ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು ಎಂದಿದ್ದ ಗಾಂಧೀಜಿ

ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ಮೂರು ವರ್ಷ ಕಳೆದಿದೆ. ನಮ್ಮ ಅಕ್ಕ ಬಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ಬಂದರ್. ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ ನೋಡಿದ್ದು ದ್ವಾರಕಾ ನೋಡಲು ಆಸಕ್ತಿ ಮೂಡಿಸಿದ್ದರೆ ಗಾಂಧೀಜಿಯವರ ಜನ್ಮಸ್ಥಳ ವೀಕ್ಷಣೆಗೆ ಅವರ ಆತ್ಮಕಥೆ ಪ್ರೇರಣೆ ಆಗಿತ್ತು. ನನ್ನ ಪತ್ನಿಯದು ಧಾರ್ಮಿಕ ನೋಟ ನನ್ನದು ಐತಿಹಾಸಿಕ ಓದು ವೀಕ್ಷಣೆ. ನಾವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದು ಅಹಮದಬಾದ್‌ಗೆ. ಅಲ್ಲಿಂದ ಬೆಂಗಳೂರಿನ ನೇತಾಜಿ ಟೂರಿಸ್ಟ್ ಸಂಸ್ಥೆಯವರು ಬಸ್ ವ್ಯವಸ್ಥೆ ಮಾಡಿದ್ದರು. ಹತ್ತು ದಿನಗಳ ಟೂರ್‌ನಲ್ಲಿ ಬಸ್‌ನಲ್ಲಿ ಜರ್ನಿ ಮಾಡಿದ್ದೇ ಹೆಚ್ಚು. ಗಾಂಧೀಜಿಯವರ ಆತ್ಮಕಥೆ ಓದುತ್ತಾ ನಮ್ಮ ಪ್ರವಾಸದ ನೆನಪು ಮರುಕಳಿಸಿತು.

ಪೋರ್‌ ಬಂದರ್ ಜುನಾಗಡ ಜಿಲ್ಲೆಯ ಒಂದು ರೇವು ಪಟ್ಟಣ. ಇಲ್ಲೇ ಮಹಾತ್ಮಗಾಂಧಿ ಜನಿಸಿದ್ದು. ಇದು ಜೇತ್ವಾ ರಜಪೂತರ ನಿಯಂತ್ರಣದಲ್ಲಿತ್ತು. ಬ್ರಿಟಿಷರು ಸ್ಥಾಪಿಸಿದ ಕಾಠಿಯಾವಾಡ ಸಂಸ್ಥಾನಗಳಲ್ಲಿ ಒಂದಾದ ಪೋರ್‌ಬಂದರ್ ಸಂಸ್ಥಾನಕ್ಕೆ ಇದು ೧೯೭೫ರಿಂದ ೧೯೪೮ರವರೆಗೆ ರಾಜಧಾನಿಯಾಗಿತ್ತು. ಭಾರತ ಸ್ವಾತಂತ್ರ್ಯ ನಂತರ ಮುಂಬೈ ಪ್ರಾಂತಕ್ಕೆ ಸೇರಿದ ಇದು ಮುಂದೆ ೧೯೬೦ರಲ್ಲಿ ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ಅದರ ಭಾಗವಾಯಿತು. ಇದನ್ನು ಸುಧಾಮನಗರ ಎಂದೂ ಕರೆಯಲಾಗುತ್ತದೆ.

ಕೀರ್ತಿಮಂದಿರವು ಮಹಾತ್ಮಗಾಂಧಿಯವರು ಜನಿಸಿರುವ ಪೋರಬಂದರ್ ನಗರದಲ್ಲಿರುವ ಒಂದು ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿಯವರು ಬಳಸಿದ ವಸ್ತುಗಳು ಗಾಂಧೀಜಿ ಹಾಗೂ ಕಸ್ತೂರ್‌ ಬಾ ಅವರ ಆಳೆತ್ತರದ ಹಲವು ಹಳೆಯ ಛಾಯಾಚಿತ್ರಗಳಿವೆ. ಗಾಂಧೀಜಿಯವರು ಬರೆದಿರುವ ಹಾಗೂ ಅವರ ತತ್ವಗಳಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಗಾಂಧೀಜಿಯವರ ಪೂರ್ವಜರ ಮನೆಗೆ ಪ್ರವೇಶಿಸಬಹುದು. ಗಾಂಧೀಜಿಯವರನ್ನು ೧೯೪೪ರಲ್ಲಿ ಬ್ರಿಟಿಷರು ಆಗಾಖಾನ್ ಅರಮನೆಯಿಂದ ಕೊನೆಯ ಬಾರಿಗೆ ಬಿಡುಗಡೆ ಮಾಡಿದಾಗ ಪೋರ್ ಬಂದರ್‌ನ ಸ್ಥಳೀಯರು ಅವರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲು ಯೋಚಿಸಿ ಗಾಂಧೀಯವರ ಲಿಖಿತ ಒಪ್ಪಿಗೆ ಪಡೆದರು. ಈ ಮನೆಯೂ ಈಗ ಕೀರ್ತಿ ಮಂದಿರ ಸಂಕೀರ್ಣದ ಒಂದು ಭಾಗವಾಗಿದೆ. ಮೂಲ ಮೂರು ಅಂತಸ್ತಿನ ಮನೆಯನ್ನು ಹವೇಲಿಯಂತೆ (ಉಪ್ಪರಿಗೆ ಮನೆ) ನಿರ್ಮಿಸಲಾಗಿದೆ. ಇದನ್ನು ೧೭ನೇ ಶತಮಾನದಲ್ಲಿ ಗಾಂಧೀಜಿ ಮುತ್ತಜ್ಜ ಹರಜೀವನ್ ರೈದಾಸ್ ಗಾಂಧಿ ಖರೀದಿಸಿದ್ದರು. ಗಾಂಧೀಯವರ ತಂದೆ ಕರಮ್‌ಚಂದ ಗಾಂಧಿ, ಚಿಕ್ಕಪ್ಪ ತುಳಸಿದಾಸ ಗಾಂಧಿ ಮತ್ತು ಅಜ್ಜ ಉತ್ತಮ್ ಚಂದ್ ಗಾಂಧಿ ಇಲ್ಲಿ ವಾಸಿಸುತ್ತಿದ್ದರು.

೧೯೯೭ರಲ್ಲಿ ಗಾಂಧೀಜಿ ಬದುಕಿರುವಾಗಲೇ ದರ್ಬಾರ್ ಗೋಪಾಲ್‌ದಾಸ್ ದೇಸಾಯಿ ಅವರು ಕೀರ್ತಿ ಮಂದಿರಕ್ಕೆ ಅಡಿಪಾಯ ಹಾಕಿದರು. ಮನೆಯನ್ನು ಖರೀದಿಸಲು ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ನಂಜಿಬಾಯಿ ಕಾಳಿದಾಸ ಮೆಹ್ತಾ ಅವರು ಧನ ದಾನ ಮಾಡಿದ್ದರು. ಈ ಸ್ಮಾರಕವು ೧೯೫೦ರಲ್ಲಿ ಪೂರ್ಣಗೊಂಡು ಅಂದಿನ ಗೃಹ ಸಚಿವರು ಸರ್ದಾರ್ ವಲ್ಲಭಬಾಯಿ ಪಟೇಲರು ತಾ. ೨೭-೫-೧೯೫೦ರಲ್ಲಿ ಇದನ್ನು ಉದ್ಘಾಟಿಸಿ ಇದನ್ನು ಬಾರತ ಸರ್ಕಾರಕ್ಕೆ ನೀಡಲಾಯಿತು.
ಕೀರ್ತಿಮಂದಿರ ೭೯ ಅಡಿ ಎತ್ತರವಾಗಿದೆ. ಇದು ಗಾಂಧೀಜಿಯವರ ಜೀವನದ ೭೯ ವರ್ಷ ಗಳನ್ನು ಪ್ರತಿನಿಧಿಸುತ್ತದೆ. ಹಿಂದೂ, ಬೌದ್ಧ, ಜೈನ ಮತ್ತು ಪಾರ್ಸಿ ದೇವಾಲಯಗಳ ವಾಸ್ತುಶಿಲ್ಪದ ಅಂಶಗಳನ್ನು ಚರ್ಚ್ ಮತ್ತು ಮಸೀದಿಯನ್ನು ಒಳಗೊಂಡಿದೆ. ಗಾಂಧೀಜಿ ಮತ್ತು ಕಸ್ತೂರಬಾ ಅವರ ಅಳೆತ್ತರದ ತೈಲ ವರ್ಣಚಿತ್ರಗಳು ಇಲ್ಲಿವೆ. ಮಗನ್ ಲಾಲ್ ಮತ್ತು ಮಹಾದೇವ ದೇಸಾಯಿ ಅವರ ಸ್ಮಾರಕಗಳ ಎರಡು ಕೊಠಡಿಗಳು, ಕೋಣೆ ವಸ್ತು ಸಂಗ್ರಹಾಲಯದ ಕೊಠಡಿಗಳಲ್ಲಿ ಖಾದಿ ಭಂಡಾರದ ವಸ್ತುಗಳು ಪುಸ್ತಕ ಮಾರಾಟ ಕೇಂದ್ರವಿದೆ. ಕೀರ್ತಿ ಮಂದಿರದಲ್ಲಿ ಗಾಂಧೀಜಿ ಹುಟ್ಟಿದ ಸ್ಥಳವನ್ನು ಗುರುತಿಸಲು ಸ್ವಸ್ತಿಕ್ ಚಿನ್ಹೆಯಿಂದ ದಾಖಲಿಸಲಾಗಿದೆ. ನಾನು ಅಲ್ಲಿ ನಿಂತು ಮಡದಿ ಶಕುಂತತಿಗೆ ಪೋಟೋ ತೆಗೆಯಲು ಹೇಳಿದೆ.

ಗಾಂಧೀಜಿ ತಮ್ಮ ಆತ್ಮಕಥೆ ನನ್ನ ಸತ್ಯಾನ್ವೇಷಣೆಯ ಮೊದಲ ಭಾಗದಲ್ಲಿ ಬರೆಯುತ್ತಾರೆ. ಗಾಂಧಿ ಮನೆತನದವರು ಬನಿಯಾ ಜಾತಿಯವರು. ಅವರು ಮೊದಲಿಗೆ ಕಿರಾಣಿ ಅಂಗಡಿ ವ್ಯಾಪಾರಿಗಳೆಂದು ಕಾಣುತ್ತದೆ. ಆದರೆ ನಮ್ಮ ತಾತನಿಂದ ಮೂರು ತಲೆಮಾರಿನವರು ಕಾಘೇವಾಡದ ಬೇರೆ ಬೇರೆ ಸಂಸ್ಥಾನಗಳಲ್ಲಿ ದಿವಾನರಾಗಿದ್ದರು. ನಮ್ಮ ತಾತ ಉತ್ತಮ್‌ ಚಂದ್ ಅಥವಾ ಓತಾ ಗಾಂಧೀ ನಿಯಮ ನಿಷ್ಠೆಯುಳ್ಳ ವ್ಯಕ್ತಿಯಾಗಿದ್ದಿರಬೇಕು. ಪೋರ್‌.ಬಂದರಿನ ದಿವಾನರಾಗಿದ್ದ ಆತ ಅಲ್ಲಿ ನಡೆದ ಆಸ್ಥಾನದ ಪಿತೂರಿಗಳಿಂದಾಗಿ ಆ ಸಂಸ್ಥಾನವನ್ನು ಬಿಟ್ಟು ಜುನಾಗಢದಲ್ಲಿ ಆಶ್ರಯವನ್ನು ಪಡೆಯಬೇಕಾಯಿತು. ಅಲ್ಲಿ ಆತ ನವಾಬನಿಗೆ ಎಡಗೈಯಿಂದ ಸಲಾಮು ಮಾಡಿದನು. ಇದನ್ನು ನೋಡಿದವರೊಬ್ಬರು ಈ ಅವಿನಯದ ಕಾರಣವನ್ನು ಕೇಳಿದರು. ಆತ ‘ಬಲಗೈ ಮೊದಲೇ ಪೋರ್‌ ಬಂದರ್ ಸಂಸ್ಥಾನಕ್ಕೆ ಮೀಸಲಾಗಿದೆ’ ಎಂದು ಉತ್ತರ ಕೊಟ್ಟನು.

ನಮ್ಮ ತಂದೆ ಪೋರ್‌ ಬಂದರನ್ನು ಬಿಟ್ಟು ರಾಜಕೋಟೆಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ ನನಗೆ ಕೇವಲ ಏಳು ವರ್ಷಗಳು. ಅಲ್ಲಿ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ಆ ದಿನಗಳಲ್ಲಿ ನನಗೆ ಬೋಧಿಸಿದ ಉಪಾಧ್ಯಾಯರ ಹೆಸರುಗಳು ಮೊದಲಾದ ವಿವರಗಳೆಲ್ಲಾ ನನಗೆ ಚೆನ್ನಾಗಿ ನೆನಪಿದೆ. ಪೋರ್‌ ಬಂದರ್‌ನಲ್ಲಿ ಇದ್ದಂತೆಯೇ ಇಲ್ಲಿಯೂ ನನ್ನ ವಿದ್ಯಾಭ್ಯಾಸದ ವಿಷಯದಲ್ಲಿ ಹೇಳಬೇಕಾದ ಹೆಚ್ಚಿನದೆನೂ ಇಲ್ಲ.

ಪ್ರೌಢಶಾಲೆ ಮೊದಲನೇ ವರ್ಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆ.ಹೇಳಬೇಕು. ಇನ್‌ಸ್ಪೆಕ್ಟರ್ ಮಿ. ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದಿದ್ದರು. ಅವರ ಮೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ಪದಗಳನ್ನು ಬರೆಯಲು ಕೊಟ್ಟರು. ಇವುಗಳ ಪೈಕಿ ಕೆಟಲ್ ಎಂಬ ಪದವೂ ಒಂದು. ನಾನು ಅದನ್ನು ತಪ್ಪಾಗಿ ಬರೆದೆ. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ನನ್ನನ್ನು ಎಚ್ಚರಿಸಲು ಪ್ರಯತ್ನಿಸಿದರು. ನಾನು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ನನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ಉಪಾಧ್ಯಾಯರ ಉದ್ದೇಶ. ಅದು ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ನಾವು ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ನಾನು ತಿಳಿದಿದ್ದೆ. ಇದರ ಪರಿಣಾಮವಾಗಿ ನನ್ನನ್ನು ಹೊರತು ಉಳಿದ ಹುಡುಗರೆಲ್ಲಾ ಐದು ಪದಗಳನ್ನು ಸರಿಯಾಗಿ ಬರೆದಿದ್ದರು. ನಾನೊಬ್ಬನೇ ದಡ್ಡ. ಇದಾದ ಮೇಲೆ ಉಪಾಧ್ಯಾಯರು ನನ್ನ ಮೂರ್ಖತನವನ್ನು ನನಗೆ ತೋರಿಸುವುದಕ್ಕೆ ಪ್ರಯತ್ನಪಟ್ಟರು. ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು ಕಾಪಿ ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ.

ಇದೇ ಸಮಯದಲ್ಲಿ ನಡೆದ ಮತ್ತೆರಡು ಸಂಗತಿಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿದಿದೆ. ಪಠ್ಯ ಪುಸ್ತಕಗಳನ್ನು ಹೊರತು ಬೇರೆ ಏನನ್ನೂ ಓದುವುದು ಸಾಧಾರಣವಾಗಿ ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನಂತೂ ಓದಲೇಬೇಕಾಗಿತ್ತು. ಉಪಾಧ್ಯಾಯರು ನನ್ನನ್ನು ಗುರುತಿಸುವುದು ನನಗೆ ಇಷ್ಟವಿರಲಿಲ್ಲ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿರಲಿಲ್ಲ. ಆದುದರಿಂದ ಪಾಠವನ್ನೇನೊ ಓದುತ್ತಿದ್ದೆ. ಆದರೆ ಪಾಠದಲ್ಲಿ ಮನಸ್ಸು ಇರುತ್ತಿರಲಿಲ್ಲ. ಹೀಗೆ ಪಾಠಗಳನ್ನೇ ಸರಿಯಾಗಿ ಓದುತ್ತಿರಲಿಲ್ಲವೆಂದ ಮೇಲೆ ಇನ್ನು ಹೆಚ್ಚಿನ ವ್ಯಾಸಂಗದ ಪ್ರಶ್ನೆ ಎಲ್ಲಿ ಬಂತು. ಆದರೆ ಹೇಗೋ ನಮ್ಮ ತಂದೆ ಕೊಂಡುಕೊಂಡು ಬಂದಿದ್ದ ಒಂದು ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದರ ಹೆಸರು ಶ್ರವಣ ಪಿತೃ ಭಕ್ತಿ ನಾಟಕ. ಅದನ್ನು ನಾನು ಅತ್ಯಂತ ಆಸಕ್ತಿಯಿಂದ ಓದಿದೆ. ಅದೇ ಸಮಯದಲ್ಲಿ ಸಂಚಾರಿ ಬೊಂಬೆ ಪ್ರದರ್ಶಕರು ನಮ್ಮ ಊರಿಗೆ ಬಂದರು. ಅವರು ನನಗೆ ತೋರಿಸಿದ ಒಂದು ಚಿತ್ರ ಶ್ರವಣ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪುಸ್ತಕ ಆ ದೃಶ್ಯ ಎರಡೂ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂಕಿತವಾದವು. ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಸರಿಸು ಎಂದು ನನಗೆ ನಾನೇ ಹೇಳಿಕೊಂಡೆ. ಶ್ರವಣ ಮರಣ ಹೊಂದಲು ಅವನ ಮಾತಾಪಿತೃಗಳ ಆರ್ತ ವಿಲಾಪ ನನ್ನ ಕಿವಿಗೆ ಈಗಲೂ ಕೇಳುವಂತಿದೆ. ಆ ರಾಗ ನನ್ನ ಹೃದಯವನ್ನು ಕರಗಿಸಿತು. ನಮ್ಮ ತಂದೆ ಕೊಂಡುಕೊಟ್ಟಿದ್ದ ರಾಗಮಾಲಿಕೆಯಲ್ಲಿ ಅದನ್ನು ಬಾರಿಸಲು ಕಲಿತೆ.

ಮತ್ತೊಂದು ನಾಟಕಕ್ಕೆ ಸಂಬಂಧಿಸಿದಂತೆ ಇದೇ ಬಗೆಯ ಪ್ರಸಂಗ ನಡೆಯಿತು. ಆ ಕಾಲದಲ್ಲಿ ಒಂದು ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ ನಾಟಕವೊಂದನ್ನು ನೋಡಲು ನಮ್ಮ ತಂದೆಯವರು ನನಗೆ ಅನುಮತಿ ಕೊಟ್ಟಿದ್ದರು. ಅದು ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಷ್ಟು ನೋಡಿದರೂ ನನಗೆ ತೃಪ್ತಿಯ ಆಗಲಿಲ್ಲ. ಆದರೆ ಎಷ್ಟು ಸಲ ನೋಡಲು ಅನುಮತಿ ಕೊಟ್ಟಾರು? ಅದರ ಹುಚ್ಚು ನನ್ನನ್ನು ಹಗಲು ರಾತ್ರಿ ಬಿಡಲೇ ಇಲ್ಲ. ಲೆಕ್ಕವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ. ಎಲ್ಲರೂ ಏಕೆ ಹರಿಶ್ಚಂದ್ರರಂತೆ ಸತ್ಯಸಂಧನಾಗಿರಬಾರದು.? ಇದೇ ಹಗಲೂ ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶ. ಹರಿಶ್ಚಂದ್ರನ ಕಥೆಯನ್ನು ನಾನು ಅಕ್ಷರಶ: ನಂಬಿದೆನು. ನೆನಪು ಮಾಡಿಕೊಂಡು ಪದೇ ಪದೇ ಅಳುತ್ತಿದ್ದೆ. ಹರಿಶ್ಚಂದ್ರ ಐತಿಹಾಸಿಕ ವ್ಯಕ್ತಿ ಆಗಿರಲಾರ ಎಂಬುದು ಇಂದು ನನ್ನ ಬುದ್ಧಿಗೆ ಗೋಚರಿಸುತ್ತಿದೆ. ಆದರೆ ನನ್ನ ಮಟ್ಟಿಗೆ ಹರಿಶ್ಚಂದ್ರ, ಶ್ರವಣ ಇಬ್ಬರೂ ಜೀವಂತ ವ್ಯಕ್ತಿಗಳು. ಆ ನಾಟಕಗಳನ್ನು ಓದಿದರೆ ಮತ್ತೆ ಮೊದಲಿನಂತೆ ನಾನು ಕಣ್ಣೀರು ಹಾಕದೆ ಇರಲಾರನೆಂಬುದು ನನ್ನ ನಂಬಿಕೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಸತತ ಅಧ್ಯಯನ ಮೂಲಕ ಚುಟುಕು ಸಾಹಿತ್ಯದ ಶ್ರೀಮಂತಿಕೆ. ಜಿಲ್ಲಾ ಮಟ್ಟದ ೩ನೆಯ ಕವಿಗೋಷ್ಠಿಯಲ್ಲಿ ಕವಿ -ಶಿ.ಕಾ ಬಡಿಗೇರ ಸಲಹೆ

ಕೊಪ್ಪಳ: ಚುಟುಕು ಸಾಹಿತ್ಯಕ್ಕೆ ಅಪಾರ ಮಹತ್ವ ಇದೆ ಉದಯೋನ್ಮುಖ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುಟುಕು ಸಾಹಿತ್ಯ ಅಧ್ಯಯನ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರತ್ನಿಸಬೇಕೆಂದು ಹಿರಿಯ ಸಾಹಿತಿ ಶಿ.ಕಾ.ಬಡಿಗೇರ ಅಭಿಪ್ರಾಯಪಟ್ಟರು.

ಅವರು ಭಾನುವಾರ ಸಮೀಪದ ಭಾಗ್ಯನಗರದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿ ಚುಟುಕು ವಾಚಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ಅಖಂಡ ರಾಯಚೂರು ಜಿಲ್ಲೆ ಇದ್ದಾಗ ಕೊಪ್ಪಳ ಜಿಲ್ಲೆಯ ಅನೇಕ ಸಾಹಿತ್ಯ ಆಸಕ್ತರು ಚುಟುಕು ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ನಡೆಸಲು ಅವಕಾಶ ಬೆಳೆಸಿಕೊಂಡು ಬಂದಿದ್ದಾರೆ ಈಗಲೂ ಸಹ ಪರಿಷತ್ತಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅದರ ಕಾಯ೯ಚಟುವಟಿಕೆಗಳನ್ನು ವಿಸ್ತರಣೆ ಅತ್ಯಂತ ಲವಲವಿಕೆಯಿಂದ ಆಯೋಜನೆ ಮಾಡುತ್ತಿರುವುದು ಸಾಹಿತಿಗಳ ಉತ್ಸಾಹ ತುಂಬುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಯುವ ಸಾಹಿತಿಗಳನ್ನು ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಸಂದೇಶ ಮೂಡಲಿ ಎಂದು ಆಶಿಸಿದರು.

ವಿಶೇಷ ಉಪನ್ಯಾಸ : ಕೊಪ್ಪಳ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆದ ಬಂದ ದಾರಿ ಕುರಿತು ಶಿಕ್ಷಕ, ಸಾಹಿತಿ ಕಲ್ಲಪ್ಪ ಕವಳಕೇರಿ ಮಾತನಾಡಿ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹನೀಯರಲ್ಲಿ ಸಾಕಷ್ಟು ಜನ ಇದ್ದಾರೆ, ಗ್ರಾಮೀಣ ಭಾಗದಲ್ಲಿಯೂ ಸಹ ಸಾಹಿತ್ಯಾಸಕ್ತರಿಗೆ ತಾವು ಪ್ಯಾಂಟು ಶರ್ಟು, ಮಹಿಳೆಯರಿಗೆ ಸೀರೆ ವಿತರಿಸಿ ಸನ್ಮಾನ ಕಾರ್ಯಕ್ರಮ ಮಾಡಿದ ಉದಾಹರಣೆಗಳಿವೆ, ಸಾಹಿತ್ಯ ಆಸಕ್ತರ ಸಂಖ್ಯೆ ಕೊಪ್ಪಳ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿದೆ. ಬಹಳಷ್ಟು ಕವಿಗಳು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಳಪ್ಪ, ವೀರಾಪುರ ವಕೀಲರು ಹಾಗೂ ಅಮಿನ ಸಾಹೇಬ ಮುಲ್ಲಾ ಅವರು ಕನ್ನಡ ಭಾಷೆ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ನಮ್ಮ ಮಾತೃಭಾಷೆಯನ್ನು ಪ್ರೀತಿಸಲೇಬೇಕು, ಎಲ್ಲಾ ಭಾಷೆಗಳನ್ನು ಗೌರವಿಸುತ್ತ, ನಮ್ಮ ಕನ್ನಡವನ್ನು ಬೆಳೆಸೋಣ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡು
ಸಾಹಿತ್ಯದ ಸವಿಯನ್ನು ಎಲ್ಲೆಡೆಯೂ ಪಸರಿಸುವ ಕಾರ್ಯ ಮಾಡೋಣ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮಹಾಂತೇಶ ನೆಲಾಗಣಿ ಅವರು ಸಾಹಿತ್ಯ, ಸಾಂಸ್ಕೃತಿಕ, ಕಾರ್ಯಕ್ರಮಗಳು, ಹೆಚ್ಚು ಹೆಚ್ಚು ನಡೆಯುವುದರಿಂದ ಸಾಹಿತ್ಯವೂ ಬೆಳೆಯುತ್ತದೆ ನಾವೂ ಬೆಳೆಯುತ್ತೇವೆ ಎಂದು ಹೇಳಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕವಿ/ ಕವಿಯತ್ರಿಯರಾದ ಪುಷ್ಪಲತಾ ಯೋಳಭಾವಿ, ಎ.ಪಿ.ಅಂಗಡಿ, ವಿದ್ಯಾಶ್ರೀ . ಇತರರು ಚುಟುಕು ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹಾಂತೇಶ ನೆಲಾಗಣಿ ಅವರನ್ನು ಕವಿಯತ್ರಿ, ಶಿಕ್ಷಕಿ, ವಿದ್ಯಾಶ್ರೀ ಹಿರೇಮಠ ದಂಪತಿಗಳು ಸನ್ಮಾನಿಸಿದರು.

ಸಂಸ್ಕಾರಗಳ ಅನುಕರಣೆ ಮಕ್ಕಳ ಶಿಕ್ಷಣದ ಭಾಗವಾಗಬೇಕು: ನಾಗರಾಜ ಗುತ್ತೇದಾರ

ಕೊಪ್ಪಳ: ಕೊಪ್ಪಳದ ಸೇವಾಭಾರತಿಯ ವಿದ್ಯಾವಿಕಾಸ ಪ್ರಕಲ್ಪದ ಮನೆಪಾಠ ಕೇಂದ್ರಗಳ ವಾರ್ಷಿಕೋತ್ಸವವು ಫೆಬ್ರವರಿ-೦೯ ರಂದು ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಜರುಗಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗಂಗಾವತಿಯ ಸಂಕಲ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆ ಬಗ್ಗೆ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಶ್ರದ್ಧಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಮತಿ ಪಟ್ಟಣಶೆಟ್ಟಿ ಅವರು ಸೇವಾಭಾರತಿಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು.

ಸೇವಾಭಾರತಿಯ ವಿಭಾಗ ಸಂಯೋಜಕರಾದ ಪ್ರಾಣೇಶ ಜೋಶಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಜಯಶ್ರೀ ಪಲ್ಲೇದ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ಶಾರದಾ ಕೊರಗಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಪ್ರಕಲ್ಪದ ಸಮಿತಿಯ ಅಧ್ಯಕ್ಷರಾದ ಅಮರೇಶ ಪಾಟೀಲ, ವಿಶ್ವಸ್ತರಾದ ಮಾ. ಬಸವರಾಜ ಡಂಬಳ, ಸಮಿತಿಯ ಕಾರ್ಯದರ್ಶಿಯಾದ ಮಹಾದೇವಪ್ಪ ಕೌಲಗಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮಹಾಲಕ್ಷ್ಮಿ ಕಂದಾರಿ, ದೀಪಾ ಕುಲಕರ್ಣಿ, ಬಸವರಾಜ ಸಮಗಂಡಿ, ಕಾರ್ಯಕರ್ತರಾದ ಗೀತಾ ಐಲಿ, ಹುಲಿಗೆಮ್ಮ ಉಂಕಿ, ವಿದ್ಯಾವಿಕಾಸ ಪ್ರಕಲ್ಪದ ಭಾಗ್ಯನಗರದ ಹಾಗೂ ಕೊಪ್ಪಳದ ಶಿಕ್ಷಕಿಯರು, ಸೇವಾ ಭಾರತಿಯ ಹಿತೈಷಿಗಳ ೩೫೦ ಕ್ಕೊ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ನಂತರ ನಡೆದ ಪಾಲಕರ ಸಭೆಯಲ್ಲಿ ೯೦ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಮಧ್ಯಾಹ್ನ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಾತೆಯರು ಎಲ್ಲಾ ಮಕ್ಕಳಿಗೆ ಮಾತೃ ಭೋಜನದ ಸವಿಯನ್ನು ಉಣಿಸಿದರು. ಊಟದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೆಪಾಠ ಕೇಂದ್ರದ ಮಕ್ಕಳು ಪ್ರತಿಭಾ ಪ್ರದರ್ಶನ ನೀಡಿದರು.
ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ಫೆಬ್ರವರಿ-೮ ಶನಿವಾರದಂದು ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವೇ||ಮೂ|| ಸಿದ್ದರಾಮಯ್ಯ ಗುರುವಿನ್, ಶ್ರೀ ವೇ||ಮೂ|| ಸಿದ್ದಯ್ಯ ಗುರುವಿನ್ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಶಾಸಕರು ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಇವರು ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ೩೭ ವರ್ಷಗಳಿಂದ ಈ ಸಂಸ್ಥೆಯು ಶಿಕ್ಷಣ ನೀಡುತ್ತಾ ಬಂದಿರುವುದು ಅತ್ಯಂತ ಮಹತ್ವ ಪೂರ್ಣವಾದ ವಿಷಯವಾಗಿದೆ. ಇಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯ. ಇಂತಹ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಗೆ ಶಾಸಕರ ಅನುದಾನದಲ್ಲಿ ಮತ್ತು ವೈಯಕ್ತಿಕವಾಗಿ ಈ ಶಾಲೆಗೆ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ನಂತರ ಶಾಲಾ ಮಕ್ಕಳಿಂದ ರಚಿತವಾದ ‘ಅಕ್ಷರ ದೀವಿಗೆ’ ಎಂಬ ಹಸ್ತಪ್ರತಿಯನ್ನು ಮಾಜಿ ಶಾಸಕರಾದ ಪರಣ್ಣ ಮನವಳ್ಳಿ ಅವರು ಬಿಡುಗಡೆಗೊಳಿಸಿ ಮಾತನಾಡುತ್ತಾ, ಈ ಸಂಸ್ಥೆ ಗ್ರಾಮೀಣ ಭಾಗದಲ್ಲಿ ೧೯೮೯ ರಿಂದ ಶಿಕ್ಷಣ ನೀಡುತ್ತಾ ಬಂದಿರುವುದು ತುಂಬಾ ಸಂತೋಷಕರವಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸಣ್ಣೆಪ್ಪರವರು ಮಾತನಾಡುತ್ತಾ, ಈ ನಮ್ಮ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದಲ್ಲಿದ್ದರೂ ಸಹ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವೈದ್ಯರು, ಸೈನಿಕರು, ಶಿಕ್ಷಣಾಧಿಕಾರಿಗಳಾಗಿ, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿಯವರಿಗೆ ಮತ್ತು ಮಾಜಿ ಶಾಸಕರಾದ ಶ್ರೀ ಪರಣ್ಣ ಮನವಳ್ಳಿ ಅವರಿಗೆ ವಿದ್ಯಾ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ವೇದಿಕೆ ಮೇಲೆ ವಾಣಿಜ್ಯೋದ್ಯಮಿಗಳಾದ ಎಂ ಸರ್ವೇಶ್, ಸಂಸ್ಥೆಯ ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ ಎಚ್., ಆಡಳಿತ ಮಂಡಳಿಯ ಸದಸ್ಯರಾದ ದ್ಯಾಮಪ್ಪ ಅಂಗಡಿ, ಸಣ್ಣಕ್ಕಿ ನೀಲಪ್ಪ, ಹನುಮಂತಪ್ಪ ಗಡ್ಡಿ ವಡ್ಡರಟ್ಟಿ, ಕೆ ಬಾಳಪ್ಪ ವೆಂಕಟಗಿರಿ, ವಾಣಿಕುಮಾರ್ ಕಂಬಳಿ, ಎಚ್ ಹನುಮೇಶ್, ಹನುಮೇಶ್ ಉಣ್ಣೆಕುರಿ ವೆಂಕಟಗಿರಿ, ಶಾಲೆಯ ಮುಖ್ಯಗುರುಗಳಾದ ನಿಂಗಪ್ಪ ಗುಂಡೂರು, ಶಾಲಾ ಶಿಕ್ಷಕ, ಶಿಕ್ಷಕಿಯವರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಪ್ರವೀಣ್‌ಕುಮಾರ್ ಶಿಕ್ಷಕರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ನಾಗಭೂಷಣ ವಾಲ್ಮೀಕಿ ನಿರೂಪಿಸಿ, ಶಿಕ್ಷಕ ಹನುಮೇಶ್ ಬಿಂಗಿ ವಂದಿಸಿದರು.

ನಂತರ ಮಕ್ಕಳಿಂದ ಮನೋರಂಜನ ಕಾರ್ಯಕ್ರಮಗಳು ನಡೆದವು.

ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ಫೆಬ್ರವರಿ-೧೩ ರಿಂದ ೨೪ ರವರೆಗೆ ಸಂಸ್ಕೃತ ಜ್ಞಾನ ಸಂಪಾದನಾ ಶಿಬಿರ

ಗಂಗಾವತಿ: ಶ್ರೀ ಹಾನಗಲ್ಲ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಮತ್ತು ಕನ್ನಡ ಜಾಗೃತಿ ಸಮಿತಿ ಇವರ ಸಹಯೋಗದಲ್ಲಿ ಶ್ರೀ ಗುರು ಕುಮಾರೇಶ್ವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಫೆಬ್ರವರಿ-13 ಗುರುವಾರದಿಂದ, 24 ಸೋಮವಾರದವರೆಗೆ ಪ್ರತಿದಿನ ಸಂಜೆ 5:30 ರಿಂದ 7:೦೦ ರವರೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಸ್ಕೂಲ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಸಂಸ್ಕೃತ ಜ್ಞಾನ ಸಂಪಾದನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅರಳಹಳ್ಳಿ ರಾ.ರಾ ಬೃಹನ್ಮಠದ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಶಿಬಿರದಲ್ಲಿ ಬೋಧಕರಾಗಿ ಗದಗ ಬೆಟಗೇರಿಯ ಸಂಸ್ಕೃತ ಶಿಕ್ಷಕರಾದ ಪೂಜ್ಯ ಶ್ರೀ ಶಾಂತಕುಮಾರ ದೇವರು ಆಗಮಿಸಲಿದ್ದು, ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಹಾಗೂ ನಮ್ಮ ದೇಶದ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಅವಶ್ಯವಿದ್ದು, ಸಂಸ್ಕೃತವು ವಾಕ್‌ಶುದ್ಧಿ, ಜ್ಞಾನದ ಅಭಿವೃದ್ಧಿ, ಸುಸಂಸ್ಕೃತ ನಡೆನುಡಿಯನ್ನು ತಿಳಿಸುವ ಭಾಷೆಯಾಗಿದ್ದು, ಜ್ಞಾನ ಸಾಗರವನ್ನು ಒಳಗೊಂಡ ಸಂಸ್ಕೃತವನ್ನು ಕಲಿಯಲು ಇದೊಂದು ಸುವರ್ಣವಕಾಶವಾಗಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿ ಇರುವುದಿಲ್ಲ. ಸರ್ವ ಸಂಸ್ಕೃತ ಭಾಷಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ತರಬೇತಿಯಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೧೫೦೯೦೮೩೮೫, ೯೬೧೧೭೪೫೩೬೯ ಗೆ ಸಂಪರ್ಕಿಸಬಹುದು.

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು-ಶಿವಸ್ವಾಮಿ.

ಗಂಗಾವತಿ: ನಗರದ ಜೂನಿಯರ್ ಕಾಲೇಜಿನಲ್ಲಿ ಫೆಬ್ರವರಿ-೮ ಶನಿವಾರದಂದು ಕಾಲೇಜು ಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕರಾದ ಶ್ರೀ ಎ.ಎಂ.ಶಿವಸ್ವಾಮಿಯವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಆಗಿ ಹೋದ ಜೀವಪರ ಸಾಹಿತಿಗಳು, ಕವಿಗಳು, ದಾರ್ಶನಿಕರು, ಸಂತರು, ದಾಸರು ಇವರು ಹೇಳಿಕೊಟ್ಟ ಸಾಮರಸ್ಯದ ಬದುಕು ನಮ್ಮದಾಗಬೇಕು. ಇಂತಹ ಮಹನೀಯರ ಸಮಾಜಮುಖಿ ಚಿಂತನೆಗಳು ನೆಮ್ಮದಿಯ ಹೊಸ ಭಾರತ ಕಟ್ಟವುದಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿವೆ ಎನ್ನುವ ವಿಷಯ ಕುರಿತು ಬಹಳ ವಿಸ್ತಾರವಾಗಿ ಮಾತನಾಡಿದರು. ವಿಜ್ಞಾನದ ಸಂಶೋಧನೆಗಳ ಲಾಭವನ್ನು ನಾವು ನಮ್ಮ ಜೀವನದ ಪ್ರತಿ ಹಂತದಲ್ಲಿ ಅನುಭವಿಸುತ್ತಿದ್ದೇವೆ. ಆದರೆ ವೈಜ್ಞಾನಿಕವಾಗಿ ನಾವು ಬದುಕುವುದನ್ನು ರೂಡಿಸಿಕೊಳ್ಳಲೇ ಇಲ್ಲ ಅನ್ನೋದು ದೊಡ್ಡ ದುರಂತ. ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕದ ಅಧ್ಯಯನದ ಜೊತೆಗೆ ಕುವೆಂಪು, ಬಸವಣ್ಣ, ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು, ಕನಕದಾಸರು, ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ ಇವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು. ಈ ಮಹನಿಯರು ಹೇಳಿರುವಂತಹ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವೂ ಬದುಕಿ ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ. ಯಾಕೆಂದರೆ ತಂದೆ ತಾಯಿಯವರ ಋಣಕ್ಕಿಂತಲೂ ಸಮಾಜದ ಋಣ ದೊಡ್ಡದು. ನೀವು ಸಂಪಾದನೆ ಮಾಡಿದ್ದನ್ನು ಬರೀ ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಬಳಸದೆ ಸಮಾಜದ ಹಿತಕ್ಕಾಗಿ ಬಳಸುವುದನ್ನು ಕಲಿತರೆ ಮಾತ್ರ ಜೀವನ ಸಾರ್ಥಕ ಎಂದರು.

ಸಮಾರಂಭವನ್ನು ಕೊಪ್ಪಳ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯ, ಉಲ್ಲಾಸಭರಿತನಾದ ವ್ಯಕ್ತಿ ಹೆಚ್ಚು ಕೆಲಸ ನಿರ್ವಹಿಸಬಲ್ಲ ಹಾಗೂ ಸಾಧನೆ ಮಾಡಬಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಂತೋಷದಿಂದ ಇರಬೇಕೆಂದು ತಿಳಿ ಹೇಳಿದರು.

ಆರಂಭದಲ್ಲಿ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್‌ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಶ್ ಮಡಿವಾಳರ, ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಶ್ರೀಮತಿ ರಮಾ, ಪ್ರೌಢಶಾಲೆಯ ಉಪಪ್ರಚಾರ್ಯರಾದ ಬಸವರಾಜಯ್ಯ ಸ್ವಾಮಿಯವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅಜಗರ್ ಪಾಷಾ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರುಗಳಾದ ಡಾ. ರವಿಚಂದ್ರನ್ ಹಾಗೂ ನಿರುಪಾದಿ ನೆರೆವೇರಿಸಿದರು. ಶ್ರೀಮತಿ ಕನಕಮ್ಮ ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗಪ್ಪ ಎಂ., ಕುಮಾರಸ್ವಾಮಿ ಜಿ., ಈಶ್ವರಪ್ಪ ಸಿ., ಶ್ರೀಮತಿ ಸಾವಿತ್ರಿ ಬಿ., ಶ್ರೀಮತಿ ಲಕ್ಷ್ಮಿ ಜೆ., ರುದ್ರೇಶ ತಬಾಲಿ, ಶ್ರೀಮತಿ ಲಲಿತಾ ಕಂದಗಲ್, ಚಿದಾನಂದ ಮೇಟಿ, ಶ್ರೀಮತಿ ಶ್ರೀದೇವಿ, ಮಹೇಶ, ಶ್ರೀಮತಿ ಕವಿತಾ ಜೆ.ಎಂ. ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಉತ್ತರ ಭಾರತ ವಿಜಯಯಾತ್ರೆ ಪ್ರಯುಕ್ತ ಶಾಖಾಮಠಗಳಲ್ಲಿ ವಿಶೇಷ ಪೂಜೆ: ನಾರಾಯಣರಾವ್ ವೈದ್ಯ

ಗಂಗಾವತಿ: ಶೃಂಗೇರಿಯ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹಗಳೊಂದಿಗೆ ಹಾಗೂ ಪೂಜ್ಯರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಉತ್ತರ ಭಾರತದ ವಿಜಯ ಯಾತ್ರೆಯ ಪ್ರಯುಕ್ತ ೨೦೦ ಕ್ಕೂ ಅಧಿಕ ಶಾಖಾ ಮಠಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಶುಕ್ರವಾರದಂದು ಶ್ರೀಮಠದ ಆವರಣದಲ್ಲಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿ, ಶ್ರೀ ವಿದುಶೇಖರ ಮಹಾಸ್ವಾಮಿಗಳು ಧರ್ಮಯಾತ್ರೆಯ ಪ್ರಯುಕ್ತ ಬಳ್ಳಾರಿ, ಗಂಗಾವತಿ ಹಾಗೂ ಹೊಸಪೇಟೆಯ ಬಳಿಕ ತ್ರಿವೇಣಿ ಸಂಗಮ ಕುಂಭಮೇಳದಲ್ಲಿ ಪುಣ್ಯಸ್ನಾನವನ್ನು ನೆರವೇರಿಸುವುದರ ಮೂಲಕ ಶುಕ್ರವಾರದಂದು ಮೋಕ್ಷಪುರಿ ಕಾಶಿಯಲ್ಲಿ ಶ್ರೀ ಅನ್ನಪೂರ್ಣ ದೇವಿ ಮಂದಿರದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿದ ಪ್ರಯುಕ್ತ ಶ್ರೀಮಠದಲ್ಲಿ ಬೆಳಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಹಾಗೂ ಸಂಜೆ ಶ್ರೀ ಜಗದ್ಗುರು ಶಂಕರಾಚಾರ್ಯರು ರಚಿಸಿದ ಲಲಿತ ಸಹಸ್ರನಾಮ ಪಠಣ, ವಿಶ್ವನಾಥಾಷ್ಠಕ ಪಠಣ, ಶ್ರೀ ಕಾಳಭೈರವಾಷ್ಠಕ ಪಠಣ ಸೇರಿದಂತೆ ಶ್ರೀ ಅನ್ನಪೂಣೇಶ್ವರಿಯ ಮಹಾಪಾರಾಯಣ ಅಪಾರ ಭಕ್ತಾದಿಗಳ ಮಧ್ಯೆ ಶ್ರೀ ಶಾರದಾಶಂಕರ ಭಕ್ತಮಂಡಳಿ ಹಾಗೂ ಇತರೆ ಭಜನಾ ಮಂಡಳಿಗಳ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಜರುಗಿತು. ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಕಾಶಿಯಿಂದಲೇ ಧರ್ಮಜಾಗೃತಿ ನಡೆಸಿರುವುದು ವಿಶೇಷವಾಗಿದೆ. ಸನಾತನ ಎಂಬುವುದು ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದಾಬಾಯಿ ಬಾಲಕೃಷ್ಣ ದೇಸಾಯಿ ಶ್ರೀ ಅನ್ನಪೂಣೇಶ್ವರಿ ದೇವಿಯ ಕುರಿತು ಅತಿಥಿ ಉಪನ್ಯಾಸ ನೀಡಿದರು. ಹಾಗೆಯೇ ಆಯ್ದಕ್ಕಿ ಲಕ್ಕಮ್ಮ ವಸತಿ ನಿಲಯದ ೪೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶ್ರೀ ಶಾರದಾದೇವಿ ಅನುಗ್ರಹ ಕಲ್ಪಿಸುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ ಅಳವಂಡಿಕರ್, ಶೇಷಗಿರಿ ಗಡಾದ್, ವೇಣುಗೋಪಾಲ್, ಮೋಹನ ಲೆಕ್ಕಿಹಾಳ, ಸತೀಶ ಕೋಮಲಾಪುರ, ಪ್ರಸನ್ನ ಜೋಷಿ, ದಿಗಂಬರ ವೈದ್ಯ ಸೇರಿದಂತೆ ವಿವಿಧ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಿತು.

ಪಾಲಕಿ ಉತ್ಸವ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಮದ್ವ ಜಯಂತಿ ಸಂಪನ್ನ

ಗಂಗಾವತಿ.:ನಗರದ ಯೋಗೀಶ್ವರ ಯಾಜ್ಞವಲ್ಕ್ಯಮಂದಿರದಲ್ಲಿ ಗುರುವಾರದಂದು ಜರುಗಿದ ಮಧ್ವ ನವಮಿ ಉತ್ಸವ ಪಾಲಕಿ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ. ವೇದಮೂರ್ತಿ ಪ್ರದೀಪ ಆಚಾರ್ ಅವರು ವೆಂಕಟೇಶ್ ಲೆಕ್ಕಿಹಾಳ ದಂಪತಿಗಳಿಗೆ ಮಹಾಸಂಕಲ್ಪ, ಅಷ್ಟವಧಾನ ಸೇವೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನೆ ನೃತ್ಯಗಳಿಂದ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿಧರ್ ಕುಲಕರ್ಣಿ. ಸತೀಶ್. ಪ್ರಭಾಕರ್ ದಿನ್ನಿ. ತಿರುಮಲ್ ರಾವ್ ಆಲಂಪಲ್ಲಿ, ರಾಘವೇಂದ್ರ ಮೇಗೂರು ಲಕ್ಷ್ಮಣ ಜಮಖಂಡಿ. ಕೋಮಲಾಪುರ ಪ್ರಹ್ಲಾದ್ ಸೇರಿದಂತೆ ಮಹಿಳಾ ಭಜನಾ ಮಂಡಳಿಯ ಸದಸ್ಯರು. ಭಕ್ತರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಗಂಗಾವತಿ: ಫೆಬ್ರವರಿ-೭ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮ ಉದ್ಘಾಟನೆ ಮಾಡಿ, ಉದ್ಘಾಟನಾ ಭಾಷಣ ಮಾಡಿದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬುರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸನ್ನು ಕಾಣಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವೇ ಅಸ್ತ್ರ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇನೆ ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೊತೆಗೆ ಜೀವನ ನಡೆಸಲು ಸ್ವ ಸಹಾಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಕೆಲಸಕ್ಕೆ ತನ್ನದೇ ಆದ ಗೌರವವಿದೆ, ಮಾಡುವ ಕಾರ್ಯಗಳಲ್ಲಿ ಶ್ರೇಷ್ಠ, ಕನಿಷ್ಠ, ಭಾವನೆಗಳನ್ನು ಇಟ್ಟುಕೊಳ್ಳಬಾರದು, ಸರ್ಕಾರಿ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ಮಾತ್ರ ಆರ್ಥಿಕವಾಗಿ ಬಡವರೇ ಹೊರತು ವಿದ್ಯಾರ್ಥಿಗಳು ಅಲ್ಲ. ಬಡವರು ಅಥವಾ ಶ್ರೀಮಂತರಾಗುವುದು ನಿಮ್ಮ ಕೈಯಲ್ಲಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷ ಸಂಸ್ಥೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ೧೦೦ ಚೇರ್‌ಗಳನ್ನು ವಿದ್ಯಾನಿಕೇತನ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ನೆರವೇರಿಸಿದರು. ಸ್ವಾಗತವನ್ನು ಈಶ್ವರಪ್ಪ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಮದ್ಯದಲ್ಲಿ ಬಿಡುಗಡೆಯಾದವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸೋಮಶೇಖರ್ ಗೌಡ, ಅಜಗರ ಪಾಶ, ಸಾವಿತ್ರಿ, ಲಕ್ಷ್ಮಿ ಜೆ. ರಮಾ, ಲಲಿತಾ ಕಂದಗಲ್, ನಾಗಪ್ಪ ಎಂ., ಚಿದಾ

ನಂದ ಮೇಟಿ, ಶ್ರೀದೇವಿ, ರುದ್ರೇಶ್ ತಬಾಲಿ, ಹಾಗೂ ಅತಿಥಿ ಉಪನ್ಯಾಸಕರಾದ ಶ್ರೀಮತಿ ಕನಕಮ್ಮ, ಡಾ. ರವಿಚಂದ್ರ, ನಿರುಪಾದಿ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಮಹೇಶ್ ವಂದನಾರ್ಪಣೆ ಮಾಡಿದರು.

Read More ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಶ್ರೀ ಪ್ರಸನ್ನ ಪಂಪ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ನ ಸಂತರ್ಪಣೆ.


ಗಂಗಾವತಿ. ಇತಿಹಾಸ ಪ್ರಸಿದ್ಧ ಹಿರೇ ಜಂತಕಲ್ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಗಂಗಾವತಿ ನಗರ ಸೇರಿದಂತೆ ಜಾತ್ರೆಗೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಡೆಯನ್ನು ಆಯೋಜಿಸಲಾಗಿದೆ ಎಂದು. ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಸ್ಥಾನದಷ್ಟೇ ಅತ್ಯಂತ ಶಕ್ತಿ ಪೀಠವಾಗಿ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭಗೊಂಡ ರಥೋತ್ಸವ ಹಾಗೂ ಎರಡು ದಿನಗಳ ಕಾಲ ಜರುಗಲಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಆಗಮಿಸುವ. ಸರ್ವರಿಗೆ. ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬುಧವಾರದ ಜನಪದ ಗೀತೆಗಳು ಕಾರ್ಯಕ್ರಮ ಸೇರಿದಂತೆ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಪ್ರತಿದಿನ ಸಂಜೆ 7:00 ಯಿಂದ ರಾತ್ರಿ 11:30ವರೆಗೆ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಕಲೆ ಸಾಹಿತ್ಯ ಸಂಸ್ಕೃತಿ. ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈಡಿಗರ ಪರಮೇಶ್ವರ, ಜಿ ಆರ್ ಎಸ್ ಸತ್ಯಕುಮಾರ್, ಉಪ್ಪಾರ್ ಚಂದ್ರಶೇಖರ್, ವೈ ಸೋಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದು. ದಾಸೋಹದ ನೇತೃತ್ವವನ್ನು ಪ್ರಥಮ ದಿನದಂದು ಹೆಚ್ ಜಿ ರಾಮುಲು ಕುಟುಂಬಸ್ಥರು ಬುಧವಾರದಂದು ಜಿ ಆರ್ ಎಸ್. ಕುಟುಂಬಸ್ಥರು ಹಾಗೂ. ಗುರುವಾರದಂದು ಗಾಣಿಗ ಸಮಾಜ ಬಾಂಧವರು ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ಮುಖಂಡರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು

VISHWAROOPA NEWS BLOG

Infinite

Skip to content ↓