ರಾಜ ಮನೆತನದ ಶ್ರೀರಂಗದೇವರಾಯಲು ಜನ್ಮ ದಿನೋತ್ಸವ

ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮಾರ್ಚ್-೩ ಸೋಮವಾರ ವಿಜಯನಗರ ಸಾಮ್ರಾಜ್ಯದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ೮೭ನೇ ವರ್ಷದ ಜನ್ಮದಿನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗೊಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹಲವಾರು ತಲೆಮಾರುಗಳಿಂದ ಇವರ ವಂಶಸ್ಥರಾಗಿ ಇದೇ ಆನೆಗೊಂದಿ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ. ಶ್ರೀರಂಗದೇವರಾಯಲು ರಾಜಕೀಯಕ್ಕೆ ಪ್ರವೇಶಿಸಿ ಸತತ ಐದುಬಾರಿ ಕನಕಗಿರಿ ಮತ್ತು ಗಂಗಾವತಿ ಎರಡು ಕ್ಷೇತ್ರಗಳಿಗೆ ಶಾಸಕರಾಗಿ, ಸಚಿವರಾಗಿ ರೈತಾಪಿ ವರ್ಗದ ಜನರ ಹಿತವನ್ನು ಕಾಯುತ್ತ ಮತ್ತು ದೀನ-ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಹಂಪಿ ಉತ್ಸವವನ್ನು ಆಚರಿಸುವಾಗ ಎಂ.ಪಿ. ಪ್ರಕಾಶ್ ರವರ ಮನವೊಲಿಸಿ ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವವು ನಡೆಯುವಂತೆ ಮಾಡಿದ್ದರು. ಆನೆಗುಂದಿ ಉತ್ಸವವನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಉತ್ತಮ ಜನಸೇವೆಯನ್ನು ಮಾಡಿ ಶ್ರೀರಂಗದೇವರಾಯಲುರವರು ಜನಮಾನಸದಲ್ಲಿ ಅಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಈಗ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರ ೮೭ನೇ ವರ್ಷದ ಜನ್ಮ ದಿನೋತ್ಸವವನ್ನು ನಾವು ಸದಾ ಆಚರಣೆ ಮಾಡುತ್ತಾ ಬರುತ್ತೇವೆ ಎಂದು ಅವರ ಕಟ್ಟಾ ಬೆಂಬಲಿಗರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಹೆಚ್.ಎಂ. ಸಿದ್ದರಾಮಸ್ವಾಮಿ ಮಾಧ್ಯಮ ದೊಂದಿಗೆ ಮಾತನಾಡಿ ಹೇಳಿದರು.

ಜೊತೆಗೆ ಶ್ರೀರಂಗದೇವರಾಯಲು ಅವರ ದೂರದೃಷ್ಟಿ ಮತ್ತು ಅವರ ಜನಸೇವೆ, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಬೆಳೆಯಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ವಿಷ್ಣುತೀರ್ಥ ಜೋಶಿ, ಗ್ರಾ.ಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ವಿರುಪಾಕ್ಷಯ್ಯ ಸ್ವಾಮಿ, ಕೆ. ತಿರುಕಪ್ಪ, ರವಿಕುಮಾರ ಮತ್ತು ಅವರ ಅಭಿಮಾನಿ ಬಳಗದ ಜೊತೆಗೆ ಆನೆಗುಂದಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಡುಗೆ ಮನೆಯೇ ವಿಜ್ಞಾನದ ಲ್ಯಾಬ್, ತಾಯಿಯೇ ವಿಜ್ಞಾನದ ಗುರು: ಹಿರಿಯ ವಿಜ್ಞಾನಿ ಮಹಾಂತಶಿವಯೋಗಿ

ಗಂಗಾವತಿ: ಮಕ್ಕಳಿಗೆ ಅಡುಗೆ ಮನೆಯೆ ವಿಜ್ಞಾನದ ಲ್ಯಾಬ್ ಇದ್ದಹಾಗೆ, ತಾಯಿಯೇ ವಿಜ್ಞಾನ ಗುರು ಎಂದು ಗಂಗಾವತಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿಗಳಾದ ಮಹಾಂತಶಿವಯೋಗಿಯವರು ಹೇಳಿದರು.

ಅವರು ಮಾರ್ಚ್-೩ ಸೋಮವಾರ ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಚರಿಸಲಾದ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಯ ಮಕ್ಕಳು ಮಾಡಿದ ಸ್ಪ್ರೇಯನ್ನು ಖಾಲಿ ಬೋರ್ಡ್‌ನಲ್ಲಿ ಸಿಂಪಡಿಸಿದಾಗ ವೆಲ್‌ಕಮ್ ಟು ಮಹಾನ್ ಸೈನ್ಸ್ ಡೇ ಎಂದು ಗೋಚರಿಸಿತು. ಮಹಾನ್ ಕಿಡ್ಸ್ ಶಾಲೆ ಮಕ್ಕಳು ಬಯೋಲಜಿ, ಫಿಸಿಕ್ಸ್, ಕೆಮಿಸ್ಟ್ರಿ, ಬಯೋಸೈನ್ಸ್ ಗಳ ಮಾಡೆಲ್‌ಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿ ಫಾರಿನ್ ಸಿಕ್ ಲ್ಯಾಬ್‌ಗಳಲ್ಲಿ ಫಿಂಗರ್ ಪ್ರಿಂಟ್ ಹೇಗೆ ತೆಗೆಯಲಾಗುತ್ತದೆ ಹಾಗೂ ಡಿಎನ್‌ಎ ಟೆಸ್ಟ್ ಮತ್ತು ಗ್ಯಾಲಕ್ಸಿ, ತ್ರಿಡಿ ಪ್ರಾಜೆಕ್ಟರ್‌ಗಳು, ವಿಆರ್, ರಕ್ತಪರೀಕ್ಷೆ ಮಾಡೆಲ್‌ಗಳು, ಸ್ಟಾರ್ಚ್‌ಗಳನ್ನು ತೆಗೆಯುವುದು ತಮ್ಮ ವಯಸ್ಸಿಗೆ ಮೀರಿದ ವಿಜ್ಞಾನ ಪ್ರದರ್ಶನಗಳನ್ನು ಮಕ್ಕಳು ಮಾಡಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಮಾತನಾಡಿ, ನಮ್ಮ ಶಾಲೆಯಲ್ಲಿ ವಿಜ್ಞಾನವನ್ನು ಪ್ರತಿನಿತ್ಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ಪಾಲಕರು ಪಾಲ್ಗೊಂಡು ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ತುಂಬಾ ಸಂತೋಷದಿಂದ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಮಾಡುತ್ತಿರುವುದರಿಂದ ಮಕ್ಕಳು ಸಂತೋಷದಿಂದ ಪ್ರತಿಯೊಂದು ವಿಷಯದಲ್ಲೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಹಾಗೂ ಕಲಿಯುತ್ತಿದ್ದಾರೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಈ ಸಂದರ್ಭಧಲ್ಲಿ ಶಿಕ್ಷಕರಾದ ಚಂಪರಾಣಿ, ತೇಜಸ್ವಿನಿ, ತಿಮ್ಮಪ್ಪ, ಸಿದ್ದೇಶ್, ಮುತ್ತ, ಕುಮುದಿನಿ, ವಿಜಯಲಕ್ಷ್ಮಿ, ಶಾಂತ, ಚಂದ್ರಶೇಖರ್ ಕುಂಬಾರ್, ಮಂಜುನಾಥ್ ತಳವಾರ್, ಮಂಜುನಾಥ್, ಪ್ರಸಾದ್, ಶ್ವೇತ, ತಿಮ್ಮಪ್ಪ, ಮಂಜುನಾಥ್, ಶ್ರೀದೇವಿ, ವೀರಯ್ಯ, ಅಸ್ಮ ಸೇರಿದಂತೆ ಇತರ ಶಿಕ್ಷಕರು ಇದ್ದರು.

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ದೇವರಾಜ ಬೂದುಗುಂಪ ನೇಮಕ

ಗಂಗಾವತಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ನರಸಿಂಹಲು ಚಿಂತಲಕುಂಟ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರುಗಳ ನೇತೃತ್ವದಲ್ಲಿ ಮಾರ್ಚ್-೩ ಸೋಮವಾರ ಗಂಗಾವತಿ ನಗರದ ಸರ್ಕೀಟ್ ಹೌಸ್‌ನಲ್ಲಿ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರನ್ನಾಗಿ ದೇವರಾಜ ಬೂದುಗುಂಪ ಅವರನ್ನು ನೇಮಕ ಮಾಡಲಾಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿಯವರು ನೇಮಕಾತಿ ಆದೇಶ ಪತ್ರ ನೀಡಿ, ಕಾರಟಗಿ ತಾಲ್ಲೂಕ ಕೇಂದ್ರದಾಧ್ಯಂತ ಪ್ರವಾಸ ಮಾಡಿ ಅಥವಾ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆ ಬಲಪಡಿಸಲು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಸಂಭ್ರಮ, ಪ್ರಭಾವಳಿ ಸಮರ್ಪಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಇದೇ ಮಾರ್ಚ್ 5 ಬುಧವಾರ ರಂದು ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಟಿ ರಾಮಕೃಷ್ಣ ಹಾಗೂ ಟ್ರಸ್ಟ್ ನ ಸದಸ್ಯರುಗಳಾದ ಎಸ್ ಸುರೇಶ್, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ಗುರುರಾಜ್, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್ಪ, ಡಾ|| ಎ.ಎಸ್.ಎನ್ ರಾಜು  ಹಾಗೂ ಕಿರಣ್ ಕುಮಾರ್ ಹೇಳಿದರು.

ಅವರು ಶನಿವಾರದಂದು ದೇವಸ್ಥಾನದ ವಾರ್ಷಿಕೋತ್ಸವ ಆಚರಣೆಗೆ ಸಂಬಂಧಿಸಿದಂತೆ ಭಕ್ತಾದಿಗಳಿಗೆ ಲೋಕ ಕಲ್ಯಾಣಾರ್ಥಕವಾಗಿ ಭೋಗ ಭಾಗ್ಯ, ಆರೋಗ್ಯ, ಐಶ್ವರ್ಯ ಪ್ರಾಪ್ತಿಗಾಗಿ ಹಾಗೂ ನವಗ್ರಹ ದೋಷ ಪರಿಹಾರಕ್ಕಾಗಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಸ್ಥಾಪಿತಗೊಂಡು 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಸಾಯಿಬಾಬಾ ಮಹಾರಾಜರಿಗೆ ಪ್ರಭಾವಳಿಯನ್ನು ಸಮರ್ಪಿಸಲಾಗುತ್ತದೆ ಎಂದು ತಿಳಿಸಿದ ಅವರು, ಅಂದು ಬೆಳಿಗ್ಗೆ ಕಾಕಡ ಆರತಿ. ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು. ಬೆಳಿಗ್ಗೆ 10:30ಕ್ಕೆ ತೀರ್ಥ ಪ್ರಸಾದ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಬೆಳ್ಳಿ ಅಥವಾ ಹಣದ ರೂಪದಲ್ಲಿ ಕಾಣಿಕೆಯನ್ನು ಶ್ರೀ ಸಾಯಿಬಾಬಾ ಅವರಿಗೆ ಸಲ್ಲಿಸುವುದರ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

 

ಮಾರ್ಚ್ 7ರಂದು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ್ ಮಹಾಸ್ವಾಮಿಗಳ ಆಗಮನ: ಕೃಷ್ಣ ಪದಕಿ

ಗಂಗಾವತಿ: ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶೃಂಗೇರಿಯ ಶ್ರೀ ಶಾರದಾ ಪೀಠ 36ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸತ್ವ ಪ್ರಯುಕ್ತ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಅಡಿಯಲ್ಲಿ ಶ್ರೀಮಠದ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರು ಮಾರ್ಚ್-7 ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀ ಶಂಕರ ಸೇವಾ ಸಮಿತಿ ಕೋಟೆ ಕೊಪ್ಪಳ ಅಧ್ಯಕ್ಷರಾದ ಕೃಷ್ಣ ಪದಕಿ. ವೆಂಕಟೇಶ್ ಪದಕಿ. ಶ್ರೀನಿವಾಸ್ ಹಾಗೂ ಡಿವಿ ಜೋಶಿ ಕೊಪ್ಪಳ ಅವರು ಹೇಳಿದರು.

ಅವರು ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೊಪ್ಪಳದ ಪದಕಿ ಟೌನ್ ಶಿಪ್ ಉದ್ದೇಶಿತ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಮಾರ್ಚ್-8 ರಂದು ಜರುಗಲಿದ್ದು, ಪ್ರಯುಕ್ತ ಮಾರ್ಚ್-7 ಶುಕ್ರವಾರ ಸಂಜೆ 6 ಗಂಟೆಗೆ ಪುರ ಪ್ರವೇಶ, ಪೂರ್ಣ ಕುಂಭ ಸ್ವಾಗತದ ಮೂಲಕ ಶುಭ ಯಾತ್ರೆ ಈಶ್ವರ ಪಾರ್ಕ್ ಹೊಸಪೇಟೆ ರಸ್ತೆಯಿಂದ ಕಿನ್ನಾಳ ರಸ್ತೆಯ ಮೂಲಕ ವಾಸವಿ ಮಂಗಲ ಭವನದವರಿಗೆ ಸಕಲ ವಾದ್ಯ ವೈಭವ ಹಾಗೂ ವಿವಿಧ ಬಜನಾ ತಂಡದ ಸದಸ್ಯರೊಂದಿಗೆ ಶ್ರದ್ಧೆ ಭಕ್ತಿಯಿಂದ ಸ್ವಾಗತಿಸಿಕೊಳ್ಳಲಾಗುವುದು.

ಸಂಜೆ 7:30 ಕ್ಕೆ ಶ್ರೀಗಳಿಗೆ ಧೂಳಿ ಪಾದಪೂಜೆ, ಫಲ ಸಮರ್ಪಣೆ,  ಭಿನ್ನ ವತ್ತಳೆ, ಅರ್ಪಣೆಯ ಜೊತೆಗೆ ಆಶೀರ್ವಚನ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದ ಅವರು ಮಾರ್ಚ್‌-8 ಶನಿವಾರ ಬೆಳಗ್ಗೆ ಶ್ರೀಮಠದ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ. 11:30 ಕ್ಕೆ ಶ್ರೀಗಳಿಗೆ ಭಕ್ತರಿಂದ ಪಾದುಕಾಪೂಜೆ, ವಸ್ತ್ರ ಸಮರ್ಪಣೆ, ದೀಕ್ಷಾ ವಂದನೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಶ್ರೀಗಳಿಂದ ಪರ ಮಂತ್ರಾಕ್ಷತೆ ಹಾಗೂ ಮಹಾಪ್ರಸಾದದೊಂದಿಗೆ ಸಂಪನ್ನಗೊಳ್ಳುವುದು ಎಂದು ತಿಳಿಸಿದ ಅವರು ಈ ಒಂದು ಧಾರ್ಮಿಕ. ಆಚರಣೆಗೆ ಗಂಗಾವತಿಯ ಶಂಕರ ಮಠದ ಹಾಗೂ ಆಸ್ತಿಕ ಬಂಧುಗಳು ಭಾಗವಿಸುವಂತೆ ಮನವಿ ಮಾಡಿದರು.

ಇದಕ್ಕೆ ಸಂಬಂಧಿಸಿದಂತೆ ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ಅನುಪಸ್ಥಿತಿಯಲ್ಲಿ ರಾಘವೇಂದ್ರ ಅಳವಂಡಿಕರ್ ಮಾತನಾಡಿ, ಕೊಪ್ಪಳದಲ್ಲಿ ಶಂಕರಮಠ ನಿರ್ಮಾಣಗೊಳ್ಳುತ್ತಿರುವುದು ಅತ್ಯಂತ ಸಂತಸದಾಯಕವಾಗಿದೆ. ತಮ್ಮ ಮೇಲಿನ ಎರಡು ದಿನದ ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸುವುದರ ಮೂಲಕ ತುಂಬು ಹೃದಯದ ಸಹಕಾರವನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದರು.

ಗಂಗಾವತಿ ತಾಲೂಕಿನ ಆಚಾರನರಸಾಪೂರದಲ್ಲಿ ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬ ಅದ್ದೂರಿ ಆಚರಣೆ

ಗಂಗಾವತಿ: ಇತ್ತೀಚೆಗೆ ಫೆಬ್ರವರಿ-೨೧ ರಂದು ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬವನ್ನು ತಾಲೂಕಿನ ಆಚಾರ ನರಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು ಎಂದು ಮರಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಕೆ.ಎಂ ರವರು ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಈ ಕಲಿಕಾ ಹಬ್ಬದಲ್ಲಿ ಶಿಕ್ಷಣ ಪ್ರೇಮಿ ನಾಗರಾಜ ಬರಗೂರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಟಗಿ ವಲಯದ ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಪಿ.ಸಿ ಇವರು ದೀಪ ಬೆಳಗಿಸುವುದರೊಂದಿಗೆ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ನಾಗರಾಜ್ ಬರಗೂರು ಮಾತನಾಡಿ ಶಾಲೆಯ ಶ್ರೇಯೋಭಿವೃದ್ಧಿಗಾಗಿ ನಾವು ಸದಾ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮರಳಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಸುಮಂಗಳ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹನುಮಂತಪ್ಪ, ಚಂದ್ರೇಗೌಡ, ಚನ್ನಮಲ್ಲಿಕಾರ್ಜುನ ಮಠ ಟ್ರಸ್ಟ್ ಕಮಿಟಿಯ ಸದಸ್ಯರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ಗಾದಿಲಿಂಗಪ್ಪ, ಲಿಂಗನಗೌಡ ಎಂ.ಪಿ., ದ್ಯಾಮಣ್ಣ ಊರಿನ ಗಣ್ಯರು, ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ಲಸ್ಟರ್‌ನ ಎಲ್ಲಾ ಶಾಲೆಯ ಮುಖ್ಯ ಗುರುಗಳು ಹಾಗೂ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಕುರಿತ “ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್” ಪುಸ್ತಕ ಗಣ್ಯಮಾನ್ಯರಿಂದ ಬಿಡುಗಡೆ

ಗಂಗಾವತಿ: ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗುಂದಿ ಸಂಸ್ಥಾನದ ಮಹಾರಾಜರಾಗಿರುವ ಶ್ರೀ ಕೃಷ್ಣದೇವರಾಯ ಹಾಗೂ ಶ್ರೀಮತಿ ರತ್ನಶ್ರೀರಾಯ್ ಅವರ ಪುತ್ರರಾದ ತಿರುಮಲ ವೆಂಕಟದೇವರಾಯರು ವಿಜಯನಗರ ಸಾಮ್ರಾಜ್ಯದ ವೈಭವ ಕುರಿತು ಬರೆದಿರುವ “ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್” ಪುಸ್ತಕ ಫೆಬ್ರವರಿ-೨೮ ರ ಹಂಪಿ ಉತ್ಸವದಲ್ಲಿ ವಸತಿ ಹಾಗೂ ವಕ್ಫ್ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚವರಾದ ಶಿವರಾಜ ತಂಗಡಗಿಯವರು ಸೇರಿದಂತೆ ಗಣ್ಯಮಾನ್ಯರಿಂದ ಬಿಡುಗಡೆಯಾಯಿತು.

ತಿರುಮಲ ವೆಂಕಟರಾಯರು ಶ್ರೀಕೃಷ್ಣದೇವರಾಯರ ೨೦ನೇ ವಂಶಸ್ಥರು ಮತ್ತು ಆನೆಗುಂದಿ ಸಂಸ್ಥಾನದಲ್ಲಿ ವಿಜಯನಗರದ ಅರಸರ ಉತ್ತರಾಧಿಕಾರಿಯಾಗಿದ್ದು, ಇವರು ಆನೆಗುಂದಿಯ ರಾಜಾ ಶ್ರೀಕೃಷ್ಣದೇವರಾಯರ ಮಗ ಮತ್ತು ರಾಜ ಶ್ರೀ ಅಚ್ಯುತ ದೇವರಾಯರ ಮೊಮ್ಮಗರಾಗಿದ್ದಾರೆ. ಇವರು ಇಂಗ್ಲೆಂಡ್‌ನ ಡರ್ಹಾಮ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ.

ಇದು ಇವರ ಮೊದಲ ಪುಸ್ತಕವಾಗಿದ್ದು, ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಆಕರ್ಷಕ ನಿರೂಪಣೆಯ ರೂಪದಲ್ಲಿ ಹೇಳುವ ಗುರಿಯನ್ನು ಪುಸ್ತಕ ಹೊಂದಿದೆ.

ಸದರಿ ಪುಸ್ತಕವು ಮಾರ್ಚ್ ಕೊನೆಯವಾರದ ನಂತರ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಗಂಗಾವತಿಯ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ವಿನೂತನ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ

ಗಂಗಾವತಿ: ಫೆಬ್ರವರಿ-೨೮ ಶುಕ್ರವಾರದಂದು ಜಯನಗರದಲ್ಲಿರುವ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ ಕಾರ್ಯಕ್ರಮ ಎಂದರೆ ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಾಗುತ್ತಾರೆ ಮತ್ತು ಅವರು ತಮ್ಮ ಆಯ್ಕೆಯ ವಿಷಯದ ಬಗ್ಗೆ ಒಂದು ಪರಿಕಲ್ಪನೆಯನ್ನು ವಿವರಿಸುತ್ತಾರೆ ಅಥವಾ ಸಣ್ಣ ಪ್ರಾತ್ಯಕ್ಷಿಕೆಯನ್ನು ನೀಡುತ್ತಾರೆ.

ಭಾಗವಹಿಸುವಾಗ ವಿದ್ಯಾರ್ಥಿಗಳು ಒಂದು ಪರಿಕಲ್ಪನೆಯನ್ನು ಉತ್ತಮವಾಗಿ ಕಲಿಯಲು ಪ್ರೇರೇಪಿಸಲ್ಪಡುತ್ತಾರೆ. ಪ್ರೇಕ್ಷಕರ ಮುಂದೆ ನಿರಾಳವಾಗಿರುವುದು ಕಷ್ಟ. ಅದಕ್ಕಾಗಿಯೇ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಅವರಿಗೆ ಸವಾಲು ಹಾಕುವ ಮೂಲಕ ಅವರ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಸಾಮಾನ್ಯ ಪಠ್ಯಪುಸ್ತಕಗಳನ್ನು ಮೀರಿ ಯೋಚಿಸಲು ಪ್ರೋತ್ಸಾಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಆರಿಸಿಕೊಂಡು ಅದನ್ನು ತಮಗೆ ಇಷ್ಟವಾದ ಸೃಜನಶೀಲ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ.

ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಪೋಷಕರಾಗಿ ಆಗಮಿಸಿದ ಡಾ|| ಹೇಮಲತಾ ಹಾಗೂ ಡಾ|| ನಾಗರಾಜ್ ಅವರು ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಕಾರ್ಯದರ್ಶಿಗಳಾದ ರಾಜಕಿರಣ್ ಇಂಗಳಹಳ್ಳಿ ಹಾಗೂ ಶ್ರೀಮತಿ ಐಶ್ವರ್ಯ ರಾಜಕಿರಣ್ ಇಂಗಳಹಳ್ಳಿ ಹಾಗೂ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅರುಣದೇವಿ ಮೇಡಂ ಅವರು ಕೂಡ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮುಖಾಂತರ ಪ್ರೋತ್ಸಾಹಿಸಿದರು.

ಹಾಗೆಯೇ ವಿದ್ಯಾರ್ಥಿಗಳ ನೇತೃತ್ವ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಮುದಾಯ ಸಹಾಯಕರು, ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮಗೆ ಕೊಟ್ಟಿರುವಂತಹ ವಿಷಯಗಳ ಬಗ್ಗೆ ವಿವರಿಸಿ ಪೋಷಕರ ಗಮನ ಸೆಳೆದರು.

ತದನಂತರ ಎರಡನೆಯ ತರಗತಿಯ ಮಕ್ಕಳು ಭಾರತದ ಏಳು ಅದ್ಭುತಗಳ ಬಗ್ಗೆ ವಿವರಿಸಿದರು. ಅದರಲ್ಲಿ ತಾಜ್‌ಮಹಲ್ ಹಾಗೂ ಹಂಪಿಯ ಚಿತ್ರಗಳು ತುಂಬಾ ಆಕರ್ಷಣೀಯವಾಗಿ ಗಮನಿಸಳೆದವು ಹಾಗೂ ಸಂಚಾರ ಸಂಕೇತಗಳು, ಪ್ರಾಣಿಗಳ ಆಶ್ರಯ, ಗ್ರಾಮೀಣ ಮತ್ತು ನಗರಗಳು ಹಾಗೂ ವಿಧಾನಸೌಧದ ಮಾದರಿಗಳು ಕೇಂದ್ರಬಿಂದುಗಳಾಗಿ ನೋಡುಗರ ಗಮನಸೆಳೆದವು.
ಹಾಗೆ ಮಕ್ಕಳು ಕೇವಲ ಒಂದು ವಿಷಯಕ್ಕೆ ಸೀಮಿತವಾಗದೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಕಂಪ್ಯೂಟರ್, ವಿಷಯಗಳಲ್ಲಿ ತೊಡಗಿಸಿಕೊಂಡು ತಮ್ಮ ಚಾಕಚಾತುರ್ಯವನ್ನು ಹೊರಹಾಕಿದರು.

ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಪೋಷಕರು ಮಕ್ಕಳು ತಯಾರಿಸಿದ ಎಲ್ಲಾ ಮಾದರಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ಚ್-೨ ರಂದು ಸದ್ಧರ್ಮ ಶ್ರೀಗುರುಕುಲದ ದಶಮಾನೋತ್ಸವದಲ್ಲಿ ಆರು ಜನ ಸಾಧಕರಿಗೆ “ಸದ್ಧರ್ಮ ಶ್ರೀ ಪ್ರಶಸ್ತಿ” ಘೋಷಣೆ

ಗಂಗಾವತಿ: ತಾಲೂಕಿನ ಗಡ್ಡಿ ಗ್ರಾಮದ ಸದ್ಧರ್ಮ ಶ್ರೀ ಗುರುಕುಲದ ದಶಮಾನೋತ್ಸವ ಇದೇ ಮಾರ್ಚ್-೨ ಭಾನುವಾರ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಜಾತ ಅಪ್ಪಾಜಿಯವರ ಪವಿತ್ರ ಪುಣ್ಯಾಶ್ರಮದಡಿಯಲ್ಲಿ ಸದ್ಧರ್ಮ ಶ್ರೀ ಗುರುಕುಲದಿಂದ ನೀಡಲಾಗುವ ವಾರ್ಷಿಕ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಜನ ಸಾಧಕರಿಗೆ ಘೋಷಿಸಲಾಗಿದ್ದು, ಪ್ರಶಸ್ತಿಯನ್ನು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಪ್ರಧಾನ ಮಾಡಲಿದ್ದಾರೆ ಎಂದು ಶ್ರೀಮಠದ ಪರಮಪೂಜ್ಯ ಸಂಗಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತಿಹಾಸ ಹಾಗೂ ಗಂಗಾವತಿ ಪರಿಸರದ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಗಂಗಾವತಿ ಕಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಕೋಲ್ಕಾರ, ಗಂಗಾವತಿಯ ಸಾಹಿತಿ, ಸಂಶೋಧಕ ಡಾ.ಎನ್.ಡಿ. ತಿಪ್ಪೇಸ್ವಾಮಿ, ರಂಗಭೂಮಿ ಹಾಗೂ ಪತ್ರಿಕಾರಂಗದ ಸಾಧಕ ನಾಗರಾಜ ಇಂಗಳಗಿ, ಚಿತ್ರಕಲಾ ಕ್ಷೇತ್ರದ ಅನನ್ಯ ಸಾಧಕ ರಾಘವೇಂದ್ರ ಬಯ್ಯಾಪುರ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ಡಾ.ಬಸವರಾಜ ಗವಿಮಠ, ಸಮಾಜ ಸೇವಕ ಟಿ. ಆಂಜನೇಯ ಅವರಿಗೆ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ಮಠಾಧೀಶರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಸದಾನಂದ ಶಿವಯೋಗಿ ಮಠದ ಪರಮಪೂಜ್ಯ ನಾಗಭೂಷಣ ದೇವರು ಸಾನಿಧ್ಯ ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ವಹಿಸಲಿದ್ದು, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕೊಪ್ಪಳ ಎಸ್.ಎಫ್.ಎಸ್. ಶಾಲೆಯ ಪ್ರಾಚಾರ್ಯರಾದ ಪೂಜ್ಯ ಶ್ರೀ ಜಬಲಮಲೈ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಾಥ್, ಡಿ.ವೈ.ಎಸ್.ಪಿ. ಸಿದ್ಧಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ವೆಂಕಟಗಿರಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮ ಪರಸಪ್ಪ ಕಂದಕೂರು, ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ, ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರ್ಜುನ ನಾಯಕ, ವೆಂಕಟಗಿರಿ ಕ್ಲಸ್ಟರ್ ಸಿಆರ್.ಪಿ ಮಲ್ಲಿಕಾರ್ಜುನ, ಬಿಜೆಪಿ ಮುಖಂಡ ಮನೋಹರಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ದಾಸನಾಳ ಗ್ರಾಮದ ಕಾಟಮೇಶ್ವರ ದೇವರ ೧೬ನೇ ವರ್ಷದ ಜಾತ್ರಾ ಮಹೋತ್ಸವ, ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಕಾಟಮೇಶ್ವರ ದೇವರ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥರವರು ಯಾವುದೇ ಸಮುದಾಯದ ಅಭಿವೃದ್ಧಿಗೆ, ಪ್ರಗತಿಗೆ, ಅವರ ಕುಲದೇವರ ಅನುಗ್ರಹ ತುಂಬಾ ಅವಶ್ಯವಾಗಿದೆ. ಅದರಂತೆ ಕುಲ ಗುರುಗಳ ಮಾರ್ಗದರ್ಶನ, ಅವರ ಆಶೀರ್ವಾದವಿದ್ದಲ್ಲಿ ಸಮಾಜವು ಪ್ರಗತಿಯ ಕಡೆಗೆ ಸಾಗಲು ಸಾಧ್ಯ ಎಂದರು.

ಸಮಾಜದ ಎಲ್ಲ ಬಂಧುಗಳು ಎಲ್ಲಾ ಸಮಾಜ ಬಾಂಧವರೊಂದಿಗೆ ಸಾಮರಸ್ಯದಿಂದ ಬದುಕು ನಡೆಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಗಂಗಾವತಿಯ ವಕೀಲರು ಮತ್ತು ನಗರಸಭೆಯ ಕಾನೂನು ಸಲಹೆಗಾರರಾದ ನಾಗರಾಜ್ ಎಸ್. ಗುತ್ತೇದಾರ್ ರವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸಮುದಾಯದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಗುರು ಪರಂಪರೆಯನ್ನು, ದೈವತ್ವವನ್ನು ನಂಬಿ ನಡೆದಾಗ ಜೀವನ ಸಮೃದ್ಧವಾಗಲು ಸಾಧ್ಯ. ಸಮುದಾಯದ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಕಡೆಗೆ ಗಮನಹರಿಸಬೇಕು ಎಂದರು.

೧೪ನೇ ವರ್ಷದ ತುಲಾಭಾರ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿಗಳಾದ ಶ್ರೀ ರೇಣುಕಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ನಾರಾಯಣ ಗುರುಗಳ ಚಿಂತನೆ ಪರಂಪರೆಯನ್ನು ಸಮಾಜದ ಬಂಧುಗಳು ಮನವರಿಕೆ ಮಾಡಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಸಾಗಬೇಕು ಹಾಗೂ ಮಕ್ಕಳಿಗೆ ಮೌಲ್ಯಾಧಾರಿತ ಜೀವನವನ್ನು ರೂಪಿಸುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು.

ಈ ವರ್ಷದ ಕಾರ್ಯಕ್ರಮದಲ್ಲಿ ಹಲವು ಭಕ್ತಾದಿಗಳು ಶ್ರೀ ನಾರಾಯಣ ಗುರು ಮಾಲೆಯನ್ನು ಧರಿಸಿದ್ದು ವಿಶೇಷವಾಗಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾಸನಾಳ ಗ್ರಾಮದ ಬಸವಣ್ಣಯ್ಯ ಶಾಸ್ತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಘದ ಕಾರಟಗಿ ತಾಲೂಕ ಅಧ್ಯಕ್ಷರಾದ ಈ.ವಿರೇಶ ಮರ್ಲಾನಹಳ್ಳಿ, ಕನಕಗಿರಿ ತಾಲೂಕ ಅಧ್ಯಕ್ಷರಾದ ಈ.ನಾಗೇಶ ಚಿಕ್ಕಡಂಕನಕಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಈ.ಶ್ರೀಕಾಂತ್ ಮರ್ಲನಹಳ್ಳಿ, ಶ್ರೀಹರಿಬಾಬು ಕಾರಟಗಿ. ಶ್ರೀನಾಥ ಕಾರಟಗಿ. ಶರಣಪ್ಪ ಮೈಲಾಪುರ್, ರಾಘವೇಂದ್ರ ಜಂತಕಲ್, ಶೇಖರಪ್ಪ ಚಳ್ಳೂರು, ಪ್ರಭು ಬಸಾಪಟ್ಟಣ, ರಂಗಪ್ಪ ಆರಾಳ, ಹನುಮಂತರಾಯ ವಡ್ಡರಹಟ್ಟಿ, ಭುವನೇಶಪ್ಪ ಉಡುಮಕಲ್, ತುಕಾರಾಮಪ್ಪ ಕಲಿಕೆರಿ, ಶರಣಪ್ಪ ಉಳೇನೂರು, ರಾಜಶೇಖರ್ ವೆಂಕಟಗಿರಿ, ಮಾರುತೇಶ ಊರಮುಂದಲರ, ಈ.ಮಾರ್ಕಂಡಯ್ಯ, ಪ್ರಕಾಶ್, ಬಸವರಾಜ್, ನಿರುಪಾದಿ, ರಾಜಕುಮಾರ, ರಾಜಶೇಖರ್, ವಿರುಪಣ್ಣ ಕುಣಿಕೇರಿ ಹಾಗೂ ವಿವಿಧ ತಾಲೂಕು ಜಿಲ್ಲೆಗಳಿಂದ ಸಾಕಷ್ಟು ಜನ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು.

VISHWAROOPA NEWS BLOG

Infinite

Skip to content ↓