ಸಿದ್ದು ಪೂಣ೯ಚಂದ್ರರ ಹೊಸ ಸಿನಿಮಾ ಪುಟ್ಟಣ್ಣನ ಕತ್ತೆ

“ದಾರಿ ಯಾವುದಯ್ಯ ವೈಕುಂಠಕೆ ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ ಪುಟ್ಟಣ್ಣನ ಕತ್ತೆ ಎಂಬ ಚಿತ್ರವೂ ಸೇರಿಕೊಳ್ಳುತ್ತದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನವರಾದ ಸಿದ್ದು ಪೂರ್ಣಚಂದ್ರ ಮತ್ತು ನನ್ನ ಸ್ನೇಹ ಕೆಲ ವರ್ಷಗಳಿಂದ ಆತ್ಮೀಯವಾಗಿ ಬೆಳೆದಿದೆ. ಇಂದು ಫೋನ್ ಗೆ ಸಿಕ್ಕರು. ನನ್ನ
(ನಿರ್ದೇಶಕರ) ಜನುಮದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ ಎಂದರು. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂಬುದು ಚಿತ್ರತಂಡದ ನಂಬಿಕೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ಸಿದ್ದು ತಿಳಿಸಿದರು.

ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದು ಈ ಕಥೆ ಹೊಳೆಯಿತೆಂದು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ ಎಂದರು. ಮೊದಲಿಗೆ ಇದು ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು, ನಟನೆ ಜೊತೆಗೆ ಅದರೊಂದಿಗೆ ಬಾಂಧವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಿಸಲಾಯಿತು ಎಂದರು. ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ ಎಂದರು. ಇದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು ಸಿದ್ದು ಪೂರ್ಣಚಂದ್ರ ಹೇಳಿದರು.

ಪೂರ್ಣಚಂದ್ರ ಫಿಲಂಸ್’ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ತನ್ಮಯ್ ಎಸ್ ಗೌಡರು ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಮೊದಲಾಗಿ ಅಭಿನಯಿಸುತ್ತಿದ್ದಾರೆ.

ಛಾಯಾಗ್ರಾಹಕರಾಗಿ ರಾಜು ಹೆಮ್ಮಿಗೇಪುರ, ಸಂಕಲನಕಾರರಾಗಿ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ.

ಇಷ್ಟು ಮಾಹಿತಿ ಹಂಚಿಕೊಂಡ ಸಿದ್ದುಗೆ ಶುಭಾಶಯ ಕೋರಿದೆ. ಇವರ ನಿರ್ದೇಶನದ ಈ ಹಿಂದಿನ ಮೂರು ಚಿತ್ರಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲಂ ಫೇಸ್ಟಿವೆಲ್ ಗಳಲ್ಲಿ, ಪ್ರದರ್ಶನಗೊಂಡು ಅವಾರ್ಡ್ ಪಡೆದಿವೆ. ಇವರ ನಿರ್ದೇಶನದ ವೈಕುಂಠಕ್ಕೆ ದಾರಿ ಯಾವುದಯ್ಯಾ ನೂರಕ್ಕೂ ಮೀರಿ ಪ್ರಶಸ್ತಿ ಪುರಸ್ಕಾರಗಳ ಭೇಟೆಯಾಡಿದೆ. ಈ ಚಿತ್ರವನ್ನು ನೋಡಿ ನಾನು ಆಗೆ ಬರೆದಿದ್ದೆ. ಈ ಪಾದ ಪುಣ್ಯ ಪಾದ ಚಿತ್ರದ ಬಗ್ಗೆಯೂ ಬರೆಯಿರಿ ಕಳಿಸಿ ಕೊಡುತ್ತೇನೆ ಎಂದರು. ಖಂಡಿತ ಕಳಿಸಿ. ನಿಮ್ಮ ಹೊಸ ಚಿತ್ರವೂ ಯಶಸ್ವಿಯಾಗಲಿ. ಚಿತ್ರ ನೋಡುವ ಕುತೂಹಲ ಇದೆ ಎಂದೆ. ಆಗಲಿ ಚಿತ್ರ ಬಿಡುಗಡೆ ದಿನ ನಿಮಗೆ ತಿಳಿಸುವೆ ಎಂದರು.

ಗೊರೂರು ಅನಂತರಾಜು,
ಹಾಸನ
9449462879

ಭಾರತೀಯ ಪ್ರಜಾಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ನರಸಿಂಹಲು ಚಿಂತಲಕುಂಟ ನೇಮಕ-ಪಂಪಾಪತಿ ಸಿದ್ದಾಪುರ

ಗಂಗಾವತಿ: ಭಾರತೀಯ ಪ್ರಜಾ ಸೇನೆಯ ಸಂಸ್ಥಾಪಕರು ಮಂಜುನಾಥ್ ಆರ್., ರಾಜ್ಯ ಅಧ್ಯಕ್ಷರಾದ ಟಿ ವೇಣುಗೋಪಾಲ್ ಅವರ ಆದೇಶದ ಮೇರೆಗೆ ಜೂನ್-೦೪ ಬುಧವಾರ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ, ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿಯವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ನರಸಿಂಹಲು ಚಿಂತಲಕುಂಟ ಅವರನ್ನು ನೇಮಕ ಮಾಡಲಾಗಿದೆ.

ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಪಂಪಾಪತಿ ಸಿದ್ದಾಪುರ ಅವರು, ಕೊಪ್ಪಳ ಜಿಲ್ಲಾ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಡವರ, ದೀನ ದಲಿತರ, ಅನ್ಯಾಯಕ್ಕೊಳಗಾದವರ, ನೊಂದವರ, ಶೋಷಿತರ ಪರ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು.

ಇದೇ ಸಂದರ್ಭದಲ್ಲಿ ಸಂಘಟನೆಯ ವಿಭಾಗಿಯ ಸಹಕಾರ್ಯದರ್ಶಿ ಅಬೂಬಕರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಅಕ್ಕಿರೊಟ್ಟಿ, ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾದ ಹನುಮಂತಪ್ಪ ಹೊಸಪೇಟೆ, ಜಿಲ್ಲಾ ಸಹಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಅಯ್ಯಪ್ಪ, ಗಂಗಾವತಿ ತಾಲೂಕ ಅಧ್ಯಕ್ಷರು ಕೃಷ್ಣ ಹೊಸಳ್ಳಿ, ಗಂಗಾವತಿ ತಾಲೂಕು ಸಂಘಟನಾ ಕಾರ್ಯದರ್ಶಿ ಪರಶುರಾಮ್ ಅಕ್ಕಿರೊಟ್ಟಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

 

ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ನೂತನ ಅಧ್ಯಕ್ಷರಾಗಿ ನಿರುಪಾದಿ ಕೇಸರಹಟ್ಟಿ ನೇಮಕ

ಗಂಗಾವತಿ: ಗಂಗಾವತಿ ತಾಲೂಕು ಕಾರ್ಯಕಾರಣಿ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಗಂಗಾವತಿ ತಾಲೂಕು ನೂತನ ಅಧ್ಯಕ್ಷರನ್ನಾಗಿ ನಿರುಪಾದಿ ಕೇಸರಹಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.

ಈ ನೇಮಕಾತಿಯು ಜೂನ್-೦೩ ಮಂಗಳವಾರ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಉಳ್ಳಿಡಗ್ಗಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಸರಿಗಮ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಭೀಮನಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ ನೀಲಕಮಲ್, ಶರಣಪ್ಪ ಬಂಗಾರದ ಅಂಗಡಿ, ಶರಣಪ್ಪ ಡಿಸ್ಕೋ, ಬಸವರಾಜ್ ಎಸ್.ಬಿ ನಗರ್, ವೀರಭದ್ರಪ್ಪ ಅಮಾತೆಪ್ಪ, ಪಂಪಾಪತಿ ಹೊಸಳ್ಳಿ, ಮಂಜುನಾಥ ಸೋಮಸಾಗರ, ನಾಗರಾಜ ಬೊಮ್ನಾಳ, ಬಸವರಾಜ ಬುನ್ನಟ್ಟಿ, ಕಳಕಪ್ಪ ಮತ್ತು ರಮೇಶ್ ಮೆಹಬೂಬ್ ನಗರ, ವೀರೇಶ್ ಸರಿಗಮ, ಗವಿಸಿದ್ದಪ್ಪ ಇವರುಗಳು ಉಪಸ್ಥಿತರಿದ್ದರು.

ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ನಾಲ್ಕನೇ ವರ್ಷದ ಪಾದಯಾತ್ರೆ

ಗಂಗಾವತಿ: ಆರ್ಯವೈಶ್ಯ ಸಮಾಜ ಹಿರೇಜಂತಗಲ್ ವಿರುಪಾಪುರದಿಂದ ವೆಂಕಟಗಿರಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ಶನಿವಾರದಂದು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ವೆಂಕಟಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ನಮ್ಮ ಸಮಾಜ ಬಾಂಧವರು ನಿರೀಕ್ಷೆಗಿಂತ ಮೀರಿ ಹೆಚ್ಚಿನ ರೀತಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರೋದು ಸಂತೋಷವಾಗಿದೆ. ಇದೇ ರೀತಿಯಾಗಿ ನವ ಬೃಂದಾವನ ಮತ್ತು ಮಂತ್ರಾಲಯ ಪಾದಯಾತ್ರೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಪಾದಯಾತ್ರೆಯಿಂದ ಧಾರ್ಮಿಕತೆ ಜೊತೆಗೆ ಆರೋಗ್ಯ ಸದೃಢತೆ ಗೊಳ್ಳುತ್ತದೆ ಎಂದು ಹೇಳಿದರು.

ಗುರುಗಳಾದ ಗುರು ಭೀಮ್ ಭಟ್ ಜೋಶಿ ಮಾತನಾಡಿ ನಾಲ್ಕನೇ ವರ್ಷದ ಪಾದಯಾತ್ರೆ ಸುಗಮವಾಗಿ ನೆರವೇರಿತು. ಸುಮಾರು 150 ರಿಂದ 180 ಜನ ಭಾಗವಹಿಸಿ. ಜೊತೆಗೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಾರು 400 ರಿಂದ 500 ಜನ ಸೇರಿ ಪಂಚಾಮೃತ ಅಭಿಷೇಕ. ಅಷ್ಟೋತ್ತರ ಪಾರಾಯಣ ಪೂಜೆ ಮತ್ತು ಭಜನೆಯಲ್ಲಿ ಭಾಗವಹಿಸಿದಂತ ಎಲ್ಲರಿಗೂ ಶ್ರೀ ವೆಂಕಟೇಶ್ವರ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮಾತನಾಡಿ ಪಾದಯಾತ್ರೆಯಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ ನಮ್ಮ ಸಮಾಜದ ಎಲ್ಲರಿಗೂ ಜೊತೆಗೆ ಸಹಕಾರ ನೀಡಿದಂತಹ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಆಚಾರ. ಹಣವಾಳ ಚಂದ್ರಶೇಖರ್. ಜಿ ಆರ್ ಎಸ್ ಸತ್ಯನಾರಾಯಣ. ಚಂದ್ರು ಬನ್ನಿಗೋಳ, ಚಿದಂಬರ ಶ್ರೇಷ್ಠಿ, ಸಂತೋಷ್ ಹೇಮಾ ಗುಡ್ಡ, ಗಣೇಶ್ ವೆಂಕಟಗಿರಿ, ದಮ್ಮೂರು ರಾಜಕುಮಾರ, ಮಲ್ಲಯ ದರೋಜಿ, ವೆಂಕಣ್ಣ ದರೋಜಿ, ಪ್ರಹ್ಲಾದ್ ಶ್ರೇಷ್ಠಿ, ಮಹಿಳಾ ಮಂಡಳಿಯ ಅಧ್ಯಕ್ಷರಾದ ರುಕ್ಮಿಣಮ್ಮ ಮತ್ತು ಮಹಿಳಾ ಸದಸ್ಯರು ಸೇರಿದಂತೆ ನವ ಬೃಂದಾವನ ಭಜನಾ ಮಂಡಳಿಯ ಸರ್ವ ಸದಸ್ಯರು ಮತ್ತು ಸಮಾಜದ ಮುಖಂಡರು ಹಿರಿಯರು ಪಾಲ್ಗೊಂಡು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಹಾಸನದ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮಕ್ಕಳಿಗೆ ಚಿತ್ರಕಲೆ ಕಲಿಸುವಲ್ಲಿ ಪರಿಣಿತರು. ಸ್ವಂತ ಮನೆಯನ್ನು ಚಿತ್ರಕಲಾ ಗ್ಯಾಲರಿಯಾಗಿ ಮಾಡಿ ಸತತ ಚಿತ್ರಕಲೆಯನ್ನೇ ಧ್ಯಾನಿಸುತ್ತಾ ಈ ದಿಶೆಯಲ್ಲಿ ಸದಾ ಕಾರ್ಯ ನಿರತರು. ಇವರ ಕಲಾ ಗ್ಯಾಲರಿಯಲ್ಲಿ ಆಗಿಂದಾಗ್ಗೆ ಚಿತ್ರಕಲಾ ಶಿಬಿರ, ಪ್ರದರ್ಶನಗಳು ಮತ್ತು ಪಾಠ ನಡೆಯುತ್ತಿರುತ್ತದೆ.

ಮೊನ್ನೆ ಓರ್ವ ಬಾಲೆಯ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ನೆಡೆಯಿತು. ಕಲಾವಿದೆ ಹೆಸರು ಡಿಂಪನಾ ಎಸ್. ದೇಸಾಯಿ. ಈಕೆಯ ವಯಸ್ಸುಮೂರು ವರ್ಷ ನಾಲ್ಕು ತಿಂಗಳು. ಈ ಕಲಾವಿದೆ ಬಣ್ಣಗಳ ಜಗತ್ತಿನಲ್ಲಿ ತನ್ನ ಕಲ್ಪನೆಯ ಲೋಕವನ್ನು ಚಿತ್ರಿಸಿದ್ದಾಳೆ. ದೇಸಾಯಿ ಒಂದೊಂದು ಚಿತ್ರದ ಕುರಿತಾಗಿಯೂ ತಮ್ಮದೇ ವ್ಯಾಖ್ಯಾನ ಮಂಡಿಸಿದರು. ಚಿತ್ರಗಳನ್ನು ತೋರಿಸುತ್ತಾ ನೋಡಿ ಈ ಚಿತ್ರದಲ್ಲಿ ಆಕೆಯ ನಿರೀಕ್ಷೆಗಳ ಉತ್ಸಾಹ ಕ್ರೀಡೆಗಿಂತಲೂ ಹೆಚ್ಚಿನ ಸ್ವಾತಂತ್ರ್ಯದ ಅನುಭವವಿದೆ. ನೀಲಿ ಹಿನ್ನಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಬಣ್ಣಗಳ ಸಹಜ ಬಳಕೆ ಮತ್ತು ವಿಶಿಷ್ಟ ಆಕಾರಗಳು ಈಕೆಯ ಕಲಾತ್ಮಕ ಪ್ರತಿಭೆ ತೋರಿಸುತ್ತವೆ. ಬಣ್ಣಗಳಲ್ಲಿ ಚಿತ್ರಿಸಿರುವ ಪಶು ಅಥವಾ ಕಾಲ್ಪನಿಕ ಜೀವಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕಿರುವ ಹಾಸ್ಯಮಯ ಮುಖ, ಕಿವಿಗಳು ಮತ್ತು ಭಂಗಿಗಳು ಆಕೆಯ ಕಲ್ಪನೆಯೊಳಗಿನ ಸಂತೋಷದ ಪ್ರತೀಕ. ಕಪ್ಪು ಛಾಪುಗಳು, ಹಸಿರು-ಕೆಂಪು ಮಿಶ್ರಿತ ಬಣ್ಣಗಳ ಬಳಕೆ ಅನಿಯಮಿತ ರೇಖಾಚಿತ್ರಗಳು ಆಕೆಯ ಉಲ್ಲಾಸ, ನಿರ್ಬಂಧರಹಿತ ಚಿಂತನೆಗೆ ಸಾಕ್ಷಿ ಎಂದರು.

ಈ ಚಿತ್ರವನ್ನು ನೋಡಿ ಬಾಲಮನೆಯ ಕಲಾತ್ಮಕ ಶಕ್ತಿ ಎಷ್ಟು ವಿಶಾಲವಾಗಿದೆ. ನೀಲಿ ಹಿನ್ನಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಅಲ್ಲವೇ ಎಂದರು. ನನ್ನದು ಮೌನ ವೀಕ್ಷಣೆ. ಹಸಿರು, ಕಪ್ಪು, ಕಿರು.ನೀಲಿ, ಗುಲಾಬಿ ಮತ್ತು ಕಿತ್ತಳೆ ಬಣ್ಣಗಳು ಇಲ್ಲಿ ಪರಸ್ಪರ ಬೆರೆತು ವಿಭಿನ್ನ ಭಾವನೆಗಳನ್ನು ಮೂಡಿಸುತ್ತವೆ. ಬಣ್ಣಗಳ ಸ್ಫೋಟವು ಮಕ್ಕಳ ಮನಸ್ಸಿನ ಉತ್ಸಾಹ, ಸ್ವಾತಂತ್ರ್ಯ ಮತ್ತು ಅನಿಸಿಕೆಗಳನ್ನು ಪ್ರತಿಬಿಂಬಿಸುತ್ತಿದೆ ಹೌದಷ್ಟೇ ಎಂದರು. ಸ್ವತಃ ಕಲಾ ಜಗತ್ತಿನಲ್ಲಿ ವಿಹರಿಸುವ ಕಲಾವಿದರ ಮಾತಿಗೆ ಹೌದೆಂದು ಗೋಣಾಡಿಸಿದೆ. ನೋಡಿ ಈ ಕಲಾಕೃತಿಯಲ್ಲಿ ವಿಶೇಷವಾಗಿ ಯಾವುದೇ ನಿರ್ದಿಷ್ಟ ಆಕಾರಗಳಿಲ್ಲದಿದ್ದರೂ, ಅದರಲ್ಲಿರುವ ಚಲನೆಯ ಲಯ, ಬಣ್ಣಗಳ ಆಯ್ಕೆ ಮತ್ತು ವ್ಯತ್ಯಾಸಗಳು ಚಿತ್ರಕ್ಕೆ ಹೇಗೆ ಜೀವ ನೀಡುತ್ತವೆ. ಗಾಢ ಬೊಳೆ ಬಣ್ಣದ ಹಿನ್ನೆಲೆಯು ಮಧ್ಯಭಾಗದ ಜೀವಂತ ಬಣ್ಣಗಳಿಗೆ ಸಾಕಷ್ಟು ತೀವ್ರತೆಯನ್ನು ಕೊಡುತ್ತದೆ. ಇದು ತಾಂತ್ರಿಕ ಕಲೆಯ ಪ್ರಾಯೋಗಿಕ ನೋಟ. ಮಕ್ಕಳ ಅತೃಪ್ತ ಕಲ್ಪನೆಗೆ ದಾರಿ ತೋರಿಸುವ ಹಾದಿ. ನೀಲಿ ಹಸಿರು ಬಣ್ಣಗಳ ಮಿಶ್ರಣದಿಂದ ಪ್ರಕೃತಿಯ ಗಾಢ ಪರಿಸರವನ್ನು ಕಲ್ಪಿಸಲಾಗಿದೆ. ಮಧ್ಯಭಾಗದಲ್ಲಿ ಕಾಣುವ ಮುಖಾಕೃತಿಯು ಪುಟಾಣಿ ಕಲಾವಿದೆಯ ಕಲ್ಪನೆಯ ಪಾತ್ರ. ಇದರ ಸೂತ್ರದಾರಿ ನೀವು ಎಂದು ಆತ್ಮೀಯರ ಮುಖ ನೋಡಿದೆ. ಅವರ ಮುಖದಲ್ಲಿ ಉತ್ಸಾಹ ಉಲ್ಲಾಸ ಎದ್ದು ಕಾಣುತ್ತಿತ್ತು. ಅವರ ಪಾಠ ಮುಂದುವರಿದಿತ್ತು. ನಾನೀಗ ವಿದ್ಯಾರ್ಥಿ. ಕೇಳಿಸಿಕೊಳ್ಳುವುದಷ್ಟೇ ಸಧ್ಯದ ಚಿಂತನೆ. ಬಲಭಾಗದಲ್ಲಿ ಧೂಪದಂತೆ ಹರಡಿದ ಕಪ್ಪು ಮತ್ತು ಬೂದು ಬಣ್ಣಗಳು ಮರ ಅಥವಾ ಪ್ರಾಣಿಗಳ ಶಿಲ್ಪದಂತೆ ತೋರುತ್ತವೆ. ಇಡೀ ಚಿತ್ರವು ಮರುಭೂಮಿಯ ನಡುವಿನ ಒಂದು ಹಸಿರು ತೋಟದ ರೀತಿಯಲ್ಲಿ ಕಂಡುಬರುತ್ತದೆ. ಕಾಫಿ ಎಸ್ಟೇಟ್ ತಲೆಯಲ್ಲಿ ಮಾಡಿ ಟೀ ಕುಡಿಯಬೇಕೆನಿಸಿತು. ಟೀ ಬ್ರೇಕ್ ನಂತರ ಚಿತ್ರ ವೀಕ್ಷಣೆ ವ್ಯಾಖ್ಯಾನ ಮುಂದುವರೆಯಿತು. ಹಸಿವಿನಿಂದ ತುಂಬಿದ ಕಲ್ಪನೆ, ವೈಭವ ಹಾಗೂ ಲಯಪೂರ್ಣ ಸ್ವಾತಂತ್ರ್ಯದೊಂದಿಗೆ ಮಕ್ಕಳ ನೈಸರ್ಗಿಕ ದೃಷ್ಟಿಕೋನ ಈ ಕಲಾಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ ಅನಂತರಾಜು ಎಂದರು. ಹೌದು ಸಾರ್ ಎಂದೆ. ಮಂದುವರಿದು ಮತ್ತೊಂದು ಚಿತ್ರ ತೋರಿಸಿ ಈ ಚಿತ್ರಕಲೆಯಲ್ಲಿ ಹಸಿರು ಮತ್ತು ನೀಲಿ ಬಣ್ಣಗಳ ಪ್ರಸಾರದಿಂದ ಪ್ರಕೃತಿಯ ಒಂದು ಆನಂದಕರ ದೃಶ್ಯ ಚಿತ್ರಿತವಾಗಿದೆ. ಚಿತ್ರದಲ್ಲಿ ಕುದುರೆ ಅಥವಾ ಮುಂಗೋಸೆಯ ರೀತಿಯ ಎರಡು ಪ್ರಾಣಿಗಳು ಕಾಣಿಸುತ್ತವೆ, ಇಬ್ಬರಿಗೂ ಕಿವಿ ಉದ್ದವಾಗಿದ್ದು, ಮುಖದಲ್ಲಿ ಸಂತೋಷದ ಅಭಿವ್ಯಕ್ತಿ. ಹಿಂಭಾಗದಲ್ಲಿ ಒಂದು ಚಿಕ್ಕ ಹಕ್ಕಿ ಉಕ್ಕುವ ರೇಖೆಯೊಂದಿಗೆ ಚಿತ್ರಿತವಾಗಿದೆ. ಬಲಭಾಗದಲ್ಲಿ ಮರದಾಕೃತಿಯೊಂದು ಇದ್ದು, ಪ್ರಪಂಚದ ನೈಸರ್ಗಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ನನ್ನ ಲೇಖನಕ್ಕೆ ಇಷ್ಟು ಸಾಕೆನಿಸಿತು.

ಆದರೂ ದೇಸಾಯಿ ಉತ್ಸಾಹಕ್ಕೆ ಭಂಗ ತರಲು ಮನಸ್ಸಾಗಲಿಲ್ಲ. ಈ ಚಿತ್ರದಲ್ಲಿ ಮಕ್ಕಳ ದೃಷ್ಟಿಕೋನ, ಉತ್ಸಾಹ ಕಲ್ಪನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಮುಕ್ತ ಶೈಲಿಯ ಈ ಕಲಾಕೃತಿಯು ಅವರ ನೈಜ ಭಾವನೆಗಳನ್ನು ವೈವಿಧ್ಯಮಯ ಬಣ್ಣಗಳಲ್ಲಿ ಅನಾವರಣ ಮಾಡುತ್ತದೆ. ಹಳದಿ ಮತ್ತು ಕಂದು ಹಿನ್ನೆಲೆಯಲ್ಲಿ ಎರಡು ಮಾನವ ಆಕೃತಿಗಳು ಮತ್ತು ಮಧ್ಯದಲ್ಲಿ ಪ್ರಾಣಿ ಹೋಲುವ ಆಕೃತಿ ದೃಷ್ಟಿಗೆ ಬೀಳುತ್ತವೆ. ಎಡಭಾಗದಲ್ಲಿ ಒಂದು ಶ್ವೇತಾಕಾರದ ರಚನೆ ನೀರಿನ ಊತ ಅಥವಾ ಗೋಪುರದಂತೆ ಕಾಣುತ್ತದೆ. ಬಲಭಾಗದ ಆಕೃತಿಗೆ ಉಚ್ಚ ಉಡುಪು, ಮೇಲೆ ರೇಖೆಗಳು ಮುಂತಾದವು ಆಕರ್ಷಕವಾಗಿ ಮೂಡಿವೆ. ಮಧ್ಯದಲ್ಲಿ ಹಸಿರು ಬಣ್ಣದ ಆಕೃತಿ ಹುಳ ಅಥವಾ ಪಕ್ಷಿಯ ಭಾವನೆ ತೋರುತ್ತದೆ. ಈ ಪೇಂಟಿಂಗ್ ಮಕ್ಕಳ ನಿರೀಕ್ಷೆಗಳಿಂದ ಮುಕ್ತವಾದ ಕಲ್ಪನೆ ಮತ್ತು ಸಂವೇದನಾಶೀಲತೆಗೂ ಸಾಕ್ಷಿಯಾಗಿದೆ ಎಂದರು. ಹೇಗೆ ಅವರು ಒಂದೊಂದು ಚಿತ್ರದ ಬಗ್ಗೆಯೂ ವಿವರಣೆ ನೀಡುತ್ತಾ ಹೋದರೆ ಯಾವುದನ್ನು ಎಡಿಟ್ ಮಾಡುವುದು ಎನಿಸಿತು. ಇರಲಿ ಇದನ್ನು ಎಡಿಟರ್ ಗೆ ಬಿಟ್ಟುಬಿಡುವುದು ಎಂದುಕೊಂಡೆ ಮುಂದುವರಿದು ಈ ಚಿತ್ರದಲ್ಲಿ ಬೇರೆ ಬೇರೆ ಬಣ್ಣಗಳ ಸಮನ್ವಯವು ಮಕ್ಕಳ ನೈಜ ಭಾವನೆ ಉತ್ಸಾಹ ಪ್ರತಿಬಿಂಬಿಸುತ್ತದೆ. ಎಡಬದಿಯಲ್ಲಿ ಕಾಣುವ ದೊಡ್ಡ ಪ್ರಾಣಿ ಮುಖ ಹಾಗೂ ಬಲಭಾಗದ ಎರಡು ಸಣ್ಣ ಆಕೃತಿಗಳು ಪರಸ್ಪರ ಸಂವಹನದಲ್ಲಿರುವಂತೆ ತೋರುತ್ತವೆ. ಹಸಿರು, ನೀಲಿ ಮತ್ತು ಗುಲಾಬಿ ಬಣ್ಣಗಳ ಬಳಕೆ ಚಿತ್ರಕ್ಕೆ ನಿಜವಾದ ಜೀವಂತತೆಯನ್ನು ನೀಡುತ್ತದೆ. ಮಧ್ಯಭಾಗದಲ್ಲಿ ಕಾಣುವ ಬಿಳಿ ರೇಖೆಗಳಿಂದ ಕೂಡಿದ ಗೋಳುಗಳು, ತಾರೆಗಳು ಅಥವಾ ಹಕ್ಕಿಗಳ ಕಲ್ಪನೆ ತರಬಹುದು. ಕೆಳಭಾಗದ ಹಳದಿ ವೃತ್ತಾಕಾರ ಆಕೃತಿ ಕಿರಣ ಹೊರಹಾಕುವ ಸೂರ್ಯನಂತೆ ಕಾಣುತ್ತದೆ. ಇದು ಮಕ್ಕಳ ಕಲ್ಪನೆಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ.

ಈ ಚಿತ್ರದಲ್ಲಿ ಕಾಣುವ ಹಸಿರು ಮೈಬಣ್ಣದ ಪ್ರಾಣಿ ಆಕೃತಿಯು ಕಾಲ್ಪನಿಕ ಜಗತ್ತಿನ ಪಾತ್ರವಂತೆ ತೋರುತ್ತದೆ. ಗುಲಾಬಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳ ಸಮನ್ವಯ ಚಿತ್ರವು ಬಾಳಿನಲ್ಲಿ ಬಣ್ಣಗಳ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ. ಹಿಂಬದಿಯಲ್ಲಿ ಹರಡಿರುವ ಬಿಳಿ ಪುಟ್ಟಬುಟ್ಟೆಗಳು ಮಳೆ ಹನಿ ನಕ್ಷತ್ರಗಳಂತೆ ಕಂಡು ಬರುತ್ತವೆ. ಚಿತ್ರವು ಮಕ್ಕಳ ಕಲ್ಪನೆ, ಸಂತೋಷ ಮತ್ತು ಮುಕ್ತ ಅಭಿವ್ಯಕ್ತಿಯ ದರ್ಪಣ.. ದೇಸಾಯಿ ಮಾತು ಮುಂದುವರೆದಂತೆ ಬೇಲೂರು ದೇವಸ್ಥಾನದ ದರ್ಪಣ ಸುಂದರಿ ನೆನಪಾದಳು. ಬಾಲೆಯ ಮುಖ ನೋಡಿದೆ. ಮುಗ್ಧತೆ ಮನೆ ಮಾಡಿತ್ತು. ನೋಡಿ ಅನಂತರಾಜು ಎಂದ ಕೂಡಲೇ ಮತ್ತೆ ನನ್ನ ಚಿತ್ರ ಇನ್ನೊಂದು ಚಿತ್ರದತ್ತ ಹರಿದಿತ್ತು. ಆ ಚಿತ್ರದಲ್ಲಿ ಮನುಷ್ಯಾಕಾರದ ಆಕೃತಿಗಳು ಮಕ್ಕಳ ದೃಷ್ಟಿಕೋನದಿಂದ ಸರಳವಾಗಿ ಹಾಗೂ ನೇರವಾಗಿ ರೂಪುಗೊಂಡಿವೆ. ವಿವಿಧ ಬಣ್ಣಗಳ ಸ್ಪಷ್ಟ ಬಳಕೆ—ಹಳದಿ, ಕೆಂಪು, ಬಿಳುಪು ಮತ್ತು ಕಪ್ಪು—ಚಿತ್ರದಲ್ಲಿ ಪ್ರಬಲ ಭಾವನೆಗಳನ್ನು ಹುಟ್ಟಿಸುತ್ತದೆ. ಎಡಭಾಗದಲ್ಲಿರುವ ಅಕ್ಷರಶಃ ತಲೆಕಟ್ಟಿದ ಪಾತ್ರ ಮತ್ತು ಮಧ್ಯಭಾಗದಲ್ಲಿರುವ ಕುರುಚಲು ರೇಖೆಗಳು ಮೌಲಿಕತೆ ಮತ್ತು ತಲ್ಲೀನತೆಯ ಸಂಕೇತಗಳಂತೆ ಕಾಣಿಸುತ್ತವೆ. ಬಲಭಾಗದಲ್ಲಿ ಹರಿದು ಹಾದುಹೋಗುವ ಕಪ್ಪು ಶಾಯಿಯಂತೆ ಇರುವ ಭಾಗವು ಚಿತ್ರಕ್ಕೆ ಆಳವನ್ನೂ, ಕುತೂಹಲವನ್ನೂ ಹೆಚ್ಚಿಸುತ್ತದೆ. ಈ ಚಿತ್ರವು ಮಕ್ಕಳ ಅಕ್ಷರರಹಿತ ಕಥನ ಶೈಲಿಯ ವಿಶಿಷ್ಟ ಉದಾಹರಣೆ ಆಗಿದ್ದು, ಅದರಲ್ಲಿ ನಿರ್ಣಯಾತ್ಮಕ ಚಲನೆಯ ಚಿಹ್ನೆಗಳು ಕಾಣಿಸುತ್ತವೆ.

ಈ ಚಿತ್ರದ ಹಿನ್ನಲೆಯಲ್ಲಿ ಹಳದಿ, ಗುಲಾಬಿ ಹಾಗೂ ನೀಲಿ ಬಣ್ಣಗಳ ಮೃದುವಾದ ಹಿನ್ನೋಟವು ಸಂತೃಪ್ತ ಭಾವನೆ ಮೂಡಿಸುತ್ತದೆ. ಎಡಭಾಗದಲ್ಲಿ ಕಣ್ಣಿಗೆ ಬೀಳುವಂತೆ ಮೂಡಿಸಿರುವ ಜ್ವಲಂತ ಬಣ್ಣಗಳ ಅಕ್ಷರಶಃ ಸ್ಫೋಟಕ ವಿನ್ಯಾಸವು ಆಕೆಯ ಉತ್ಸಾಹ ಮತ್ತು ವಿಶಿಷ್ಟ ಕಲ್ಪನೆಗೆ ಸಾಕ್ಷಿಯಾಗಿದೆ. ಕೆಂಪು, ನೇರಳೆ ಹಾಗೂ ಕಪ್ಪು ಬಣ್ಣಗಳ ಜಾಡುಗಳು ಬಲವಾದ ಭಾವನೆಗಳನ್ನು ಉಂಟುಮಾಡುತ್ತವೆ. ಬಲಭಾಗದಲ್ಲಿ ಚದುರಿದ ಶಾಯಿಯಂತೆ ಹರಡಿರುವ ಬಣ್ಣಗಳು ಮಂಕಾದ ಕನಸಿನ ಅನುಭವವನ್ನು ನೀಡುತ್ತವೆ. ಚಿತ್ರದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ, ಮೌಲಿಕತೆ ಮತ್ತು ಮಕ್ಕಳ ಕಲಾತ್ಮಕ ಸಾಹಸ ಸ್ಪಷ್ಟವಾಗಿ ತೋರಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಹಸಿರು, ಕೆಂಪು, ಬಿಳಿ ಹಾಗೂ ಕಪ್ಪು ಬಣ್ಣಗಳ ಸಮನ್ವಯದಿಂದ ವಿಭಿನ್ನ ಆಕಾರಗಳು ಮೂಡಿವೆ. ಎಡಭಾಗದಲ್ಲಿ ಮೃಗದಂತಿರುವ ಬಿಳಿ ಆಕೃತಿಯು ಕೃತಕತೆಯಲ್ಲದ ಶುದ್ಧ ಮಕ್ಕಳ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಧ್ಯಭಾಗದಲ್ಲಿ ಕೆಂಪು ಹಾಗೂ ಬಿಳಿ ಬಣ್ಣಗಳಿಂದ ರೂಪುಗೊಂಡ ಲಲಿತ ಚಲನವು ಚಿತ್ತಾರಕ್ಕೆ ಜೀವ ತುಂಬುತ್ತದೆ.ಬಲಭಾಗದಲ್ಲಿ ಇರುವ ಕಲಾತ್ಮಕ ರೇಖೆಗಳು ಆಕೆಯ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಚಿತ್ರದಲ್ಲಿ ಬಣ್ಣದ ನಿರಂತರ ಅನ್ವೇಷಣೆ ಮತ್ತು ನಿರ್ಭೀತಿಯಿಂದ ಮಾಡಿದ ಆವಿಷ್ಕಾರ ಸ್ಪಷ್ಟವಾಗುತ್ತವೆ. ಮಕ್ಕಳ ಕಲಾ ಅಭಿವ್ಯಕ್ತಿ ಹೇಗೆ ಅಗಾಧವಾದಿರಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ಹೀಗೆ ದೇಸಾಯಿ ಪ್ರದರ್ಶನಕ್ಕಿರಿಸಿದ ಒಂದೊಂದು ಚಿತ್ರಕ್ಕೂ ತಮ್ಮದೇ ವ್ಯಾಖ್ಯಾನ ನೀಡಿದರು. ಅಂದ್ದಾಗೆ ಈ ಡಿಂಪನಾ ಈ ಬಿ.ಎಸ್.ದೇಸಾಯಿ ಅವರ ಮೊಮ್ಮಗಳು. ಈಕೆಯ ತಂದೆ ಶಶಿಕಿರಣ ದೇಸಾಯಿ ಕೂಡ ಉತ್ತಮ ಚಿತ್ರ ಕಲಾವಿದರು. ಇವರ ಕಲೆಗಾರಿಕೆಯ ಬಗ್ಗೆಯೂ ಈ ಹಿಂದೆ ಬರೆದಿರುವೆ. ತಂದೆ ಅಜ್ಪನ ಹಾದಿಯಲ್ಲೆ ಅತಿ ಚಿಕ್ಕ ವಯಸ್ಸಿಗೆ ಕುಂಚ ಹಿಡಿದು ಚಿತ್ರಿಸ ಹೊರಟ ಬಾಲೆ ಈ ಕಲೆಯಲ್ಲಿ ಸಾಧನೆ ಮಾಡಲಿ ಎಂದು ವಿಶ್ ಮಾಡಿದೆ.

ಗೊರೂರು ಅನಂತರಾಜು,
ಹಾಸನ,
9449462879

ರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ-ಗೊರೂರು ಅನಂತರಾಜು

ಹಾಸನ ಜಿಲ್ಲಾ ಕಲಾವಿದರ ಸಂಘದ ವ್ಯಾಟ್ಸಪ್ ಗ್ರೂಪ್‌ನಲ್ಲಿ ಟಿ.ನಾಗರಾಜು ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆ, ದಾನ ಶೂರ ಕರ್ಣ ನಾಟಕಗಳ ಪ್ರತಿಗಳನ್ನು ಟೈಪ್ ಮಾಡಿ ಹಾಕಿದ್ದರು. ಅದು ಕಲಾತಂಡಗಳು ನಾಟಕಗಳ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳಲು ಸೂಕ್ತವಾಗಿತ್ತು. ಈ ನಾಟಕಗಳ ಪ್ರತಿಯಲ್ಲಿ ಕಲಾವಿದರು ತಮ್ಮ ಕಿರು ಪರಿಚಯ ಜೊತೆಗೆ ನಾಟಕ ಕುರಿತಾಗಿ ಕೆಲ ಅಂಶ ಹಾಕಿದ್ದರು. ಅವರ ನಂಬರ್ ಗಮನಿಸಿ ಪೋನಾಯಿಸಿದೆ. ನಾಗರಾಜು ತಮ್ಮ ಕಲಾ ಪರಿಚಯ ಹೇಳಿಕೊಳ್ಳುತ್ತಾ ತಾವು ಹಾಸನದ ಕಲಾತಂಡಗಳಲ್ಲಿ ಬಂದು ಭಾಗವಹಿಸಿದ್ದೇನೆ ಎಂದರು. ಹನುಮಂತನ ಪಾತ್ರಾಭಿನಯದ ವಿಡಿಯೋ ಶೇರ್ ಮಾಡಿ ಪರಿಚಯ ಮತ್ತು ಪೋಟೋ ಕಳಿಸಿದರು.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ರಂಗ ನಿರ್ದೇಶಕರು ತಿಮ್ಮಯ್ಯ ಮತ್ತು ಕರಿಯಮ್ಮನವರ ಜೇಷ್ಠ ಪುತ್ರರಾಗಿ ದಿ. ೨೨-೧೦-೧೯೬೨ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಮಾಯಸಂದ್ರದಲ್ಲಿ, ಪದವಿ ಶಿಕ್ಷಣ ಆದಿಚುಂಚನಗಿರಿ ಕ್ಷೇತ್ರ (ಬಿ.ಎ). ಬಾಲ್ಯದಿಂದಲೂ ಅಭಿನಯವನ್ನು ಹವ್ಯಾಸವಾಗಿ ಬಾಲ ಕಲಾವಿದರಾಗಿ ತಂದೆ ಮಾರ್ಗದರ್ಶನದಲ್ಲಿ ೯ನೇ ವಯಸ್ಸಿಗೆ ದಾನ ಶೂರ ಕರ್ಣ ನಾಟಕದ ವೃಷಿಕೇತು ಪಾತ್ರದ ಮೂಲಕ ರಂಗಪ್ರವೇಶ ಮಾಡಿದರು. ಉತ್ತಮ ಶಾರೀರವಿದ್ದ ಕಾರಣ ರುಕ್ಮಿಣಿ ಸೀತೆ ದ್ರೌಪದಿ ಸ್ವಯಂಪ್ರಭೆ ಕೊರಮಿ ಸಖಿಯರು ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷವಾಗಿ ಕೊರಮಿ ಪಾತ್ರದಲ್ಲಿ ಮಿಂಚಿದರು. ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಸಾತ್ಯಕಿ ಶ್ರೀಕೃಷ್ಣ ಕರ್ಣ ವಿದುರ ಅಭಿಮನ್ಯು ಮತ್ತು ರಾಮಾಯಣದಲ್ಲಿ ಭರತ ಶತೃಘ್ನ ವಿಭೀಷಣ ಲಂಕಿಣಿ ಘೋರ ಶೂರ್ಪನಖಿ.. ಹೀಗೆ ಎರಡು ನಾಟಕಗಳ ವಿವಿಧ ಪಾತ್ರಗಳಲ್ಲಿ ಹಾಗೂ ಯಕ್ಷಗಾನದಲ್ಲಿ ತುರುವೇಕೆರೆ ತಾ. ಪುರ ಗ್ರಾಮದ ಭಾಗವತರು ಗಂಗಣ್ಣನವರ ಮಾರ್ಗದರ್ಶನದಲ್ಲಿ ದಕ್ಷಯಜ್ಞ ನಾಟಕದಲ್ಲಿ ದಕ್ಷನ ಪಾತ್ರ ನಿರ್ವಹಿಸಿದ್ದಾರೆ. ಪಂಚವಟಿ ಯಕ್ಷಗಾನ ನಾಟಕದಲ್ಲಿ ಆಂಜನೇಯನ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ೨೦೦೪ರಲ್ಲಿ ಮಾಯಸಂದ್ರದ ಗ್ರಾಮದೇವತೆ ಹಬ್ಬಕ್ಕೆ ಸಂಪೂರ್ಣ ರಾಮಾಯಣ ನಾಟಕದಲ್ಲಿ ಘಂಟಸಾಲಾ ಖ್ಯಾತಿಯ ಮಾಯಸಂದ್ರದ ಗುರುಗಳು ಎಂ.ಹೆಚ್.ನಾರಾಯಣ್‌ರ ಮಾರ್ಗದರ್ಶನದಲ್ಲಿ ಆಂಜನೇಯ ಪಾತ್ರದಲ್ಲಿ ಹೆಸರು ಪಡೆದರು. ತುರುವೇಕೆರೆ ತಾ. ಪುರ ಗ್ರಾಮದಲ್ಲಿ ೨೦೦೭ರಲ್ಲಿ ಆಂಜನೇಯ ಪಾತ್ರಾಭಿನಯಕ್ಕೆ ಅಂದಿನ ಮುಖ್ಯಮಂತ್ರಿಗಳಿ೦ದ ಪ್ರಶಂಸಾ ಪತ್ರ ಸಂದಿದೆ. ತುರುವೇಕೆರೆ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ತುಮಕೂರು ಮಂಡ್ಯ ಮೈಸೂರು ರಾಮನಗರ ಜಿಲ್ಲೆಗಳಲ್ಲಿ ಹಲವಾರು ಕಲಾಮಂದಿರ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸಿ ಅಭಿನಯಿಸಿದ್ದಾರೆ. ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಂಜನೇಯ ಪಾತ್ರಕ್ಕೆ ಪ್ರಶಂಸೆ ಬಂದಿದೆ. ನನ್ನ ಕಲಾರಂಗಕ್ಕೆ ಮಾರ್ಗದರ್ಶನ ನೀಡಿದ ತಂದೆ ತಿಮ್ಮಯ್ಯರವರು ಪಿಟೀಲು ವಾದಕರು ವೆಂಕಟರಾಮಯ್ಯ, ಗುರುಗಳಾದ ಎಂ.ಹೆಚ್.ನಾರಾಯಣ್ ತಬಲ ವಾದಕರು ಜಯಕುಮಾರಣ್ಣ ಗುರುಗಳಾದ ಚನ್ನರಾಯಪಟ್ಟಣ ತಾ. ದ್ಯಾವೇನಹಳ್ಳಿ ಚೌಡಪ್ಪದಾಸರು ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆ ರಂಗಪ್ಪದಾಸರು ಅಂಚಿಹಳ್ಳಿ ಸಂಜೀವಮೂರ್ತಿರವರಿಗೆ ನನ್ನ ನಮನಗಳೆಂದು ಸ್ಮರಿಸಿದರು. ಎಡೆಯೂರು ಸಾಂಸ್ಕೃತಿಕ ವೇದಿಕೆ ಎಡೆಯೂರು. ಶ್ರೀ ಕೊಲ್ಲಾಪುರದಮ್ಮ ಕೃಪಾಪೋಷಿತ ನಾಟಕ ಸಂಘ ಮಾಯಸಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಡೆಯೂರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಶಾಲಾ ಶಿಕ್ಷಕರು ವೈ.ಎಸ್. ಹನುಮಂತಯ್ಯನವರು, ಶಾಲಾ ಶಿಕ್ಷಕರು ಇ.ಶಿವಣ್ಣ, ಸಿ.ಪಿ.ಪ್ರಕಾಶ್ ಸಾರಥ್ಯದಲ್ಲಿ ೨೦೧೭ರಲ್ಲಿ ಮಾಯಸಂದ್ರದ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕದಂದು ಕಲಾಸೇವೆಗೆ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪ:ಬ್ರ: ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರು ರಜತ ಮುಕುಟ ಧಾರಣೆಯೊಂದಿಗೆ ಅಭಿನಯ ಚತುರ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ತಾ. ಗಣರಾಜ್ಯೋತ್ಸವ ಸಮಿತಿ. ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಕನ್ನಡ ರಾಜ್ಯೋತ್ಸವ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಜಿಲ್ಲಾ ಕಲಾವಿದರ ಬಳಗ ಮಂಡ್ಯ. ತುಮಕೂರು ರಂಗಕಲಾವಿದರ ಸಂಘಗಳಿ೦ದ ಕಲಾಕ್ಷೇತ್ರ ಸಾಧನೆಗೆ ಪುರಸ್ಕಾರ ದೊರೆತಿದೆ. ಸರ್ಕಾರಿ ಸೇವೆಯಲ್ಲಿ ಬೆರಳಚ್ಚುಗಾರನಾಗಿ ಕಾವೇರಿ ನೀರಾವರಿ ನಿಗಮದಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ಅಕ್ಟೋಬರ್೨೦೨೨ ರಂದು ನಿವೃತ್ತಿ ಹೊಂದಿ ವಿಶ್ರಾಂತ ಜೀವನದಲ್ಲಿ ಕಲಾಸೇವೆ ಮುಂದುವರೆಸಿದ್ದಾರೆ. ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ
ಮೊ: ೯೪೪೯೪೬೨೮೭೯.
ವಿಳಾಸ ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧

ಹಣವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಧ ಮಕ್ಕಳಿಗೆ ಉಚಿತ ಹೇರ್ ಕಟಿಂಗ್ ಸೇವೆ: ಕಾಂತಪ್ಪ ಎಚ್. ಬಾವಿಕಟ್ಟಿ

ಗಂಗಾವತಿ: ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಣವಾಳ ಗ್ರಾಮದಲ್ಲಿ ಕರ್ನಾಟಕ ಹೇರ್ ಕಟಿಂಗ್ ಶಾಪ್ ಹಾಗೂ ಬ್ಯೂಟಿ ಪಾರ್ಲರ್ ಜೆಂಟ್ಸ್ ವತಿಯಿಂದ ಮಾಲಿಕರಾದ ಕಾಂತಪ್ಪ ಹಡಪದ ಬಾವಿಕಟ್ಟಿ ಅವರು ಅಂಧ ಮಕ್ಕಳಿಗೆ ತಮ್ಮ ಜೀವನ ಪರ್ಯಂತ ಉಚಿತ ಕ್ಷೌರ ವೃತ್ತಿಯನ್ನು ಹಲವು ವರ್ಷಗಳಿಂದ ಉಚಿತವಾಗಿ ಮಾಡುತ್ತಾ ಬಂದಿದ್ದು. ಈ ವರ್ಷದಲ್ಲಿ ಗ್ರಾಮ ಪಂಚಾಯತಿಯ ಮಳಿಗೆಯಲ್ಲಿರುವ ಅಂಗಡಿಯನ್ನು ತನ್ನ ಸ್ವಂತ ಜಮೀನಿನ ಸರ್ವೆ ನಂಬರಿಗೆ ಅಂಗಡಿಯನ್ನು ವರ್ಗಾಯಿಸಿಕೊಂಡು ಅಂದರೆ ಉಚಿತವಾಗಿ ಸೇವೆ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕಟಿಂಗ್ ಶಾಪ್ ಮಾಲಿಕರಾದ ಕಾಂತಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಕಾಯಕವೇ ಕೈಲಾಸ ಎಂಬಂತೆ ಇರುವ ನನ್ನ ವೃತ್ತಿಯಲ್ಲಿ ಅದರ ಒಂದು ಸೇವೆಗಾಗಿ ಅಂಧರಿಗೆ ನಾನು ಜೀವನ ಪರ್ಯಂತ ಅವರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಶ್ರೀ ಶನೇಶ್ವರ ಜಯಂತಿ ನಿಮಿತ್ಯ ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ ೨೬ ಮತ್ತು ೨೭ ರಂದು ಶ್ರೀ ಶನೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.

ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ನವಗ್ರಹ ಪೂಜಾ, ಗಣಹೋಮಗಳು ಜರುಗಿದವರು. ಮರುದಿನ ಮೇ-೨೭ ಮಂಳವಾರ ಬೆಳಗಿನ ಜಾವ ೫:೩೦ಕ್ಕೆ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಲೋಕಕಲ್ಯಾಣಕ್ಕಾಗಿ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು, ಹಾಗೆಯೇ ಮಠದ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಿಗೆ ಹಾಗೂ ಫಕೀರೇಶ್ವರ ಸ್ವಾಮಿ ಗದ್ದುಗೆಗೆ ಪೂಜಾ ಹಾಗೂ ಅಭಿಷೇಕ ಮಾಡಲಾಯಿತು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೂಕನಪಳ್ಳಿಯ ಫಕೀರಯ್ಯಸ್ವಾಮಿ ಹಿರೇಮಠ, ಶಾಂತಯ್ಯ ಪುರಾಣಿಕಮಠ ನಾಗೇಂದ್ರಗಡ, ಗಂಗಾವತಿಯ ಮಂಜುನಾಥ ಕುರುಗೋಡು, ಚಿದಾನಂದ ಶಂಕ್ರಪ್ಪ ಹೂಗಾರ, ಸಿ.ಬಿ.ಎಸ್ ಚಾನೆಲ್‌ನ ದಶರಥ, ಸಂಡೂರಿನ ಅನೂಪ ಬಂಡ್ರಿ, ಗುರಪ್ಪ ಕಾರಟಗಿ, ಅಮರಪ್ಪ ಕಲಬುರ್ಗಿ, ಬೆಟ್ಟಪ್ಪ ಬೀರಪ್ಪ ಜೀರಾಳ, ಜಯಕುಮಾರ ಶಂಭುಲಿಂಗಪ್ಪ ವಡ್ಡರಹಟ್ಟಿ, ಡಾ|| ಸುಜಾತ ಶ್ರೀನಿವಾಸಲು, ನಾಗನಗೌಡ ಪಾಟೀಲ್, ದೊಡ್ಡನಗೌಡ ಪಾಟೀಲ್, ಬಸವಣ್ಣೆಯ್ಯಸ್ವಾಮಿ ಹಿರೇಮಠ, ತಿಮ್ಮಾಪುರದ ಪರ್ವತಯ್ಯ ಹಿರೇಮಠ ಹಾಗೂ ಕುಟುಂಬವರ್ಗ ಈ ಎಲ್ಲಾ ದಂಪತಿಗಳು ಸೇರಿದಂತೆ ಕಲ್ಮಂಗಿ, ಆಗೋಲಿ, ಅಬ್ಬಿಗೇರಿ, ಸಾಲೋಟಗಿ, ಕಕ್ಕೇರಿ, ಕಾಸನಕಂಡಿ, ಪಿ.ಕೆ ಹಳ್ಳಿ, ಬೆನ್ನೂರು, ಹಿರೇಹಡಗಲಿ, ಕೇಸರಹಟ್ಟಿ, ವೆಂಕಟಗಿರಿ, ಗಡ್ಡಿ, ವಡ್ಡರಹಟ್ಟಿ ಹಾಗೂ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿ ಯಶಸ್ವಿಯಾಗಿ ಜರುಗಿದವು.

ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಿ, ಮದ್ಯಾಹ್ನ ಮಹಾಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾದರು ಎಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹೇಳಿದರು.

೧ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ.

ಗಂಗಾವತಿ: ಮೇ-೨೫ ಭಾನುವಾರದಂದು ವಿಜಯನಗರ ಜಿಲ್ಲೆಯ ಹಂಪಿನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪ ಭವನದಲ್ಲಿ ೧ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಆಯೋಜನೆಯಾಗಿತ್ತು. ಈ ಸ್ಪರ್ಧೆಯಲ್ಲಿ ಸರಿಸುಮಾರು ೫೦೦ ಹೆಚ್ಚು ವಿದ್ಯಾರ್ಥಿಗಳು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಪ್ರತಿಷ್ಠಿತ ಕರಾಟೆ ತರಬೇತಿ ಸಂಸ್ಥೆಯಾದ ಬಿ.ಎಲ್. ಬುಲ್ಸ್ ಕರಾಟೆ ಡು ಸ್ಪೋರ್ಟ್ ಅಸೋಸಿಯೇಷನ್ (ರಿ) ಗಂಗಾವತಿ ವತಿಯಿಂದ ೯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಟಾ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೪ ದ್ವಿತೀಯ ಸ್ಥಾನ, ೩ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೨ ದ್ವಿತೀಯ ಸ್ಥಾನ, ೧ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅಹಾನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಹರಿಣಿ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಚಿನ್ನು ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಅಖಿಲೇಶ್ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಯಷೀಕಾ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಬುಬಕರ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಶರತ್ ಪಂಡಿತ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರಣವಿ, ದಿಲೀಪ್, ಕಟಾ ವಿಭಾಗದಲ್ಲಿ ತೃತೀಯ ಪಡೆದು ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ರವರು ಮಾತನಾಡಿ ಈ ಕರಾಟೆ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕರಾಟೆ ಮುಖ್ಯ ತರಬೇತುದರಾದ ಮಂಜುನಾಥ ರಾಥೋಡ್ ಮಾತನಾಡಿ ಮಕ್ಕಳು ತಮ್ಮ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು. ಇವತ್ತಿನ ಸೋಲು ನಾಳಿನ ಗೆಲುವಿನ ಮೆಟ್ಟಲು ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಕರಾಟೆ ಶಿಕ್ಷಕರಾದ ಶಿಲ್ಪಾ. ಫಯಾಜ್, ಪ್ರಜ್ವಲ್, ಮೀನಾಕ್ಷಿ ಮತ್ತು ಕ್ರೀಡಾಪಟುಗಳ ಪೋಷಕರಾದ ಮಂಜುನಾಥ, ಸುನಿಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ಆಚರಣೆ.

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ ಶನೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.


ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಹೋಮ-ಹವನ ಸೇರಿದಂತೆ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮೇ-೨೭ ಮಂಗಳವಾರದಂದು ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಲಾಗುವುದು, ಅಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಕಾರಣ ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭಕ್ತಮಂಡಳಿ ಪ್ರಮುಖರಾದ ಮಂಜುನಾಥ ಕುರುಗೋಡು ಮೊಬೈಲ್ ಸಂಖ್ಯೆ: ೯೩೪೨೨೭೦೪೦೮ ಗೆ ಸಂಪರ್ಕಿಸಿರಿ.

VISHWAROOPA NEWS BLOG

Infinite

Skip to content ↓