ಪ್ರವಾಸೋದ್ಯಮ ದಿನಾಚರಣೆ: ಗಂಗಾವತಿ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಐತಿಹಾಸಿಕ ಸ್ಮಾರಕ ಛಾಯಾಚಿತ್ರಗಳೊಂದಿಗೆ ಸಿಂಗಾರ.

ಪ್ರವಾಸೋದ್ಯಮ ದಿನಾಚರಣೆ: ಗಂಗಾವತಿ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಐತಿಹಾಸಿಕ ಸ್ಮಾರಕ ಛಾಯಾಚಿತ್ರಗಳೊಂದಿಗೆ ಸಿಂಗಾರ.

ಗಂಗಾವತಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಗಂಗಾವತಿ ಚಾರಣ ಬಳಗವು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಜಾಗೃತಿ ಮತ್ತು ಪ್ರಚಾರಕ್ಕೆ ಒಂದು ನೂತನ ಹೆಜ್ಜೆ ಇಟ್ಟಿದೆ. ನಗರದ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯನ್ನು ವಿವಿಧ ಪ್ರವಾಸಿ ತಾಣಗಳ ಛಾಯಾಚಿತ್ರಗಳಿಂದ ಅಲಂಕರಿಸಿ, ಅದನ್ನು ‘ಪ್ರವಾಸೋದ್ಯಮ ಪೂರಕ ಮಾದರಿ ಕೊಠಡಿ’ಯಾಗಿ ಪರಿವರ್ತಿಸಲಾಯಿತು. ಪ್ರವಾಸಿಗರು ವಿಶ್ರಾಂತಿ ಪಡೆಯುವ ಸ್ಥಳವನ್ನು ಸುಂದರ ಹಾಗೂ ಮಾಹಿತಿ ಪ್ರಧಾನವಾಗಿಸಲು ಈ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಯಿತು ಎಂದು ಗಂಗಾವತಿ ಚಾರಣ ಬಳಗದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್ ತಿಳಿಸಿದರು.

ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗರಾಜ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮವು ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಾಗಿರದೇ, ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ವೈಭವವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸೇತುವೆಯಾಗಿದೆ ಎಂದರು. ಗಂಗಾವತಿಯಂತಹ ಐತಿಹಾಸಿಕ ಪಟ್ಟಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳ ಸೌಂದರೀಕರಣ ಮತ್ತು ಪ್ರವಾಸೋದ್ಯಮ ಬೆಂಬಲವು ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಇನ್ನಷ್ಟು ವಿಸ್ತಾರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ತಜ್ಞರು ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ನಗರಗಳು ಬೆಳೆಯಬೇಕೆಂದರೆ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತುಕೊಟ್ಟು, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರಚಾರಪಡಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಚಾರಿ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಶಾರದಾ, ಪ್ರೊ.ಎಫ್.ಹೆಚ್. ಚಿತ್ರಗಾರ ಅವರು ಮಾತನಾಡಿ, ಪ್ರವಾಸಿಗರಿಗೆ ಪ್ರೇರಣೆ ನೀಡುವ ಈ ರೀತಿಯ ಕಾರ್ಯಕ್ರಮಗಳು ಸ್ಥಳೀಯರ ಸಹಭಾಗಿತ್ವದಿಂದ ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಯು. ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಹಕಾರದೊಂದಿಗೆ ಅವರ ಸಮ್ಮುಖದಲ್ಲಿಯೇ ತಹಶಿಲ್ದಾರರ ಕಚೇರಿ ಮತ್ತು ಉಪ ನೋಂದಣಿ ಕಚೇರಿಗಳ ಗೋಡೆಗಳ ಮೇಲೆ ಪ್ರವಾಸಿ ತಾಣಗಳ ಸ್ಮಾರಕಗಳ ಪೋಸ್ಟರ್‌ಗಳನ್ನು ಅಳವಡಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮ ತಾಣಗಳ ಪರಿಚಯ ಹಾಗೂ ಜಾಗೃತಿ ಮೂಡಿಸುವ ಉದ್ದೇಶ ಸಾಧಿಸಲಾಯಿತು.

ಈ ಕಾರ್ಯಕ್ರಮದ ಗಂಗಾವತಿ ಚಾರಣ ಬಳಗದ ಪ್ರಮುಖರಾದ ಪ್ರಹ್ಲಾದ್ ಕುಲಕರ್ಣಿ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಪ್ರೊ. ಕರಿಗೂಳಿ, ಮಹಮ್ಮದ್ ರಫಿ, ಉಲ್ಲಾಸ್, ರಮೇಶ್ ಗಬ್ಬೂರ್, ಮಹಾಲಕ್ಷ್ಮೀ ಕೇಸರಹಟ್ಟಿ, ಶಾಹೀನ್ ಕೌಸರ್, ಜಗದೀಶ ಪಾಟೀಲ್, ಚನ್ನಬಸವ ಜೇಕಿನ್, ಟಿ. ಆಂಜನೇಯ, ಮಂಜುನಾಥ ಗುಡ್ಲಾನೂರ್, ರಾಜೇಶ ನಾಯಕ, ಚನ್ನಬಸವ ಕೊಟಗಿ, ಅಲೆಮಾರಿ ಬುಡ್ಗಜಂಗಮ ಸಮಾಜದ ಮುಖಂಡ ಕೃಷ್ಣ, ಹರನಾಯಕ, ಚಿದಾನಂದ ಕೀರ್ತಿ, ಸರ್ವೇಶ ವಸ್ತ್ರದ, ಮಂಜುನಾಥ ಸೋನಾರ್ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರವಾಸೋದ್ಯಮ ದಿನಾಚರಣೆಯನ್ನು ಸಾರ್ಥಕಗೊಳಿಸಿದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading