ರಾಜಮಾತೆ ಲಲಿತಾರಾಣಿ ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ.

ಗಂಗಾವತಿ:ಇಂದು ತುಂಗಭದ್ರಾ ನದಿಯ ಮಲೀನತೆಯಿಂದಾಗಿ ನದಿ ನೀರು ಕುಡಿಯಲು ಮಾತ್ರವಲ್ಲ, ಬಳಸಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿನ ಭವಿಷ್ಯವಿಲ್ಲದಂತಾಗುತ್ತದೆ ಎಂದು ರಾಜಮಾತೆ ಶ್ರೀಮತಿ ಲಲಿತಾರಾಣಿಯವರು ಅಭಿಪ್ರಾಯಪಟ್ಟರು.

ಅವರು ಇಂದು ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಇಂದು ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು-ಮೂರು ದಶಕಗಳಿಂದಲೂ ತುಂಗಭದ್ರಾ ನದಿಯ ನೀರನ್ನು ನಾವೆಲ್ಲರೂ ಕುಡಿಯುತ್ತಿದ್ದೇವೆ. ಆದರೆ ನದಿಯ ನೀರು ಮಲೀನತೆಯಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶುದ್ದ ನೀರು, ಸ್ವಚ್ಛ ಗಾಳಿ ಪರಿಸರವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ಶೃಂಗೇರಿಯಿಂದ ಕಿಷ್ಕಿಂದೆವರೆಗೂ ಪಾದಯಾತ್ರೆ ಬಂದಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ. ಪಾದಯಾತ್ರೆಯ ಸಂಘಟಕರಿಗೆ ನಮ್ಮೂರಿನ ಎಲ್ಲರ ಪರವಾಗಿ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಪಾದಯಾತ್ರೆ ತಂಡದೊಂದಿಗೆ ಹುಲಿಗಿಯಿಂದ ಗಂಗಾವತಿಯವರೆಗೂ ಎಲ್ಲ ನಾಗರಿಕರು ಸಂಘ-ಸಂಸ್ಥೆಗಳು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು. ಜನವರಿ-೦೭ ರಂದು ಸಂಜೆ ಆನೆಗುಂದಿ ಗ್ರಾಮದಲ್ಲಿ ಜರುಗುವ ಪಾದಯಾತ್ರೆ ಸಂಪನ್ನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ವೇಳೆ ನಿರ್ಮಲ ತುಂಗಭದ್ರಾ ಅಭಿಯಾನದ ಶಿವಮೊಗ್ಗದ ಸಂಚಾಲಕರಾದ ಬಾಲಕೃಷ್ಣನಾಯ್ಡು ರವರು ಮಾತನಾಡಿ, ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯ ಸಮಸ್ತ ನಾಯಕರುಗಳು, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವಲ್ಲಿ ನೆರವು ನೀಡಿದ್ದೀರಿ ಮತ್ತು ಇಂದು ಪ್ರಚಾರ ರಥಕ್ಕೆ ಅತ್ಯಂತ ಭಕ್ತಿಪೂರ್ವಕ ಚಾಲನೆಯನ್ನು ನೀಡಿದ್ದೀರಿ. ನಿರ್ಮಲ ತುಂಗಭದ್ರಾ ಅಭಿಯಾನ ಯಶಸ್ವಿಯಾಗಲು ನಮಗೆ ಸಹಕಾರ ನೀಡುತ್ತಿರುವ ಸರ್ವರಿಗೂ ನಿರ್ಮಲ ತುಂಗಭದ್ರಾ ಅಭಿಯಾನ ತಂಡದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸಿಂಗನಾಳ ವಿರೂಪಾಕ್ಷಪ್ಪನವರು ಮಾತನಾಡಿ, ತಾಯಿ ತುಂಗಭದ್ರೆಯ ಒಡಲು ಇಂದು ಮಲೀನವಾಗಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸೋಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕೋಣ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಅಲ್ಲದೇ ಕಾಡಾ ಮಾಜಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿಯವರು ಮಾತನಾಡಿ, ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ನದಿ ಪಾತ್ರದಲ್ಲಿ ಇರುವಂತಹ ಎಲ್ಲಾ ರೈತರು, ನೀರು ಬಳಕೆದಾರ ಸಂಘದವರು, ಆನೆಗುಂದಿ ಗಂಗಾವತಿ ಭಾಗದವರಷ್ಟೇ ಅಲ್ಲದೆ, ಕಾರಟಗಿ, ನವಲಿ ಮತ್ತು ಕನಕಗಿರಿ ಭಾಗದ ರೈತರು, ನಾಗರಿಕರು ಕೂಡ ಈ ಒಂದು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು. Read More ರಾಜಮಾತೆ ಲಲಿತಾರಾಣಿ ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ.