ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು-ಶಿವಸ್ವಾಮಿ.

ಗಂಗಾವತಿ: ನಗರದ ಜೂನಿಯರ್ ಕಾಲೇಜಿನಲ್ಲಿ ಫೆಬ್ರವರಿ-೮ ಶನಿವಾರದಂದು ಕಾಲೇಜು ಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕರಾದ ಶ್ರೀ ಎ.ಎಂ.ಶಿವಸ್ವಾಮಿಯವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಆಗಿ ಹೋದ ಜೀವಪರ ಸಾಹಿತಿಗಳು, ಕವಿಗಳು, ದಾರ್ಶನಿಕರು, ಸಂತರು, ದಾಸರು ಇವರು ಹೇಳಿಕೊಟ್ಟ ಸಾಮರಸ್ಯದ ಬದುಕು ನಮ್ಮದಾಗಬೇಕು. ಇಂತಹ ಮಹನೀಯರ ಸಮಾಜಮುಖಿ ಚಿಂತನೆಗಳು ನೆಮ್ಮದಿಯ ಹೊಸ ಭಾರತ ಕಟ್ಟವುದಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿವೆ ಎನ್ನುವ ವಿಷಯ ಕುರಿತು ಬಹಳ ವಿಸ್ತಾರವಾಗಿ ಮಾತನಾಡಿದರು. ವಿಜ್ಞಾನದ ಸಂಶೋಧನೆಗಳ ಲಾಭವನ್ನು ನಾವು ನಮ್ಮ ಜೀವನದ ಪ್ರತಿ ಹಂತದಲ್ಲಿ ಅನುಭವಿಸುತ್ತಿದ್ದೇವೆ. ಆದರೆ ವೈಜ್ಞಾನಿಕವಾಗಿ ನಾವು ಬದುಕುವುದನ್ನು ರೂಡಿಸಿಕೊಳ್ಳಲೇ ಇಲ್ಲ ಅನ್ನೋದು ದೊಡ್ಡ ದುರಂತ. ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕದ ಅಧ್ಯಯನದ ಜೊತೆಗೆ ಕುವೆಂಪು, ಬಸವಣ್ಣ, ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು, ಕನಕದಾಸರು, ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ ಇವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು. ಈ ಮಹನಿಯರು ಹೇಳಿರುವಂತಹ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವೂ ಬದುಕಿ ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ. ಯಾಕೆಂದರೆ ತಂದೆ ತಾಯಿಯವರ ಋಣಕ್ಕಿಂತಲೂ ಸಮಾಜದ ಋಣ ದೊಡ್ಡದು. ನೀವು ಸಂಪಾದನೆ ಮಾಡಿದ್ದನ್ನು ಬರೀ ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಬಳಸದೆ ಸಮಾಜದ ಹಿತಕ್ಕಾಗಿ ಬಳಸುವುದನ್ನು ಕಲಿತರೆ ಮಾತ್ರ ಜೀವನ ಸಾರ್ಥಕ ಎಂದರು.

ಸಮಾರಂಭವನ್ನು ಕೊಪ್ಪಳ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯ, ಉಲ್ಲಾಸಭರಿತನಾದ ವ್ಯಕ್ತಿ ಹೆಚ್ಚು ಕೆಲಸ ನಿರ್ವಹಿಸಬಲ್ಲ ಹಾಗೂ ಸಾಧನೆ ಮಾಡಬಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಂತೋಷದಿಂದ ಇರಬೇಕೆಂದು ತಿಳಿ ಹೇಳಿದರು.

ಆರಂಭದಲ್ಲಿ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್‌ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಶ್ ಮಡಿವಾಳರ, ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಶ್ರೀಮತಿ ರಮಾ, ಪ್ರೌಢಶಾಲೆಯ ಉಪಪ್ರಚಾರ್ಯರಾದ ಬಸವರಾಜಯ್ಯ ಸ್ವಾಮಿಯವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅಜಗರ್ ಪಾಷಾ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರುಗಳಾದ ಡಾ. ರವಿಚಂದ್ರನ್ ಹಾಗೂ ನಿರುಪಾದಿ ನೆರೆವೇರಿಸಿದರು. ಶ್ರೀಮತಿ ಕನಕಮ್ಮ ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗಪ್ಪ ಎಂ., ಕುಮಾರಸ್ವಾಮಿ ಜಿ., ಈಶ್ವರಪ್ಪ ಸಿ., ಶ್ರೀಮತಿ ಸಾವಿತ್ರಿ ಬಿ., ಶ್ರೀಮತಿ ಲಕ್ಷ್ಮಿ ಜೆ., ರುದ್ರೇಶ ತಬಾಲಿ, ಶ್ರೀಮತಿ ಲಲಿತಾ ಕಂದಗಲ್, ಚಿದಾನಂದ ಮೇಟಿ, ಶ್ರೀಮತಿ ಶ್ರೀದೇವಿ, ಮಹೇಶ, ಶ್ರೀಮತಿ ಕವಿತಾ ಜೆ.ಎಂ. ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading