ಮನರಂಜಿಸಿದ ಸುಗಮ ಸಂಗೀತ ರಂಗಗೀತೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾಸನ: ಹಾಸನದ ವಿಜಯನಗರ ಬಡಾವಣೆ ಶ್ರೀ ಶಾರದ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು, ಹಾಸನ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘದ ೧೬ನೇ ವಾರ್ಷಿಕೋತ್ಸವ ಗಣರಾಜ್ಯೋತ್ಸವ ಅಂಗವಾಗಿ ಹಾಸನ ವಿಜಯನಗರ ಬಡಾವಣೆ ಪಾರ್ಕ್ ಬಯಲು ರಂಗವೇದಿಕೆಯಲ್ಲಿ ಪ್ರದರ್ಶನಗೊಂಡ ಸುಗಮ ಸಂಗೀತ ರಂಗಗೀತೆ ನಾಟಕ ಪ್ರೇಕ್ಷಕರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ದರ್ಶನ್ ವೆಂಕಟೇಶ್ ಮಾತನಾಡಿ ಮೈಮನಗಳನ್ನು ಹಿಗ್ಗಿಸುವ ಶಕ್ತಿ ಕಲೆಗಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಬಹಳ ವರ್ಷಗಳ ಹಿಂದೆ ತಾವು ಗೊರೂರಿನಲ್ಲಿದ್ದಾಗ ಪ್ರತಿ ವರ್ಷ ಗಣರಾಜ್ಯೋತ್ಸವ ಸ್ವಾತಂತ್ರೋತ್ಸವ ರಾಜ್ಯೋತ್ಸವ ಸಮಾರಂಭಗಳಲ್ಲಿ ಹೇಮಾವತಿ ಪ್ರಾಜೆಕ್ಟಿನಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯುತ್ತಿದ್ದವು. ಸಂಜೆ ಮನರಂಜನಾ ಮಂದಿರದಲ್ಲಿ ನಾಟಕ ಪ್ರದರ್ಶನ ಬಹುಮಾನ ವಿತರಣೆ ಇರುತ್ತಿತ್ತು. ಈ ಹಾದಿಯಲ್ಲಿ ವಿಜಯನಗರ ಬಡಾವಣೆಯ ಪಾರ್ಕಿನ ಈ ವಿಶಾಲ ಬಯಲು ರಂಗವೇದಿಕೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲದೇ ಪ್ರತಿ ವರ್ಷ ನಡೆದುಕೊಂಡು ಹೋಗಲಿ ಎಂದು ಆಶಿಸಿದರು.

ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಬಿ.ಹೆಚ್.ನಾರಾಯಣಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಇಂತಹ ಒಂದು ಸುಂದರ ಮನರಂಜನಾ ಕಾರ್ಯಕ್ರಮ ನಮಗೆಲ್ಲಾ ಹರ್ಷ ತಂದಿದೆ ಎಂದರು.

ಉಪಾದ್ಯಕ್ಷರು ಮಲ್ಲಿಕಾರ್ಜುನ್, ಎಸ್.ಶಿವಶಾಂತಪ್ಪ, ಖಜಾಂಚಿ ಬಿ.ಆರ್. ಮೊಗಣ್ಣಗೌಡರು ಇದ್ದರು. ಯೋಗೇಂದ್ರ ದುದ್ದರಿಂದ ಜಾನಪದ ಗೀತೆ, ಹೆಚ್.ಜಿ,ಗಂಗಾಧರ್‌ರಿಂದ ಸುಗಮ ಸಂಗೀತ, ರಂಗ ನಿರ್ದೇಶಕ ಎ.ಸಿ.ರಾಜು, ಕಲಾವಿದರು ನಾಗರಾಜು, ರಮೇಶ್, ಬ್ಯಾಟಚಾರ್, ಯರೇಹಳ್ಳಿ ಮಂಜೇಗೌಡ್ರು, ರಾಜಣ್ಣ ಪಟ್ನ ಆಲೂರು ರಂಗಗೀತೆಗಳನ್ನು ಹಾಡಿದರು. ಸಾವಿತ್ರಮ್ಮ, ಸಿ.ರಾಣಿ ಸಂಗಡಿಗರಿಂದ ಜನಪದ ಗೀತೆ, ನೃತ್ಯ ಮತ್ತು ಹೆಚ್.ಜಿ. ವಿಜಯಕುಮಾರ್ ಗ್ಯಾರಂಟಿ ರಾಮಣ್ಣ ತಂಡದಿಂದ ಬಾಡಿದ ಬದುಕು ನಾಟಕ ಪ್ರದರ್ಶನಗೊಂಡಿತು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading