ಬಸವ ನೀಲಾಂಬಿಕೆ ಮಹಿಳಾ ಸಂಘದವತಿಯಿಂದ ಮಾರ್ಚ್-೨೦ ರಂದು ಹಿರೆಜಂತಕಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಗಂಗಾವತಿ: ನಗರದ ಹಿರೇಜಂತಕಲ್‌ನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಾರ್ಚ್-೨೦ ಗುರುವಾರದಂದು ಬಸವ ನೀಲಾಂಬಿಕೆ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಮ್ಮ ಆರೇಗಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ಮುಮ್ತಾಜ್ ಬೇಗಂ, ವಿಜಯಲಕ್ಷ್ಮಿ, ಅರ್ಚನಾ ರಾಘವೇಂದ್ರ ಶಿರಿಗೇರಿ, ಲಲಿತಮ್ಮ ತಿಪ್ಪೇರುದ್ರಸ್ವಾಮಿ, ಗೌರಮ್ಮ ಕುಂಬಾರ, ಮಂಜುಳಾ ಹೊಸಪೇಟೆ, ಸಿಂಧು, ಶೋಭಾ ರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೌರಮ್ಮ ಕುಂಬಾರ್, ಉಪಾಧ್ಯಕ್ಷರಾದ ಶೈಲಮ್ಮ, ಕಾರ್ಯದರ್ಶಿಯಾದ ಸೌಭಾಗ್ಯ, ಸಹಕಾರ್ಯದಶಿಯಾದ ಶರಣಮ್ಮ, ಖಜಾಂಚಿಯಾದ ಗಂಗಮ್ಮ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

ವಡ್ಡರಹಟ್ಟಿಯ ಮುದುಕಪ್ಪ ಗಡ್ಡಿ ಸಹೋದರರಿಂದ ಚಿಕ್ಕಬೆಣಕಲ್‌ನ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಕೆ.ಜಿ ಬೆಳ್ಳಿ ಪೇಟ ಸಮರ್ಪಣೆ.

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹಿರಿಯರಾದ ಮುದುಕಪ್ಪ ಗಡ್ಡಿ ಸಹೋದರರು ಮತ್ತು ಕುಟುಂಬದ ಸದಸ್ಯರು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಒಂದು ಕೆಜಿ ಬೆಳ್ಳಿಯ ಪೇಟವನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.

ಅವರ ಕುಟುಂಬವು ವಂಶಪಾರಂಪರ್ಯವಾಗಿ ಶ್ರೀ ಬೆಟ್ಟದಲಿಂಗೇಶ್ವರ ದೇವರಿಗೆ ಜಾತ್ರೆಯ ಸಮಯದಲ್ಲಿ ಪಾದಯಾತ್ರೆ ಮಾಡುತ್ತಾ ಬಂದಿದ್ದು, ಅದರಂತೆ ಈ ವರ್ಷದ ಮಾರ್ಚ್-೨೨ ರಂದು ನಡೆಯುವ ಶ್ರೀ ಬೆಟ್ಟದ ಲಿಂಗೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ಕಾಣಿಕೆ ಸಮರ್ಪಿಸಿದರು.

ಅವರಿಗೆ ಶ್ರೀಮಠದ ಎಂ.ದೊಡ್ಡ ಬಸವರಾಜ ಹಾಗೂ ಎಂ.ಲಿಂಗಪ್ಪನವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಶ್ರೀ ಬೆಟ್ಟದಲಿಂಗೇಶ್ವರ ದೇವರು ಶ್ರೀಮುರುಕಪ್ಪ ಗಡ್ಡಿ ಕುಟುಂಬಕ್ಕೆ ಸುಖ, ಶಾಂತಿ, ಸಂಪತ್ತು ನೀಡಲಿ, ಆಯುಷ್ಯ, ಆರೋಗ್ಯ ನೀಡಲಿ ಎಂದು ಶ್ರೀಮಠದ ವತಿಯಿಂದ ಶುಭ ಹಾರೈಸಲಾಯಿತು.

ಸಂಚಲನ ಮೂಡಿಸಿದ ನ್ಯಾಯಾಧೀಶರ ಪಾದಯಾತ್ರೆ

ಗಂಗಾವತಿ: ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ನಡೆದ ನ್ಯಾಯಾಧೀಶರ ನೇತೃತ್ವದ ಪಾದಯಾತ್ರೆ ಗಂಗಾವತಿ ನಗರದಲ್ಲಿ ಸಂಚಲನ ಮೂಡಿಸಿದೆ.

ತಾಲೂಕು ಕಾನೂನು ನೆರವು ಸಮಿತಿ, ಗಂಗಾವತಿ ವಕೀಲರ ಸಂಘ, ನಗರಸಭೆ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್, ಗ್ರಾಮೀಣ ರೇಡಿಯೋ ಭಾರತಿ ಇವರುಗಳು ಮುಂದಾಳತ್ವದಲ್ಲಿ ಪಾದಯಾತ್ರೆಯು ಶ್ರೀಕೃಷ್ಣದೇವರಾಯ ವೃತ್ತದಿಂದ ಚಾಲನೆಗೊಂಡು ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತದ ಮೂಲಕ ಗಾಂಧಿವೃತ್ತ ತಲುಪಿತು. ಅಲ್ಲಿ ಸ್ವಚ್ಛತೆಯ ಮೂಲಮಂತ್ರ ಸಾರಿದ ಮಹಾತ್ಮಗಾಂಧಿಜಿಯವರ ಪುತ್ಥಳಿಗೆ ನ್ಯಾಯಾಧೀಶರು ಮಾಲಾರ್ಪಣೆ ಮಾಡಿ ಅಲ್ಲಿ ನೆರೆದಿದ್ದ ಜನರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರದ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಗೌರವಾನ್ವಿತ ನ್ಯಾಯಧೀಶರಾದ ಸದಾನಂದ ನಾಯ್ಕರವರು ಮಾತನಾಡಿ, ಸಾರ್ವಜನಿಕರು ನಗರದ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಗಾಗಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸ್ವ-ಇಚ್ಛೆಯಿಂದ ತ್ಯಜಿಸಬೇಕು ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ನಾಯಕ ಏಕಬಳಕೆ ಪ್ಲಾಸ್ಟಿಕ್ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಪೌರಾಯುಕ್ತರಾದ ಆರ್. ವಿರುಪಾಕ್ಷಮೂರ್ತಿಯವರು ಮಾತನಾಡಿ, ಮಾರ್ಚ್-೩೧ ರಿಂದ ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್ ನಗರದಲ್ಲಿ ಬಂದ್ ಮಾಡಲಾಗಿದೆ. ಇದಕ್ಕೆ ನಾಗರಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಕರೆಕೊಟ್ಟರು.

ಪ್ಲಾಸ್ಟಿಕ್ ಮುಕ್ತ ಅಭಿಯಾನದ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಗಂಗಾವತಿ ನಮ್ಮ ಕನಸಿಗೆ ನ್ಯಾಯಾಧೀಶರು ಮುನ್ನುಡಿ ಬರೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಈ ಅಭಿಯಾನ ಮುಂದುವರೆಸಿ ಜನ, ಜಾನುವಾರುಗಳಿಗೆ ಮಾರಕವಾಗಿರುವ ಈ ಪ್ಲಾಸ್ಟಿಕ್ ಭೂತದ ಉಪಟಳವನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿ ಭಾಗವಹಿಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ನಂತರ ಗಾಂಧಿವೃತ್ತದಿಂದ ದುರ್ಗಮ್ಮನಗುಡಿಯವರೆಗೆ ಗೌರವಾನ್ವಿತ ನ್ಯಾಯಾಧೀಶರುಗಳಾದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್, ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ, ಹೆಚ್ಚುವರಿ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಿದರು. ಅದಕ್ಕೆ ಅಂಗಡಿ ಮಾಲಿಕರು ಉತ್ತಮವಾಗಿ ಸ್ಪಂದನೆ ನೀಡಿದರು.

ಪ್ಲಾಸ್ಟಿಕ್ ರಹಿತ ಮಣ್ಣಲ್ಲಿ ಕರಗುವ ಕ್ಯಾರಿಬ್ಯಾಗ್‌ಗಳನ್ನು ಹಣ್ಣಿನ ಹಾಗೂ ಕಾಯಿಪಲ್ಯೆ, ಹೂವಿನ ಅಂಗಡಿಗಳಿಗೆ ವಿತರಿಸಲಾಯಿತು. ಪ್ಲಾಸ್ಟಿಕ್ ಮುಕ್ತ ಅಭಿಯಾನ ಸಮಿತಿಯವರು ತರಿಸಿದ್ದ ೯೦ ಕೆ.ಜಿ ಪ್ಲಾಸ್ಟಿಕ್ ರಹಿತ ಕ್ಯಾರಿಬ್ಯಾಗ್‌ಗಳನ್ನು ವ್ಯಾಪಾರಸ್ಥರಿಗೆ ವಿತರಿಸಲಾಯಿತು.

ಪ್ಲಾಸ್ಟಿಕ ಭೂತ ವೇಷಧಾರಿಯು ಅಭಿಯಾನದಲ್ಲಿ ಸಾರ್ವಜನಿಕರ ಗಮನ ಸೆಳೆದನು.

ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯರಾದ ಡಾ|| ಎ.ಸೋಮರಾಜು, ಡಾ|| ಜಿ. ಚಂದ್ರಪ್ಪ, ಅಧ್ಯಕ್ಷರಾದ ಡಾ|| ವಿ.ಎಸ್.ಎನ್ ರಾಜು, ವೈದ್ಯಕೀಯ ಮಹಿಳಾ ಘಟಕದ ಡಾ|| ಮೇಧಾ, ಭಾರತಿ ಹೊಸಳ್ಳಿ, ನಗರಸಭೆಯ ಅಭಿಯಂತರರಾದ ಚೇತನ್, ಆರೋಗ್ಯ ನಿರೀಕ್ಷಕರಾದ ನಾಗರಾಜ, ಸಹಕಾರಿ ಸಂಘಗಳ ಒಕ್ಕೂಟದ ಸುಧಾಕರ, ಶ್ರಮಜೀವಿ ಕಲ್ಯಾಣ ಕರ್ನಾಟಕ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಆ ಒಕ್ಕೂಟದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಿವಕುಮಾರಗೌಡ, ಕಿಷ್ಕಿಂದ ಚಾರಣ ಬಳಗದ ಅರ್ಜುನ್, ಹರನಾಯಕ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ರಾಮಣ್ಣ ನಾಯಕ, ಪಂಪಣ್ಣ ನಾಯಕ, ಅರ್ಜುನ ನಾಯಕ, ವಿರುಪಾಕ್ಷಿಗೌಡ ನಾಯಕ, ಚನ್ನಬಸವ ಜೇಕಿನ್ ಹಾಗೂ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಅವರು ಅಭಿಯಾನದಲ್ಲಿ ಭಾಗವಹಿಸಿ ಮೆರಗು ತಂದರು. ರಾಘವೇಂದ್ರ ಚೌಡ್ಕಿಯವರು ಪ್ಲಾಸ್ಟಿಕ್ ಮುಕ್ತಿಗಾಗಿ ಜಾಗೃತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.

ನಗರಸಭೆಯ ಅಧ್ಯಕ್ಷರಾದ ಮೌಲಾಸಾಬ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಸುಚೇತಾ ಶಿರಿಗೇರಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ರೈತ ಸಂಘದ ಶರಣೇಗೌಡ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಬಸವರಾಜ ಮ್ಯಾಗಳಮನಿ, ಆಯುಷ್ ಬಳಗದ ಡಾ|| ಸುನೀಲ್ ಅರಳಿ, ಡಾ|| ಎಸ್.ಬಿ ಹಂದ್ರಾಳ, ಡಾ|| ವಿಜಯ್ ಗೌಡರ್, ಕಿಷ್ಕಿಂದಾ ಐ.ಡಿ.ಎ ವತಿಯಿಂದ ಡಾ|| ಕಿರಣ್, ಡಾ|| ಅಬ್ದುಲ್ ನಬಿ, ರಾಜಸ್ಥಾನಿ ಸಮಾಜ ಬಾಂಧವರು, ಆರ್ಯವೈರ್ಶ ಸಮಾಜದ ರೂಪಾರಾಣಿ ರಾಯಚೂರು, ಅಲೆಮಾರಿ ಬುಡ್ಗಜಂಗಮ ಸಮಾಜದ ಆರ್. ಕೃಷ್ಣ, ಸಾಹಿತಿಗಳಾದ ಶರಣಬಸಪ್ಪ ಕೋಲ್ಕಾರ, ಪವನಕುಮಾರ ಗುಂಡೂರು, ಕಿಷ್ಕಿಂದ ಹೋರಾಟ ಸಮಿತಿಯ ಮಂಜುನಾಥ ಕಟ್ಟಿಮನಿ, ಪರಿಸರ ಸೇವಾ ಟ್ರಸ್ಟ್ನ ಮಂಜುನಾಥ ಗುಡ್ಲಾನೂರು, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಹಾಲಕ್ಷ್ಮಿ ಕೇಸರಹಟ್ಟಿ, ಪ್ರಗತಿಪರ ಚಿಂತಕರಾದ ಶೈಲಜಾ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ರುದ್ರೇಶ ರ‍್ಹಾಳ, ಗಂಗಾವತಿ ಚಾರಣ ಬಳಗದ ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ಉಲ್ಲಾಸ, ಸೋಮಪ್ಪ ಜೂರಟಗಿ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.