ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ಫೆಬ್ರವರಿ-೮ ಶನಿವಾರದಂದು ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವೇ||ಮೂ|| ಸಿದ್ದರಾಮಯ್ಯ ಗುರುವಿನ್, ಶ್ರೀ ವೇ||ಮೂ|| ಸಿದ್ದಯ್ಯ ಗುರುವಿನ್ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಶಾಸಕರು ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಇವರು ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ೩೭ ವರ್ಷಗಳಿಂದ ಈ ಸಂಸ್ಥೆಯು ಶಿಕ್ಷಣ ನೀಡುತ್ತಾ ಬಂದಿರುವುದು ಅತ್ಯಂತ ಮಹತ್ವ ಪೂರ್ಣವಾದ ವಿಷಯವಾಗಿದೆ. ಇಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯ. ಇಂತಹ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಗೆ ಶಾಸಕರ ಅನುದಾನದಲ್ಲಿ ಮತ್ತು ವೈಯಕ್ತಿಕವಾಗಿ ಈ ಶಾಲೆಗೆ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ನಂತರ ಶಾಲಾ ಮಕ್ಕಳಿಂದ ರಚಿತವಾದ ‘ಅಕ್ಷರ ದೀವಿಗೆ’ ಎಂಬ ಹಸ್ತಪ್ರತಿಯನ್ನು ಮಾಜಿ ಶಾಸಕರಾದ ಪರಣ್ಣ ಮನವಳ್ಳಿ ಅವರು ಬಿಡುಗಡೆಗೊಳಿಸಿ ಮಾತನಾಡುತ್ತಾ, ಈ ಸಂಸ್ಥೆ ಗ್ರಾಮೀಣ ಭಾಗದಲ್ಲಿ ೧೯೮೯ ರಿಂದ ಶಿಕ್ಷಣ ನೀಡುತ್ತಾ ಬಂದಿರುವುದು ತುಂಬಾ ಸಂತೋಷಕರವಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸಣ್ಣೆಪ್ಪರವರು ಮಾತನಾಡುತ್ತಾ, ಈ ನಮ್ಮ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದಲ್ಲಿದ್ದರೂ ಸಹ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವೈದ್ಯರು, ಸೈನಿಕರು, ಶಿಕ್ಷಣಾಧಿಕಾರಿಗಳಾಗಿ, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿಯವರಿಗೆ ಮತ್ತು ಮಾಜಿ ಶಾಸಕರಾದ ಶ್ರೀ ಪರಣ್ಣ ಮನವಳ್ಳಿ ಅವರಿಗೆ ವಿದ್ಯಾ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ವೇದಿಕೆ ಮೇಲೆ ವಾಣಿಜ್ಯೋದ್ಯಮಿಗಳಾದ ಎಂ ಸರ್ವೇಶ್, ಸಂಸ್ಥೆಯ ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ ಎಚ್., ಆಡಳಿತ ಮಂಡಳಿಯ ಸದಸ್ಯರಾದ ದ್ಯಾಮಪ್ಪ ಅಂಗಡಿ, ಸಣ್ಣಕ್ಕಿ ನೀಲಪ್ಪ, ಹನುಮಂತಪ್ಪ ಗಡ್ಡಿ ವಡ್ಡರಟ್ಟಿ, ಕೆ ಬಾಳಪ್ಪ ವೆಂಕಟಗಿರಿ, ವಾಣಿಕುಮಾರ್ ಕಂಬಳಿ, ಎಚ್ ಹನುಮೇಶ್, ಹನುಮೇಶ್ ಉಣ್ಣೆಕುರಿ ವೆಂಕಟಗಿರಿ, ಶಾಲೆಯ ಮುಖ್ಯಗುರುಗಳಾದ ನಿಂಗಪ್ಪ ಗುಂಡೂರು, ಶಾಲಾ ಶಿಕ್ಷಕ, ಶಿಕ್ಷಕಿಯವರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಪ್ರವೀಣ್‌ಕುಮಾರ್ ಶಿಕ್ಷಕರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ನಾಗಭೂಷಣ ವಾಲ್ಮೀಕಿ ನಿರೂಪಿಸಿ, ಶಿಕ್ಷಕ ಹನುಮೇಶ್ ಬಿಂಗಿ ವಂದಿಸಿದರು.

ನಂತರ ಮಕ್ಕಳಿಂದ ಮನೋರಂಜನ ಕಾರ್ಯಕ್ರಮಗಳು ನಡೆದವು.

ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ಫೆಬ್ರವರಿ-೧೩ ರಿಂದ ೨೪ ರವರೆಗೆ ಸಂಸ್ಕೃತ ಜ್ಞಾನ ಸಂಪಾದನಾ ಶಿಬಿರ

ಗಂಗಾವತಿ: ಶ್ರೀ ಹಾನಗಲ್ಲ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಮತ್ತು ಕನ್ನಡ ಜಾಗೃತಿ ಸಮಿತಿ ಇವರ ಸಹಯೋಗದಲ್ಲಿ ಶ್ರೀ ಗುರು ಕುಮಾರೇಶ್ವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಫೆಬ್ರವರಿ-13 ಗುರುವಾರದಿಂದ, 24 ಸೋಮವಾರದವರೆಗೆ ಪ್ರತಿದಿನ ಸಂಜೆ 5:30 ರಿಂದ 7:೦೦ ರವರೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಸ್ಕೂಲ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಸಂಸ್ಕೃತ ಜ್ಞಾನ ಸಂಪಾದನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅರಳಹಳ್ಳಿ ರಾ.ರಾ ಬೃಹನ್ಮಠದ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಶಿಬಿರದಲ್ಲಿ ಬೋಧಕರಾಗಿ ಗದಗ ಬೆಟಗೇರಿಯ ಸಂಸ್ಕೃತ ಶಿಕ್ಷಕರಾದ ಪೂಜ್ಯ ಶ್ರೀ ಶಾಂತಕುಮಾರ ದೇವರು ಆಗಮಿಸಲಿದ್ದು, ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಹಾಗೂ ನಮ್ಮ ದೇಶದ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಅವಶ್ಯವಿದ್ದು, ಸಂಸ್ಕೃತವು ವಾಕ್‌ಶುದ್ಧಿ, ಜ್ಞಾನದ ಅಭಿವೃದ್ಧಿ, ಸುಸಂಸ್ಕೃತ ನಡೆನುಡಿಯನ್ನು ತಿಳಿಸುವ ಭಾಷೆಯಾಗಿದ್ದು, ಜ್ಞಾನ ಸಾಗರವನ್ನು ಒಳಗೊಂಡ ಸಂಸ್ಕೃತವನ್ನು ಕಲಿಯಲು ಇದೊಂದು ಸುವರ್ಣವಕಾಶವಾಗಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿ ಇರುವುದಿಲ್ಲ. ಸರ್ವ ಸಂಸ್ಕೃತ ಭಾಷಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ತರಬೇತಿಯಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೧೫೦೯೦೮೩೮೫, ೯೬೧೧೭೪೫೩೬೯ ಗೆ ಸಂಪರ್ಕಿಸಬಹುದು.