ಗಂಗಾವತಿಯ ರೇಡಿಯೋದಿಂದ ಮಿಷನ್ ಎಸ್.ಎಸ್.ಎಲ್.ಸಿ-೨೫ ರಾಜ್ಯವ್ಯಾಪಿ ಪ್ರಸಾರ ಶ್ಲಾಘನೀಯ : ಗಾಲಿ ಜನಾರ್ಧನರೆಡ್ಡಿ

ಪರೀಕ್ಷೆಯು ಭಯ ನಿರ್ಮಿಸುವುದಕ್ಕಲ್ಲ, ನಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲು ಇರುವ ಅವಕಾಶ

ಗಂಗಾವತಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡು ನಮ್ಮ ತಾಲೂಕಿಗೆ ಮತ್ತು ತಂದೆ-ತಾಯಿಗಳಿಗೆ ಹಾಗೂ ಗುರುಗಳಿಗೆ ಕೀರ್ತಿ ತರಲು, ಒಳ್ಳೆಯ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಪರೀಕ್ಷೆ ಎನ್ನುವುದು ಭಯದ ವಾತಾವರಣವನ್ನು ನಿರ್ಮಿಸುವುದಲ್ಲ, ನಿಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲಿಕ್ಕೆ ಇರುವ ಒಂದು ಸುವರ್ಣಾವಕಾಶ ಎಂದು ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರು ಹೇಳಿದರು.

ಅವರು ಇಂದು ಮಾರ್ಚ್-೮ ಶನಿವಾರ, ಗಂಗಾವತಿ ಗ್ರಾಮೀಣ ಭಾರತಿ ೯೦.೪ ಎಫ್.ಎಂ. ಸಮುದಾಯ ರೇಡಿಯೋ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕೆ.ಕೆ.ಆರ್.ಡಿ.ಬಿ., ವರದಶ್ರೀ ಫೌಂಡೇಷನ್ ಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ವೋದಯ ಸಮೂಹ ಶಿಕ್ಷಣ ಸಂಸ್ಥೆ ಹೊರ್ತಿ, ಹುಬ್ಬಳ್ಳಿಯ ಆರ್ಗ್ಯಾನಿಕ್ ಅರಮನೆ ಅರ್ಪಿಸುವ ಮಿಷನ್ ಎಸ್.ಎಸ್.ಎಲ್.ಸಿ-೨೫ ರೇಡಿಯೋ ಸರಣಿ ಕಾರ್ಯಕ್ರಮದಲ್ಲಿ ಪರೀಕ್ಷಾ ಸ್ಪೂರ್ತಿ ವಿಶೇಷ ಸಂಚಿಕೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು ಗಂಗಾವತಿಯ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರದಿAದ ರಾಜ್ಯವ್ಯಾಪಿ ಏಕಕಾಲದಲ್ಲಿ ಪ್ರಸಾರವಾಗಿರುವುದು ಶ್ಲಾಘನೀಯ. ಪರೀಕ್ಷೆಯು ನಮ್ಮ ಸಾಮರ್ಥ್ಯವನ್ನು ಹೊರಹಾಕಲು ಇರುವ ಒಂದು ವಿಧಾನ. ಪರೀಕ್ಷೆಯ ಫಲಿತಾಂಶವೇ ಅಂತಿಮವಲ್ಲ. ಗೆದ್ದಾಗ ಖುಷಿಪಡುವುದು, ಸೋತಾಗ ಕುಗ್ಗುವುದು ಜೀವನವಲ್ಲ. ಗೆದ್ದಾಗ ಮುಂದಿನ ಜವಾಬ್ದಾರಿ ಬಗ್ಗೆ ಚಿಂತಿಸಬೇಕು, ಸೋತಾಗ ಹೇಗೆ ನಾನು ಗೆಲ್ಲಲಲ್ಲೆ ಎಂಬುದರ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಸಮಯ ಎಂಬುದು ಹಣದಂತೆ, ಅದರ ಮಹತ್ವವನ್ನು ಹಣದ ರೂಪದಲ್ಲಿ ಅರ್ಥಮಾಡಿಕೊಳ್ಳುವ ವ್ಯಕ್ತಿಗೆ ಒಳ್ಳೆಯ ಸಮಯಗಳು ಯಾವಾಗಲೂ ಜೊತೆಯಾಗಿ ಇರುತ್ತವೆ. ಡಾ. ಬಿ.ಆರ್ ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ, ಸಾವಿತ್ರಿ ಬಾಪುಲೆ ಇನ್ನು ಅನೇಕ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸೇರಬೇಕೆನ್ನುವುದು ನನ್ನ ಮನದಾಳದ ಬಯಕೆಯಾಗಿದೆ. ಮಕ್ಕಳೇ ಇದನ್ನು ಈಡೇರಿಸುತ್ತೀರೆಂದು ನಾನು ಪ್ರಬಲವಾಗಿ ಆಶಿಸುತ್ತೇನೆ ಎಂದು ತಿಳಿಸುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಗಂಗಾವತಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಕ್ಕಳಿಗೆ ಹಾರೈಸಿ, ಈ ವೇಳೆ ಜಿಲ್ಲೆಯಲ್ಲಿಯೇ ಮೊದಲ ರೆಡಿಯೋ ಕೇಂದ್ರವಾದ ಗಂಗಾವತಿ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರವು ಎಲ್ಲಾ ಜನಸಮುದಾಯಗಳಿಗೆ ಶಿಕ್ಷಣ, ಮಾಹಿತಿ ಮತ್ತು ಮನೋರಂಜನೆ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಈ ರೇಡಿಯೋ ಕೇಂದ್ರಕ್ಕೆ ಶೀಘ್ರದಲ್ಲಿ ಬಳ್ಳಾರಿ ಆಕಾಶವಾಣಿ ಮಾದರಿಯಲ್ಲಿ ಸುಸಜ್ಜಿತ ಸ್ಟುಡಿಯೋ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗಂಗಾವತಿ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನಾರವರು, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕ ಗಾಲಿ ಜನಾರ್ಧನೆಡ್ಡಿಯವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಹೆಚ್.ಬಿ., ನಗರಸಭೆ ಸದಸ್ಯೆ ಶ್ರೀಮತಿ ಸುಚೇತಾ ಶಿರಿಗೇರಿ, ಪತ್ರಕರ್ತರಾದ ಕೆ. ನಿಂಗಜ್ಜ ಈ ಎಲ್ಲ ಗಣ್ಯಮಾನ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಈ ಕಾರ್ಯಕ್ರಮ ಕೇಳುತ್ತಿರುವ ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಬಂಧುಗಳಿಗೆ ಶುಭ ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಸ್ಪೂರ್ತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೆಯೇ ಇಂದು ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ರ‍್ಹಾಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಶರಣಪ್ಪ ಗೌರಿಪುರ ಇವರು ಸಮಾಜ ವಿಜ್ಞಾನ ಪಾಠವನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮೌಲಾಸಾಬ್, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ರಮೇಶ ಚೌಡ್ಕಿ, ರೇಡಿಯೋ ಕೇಂದ್ರದ ವ್ಯವಸ್ಥಾಪಕರಾದ ಲಾವಣ್ಯ ಅಂಚಕಟ್ಲು, ದೀಪ ಸಮಾಜ ಸೇವಾ ಕೇಂದ್ರದ ರುಕ್ಮಗೌಡ ಸಂಗಾಪುರ, ವೀರೇಶ್ ಇಲ್ಲೂರ್, ಆರ್.ಕೃಷ್ಣ ಗಂಗಾವತಿ, ಮುಖಂಡರಾದ ಜೋಗದ ದುರುಗಪ್ಪ ನಾಯಕ, ಮನೋಹರ್‌ಗೌಡ ಹೇರೂರ್, ರಾಜೇಶ್ ರೆಡ್ಡಿ, ಪಂಪಣ್ಣ ನಾಯಕ, ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಪಿ.ಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜ ವಿಜ್ಞಾನ ವಿಷಯದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಶರಣಪ್ಪ ಕುಂಬಾರ ಅವರು ಭಾಗವಹಿಸಿ ಸಂಪೂರ್ಣ ಕಾರ್ಯಕ್ರಮದ ನಿರೂಪಣೆಗೈಯ್ಯುವ ಮೂಲಕ ಸಮಾಜವಿಜ್ಞಾನ ವಿಷಯದ ಪಾಠ ಬೋಧನೆ ಮಾಡಿದರು.

ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ನಗರದ ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ೨೦೨೪-೨೫ ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮಾರ್ಚ್-೮ ಶನಿವಾರ ನಗರಸಭೆ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ವೇದಿಕೆ ಮೇಲೆ ಹಾಸಿನರಾದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ವಿ.ಗೊಂಡಬಾಳ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸಹನೆ ಸತತ ಪರಿಶ್ರಮ ಧನಾತ್ಮಕ ಚಿಂತನೆ ಕಠಿಣ ಪರಿಶ್ರಮಗಳು ಯಶಸ್ಸಿನ ಮೆಟ್ಟಿಲುಗಳು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ “ಸಹನ ರವಿ ನಾಯಕ”, “ನಾಗರತ್ನ”, “ಪ್ರವೀಣ್” ಇವರಿಗೆ ನಗದು ಬಹುಮಾನಗಳನ್ನು ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ನಗದು ಬಹುಮಾನಗಳನ್ನು ನೀಡಿದರು. ಅದೇ ರೀತಿ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಂಗಾವತಿ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಪರಶುರಾಮ್ ಕಿರಿಕಿರಿಯವರು ಮಾತನಾಡಿ, ಮಕ್ಕಳಲ್ಲಿ ಅಂಬೇಡ್ಕರ್ ಅವರ ಆದರ್ಶವನ್ನು ಮೈಗುಡಿಸಿಕೊಂಡು, ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಪಾರ್ವತಿ, ಶ್ರೀಮತಿ ಹುಲಿಗೆಮ್ಮ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಶ್ರೀಮತಿ ನಸೀಮಾ ಬಾನು ಮಾತನಾಡಿದರು.
ಶ್ರೀಮತಿ ಸರಿತಾ ಪೂಜಾರಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಜೋಶಿ ವಾರ್ಷಿಕ ವರದಿ ವಾಚನ ಮಂಡಿಸಿದರು.

ಶ್ರೀಮತಿ ಸುಧಾ ಡಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರೆ, ಕುಮಾರಸ್ವಾಮಿ ಸ್ವಾಗತಿಸಿ, ಶ್ರೀಮತಿ ಜಯಶ್ರೀ ವಂದನಾರ್ಪಣೆಗೈದರು. ಸಂಗೀತ ಶಿಕ್ಷಕರಾದ ಮಾರೆಪ್ಪ ಮಕ್ಕಳೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ವಾರ್ಡಿನ ಗುರುಹಿರಿಯರು ಉಪಸ್ಥಿತರಿದ್ದರು.