ರಾಜಮಾತೆ ಲಲಿತಾರಾಣಿ ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ.

ಗಂಗಾವತಿ:ಇಂದು ತುಂಗಭದ್ರಾ ನದಿಯ ಮಲೀನತೆಯಿಂದಾಗಿ ನದಿ ನೀರು ಕುಡಿಯಲು ಮಾತ್ರವಲ್ಲ, ಬಳಸಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿನ ಭವಿಷ್ಯವಿಲ್ಲದಂತಾಗುತ್ತದೆ ಎಂದು ರಾಜಮಾತೆ ಶ್ರೀಮತಿ ಲಲಿತಾರಾಣಿಯವರು ಅಭಿಪ್ರಾಯಪಟ್ಟರು.

ಅವರು ಇಂದು ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಇಂದು ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು-ಮೂರು ದಶಕಗಳಿಂದಲೂ ತುಂಗಭದ್ರಾ ನದಿಯ ನೀರನ್ನು ನಾವೆಲ್ಲರೂ ಕುಡಿಯುತ್ತಿದ್ದೇವೆ. ಆದರೆ ನದಿಯ ನೀರು ಮಲೀನತೆಯಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶುದ್ದ ನೀರು, ಸ್ವಚ್ಛ ಗಾಳಿ ಪರಿಸರವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ಶೃಂಗೇರಿಯಿಂದ ಕಿಷ್ಕಿಂದೆವರೆಗೂ ಪಾದಯಾತ್ರೆ ಬಂದಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ. ಪಾದಯಾತ್ರೆಯ ಸಂಘಟಕರಿಗೆ ನಮ್ಮೂರಿನ ಎಲ್ಲರ ಪರವಾಗಿ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಪಾದಯಾತ್ರೆ ತಂಡದೊಂದಿಗೆ ಹುಲಿಗಿಯಿಂದ ಗಂಗಾವತಿಯವರೆಗೂ ಎಲ್ಲ ನಾಗರಿಕರು ಸಂಘ-ಸಂಸ್ಥೆಗಳು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು. ಜನವರಿ-೦೭ ರಂದು ಸಂಜೆ ಆನೆಗುಂದಿ ಗ್ರಾಮದಲ್ಲಿ ಜರುಗುವ ಪಾದಯಾತ್ರೆ ಸಂಪನ್ನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ವೇಳೆ ನಿರ್ಮಲ ತುಂಗಭದ್ರಾ ಅಭಿಯಾನದ ಶಿವಮೊಗ್ಗದ ಸಂಚಾಲಕರಾದ ಬಾಲಕೃಷ್ಣನಾಯ್ಡು ರವರು ಮಾತನಾಡಿ, ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯ ಸಮಸ್ತ ನಾಯಕರುಗಳು, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವಲ್ಲಿ ನೆರವು ನೀಡಿದ್ದೀರಿ ಮತ್ತು ಇಂದು ಪ್ರಚಾರ ರಥಕ್ಕೆ ಅತ್ಯಂತ ಭಕ್ತಿಪೂರ್ವಕ ಚಾಲನೆಯನ್ನು ನೀಡಿದ್ದೀರಿ. ನಿರ್ಮಲ ತುಂಗಭದ್ರಾ ಅಭಿಯಾನ ಯಶಸ್ವಿಯಾಗಲು ನಮಗೆ ಸಹಕಾರ ನೀಡುತ್ತಿರುವ ಸರ್ವರಿಗೂ ನಿರ್ಮಲ ತುಂಗಭದ್ರಾ ಅಭಿಯಾನ ತಂಡದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸಿಂಗನಾಳ ವಿರೂಪಾಕ್ಷಪ್ಪನವರು ಮಾತನಾಡಿ, ತಾಯಿ ತುಂಗಭದ್ರೆಯ ಒಡಲು ಇಂದು ಮಲೀನವಾಗಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸೋಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕೋಣ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಅಲ್ಲದೇ ಕಾಡಾ ಮಾಜಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿಯವರು ಮಾತನಾಡಿ, ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ನದಿ ಪಾತ್ರದಲ್ಲಿ ಇರುವಂತಹ ಎಲ್ಲಾ ರೈತರು, ನೀರು ಬಳಕೆದಾರ ಸಂಘದವರು, ಆನೆಗುಂದಿ ಗಂಗಾವತಿ ಭಾಗದವರಷ್ಟೇ ಅಲ್ಲದೆ, ಕಾರಟಗಿ, ನವಲಿ ಮತ್ತು ಕನಕಗಿರಿ ಭಾಗದ ರೈತರು, ನಾಗರಿಕರು ಕೂಡ ಈ ಒಂದು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ಎಂ ಸಿದ್ದರಾಮಯ್ಯಸ್ವಾಮಿರವರು ಮಾತನಾಡಿ, ಹುಲಿಗಿಯಿಂದ ಆನೆಗುಂದಿವರೆಗೂ ಪಾದಯಾತ್ರೆಯ ಮಾರ್ಗ ಮಧ್ಯೆ ಬರುವ ಎಲ್ಲ ಗ್ರಾಮದ ನಾಗರಿಕರು, ಸಂಘ-ಸಂಸ್ಥೆಯವರು, ಗ್ರಾಮಪಂಚಾಯತಿಯವರು ಪಾದಯಾತ್ರೆ ತಂಡವನ್ನ ಸ್ವಾಗತಿಸಿ, ಗ್ರಾಮಗಳಲ್ಲಿ ಜಲ ಜಾಗೃತಿಯನ್ನು ಮೂಡಿಸಬೇಕು ಎಂದರು.

ಮುಂದುವರೆದು ಆನೆಗೊಂದಿ ಗ್ರಾಮ ಪಂಚಾಯತಿ ಸಮಸ್ತ ಆಡಳಿತ ವರ್ಗ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಹೊನ್ನಪ್ಪರವರು ಭರವಸೆ ನೀಡಿದರು.

ಇದೇ ಸಂಧರ್ಭದಲ್ಲಿ ಸಂಚಾಲಕ ಸಮಿತಿಯ ಸದಸ್ಯರಾದ ರಾಘವೇಂದ್ರ ತೂನ ಮಾತನಾಡಿ, ಜನವರಿ ೭ನೇ ತಾರೀಕು ಹುಲಿಗಿ ಗ್ರಾಮ ಮಾರ್ಗವಾಗಿ ಪಾದಯಾತ್ರೆ ತಂಡವು ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಹುಲಿಗೆಮ್ಮ ದೇವಸ್ಥಾನದಿಂದ ಕೊಪ್ಪಳ ಜಿಲ್ಲೆಯ ಪಾದಯಾತ್ರೆಯು ಚಾಲನೆಗೊಂಡು ಶಿವಪುರ, ಬಂಡಿಹರ್ಲಾಪುರ, ಸಣಾಪುರ, ಹನುಮನಹಳ್ಳಿ ಮಾರ್ಗವಾಗಿ ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಪಾದಯಾತ್ರೆಯು ಕಿಷ್ಕಿಂದೆ ತಲುಪಲಿದೆ. ಸಂಜೆ ೩:೩೦ ರಿಂದ ಆನೆಗುಂದಿ ಗ್ರಾಮದಲ್ಲಿ ಪಾದಯಾತ್ರೆ ಸಂಪನ್ನತ ಕಾರ್ಯಕ್ರಮ ಜರುಗಲಿದೆ. ಜನವರಿ-೮ ರಂದು ಬೆಳಗ್ಗೆ ೯ ಗಂಟೆಗೆ ಗಂಗಾವತಿಯ ಸಿಬಿಎಸ್ ವೃತ್ತದಿಂದ ಬೃಹತ್ ಜಲಜಾಗೃತಿ ಜಾಥಾ ಚಾಲನೆಗೊಂಡು, ಗಾಂಧಿವೃತ್ತ ಮಾರ್ಗವಾಗಿ ಜೂನಿಯರ್ ಕಾಲೇಜ್ ಆವರಣದಲ್ಲಿ ಜರುಗುವ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಈ ಪಾದಯಾತ್ರೆಗೆ ಹುಲಿಗಿ, ಆನೆಗುಂದಿ ಮತ್ತು ಗಂಗಾವತಿ ಭಾಗದ ಸಮಸ್ತ ನಾಗರಿಕರು ಕೈ ಜೋಡಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ಸದಸ್ಯರಾದ ಲೋಕೇಶ್ವರಪ್ಪ ಶಿವಪೂಜಿ, ಡಾ|| ಶಿವಕುಮಾರ್ ಮಾಲಿಪಾಟೀಲ್, ಮಂಜುನಾಥ್ ಗುಡ್ಲಾನೂರ್, ಆನೆಗುಂದಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ಹೊನ್ನಪ್ಪ ನಾಯಕ, ಮಾಜಿ ಅಧ್ಯಕ್ಷರಾದ ತಿರುಕಪ್ಪ, ಪ್ರಮುಖರಾದ ರಮೇಶ ಸಣಾಪುರ, ನರೇಂದ್ರ ವರ್ಮಾ, ವಿ.ಎಸ್.ಎಸ್.ಎನ್ ಸರ್ವ ಸದಸ್ಯರು, ರೈತ ಮುಖಂಡರು, ಶ್ರೀಮತಿ ಲಲತಾರಾಣಿ ಅಮ್ಮನವರ ಅಪಾರ ಅಭಿಮಾನಿಗಳು ಸೇರಿದಂತೆ ಇತರರಿದ್ದರು.
ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥ ಚಾಲನೆಗೆ ಭಾಗವಹಿಸಿದ ಎಲ್ಲ ಗಣ್ಯಮಾನ್ಯರಿಗೂ ಸಂಯೋಜಕ ವಿಷ್ಣುತೀರ್ಥ ಜೋಶಿ ವಂದನೆಗಳನ್ನು ಸಲ್ಲಿಸಿದರು.https://www.facebook.com/share/p/18PWNupQsF/

 

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading