ಪ್ರವಾಸಿ ಲೇಖನಗಳ ತಲಕಾಡು ಪಂಚಲಿಂಗ ದರ್ಶನ

“ದೇಶ ಸುತ್ತು ಕೋಶ ಓದು” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ.

ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ಹಿರಿಯರು ಸಾಹಿತಿಗಳು ಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಮೂಡಿ ಬಂದಿರುವ ಅನೇಕ ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ.

ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ.ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ.

ಮುಂದುವರೆಯುತ್ತಾ ಶ್ರೀಯುತರು ಮೂಗೂರು ತ್ರಿಪುರ ಸುಂದರಿ ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ. ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ. “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ ಮುಕ್ತಿ ಎನ್ನುತ್ತಾರೆ.

ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ.

ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ.

ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ]

ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.

ತೇರು ಹರಿದಾವೋ ತಾನಕ್ಕೆ ನಿಂತಾವೋ
ತಾರೋ ಚನ್ನಯ್ಯ ಜವನವಾ
ತಾರೋ ಚೆನ್ನಯ್ಯ ಜವನವಾ
ಬಾಳೆಹಣ್ಣು
ಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ
ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .
ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ.

ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ

ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿ
ದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯ
ಸ್ವಾಮಿ ನಿನ್ನ ಮದುವೆ ಶನಿವಾರ
ಎಂದು ಹಾಡಿ ಹೊಗಳುತ್ತಾರೆ.

ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣ
ದುಂಡು ಮಲ್ಲಿಗೆ ಮಕರಂದ
ಬೇಟ್ಗಾರ
ರಂಗನೇರ್ಯಾನೆ ಹೊಸ ತೇರು

ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಸಾರಸ್ಪತಲೋಕ ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  https://aratt.ai/@vishwaroopa_news_blog

ಶ್ರೀಮತಿ ಮಧುಮಾಲತಿ ರುದ್ರೇಶ್ ಬೇಲೂರು
ಮೊಬೈಲ್: 9035342149

ಹೆಜ್ಜೆ ಗೆಜ್ಜೆ ತಂಡದಿಂದ ರಂಗ ಸಂಭ್ರಮ ಕಾರ್ಯಕ್ರಮ

ಬೆಂಗಳೂರು: ಹೆಜ್ಜೆ ಗೆಜ್ಜೆ ತಂಡ ಕಳೆದ ಐದು ದಶಕಗಳಿಂದ ನಿರಂತರವಾಗಿ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನರಂಜನೆಯೊಂದಿಗೆ ಚಿಂತನೆಗೂ ಚಾಲನೆ ಕೊಡುವಂತಹ ಅನೇಕ ವಿಚಾರಧಾರೆಗಳನ್ನು ಜನರಿರುವಲ್ಲಿಗೆ ಹೋಗಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿರುತ್ತದೆ. ಸಂಸ್ಥೆ ರಂಗ ಸಂಭ್ರಮ ತಿರುಗಾಟ ಎಂಬ ಶೀರ್ಷಿಕೆಯಡಿ ಅನೇಕ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಜಾನಪದ ಕಲಾ ಬಳಗ ಭರತನಾಟ್ಯ ಸಂಸ್ಥೆ ಮತ್ತು ಮೈಸೂರು ರಮಾನಂದರವರ ಹ್ಯಾಗ್ ಸತ್ತ ನಾಟಕವನ್ನು ಅಕ್ಟೋಬರ್-30‌ ಗುರುವಾರ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಹೊಸ ರೂಪದಲ್ಲಿ ಪ್ರದರ್ಶಿಸಲಾಯಿತು.

ಸಾಹಿತಿಗಳು ಹಿರಿಯ ರಂಗಕರ್ಮಿಗಳು ಆದ ಡಾ. ಪಾರ್ಶ್ವನಾಥ್ ಅವರು ಕನ್ನಡ ರಂಗಭೂಮಿ ಬೆಳೆದು ಬಂದ ಬಗ್ಗೆ ವಿವರವಾಗಿ ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಬಂದಿದ್ದ ನರಸಿಂಹಮೂರ್ತಿರವರು ಗೆಜ್ಜೆ ಹೆಜ್ಜೆ ರಂಗ ತಂಡದ ಐದು ದಶಕಗಳ ಹೋರಾಟದ ಬದುಕನ್ನು ಬಣ್ಣದಲ್ಲಿ ಕಳೆದ ರಮಾನಂದರವರು ನಾಟಕ ರಚನೆ ವಿಚಾರ ಸಂಕಿರಣಗಳು ರಂಗ ತರಬೇತಿ ಪ್ರಸಾದನ ಶಿಬಿರ ನಡೆಸುತ್ತಾ ಬಂದಿರುತ್ತಾರೆ.

ಲಕ್ಷ್ಮಿ ನಾರಾಯಣ್ ಪ್ರಾಂಶುಪಾಲರು ಕನ್ನಡ ರಂಗಭೂಮಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಜನತೆಗೆ ರಂಗ ಶಿಕ್ಷಣದ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಅಡಿಷನಲ್ ಡಿಸಿ ಮಂಜುನಾಥ್ ರವರು ಹಾಸ್ಯದ ನಾಟಕಗಳನ್ನು ವಿಭಿನ್ನ ರೀತಿಯಲ್ಲಿ ವಿಡೆಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಹಾಸ್ಯ ಉಣಬಡಿಸುತ್ತಿದ್ದಾರೆ ರಮಾನಂದರು ಹಾಸ್ಯ ಗಾರುಡಿಗನೇ ಸರಿ ಎಂದು ತಿಳಿಸಿದರು.

ಮೈಸೂರು ರಮಾನಂದ್ ಗೀತಾಂಜಲಿ ಮತ್ತು ಶಿವರಾಂ ವಿಶೇಷವಾದ ಕಿರು ರೂಪಕ ಪ್ರದರ್ಶಿಸಿದರು. ಸಂಗೀತ ಟಿ.ಜಿ.ಹರೀಶ್. ರಂಗಗೀತೆ, ಜಾನಪದ ಗೀತೆ ಭಾವಗೀತೆಗಳ ಸಮ್ಮಿಲನದೊಂದಿಗೆ 4 ಗಂಟೆಗೆ ಪ್ರಾರಂಭವಾದ ರಂಗ ಸಂಭ್ರಮ ರಾತ್ರಿ 9ರವರೆಗೆ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರಿಗೆ ರಂಗ ಗೌರವ ನೀಡಿ ಗೌರವಿಸಲಾಯಿತು.https://aratt.ai/@vishwaroopa_news_blog

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.: ಗೊರೂರು ಅನಂತರಾಜು, ಹಾಸನ

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಹಾಗೂ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ. ಚಂದ್ರಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಾರ್ಜುನ ತಾಳಗ ಬಯಲು ಸೀಮೆ ಯಕ್ಷಗಾನ ಪ್ರದರ್ಶನ ಮಾಡಲು ಗೌಡರು ದುರ್ಯೋಧನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ನನ್ನ ಗಮನ ಸೆಳೆದರು. ಅವರ ಕಲಾ ಪರಿಚಯ ಮಾಡಲು ಮಾತನಾಡಿಸಿದೆ. ಇವರು ಓರ್ವ ಪ್ರಗತಿ ಪರ ರೈತರೆಂಬುದು ಮಾತುಕತೆ ವೇಳೆ ತಿಳಿಯಿತು. ಅವರು ಮಾತನಾಡುತ್ತಾ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾ ಹೋದರು.

ನಮ್ಮ ತಂದೆ ಹೆಸರು ಸಣ್ಣಸ್ವಾಮಿಗೌಡ, ತಾಯಿ ಕಾಳಮ್ಮ. ನಮ್ಮೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ರಾಮನಹಳ್ಳಿ.
ನಮ್ಮ ತಂದೆ ಸಣ್ಣಸ್ವಾಮಿಗೌಡರು ಬಡ ಕುಟುಂಬದಲ್ಲಿ ಹುಟ್ಟಿ, ಕೇವಲ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರು ಅನಾರೋಗ್ಯದಿಂದ ನಿಧನರಾದಾಗ ನಾನು 9ನೇ ತರಗತಿ ವಿದ್ಯಾರ್ಥಿ. ಆಗಲೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷಿಗೆ ಇಳಿಯಬೇಕಾಯಿತು ಇಳಿದೆನು. ಆರಂಭದಲ್ಲಿ ರಸಗೊಬ್ಬರವನ್ನು ಬಳಸಿ ತಂಬಾಕು ಹಾಗೂ ಇತರೆ ವಾಣಿಜ್ಯ ಬೆಳೆಯನ್ನು ಬೆಳೆಯುವುದರಲ್ಲಿ ಯಶಸ್ಸು ಕಂಡೆ. ಆದರೆ ಇಳುವರಿ ಕಡಿಮೆಯಾಗಿ ಭೂಮಿಯ ಪೌಷ್ಟಿಕತೆ ಕುಂದಿತು. ರೋಗಗಳು, ನೈಸರ್ಗಿಕ ಅನಾಹುತಗಳಿಂದ ಬೆಳೆ ನಷ್ಟವಾಗಿ ಗ್ರಾಮ ತೊರೆದು ಹೋಗುವ ಪರಿಸ್ಥಿತಿ ಉಂಟಾಯಿತು.

ಆ ಸಂದರ್ಭ ಕೃಷಿ ಇಲಾಖೆಯ ಡಾ. ಭಾನುಪ್ರಕಾಶ್ ಏಡಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಸಾವಯವವಾಗಿ ಪುನರುಜ್ಜೀವಗೊಳಿಸಲು ಪ್ರಯತ್ನಿಸಿದೆ. ಸುಮಾರು ಐದು ವರ್ಷಗಳ ಕಾಲ ಶ್ರಮದ ನಂತರ ಭೂಮಿಯನ್ನು ಪೌಷ್ಟಿಕವಾಗಿಸಿ ಸಾವಯವ ಕೃಷಿಗೆ ಪ್ರವೇಶಿಸಿದೆ. ಇದರ ಫಲವಾಗಿ ಸರ್ಕಾರದಿಂದ ವಿವಿಧ ಪ್ರಶಸ್ತಿಗಳು ದೊರಕಿದವು. 2011ರಲ್ಲಿ ತಾಲ್ಲೂಕು ಯುವ ರೈತ ಪ್ರಶಸ್ತಿ, 2012ರಲ್ಲಿ ಶ್ರೀ ಶ್ರೀ ರವಿಶಂಕರ್ ಗುರುಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉತ್ತಮ ರೈತ ಪ್ರಶಸ್ತಿ, 2014ರಲ್ಲಿ ಒಂದು ಎಕರೆಗೆ 480 ಚೀಲ ಶುಂಠಿ ಇಳುವರಿ ಸಾಧನೆ, 2016ರಲ್ಲಿ ಜಿಲ್ಲಾ ಘಟಕದಿಂದ ಪ್ರಶಸ್ತಿ ಪಡೆದೆ.

2018ರಲ್ಲಿ ನನ್ನ ಭೂಮಿಯಲ್ಲಿಯೇ ರೈತ ದಿನಾಚರಣೆ ಆಯೋಜಿಸಲಾಯಿತು, ಅದರಲ್ಲಿ ಕೃಷಿ ಇಲಾಖೆಯ ಸಹಯೋಗದಿಂದ ಹಲವು ರೈತರಿಗೆ ಸನ್ಮಾನ ನೀಡಲಾಯಿತು. 2020 ರಿಂದ 2022ರ ಅವಧಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ, ನಂತರ ಕ್ರಮೇಣ ಜೀವನ ಸಹಜ ಸ್ಥಿತಿಗೆ ಮರಳಿತು. ಈಗ ಆಲೂಗೆಡ್ಡೆ, ಗೆಣಸು, ಕುಂಬಳಕಾಯಿ, ಜೇನು, ಹೈನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮುಂತಾದ ವಿವಿಧ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ.

ಸಾಮಾಜಿಕ ಸೇವೆ: 2022ರಿಂದ ಶಾಲಾ ಮತ್ತು ಕಾಲೇಜುಗಳಿಗೆ ಬಿಸಿ ಊಟಕ್ಕಾಗಿ ತೋಟದ ತರಕಾರಿಗಳನ್ನು ನೀಡುವುದು, ಗಿಡಗಳನ್ನು ನೆಡುವುದು, ಶಾಲಾ ಮಕ್ಕಳಲ್ಲಿ ಸಾವಯವ ಮತ್ತು ಸಹಜ ಕೃಷಿಯ ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿದ್ದೇನೆ.

ಕಲಾ ಕ್ಷೇತ್ರ: ಬಿಡುವಿನ ವೇಳೆಯಲ್ಲಿ ಸಾಮಾಜಿಕ ಹಾಗೂ ಪೌರಾಣಿಕ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತೇನೆ. ಸುಮಾರು 150ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದೇನೆ. ಭೀಮ, ಅರ್ಜುನ, ಶಕುನಿ, ಧರ್ಮರಾಯ, ರಾಜ ವಿಕ್ರಮ, ಗಾಣಿಗ ಶೆಟ್ಟಿ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾಸ್ಯ ಹಾಗೂ ಹೆಣ್ಣು ಪಾತ್ರಗಳನ್ನೂ ನಿಭಾಯಿಸಿದ್ದೇನೆ.

ಸಾಹಿತ್ಯ ಮತ್ತು ಸಂಘಟನೆ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಆರ್.ಬಿ. ಪುಟ್ಟೇಗೌಡ (ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ಹಾಗೂ ಗೊರೂರು ಅನಂತರಾಜು (ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವ ಅಧ್ಯಕ್ಷರು) ಅವರ ಸಹಯೋಗದಲ್ಲಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ.

ಪ್ರಶಸ್ತಿ: ಶ್ರೀನಿಧಿ ಫೌಂಡೇಶನ್, ಬೆಂಗಳೂರು ವತಿಯಿಂದ ಕರುನಾಡ ರತ್ನ ಪ್ರಶಸ್ತಿ., ಕೇರಳದಲ್ಲಿ ಉತ್ತಮ ರೈತ ಸಾಧಕ ಪ್ರಶಸ್ತಿ., ಗೋವಾದಲ್ಲಿ ಕರುನಾಡ ಕರ್ನಾಟಕ ಉತ್ತಮ ರೈತ ಪ್ರಶಸ್ತಿ., ಕಲಾ ಕ್ಷೇತ್ರದಲ್ಲಿ ಕರ್ನಾಟಕ ರತ್ನ ಕಲಾ ಪ್ರಶಸ್ತಿ., ಹಲವು ಸಂಘ ಸಂಸ್ಥೆಗಳಿಂದ ಸೇವಾ ಪ್ರಶಸ್ತಿಗಳು, ಕಲಾ ಪ್ರಶಸ್ತಿಗಳು ಹಾಗೂ ಕೃಷಿ ಪ್ರಶಸ್ತಿಗಳು ದೊರೆತಿವೆ. ಇದೇ ತಿಂಗಳು 26ನೇ ತಾರೀಖು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಇವರ ಕೃಷಿ ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ನಾನು ಅವರಿಗೆ ಅಭಿನಂದನೆಗಳು ತಿಳಿಸಿದೆ. ಗೌಡರು ಧನ್ಯವಾದಗಳು ಸಾರ್ ಎಂದರು.

ಗೊರೂರು ಅನಂತರಾಜು,
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3 ನೇ ಕ್ರಾಸ್
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ -573201

https://aratt.ai/@vishwaroopa_news_blog

ಕನಸುಗಾರರಾಗಿ ಅಬ್ದುಲ್ ಕಲಾಂ ಜಿ

ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅವುಗಳನ್ನು ಸಾಕಾರಗೊಳಿಸಲು ಕಷ್ಟಗಳ ಸಾಗರವನ್ನು ಈಜಿ ಮೇಲೆ ಏರಿದ ಮಹಾನ್ ಕನಸುಗಾರ ಡಾ.ಅಬ್ದುಲ್ ಕಲಾಂ. ಬಡವರಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವರಾಗಿ ಸಾಯುವುದೇ ಮಹಾ ಪಾಪ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಸತತ ಪ್ರಯತ್ನದಿಂದ, ಹೋರಾಟದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚೇತನ ಅಬ್ದುಲ್ ಕಲಾಂ. ಸೂರ್ಯನಂತೆ ಬೆಳಗಬೇಕೆಂದರೆ ಸೂರ್ಯನಂತೆ ಉರಿಯಬೇಕೆಂಬ ಆದರ್ಶ. ನಂಬಿಕೆಗಳಿಂದ ಕರ್ಮ ಯೋಗಿಯಾಗಿ ಸಾಧಕರಾಗಿ, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದು ನಿಜಕ್ಕೂ ನಂಬಲು ಅಸಾಧ್ಯವಾದರೂ ಸಾಧ್ಯ ಎನ್ನುವುದನ್ನು ನಾವು ಡಾ. ಅಬ್ದುಲ್ ಕಲಾಮರಿಂದ ನೋಡಿ ಕಲಿಯಬೇಕು. ಅವರ ದೃಷ್ಟಿ ಯಾವಾಗಲು ಆಕಾಶದೆಡಿಗೆ ಇರುತ್ತಿತ್ತು. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿ ತಾವು ಪೈಲೈಟ್ ಆಗಿ ವಿಮಾನದಲ್ಲಿ ಹಾಗೆ ಹಾರಾಡಬೇಕೆನ್ನುವ ಕನಸನ್ನು ಬಾಲ್ಯದಿಂದ ಕಂಡು ಅದನ್ನು ಗುರಿಯಾಗಿ ಇಟ್ಟುಕೊಂಡು ಬೆಳೆದರು. ಕೊನೆಗೆ ಪೈಲೆಟ್ ಆಗದಿದ್ದರೂ ರಾಕೆಟ್ ಗಳನ್ನು ತಯಾರಿಸುವ ಶಕ್ತಿ ಬೆಳೆಸಿಕೊಂಡು ಕೊನೆಗೆ ಜಗತ್ತೇ ಮೆಚ್ಚುವ ಕ್ಷಿಪಣಿ ಜನಕ ಎನ್ನುವ ಬಿರುದು ಗಳಿಸಿ ದೇಶವೇ ಬೆರಗಾಗುವಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತರು. ಯಾವುದೇ ಕಾರ್ಯ ಮಾಡಿದರು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುವುದು ಅವರ ಹುಟ್ಟುಗುಣವಾಗಿತ್ತು. ‌

ಹೀಗಾಗಿ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಸಂಶೋಧಕರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೂ ಎಲ್ಲದರಲ್ಲೂ ಯಶಸ್ವಿಯಾಗಿ ಜನಮನ್ನಣೆ ಗಳಿಸಿದರು. ಅವರಲ್ಲಿನ ಉತ್ಸಾಹ ಚೈತನ್ಯ ಬಾಲ್ಯದಲ್ಲಿ ಇದ್ದಷ್ಟೇ ಅವರ ಇಳಿ ವಯಸ್ಸಿನಲ್ಲಿ ಇದ್ದಿದ್ದು ಆಶ್ಚರ್ಯವನಿಸುತ್ತದೆ. ಯಾವತ್ತೂ ಸುಮ್ಮನೆ ಕುಳಿತವರಲ್ಲ ಅಬ್ದುಲ್ ಕಲಾಂ ಜಿ. ಯಾವುದಾದರೂ ಒಂದು ಕ್ರಿಯೆಯಲ್ಲಿ ನಿರಂತರ ತಮ್ಮನ್ನು ತಾವು ತೊಡಗಿಸಿ ಕೊಂಡವರು. ದೇಶ ಕಂಡ ಅಪರೂಪದಲ್ಲೇ ಅಪರೂಪದ ಸಾಧಕರಲ್ಲಿ ಅಬ್ದುಲ್ ಕಲಾಂ ಒಬ್ಬರು. ತಾವು ನಿರಂತರ ಹೋರಾಟ, ಶ್ರಮದಿಂದ ಮೇಲೆ ಬಂದಂತೆಯೇ ಇತರರನ್ನು ನಿರಂತರ ಸ್ಪೂರ್ತಿದಾಯಕ ಮಾತುಗಳಿಂದ ಬೋಧನೆಯಿಂದ ಮೇಲೆತ್ತಿದವರು.

ಅವರಿಗೆ ಬೋಧನೆ ಎನ್ನುವುದು ಅಚ್ಚುಮೆಚ್ಚಿನ ಕಾರ್ಯವಾಗಿತ್ತು. ಸಮಯ ಸಿಕ್ಕಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಿದ್ದರು ಹಾಗೂ ತಮ್ಮ ಅನುಭವಗಳನ್ನು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರು ಹಾಗೂ ಚೈತನ್ಯ ತುಂಬಿ ಸಾಧನೆ ಮಾಡುವಂತೆ ಹುರಿದುಂಬಿಸಿದರು ಅಬ್ದುಲ್ ಕಲಾಂ ಜಿ. ಅವರ ಜೀವನವೇ ಇತರರಿಗೆ ಒಂದು ಪಾಠದಂತೆ ಇತ್ತು. ಅವರ ಜೀವನವೇ ಇತರರಿಗೆ ದಾರಿ ದೀಪವಾಗಿ ಬೆಳಕು ನೀಡುತ್ತಿದೆ ಎಂದರೆ ತಪ್ಪಲ್ಲ. “ಮಾತಿಗಿಂತ ಕೃತಿ ಲೇಸು” ಎನ್ನುವ ಗಾದೆ ಮಾತಿನಂತೆ ನಿರಂತರವಾಗಿ ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಸಾಯುವ ಕ್ಷಣದಲ್ಲೂ ಸಹ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಶರಣರ ಬದುಕನ್ನು ಮರಣದಲ್ಲಿ ನೋಡಿ ಎನ್ನುವಂತೆ ಬದುಕಿನ ಕೊನೆಯ ಕ್ಷಣದವರೆಗೂ ಜೀವನದ ಸಾರ್ಥಕತೆಯನ್ನು ಮೆರೆದವರು ಅಬ್ದುಲ್ ಕಲಾಂ ಜಿ.

ಭಾರತ ರತ್ನವಾಗಿ, ಕ್ಷಿಪಣಿ ಜನಕನಾಗಿ, ರಾಷ್ಟ್ರಪತಿಯಾಗಿ ಎಲ್ಲಕ್ಕಿಂತ ಮೇಲಾಗಿ ಒಬ್ಬ ಆದರ್ಶ ಶಿಕ್ಷಕರಾಗಿ ಅವರು ತೋರಿದ ದಾರಿ ಎಲ್ಲರಿಗೂ ಸ್ಪೂರ್ತಿದಾಯಕ. ದೇಶದ ಬೆಳವಣಿಗೆಗೆ ತಮ್ಮದೇ ಆದ ಅಪರೂಪದ ಕಾಣಿಕೆಯನ್ನು ನೀಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅಜರಾಮರವಾಗಿ ಉಳಿದ ಕನಸುಗಾರ ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ

ಲೇಖನ: ಲಕ್ಷ್ಮೀದೇವಿ ಪತ್ತಾರ, ಪ್ರೌಢಶಾಲಾ ಶಿಕ್ಷಕಿ, ಬರಹಗಾರ್ತಿ, ಗಂಗಾವತಿ. ಜಿಲ್ಲಾ: ಕೊಪ್ಪಳ

ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ್.

ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ….. ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ್ ಕೂಡ ಒಬ್ಬರು.

ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ್ ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದವರು. ನಾಡಿನ ಸಾಂಸ್ಕೃತಿಕ ಸೊಗಡನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು. ನಿರಂತರ 50 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ರಂಗಭೂಮಿಯಲ್ಲಿ ಬಹುಮುಖಿ ವೇಷಗಳಿಂದ, ಬಹುಮುಖ ಪ್ರತಿಭೆಯಿಂದ ಮೆರೆದವರು. ಬಹುವಿಭಾಗ ಸಿನಿಮಾ, ರಂಗ ನಿರ್ವಹಣೆಯಿಂದ ಕರ್ನಾಟಕ ರಮಾರಮಣರೆನಿಸಿದವರು.

ಕನ್ನಡದ ಹೆಮ್ಮೆಯ ವರನಟ ಡಾ.ರಾಜಕುಮಾರ್, ಡಾ.ಹಾ.ಮಾ.ನಾಯಕ್, ಡಾ.ಬಿ.ವಿ.ಕಾರಂತ್ ಮೊದಲಾದ ದಿಗ್ಗಜರು ರಮಾನಂದರ ರಂಗಕಲೆಯ ಕಾಯಕವನ್ನು ಮೆಚ್ಚಿಕೊಂಡವರಾಗಿದ್ದಾರೆ. ನಾಡಿನ ಹಲವು ಪತ್ರಿಕೆಗಳು ಮೈಸೂರು ರಮಾನಂದರ 50 ವರ್ಷಗಳ ರಂಗ ಸೇವೆಯ ಬರಹ ಪ್ರಕಟಿಸಿವೆ. ನಾಡಿನ ರಂಗ ದಿಗ್ಗಜರು ಸಾಹಿತಿ ಕಲಾವಿದರು ರಮಾನಂದ ಅವರ ಪ್ರತಿಭಾ ಸಂಪನ್ನ ಸಾಧನೆಯನ್ನು ರಂಗ ಬೆನ್ನು ತಟ್ಟಿ ಉತ್ತೇಜಿಸಿದ್ದಾರೆ. ನಟ, ನಿರ್ದೇಶಕ, ರಚನಕಾರ, ಪ್ರಕಾಶಕ, ಗೆಜ್ಜೆ ಹೆಜ್ಜೆ ರಂಗ ತಂಡ ಸಂಸ್ಥಾಪಕ, ಪತ್ರಕರ್ತ, ಪ್ರಯೋಗ ಶೀಲ ನಾಟಕಕಾರ, ರಂಗ ಸಂಚಾರಿ… ಹೀಗೆ ವಿವಿಧ ಆಯಾಮಗಳ ಬಹುಮುಖಿ ಸಾಧಕ ಮೈಸೂರು ರಮಾನಂದರು.

ಇವರು ಗೆಳೆಯರೊಂದಿಗೆ ಆರಂಭಿಸಿದ ವಾಸ್ತವ ಜೀವನದ ಸಮಸ್ಯೆಗಳು ಮತ್ತದರ ಪರಿಹಾರಗಳನ್ನು ತಿಳಿಸುವ ಬೀದಿ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದೆ. ರಂಗಭೂಮಿಯ ವಿಶ್ವಪ್ರಜ್ಞೆಯನ್ನು ಯಶಸ್ವಿಯಾಗಿ ಸಾರುತ್ತಿರುವ ಮೈಸೂರು ರಮಾನಂದ ಅವರು ಕ್ರಿಯಾಶೀಲತೆಯಲ್ಲಿ, ಸಾಮಾಜಿಕ ಕಳಕಳಿಯ ಬದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ. ಅವರು ರಂಗಭೂಮಿಯನ್ನು ವಾಸ್ತವ ಬದುಕಿನ ಸಮಸ್ಯೆಗಳ ಪರಿಹಾರದ ಕನ್ನಡಿಯಾಗಿ ದೂರದೃಷ್ಟಿ ಅವಲೋಕನ ಮೆಚ್ಚುವಂತದ್ದು, ಮೈಸೂರು ರಮಾನಂದರನ್ನು ಕಲಾವಿದರಾಗಿ ಸಂತೋಷದಿಂದ ಒಪ್ಪಿಕೊಳ್ಳುವ ಜೊತೆಗೆ ನಮ್ಮ ರಾಜ್ಯದ ಮಹಾನಂದ ಎಂದು ಬಾಚಿ ಅಪ್ಪಿಕೊಳ್ಳಬಹುದಾಗಿದೆ.

ಇವರ ಕುರಿತಂತೆ ಕೆಲ ವರ್ಷಗಳ ಹಿಂದೆ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಅದರಲ್ಲಿ ನಾನು ಕೂಡ ಬರೆದಿರುವೆ. ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಅವರು ಸರ್ಕಾರದ ಪ್ರಚಾರಾತ್ಮಕ ನೀತಿಗಳನ್ನು ಜನಸಾಮಾನ್ಯರಿಗೆ ತಮ್ಮದೇ ರಚನೆಯ ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ.
ವೈಯುಕ್ತಿಕವಾಗಿ ಸುಮಾರು 2 ದಶಕಗಳಿಂದ ಅವರು ನನಗೆ ಪರಿಚಿತರು. ಪ್ರೀತಿಯ ಒಡನಾಡಿ. ಮೈಸೂರು ರಮಾನಂದರ ಕಲಾ ಪರಿಚಯವನ್ನು ನಾನು ನಾಡಿನ ಕೆಲವು ಪತ್ರಿಕೆಗಳಲ್ಲಿ ಬರೆದಿರುವುದುಂಟು. ರಮಾನಂದ್ ರಂಗಭೂಮಿಯಲ್ಲಿ ತಾನು ಕಲಾವಿದನಾಗಿ ಬೆಳೆಯುವ ಜೊತೆಗೆ ತನ್ನ ಸಹ ಕಲಾವಿದರನ್ನು ಬೆಳೆಸಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಮಿಡಿದು ಅವರನ್ನು ಸಹ ತನ್ನೊಂದಿಗೆ ಬೆಳೆಸಿದ ಹೃದಯ ಸಂಪನ್ನರು. ಇವರಿಗೆ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನಿಜಕ್ಕೂ ಸಲ್ಲಬೇಕಿದೆ. ಅದಕ್ಕೆ ಇವರು ನಿಜವಾಗಿಯೂ ಅರ್ಹರಿದ್ದಾರೆ.

ಮೊನ್ನೆ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಗೆ ಬಂದಿದ್ದರು. ಅವರ ರಂಗ ಸಾಧನೆಯ ಬೃಹತ್ ಫೈಲ್ ನ್ನು ತೋರಿಸಿದರು. ಇದನ್ನು ಆಯ್ಕೆ ಸಮಿತಿ ನೋಡಿ ಪ್ರಶಸ್ತಿಗೆ ಪರಿಗಣಿಸಬೇಕಿದೆ ಅಷ್ಟೇ. ರಂಗಭೂಮಿಯ ಅನುಭವದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ಗುರುತರ ಪಾತ್ರಗಳಲ್ಲಿ ಗಮನಾರ್ಹ ಅಭಿನಯದಿಂದ ಮಿಂಚಿದವರು ಮೈಸೂರು ರಮಾನಂದರು. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೋ ತಿಳಿಯದು. ಇತ್ತೀಚಿಗೆ ಇವರೇ ಪ್ರದಾನ ಪಾತ್ರ ನಿರ್ವಹಿಸುತ್ತಿರುವ ಮಗ್ಗಿ ಪುಸ್ತಕ ಬಿಡುಗಡೆಯ ನಿರೀಕ್ಷಿಯಲ್ಲಿದೆ. ಮತ್ತೊಂದು ರಮಾನಂದರ ವಿಶೇಷವೆಂದರೆ ಇವರ ಮಗ ಮತ್ತು ಪತ್ನಿ ಸಹ ಕಲಾ ಬದುಕಿನಲ್ಲಿ ಇವರ ಜೊತೆಯಲ್ಲಿಯೇ ಸಾಗಿದ್ದಾರೆ. ನಗು ಎಲ್ಲಿದೆಯೋ ಅಲ್ಲಿದೆ ಅರೋಗ್ಯ ಎನ್ನುವ ರಮಾನಂದರ ಸ್ಲೋಗನ್ ನಂತೆ ಇವರು ತಮ್ಮ ಬದುಕಿನ ಉದ್ದಕ್ಕೂ ಕಲಾ ರಸಿಕರನ್ನು ನಗಿಸುತ್ತಲೇ ಬಂದಿದ್ದಾರೆ.

ಗೊರೂರು ಅನಂತರಾಜು, ಹಾಸನ
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3 ನೇ ಕ್ರಾಸ್, ಹಾಸನ – 573201

9449462879.

ಗಂಗಾವತಿಯಲ್ಲಿ ಪ್ರವಾಸೋಧ್ಯಮ ದಿನಾಚರಣಗೆ ಮೆರಗು ತಂದುಕೊಟ್ಟ ದಂತವೈದ್ಯ ಡಾ|| ಶಿವಕುಮಾರ ಮಾಲಿಪಾಟೀಲ್‌

ಈ ಸಲದ ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶೇಷವಾಗಿ ಆಚರಣೆ ಮಾಡೋಣವೆಂದು ಯೋಚಿಸುತ್ತಾ ಬಸ್ ಸ್ಟಾಂಡ್ ಒಳಗೆ ಹೋದಾಗ ಕಣ್ಣಿಗೆ ಬಿದ್ದಿದ್ದು .ಮಹಿಳಾ ವಿಶ್ರಾಂತಿ ಕೊಠಡಿ, ಅದರ ಗೋಡೆಯ ಮೇಲೆ ಬಹಳಷ್ಟು ಅದು ಇದು ಗೀಚಾಡಿ, ಅಂದಗೆಡಿಸಿದ್ದರು. ಇದರ ಒಳಗಡೆ ವಿವರಣೆ ಒಳಗೊಂಡ ಸ್ಮಾರಕಗಳ ಪೊಟೊ ಹಾಕಲು ಯೋಚನೆ ಬಂತು, ಹಾಗೆ ಹಚ್ಚಿದರೆ ಸುಂದರವಾಗಿರಲ್ಲ, ಬಣ್ಣ ಹೊಡೆದು Posters ಹಚ್ವೊಣ ಎಂದುಕೊಂಡು ಹೊರಬಂದೆ, ನನ್ನ ಗೆಳೆಯ ಹಿರಿಯ ಅಧಿಕಾರಿ ಅಶ್ರಫ್ ಅಲಿ ಗೆ ಪೊನ್ ಮಾಡಿ ವಿಷಯ ತಿಳಿಸಿದೆ, ಅವನು ಡಿಪೋ ಮ್ಯಾನೆಜರ್ ಜೊತೆಗೆ ಮಾತಾಡುತ್ತೆನೆ ಎಂದನು.ನಂತರ ಪ್ರಹ್ಲಾದ್ ಕುಲಕರ್ಣಿ ಅವರನ್ನು ಕರೆದುಕೊಂಡು ಬಸ್ ಡಿಪೋಗೆ ಹೋಗಿ ಘಟಕ ವ್ಯವಸ್ಥಾಪಕ ರಾಜಶೇಖರ ಅವರನ್ನು ಭೇಟಿಯಾದೆ, ಆಗ ಅವರು ಉತ್ತಮವಾಗಿ ಸ್ಪಂದಿಸಿದರು, ರಾತ್ರಿ 8.30 ಕ್ಕೆ ರಾಜಶೇಖರ ಅಣ್ಣಿಗೇರಿ ಹಾಗೂ ನಾನು ಬಸ್ ನಿಲ್ದಾಣ ವೀಕ್ಷಣೆ ಹೋದೆವು. ಮಹಿಳಾ ಕೊಠಡಿಯನ್ನು ನೋಡಿದ ತಕ್ಷಣ, ತಮ್ಮ ಸಿಬ್ಬಂದಿ ವರ್ಗಕ್ಕೆ ಚಾರಣ ಬಳಗದಿಂದ ಇಲ್ಲಿ ಬಣ್ಣ ಹೊಡದು, ಪ್ರವಾಸಿ ತಾಣಗಳ ಪೋಸ್ಟರ್ ಹಚ್ಚುತ್ತಾರೆ, ಇವರಿಗೆ ಸಹಕಾರ ನೀಡಲು ಆದೇಶ ನೀಡಿದರು. ಆಗ ನೂತನ್ ದರೋಜಿ ಅವರಿಗೆ ಪೊನ್ ಮಾಡಿ,‌ ನಾನು ಆನೆಗೊಂದಿ ಪ್ರವಾಸೋದ್ಯಮ ಕಾರ್ಯಕ್ರಮಕ್ಕೆ ಹೋಗುತ್ತೆನೆ, ಬಸ್ ನಿಲ್ದಾಣದ ಮಹಿಳಾ ಕೊಠಡಿ ಒಳಗೆ, ಹೊರಗಡೆ ಬಣ್ಣ ಹಚ್ಚಲು ಕೇಳಿಕೊಂಡೆ. ನೂತನ್‌ ದರೋಜಿ ,ಮರುದಿನ ಪೆಂಟರ್ ಕಳಿಸಿ ಬಣ್ಣ ಹಚ್ಚಿಸಿದ, ಡಾ.ಶರಣಬಸಪ್ಪ ಕೋಲ್ಕಾರ್ ಸರ್ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ ಪೋಸ್ಟರ್ ಗಳನ್ನು ಇಲ್ಲಿ ಹಚ್ಚಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರಿಂದ ಪರವಾನಿಗೆ ಪಡೆದೆ.

ಕೋಲ್ಕಾರ್ ಸರ್ ತಯಾರಿಸಿದ ಪೋಸ್ಟರ್ ನಲ್ಲಿ ಒಂದು ಕಡೆ ಕನ್ನಡ,ಇನ್ನೊಂದು ಕಡೆ ಇಂಗ್ಲೀಷ್ ಭಾಷೆಯಲ್ಲಿ ಇದ್ದವು. ಬರಿ ಕನ್ನಡ ಅಷ್ಟೇ ತೆಗೆದುಕೊಂಡು, ಬೇರೆ ಬೇರೆ ಆಕಾರದ ಪೋಸ್ಟರ್‌ಗಳು ಆಕರ್ಷಣೀಯವಾಗಿ ಕಾಣಲು, ಪೋಟೊಗಳನ್ನು ಪ್ರವಾಸೋದ್ಯಮ ಇಲಾಖೆಯ ಯಮನೂರ್ ಅವರಿಂದ, ಪ್ರಹ್ಲಾದ್ ಕುಲಕರ್ಣಿ ಅವರಿಂದ, ಕೆಲವೊಂದು ಗೂಗಲ್ ನಿಂದ ಉತ್ತಮ ಪೊಟೊಗಳನ್ನು ಆಯ್ಕೆ ಮಾಡಿ, ಪೋಸ್ಟರ್ ತಯಾರಿಸಲು ಮಂಜುನಾಥ ಸೋನಾರ್, ವಿಶ್ವರೂಪ ಕಂಪ್ಯೂಟರ್ಸ್ ನಲ್ಲಿ ಎರಡು ತಾಸುಗಳ ಕಾಲ ಕುಳಿತು ತಯಾರಿಸಿದೆವು. ಒಂದೇ ದಿನದಲ್ಲಿ ಗೋಡೆಗೆ ಬಣ್ , ಪೋಸ್ಟರ್ ರೆಡಿಯಾದವು , ರಾತ್ರಿ ಮೇದಾರ್ ಮಂಜುನಾಥ ಅವರನ್ನು ಕರೆದುಕೊಂಡು, ನಾನು, ಪ್ರಹ್ಲಾದ್ ಕುಲಕರ್ಣಿ, ಮೈಲಾರಪ್ಪ ಬೂದಿಹಾಳ ಮಳೆಯಲ್ಲೇ ಬಸ್ ಸ್ಟಾಂಡ್ ಗೆ ತೆರಳಿ, ಬೆಳಿಗ್ಗೆ ಉದ್ಘಾಟನಾ ಇದೆ, ನಾವು ರಾತ್ರಿ ಎಷ್ಟೊತ್ತಾದರೂ ಪೋಸ್ಟರ್ ಗಳನ್ನು ಹಚ್ಚಲೇಬೇಕಾಗಿತ್ತು. ರಾತ್ರಿ 11.30 ವರೆಗೆ ಪೋಸ್ಟರ್ ಹೆಚ್ಚುವ ಕೆಲಸ ಆಯಿತು. ಮರುದಿನವೇ ಉದ್ಘಾಟನೆ ಒಂದು ಗಂಟೆಯ ಮೊದಲು ಆಮಂತ್ರಣ ಪತ್ರಿಕೆಯನ್ನೂ ಮಂಜುನಾಥ ಸೋನಾರ್‌ ಅವರಿಂದ ತಯಾರಿಸಿ, ಅತಿಥಿಗಳಿಗೆ ಕಳಿಸಿದೆ,ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಡಾ. ಶರಣಬಸಪ್ಪ ಕೋಲ್ಕಾರ್‌. ಸಾರಿಗೆ ಘಟಕ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರ ಸಹಕಾರದಿಂದ ಉತ್ತಮ ಕಾರ್ಯಕ್ರಮ ನೆರವೇರಿತು.

ಮಾದ್ಯಮ ಮಿತ್ರರು, ಪತ್ರಕರ್ತರು ಸರಿಯಾದ ಸಮಯಕ್ಕೆ ಬಂದು ನಮ್ಮ ಕೆಲಸಕ್ಕೆ ಪ್ರೋತ್ಸಾಹ ನೀಡಿದರು. ಗಂಗಾವತಿ ಚಾರಣ ಬಳಗದ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಿ ಕಾರ್ಯಕ್ರಮ ನಾನು ಅಂದುಕೊಂಡಕ್ಕಿಂತ ಹೆಚ್ಚಿನ ರೀತಿಯಲ್ಲಿ ಯಶಸ್ಸು ಕಂಡಿತು.ನಂತರ ತಹಶಿಲ್ದಾರರ ಕಚೇರಿಗೆ ಹೋಗಿ ಅಲ್ಲಿ ತಹಶಿಲ್ದಾರ ಯು.ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಮ್ಮುಖದಲ್ಲಿ ಪೋಸ್ಟರ್ ಗಳನ್ನು ಹಚ್ಚಿದೆವು. ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯ ಸಾರ್ಥಕತೆ ಕಂಡಿತು. ಈ ಆಂದೋಲನವನ್ನು ಮುಂದುವರಿಸಲು ಆತ್ಮ ವಿಶ್ವಾಸ ಹೆಚ್ಚಿಸಿತು. ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳ.

ಮಂಜುನಾಥ ಸೋನಾರ್‌

ವಿಶ್ವರೂಪ ಕಂಪ್ಯೂಟರ್ಸ್‌ ಗಂಗಾವತಿ

ಮೊ: 9964415556, 9886382270

ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು

ಮಾತನಾಡುವಾಗ ಉಗ್ಗುವಿಕೆಯ ತೊಂದರೆಯಿಂದ ತೊದಲುವ ವ್ಯಕ್ತಿ ಹಾಡುವಾಗ ಸುಲಲಿತವಾಗಿ ಹಾಡುತ್ತಾರೆ ಎಂದರೆ ಈ ಸಾಧನೆಯ ಹಿಂದೆ ದೃಢ ಸಂಕಲ್ಪ ಮೇಳೈಸಿದೆ ಎನ್ನಬಹುದು. ತನ್ನ ಉಗ್ಗುವಿಕೆಯ ತೊಂದರೆಗೆ ಹಾಡುಗಾರಿಕೆಯಿಂದ ಪರಿಹಾರ ಕಂಡುಕೊಂಡ ಹಾಸನದ ಆರ್. ರಾಮಶಂಕರಬಾಬು ಜಿಲ್ಲೆಯ ಪ್ರತಿಭಾನ್ವಿತ ಗಾಯಕರು. ಉಗ್ಗು ಇದ್ದರೂ ಹಾಡಿ ಹಿಗ್ಗುವ ಮುಖೇನ ತಮ್ಮ ಬಾಳಿನ ನೋವು ಮರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉಗ್ಗುವಿಕೆ ತೊಂದರೆಯಿಂದ ಮಾತನಾಡಲು ಕಷ್ಟಪಡುತ್ತಿದ್ದ ಬಾಬು ಛಲ ಮತ್ತು ದೃಢಚಿತ್ತದಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡವರಾಗಿದ್ದರು. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ ಕಂಜರ ಬಾರಿಸುವುದನ್ನು ರೂಢಿಸಿಕೊಂಡಿದ್ದರು. ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಗಾನ ಸೌರಭ, ಸಂಗೀತ ಗಂಗಾ ಎಂಬ ಹೆಸರಿನಲ್ಲಿ ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಗಣೇಶೋತ್ಸವ, ರಾಜ್ಯೋತ್ಸವ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಾಸನ ಆಕಾಶವಾಣಿಯಲ್ಲಿ ತತ್ವಪದ ಗಾಯಕರಾಗಿ ಹಾಡಿದ್ದರು. ಸಾಮಾಜಿಕ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಭಾಗವಹಿಸುತ್ತಿದ್ದರು. ಸರ್ಕಾರಿ ಪ್ರಾಯೋಜಿತ ಜನಜಾಗೃತಿ ಕಾರ್ಯಕ್ರಮ ಅದು ಆರೋಗ್ಯ ನೈರ್ಮಲ್ಯ ವಿಚಾರವಿರಲಿ, ಕುಡಿತದ ವ್ಯಸನ, ರಸ್ತೆ ಸುರಕ್ಷತೆ ಕೌಟುಂಬಿಕ ಸಾಮರಸ್ಯ ಹೀಗೆ ಎಂತಹದೇ ವಿಷಯದ ವಿಚಾರ ಇರಲಿ ಅದಕ್ಕೆ ಸ್ಥಳದಲ್ಲೇ ರಾಗ ತಾಳ ಮೇಳೈಸಿ ಹಾಡುವ ಸಾಮರ್ಥ್ಯ ಅವರಲ್ಲಿತ್ತು.

ಅಂದಿನ ದಿನಗಳಲ್ಲಿ ನಾನು ಗೊರೂರಿನಲ್ಲಿ ಕಟ್ಟಿ ಬೆಳೆಸಿದ್ದ ಕನ್ನಡ ಕಲಾ ಸಾಹಿತ್ಯ ವೇದಿಕೆ ವೃಂದ ಜಿಲ್ಲೆಯ ನಾಟಕ ಸ್ಫರ್ಧೆಗಳಲ್ಲಿ ಹಾಸನ ಜಾತ್ರೆ, ಹೊಳೆನರಸೀಪುರ ಸಕಲೇಶಪುರ ಜಾತ್ರೆ, ಗಣೇಶೋತ್ಸವಗಳಲ್ಲಿ ನಮ್ಮ ನಾಟಕ ತಂಡದ ಹಿನ್ನೆಲೆ ಗಾಯಕರಾಗಿ ಬರುತ್ತಿದ್ದರು, ಹಾಡುತ್ತಿದ್ದರು. ನಾಟಕಕ್ಕೆ ಜನ ಸೇರಿಸಲು ಮೊದಲಿಗೆ ಬಾಬು ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದೆ. ಅವರು ನನ್ನ ಊರು ಹಾಸನ ಶಿಲ್ಪಕಲೆಯ ಶಾಸನ ತಾವೇ ರಚಿಸಿದ್ದ ಈ ಹಾಡನ್ನು ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ಗೀತೆ ನಮ್ಮ ನಾಟಕಕ್ಕೂ ಮೊದಲು ನಾವು ಮೇಕಪ್ ಮಾಡಿಕೊಳ್ಳಲು ಸಮಯ ಸಿಗಲು ಅನುಕೂಲವಾಗುತ್ತಿತ್ತು ಮತ್ತು ನಾಟಕ ಆರಂಭಗೊಂಡಿರಬೇಕು ಎಂದು ಭಾವಿಸಿ ಜನ ಧಾವಿಸಿ ಬರುತ್ತಿದ್ದರು.

ಇನ್ನು ನಮ್ಮ ಹುಡುಗರು ಬಸ್ಸಿನಿಂದ ಇಳಿದ ಕೂಡಲೇ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಜಾತ್ರೆ ಮಾಳ ಸುತ್ತುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದರು. ಆಗ ಬಾಬು ಅವರ ಕಂಚಿನ ಕಂಠದಿoದ ಬಾಬು ಮೈಕಿನಲ್ಲಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ಆಗ ಕಲಾವಿದರು ನಿಧಾನವಾಗಿ ಬಂದು ಸಾರಿ ಸಾರ್,. ಎಂದು ಪರದೆ ಹಿಂದೆ ಸರಿಯುತ್ತಿದ್ದರು. ಈ ಅನುಭವ ಹಿನ್ನಲೆಯಲ್ಲೇ ನಾನು ತೋಳ ಬಂತು ತೋಳ ಬರೆದು ನಾಟಕವಾಡಿಸಿ ಅದೀಗ ಪುಸ್ತಕವಾಗಿ ಓದುಗರ ಕ್ಕೆ ಸೇರಿದೆ. ಇಂದು ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿರುವ ಕೆ.ಆರ್.ಪೇಟೆ ಶಿವರಾಜ್ ಅಂದು ನಮ್ಮ ತಂಡದ ನಟನಾಗಿ ರಂಗದ ಮೇಲೆ ಬಂದಾಗ ಆಗಿನ್ನು ಕಾಲೇಜು ವಿದ್ಯಾರ್ಥಿ. ಬಾಬು ಅವರು ನನ್ನ ಕವನಗಳಿಗೆ ರಾಗ ಕಟ್ಟಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇವರು ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಇವರಿಗೆ ಕುಂಟುನಾಯಿ, ವ್ಯವಸ್ಥೆ, ಆತ್ಮ ಯಾವ ಕುಲ ಜೀವ ಕುಲ ನಾಟಕಗಳು ಹೆಸರು ತಂದಿದ್ದವು.

ವಾರ್ತಾ ಇಲಾಖೆ ಆರೋಗ್ಯ ಇಲಾಖೆಗಳು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಆಂದೋಲನದ ಕಲಾಜಾಥದಲ್ಲಿ ಪಾಲ್ಗೊಂಡು ಬಾಬು ದಮಡಿ ಬಾರಿಸಿಕೊಂಡು ಹಾಡಿದ್ದಾರೆ. ಇವರ ಕಲಾ ಪ್ರತಿಭೆ ಗುರುತಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಆದರೆ ಇಂತಹ ಮಹಾನ್ ಕಲಾವಿದನಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಗದೇ ಇದ್ದಿದ್ದು ವಿಷಾದನೀಯ. ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಬಾಬು ಮುಂದಿನ ವರ್ಷ ನೋಡೋಣ ಬಿಡಿ ಅನಂತರಾಜು ಎಂದು ನಿರಾಸೆಯಿಂದಲೇ ಹೇಳುತ್ತಿದ್ದರು. ಎರಡು ವರ್ಷದ ಹಿಂದೆ ಅರ್ಜಿ ಹಾಕಿದ್ದರು. ಪ್ರಶಸ್ತಿ ಸಿಗದೆ ನಿರಾಶರಾಗಿದ್ದರು. ಕಲಾವಿದರ ಮಾಶಸನಕ್ಕೂ ಅರ್ಜಿ ಹಾಕಲಾಗಲಿಲ್ಲ. ಜನ್ಮ ದಿನಾಂಕ ಪ್ರಮಾಣ ಪತ್ರ (ಡೇಟ್ ಆಫ್ ಬರ್ತ್ ಫಿಕೇಟ್ ) ಬೇಕಾಗಿತ್ತು ಎ೦ದು ಕಾಣುತ್ತದೆ. ಅದು ಅವರಲ್ಲಿ ಇರಲಿಲ್ಲವೇನೋ. ಅದಕ್ಕಾಗಿ ಅವರು ಅನಂತರಾಜು, ನೀವು ನನ್ನ ಪರಿಚಯ ಲೇಖನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದಿದ್ದಿರಲ್ಲಾ ಅದರ ಕಟಿಂಗ್ಸ್ ನಿಮ್ಮ ಫೈಲ್ ನಲ್ಲಿ ಇದ್ದರೆ ಹುಡುಕಿಕೊಡಿ ಎಂದರು. ನಾನು ಸಾಮಾನ್ಯವಾಗಿ ಕಲಾವಿದರ ಪರಿಚಯ ಲೇಖನ ಬರೆಯುವಾಗ ಅವರ ಜನ್ಮ ದಿನಾಂಕ ಕೇಳಿ ದಾಖಲಿಸುತ್ತಿದ್ದೆ. ಕೆಲವರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ. ಈಗಿನಂತೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಆಸ್ಪತ್ರೆ, ನಗರಸಭೆಯಿಂದ ಪಡೆದ ಜನನ ಪ್ರಮಾಣ ಕೂಡಲೇಬೇಕೆಂಬ ಕಡ್ಡಾಯವಿರಲಿಲ್ಲ. ಇದಕ್ಕೆ ಉದಾಹರಣೆ ಹೇಳಬೇಕೆಂದರೆ ಸಾಹಿತಿಗಳು ನಮ್ಮ ಚಿಕ್ಕಪ್ಪನವರು ಆದ ಗೊರೂರು ಸೋಮಶೇಖರ್ ತಮ್ಮ ಆತ್ಮಕಥೆ ಪುಸ್ತಕ ಗೊರೂರು ನೆನಪುಗಳಲ್ಲಿ ಬರೆದಿದ್ದಾರೆ.

ಮಹಾಲಯ ಅಮಾವಾಸೆಯ ದಿನ ಹಬ್ಬ ಮುಗಿಸಿ ನಾನು ನನ್ನ ಸಹೋದರ ಲೇಖಕ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಸಂಜೆ ಎಲೆ ಅಡಿಕೆ ತಿನ್ನುತ್ತಾ ಸಾಹಿತ್ಯ ಪರಿಷತ್ತು ಚುನಾವಣೆ, ನಾಟಕ ವಿಚಾರವಾಗಿ ಮಾತನಾಡುತ್ತಾ ಬಾಬು ವಿಷಯ ಮಧ್ಯೆ ಬಂತು. ಆಗಲೇ ನಾನು ಬಾಬು ಅವರಿಗೆ ಈ ಬಾರಿ ಅರ್ಜಿ ಹಾಕಿ ಬಾಬು ಎಂದು ಮೆಸೇಜ್ ಮಾಡಿದ್ದೆ. ಮಾರನೇ ದಿನ ಬೆಳಿಗ್ಗೆ ಕಾದಂಬರಿಗಾರ್ತಿ ಶ್ರೀಮತಿ ಶೈಲಜಾ ಸುರೇಶ್ ಮೇಡಂ ಬಾಬು ನಿಧನ ಸುದ್ಧಿ ವ್ಯಾಟ್ಸಪ್ ಮಾಡಿದ್ದರು. ಇದು ಆ ಕ್ಷಣಕ್ಕೆ ನನಗೆ ಶಾಕಿಂಗ್ ನ್ಯೂಸ್. ಆಗ ನಮ್ಮ ವಾರ್ಡಿನ ಕಸದ ಗಾಡಿ ನಮ್ಮ ಮನೆ ಕಡೆ ಬರುತ್ತಿರಲು ಆ ಗಾಡಿಯ ಮೈಕಿನಿಂದ ಬಾಬು ಅವರ ಜನಪ್ರಿಯ ಹಾಡು ನನ್ನ ಊರು ಹಾಸನ ಶಿಲ್ಪ ಕಲೆಯ ಶಾಸನ ಕೇಳಿ ಬರುತ್ತಿತ್ತು. ಈ ಹಾಡು ಮಲಗಿದ್ದ ನಮ್ಮನ್ನು ಹಿಂದೆಲ್ಲಾ ಬಡಿದೆಬ್ಬಿಸುತ್ತಿತ್ತು. ಬಾಬು ಈ ಆಡಿಯೋ ಎಲ್ಲಿ ಮಾಡಿಸಿದ್ದೀರಿ ಎಂದು ಹಿಂದೊಮ್ಮೆ ಕೇಳಿದ್ದೆ. ಅನಂತರಾಜು, ನಿಜವಾಗಿಯೂ ಈ ಹಾಡು ನಾನು ಹಾಡಿದ್ದಲ್ಲ ಗಾಯಕ ಭಾನುಮೋಶ್ರೀಯವರು ಹಾಡಿದ್ದು ಎಂದಿದ್ದರು. ಬಾಬು ಅವರದೇ ಸ್ವರ ಸಾಮಾರ್ಥ್ಯದಲ್ಲಿ ಈ ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ ಗೊರೂರು ಅನಂತರಾಜು, ಹಾಸನ.

ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ.

ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ.

ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ.

ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದುವಾಗ ಮಲೆನಾಡಿನ ಜನಜೀವನ ಹಾಗೂ ಪರಿಸರದಲ್ಲಿ ತೆರೆದುಕೊಂಡಂತೆ ಇಲ್ಲಿಯ ಚಾರಣದಲ್ಲಿ ದಟ್ಟ ಅರಣ್ಯ ಪರಿಸರ ಪಿಕ್ನಿಕ್ ಕಥನದಲ್ಲಿ ರೂಪುಗೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇವಸ್ಥಾನಗಳು, ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅನುಭವವನ್ನು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಬರೆಯುತ್ತಿರುತ್ತೇನೆ.

ಆಗುಂಬೆ ಎಸ್.ನಟರಾಜ್‌ರಂತಹ ಲೇಖಕರು ಬರೆದ ತಮ್ಮ ಪ್ರವಾಸಾನುಭವವನ್ನು ಜೊತೆಗೆ ಆ ಸ್ಥಳದ ಐತಿಹಾಸಿಕ ಹಿನ್ನೋಟದ ಜೊತೆಗೆ ಸುಧೀರ್ಘವಾಗಿ ಬರೆದ ಪುಸ್ತಕಗಳನ್ನು ಓದುತ್ತಿದ್ದೇನೆ.

ಯೂ ಟ್ಯೂಬ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ ಕ್ಯಾಮರ, ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿ ಪ್ರಸಿದ್ಧ ತಾಣಗಳನ್ನು ಕಣ್ಣಮುಂದೆಯೇ ಕಟ್ಟಿಕೊಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇನೆ.

ಈ ದಿಸೆಯಲ್ಲಿ ಚಾರಣ ಹೊರಟ ಲೇಖಕರು ತ್ಯಾಗರಾಜ್ ಮತ್ತು ಆರು ಮಂದಿಯ ತಂಡ ಮಂಜಿನ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಬಂದ ಚಾರಣದ ಸಾಹಸ ಕಥೆ ಸಹಜ ಬರವಣಿಗೆಯಲ್ಲಿ ನಿರೂಪಿತವಾಗಿದೆ.

ಹಾಗೆಯೇ ತಮ್ಮ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತಾ ಸಾಗುವ ಚಾರಣದ ಅನುಭವ ಲೇಖಕರ ಬರಹ ಶೈಲಿಯಿಂದ ಓದುಗರಿಗೂ ಬೋರಾಗದೆ ಓದಿಸಿಕೊಂಡು ಹೋಗುತ್ತದೆ.

ಎಲ್ಲೋ ನಾವೇ ಆ ಪಯಣದಲ್ಲಿ ಭಾಗಿಯಾದಂತೆ ಕಣ್ಮುಂದೆ ದೃಶ್ಯ ಗೋಚರಿಸುತ್ತದೆ.

ಕಡೆಯಲ್ಲಿ ಒಂದು ನಿತ್ಯ ಹರಿದ್ವರ್ಣದ ಕಾಡಿನ ಪಯಣವು ಹಚ್ಚ ಹಸಿರಾಗಿ ಮನದಲ್ಲಿ ಉಳಿದುಬಿಡುತ್ತದೆ.

ಲೇಖಕರ ಮೊದಲ ಕಂತಾದ ಈ ಪುಸ್ತಕ ೪೪ ಪುಟಗಳ ವಿಸ್ತಾರದಲ್ಲಿ ಹರಡಿಕೊಂಡಿದೆ ಹಾಗೂ ಚಾರಣದ ಸರಣಿಗಳು ಭಾಗ-೧ ಎಂದೇ ಹೆಸರಿಡಲಾಗಿದೆ.

ಅಲ್ಲದೆ ಇನ್ನು ಮುಂದೆಯೂ ಸಹ ಲೇಖಕರು ಹೊಸ ಹೊಸ ಪ್ರದೇಶಗಳಿಗೆ ಚಾರಣ ಮಾಡಿದ ಅನುಭವ ದಾಖಲಿಸಿ ಕೃತಿ ರೂಪದಲ್ಲಿ ಪ್ರಕಟಿಸುವ ಇಂಗಿತ ಅಭಿವ್ಯಕವಾಗಿದೆ.

ಲೇಖಕರು ಹಲವಾರು ಸಾಹಸ ಚಾರಣಗಳನ್ನು ಮಾಡಿರುವ ಅನುಭವ ದಟ್ಟವಾದಂತಿದೆ. ಈ ಲೇಖನವು ಮುಂದೆ ಈ ಪ್ರದೇಶದಲ್ಲಿ ಚಾರಣ ಮಾಡುವ ಸಾಹಸಿಗರಿಗೆ ಮಾರ್ಗದರ್ಶಿ ಗೈಡ್ ಆಗುವುದು ನಿಶ್ಚಿತ.

ಪ್ರಸ್ತುತ ಈ ಕೃತಿಯ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಮಾಡುವವರಿಗೆ ಉಪಯುಕ್ತವಾಗಿದೆ. ಹಾಗೆಯೇ ಒಮ್ಮೆ ಓದಿಸಿಕೊಳ್ಳುವ ಸದಭಿರುಚಿಯ ಕೃತಿಯಾಗಿದೆ.

ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.

ನಾಳೆಗಳು ನಮ್ಮದೆನಿಸಿವೆ ಭರವಸೆಯ ನಾಳೆಗಳು ನಮ್ಮದೆನಿಸಿವೆ ಎಂಬ ಒಂದು ಸೊಗಸಾದ ಹಾಡಿಗೆ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕಲ್ಲುರೋಡ ಗ್ರಾಮದ ಮಹಾನಂದ ಮಠಪತಿ ಮೇಡಂ ತಮ್ಮ ಕಲೆಗಾರಿಕೆ ಪೋಟೋಗಳನ್ನು ಅಳವಡಿಸಿ ಒಂದು ವಿಡಿಯೋ ಮಾಡಿದೆ.

ಅದನ್ನು ಹೂವಿನಹಡಗಲಿಯ ಕತೆಗಾರ ಮಧುನಾಯ್ಕ್ ಲಂಬಾಣಿ ಗ್ರೂಪ್‌ನಲ್ಲಿ ಹಾಕಿದ್ದರು.

ಅನಂತರಾಜ್ ಸರ್, ಚಿಕ್ಕಮಗಳೂರಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಕಾರದಲ್ಲಿ ಇತ್ತೀಚಿಗೆ ನಡೆಸಿತ್ತಲ್ಲಾ ರಾಜ್ಯಮಟ್ಟದ ಗಾಯನ ಸ್ಫರ್ಧೆ ಇಲ್ಲಿ ಭಾಗವಹಿಸಿದ್ದ ಗಾಯಕಿ ಮಹಾನಂದ ಮಠಪತಿ ಮಗಳು ನೃತ್ಯಗಾರ್ತಿ ಅಭಿಶ್ರೀ ಇವರ ಕಲಾ ಪರಿಚಯ ಮಾಡಿ ಎಂದು ಕೊಂಚವೆ ಮಾಹಿತಿ ಕಳಿಸಿದ್ದರು.

ಅಲ್ಲಿ ತೀರ್ಪುಗಾರನಾಗಿ ಭಾಗವಹಿಸಿದ್ದ ನಾನು, ಮೇಡಂ ರ ಹಾಡನ್ನು ಆಗ ಕೇಳಿದ್ದೆನು, ಆದರೆ ಪರಿಚಯ ಇರಲಿಲ್ಲ. ಮೇಡಂ ನಂಬರ್ ಪಡೆದು ಮಾತನಾಡುತ್ತಾ ಅವರು ತಮ್ಮ ಕಲಾ ಪರಿಚಯ ಹೇಳಿಕೊಂಡರು.

ನಾನು ಶಾಲಾ ದಿನಗಳಲ್ಲಿ ಭರತನಾಟ್ಯ ,ಶ್ಲೋಕ, ವಚನ ಗಾಯನ, ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ.. ಹೀಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದೆನು.

ನಾನು ಹತ್ತನೇ ತರಗತಿ ಮುಗಿಸಿದ ನಂತರ ನನಗೆ ೧೭ ವರ್ಷಕ್ಕೆ ನಮ್ಮ ಸಂಬಂಧಿಕರಲ್ಲಿ ಮದುವೆ ಮಾಡಿಕೊಡಲಾಯಿತು.

ನನಗೆ ಏಳು ವರ್ಷಗಳ ಬಳಿಕ ಎರಡು ಅವಳಿ ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಒಂದು ವರ್ಷಕ್ಕೆ ನನ್ನ ಪತಿಯನ್ನು ಕಳೆದುಕೊಂಡೆನು. ನಂತರ ನಾನು ಮತ್ತೆ ಶಿಕ್ಷಣ ಮುಂದುವರಿಸಿದೆನು.

ಪಿಯುಸಿ, ಬಿಎ ಎಕ್ಸಾಮ್ ಬರೆದೆನು. ಲಾಕ್ಡೌನ್ ಟೈಮ್ ನಲ್ಲಿ ಮನೆಯಲ್ಲೇ ಭರತನಾಟ್ಯ ಹರ‍್ಮೋನಿಯಂ ಎರಡು ಮಕ್ಕಳಿಗೆ ಫೋನಲ್ಲಿ ನೋಡುತ್ತಾ ಕಲಿಸುತ್ತಿದ್ದೆನು. ನಾವು ಗುರುಗಳ ಹತ್ತಿರ ಕಲಿಬೇಕು ಅಂದ್ರೆ ನಮಗೆ ಯಾವುದೇ ರೀತಿ ಅನುಕೂಲ ಇರಲಿಲ್ಲ.

೨೦೧೬ ರಿಂದ ೨೦೨೪ ರವರೆಗೆ ಶಾಲಾ ಸಂಗೀತ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದೆ. ನನಗೆ ಭರತನಾಟ್ಯ ಮತ್ತು ಸಂಗೀತ ಅಂದರೆ ತುಂಬಾ ಆಸಕ್ತಿ ಇದೆ.

ನನಗೆ ತಿಳಿದಿದ್ದು ಮಕ್ಕಳಿಗೆ ಕಲಿಸುತ್ತಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ, ಅತ್ತೆ ಸ್ನೇಹ ಬಳಗ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ.

ಪ್ರತಿ ತಿಂಗಳು ನಮ್ಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಅಂದರೆ ಬಸವಣ್ಣನವರ ಕುರಿತು ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಚಿಂತನ ಕಾರ್ಯಕ್ರಮ ನಮ್ಮ ಮನೆಯವರು ಇದ್ದಾಗ ಮಾಡುತ್ತಿದ್ದರು.

ಅದನ್ನು ಹಾಗೆ ಬಿಡುವುದು ಬೇಡ ಎಂದು ನಾನು ನನ್ನ ಜನ್ಮ ದಿನದಂದು ಈ ಕಾರ್ಯಕ್ರಮ ಮಾಡಿ ನನ್ನಂತೆಯೇ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿರುವೆ.

ನಾನು ಮಾಡಿರುವಂತಹ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿತ್ತು ಅಂತ ಹೇಳಿದ್ದಾರೆ ಎಲ್ಲರು. ಊರಿನಲ್ಲಿ ಯಾವುದೇ ಒಂದು ಕರ್ಯಾಕ್ರಮ ಇರಲಿ ಆ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಿದ್ದರು.

ರಾಯಚೂರಿನ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ನೇ ಶ್ರೀರಾಯರ ಆರಾಧನೆಯ ಕಾರ್ಯಕ್ರಮ ನಡೆಯುತಿತ್ತು.

ಇದರ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮಠದ ಮುಂಭಾಗ ರಾಜ ಬೀದಿಯಲ್ಲಿ ದೇಶ-ವಿದೇಶದ ೩೫೦ ನೃತ್ಯಗಾರರು ಏಕಕಾಲಕ್ಕೆ ನಾಮ ರಾಮಾಯಣಂ ನೃತ್ಯ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ೨೦೨೪ರಲ್ಲಿ ಆಗಿದೆ.

ಜಪಾನ್, ಜರ್ಮನಿ, ಇಂಡೋನೇಷಿಯಾ ದೇಶ ಸೇರಿದಂತೆ ಭಾರತ ದೇಶದ ಹಲವಾರು ರಾಜ್ಯದಿಂದ ಕಲಾವಿದರು ಆಗಮಿಸಿದ್ದರು.

ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮ ರಾಯರ ಪಾದದಲ್ಲಿ ಸಮರ್ಪಣೆ ಮಾಡಿತು.

ಅದರಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥ ಅರವಿಂದಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ನೃತ್ಯಗಾರ್ತಿ ಸ್ವಾತಿ ಪಿ. ಭಾರದ್ವಾಜ್ ಅವರನ್ನು ಮರೆಯುವಂತಿಲ್ಲ.

ಈ ತಂಡದಲ್ಲಿ ತಾಯಿ ಮಹಾನಂದ ಮಠಪತಿ ಮತ್ತು ಮಗಳು ಅಭಿಶ್ರೀ ಇದ್ದು ಸರ್ಟಿಫಿಕೇಟ್ ಪಡೆದಿದ್ದಾರೆ.

ಇವರ ದೊಡ್ಡ ಮಗಳು ಅನುಶ್ರೀ ಹರ‍್ಮೋನಿಯಂ ಮತ್ತು ಪಿಯಾನ ಕಲಿಯುತ್ತಿದ್ದಾಳೆ. ವಚನ ಗಾಯನ, ಹರ‍್ಮೋನಿಯಂ ಜೊತೆ ಫೋನಲ್ಲಿ ನೋಡಿ ಕಲಿಸುತ್ತಿದ್ದೇನೆ ಎಂದರು.

ನಾನು ಕಲರ್ಸ್ ಕನ್ನಡ ದಲ್ಲಿ ಅಡಿಶನ್ ಕೊಟ್ಟಿದ್ದೇನೆ ಹಾಡು ಕರ್ನಾಟಕ ಹಾಗೆ ಜೀ ಕನ್ನಡದಲ್ಲಿ ಸರಿಗಮಪದಲ್ಲಿ ಭಾಗವಹಿಸಿದ್ದೇನೆ.

೨೦೨೪ರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಎರಡು ಮಕ್ಕಳ ಜೊತೆ ನಾನು ಕೂಡ ಡಾನ್ಸ್ ಮಾಡಿದ್ದೇನೆ.

ಅದರಲ್ಲಿ ನನ್ನ ಚಿಕ್ಕ ಮಗಳು ಅಭಿಶ್ರೀಗೆ ನೀನು ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀಯಾ ಅಂತ ಹೇಳಿ ಪವರ್ ಸ್ಟಾರ್ ಶೀಲ್ಡು ಕೊಟ್ಟಿದ್ದರು.

೧೧ ವರ್ಷದ ಅಭಿಶ್ರೀ ೨೭ ರಾಜ್ಯಮಟ್ಟದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಈಕೆ ಕೂಡ ನೃತ್ಯ ಕ್ಷೇತ್ರದ ಚಿಗುರು ಪ್ರತಿಭೆ.

ಶ್ರೀ ವೀರೇಂದ್ರಪಾಟೀಲ್ ಪಬ್ಲಿಕ್ ಸ್ಕೂಲ್ ಚಿಂಚೋಳಿಯಲ್ಲಿ ೫ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅವಳಿ ಸಹೋದರಿಯರು ಓದಿನಲ್ಲಿ ಮುಂದಿರುವರು.

ನೃತ್ಯ ಪ್ರತಿಭೆ ಅಭಿಶ್ರೀ ಇಲ್ಲಿಯವರೆಗೆ ಪಡೆದ ಪ್ರಶಸ್ತಿಗಳು ಕನ್ನಡದ ಚಿನ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ, ತಾಲೂಕು ಬಸವ ಕೇಂದ್ರ ಸನ್ಮಾನ, ಡ್ಯಾನ್ಸ್ ಫಾರ್ ಇಂಡಿಯಾ ಬೆಂಗಳೂರು, ಟ್ಯಾಲೆಂನ್ಟ್ ಸ್ಟಾರ್ ಅವಾರ್ಡ್ ಬೀದರ್, ಸ್ವಾಮಿ ವಿವೇಕಾನಂದ ಶಾಲೆಯಿಂದ ಸನ್ಮಾನ, ಶ್ರೀ ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಸನ್ಮಾನ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಮಗಳ ಸಾಧನೆ ಹಂಚಿಕೊಂಡರು.

೨೦೨೧ರಲ್ಲಿ ಮಹಾನಂದ ಮಠಮತಿ ಅವರು ಚಿಂಚೊಳ್ಳಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಇವರು ಪ್ರತಿ ಭಾನುವಾರ ನಡೆಸುತ್ತಿರುವ ವಿವಿಧ ಹಾಡುಗಳ ಸ್ಪರ್ಧೆಯಲ್ಲಿ ನಾನು ಹಾಡುತ್ತಿರುವುದು ನನಗೆ ಇನ್ನಷ್ಟು ಹೊಸ ಹಾಡು ಕಲಿಯುವುದಕ್ಕೆ ಅನುಕೂಲವಾಗಿದೆ.

ನಾನು ಪ್ರತಿ ವಾರ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿ ಚಿಕ್ಕಮಗಳೂರುನಲ್ಲಿ ರಾಜ್ಯಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪಡೆದಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹೀಗೆ ಕಾರ್ಯಕ್ರಮ ಮಾಡುತ್ತಿರುವುದರಿಂದ ಮರೀಚಿಕೆಯಾಗಿ ಉಳಿದುಕೊಂಡಿರುವ ನನ್ನಂತಹ ಕೆಲ ಕಲಾವಿದರು ಹೊರ ತರಲು ಕಾರಣರಾಗಿರುವ ರಾಜ್ಯಧ್ಯಕ್ಷ ಮಧುನಾಯ್ಕ ಲಂಬಾಣಿ ಸರ್ ಗೆ ನನ್ನ ನಮನಗಳು ಎಂದು ಮಾತು ಮುಗಿಸಿದರು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

 

ಶಂಕರೇಗೌಡ ತುಂಬಕೆರೆಯವರ “ಕೃಷ್ಣಸಾಗರ ಮತ್ತು ಇತರ ಕವನಗಳು” ಗೊರೂರು ಅನಂತರಾಜು, ಹಾಸನ

ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಈ ಕೃತಿಯಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ.

ಪ್ರಕೃತಿ ಕವಿತೆ, ತಾಯಿ ದೇವತೆ, ಜ್ಞಾನ ದೇವತೆ ಮತ್ತು ಪರಮಾತ್ಮನಲ್ಲಿ ಒಳ್ಳೆಯ ದಾರಿ ತೋರಿಸುವಂತಹ ಬೇಡುವ ಸಲಹುವ ಪ್ರಾರ್ಥಿಸುವ ಪದ್ಯಗಳು ಇವೆ. ಇವಲ್ಲದೆ ಪ್ರೇಮ ಗೀತೆಗಳು, ಸ್ವಾಮಿ ವಿವೇಕಾನಂದರ ಕುರಿತು ಬರೆದಿರುವ ಕವನಗಳು ಇವೆ.

ಮಂಡ್ಯ ಜಿಲ್ಲೆಯ ಶಂಕರೇಗೌಡ ತುಂಬಕೆರೆಯವರು ಫೋನಿನ ಮಾತಿನಲ್ಲಿ ತಮ್ಮ ಪರಿಚಯ ಹೇಳಿಕೊಳ್ಳುತ್ತಾ ಇವರ ಮೂರು ಕೃತಿಗಳು ಈಗಾಗಲೇ ಪ್ರಕಟವಾಗಿರುವುದು ತಿಳಿಯಿತು. ಅವುಗಳ ವಿಚಾರದ ಮಾಹಿತಿ ವ್ಯಾಟ್ಸಪ್ ಮಾಡಿದರು.

ಚಿಂತನ ಸೌರಭ ಇದು ಲೇಖಕರ ಚಿಂತನೆಗಳ ಬರಹ. ಒಂದು ವಿಷಯವನ್ನು ಈ ಆಧುನಿಕ ಸಂದರ್ಭದಲ್ಲಿ ವಾಸ್ತವ ದೃಷ್ಟಿಕೋನದಿಂದ ಹೇಗೆ ಅವಲೋಕಿಸಬಹುದು ಎಂಬುದನ್ನು ಗಮನವಿರಿಸಿ ಆದಷ್ಟು ಚಿಕ್ಕದಾಗಿ ಸರಳವಾಗಿ ಏನು ಹೇಳಬೇಕು ಅದನ್ನಷ್ಟೇ ಹೇಳಿ ಅರ್ಥೈಸಿದ್ದಾರೆ.

ಇವರ ಇನ್ನೊಂದು ಕೃತಿ ಹನಿಗವನ ಸೌರಭ. ಇದು ನನಗೆ ಇಷ್ಟವಾದ ಪ್ರಕಾರ. ಇದರಲ್ಲಿ 500 ಚುಟುಕುಗಳಿವೆ. ಹತ್ತು ಹಲವು ವಿಷಯಗಳನ್ನು ನಾಲ್ಕು ಸಾಲುಗಳ ಚುಟುಕುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಇವರ ಮತ್ತೊಂದು ಸಂಕಲನ ಆಧುನಿಕ ವಚನ ಸೌರಭ. ಇದು 400 ವಚನಗಳನ್ನು ಒಳಗೊಂಡಿದೆ. ವರ್ತಮಾನದ ಸಮಾಜದಲ್ಲಿ ಘಟಿಸುವ ಘಟನೆಗಳಿಗೆ 5 ಸಾಲಿನ ವಚನ ಓದುಗರನ್ನು ಎಚ್ಚರಿಸುತ್ತದೆ.

ಗೀತಾಂಜಲಿಗೊಂದು ಭಾವಥಾ೯ಂಜಲಿ ಇದು ಡಾ. ಕೆ. ಗೌರಮ್ಮ ಮತ್ತು ಶಂಕರೇಗೌಡ ತುಂಬಕೆರೆ ಇವರು ಆರ್. ಎಲ್.ಜಿ ಅವರು ಇಂಗ್ಲಿಷ್ ನಿಂದ ಅನುವಾದಿಸಿರುವ ವರಕವಿ ರವೀಂದ್ರರ ಗೀತಾಂಜಲಿ ಕೃತಿಯಿಂದ ಪ್ರಭಾವಿತರಾಗಿ ಅದರ ಎಲ್ಲಾ 103 ಕವನಗಳನ್ನು ಅಮೂಲಾಗ್ರವಾಗಿ ಓದಿ ನಂತರ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಭಾವಾರ್ಥವನ್ನು ಬರೆದಿದ್ದಾರೆ.

ಮಂಡ್ಯದ ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಂತರ ಅಲ್ಲಿನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2018 ರಲ್ಲಿ ನಿವೃತ್ತರಾಗಿ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ.

ಇವರಿಗೆ 2012ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕಥಾ ವಿಮರ್ಶೆ ನಗೆ ಹನಿಗಳು ಚಿತ್ರ ಕವನಗಳು ಪದರಂಗ ಪದಬಂಧ ರಚನೆ ಮುಂತಾದವು ಇವರ ಹವ್ಯಾಸ.

ಇವರ ಕಷ್ಟಸಾಗರ ಮತ್ತು ಇತರ ಕವನಗಳು ಸಂಕಲದಲ್ಲಿ 100 ವೈವಿಧ್ಯಪೂರ್ಣ ಕವಿತೆಗಳಿವೆ. ಪ್ರದಾನವಾಗಿ ಭಕ್ತಿ ಗೀತೆಗಳು ಮಾಧವನ ಕುರಿತ ಪದ್ಯಗಳು ಸರಳ ಬಾಷೆಯಲ್ಲಿ ರಾಗ ತಾಳ ಅನುಸಾರ ರೂಪುಗೊಂಡು ಗಾಯಕರು ವೇದಿಕೆಗಳಲ್ಲಿ ರಾಗ ಹಾಕಿ ಹಾಡಬಹುದಾಗಿದೆ.

ಇನನೇನಮ್ಮ ನಮ್ಮ ಮಾಧವನು
ಮನವನ್ನು ತಣಿಸುವ ಮೋಹನನು
ಸದ್ದುಗದ್ದಲವಿಲ್ಲದೆ ಬಂದಿರುವನು
ನಮ್ಮೊಡನಾಡಲು ಇಲ್ಲಿಯೇ ಇರುವನು

ಶಿಶು ಕಾವ್ಯವಾಗಿಯು ಮನಸೆಳೆವ ಕೆಲವು ಗೀತೆಗಳು ಈ ಕೃತಿಯಲ್ಲಿ ಸಾಕಷ್ಟಿವೆ.

ಮಗುವೆ ಬಿರಿವ ತುಟಿಯ
ನಾನು ನಿನ್ನ ನೋಡಿದಾಗ
ಎನ್ನ ಮನವು ಹರ್ಷದಿ
ಮುದಗೊಳ್ಳುವುದು ಆಗ

ಪ್ರಕೃತಿ ಕಾವ್ಯಗಳು ಪರಿಸರ ಕಾಳಜಿ ಪರಿಸರ ಪ್ರೇಮ ಈ ಕೆಳಗಿನ ಕವಿತೆಯಲ್ಲಿ ಅಭಿವ್ಯಕ್ತವಾಗಿದೆ.

ಆಹಾ ಏನು ಚೆಲುವು
ಎಂಥ ಸೊಬಗು ಈ ಬುವಿಯಲ್ಲಿ
ಯಾರು ಇದನು ರೂಪಿಸಿದರು?
ಸಗ್ಗದ ಸಿರಿ ತಂದು ಮಾಡಿದರು!

ಜೀವನದಿ ಕಾವೇರಿ ಅದರ ದಡದಲ್ಲಿ ನೆಲೆಸಿರುವ ಜನರ ಬದುಕಿನ
ಜೀವಸೆಲೆ ಎಂಬುದು ಇವರ ಈ ಕೆಳಗಿನ ಕವಿತೆಯಲ್ಲಿ ವ್ಯಕ್ತವಾಗಿದೆ.

ಕಾವೇರಿ ನೀ ಹರಿಯುತಾ
ಈ ಬುವಿಯ ತಣಿಸಿದೆ
ಬಹುಮಂದಿಗೆ ನೆಲೆ ನೀಡಿ
ಇಲ್ಲಿ ಪಾವನ ಎನಿಸಿದೆ

ಭಗವಾನ್ ಶ್ರೀ ರಾಮಕೃಷ್ಣರು ಅಮೃತಪುತ್ರ ಶ್ರೀ ಸ್ವಾಮಿ ವಿವೇಕಾನಂದ ಈ ಮಹನೀಯರ ವ್ಯಕ್ತಿ ಚಿತ್ರಣ, ಅವರ ಜೀವನ ಗಾಥೆಯು ಈ ಕೆಳಗಿನ ಸರಳ ಪದ್ಯಗಳ ರಚನೆಯಲ್ಲಿ ಇಷ್ಟವಾಗುತ್ತದೆ.

ಭಾರತ ಜನನಿಯ ಅಮೃತ ಪುತ್ರ
ನೀನೇ ಈ ದೇಶದ ಉಜ್ವಲ ನೇತ್ರ
( ಸ್ವಾಮಿ ವಿವೇಕಾನಂದ)

ದಕ್ಷಿಣೇಶ್ವರ ತಟಾಕದಲ್ಲಿ ಸಿದ್ಧಿ ಪಡೆದು
ಧೀರ ಶಿಷ್ಯ ವಿವೇಕರ ಪರಿಚಯಿಸಿದೆ
(ರಾಮಕೃಷ್ಣರು)

ಈ ಪದ್ಯಗಳು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಗೂಢಾರ್ಥ ಅಥವಾ ಭಾವಾರ್ಥ ಬೇರೆ ಹೇಳಬೇಕಾಗಿಲ್ಲ.

ಇದನ್ನು ಸ್ವತಃ ಕವಿಗಳೇ ದೂರವಾಣಿಯಲ್ಲಿ ತಿಳಿಸಿ ಪುಸ್ತಕವನ್ನು ಕಳಿಸಿದರು..ನನ್ನ ಕಾವ್ಯ ಪದ್ಯ ಸರಳ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ತಲುಪಬೇಕೆಂಬುದೇ ತನ್ನ ಆಶಯವೆಂದರು.

ನಿನ್ನೊಳಗೆ ಹರಿಯುವ
ರಸದಾರಿಗೆ ರೂಪು ಕೊಡು
ಅದನ್ನು ರಾಡಿ ಮಾಡದೆ
ನಿರ್ಮಲವಾಗಿರಿಸಲು ಮನವ ಮಾಡು

ಕೃತಿಯ ಪ್ರಕಾಶಕರಾದ ಹನ್ಯಾಳು ಗೋವಿಂದಗೌಡರ ಮೂಲಕ ಪರಿಚಯವಾದ ಲೇಖಕರು ಮುನ್ನುಡಿ ಬಯಸಿ ಈ ಮೊದಲು ಹಸ್ತಪ್ರತಿ ಕಳಿಸಿದ್ದರು. ಈಗ ಕೃತಿ ಹೊರಬಂದಿದೆ. ಕೃತಿಯ ನೂರನೇ ಕವನ ವಂದನೆ. ಅದು ಹೀಗಿದೆ.

ದೇವಾಧಿದೇವ ನಿನ್ನಂತರಂಗದ
ಒಳಿತೆಲ್ಲವೂ ನಿನ್ನದೇ ಕೃಪೆ
ಈ ಕೃಪೆಗಾಗಿ ನಿನಗೆನ್ನ ವಂದನೆ

ಗೊರೂರು ಅನಂತರಾಜು, ಹಾಸನ.
9449462879
29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನಿಶ್ವರ ದೇವಸ್ಥಾನ ರಸ್ತೆ,
ಹಾಸನ.