ಶಾಹೀನ್ ಲರ್ನ್ ಅಕಾಡೆಮಿ ಶಾಲೆಯಿಂದ ಸಾಹಿತಿ ಪ್ರತಿಮಾ ಹಾಸನ್ ಗೆ ಸನ್ಮಾನ

ಹಾಸನ: ನವೆಂಬರ್‌-1 ರಂದು ಹಾಸನದ ಹಳೆ ಈದ್ಗಾ ಮೈದಾನ, ಹೊಸ ಲೈನ್ ರಸ್ತೆಯಲ್ಲಿರುವ “ಶಾಹೀನ್ ಲರ್ನ್ ಅಕಾಡೆಮಿ ಶಾಲೆ” ಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ, ಶಿಕ್ಷಕಿ,ಸಾಮಾಜಿಕ ಚಿಂತಕಿ, ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು, ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಆಹ್ವಾನಿಸಿ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರನ್ನಾಗಿ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಡಲಾಗಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸುವುದೇ ದೊಡ್ಡ ಸವಾಲ್ ಆಗಿಬಿಟ್ಟಿದೆ. ಅದರ ಉಳಿವಿನತ್ತ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕರುನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ತನ್ನ ಜನ್ಮದ ಋಣ ತೀರಿಸಿಕೊಳ್ಳಬೇಕೆಂದರೆ ಕರುನಾಡು ಹಾಗೂ ಕನ್ನಡಕ್ಕೆ ಋಣಿಯಾಗಿರಬೇಕು. ಕನ್ನಡ ನಾಡು ನುಡಿಯನ್ನು ಉಳಿಸಬೇಕಾದರೆ ನಮ್ಮ ಮನೆಗಳಿಂದಲೇ ಕನ್ನಡವನ್ನು ಹೇಳಿಕೊಡುತ್ತ ಮಾತನಾಡಬೇಕು. ಸಾವಿರಾರು ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಅಸ್ತಿತ್ವವನ್ನು ಒಳಗೊಂಡಿದೆ. ಕನ್ನಡ ಭಾಷೆಗೆ ಯಾವ ಧರ್ಮವು ಇಲ್ಲ, ಯಾವ ಜಾತಿಯೂ ಇಲ್ಲ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಹ ಕನ್ನಡವನ್ನು ಮಾತನಾಡುತ್ತಾ ಕನ್ನಡದ ಭಾಷೆಯ ಮಹತ್ವ ತಿಳಿದು, ಕನ್ನಡ ಬರದವರಿಗೆ ಹೇಳಿಕೊಡುವ ಕೆಲಸವನ್ನು ಮಾಡಬೇಕು. ಇಂದು ಈ ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಮಹತ್ವವನ್ನು ತಿಳಿಸುತ್ತಾ ಶಾಲೆಯ ಅಭಿವೃದ್ಧಿಯನ್ನು ಹೊಂದಲು ಪ್ರಯತ್ನಪಡುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಪ್ರತಿಮಾ ಹಾಸನ್ ತಿಳಿಸಿದರು.

ಶಾಲೆಯ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಬಾವುಟದ ಚಿತ್ರವನ್ನು ಬಿಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮವಾಗಿ ಬಿಡಿಸಿದಂತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿ ಎಲ್ಲ ಮಕ್ಕಳಿಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶಾಲೆಯ ಎಲ್ಲ ಮಕ್ಕಳಿಗೂ ಸಿಹಿಯನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ನಸರುಲ್ಲಾ ಮುಸಮಿಲ್ ಪಾಷ ಸಂಯೋಜಕರು,ಅಧ್ಯಕ್ಷರು ಇಂಥಿಯಸ್ ಪಾಷ, ಷಮಾ ಅಂಬ್ರಿನ್, ಶಿಕ್ಷಕ ವೃಂದವರು, ಇನ್ನು ಹಲವಾರು ಉಪಸ್ಥಿತರಿದ್ದರು. https://aratt.ai/@vishwaroopa_news_blog

ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಭವ್ಯ ಮೆರವಣಿಗೆ ಮೂಲಕ ತಾಯಿ ಭುವನೇಶ್ವರಿಯ ಮೆರವಣಿಗೆ

ಗಂಗಾವತಿ: ನವೆಂಬರ್‌-01 ಶನಿವಾರ ಆರೋನ್ ಮಿರಜ್‌ಕರ್ ಹಾಗೂ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೈಕ್ ರೈಲಿಯ ಮೂಲಕ ಕನ್ನಡ ಮಾತೆಯನ್ನು ವೇದಿಕೆಗೆ ಬರಮಾಡಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಲ್ಲಿ ಕನ್ನಡದ ಜ್ಞಾನವನ್ನು ಹೆಚ್ಚಿಸಲು ರಂಗೋಲಿಗಳ ಮೂಲಕ ವ್ಯಾಕರಣ ಹಾಗೂ ಕವಿಗಳ ಭಾವಚಿತ್ರಗಳನ್ನು ಮಕ್ಕಳಿಂದ ಬಿಡಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಬೆಳಗಿಸುವುದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ರುಬಿನ್ ಮಿರಜ್‌ಕರ್ ಉದ್ಘಾಟಿಸಿ “ಕಲಿಯೋಕೆ ಕೋಟಿ ಭಾಷೆ, ಆದರೆ ಆಡೋಕೆ ಒಂದೇ ಭಾಷೆ ಅದುವೇ ನಮ್ಮ ಕನ್ನಡ ಭಾಷೆ” ಎಂದು ಹೇಳಿ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. “ಕನ್ನಡ ಭಾಷೆಯನ್ನುವುದು ಪುರಾತನವಾದದ್ದು, ಅದು ಪ್ರಪಂಚದೆಲ್ಲೆಡೆ ಪಸರಿಸಿ ತನ್ನದೇ ಆದ ಛಾಪನ್ನು ಮೂಡಿಸಿದೆ” ಎಂದು ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್ ಅವರು ತಿಳಿಸಿದರು.

“ನಾವು ನವೆಂಬರ್-೧ ರಂದು ಮಾತ್ರ ಕನ್ನಡಿಗರಾಗುವ ಬದಲು ಎಲ್ಲಾ ಸಮಯದಲ್ಲೂ ನಂಬರ್ ಒನ್ ಕನ್ನಡಿಗರಾಗುವ ಮೂಲಕ ಕನ್ನಡ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಆಡಳಿತಾಧಿಕಾರಿಗಳಾದ ಚಂದ್ರಕಾಂತರಾವ್ ಅವರು ಮಾರ್ಗದರ್ಶನ ಮಾಡಿದರು.

“ಕನ್ನಡ ಭಾಷೆಯು ಸಮೃದ್ಧವಾದದ್ದು, ಕನ್ನಡ ಎನ್ನುವುದು ತಾಯಿ ಭಾಷೆಯಾಗಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹರಡಿದೆ” ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ನಾಯಕ ಹೇಳಿದರು. “ಕರ್ನಾಟಕದ ಏಕೀಕರಣವು ಬಹಾಳ ರೋಚಕವಾದ ಘಟ್ಟವಾಗಿದ್ದು, ಇದರ ಕೊಡುಗೆ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ” ಎಂದು ಕರ್ನಾಟಕದ ಏಕೀಕರಣದ ಕುರಿತು ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಖಾ ಠಾಕೂರ್ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಾಸರ, ಸಂತರ ಮತ್ತು ಕವಿಗಳ ವೇಷಭೂಷಣಗಳನ್ನು ತೊಟ್ಟು ಕಾರ್ಯಕ್ರಮಕ್ಕೆ ಮೆರಗನ್ನು ತಂದರು. ವೇದಿಕೆ ಕಾರ್ಯಕ್ರಮದ ನಂತರ ಕನ್ನಡ ನಾಡು, ನುಡಿ, ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. https://aratt.ai/@vishwaroopa_news_blog

ಹೆಜ್ಜೆ ಗೆಜ್ಜೆ ತಂಡದಿಂದ ರಂಗ ಸಂಭ್ರಮ ಕಾರ್ಯಕ್ರಮ

ಬೆಂಗಳೂರು: ಹೆಜ್ಜೆ ಗೆಜ್ಜೆ ತಂಡ ಕಳೆದ ಐದು ದಶಕಗಳಿಂದ ನಿರಂತರವಾಗಿ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನರಂಜನೆಯೊಂದಿಗೆ ಚಿಂತನೆಗೂ ಚಾಲನೆ ಕೊಡುವಂತಹ ಅನೇಕ ವಿಚಾರಧಾರೆಗಳನ್ನು ಜನರಿರುವಲ್ಲಿಗೆ ಹೋಗಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿರುತ್ತದೆ. ಸಂಸ್ಥೆ ರಂಗ ಸಂಭ್ರಮ ತಿರುಗಾಟ ಎಂಬ ಶೀರ್ಷಿಕೆಯಡಿ ಅನೇಕ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಜಾನಪದ ಕಲಾ ಬಳಗ ಭರತನಾಟ್ಯ ಸಂಸ್ಥೆ ಮತ್ತು ಮೈಸೂರು ರಮಾನಂದರವರ ಹ್ಯಾಗ್ ಸತ್ತ ನಾಟಕವನ್ನು ಅಕ್ಟೋಬರ್-30‌ ಗುರುವಾರ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಹೊಸ ರೂಪದಲ್ಲಿ ಪ್ರದರ್ಶಿಸಲಾಯಿತು.

ಸಾಹಿತಿಗಳು ಹಿರಿಯ ರಂಗಕರ್ಮಿಗಳು ಆದ ಡಾ. ಪಾರ್ಶ್ವನಾಥ್ ಅವರು ಕನ್ನಡ ರಂಗಭೂಮಿ ಬೆಳೆದು ಬಂದ ಬಗ್ಗೆ ವಿವರವಾಗಿ ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಬಂದಿದ್ದ ನರಸಿಂಹಮೂರ್ತಿರವರು ಗೆಜ್ಜೆ ಹೆಜ್ಜೆ ರಂಗ ತಂಡದ ಐದು ದಶಕಗಳ ಹೋರಾಟದ ಬದುಕನ್ನು ಬಣ್ಣದಲ್ಲಿ ಕಳೆದ ರಮಾನಂದರವರು ನಾಟಕ ರಚನೆ ವಿಚಾರ ಸಂಕಿರಣಗಳು ರಂಗ ತರಬೇತಿ ಪ್ರಸಾದನ ಶಿಬಿರ ನಡೆಸುತ್ತಾ ಬಂದಿರುತ್ತಾರೆ.

ಲಕ್ಷ್ಮಿ ನಾರಾಯಣ್ ಪ್ರಾಂಶುಪಾಲರು ಕನ್ನಡ ರಂಗಭೂಮಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಜನತೆಗೆ ರಂಗ ಶಿಕ್ಷಣದ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಅಡಿಷನಲ್ ಡಿಸಿ ಮಂಜುನಾಥ್ ರವರು ಹಾಸ್ಯದ ನಾಟಕಗಳನ್ನು ವಿಭಿನ್ನ ರೀತಿಯಲ್ಲಿ ವಿಡೆಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಹಾಸ್ಯ ಉಣಬಡಿಸುತ್ತಿದ್ದಾರೆ ರಮಾನಂದರು ಹಾಸ್ಯ ಗಾರುಡಿಗನೇ ಸರಿ ಎಂದು ತಿಳಿಸಿದರು.

ಮೈಸೂರು ರಮಾನಂದ್ ಗೀತಾಂಜಲಿ ಮತ್ತು ಶಿವರಾಂ ವಿಶೇಷವಾದ ಕಿರು ರೂಪಕ ಪ್ರದರ್ಶಿಸಿದರು. ಸಂಗೀತ ಟಿ.ಜಿ.ಹರೀಶ್. ರಂಗಗೀತೆ, ಜಾನಪದ ಗೀತೆ ಭಾವಗೀತೆಗಳ ಸಮ್ಮಿಲನದೊಂದಿಗೆ 4 ಗಂಟೆಗೆ ಪ್ರಾರಂಭವಾದ ರಂಗ ಸಂಭ್ರಮ ರಾತ್ರಿ 9ರವರೆಗೆ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರಿಗೆ ರಂಗ ಗೌರವ ನೀಡಿ ಗೌರವಿಸಲಾಯಿತು.https://aratt.ai/@vishwaroopa_news_blog