ಮೌನ ಸಾಧಕರಾಗಿ ಒಳಿತನ್ನು ಮಾಡಿ: ಹೆಚ್.ಎಸ್. ಪ್ರತಿಮಾ ಹಾಸನ್

ಹಾಸನ: ಮಾರ್ಚ್‌-14 ರಂದು ಹಾಸನದ ಹೌಸಿಂಗ್ ಬೋರ್ಡ್, ಚನ್ನಪಟ್ಟಣದಲ್ಲಿ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ತಾಲೂಕು ಅಧ್ಯಕ್ಷರಾದ ರಮ್ಯಾರವರ ನಿವಾಸದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಹಾಸನದ ಹೆಮ್ಮೆಯ ಪುತ್ರಿಯಾಗಿರುವ ಸಾಹಿತಿ, ಸಮಾಜ ಸೇವಕಿ, ಶಿಕ್ಷಕಿ, ಪತ್ರಕರ್ತೆ, ಸಾಮಾಜಿಕ ಚಿಂತಕಿ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕಿ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ ) ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿ ಅವರನ್ನು ಎಲ್ಲ ಮಹಿಳೆಯರು ಅರಿಶಿಣ ಕುಂಕುಮ, ಬಳೆ. ಸೀರೆ ಜೊತೆಗೆ ಬಾಗಿನ ನೀಡಿ ಅವರ ಸಾಧನೆಯ ಹಲವಾರು ಪ್ರಶಸ್ತಿ ಪಡೆದ ಭಾವಚಿತ್ರವಿರುವ ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಬದುಕು ಎಂದ ಮೇಲೆ ಜೀವನದಲ್ಲಿ ಏರುಪೇರು ಸಹಜ. ಕಷ್ಟ ಸುಖ ಎಂಬುದು ಎಲ್ಲರ ಬದುಕಿನಲ್ಲಿ ಬರುತ್ತದೆ. ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿ ಇರುವವರಿಗೆ, ಅಂಗವಿಕಲರು, ನೊಂದವರಿಗೆ, ನಿರ್ಗತಕರಿಗೆ ಮಾಡಬೇಕು ಮಾಡುವ ಕೆಲಸವಾಗಲಿ ಸಾಧನೆ ಆಗಲಿ ಮೌನದಲ್ಲಿ ಸಾಗಬೇಕು, ಎಂದಿಗೂ ಮೌನ ಸಾಧಕರಾಗಿ ಒಳಿತನ್ನು ಮಾಡುತ್ತಾ ಸಾಗಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳುತ್ತಾ ಮಹಿಳೆಯರು ಪ್ರಬಲರಾಗಿ ಬದುಕಬೇಕು, ಆರ್ಥಿಕವಾಗಿ ಎಷ್ಟೇ ಪ್ರಬಲರಾದರು ದುಡಿಮೆಯನ್ನು ಮಾಡುತ್ತ ಸಾಗಿದರೆ ಸಮಾಜಕ್ಕೆ ಮಾದರಿಯಾಗಬಹುದು. ಅಷ್ಟೇ ಅಲ್ಲ ಮಹಿಳೆಯು ಅಬಲೆಯಲ್ಲ ಸಬಲೇ ಎಂಬ ಮಾತಿಗೆ ಎಲ್ಲಾ ಮಹಿಳೆಯರು ಸಂಸ್ಕೃತಿಯನ್ನು ಉಳಿಸುತ್ತಾ ಉಡುಗೆ-ತೊಡುಗಿಗಳಲ್ಲಿ ಬದಲಾವಣೆಗಳನ್ನು ತೋರದೆ ನಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಾ ನಮ್ಮ ಸಂಸ್ಕೃತಿಗೆ ವಿರುದ್ಧ ನಡೆಯದೆ ಕಾರ್ಯವನ್ನು ನಿರ್ವಹಿಸುತ್ತಾ ಸಾಗಿದರೆ ನಮ್ಮ ಸಮಾಜ ಸುಭದ್ರವಾಗಿರುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅರಿತು ಸಾಗಬೇಕಿದೆ. ಒಟ್ಟಾರೆ ಮಹಿಳೆಯಿಂದ ಸಮಾಜ ಸುಭದ್ರತೆಯನ್ನು ಕಾಣಬಹುದಾಗಿದೆ. ಎಂದು ಹೆಚ್.ಎಸ್ ಪ್ರತಿಮಾ ಹಾಸನ್ ಅವರು ತಿಳಿಸಿದರು.

ನಂತರ ಹೆಚ್.ಎಸ್. ಪ್ರತಿಮಾ ಹಾಸನ್ ರವರ ಸಾಧನೆ ಬಹಳವಾಗಿದೆ, ಅವರು ನೂರಾರು ಮಹಿಳೆಯರಿಗೆ ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದ್ದಾರೆ. ನೊಂದ ಮಹಿಳೆಯರಿಗೆ ನ್ಯಾಯ ನೀಡುವುದಾಗಲಿ, ಕರಕುಶಲ ತರಬೇತಿಯಾಗಲಿ, ಸಾಹಿತಿಕವಾಗಿ ಕಾರ್ಯಕ್ರಮಗಳಾಗಲಿ ಗುರುತಿಸಿ ನಮ್ಮೆಲ್ಲರಿಗೂ ಪ್ರೋತ್ಸಾಹ ನೀಡುತ್ತಿರುವುದು ಅವರ ಸಾಧನೆಯಾಗಿ ಕಾಣುತ್ತದೆ. ಇವರು ಬಹುಮುಖ ಪ್ರತಿಭೆಯಾಗಿದ್ದು.ಯಾವುದೇ ನಿಷ್ಕಲ್ಮಶವನ್ನು ತೋರದೆ ನೇರ ನುಡಿಯ ಮಾತುಗಾರ್ತಿಯಾಗಿ ನಮ್ಮೆಲ್ಲರಿಗೂ ಗುರುವಿನಂತೆ. ಇವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಇಂದು ನಮ್ಮಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್(ರಿ ) ವತಿಯಿಂದ ಗೌರವಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನ್ನಿಸುತ್ತದೆ. ಹೀಗೆ ಇವರ ಕಾರ್ಯವು ಸುಗಮವಾಗಿ ನಡೆಯಲೆಂದು ಆಶಿಸುತ್ತೇವೆ ಎಂದು ತಾಲೂಕು ಅಧ್ಯಕ್ಷರಾದ ರಮ್ಯಾ ತಿಳಿಸಿದರು.

ನಮ್ಮ ಟ್ರಸ್ಟ್ ನ ಕಾರ್ಯವು ಸುಗಮವಾಗಿ ಸಾಗುತ್ತಾ ಸಮಾಜಕ್ಕೆ ಒಳಿತನ್ನು ಮಾಡಿದರೆ ಸಾಕೆಂದು ಎಲ್ಲಾ ಟ್ರಸ್ಟ್ ನ ಸದಸ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿಸೌಮ್ಯ, ಅಭಿಲಾಷ, ಕಲ್ಪನಾ, ಸಂಗೀತ, ಜಯಮ್ಮ ಪ್ರವೀಣ್ ಗೌಡ, ಬೇಬಿ ರಶಿಕ,ಬೇಬಿ ದಿಯಾ ಗೌಡ ಕೆ ಆರ್. ಇನ್ನೂ ಹಲವರು ಇದ್ದರು.  https://aratt.ai/@vishwaroopa_news_blog

ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ

ಬೆಂಗಳೂರು: 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ಮಾರ್ಚ್‌-12 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.

ರಂಗಭೀಷ್ಮ ಬಿ.ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು. ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತಾ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ.

ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ.

ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು. ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್, ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು  ರಮಾನಂದ.  https://aratt.ai/@vishwaroopa_news_blog

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳೆಯರ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನಾoಬ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಮಹಿಳಾ ಚಿತ್ರ ಕಲಾವಿದೆಯರು ರೂಪಿಸಿರುವ ಕಲಾಕೃತಿಗಳು ಪ್ರದರ್ಶನಗೊಂಡವು.

ಪ್ರಕೃತಿಯಿಂದ ಹಿಡಿದು ಮಹಿಳೆಯರ, ಮಕ್ಕಳ ಚಿತ್ರಗಳು ಪ್ರಕೃತಿಯ ಮಡಿಲಲ್ಲಿ ಬುದ್ಧನ ಚಿತ್ರ, ಪ್ರಕೃತಿಯಲ್ಲಿ ಹಾವಿನ ಜೀವನದ ಹಾದಿ, ಹೂಗಳಲ್ಲಿ ತಾವರೆ, ಗುಲಾಬಿ ಚಿತ್ರಕಲೆಗಳು. ಕೃಷ್ಣ ಮತ್ತು ಹಡಗು,
ರಾಧಾಕೃಷ್ಣರ ಪ್ರೀತಿಯ ನೋಟ, ಕ್ರಿಯೇಟಿವ್ ವರ್ಕ್ಸ್. ಮಹಿಳಾ ದೌರ್ಜನ್ಯ ವಿರೋಧಿ ಚಿತ್ರಗಳು ಹೀಗೆ ಹಲವಾರು ವೈವಿಧ್ಯ ಚಿತ್ರಗಳು ಮಹಿಳೆಯರ ಕೈಚಳಕದಲ್ಲಿ ರೂಪು ತೆಳೆದಿವೆ.

ಎರಡು ದಿನಗಳು ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟು ಅವರ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಶ್ಲಾಘನೀಯ. ಈಗಿನ ಜಗತ್ತಿನಲ್ಲಿ ಎಲ್ಲಾ ಹೆಣ್ಣು ಮಕ್ಕಳು ಸಾಧನೆ ಮಾಡುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ತಮ್ಮ ಸಂಸಾರದ ನೌಕೆ ಮತ್ತು ಅವರವರ ವೈಯಕ್ತಿಕ ಬದುಕಿನ ಕೆಲಸಗಳನ್ನು ಮಾಡಿಕೊಂಡು ಅವರು ತಮ್ಮ ಸಾಧನೆ ಮಾಡುವಲ್ಲಿ ಗಮನ ವಹಿಸುತ್ತಾ ಬಂದಿದ್ದಾರೆ.

ಹಾಸನ ಜಿಲ್ಲೆ ಕಲೆಯ ಬೀಡು ಎಂದು ಪ್ರಸಿದ್ಧಿ ಪಡೆದಿದೆ. ಚಿತ್ರಕಲಾ ಪ್ರದಶ೯ನದಲ್ಲಿ ಭಾಗವಹಿಸಿದ ಕಲಾವಿದೆಯರೆಂದರೆ ಶೋಭಾ ಆರ್., ಸೌಮ್ಯ ಎಸ್., ಅಶ್ವಿನಿ ಹೆಚ್.ವಿ., ಲತಾ ಎಲ್‌.ಜಿ., ಹೇಮಲತಾ, ಮಂಜುಳಾ, ಚಂದ್ರಪ್ರಭ, ಅಕ್ಷರ, ಹೇಮಲತಾ ಆರ್., ಹಂಸವೇಣಿ, ವೃತಿಕ ಕುಮಾರಿ, ಸ್ಪೂರ್ತಿ, ಕೋಮಲ, ಪ್ರಕೃತಿ ಜಿ.ಆರ್., ಭೂಮಿಕ, ನಂದಿನಿ.

ಅಚ್ಚುಕಟ್ಟಾಗಿ ಚಿತ್ರಕಲೆ ಪ್ರದರ್ಶಿಸಲು ಮಹಿಳೆಯರಿಗೆ ಬೆಂಬಲ ನೀಡಿ ಮಾರ್ಗದರ್ಶನ ನೀಡಿದವರು ಹಿರಿಯ ಕಲಾವಿದರಾದ ಹಾಸನದ ಬಿ.ಎಸ್. ದೇಸಾಯಿ, ಚನ್ನರಾಯಪಟ್ಟಣದ ಪ್ರಭಾಕರ್ ಎಸ್.ವೈ., ಸುರೇಶ್ ಅತ್ನಿ ಮತ್ತು ಶಿವಕುಮಾರ್ ಆರ್., ಕಲಾವಿದೆಯರಿಗೆ ಸ್ಪೂರ್ತಿ ನೀಡಿ ಅಭಿನಂದಿಸಲು ಬಂದು ಮಾರ್ಗದರ್ಶನ ಮಾಡಿದವರು ಗೊರೂರು ಆನಂತರಾಜು ಸಾಹಿತಿಗಳು, ಹಾಸನ ಮತ್ತು ಕೆ.ಎನ್. ಶಂಕರಪ್ಪ ಕಲ್ಯಾಡಿ
ಕಾರ್ಯದರ್ಶಿಗಳು, ಸಂಸ್ಕಾರ ಭಾರತಿ ಮತ್ತು ಚಿತ್ರಕಲಾವಿದರು.

ಹೊರರಾಜ್ಯ ಮಹಿಳೆಯರ ಸಹಕಾರದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಉತ್ತಮ ಕಾರ್ಯಕ್ರಮವಾಗಿತ್ತು.  https://aratt.ai/@vishwaroopa_news_blog

ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ ನಾಟಕ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು.

ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು ನೋಡಬಯಸುತ್ತದೆ.

ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.

ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು ೧೯೫೧ರಲ್ಲಿ ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು ಅಘಾತಕಾರಿ. ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.
೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.

ಸ್ವಾತಂತ್ರ್ಯ ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ. ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ ದೃಶ್ಯ ಯಾಕೋ ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು.

ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು, ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು.

ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು. ಅನಿತಾ ಕಾರ್ಯಪ್ಪರವರು ನಾಟಕದ ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್ ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  https://aratt.ai/@vishwaroopa_news_blog

ಗೊರೂರು ಅನಂತರಾಜು, ಹಾಸನ.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ

ಹೆಚ್.ಎಸ್. ಪ್ರತಿಮಾಹಾಸನ್ ಗೆ “ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ” ಪ್ರಧಾನ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನದಲ್ಲಿ ಡಿ: 28 ರಂದು  ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ (ರಿ) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ) ವತಿಯಿಂದ ವಿಶ್ವಮಾನವ ದಿನಾಚರಣೆ ಹಾಗೂ ಮೂರು ವರ್ಷ ಪೂರ್ಣಗೊಳಿಸಿದ ಅನ್ನಪೂರ್ಣೇಶ್ವರಿ ಫೌಂಡೇಶನ್ ಸ್ಥಾಪಕ ದಿನೋತ್ಸವ ಮತ್ತು ರಾಜ್ಯಮಟ್ಟದ “ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ” ಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮೇಲಿನ ಪ್ರಶಸ್ತಿಗೆ ಮಹಿಳಾ ಸಾಧಕಿಯಾದ ಹಾಸನ ನಗರದ ಶಿಕ್ಷಕಿ. ಸಾಮಾಜಿಕ ಚಿಂತಕಿಯಾದ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಶಿಕ್ಷಣ ಕ್ಷೇತ್ರಕ್ಕೆ ಆಯ್ಕೆ ಮಾಡಿ ಪ್ರತಿಷ್ಠಿತವಾದ ” ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಾಹಿತಿ.ಪತ್ರಕರ್ತೆ ಹಾಗೂ ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಸಂಸ್ಥಾಪಕ ಅಧ್ಯಕ್ಷರು, ಬಹುಮುಖ ಪ್ರತಿಭೆಯಾಗಿ ಸದಾ ಕ್ರಿಯಾಶೀಲರಾಗಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯನಿರ್ವಹಿಸುತ್ತಾ, ನಾಡು ನುಡಿ ಕಲೆ ಸಂಸ್ಕೃತಿಗೆ ನೀಡಿರುವ ಹೆಚ್.ಎಸ್. ಪ್ರತಿಮಾ ಇವರ ಸೇವೆಯು ಅಪಾರವಾಗಿದ್ದು.ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿಯನ್ನು ಪಡೆದು ಹಾಸನದ ಹೆಮ್ಮೆಯ ಪುತ್ರಿಯಾಗಿ ಗುರುತಿಸಿಕೊಂಡಿರುವ ಮಹಿಳಾ ಸಾಧಕಿಯಾಗಿರುತ್ತಾರೆ. ಹಲವಾರು ಪ್ರಕಾರಗಳಲ್ಲಿ 12 ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಹಲವು ಕೃತಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಹಾಗೂ ಗಾಯಕಿ, ಅಂಕಣಗಾರ್ತಿ, ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವ ಇವರನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪ.ಪೂ ಶ್ರೀಶ್ರೀಶ್ರೀ ಷ.ಬ್ರ. ಮಹರ್ಷಿ ತಪೋರತ್ನ ಶಿವಾಚಾರ್ಯರು, ಶಿವಸಿದ್ಧಿ ಸೋಮೇಶ್ವರ ಮಹಾ ಸಂಸ್ಕೃತಿಗಳು, ಶ್ರೀ ಕ್ಷೇತ್ರ ಮುಕ್ತಿಮಠ, ಭೂತರಮನಹಟ್ಟಿ, ಬೆಳಗಾವಿ. ಹಾಗೂ ಶ್ರೀಮತಿ ನಿತ್ಯ ಎಂ.ಆಚಾರ್ ಅಧ್ಯಕ್ಷರು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ). ನಿರಂಜನ್ ಶೆಟ್ಟಿ, ಶ್ರೀ ಸುಜ್ಞಾನಮೂರ್ತಿ. ಪಿ, ಇನ್ನು ಹಲವರು ಉಪಸ್ಥಿತರಿದ್ದರು https://aratt.ai/@vishwaroopa_news_blog

ಹಾಡು ನೃತ್ಯಗಳಲ್ಲಿ ರಂಜಿಸಿದ ದಕ್ಷಬ್ರಹ್ಮ ನಾಟಕ

ಹಾಸನ: ಹಾಸನದ ಹಾಸನಾಂಬ ‘ಕಲಾಕ್ಷೇತ್ರದಲ್ಲಿ ಸ್ಥಳೀಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘವು ಹಮ್ಮಿಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಶುಕ್ರವಾರ ದಕ್ಷಯಜ್ಞ ನಾಟಕ ಪ್ರದರ್ಶಿಸಿದರು.

ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ತಾವು ರಂಗಭೂಮಿಗೆ ಬಂದು 18 ವರ್ಷ ಆಗಿದೆ. ಈವರೆಗೆ 200 ನಾಟಕಗಳಲ್ಲಿ ನಟಿಸಿದ್ದೇನೆ. ಸಂಘ ಹಲವಾರು ಹೊಸ ನಾಟಕ ಪ್ರದರ್ಶಿಸಿದೆ. ಪೌರಾಣಿಕ ನಾಟಕೋತ್ಸವ ನಡೆಸಿದ್ದೇವೆ. ಮುಂದೆಯೂ ರಂಗ ಚಟುವಟಿಕೆ ನೆಡೆಸಲು ಸಂಘದ ಕಲಾವಿದರು ಅಧ್ಯಕ್ಷ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾಟಕದ ಮೇಷ್ಟ್ರು ಡಿ.ಸಿ ಪುಟ್ಟರಾಜು ನಮಗೆ ಹೊಸ ಹೊಸ ನಾಟಕ ಕಲಿಸಿಕೊಟ್ಟ ಕಡಿಮೆ ಸಂಭಾವನೆ ಸ್ವೀಕರಿಸಿ ಆತ್ಮೀಯತೆಯಲ್ಲಿ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರಿಗೆ ನಾವು ಕಲಾವಿದರು ಪ್ರೀತಿಯಿಂದ ಬೆಳ್ಳಿ ಕಿರೀಟ ಉಂಗುರ ತೊಡಿಸಿ ಗೌರವಿಸಲಾಗುತ್ತಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ‘ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರಚಿತ ದಕ್ಷಯಜ್ಞ ನಾಟಕ ಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹತ್ತು ವರ್ಷಗಳ ಹಿಂದೆ ಎ.ಸಿ. ರಾಜು ಈ ನಾಟಕವನ್ನು ಇಲ್ಲಿ ನಿರ್ದೇಶಿಸಿ ನಾಟಕ ಪ್ರದರ್ಶನ ಕುರಿತಾಗಿ ಬರೆದಿದ್ದೆ. ನಾಟಕವೀಕ್ಷಣೆ ವಯಸ್ಕರ ಮನಸ್ಸಿಗೆ ಉಲ್ಲಾಸ ತರುತ್ತದೆ. ಪ್ರೇಕ್ಷಕರೆ ಕಲಾವಿದರಿಗೆ ಸ್ಫೂರ್ತಿ. ಜೀವಂತ ಕಲೆ ನಾಟಕ ಹೀಗೆ ಸಾಗಲಿ ಎಂದು ಆಶಿಸಿದರು.

ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಸಮಿತಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಲಾವಿದರು ರಮೇಶ್ ಗೌಡಪ್ಪ, ಸಿ.ಎಂ.ಶ್ರೀಕಂಠಪ್ಪ, ವೇದ ಶಿವಕುಮಾರ್, ವಕೀಲರು ಐ.ಎ.ಮಹೇಂದ್ರ, ಬಿ.ಕೆ.ವಿಶ್ವನಾಥಗೌಡ ಎಂ.ಟಿ.ತಿಮ್ಮೇಗೌಡ, ಕಲಾವಿದರು ಕೆ.ಕೆ.ರಂಗಸ್ವಾಮಿ, ಟಿ.ವಿ.ನಾಗರಾಜ್ ಹೆಚ್.ಎಂ.ಪ್ರಭಾಕರ್, ಸಾವಿತ್ರಿ ಗಂಗಾಧರ್, ಯರೇಹಳ್ಳಿ ಮಂಜೇಗೌಡರು, ಜಗದೀಶ್ ರಾಮಘಟ್ಟ, ಗ್ಯಾರಂಟಿ ರಾಮಣ್ಣ, ಶಶಿಕುಮಾರ್ ಸಾಲಗಾಮೆ, ನಾಟಕ ನಿರ್ದೇಶಕರು ಎ.ಸಿ. ರಾಜು, ಸೀನ್ಸ್ ಮಾಲೀಕರು ಲಕ್ಷಣ್ ಕಡಗ, ನಿ. ಪ್ರಾಧ್ಯಾಪಕರು ಎ ಹೆಚ್ ಗಣೇಶ ಅಂಕಪುರ, ಕಾರ್ಲೆ ಗೋವಿಂದೇಗೌಡರು ಇದ್ದರು.

ಸಿಗರನಹಳ್ಳಿ ಚಂದ್ರಶೇಖರ್ ನಿರೂಪಿಸಿದರು. ಬ್ಯಾಟಾಚಾರ್ ಪ್ರಾರ್ಥಿಸಿದರು. ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿಯ ಉತ್ತಮ ಬೆಳಕು ಮೇಕಪ್ ಮೈಕ್ ವಸ್ತ್ರಾಲಂಕಾರಗಳಲ್ಲಿ ದಕ್ಷ ಯಕ್ಷ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ನಾಟಕದ ದಕ್ಷಬ್ರಹ್ಮ ಪಾತ್ರದಲ್ಲಿ ಸತೀಶ್ ಕಬ್ಬತ್ತಿ. ಬಾಲ ಬ್ರಹ್ಮ – ಬಾನು ಶೇಖರ್ ಈಶ್ವರ -ನಿರಂಜನ, ಬ್ರಹ್ಮ – ನಾಗರಾಜ್ ಸಿ.ಜಿ. ಗಮನ ಸೆಳೆದರು.

ಚಂದ್ರಮ ರೋಹಿಣಿ ಪಾತ್ರಗಳಲ್ಲಿ ನಿಂಗರಾಜು ಮತ್ತು ನಾಗಮಣಿ, ವಸುಂದರ ಪದ್ಮ ಪಾತ್ರಗಳಲ್ಲಿ ಮಂಜುನಾಥ್ ಚಂದನ ಜೋಡಿ ಚಂದವಾಗಿ ನರ್ತಿಸಿ ಶೃಂಗಾರ ಗೀತೆಗಳಿಂದ ರಂಜಿಸಿದರು. ನಾರದನ ಪಾತ್ರವನ್ನು ಇಬ್ಬರು ರಮೇಶ್ ಕೆ ಮತ್ತು ಆನಂದಮೂರ್ತಿ ನಿಭಾಯಿಸಿದರು.

ಭೃಗು ಮಹರ್ಷಿ – ಡಿ.ವಿ.ನಾಗಮೋಹನ್ ನಂದಿ – ಜಗದೀಶ್, ವೀರಭದ್ರ ಪಾತ್ರ ಕುಮಾರ್ ಸ್ತ್ರೀ ಪಾತ್ರಗಳು ಆದಿಶಕ್ತಿ ದೀಪು, ಪುಪ್ಪವತಿ- ಮಂಜಳ ಉಮೇಶ್, ರೇವತಿ – ಮಮತ, ಭರಣಿ – ಸಾವಿತ್ರಿ ಗಂಗಾಧರ್ ಅಭಿನಯಿಸಿದರು. ವಾದ್ಯ ಗೋಷ್ಠಿ ಕ್ಯಾಸಿಯೋ ವಿಶ್ವ ಮಂಡ್ಯ, ತಬಲ ಲೋಕಾಭಿರಾಮ ಮಂಡ್ಯ ಸಾತ್ ನೀಡಿದರು. https://aratt.ai/@vishwaroopa_news_blog

ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಲೇಖಕಾ ಶ್ರೀ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಲೇಖಿಕಾ ಸಾಹಿತ್ಯಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೊತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಹಿತ್ಯ ಕ್ಷೇತ್ರದ ಸಾಧಕ ಲೇಖಕ ಲೇಖಕಿಯರಿಗೆ ದಿನಾಂಕ 9- 11-2025ರ ಭಾನುವಾರ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಲೇಖಿಕಾ ಶ್ರಿ 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ, ಗಣೇಶ ಅಮೀನಗಡ ಕೆ.ಎಂ.ಲೋಲಾಕ್ಷಿ, ಪದ್ಮಾ ಆನಂದ್, ಉಷಾ ನರಸಿಂಹನ್, ಬೆಂಗಳೂರಿನ ನಾಗವೇಣಿ ರಂಗನ್, ಮುಕುಂದ ಗಂಗೂರ್, ಯಶೋದಾ ಡಿ. ರಾಧಾ ಟೇಕಲ್, ಬೆಳಗಾವಿಯ ಮಧುರಾ ಕರ್ಣಂ, ದೀಪಿಕಾ ಚಾಟೆ, ಚಿಕ್ಕಮಗಳೂರಿನ ನಾಗಲಕ್ಷ್ಮಿ ಎಂ.ಜೆ., ಉತ್ತರ ಕನ್ನಡದ ಭಾಗೀರಥಿ ಹೆಗಡೆ, ಡಾ. ವೀಣಾ ಸುಳ್ಯ, ಕೃಷ್ಣ ಪದಕಿ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸೀ.ಚ. ಯತೀಶ್ವರ, ಸಂಚಾಲಕಿ ಶೈಲಜಾ ಸುರೇಶ್, ಪತ್ರಕರ್ತರು ವೆಂಕಟೇಶ್, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ್, ಡಾ. ಹೇಮಾ ಪಟ್ಟಣಶೆಟ್ಟಿ ಮೊದಲಾದವರು ಇದ್ದರು. https://aratt.ai/@vishwaroopa_news_blog

ಶಾಹೀನ್ ಲರ್ನ್ ಅಕಾಡೆಮಿ ಶಾಲೆಯಿಂದ ಸಾಹಿತಿ ಪ್ರತಿಮಾ ಹಾಸನ್ ಗೆ ಸನ್ಮಾನ

ಹಾಸನ: ನವೆಂಬರ್‌-1 ರಂದು ಹಾಸನದ ಹಳೆ ಈದ್ಗಾ ಮೈದಾನ, ಹೊಸ ಲೈನ್ ರಸ್ತೆಯಲ್ಲಿರುವ “ಶಾಹೀನ್ ಲರ್ನ್ ಅಕಾಡೆಮಿ ಶಾಲೆ” ಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ, ಶಿಕ್ಷಕಿ,ಸಾಮಾಜಿಕ ಚಿಂತಕಿ, ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು, ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಆಹ್ವಾನಿಸಿ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರನ್ನಾಗಿ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಡಲಾಗಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸುವುದೇ ದೊಡ್ಡ ಸವಾಲ್ ಆಗಿಬಿಟ್ಟಿದೆ. ಅದರ ಉಳಿವಿನತ್ತ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕರುನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ತನ್ನ ಜನ್ಮದ ಋಣ ತೀರಿಸಿಕೊಳ್ಳಬೇಕೆಂದರೆ ಕರುನಾಡು ಹಾಗೂ ಕನ್ನಡಕ್ಕೆ ಋಣಿಯಾಗಿರಬೇಕು. ಕನ್ನಡ ನಾಡು ನುಡಿಯನ್ನು ಉಳಿಸಬೇಕಾದರೆ ನಮ್ಮ ಮನೆಗಳಿಂದಲೇ ಕನ್ನಡವನ್ನು ಹೇಳಿಕೊಡುತ್ತ ಮಾತನಾಡಬೇಕು. ಸಾವಿರಾರು ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಅಸ್ತಿತ್ವವನ್ನು ಒಳಗೊಂಡಿದೆ. ಕನ್ನಡ ಭಾಷೆಗೆ ಯಾವ ಧರ್ಮವು ಇಲ್ಲ, ಯಾವ ಜಾತಿಯೂ ಇಲ್ಲ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಹ ಕನ್ನಡವನ್ನು ಮಾತನಾಡುತ್ತಾ ಕನ್ನಡದ ಭಾಷೆಯ ಮಹತ್ವ ತಿಳಿದು, ಕನ್ನಡ ಬರದವರಿಗೆ ಹೇಳಿಕೊಡುವ ಕೆಲಸವನ್ನು ಮಾಡಬೇಕು. ಇಂದು ಈ ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಮಹತ್ವವನ್ನು ತಿಳಿಸುತ್ತಾ ಶಾಲೆಯ ಅಭಿವೃದ್ಧಿಯನ್ನು ಹೊಂದಲು ಪ್ರಯತ್ನಪಡುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಪ್ರತಿಮಾ ಹಾಸನ್ ತಿಳಿಸಿದರು.

ಶಾಲೆಯ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಬಾವುಟದ ಚಿತ್ರವನ್ನು ಬಿಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮವಾಗಿ ಬಿಡಿಸಿದಂತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿ ಎಲ್ಲ ಮಕ್ಕಳಿಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶಾಲೆಯ ಎಲ್ಲ ಮಕ್ಕಳಿಗೂ ಸಿಹಿಯನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ನಸರುಲ್ಲಾ ಮುಸಮಿಲ್ ಪಾಷ ಸಂಯೋಜಕರು,ಅಧ್ಯಕ್ಷರು ಇಂಥಿಯಸ್ ಪಾಷ, ಷಮಾ ಅಂಬ್ರಿನ್, ಶಿಕ್ಷಕ ವೃಂದವರು, ಇನ್ನು ಹಲವಾರು ಉಪಸ್ಥಿತರಿದ್ದರು. https://aratt.ai/@vishwaroopa_news_blog

ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ಧ್ವನಿ ಸಂಚಿಕೆ ಒಂದರ ಅಂತಿಮ ಹಂತದ (Final Stage) ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಮಧುನಾಯ್ಕಲಂಬಾಣಿಯವರ ರಚನೆಯ ಸಿಂಗಾರ ಹಾಡನ್ನು ಹೊಸಪೇಟೆಯ ಖ್ಯಾತ ಗಾಯಕಿ ಶ್ರೀಮತಿ ಕಮಲಾ ಕುಲಕರ್ಣಿಯವರು ಬಿಡುಗಡೆಗೊಳಿಸಿದರು. ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಗಾಯಕಿ ಶ್ರೀಮತಿ ಲಲಿತ ಸಿದ್ದಿ ಹಾಗೂ ಈ ಹಾಡಿಗೆ ಸಂಗೀತ ಸಂಯೋಜನೆ ಶ್ರೀನಿವಾಸನಾಯ್ಕ, ಡರೆಕ್ಷನ್ ರವಿಕಿರಣ, ಎಡಿಟಿಂಗ್ ಅಭಿಷೇಕ ಎಮ್., ನೃತ್ಯ ಪಲ್ಲವಿ ಎಲ್. ಇವರದ್ದಾಗಿದೆ.

ರಾಜ್ಯದಾದ್ಯಂತ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ, ಗೌರವ ಅಧ್ಯಕ್ಷರು ಮತ್ತು ಲೇಖಕರು ಗೊರೂರು ಅನಂತರಾಜು, ಉಪಾಧ್ಯಕ್ಷರು ವಿರುಪಾಕ್ಷಪ್ಪ ಯು., ಕಾರ್ಯಕ್ರಮದ ಅಧ್ಯಕ್ಷತೆ ಕೆ ಎಸ್ ನಾಯ್ಕ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯರಾದ ಆಶಾರಾಣಿ ಬಾಬುರಾವ್ ನಡೋಣಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷರಾದ ಪಿ.ವಿ ವೆಂಕಟೇಶ್, ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಉದೇದಪ್ಪ, ನಿವೃತ್ತ ಪೋಲಿಸ್ ಅಧಿಕಾರಿಯಾದ ಡಿ.ಎಸ್. ಗಜೇಂದ್ರ ನಾಯ್ಕ, ನಭಿಸಾಬ್ ಕುಷ್ಟಗಿ, ಕರೋಕೆ ಹಾಡುಗಾರಿಕೆ ಸ್ಪರ್ಧೆಯ ತೀರ್ಪುಗಾರರಾದ ಕುಬೇರನಾಯ್ಕ, ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ, ಚಿಕ್ಕಮಗಳೂರುರವರು ಹಾಜರಿದ್ದರು.

https://aratt.ai/@vishwaroopa_news_blog

ಜೀವನಾನುಭವಗಳು ವ್ಯಕ್ತಿಯ ಶಕ್ತಿ – ಗೊರೂರು ಶಿವೇಶ್

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌.

ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಎಸ್ ಎಲ್ ಭೈರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪನವರು ಬಾಲ್ಯದಲ್ಲಿ ಸೋದರ ಸೋದರಿಯರು ತಾಯಿ ಕಳೆದುಕೊಂಡು ಅನಾಥರಾದ ಸಂದರ್ಭದಲ್ಲಿ ಹುಟ್ಟಿದ ಜೀವನದ ಪ್ರಶ್ನೆಗಳಿಗೆ ತತ್ವಶಾಸ್ತ್ರದಲ್ಲಿ ಉತ್ತರ ಕಂಡುಕೊಂಡು ಕೃತಿಗಳಲ್ಲಿ ಅವುಗಳನ್ನು ಪರಿಚಯಿಸಿದರು. ಹುಟ್ಟು ಸಾವು ಮತ್ತು ಅಸ್ತಿತ್ವಗಳ ನಿರಂತರ ಶೋಧನೆಯಲ್ಲಿರುವ ವ್ಯಕ್ತಿಗೆ ತತ್ವಶಾಸ್ತ್ರ ಬೆಳಕು ನೀಡಬಹುದಾದರೂ ಸಾಹಿತ್ಯದಲ್ಲಿ ಭಾವಗಳ ಮೂಲಕ ಪರಿಚಯಿಸಿದಾಗ ಅದು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ತತ್ವಶಾಸ್ತ್ರ ಅಧ್ಯಾಪಕರಾದ ಎಸ್ ಎಲ್ ಬೈರಪ್ಪನವರು ಜೀವನದ ಈ ಕಟು ಕಹಿ ಸತ್ಯಗಳನ್ನು ರಸಾಭಿವ್ಯಕ್ತಿ ಯ ಮೂಲಕ ಪರಿಚಯಿಸಿದ ಕಾರಣಕ್ಕೆ ಅವರು ಭಾರತದಲ್ಲಿ ಜನಪ್ರಿಯ ಕನ್ನಡ ಲೇಖಕರಾಗಿ ಹೊರಹೊಮ್ಮಿದರು ಎಂದು ವಿವರಿಸಿದರು.

ಹಲೋ ಹಾಸನ್ ದಿನಪತ್ರಿಕೆಯ ಸಂಪಾದಕರು ರವಿ ನಾಕಲಗೂಡು ಕಾರ್ಯಕ್ರಮ ಉದ್ಘಾಟಿಸಿದರು. ಕದಂಬ ಸೈನ್ಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ರಾಜ್ಯ ಉಪಾಧ್ಯಕ್ಷರು ಡಾ. ದೇವನಹಳ್ಳಿ ದೇವರಾಜ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ಉಮೇಶ, ಮಂಡ್ಯ ಜಿಲ್ಲೆ ಎಸಾ ಧ್ಯಕ್ತರು ರಾಮ ಚಿಕ್ಕ ಗೌಡನದೊಡ್ಡಿ, ನಾ ಮಹದೇವಸ್ವಾಮಿ, ಮೈಸೂರು, ನಿವೃತ್ತ ಪ್ರಾಂಶುಪಾಲರು ಹಾಸನ ತಾಲ್ಲೂಕು ಘಟಕದ ಕದಂಬ ಸೈನ್ಯೆ ಅಧ್ಯಕ್ಷರು ಗಣೇಶ್ ಅಂಕ ಪುರ, ಹೊಳೆನರಸೀಪುರ ತಾ. ಅಧ್ಯಕ್ಷರು ಪುಟ್ಟಸ್ವಾಮಿಗೌಡರು, ಅರಕಲಗೂಡು ತಾ ಅಧ್ಯಕ್ಷರು ರವಿಕುಮಾರ್, ಸಕಲೇಶಪುರ ತಾ ಅಧ್ಯಕ್ಷರು ವಿಶ್ವಾಸ್ ಡಿ ಗೌಡ, ಹಾಸನ ಜಿಲ್ಲಾ ಉಪಾಧ್ಯಕ್ಷರು ಯಾಕೂಬ್ ಗೊರೂರು ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಿರಿಕನ್ನಡ ದಿನಪತ್ರಿಕೆ ಸಂಪಾದಕರು ಎನ್. ಬಿ ಆನಂದ ಪಟೇಲ್ ನೆಲ್ಲಿಗೆರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈ. ಕೃಷ್ಣೇಗೌಡರು, ನಿವೃತ್ತ ಉಪನ್ಯಾಸಕರು ಹೆಚ್.ಆರ್.ರಂಗಸ್ವಾಮಿ ವೇದಿಕೆಯಲ್ಲಿದ್ದರು.

ಟಾರ್ಗೆಟ್ ಕಾಲೇಜಿನ ಪ್ರಾಂಶುಪಾಲರು ರಾಹುಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕರು ದೇವರಾಜ್ ಸ್ವಾಗತಿಸಿದರು.