ಶ್ರೀ ಕನ್ನಿಕಾಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ.

ಗಂಗಾವತಿ: ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತ್ರತ್ವದಲ್ಲಿ ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಜಯಂತೋತ್ಸವದ ಪ್ರಯುಕ್ತ ಬುಧವಾರದಂದು ಅಮ್ಮನವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಿತು.

ಬೆಳಿಗ್ಗೆ ಐದು ಜನ ಮಹಿಳೆಯರು ಕಳಸ ಪೂರ್ಣ ಕುಂಭದೊಂದಿಗೆ ದೇವಸ್ಥಾನದ ಆವರಣದಿಂದ ಪ್ರಮುಖ ರಾಜ ಬೀದಿಗಳ ಮೂಲಕ ತೆರಳಿ ಗಂಗೆ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಆಗಮಿಸಿತು.

ಬಳಿಕ ದೇವಸ್ಥಾನದಲ್ಲಿ ಪೂರ್ಣ ಕುಂಭದೊಂದಿಗೆ ಆಗಮಿಸಿದ ಮಹಿಳೆಯರಿಗೆ ಉಡಿ ತುಂಬುವಿಕೆ ಸೇರಿದಂತೆ ಭಜನೆ ಅಮ್ಮನವರಿಗೆ ಅಭಿಷೇಕ ಲಲಿತ ಸಹಸ್ರ ಪಾರಾಯಣ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಅವಧೂತ ಭಟ್ಟರು ನೆರವೇರಿಸಿದರು.

ಸಮಾಜದ ಅಧ್ಯಕ್ಷ ನಾಗರಾಜ ದರೋಜಿ ಹಾಗೂ ಸತ್ಯ ಜಿ ಆರ್ ಎಸ್ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ರುಕ್ಮಿಣಿ ಬಾಯಿ ಆಚರಣೆ ಕುರಿತು ಮಾತಾಡಿದರು.

ಒಂಭತ್ತು ವರ್ಷಗಳ ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮತ್ತೆ ವಿದ್ಯಾರ್ಥಿನಿಯಾದ ಗೃಹಿಣಿ.

ಗಂಗಾವತಿ: “ಸಪ್ತಪದಿ ತುಳಿದ ಗೃಹಿಣಿ, ನವ ವರ್ಷಗಳ ನಂತರ ಮತ್ತೆ ವಿದ್ಯಾರ್ಥಿನಿ” ಎಂಬ ಈ ವಾಕ್ಯ ನಿಮಗೆ ಕಾದಂಬರಿಯ ಶೀರ್ಷಿಕೆ ಎನಿಸಬಹುದು, ಆದರೆ ಇದು ಸತ್ಯ. ವಿದ್ಯೆ ಎಂಬುವುದು ಯಾವುದೇ ಕಲ್ಮಶವಿಲ್ಲದ ಅಪರಿಪೂರ್ಣ ಸಾಗರ. ಇಂತಹ ಸಾಗರದಲ್ಲಿ ಈಜುವವರೆಷ್ಟೋ, ಮುಳುಗುವವರೆಷ್ಟೋ ಆದರೆ ಮುಳುಗಿ ತೇಲುವವರು ಅತಿ ಕಡಿಮೆ. ಓದಿಗೆ ವಯಸ್ಸಿನ ಮಿತಿ ಇಲ್ಲವೆಂಬ ಸತ್ಯವನ್ನು ಒಬ್ಬ ಎರಡು ಮಕ್ಕಳ ತಾಯಿ ೨೦೨೪-೨೫ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪರೀಕ್ಷೆಯನ್ನು ಉತ್ತಮ ಅಂಕಗಳೊAದಿಗೆ ತೇರ್ಗಡೆಗೊಂಡು ವಿಶಿಷ್ಟತೆಗೆ ಕಾರಣರಾಗಿದ್ದಾರೆ.

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಲಕ್ಷ್ಮಿಯೇ ಆ ಮಹಿಳೆ. ಇವರು ಹಿರೇಬೆಣಕಲ್ ಶಾಲೆಯಲ್ಲಿ ತಮ್ಮ ಎಂಟನೇ ತರಗತಿಯನ್ನು ಎರಡನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದರು. ನಂತರ ತಮ್ಮ ೧೮ನೇ ವಯಸ್ಸಿನಲ್ಲಿ ಮದುವೆಯಾಗಿದ್ದು, ಇದರ ಮಧ್ಯದಲ್ಲಿ ಅವರ ಓದು ನಿಂತು ಹೋಗುತ್ತದೆ. ತದನಂತರ ಒಂಭತ್ತು ವರ್ಷಗಳ ನಂತರ ಎರಡು ಮಕ್ಕಳ ಗೃಹಿಣಿಯಾಗಿದ್ದ ಲಕ್ಷ್ಮಿಯವರಿಗೆ ಓದುವ ಆಸೆ ಚಿಗುರೋಡೆದು ಪತಿಗೆ ತಿಳಿಸಿದರು. ಅವರ ಪತಿ ಏನನ್ನು ಯೋಚಿಸದೆ ಓದಬೇಕೆಂಬ ಚಿಗುರಿಗೆ ಆಸರೆಯಾಗಿ ನಿಂತರು.

ಪತಿಯ ಆಸರೆಯನ್ನು ಪಡೆದ ಮಹಿಳೆ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನೇರವಾಗಿ ಬರೆದು ಯಾವುದೇ ಇಂಟರ್ನಲ್ ಅಂಕಗಳಿಲ್ಲದೇ ೩೦೪ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ತೆರ್ಗಡೆಯಾದ ಸಂಗತಿ ಸಾಧಾರಣವಾಗಿರಬಹುದು. ಆದರೆ ಪ್ರತಿದಿನ ಶಾಲೆಗೆ ಹೋಗಿ ಬರುವ ಎಷ್ಟೋ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಹೀಗಿರುವಾಗ ಎರಡು ಮಕ್ಕಳ ಗೃಹಿಣಿ ೯ ವರ್ಷಗಳ ನಂತರ ಮತ್ತೆ ಓದುವ ಛಲತೊಟ್ಟು ಉತ್ತಮ ಅಂಕಗಳೊಂದಿದೆ ತೇರ್ಗಡೆಯಾಗಿರುವುದು ವಿಶಿಷ್ಟವಾಗಿದೆ. ಇದು ಓದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ಓದಬೇಕು ಎಂಬ ಆಸೆಪಡುವವರಿಗೆ ಸ್ಪೂರ್ತಿ ಎಂದು ಊರಿನ ಶಿಕ್ಷಣ ಪ್ರೇಮಿಗಳು ಖುಷಿಯನ್ನು ವ್ಯಕ್ತಪಡಿಸಿ ಅವರನ್ನು ಗೌರವಿಸಿದ್ದಾರೆ.

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಪರ ವರದಿ ಮಾಡುವ ಮೂಲಕ ಹೆಸರು ಮಾಡಿದ್ದಾರೆ. ಅಲ್ಲದೆ ಸರಳ ವ್ಯಕ್ತಿತ್ವದ ಜೊತೆಜೊತೆಗೆ ಸಾಮಾನ್ಯ ವರ್ಗದ ಜನರ ಪರವಾಗಿ ಸುದ್ದಿ ಪ್ರಸಾರ ಮಾಡುತ್ತಾ, ಜನಪರ ಕಾಳಜಿ ಹೊಂದಿದ್ದಾರೆ. ಇವರಿಗೆ ಇದೀಗ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರ್ಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಇವರ ಸಹಯೋಗದಲ್ಲಿ ಕೇರಳದ ಕಾಸರಗೋಡಿನಲ್ಲಿ ಮೇ-೩ ರಂದು ನಡೆಯಲಿರುವ ಸಮಾರಂಭದಲ್ಲಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಪ್ರಶಸ್ತಿ ನೀಡುತ್ತಿರುವುದು ಸಂತಸದಾಯಕವಾಗಿದೆ. ಇದರ ಜೊತೆಗೆ ಕೇರಳ ರಾಜ್ಯದಲ್ಲಿ ನೀಡುವ ಪ್ರಶಸ್ತಿಗೆ ಉತ್ತರ ಕರ್ನಾಟಕ ಭಾಗದಿಂದ ನಾಗರಾಜ್. ವೈ ಅವರು ಒಬ್ಬರೇ ಆಯ್ಕೆಯಾಗಿದ್ದು, ನಮ್ಮ ಭಾಗದ ಜನರಿಗೆ ಗೌರವ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಗಡಪ್ಪ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ, ಮುತ್ತಣ್ಣ ಹೊಸಳ್ಳಿ, ತಿಪ್ಪೇಶ್, ಜಂಬಣ್ಣ ಮತ್ತಿತರರು ಇದ್ದರು.


ಪ್ರಶಸ್ತಿ ಸಮಾರಂಭ ೨೦೨೫ನೇ ಮೇ-೦೩ ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಕೆ ಶೆಟ್ಟಿ ಕುತ್ತಿಕಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನಿಸುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ತಿಳಿಸಿದೆ.


 

ಮೇ-೧ ಕಾರ್ಮಿಕ ದಿನಾಚರಣೆಯಂದು ಸಿ.ಐ.ಟಿ.ಯು ನೂತನ ಪ್ರಣಾಳಿಕೆ

ಗಂಗಾವತಿ: ವ್ಯವಸ್ಥಿತ ಬಿಕ್ಕಟ್ಟಿನಲ್ಲಿ ಮುಳುಗಿರುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಆಕ್ರಮಣಕಾರಿ ದಾಳಿಯ ವಿರುದ್ಧ ಮತ್ತು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಸಮರಧೀರವಾಗಿ ಹೋರಾಡುತ್ತಿರುವ ವಿಶ್ವದ ದುಡಿಯುವ ಜನರಿಗೆ ಸಿಐಟಿಯು ಕ್ರಾಂತಿಕಾರಿ ಶುಭಾಶಯಗಳನ್ನು ಕೋರುತ್ತಾ, ಮೇ-೧ ಗುರುವಾರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಂದು ಸಿಐಟಿಯು ದುಡಿಯುವ ವರ್ಗದ ಅಂತರಾಷ್ಟ್ರೀಯತೆಗೆ ತನ್ನ ಬದ್ಧತೆಯನ್ನು ಹೊಂದಿ ಶೋಷಣೆ, ತಾರತಮ್ಯದ ವಿರುದ್ಧ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಎಲ್ಲಾ ದುಡಿಯುವ ಜನರ ಹೋರಾಟಗಳಲ್ಲಿ ಅವರೊಂದಿಗೆ ಒಗ್ಗೂಡಿ ನೂತನ ಪ್ರಣಾಳಿಕೆಯನ್ನು ತಂದಿದೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಮೇ-೧ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶ್ರೀ ಚನ್ನಬಸವ ಕಲಾಮಂದಿರದಲ್ಲಿ ಆಯೋಜಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಯೂಟ ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷ್ಮೀದೇವಿ ಸೋನಾರ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಿ.ಐ.ಟಿ.ಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳ ಜಂಟಿ ವೇದಿಕೆಯಡಿಯಲ್ಲಿ ೨೦೨೫ರ ಮೇ ೨೦ ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಜ್ಜಾಗುತ್ತಿರುವ ಭಾರತದ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಈ ಮುಷ್ಕರವು ದುಡಿಯುವ ಜನರ ಹಕ್ಕುಗಳು ಮತ್ತು ಜೀವನೋಪಾಯದ ಮೇಲೆ ಆಡಳಿತ ವರ್ಗಗಳ ಕ್ರೂರ ದಾಳಿಯ ವಿರುದ್ಧ ಭಾರತೀಯ ಕಾರ್ಮಿಕ ವರ್ಗದ ಅತಿದೊಡ್ಡ ಕ್ರಮವಾಗಲಿದೆ. ದೇಶದ ವರ್ಗ ಆಧಾರಿತ ಕಾರ್ಮಿಕ ಸಂಘವಾಗಿ, ಸಿಐಟಿಯು ಈ ಸಾರ್ವತ್ರಿಕ ಮುಷ್ಕರವನ್ನು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಹೊಸ ಹಂತದ ಪ್ರತಿದಾಳಿಯ ಆರಂಭವನ್ನಾಗಿ ಮಾಡುವ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇಂದಿನ ಹೋರಾಟವು ರಾಷ್ಟ್ರೀಯ ಆರ್ಥಿಕತೆಯ ಮೇಲಿನ ಕಾರ್ಪೊರೇಟ್ ಲೂಟಿಯ ವಿರುದ್ಧವಾಗಿದೆ; ಇದು ದುಡಿಯುವ ಜನರ ಮೂಲಭೂತ ಪ್ರಜಾಪ್ರಭುತ್ವ, ಸಾಂವಿಧಾನಿಕ ಮತ್ತು ಕಷ್ಟಪಟ್ಟು ಗೆದ್ದ ಕೆಲಸದ ಸ್ಥಳದಲ್ಲಿನ ಹಕ್ಕುಗಳ ಮೇಲಿನ ದಾಳಿಯ ವಿರುದ್ಧವಾಗಿದೆ. ಸಾಮ್ರಾಜ್ಯಶಾಹಿ ಮತ್ತು ಬಲಪಂತೀಯ ನವ-ಫ್ಯಾಸಿಸ್ಟ್ ರಾಜಕೀಯ ಶಕ್ತಿಗಳ ವಿರುದ್ಧ ವಿವಿಧ ರಾಷ್ಟ್ರಗಳಲ್ಲಿ ದಿಟ್ಟ ಹೋರಾಟಗಳನ್ನು ಸಂಘಟಿಸಿದ್ದಕ್ಕಾಗಿ ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟದ (ಡಬ್ಲ್ಯೂ.ಎಫ್.ಟಿ.ಯು) ನೇತೃತ್ವದಲ್ಲಿ ಅಂತರಾಷ್ಟ್ರೀಯ ವರ್ಗಾಧಾರಿತ ಕಾರ್ಮಿಕ ವರ್ಗ ಚಳುವಳಿಯನ್ನು ಸಿಐಟಿಯು ಬೆಂಬಲಿಸುತ್ತದೆ ಮತ್ತು ಅಭಿನಂದಿಸುತ್ತದೆ. ಸಮಾಜವಾದದ ಧ್ವಜವನ್ನು ಎತ್ತರಕ್ಕೆ ಎತ್ತಿ ಹಿಡಿದಿದ್ದಕ್ಕಾಗಿ ಚೀನಾ, ಕ್ಯೂಬಾ, ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾದ ಸಮಾಜವಾದಿ ದೇಶಗಳ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಸಮಾಜವಾದಿ ರಾಷ್ಟ್ರಗಳು ಹಾಗೂ ಸಮಾಜವಾದವನ್ನು ರಕ್ಷಿಸಲು, ಸಾಮ್ರಾಜ್ಯಶಾಹಿ ಕುತಂತ್ರಗಳನ್ನು ವಿರೋಧಿಸುತ್ತಾ ತಮ್ಮ ಜನರ ಜೀವನ ಮಟ್ಟವನ್ನು ಸುಧಾರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಿ.ಐ.ಟಿ.ಯು ಹೋರಾಟದಲ್ಲಿ ಹೊಸ ಪ್ರಣಾಳಿಕೆಯನ್ನು ತಂದಿದೆ ಎಂದರು.

ಕಾರ್ಯಕ್ರಮದ ನಿರ್ವಹಣೆಯನ್ನು ಸಿ.ಐ.ಟಿ.ಯು ತಾಲೂಕ ಕಾರ್ಯದರ್ಶಿ ಮಂಜುನಾಥ ಡಗ್ಗಿ ಅಚ್ಚುಕಟ್ಟಾಗಿ ನಡೆಸಿದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ನ ನೂರಾರು ಸದಸ್ಯರು ಪಾಲ್ಗೊಂಡಿದ್ದರು

ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಣೆ : ಭಾರಧ್ವಾಜ್

ಗಂಗಾವತಿ: ಏಪ್ರಿಲ್-೩೦ ಬುಧವಾರ ನಗರದ ಬಸ್ ನಿಲ್ದಾಣ ಹತ್ತಿರದ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಪ್ರಯುಕ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ, ಅವರ ಸಮಾನತೆ ತತ್ವಗಳ ಕುರಿತು ತಿಳಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಇಂಕಿಲಾಬಿ ಫಯಾಜ್ ಸರಾಜಿದಾರ, ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ಮಹೆಬೂಬಸಾಬ್ ಲಾಠಿ, ಜಂಟಿ ಕಾರ್ಯದರ್ಶಿ ಚಾಂದ್‌ಪಾಷಾ ಮುರಾಹರಿನಗರ, ಸದಸ್ಯರುಗಳಾದ ಹುಲ್ಲೇಶ, ಜಗದೇಶ ಮೇಸ್ತ್ರಿ, ಸೋಮು ಜಿ. ಸೇರಿದಂತೆ ಇತರರು ಪಾಲ್ಗೊಂಡಿದ್ದರು.