ಗಂಗಾವತಿ: ನಗರದ ಅಯ್ಯಪ್ಪಗಿರಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿಯ ಅಂಗವಾಗಿ ಬುಧವಾರದಂದು 18 ಮೆಟ್ಟಲುಗಳ ಒಡೆಯ ಶ್ರೀ ಅಯ್ಯಪ್ಪಸ್ವಾಮಿಗೆ ಮೆಟ್ಟಿಲು ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಟ್ಟಿ ವೀರಪ್ರಸಾದ ಮಾತನಾಡಿ ಹರಿಹರ ಪುತ್ರನಾದ ಶ್ರೀ ಅಯ್ಯಪ್ಪಸ್ವಾಮಿ ದುಷ್ಟರ ಹಾಗೂ ಮಹೀಷಿಯ ಸಂಹಾರಕ್ಕಾಗಿ ಜನ್ಮ ತಾಳಿದ್ದು, ಸ್ವಾಮಿಯ ನಾಮಸ್ಮರಣೆ ಹಾಗೂ ಸೇವೆಯಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿಯಾದ ತಾಯಿಬಾಬಾ ಮಾತನಾಡಿ ಫೆಬ್ರುವರಿ 10 ರಿಂದ 12 ರವರೆಗೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 12ನೇ ವರ್ಷದ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಭಾರತಿ ಸ್ವಾಮಿಗಳು. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಡಾ. ಎಸ್ ಚಂದ್ರಮೌಳಿ ಗುರುಸ್ವಾಮಿಗಳು ಪರಮಪೂಜ್ಯ ಶ್ರೀ ರುದ್ರಮುನಿ ಸ್ವಾಮಿಗಳು ಸೇರಿದಂತೆ ಮತ್ತಿತರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿವೆ ಎಂದು ಹೇಳಿದರು.
ಮಕರ ಜ್ಯೋತಿಯ ನಿಮಿತ್ತವಾಗಿ 18 ಮೆಟ್ಟಿಲುಗಳಿಗೆ ವಿವಿಧ ಹೂಗಳಿಂದ ಹಾಗೂ ಜ್ಯೋತಿಗಳಿಂದ ಅಲಂಕಾರಗೊಳಿಸಲಾಗಿತ್ತು. ಭಕ್ತರಿಂದ ಹಾಗೂ ಮಾಲಾಧಾರಿಗಳಿಂದ ಭಜನೆ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ್ ದಿವಾಕರ್. ಮೂಲ ಅಯ್ಯಪ್ಪ ಸ್ವಾಮಿ ದೇವರಿಗೆ ಅಭಿಷೇಕ ಮುತ್ತಿತ್ತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. https://aratt.ai/@vishwaroopa_news_blog
