ಸನಾತನಕ್ಕೆ ಅಂತ್ಯ ಎಂಬುದು ಇಲ್ಲವೇ ಇಲ್ಲ. ಅದು ನಿರಂತರ ಶಾಶ್ವತ ಅಜರಾಮರ: ಪರಮಪೂಜ್ಯ ಶ್ರೀ ವಿದುಶೇಖರ ಮಹಾಸ್ವಾಮಿಗಳು

ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಜನ್ಮ ತಾಳಿದ ಆದಿ ಗುರು ಶಂಕರಾಚಾರ್ಯರು ದೇಶದ ನಾಲ್ಕು ಭಾಗಗಳಲ್ಲಿ ಪೀಠಗಳನ್ನು ಸ್ಥಾಪಿಸುವುದರ ಮೂಲಕ ಸನಾತನ ಧರ್ಮದ ಸಂರಕ್ಷಕರಾಗಿ ಶ್ರೀಮಠದ ಪರಂಪರೆ ಮುಂದುವರೆಯುತ್ತಿದ್ದು ಹೀಗಾಗಿ ಸನಾತನಕ್ಕೆ ಅಂತ್ಯವೇ ಇಲ್ಲ ಅದು ಶಾಶ್ವತ ಅಜರಾಮರ ಎಂದು ಶೃಂಗೇರಿಯ ಕಿರಿಯ ಪೀಠಾಧಿಕಾರಿಗಳಾದ ಶ್ರೀ ವಿದುಶೇಖರ ಭಾರತೀಯ ತೀರ್ಥ ಸ್ವಾಮಿಗಳು ಆಶೀರ್ವಚನದಲ್ಲಿ ನುಡಿದರು.

ಅವರು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಅವರ ಸನ್ಯಾಸ ಸ್ವೀಕಾರ ಸುವರ್ಣೋತ್ಸವ ಸಂಭ್ರಮಾಚರಣೆ ಹಾಗೂ ವಿಜಯ ಯಾತ್ರೆ ಪ್ರಯುಕ್ತ ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಮಂಗಳವಾರದಂದು ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವದಿಸಿದರು. ಸನಾತನ ಎಂಬುದು ನಮ್ಮ ದೇಶದ ಪರಂಪರೆ ಹಾಗೂ ಸಂಸ್ಕೃತಿಯಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ವಿದೇಶಿಗರು ಸಹ ಇಲ್ಲಿಯ ಪದ್ಧತಿಗಳನ್ನು ಅನುಸರಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇತರೆ ಅನ್ಯ ಧರ್ಮೀಯರ ಕಾಲದ ಸಂಕಷ್ಟದ ಸಂದರ್ಭದಲ್ಲಿ ಪುನರ್ ಸ್ಥಾಪಿಸಿದ ಕೀರ್ತಿಗೆ ಆದಿ ಗುರು ಶ್ರೀ ಶಂಕರಾಚಾರ್ಯರು ಪ್ರಥಮರು ಎಂದು ಹೇಳಬಹುದು. ಪುನರಪಿ ಜನನಂ ಪುನರಪಿ ಮರಣಂ ಎನ್ನುವಂತೆ ಹುಟ್ಟಿದ ಜನ್ಮ ಸಾರ್ಥಕವಾಗಲೂ ಗುಣಮಟ್ಟದ ಸಂಸ್ಕಾರಗಳನ್ನು ಮಾನವೀಯ ಮೌಲ್ಯಗಳನ್ನು. ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಫಲವತ್ತಾದ ಭೂಮಿ ಒಂದಕ್ಕೆ ಯಾವ ಬೀಜವನ್ನು ನಾವು ಹಾಕಿ ನೀರು ಹಾಕಿ ಬೆಳೆಸುವುದು ಎಷ್ಟು ಮುಖ್ಯವೋ ಆ ಬೀಜದಲ್ಲಿರುವ ಗುಣಮಟ್ಟ ಅಂದರೆ ಸಂಸ್ಕಾರ ಅವಶ್ಯವಾಗಿರುತ್ತದೆ ಎಂದು ಹತ್ತು ಹಲವಾರು ಸಂದೇಶದ ಮಹಾತ್ಮಗಳನ್ನು ಕುರಿತು ಮಾಹಿತಿ ನೀಡಿದರು. ಜೊತೆಗೆ ಶೃಂಗೇರಿ ಪೀಠದ ೧೨ನೇ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಅನುಗ್ರಹದಿಂದ ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೊಳ್ಳುವುದರ ಮೂಲಕ ಸನಾತನದ ಸಂರಕ್ಷಣೆಗೆ ಆಳ್ವಿಕೆಯ ನಾಲ್ಕು ಮನೆತನಗಳು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಶಂಕರ ಮಠದಲ್ಲಿ ನವೀಕೃತಗೊಂಡ ಭವನಕ್ಕೆ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಹೆಸರನ್ನು ನಾಮಕರಣಗೊಳಿಸಬೇಕೆಂದು ಸಲಹೆ ನೀಡಿದರು. ಒಟ್ಟಾರೆ ದೇವರು ಒಬ್ಬನೇ ನಾಮ ಹಲವು ಎಂಬಂತೆ ಹರಿ ಹಾಗೂ ಹರ ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ಸಂರಕ್ಷಣೆಗಾಗಿ ವಿವಿಧ ನಾಮದ ಅಡಿಯಲ್ಲಿ ದೇವರುಗಳಿಗೆ ಪ್ರಾರ್ಥಿಸಿಕೊಳ್ಳಲಾಗುತ್ತದೆ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಹಾಗೂ ಗಂಗಾವತಿಯ ಸಮಸ್ತ ನಾಗರೀಕರ ಪರವಾಗಿ ಅಭಿನಂದನಾ ಪತ್ರ ನೀಡಿ, ಗೌರವ ಸಮರ್ಪಣೆಯನ್ನು ನಾರಾಯಣರಾವ್. ವೈದ್ಯ ಹಾಗೂ ಮಹೇಶ್ ಭಟ್ ಜೋಶಿ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು. ಸಾವಿರಾರು ಭಕ್ತಾದಿಗಳು, ಆಸ್ತಿಕ ಬಂಧುಗಳು, ವಿವಿಧ ಸಮಾಜದ ಮುಖಂಡರು, ಅನ್ಯರೂ ಪಡೆದುಕೊಂಡರು.

ಹಿರೇಬೆಣಕಲ್ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಆಚರಣೆ

ಗಂಗಾವತಿ: ತಾಲೂಕಿನ ಹಿರೇಬೇಣಕಲ್ ಗ್ರಾಮದಲ್ಲಿ ಜನವರಿ-೧೨ ರವಿವಾರ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತಶ್ರಯದಲ್ಲಿ ಶ್ರೇಷ್ಠ ಸಂತ ಶ್ರೀ ಸ್ವಾಮಿ ವಿವೇಕಾನಂದರ ೧೬೨ನೆಯ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.

ಈ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗಂಗಾವತಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪಗೌಡ ಆರ್ ಪಾಟೀಲ್ ಅವರು ಹಾಗೂ ವೇದಿಕೆ ಮೇಲಿನ ಎಲ್ಲ ಮಹನೀಯರಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಸ್ವಾಮಿ ವಿವೇಕಾನಂದರ ಕುರಿತು ಶ್ರೀ ಶಾಂತವೀರಯ್ಯ ಸ್ವಾಮಿ ಗಂಧದ ಶಿಕ್ಷಕರಿಂದ ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮಕ್ಕೆ ಸುಗಮ ಸಂಗೀತವನ್ನು ಶಿವಲಿಂಗಯ್ಯ ಶಾಸ್ತಿçಗಳು ಮತ್ತು ರಿಜ್ವಾನ್ ಮುದ್ದಬಳ್ಳಿಯವರು ನೆರವೇರಿಸಿದರು.
ಈ ಜಯಂತ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಿದ್ದಗಂಗಾ ಶ್ರೀ ಮೆಲೋಡೀಸ್ ಆರ್ಕೆಸ್ಟಾç ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬೇಣಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ವಿಶೇಷ ಆಹ್ವಾನಿತರಾಗಿ ಗಂಗಾವತಿಯ ದಂತವೈದ್ಯರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಆನಂದ್ ಕೊಟ್ರಪ್ಪ ಅಕ್ಕಿ, ಅನ್ನಪೂರ್ಣ ಮೇಡಂ, ಬಸವರಾಜ್ ಹೇಮಗುಡ್ಡ ವಕೀಲರು, ಗ್ರಾಮದ ಸಮಸ್ತ ಹಿರಿಯರು, ಸಂಘದ ಸರ್ವ ಸದಸ್ಯರು ಈ ನಾಡಿನ ಹೆಸರಾಂತ ಕಲಾವಿದರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಚಂದ್ರಶೇಖರ್ ಕುಂಬಾರ್ ನಿರ್ವಹಿಸಿದರೆ, ಪ್ರಾಸ್ತಾವಿಕ ನುಡಿಯನ್ನು ಶ್ರೀ ಕನಕನಗೌಡ ಬಸಾಪುರ ನುಡಿದರು. ಸ್ವಾಗತ ಭಾಷಣವನ್ನು ಶ್ರೀ ನಾಗರಾಜ್ ಡಣಪೂರ ಮಾಡಿದರು.
ಬಸನಗೌಡ ಹೊಸಳ್ಳಿ, ಮಾಲತೇಶ್ ಕುಕುನೂರ್ ಸೇರಿದಂತೆ ಸಮಸ್ತ ಹಿರೇಬೇಣಕಲ್ ಗ್ರಾಮದ ಯುವಕ ಮಿತ್ರರು, ಶಾಲೆಯ ಮುದ್ದು ಮಕ್ಕಳು, ತಾಯಂದಿರು ಭಾಗವಹಿಸಿದ ಈ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಸಂಜೆ ೬ ರಿಂದ ರಾತ್ರಿ ಒಂದು ಗಂಟೆಯವರೆಗೆ ಯಶಸ್ವಿಯಾಗಿ ನೆರವೇರಿತು ಎಂದು ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷರಾದ ಬಸನಗೌಡ ಹೊಸಳ್ಳಿ ಇವರು ವರದಿ ನೀಡಿದರು.

ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳು ಹಾಗೂ ಪಾಲಕರಿಗೆ ಕಬ್ಬು ನೀಡುವ ಮೂಲಕ ಮಕರ ಸಂಕ್ರಾಂತಿ ಆಚರಣೆ

ಗಂಗಾವತಿ: ಇಂದು ಮಹಾನ್ ಕಿಡ್ಸ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ಯ ಎಲ್ಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಕಬ್ಬನ್ನು ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಮಯದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ್ ಮಾತನಾಡಿ ಈಗಿನ ಮಕ್ಕಳಿಗೆ ಕಬ್ಬನ್ನು ತಿನ್ನುವುದು ಗೊತ್ತಿಲ್ಲ. ಪಾಲಕರು ಕೂಡ ಆ ಪ್ರಯತ್ನವನ್ನು ಮಾಡುವುದಿಲ್ಲ. ಮಕ್ಕಳಿಗೆ ಕಬ್ಬನ್ನು ತಿನ್ನುವ ರೂಢಿಯನ್ನು ಮಾಡಿದಲ್ಲಿ ಮಕ್ಕಳ ಆರೋಗ್ಯವು ಚೆನ್ನಾಗಿರುತ್ತೆ ಹಾಗೂ ಮಕ್ಕಳ ಹಲ್ಲುಗಳು ಕೂಡ ಚೆನ್ನಾಗಿರುತ್ತವೆ. ಹಾಗಾಗಿ ಪ್ರತಿ ವರ್ಷವೂ ಮಕ್ಕಳಿಗೆ ಹಾಗೂ ಪಾಲಕರಿಗೆ ಶಾಲೆಯಿಂದ ಕಬ್ಬನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕಿಯಾದ ಸವಿತಾ ಗುರುವಿನಮಠರವರು ಶಾಲೆಯ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಸಮಸ್ತ ಗಂಗಾವತಿ ನಾಗರಿಕರಿಗೆ ಮಕರ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪೂರ್ಣಿಮಾ, ಮಂಜುನಾಥ, ಚಂದ್ರಶೇಖರ, ಪ್ರಸಾದ್, ಕುಮುದಿನಿ, ಚಂಪಾರಣೆ, ಶಾಂತ ಹಿರೇಮಠ, ಮುತ್ತ, ತೇಜಸ್ವಿನಿ ಸೇರಿದಂತೆ ಇನ್ನಿತರ ಶಿಕ್ಷಕರಿದ್ದರು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರ ನಿಧನ: ವಿಷಾದಕರ – ಭಾರಧ್ವಾಜ್

ಗಂಗಾವತಿ: ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ರವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಕ್ರಾಂತಿಚಕ್ರ ಬಳಗದ ಅಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಭಾರತದ ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹಸಿಂಗ್‌ರು ಆರ್ಥಿಕ ತಜ್ಞರಾಗಿದ್ದು, 90 ರ ದಶಕದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕುಂಟಿತಗೊಂಡು ಗಂಭೀರ ಸ್ಥಿತಿಯಲ್ಲಿದ್ದಾಗ ಮನಮೋಹನಸಿಂಗ್‌ರು ದೇಶದ ಆರ್ಥಿಕ ಸ್ಥಿತಿಯಲ್ಲಿ ಬಲಪಡಿಸುವಲ್ಲಿ ಪ್ರಮುಖ ಪಾತ್ರಹಿಸಿದ್ದರು. ನಂತರ ಅವರು ೨೦೦೪ ರಿಂದ ೨೦೧೪ ರವರೆಗೆ ಹತ್ತುವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಭಾರತದ ಆಥಿಕತೆಯನ್ನು ಪ್ರಪಂಚ ಮಟ್ಟದಲ್ಲಿ ಎರಡನೇ ಸ್ಥಾನಕ್ಕೆ ಏರಿಸಿದ್ದರು. ದೇಶದ ಆರ್ಥಿಕ ಸ್ಥಿತಿ ಭದ್ರವಾಗಿರುವುದಕ್ಕೆ ಮನಮೋಹನಸಿಂಗ್‌ರೇ ಕಾರಣರಾಗಿದ್ದಾರೆ. ದೇಶ ಕಂಡ ಅಪ್ರತಿಮ ಆರ್ಥಿಕ ನೀತಿಯ ತಜ್ಞರಾಗಿದ್ದ ಮಾಜಿ ಪ್ರಧಾನಿ ಸಿಂಗ್‌ರನ್ನು ಕಳೆದುಕೊಂಡ ಭಾರತ ಈಗ ಸಂಕಷ್ಟದಲ್ಲಿ ಸಿಲುಕಿದೆ ಎಂದು ಭಾರಧ್ವಾಜ್ ಕಳವಳ ವ್ಯಕ್ತಪಡಿಸಿದರು

ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರುಗಳ ಹಾಗೂ ವಿದ್ಯಾರ್ಥಿಗಳ ಬದ್ದತೆ ಪ್ರಮುಖ ಪಾತ್ರವಹಿಸುತ್ತದೆ : ಆರ್. ಪುಟ್ಟಸ್ವಾಮಿ ತಿಳಿಸಿದರು

ಚಿತ್ರದುರ್ಗ: ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರುಗಳ ಹಾಗೂ ವಿದ್ಯಾರ್ಥಿಗಳ ಬದ್ದತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಆರ್.ಪುಟ್ಟಸ್ವಾಮಿ ತಿಳಿಸಿದರು.

ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪಿಹೆಚ್‌ಡಿ ಸಹಿತ ಹತ್ತು ಹಲವು ಪದವಿ ಪಡೆದ ಉಪನ್ಯಾಸಕರು ಎಷ್ಟೇ ಬುದ್ದಿವಂತರಾಗಿದ್ದರೂ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತಲುಪದೆ ಹೋದರೆ ತರಗತಿಗಳು ಯಶಸ್ವಿಯಾಗುವುದಿಲ್ಲ ಎಂದರು.

ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ ಈ ಹಿಂದೆ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುವಾಗ ನೆಮ್ಮದಿಯಿತ್ತು. ಬೋಧನೆ ಹೊರತು ಬೇರೆ ಯಾವುದೇ ಕಾರ್ಯಭಾರ ಇರಲಿಲ್ಲ. ಆದರೆ ಈಗ ಬೋಧನೆ ಸಹಿತ ಇನ್ನಿತರೆ ಕೆಲಸಗಳ ಒತ್ತಡದಲ್ಲಿ ಕಲಿಸುವುದು ಒಂದು ಭಾಗವಾಗಿ ಮಾತ್ರ ಉಳಿದಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಡಾ.ಜೆ. ಮೋಹನ್ ಪ್ರಾಸ್ತಾವಿಕ ಮಾತನಾಡುತ್ತಾ ಕಾರ್ಯಾಗಾರಗಳು ಫಲಿಶಾಂಶ ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು

ಪ್ರಾಂಶುಪಾಲರಾದ ವಿ. ಲೋಕೇಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಬದಲಾದ ಪಠ್ಯವಸ್ತು, ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಬೋಧನಾ ವಿಧಾನದಲ್ಲಿ ಹೊಸತನ ಕಂಡುಕೊಳ್ಳಲು ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.

ಹಿರಿಯ ಪ್ರಾಂಶುಪಾಲರಾದ ಹೆಚ್.ಬಿ. ನರಸಿಂಹಮೂರ್ತಿ, ಜಿ.ದೇವರಾಜ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್. ದೇವೇಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಡಾ.ಎನ್. ಪ್ರಭಾಕರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಮೀರಾ ನಾಡಿಗ್ ಪ್ರಾರ್ಥಿಸಿದರು, ಉಪನ್ಯಾಸಕ ಬುಡೇನ್ ಸಾಬ್ ಸ್ವಾಗತಿಸಿದರು, ಪ್ರಾಂಶುಪಾಲರಾದ ಶ್ರೀಮತಿ ಸರೋಜಮ್ಮ ವಂದಿಸಿದರು. ಉಪನ್ಯಾಸಕ ಆರ್.ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.