“ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಮಕ್ಕಳ ಕ್ರಿಸ್‌ಮಸ್”

ಗಂಗಾವತಿ: ಡಿಸೆಂಬರ್-೨೩ ಮಂಗಳವಾರ ಆರೋನ್ ಮಿರಜ್‌ಕರ್ ಹಾಗೂ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಕ್ರಿಸ್‌ಮಸ್”ನ್ನು ಸಿಹಿ ಹಂಚುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.

ಶಾಲೆಯ ಗೋಡೆಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಿ, ಮಕ್ಕಳೇ ತಯಾರಿಸಿದ ನಾನಾಬಗೆಯ ಚಿತ್ರಗಳಿಂದ ಗೋಡೆಗಳನ್ನು ಶೃಂಗರಿಸಿ, ಅಪರಾಹ್ನ ೨ ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ‘ಶ್ರೀಮತಿ ಚಿನ್ನಮ್ಮ ಮಿರಜ್‌ಕರ್’ ವಹಿಸಿದ್ದರು.

ಉದ್ಘಾಟನೆಯನ್ನು ಕೇಕ್ ಕತ್ತರಿಸುವುದರ ಮೂಲಕ ಇಸಿಐ ಕರ್ನಾಟಕ ಚರ್ಚ್‌ನ ರೈ. ರೆ. ಬಿಷಫ್ ರವಿ ಕುಮಾರ್ ಅಂದ್ಲಿ ಅವರು ನೆರವೇರಿಸಿ, “ಮಕ್ಕಳ ಕ್ರಿಸ್‌ಮಸ್ ಹಬ್ಬದ ವಿಶೇಷತೆ ಮತ್ತು ಆಚರಣೆಯ ಮಹತ್ವವನ್ನು” ತಮ್ಮ ಉದ್ಘಾಟಕರ ಭಾಷಣದಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

ಏಸುಕ್ರಿಸ್ತನ ಜೀವನ, ಸಾಧನೆಗಳನ್ನು ಕುರಿತು ಹಾಗೂ ಹೊಸ ವರ್ಷದ ಆಚರಣೆಯ ವಿಶೇಷತೆಯ ಬಗ್ಗೆ ಶಾಲೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್ ಅವರು ತಿಳಿಸಿದರು.

ರೆವ. ಶ್ರೀ ಯೇಸುದಾಸ್ ಮತ್ತು ರೆವ. ಶ್ರೀ ಯೋಹನ್ ಬಾಬು ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಯೇಸುವಿನ ಪ್ರಾರ್ಥನೆ ಮತ್ತು ದೇವರ ವಾಕ್ಯಗಳನ್ನು ತಿಳಿಸಿದರು.

ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್, ಆಡಳಿತಾಧಿಕಾರಿಗಳಾದ ಶ್ರೀ ಚಂದ್ರಕಾಂತ್‌ರಾವ್, ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ನಾಯಕ ಹಾಗೂ ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಮತ್ತು ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ಕು. ಏಂಜಲಿನಾ ಮಿರಜ್‌ಕರ್ ವೇದಿಕೆಯಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಕೆಂಪು ಮತ್ತು ಬಿಳಿ ಬಣ್ಣದ ಸಮವಸ್ತ್ರಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. https://aratt.ai/@vishwaroopa_news_blog

ಹಾಡು ನೃತ್ಯಗಳಲ್ಲಿ ರಂಜಿಸಿದ ದಕ್ಷಬ್ರಹ್ಮ ನಾಟಕ

ಹಾಸನ: ಹಾಸನದ ಹಾಸನಾಂಬ ‘ಕಲಾಕ್ಷೇತ್ರದಲ್ಲಿ ಸ್ಥಳೀಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘವು ಹಮ್ಮಿಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಶುಕ್ರವಾರ ದಕ್ಷಯಜ್ಞ ನಾಟಕ ಪ್ರದರ್ಶಿಸಿದರು.

ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ತಾವು ರಂಗಭೂಮಿಗೆ ಬಂದು 18 ವರ್ಷ ಆಗಿದೆ. ಈವರೆಗೆ 200 ನಾಟಕಗಳಲ್ಲಿ ನಟಿಸಿದ್ದೇನೆ. ಸಂಘ ಹಲವಾರು ಹೊಸ ನಾಟಕ ಪ್ರದರ್ಶಿಸಿದೆ. ಪೌರಾಣಿಕ ನಾಟಕೋತ್ಸವ ನಡೆಸಿದ್ದೇವೆ. ಮುಂದೆಯೂ ರಂಗ ಚಟುವಟಿಕೆ ನೆಡೆಸಲು ಸಂಘದ ಕಲಾವಿದರು ಅಧ್ಯಕ್ಷ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾಟಕದ ಮೇಷ್ಟ್ರು ಡಿ.ಸಿ ಪುಟ್ಟರಾಜು ನಮಗೆ ಹೊಸ ಹೊಸ ನಾಟಕ ಕಲಿಸಿಕೊಟ್ಟ ಕಡಿಮೆ ಸಂಭಾವನೆ ಸ್ವೀಕರಿಸಿ ಆತ್ಮೀಯತೆಯಲ್ಲಿ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರಿಗೆ ನಾವು ಕಲಾವಿದರು ಪ್ರೀತಿಯಿಂದ ಬೆಳ್ಳಿ ಕಿರೀಟ ಉಂಗುರ ತೊಡಿಸಿ ಗೌರವಿಸಲಾಗುತ್ತಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ‘ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರಚಿತ ದಕ್ಷಯಜ್ಞ ನಾಟಕ ಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹತ್ತು ವರ್ಷಗಳ ಹಿಂದೆ ಎ.ಸಿ. ರಾಜು ಈ ನಾಟಕವನ್ನು ಇಲ್ಲಿ ನಿರ್ದೇಶಿಸಿ ನಾಟಕ ಪ್ರದರ್ಶನ ಕುರಿತಾಗಿ ಬರೆದಿದ್ದೆ. ನಾಟಕವೀಕ್ಷಣೆ ವಯಸ್ಕರ ಮನಸ್ಸಿಗೆ ಉಲ್ಲಾಸ ತರುತ್ತದೆ. ಪ್ರೇಕ್ಷಕರೆ ಕಲಾವಿದರಿಗೆ ಸ್ಫೂರ್ತಿ. ಜೀವಂತ ಕಲೆ ನಾಟಕ ಹೀಗೆ ಸಾಗಲಿ ಎಂದು ಆಶಿಸಿದರು.

ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಸಮಿತಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಲಾವಿದರು ರಮೇಶ್ ಗೌಡಪ್ಪ, ಸಿ.ಎಂ.ಶ್ರೀಕಂಠಪ್ಪ, ವೇದ ಶಿವಕುಮಾರ್, ವಕೀಲರು ಐ.ಎ.ಮಹೇಂದ್ರ, ಬಿ.ಕೆ.ವಿಶ್ವನಾಥಗೌಡ ಎಂ.ಟಿ.ತಿಮ್ಮೇಗೌಡ, ಕಲಾವಿದರು ಕೆ.ಕೆ.ರಂಗಸ್ವಾಮಿ, ಟಿ.ವಿ.ನಾಗರಾಜ್ ಹೆಚ್.ಎಂ.ಪ್ರಭಾಕರ್, ಸಾವಿತ್ರಿ ಗಂಗಾಧರ್, ಯರೇಹಳ್ಳಿ ಮಂಜೇಗೌಡರು, ಜಗದೀಶ್ ರಾಮಘಟ್ಟ, ಗ್ಯಾರಂಟಿ ರಾಮಣ್ಣ, ಶಶಿಕುಮಾರ್ ಸಾಲಗಾಮೆ, ನಾಟಕ ನಿರ್ದೇಶಕರು ಎ.ಸಿ. ರಾಜು, ಸೀನ್ಸ್ ಮಾಲೀಕರು ಲಕ್ಷಣ್ ಕಡಗ, ನಿ. ಪ್ರಾಧ್ಯಾಪಕರು ಎ ಹೆಚ್ ಗಣೇಶ ಅಂಕಪುರ, ಕಾರ್ಲೆ ಗೋವಿಂದೇಗೌಡರು ಇದ್ದರು.

ಸಿಗರನಹಳ್ಳಿ ಚಂದ್ರಶೇಖರ್ ನಿರೂಪಿಸಿದರು. ಬ್ಯಾಟಾಚಾರ್ ಪ್ರಾರ್ಥಿಸಿದರು. ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿಯ ಉತ್ತಮ ಬೆಳಕು ಮೇಕಪ್ ಮೈಕ್ ವಸ್ತ್ರಾಲಂಕಾರಗಳಲ್ಲಿ ದಕ್ಷ ಯಕ್ಷ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ನಾಟಕದ ದಕ್ಷಬ್ರಹ್ಮ ಪಾತ್ರದಲ್ಲಿ ಸತೀಶ್ ಕಬ್ಬತ್ತಿ. ಬಾಲ ಬ್ರಹ್ಮ – ಬಾನು ಶೇಖರ್ ಈಶ್ವರ -ನಿರಂಜನ, ಬ್ರಹ್ಮ – ನಾಗರಾಜ್ ಸಿ.ಜಿ. ಗಮನ ಸೆಳೆದರು.

ಚಂದ್ರಮ ರೋಹಿಣಿ ಪಾತ್ರಗಳಲ್ಲಿ ನಿಂಗರಾಜು ಮತ್ತು ನಾಗಮಣಿ, ವಸುಂದರ ಪದ್ಮ ಪಾತ್ರಗಳಲ್ಲಿ ಮಂಜುನಾಥ್ ಚಂದನ ಜೋಡಿ ಚಂದವಾಗಿ ನರ್ತಿಸಿ ಶೃಂಗಾರ ಗೀತೆಗಳಿಂದ ರಂಜಿಸಿದರು. ನಾರದನ ಪಾತ್ರವನ್ನು ಇಬ್ಬರು ರಮೇಶ್ ಕೆ ಮತ್ತು ಆನಂದಮೂರ್ತಿ ನಿಭಾಯಿಸಿದರು.

ಭೃಗು ಮಹರ್ಷಿ – ಡಿ.ವಿ.ನಾಗಮೋಹನ್ ನಂದಿ – ಜಗದೀಶ್, ವೀರಭದ್ರ ಪಾತ್ರ ಕುಮಾರ್ ಸ್ತ್ರೀ ಪಾತ್ರಗಳು ಆದಿಶಕ್ತಿ ದೀಪು, ಪುಪ್ಪವತಿ- ಮಂಜಳ ಉಮೇಶ್, ರೇವತಿ – ಮಮತ, ಭರಣಿ – ಸಾವಿತ್ರಿ ಗಂಗಾಧರ್ ಅಭಿನಯಿಸಿದರು. ವಾದ್ಯ ಗೋಷ್ಠಿ ಕ್ಯಾಸಿಯೋ ವಿಶ್ವ ಮಂಡ್ಯ, ತಬಲ ಲೋಕಾಭಿರಾಮ ಮಂಡ್ಯ ಸಾತ್ ನೀಡಿದರು. https://aratt.ai/@vishwaroopa_news_blog