ಗಂಗಾವತಿ: ಕಳೆದ ೨೫ ವರ್ಷಗಳಿಂದಲೂ ಗಂಗಾವತಿಯಲ್ಲಿ ಶಂಕರಮಠ ನಿರ್ಮಾಣಕ್ಕೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿರುವ ದಿವಂಗತ ಭೀಮಸೇನ್ರಾವ್ ಅಳವಂಡಿಕರ್ ಹಾಗೂ ಅದ್ವೈತ ಸಿದ್ಧಾಂತದ ಬಗ್ಗೆ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದ ದಿವಂಗತ ಅಯೋದ್ಯ ರಾಮಾಚಾರ ಅವರನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇದೆ ಎಂದು ಗಂಗಾವತಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಅಕ್ಟೋಬರ್-೧೮ ಶನಿವಾರ ಶಾರದಾ ದೇವಸ್ಥಾನದಲ್ಲಿ ಗುರು ದ್ವಾದಶಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಶಂಕರ ಜಯಂತಿ, ದತ್ತಾತ್ರೇಯ ಜಯಂತಿ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪಂಪಾಪತಿ ದೇವಸ್ಥಾನ, ನಗರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಮೇಲಿನ ಹಿರಿಯರು ಹಾಗೂ ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ನಗರದಲ್ಲಿ ಈ ಎಲ್ಲಾ ಜಯಂತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಅತ್ಯಂತ ಸುಸಜ್ಜಿತವಾದ ಶಾರದಾ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಶಕುಂತಲಾ ಅವರು ಆಚರಣೆಯ ಮಹತ್ವ ಕುರಿತು ತಿಳಿಸುತ್ತಾ, ದತ್ತಾತ್ರೇಯ ಅವತಾರಿಗಳಾದ ಶ್ರೀಪಾದ ವಲ್ಲಭರು ಸಮೀಪದ ರಾಯಚೂರಿನ ಕುರುವಪುರ ಎಂಬಲ್ಲಿ ಹಲವಾರು ವರ್ಷಗಳಕಾಲ ವಾಸವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವುದರ ಮೂಲಕ ಈ ದಿನ ನಿಜಾಂಶವನ್ನು ಹೊಂದಿದ ದಿನಾಚರಣೆಯನ್ನು ಗುರು ದ್ವಾದಶಿ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ದತ್ತ ನಾಮಗಳಿಂದ ಸಂಕಷ್ಟಗಳು ದೂರವಾಗುವುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.
ಇದಕ್ಕೂ ಪೂರ್ವದಲ್ಲಿ ದತ್ತ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪುಷ್ಪಾರ್ಚನೆ ಸೇರಿದಂತೆ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು. ಜೊತೆಗೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಮಹಾಪ್ರಸಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ರಾಘವೇಂದ್ರ ಅಳವಂಡಿಕರ್, ಪ್ರಹ್ಲಾದರಾವ್ ಮಾಸ್ಟರ್, ಕಾಶಿನಾಥ್ ಜೋಶಿ, ಮಹೇಶ್ ಜೋಶಿ, ಬಾಲಕೃಷ್ಣ ದೇಸಾಯಿ
ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
aratt.ai/@vishwaroopa_news_blog
ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ
