ರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ-ಗೊರೂರು ಅನಂತರಾಜು

ಹಾಸನ ಜಿಲ್ಲಾ ಕಲಾವಿದರ ಸಂಘದ ವ್ಯಾಟ್ಸಪ್ ಗ್ರೂಪ್‌ನಲ್ಲಿ ಟಿ.ನಾಗರಾಜು ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆ, ದಾನ ಶೂರ ಕರ್ಣ ನಾಟಕಗಳ ಪ್ರತಿಗಳನ್ನು ಟೈಪ್ ಮಾಡಿ ಹಾಕಿದ್ದರು. ಅದು ಕಲಾತಂಡಗಳು ನಾಟಕಗಳ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳಲು ಸೂಕ್ತವಾಗಿತ್ತು. ಈ ನಾಟಕಗಳ ಪ್ರತಿಯಲ್ಲಿ ಕಲಾವಿದರು ತಮ್ಮ ಕಿರು ಪರಿಚಯ ಜೊತೆಗೆ ನಾಟಕ ಕುರಿತಾಗಿ ಕೆಲ ಅಂಶ ಹಾಕಿದ್ದರು. ಅವರ ನಂಬರ್ ಗಮನಿಸಿ ಪೋನಾಯಿಸಿದೆ. ನಾಗರಾಜು ತಮ್ಮ ಕಲಾ ಪರಿಚಯ ಹೇಳಿಕೊಳ್ಳುತ್ತಾ ತಾವು ಹಾಸನದ ಕಲಾತಂಡಗಳಲ್ಲಿ ಬಂದು ಭಾಗವಹಿಸಿದ್ದೇನೆ ಎಂದರು. ಹನುಮಂತನ ಪಾತ್ರಾಭಿನಯದ ವಿಡಿಯೋ ಶೇರ್ ಮಾಡಿ ಪರಿಚಯ ಮತ್ತು ಪೋಟೋ ಕಳಿಸಿದರು.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ರಂಗ ನಿರ್ದೇಶಕರು ತಿಮ್ಮಯ್ಯ ಮತ್ತು ಕರಿಯಮ್ಮನವರ ಜೇಷ್ಠ ಪುತ್ರರಾಗಿ ದಿ. ೨೨-೧೦-೧೯೬೨ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಮಾಯಸಂದ್ರದಲ್ಲಿ, ಪದವಿ ಶಿಕ್ಷಣ ಆದಿಚುಂಚನಗಿರಿ ಕ್ಷೇತ್ರ (ಬಿ.ಎ). ಬಾಲ್ಯದಿಂದಲೂ ಅಭಿನಯವನ್ನು ಹವ್ಯಾಸವಾಗಿ ಬಾಲ ಕಲಾವಿದರಾಗಿ ತಂದೆ ಮಾರ್ಗದರ್ಶನದಲ್ಲಿ ೯ನೇ ವಯಸ್ಸಿಗೆ ದಾನ ಶೂರ ಕರ್ಣ ನಾಟಕದ ವೃಷಿಕೇತು ಪಾತ್ರದ ಮೂಲಕ ರಂಗಪ್ರವೇಶ ಮಾಡಿದರು. ಉತ್ತಮ ಶಾರೀರವಿದ್ದ ಕಾರಣ ರುಕ್ಮಿಣಿ ಸೀತೆ ದ್ರೌಪದಿ ಸ್ವಯಂಪ್ರಭೆ ಕೊರಮಿ ಸಖಿಯರು ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷವಾಗಿ ಕೊರಮಿ ಪಾತ್ರದಲ್ಲಿ ಮಿಂಚಿದರು. ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಸಾತ್ಯಕಿ ಶ್ರೀಕೃಷ್ಣ ಕರ್ಣ ವಿದುರ ಅಭಿಮನ್ಯು ಮತ್ತು ರಾಮಾಯಣದಲ್ಲಿ ಭರತ ಶತೃಘ್ನ ವಿಭೀಷಣ ಲಂಕಿಣಿ ಘೋರ ಶೂರ್ಪನಖಿ.. ಹೀಗೆ ಎರಡು ನಾಟಕಗಳ ವಿವಿಧ ಪಾತ್ರಗಳಲ್ಲಿ ಹಾಗೂ ಯಕ್ಷಗಾನದಲ್ಲಿ ತುರುವೇಕೆರೆ ತಾ. ಪುರ ಗ್ರಾಮದ ಭಾಗವತರು ಗಂಗಣ್ಣನವರ ಮಾರ್ಗದರ್ಶನದಲ್ಲಿ ದಕ್ಷಯಜ್ಞ ನಾಟಕದಲ್ಲಿ ದಕ್ಷನ ಪಾತ್ರ ನಿರ್ವಹಿಸಿದ್ದಾರೆ. ಪಂಚವಟಿ ಯಕ್ಷಗಾನ ನಾಟಕದಲ್ಲಿ ಆಂಜನೇಯನ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ೨೦೦೪ರಲ್ಲಿ ಮಾಯಸಂದ್ರದ ಗ್ರಾಮದೇವತೆ ಹಬ್ಬಕ್ಕೆ ಸಂಪೂರ್ಣ ರಾಮಾಯಣ ನಾಟಕದಲ್ಲಿ ಘಂಟಸಾಲಾ ಖ್ಯಾತಿಯ ಮಾಯಸಂದ್ರದ ಗುರುಗಳು ಎಂ.ಹೆಚ್.ನಾರಾಯಣ್‌ರ ಮಾರ್ಗದರ್ಶನದಲ್ಲಿ ಆಂಜನೇಯ ಪಾತ್ರದಲ್ಲಿ ಹೆಸರು ಪಡೆದರು. ತುರುವೇಕೆರೆ ತಾ. ಪುರ ಗ್ರಾಮದಲ್ಲಿ ೨೦೦೭ರಲ್ಲಿ ಆಂಜನೇಯ ಪಾತ್ರಾಭಿನಯಕ್ಕೆ ಅಂದಿನ ಮುಖ್ಯಮಂತ್ರಿಗಳಿ೦ದ ಪ್ರಶಂಸಾ ಪತ್ರ ಸಂದಿದೆ. ತುರುವೇಕೆರೆ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ತುಮಕೂರು ಮಂಡ್ಯ ಮೈಸೂರು ರಾಮನಗರ ಜಿಲ್ಲೆಗಳಲ್ಲಿ ಹಲವಾರು ಕಲಾಮಂದಿರ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸಿ ಅಭಿನಯಿಸಿದ್ದಾರೆ. ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಂಜನೇಯ ಪಾತ್ರಕ್ಕೆ ಪ್ರಶಂಸೆ ಬಂದಿದೆ. ನನ್ನ ಕಲಾರಂಗಕ್ಕೆ ಮಾರ್ಗದರ್ಶನ ನೀಡಿದ ತಂದೆ ತಿಮ್ಮಯ್ಯರವರು ಪಿಟೀಲು ವಾದಕರು ವೆಂಕಟರಾಮಯ್ಯ, ಗುರುಗಳಾದ ಎಂ.ಹೆಚ್.ನಾರಾಯಣ್ ತಬಲ ವಾದಕರು ಜಯಕುಮಾರಣ್ಣ ಗುರುಗಳಾದ ಚನ್ನರಾಯಪಟ್ಟಣ ತಾ. ದ್ಯಾವೇನಹಳ್ಳಿ ಚೌಡಪ್ಪದಾಸರು ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆ ರಂಗಪ್ಪದಾಸರು ಅಂಚಿಹಳ್ಳಿ ಸಂಜೀವಮೂರ್ತಿರವರಿಗೆ ನನ್ನ ನಮನಗಳೆಂದು ಸ್ಮರಿಸಿದರು. ಎಡೆಯೂರು ಸಾಂಸ್ಕೃತಿಕ ವೇದಿಕೆ ಎಡೆಯೂರು. ಶ್ರೀ ಕೊಲ್ಲಾಪುರದಮ್ಮ ಕೃಪಾಪೋಷಿತ ನಾಟಕ ಸಂಘ ಮಾಯಸಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಡೆಯೂರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಶಾಲಾ ಶಿಕ್ಷಕರು ವೈ.ಎಸ್. ಹನುಮಂತಯ್ಯನವರು, ಶಾಲಾ ಶಿಕ್ಷಕರು ಇ.ಶಿವಣ್ಣ, ಸಿ.ಪಿ.ಪ್ರಕಾಶ್ ಸಾರಥ್ಯದಲ್ಲಿ ೨೦೧೭ರಲ್ಲಿ ಮಾಯಸಂದ್ರದ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕದಂದು ಕಲಾಸೇವೆಗೆ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪ:ಬ್ರ: ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರು ರಜತ ಮುಕುಟ ಧಾರಣೆಯೊಂದಿಗೆ ಅಭಿನಯ ಚತುರ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ತಾ. ಗಣರಾಜ್ಯೋತ್ಸವ ಸಮಿತಿ. ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಕನ್ನಡ ರಾಜ್ಯೋತ್ಸವ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಜಿಲ್ಲಾ ಕಲಾವಿದರ ಬಳಗ ಮಂಡ್ಯ. ತುಮಕೂರು ರಂಗಕಲಾವಿದರ ಸಂಘಗಳಿ೦ದ ಕಲಾಕ್ಷೇತ್ರ ಸಾಧನೆಗೆ ಪುರಸ್ಕಾರ ದೊರೆತಿದೆ. ಸರ್ಕಾರಿ ಸೇವೆಯಲ್ಲಿ ಬೆರಳಚ್ಚುಗಾರನಾಗಿ ಕಾವೇರಿ ನೀರಾವರಿ ನಿಗಮದಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ಅಕ್ಟೋಬರ್೨೦೨೨ ರಂದು ನಿವೃತ್ತಿ ಹೊಂದಿ ವಿಶ್ರಾಂತ ಜೀವನದಲ್ಲಿ ಕಲಾಸೇವೆ ಮುಂದುವರೆಸಿದ್ದಾರೆ. ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ
ಮೊ: ೯೪೪೯೪೬೨೮೭೯.
ವಿಳಾಸ ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧

ಹಣವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಧ ಮಕ್ಕಳಿಗೆ ಉಚಿತ ಹೇರ್ ಕಟಿಂಗ್ ಸೇವೆ: ಕಾಂತಪ್ಪ ಎಚ್. ಬಾವಿಕಟ್ಟಿ

ಗಂಗಾವತಿ: ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಣವಾಳ ಗ್ರಾಮದಲ್ಲಿ ಕರ್ನಾಟಕ ಹೇರ್ ಕಟಿಂಗ್ ಶಾಪ್ ಹಾಗೂ ಬ್ಯೂಟಿ ಪಾರ್ಲರ್ ಜೆಂಟ್ಸ್ ವತಿಯಿಂದ ಮಾಲಿಕರಾದ ಕಾಂತಪ್ಪ ಹಡಪದ ಬಾವಿಕಟ್ಟಿ ಅವರು ಅಂಧ ಮಕ್ಕಳಿಗೆ ತಮ್ಮ ಜೀವನ ಪರ್ಯಂತ ಉಚಿತ ಕ್ಷೌರ ವೃತ್ತಿಯನ್ನು ಹಲವು ವರ್ಷಗಳಿಂದ ಉಚಿತವಾಗಿ ಮಾಡುತ್ತಾ ಬಂದಿದ್ದು. ಈ ವರ್ಷದಲ್ಲಿ ಗ್ರಾಮ ಪಂಚಾಯತಿಯ ಮಳಿಗೆಯಲ್ಲಿರುವ ಅಂಗಡಿಯನ್ನು ತನ್ನ ಸ್ವಂತ ಜಮೀನಿನ ಸರ್ವೆ ನಂಬರಿಗೆ ಅಂಗಡಿಯನ್ನು ವರ್ಗಾಯಿಸಿಕೊಂಡು ಅಂದರೆ ಉಚಿತವಾಗಿ ಸೇವೆ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕಟಿಂಗ್ ಶಾಪ್ ಮಾಲಿಕರಾದ ಕಾಂತಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಕಾಯಕವೇ ಕೈಲಾಸ ಎಂಬಂತೆ ಇರುವ ನನ್ನ ವೃತ್ತಿಯಲ್ಲಿ ಅದರ ಒಂದು ಸೇವೆಗಾಗಿ ಅಂಧರಿಗೆ ನಾನು ಜೀವನ ಪರ್ಯಂತ ಅವರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಶ್ರೀ ಶನೇಶ್ವರ ಜಯಂತಿ ನಿಮಿತ್ಯ ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ ೨೬ ಮತ್ತು ೨೭ ರಂದು ಶ್ರೀ ಶನೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.

ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ನವಗ್ರಹ ಪೂಜಾ, ಗಣಹೋಮಗಳು ಜರುಗಿದವರು. ಮರುದಿನ ಮೇ-೨೭ ಮಂಳವಾರ ಬೆಳಗಿನ ಜಾವ ೫:೩೦ಕ್ಕೆ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಲೋಕಕಲ್ಯಾಣಕ್ಕಾಗಿ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು, ಹಾಗೆಯೇ ಮಠದ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಿಗೆ ಹಾಗೂ ಫಕೀರೇಶ್ವರ ಸ್ವಾಮಿ ಗದ್ದುಗೆಗೆ ಪೂಜಾ ಹಾಗೂ ಅಭಿಷೇಕ ಮಾಡಲಾಯಿತು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೂಕನಪಳ್ಳಿಯ ಫಕೀರಯ್ಯಸ್ವಾಮಿ ಹಿರೇಮಠ, ಶಾಂತಯ್ಯ ಪುರಾಣಿಕಮಠ ನಾಗೇಂದ್ರಗಡ, ಗಂಗಾವತಿಯ ಮಂಜುನಾಥ ಕುರುಗೋಡು, ಚಿದಾನಂದ ಶಂಕ್ರಪ್ಪ ಹೂಗಾರ, ಸಿ.ಬಿ.ಎಸ್ ಚಾನೆಲ್‌ನ ದಶರಥ, ಸಂಡೂರಿನ ಅನೂಪ ಬಂಡ್ರಿ, ಗುರಪ್ಪ ಕಾರಟಗಿ, ಅಮರಪ್ಪ ಕಲಬುರ್ಗಿ, ಬೆಟ್ಟಪ್ಪ ಬೀರಪ್ಪ ಜೀರಾಳ, ಜಯಕುಮಾರ ಶಂಭುಲಿಂಗಪ್ಪ ವಡ್ಡರಹಟ್ಟಿ, ಡಾ|| ಸುಜಾತ ಶ್ರೀನಿವಾಸಲು, ನಾಗನಗೌಡ ಪಾಟೀಲ್, ದೊಡ್ಡನಗೌಡ ಪಾಟೀಲ್, ಬಸವಣ್ಣೆಯ್ಯಸ್ವಾಮಿ ಹಿರೇಮಠ, ತಿಮ್ಮಾಪುರದ ಪರ್ವತಯ್ಯ ಹಿರೇಮಠ ಹಾಗೂ ಕುಟುಂಬವರ್ಗ ಈ ಎಲ್ಲಾ ದಂಪತಿಗಳು ಸೇರಿದಂತೆ ಕಲ್ಮಂಗಿ, ಆಗೋಲಿ, ಅಬ್ಬಿಗೇರಿ, ಸಾಲೋಟಗಿ, ಕಕ್ಕೇರಿ, ಕಾಸನಕಂಡಿ, ಪಿ.ಕೆ ಹಳ್ಳಿ, ಬೆನ್ನೂರು, ಹಿರೇಹಡಗಲಿ, ಕೇಸರಹಟ್ಟಿ, ವೆಂಕಟಗಿರಿ, ಗಡ್ಡಿ, ವಡ್ಡರಹಟ್ಟಿ ಹಾಗೂ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿ ಯಶಸ್ವಿಯಾಗಿ ಜರುಗಿದವು.

ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಿ, ಮದ್ಯಾಹ್ನ ಮಹಾಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾದರು ಎಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹೇಳಿದರು.

೧ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ.

ಗಂಗಾವತಿ: ಮೇ-೨೫ ಭಾನುವಾರದಂದು ವಿಜಯನಗರ ಜಿಲ್ಲೆಯ ಹಂಪಿನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪ ಭವನದಲ್ಲಿ ೧ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಆಯೋಜನೆಯಾಗಿತ್ತು. ಈ ಸ್ಪರ್ಧೆಯಲ್ಲಿ ಸರಿಸುಮಾರು ೫೦೦ ಹೆಚ್ಚು ವಿದ್ಯಾರ್ಥಿಗಳು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಪ್ರತಿಷ್ಠಿತ ಕರಾಟೆ ತರಬೇತಿ ಸಂಸ್ಥೆಯಾದ ಬಿ.ಎಲ್. ಬುಲ್ಸ್ ಕರಾಟೆ ಡು ಸ್ಪೋರ್ಟ್ ಅಸೋಸಿಯೇಷನ್ (ರಿ) ಗಂಗಾವತಿ ವತಿಯಿಂದ ೯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಟಾ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೪ ದ್ವಿತೀಯ ಸ್ಥಾನ, ೩ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೨ ದ್ವಿತೀಯ ಸ್ಥಾನ, ೧ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅಹಾನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಹರಿಣಿ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಚಿನ್ನು ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಅಖಿಲೇಶ್ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಯಷೀಕಾ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಬುಬಕರ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಶರತ್ ಪಂಡಿತ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರಣವಿ, ದಿಲೀಪ್, ಕಟಾ ವಿಭಾಗದಲ್ಲಿ ತೃತೀಯ ಪಡೆದು ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ರವರು ಮಾತನಾಡಿ ಈ ಕರಾಟೆ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕರಾಟೆ ಮುಖ್ಯ ತರಬೇತುದರಾದ ಮಂಜುನಾಥ ರಾಥೋಡ್ ಮಾತನಾಡಿ ಮಕ್ಕಳು ತಮ್ಮ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು. ಇವತ್ತಿನ ಸೋಲು ನಾಳಿನ ಗೆಲುವಿನ ಮೆಟ್ಟಲು ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಕರಾಟೆ ಶಿಕ್ಷಕರಾದ ಶಿಲ್ಪಾ. ಫಯಾಜ್, ಪ್ರಜ್ವಲ್, ಮೀನಾಕ್ಷಿ ಮತ್ತು ಕ್ರೀಡಾಪಟುಗಳ ಪೋಷಕರಾದ ಮಂಜುನಾಥ, ಸುನಿಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ಆಚರಣೆ.

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ ಶನೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.


ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಹೋಮ-ಹವನ ಸೇರಿದಂತೆ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮೇ-೨೭ ಮಂಗಳವಾರದಂದು ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಲಾಗುವುದು, ಅಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಕಾರಣ ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭಕ್ತಮಂಡಳಿ ಪ್ರಮುಖರಾದ ಮಂಜುನಾಥ ಕುರುಗೋಡು ಮೊಬೈಲ್ ಸಂಖ್ಯೆ: ೯೩೪೨೨೭೦೪೦೮ ಗೆ ಸಂಪರ್ಕಿಸಿರಿ.

ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಶ್ರೀಯುತ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಶ್ರೀ‌ ಗೊರೂರು ಅನಂತರಾಜುರವರು ಸಕಲಕಲಾ‌ ವಲ್ಲಭ ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ ಕಲೆ-ಸೆಲೆ ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ.

ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್ ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ ಆಕರ್ಷೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,‌ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ ಇದಾಗಿದೆ.

ಈ ಪುಸ್ತಕದಲ್ಲಿ ಒಟ್ಟು ನಲವತ್ತು ಲೇಖನಗಳು ಒಳಗೊಂಡಿವೆ. ಸಮಾಜಮುಖಿಯಾದ ನಾಟಕಗಳು, ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ, ನಾಡು ನುಡಿಯ ಬಗ್ಗೆ ಮಾಹಿತಿ ಇದೆ.

*ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಸಮಾಜಮುಖಿ ಬಳಗದವರಿಂದ ವಾರಸುದಾರ ಮತ್ತು ಚಾವುಂಡರಾಯ ಎಂಬ ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ ಬರೆದಿರುವ ಲೇಖನವಿದಾಗಿದೆ. ಈ ನಾಟಕವು ರಾಯಪುರ ಗ್ರಾಮದ ಜಯರಾಮ್ ರವರ ಮುಖಂಡತ್ವದಲ್ಲಿ ನಡೆದಿದೆ.  ಸಿರಿ ಸೆರೆ ನಾಟಕ ಬೆಂಗಳೂರು ಕೆಂಪೇಗೌಡರ ಜೀವನ ಚರಿತ್ರೆ ಆಧಾರಿತವಾಗಿದೆ.

ಶಿಶುನಾಳ ಶರೀಫರ ಜೀವನ ಗಾಥೆ ಹಾಸನದ ರಂಗ ಸಿರಿ ಕಾಲೇಜು ರಂಗೋತ್ಸವದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳ ಪ್ರದರ್ಶನಗೊಂಡವು. ಹಾಸನದ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಜುನಾಥ್ ಬೆಳೆಕೆರೆ ರಚಿಸಿದ ಶರೀಫ್ ನಾಟಕ ಪ್ರದರ್ಶಿಸಿದ ಬಗ್ಗೆ‌ ಮನೋಜ್ಞ ಲೇಖನ ‌ ಇದಾಗಿದೆ.

ಬಾಡಿದ ಬದುಕು ನಾಟಕ ಮತ್ತು ಗ್ಯಾರಂಟಿ ರಾಮಣ್ಣ.
ಹಾಸನದ ಸಾಹಿತ್ಯ ಭವನದಲ್ಲಿ ಪ್ರಗತಿ ಗ್ರಾಮೀಣ‌ ಅಭಿವೃದ್ದಿ ಮತ್ತು ತರಬೇತಿ ಸಂಸ್ಥೆ, ಆಶ್ರಯದಲ್ಲಿ ರಂಗ ನಟ ಡಿ.ವಿ.ನಾಗಮೇಹನ್ ಹುಟ್ಟುಹಬ್ಬದ ನಿಮಿತ್ತ ರಂಗಗೀತೆಗಳ ಕಾರ್ಯಕ್ರಮ ಹಾಗೂ ಗ್ಯಾರಂಟಿ ರಾಮಣ್ಣ ವಿರಚಿತ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರದರ್ಶನದ ಬಗ್ಗೆ ಸುಂದರವಾಗಿ ಬರೆದ ಲೇಖನ ಇದಾಗಿದೆ. ಈ ನಾಟಕದಲ್ಲಿ ರಾಮಣ್ಣ ಅತಿಯಾದ ರಂಗಸಜ್ಜಿಕೆ, ಥಳಕು ಬಳುಕು ಯಾವುದೂ ಇಲ್ಲದೆ ಸಹಜವಾಗಿಯೇ ನಟರಿಂದ ಅಭಿನಯ ತೆಗೆದಿದ್ದಾರೆ. ಇಂತಹ ಉಪಯುಕ್ತವಾದ ಲೇಖನಗಳನ್ನೊಳಗೊಂಡ ಈ ಕಲೆ-ಸೆಲೆ ಪುಸ್ತಕವುಎಲ್ಲರ ಮನಮುಟ್ಟಲಿ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆಯಲಿ ಎಂದು ಆಶಿಸುತ್ತೇನೆ

ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ಮೊ:9449657379

ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

ಗಂಗಾವತಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಯಶಸ್ವಿಯಾಗಿ ಜೀವನ ನಡೆಸಬೇಕಾದರೆ ಕಾಲೇಜು ಹಂತದಲ್ಲಿ ಜ್ಞಾನವನ್ನು ಕೌಶಲ್ಯಗಳನ್ನು ಸಂಪಾದಿಸಬೇಕಾದ ಅವಶ್ಯಕತೆ ಇದೆ ಎಂದು ಕವಿತಾಳದ ಪ್ರಗತಿಪರ ಕೃಷಿ ಸಾಧಕಿಯಾದ ಕವಿತಾ ಮಿಶ್ರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಅವರು ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ೧೨ನೇ ವಾರ್ಷಿಕೋತ್ಸವ ಮತ್ತು ರ‍್ಯಾಂಕ್ ಪಡೆದ ಸಾಧಕಿಯರನ್ನ ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಗಳಿಗಿಂತ ಕೃಷಿ ವೃತ್ತಿಯು ಅತ್ಯಂತ ಮಹತ್ವವಾದದ್ದು ಮತ್ತು ಬೆಲೆಯುತವಾದದ್ದು, ಏಕೆಂದರೆ ಮುಂದಿನ ದಿನಮಾನಗಳಲ್ಲಿ ಒಂದೇ ಒಂದು ಎಕರೆ ಕೃಷಿ ಭೂಮಿ ಇರುವ ರೈತನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುತ್ತಾನೆ ಎಂದು ತಿಳಿಸಿದರು. ಇಂದಿನ ಮಹಿಳೆ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಕಡೆ ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಇಂದಿನ ಯುವತಿಯರಲ್ಲಿ ಬುದ್ಧಿವಂತಿಕೆ ಜೊತೆಗೆ ತಾಳ್ಮೆ, ಆತ್ಮವಿಶ್ವಾಸ ಸಾಧಿಸುವ ಛಲ ಕುಟುಂಬದ ಜೊತೆ ಹೊಂದಾಣಿಕೆ, ಸಹಕಾರ, ಸಂಸ್ಕಾರಗಳ ಗುಚ್ಛವಾಗಿ ಮುಂದೆ ಸಾಗಬೇಕು, ಅದರಿಂದ ಪರಿಪೂರ್ಣ ಬದುಕಿನ ಅನಾವರಣವಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೇಮಂತರಾಜ್ ಕಲ್ಮಿಂಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಶಿಸಿದರು.
ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ನಿಯಮಿತ ಅವಧಿಯಲ್ಲಿ ಸಂಸ್ಥೆಯ ಅಮೋಘ ಸಾಧನೆಗೆ ವಿದ್ಯಾರ್ಥಿನಿಯರು ಕಾರಣರಾಗಿದ್ದಾರೆ. ೯ ವರ್ಷದಲ್ಲಿ ಆರು ಚಿನ್ನದ ಪದಕ, ೨೪ ರ‍್ಯಾಂಕುಗಳನ್ನು ಗಳಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ವಿಶಿಷ್ಟ ಸಾಧನೆಗೈದಿದೆ ಎಂದರು.

ಡಾ. ಅಮಿತ್ ಕುಮಾರ್ ರೆಡ್ಡಿಯವರು ಉಪನ್ಯಾಸಕರಿಗೆ ಅವರ ಪರಿಶ್ರಮವನ್ನು ಪ್ರಶಂಶಿಸಿ, ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ಮಾತನಾಡಿ, ಪ್ರತಿವರ್ಷ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ, ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾಚಾರ್ಯರಾದ ಬಸಪ್ಪ ಸಿರಿಗೇರಿ ರ‍್ಯಾಂಕ್ ಸಾಧಕಿಯರಾದ ಬಿ.ಕಾಂ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದ ಜೇಬಾ, ೫ನೇ ರ‍್ಯಾಂಕ್ ಪಡೆದ ಅಕ್ಷತಾ, ೬ನೇ ರ‍್ಯಾಂಕ್ ಪಡೆದ ಜಯಶ್ರೀ, ಅದೇರಿತಿ ಬಿ.ಎ ಪದವಿಯಲ್ಲಿ ಕುಮಾರಿ ಸುಭದ್ರಾ ಇವರು ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಮತ್ತು ೬ನೇ ರ‍್ಯಾಂಕ್, ಕುಮಾರಿ ಉಮಾ ಇವರು ೪ನೇ ರ‍್ಯಾಂಕ್, ಕುಮಾರಿ ಹನುಮಂತಿ ೫ನೇ ರ‍್ಯಾಂಕ್, ಕುಮಾರಿ ಅನಿತಾ ಕೋರಿ ೧೦ನೇ ರ‍್ಯಾಂಕ್ ಗಳಿಸಿದ ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯ ನೆರವೇರಿಸಿಕೊಟ್ಟು, ವಿದ್ಯಾರ್ಥಿನಿಯರ ಸಾಧನೆ ಹಾಗೂ ಪಾಲಕರ ಸಹಕಾರ, ಪ್ರಾಧ್ಯಾಪಕರ ಶ್ರಮವನ್ನ ಸ್ಮರಿಸಿದರು.

ಈ ಸಂದರ್ಭದಲ್ಲಿ ಶಂಕರಲಿAಗಪ್ಪ ಕೊಪ್ಪದ್ ರವರು ಮುಖ್ಯ ಅತಿಥಿಗಳಾಗಿ ಹಿತನುಡಿಗಳನ್ನು ನುಡಿದರು. ವಿಶೇಷವಾಗಿ ಈ ಸಾಧನೆಯನ್ನು ಇತಿಹಾಸ ಪ್ರಾಧ್ಯಾಪಕರಾದ ದಿವಂಗತ ಪಂಡರಿನಾಥ್ ಅಗ್ನಿಹೋತ್ರಿ ಅವರಿಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪಂಪಾಪತಿ, ಪವಿತ್ರ ಬಸವರಾಜ್ ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರು ಶಿವಶರಣರವರು ನಿರೂಪಿಸಿದರೆ, ಶ್ರೀಮತಿ ಆಶಾ ಸ್ವಾಗತಿಸಿ, ಅಧ್ಯಾಪಕರಾದ ಚನ್ನಬಸವ ವಂದಿಸಿದರು.

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ ದೊರೆಗೆ ಜೊತೆಗಿದ್ದೆ ಮಕಾಡೆ ಮಲಗಿಸುವ ಚಾಣಾಕ್ಷ ನಡೆ, ಕುಹಕ ಮಾತು, ಸೇಡಿನ ಜ್ಞಾಲೆ ಒಡಲಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡವಾಗಿ ನಗುವ ನಟನೆ, ಬೆನ್ನ ಹಿಂದಿನ ವ್ಯಂಗ್ಯ ನಗೆ, ಸೇಡಿನ ಜ್ವಾಲೆಯ ವಿಕಟ ನಗೆ, ಮಾತಿನ ಮೋಡಿಯ ಕಪಟಿ ಅಭಿನಯ ಇವೆಲ್ಲವೂ ಈ ಪಾತ್ರದಲ್ಲಿ ಅಡಕವಾಗಿದೆ. ಹೀಗಾಗಿ ಎ೦ಟು ಗಂಟೆಯ ನಾಟಕದಲ್ಲಿ ಈ ಪಾತ್ರವೂ ವೈಶಿಷ್ಟಪೂರ್ಣವಾಗಿ ತನ್ನದೇ ಸ್ಥಾನಮಾನ ಹೊಂದಿದೆ. ಇಂತಹ ಒಂದು ಪಾತ್ರವನ್ನು ನಿವ೯ಹಿಸುವಲ್ಲಿ ತಮ್ಮದೇ ಶ್ರಮದಿಂದ ತಕ್ಕಮಟ್ಟಿಗೆ ಯಶಸ್ಸು ಕಂಡವರು ನಾಗಮೋಹನ್. ಶಕುನಿಯಾಗಿ 40 ಬಾರಿ ನಟಿಸಿರುವರು ಈ ಪಾತ್ರಕ್ಕೆ ಆನಂದ ಮಹಾದಾನಂದ ಪ್ರಿಯ ಶಕುನಿಗೆ ಮಹಾದನಂದ.. ಎಂಬ ಸಂದರ್ಭೋಚಿತ ರಂಗಗೀತೆಯನ್ನು ರಚಿಸಿ ಅಳವಡಿಸಿದವರು ತುಮಕೂರು ಕಡೆಯ ರಂಗ ನಿರ್ದೇಶಕರು. ನಿಜಕ್ಕೂ ಈ ಹಾಡು ಈ ಪಾತ್ರಕ್ಕೆ ಜೀವ ಕಳೆ ತುಂಬಿದೆ.

ಇರಲಿ ಈ ಮೋಹನ ಇವತ್ತಿನ ಕಲಾವಿದರಲ್ಲ, ಇವರನ್ನು ಹತ್ತಾರು ವರ್ಷಗಳಿಂದ ಬಲ್ಲೆನಾದರೊ, ಇವರ ರಂಗ ಚಟುವಟಿಕೆ ಗಮನಿಸಿದ್ದೇನೆ ಆದರೂ ಯಾಕೋ ಈ ಮೋಹನ ನನ್ನ ಬರಹಕ್ಕೆ ಸಿಕ್ಕದೆ ಮೋಹಿನಿ ಆಟ ಆಡುತ್ತಾ ತಪ್ಪಿಸಿಕೊಂಡು ಬ೦ದಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿದ್ದೆ. ಬಿಟ್ಟಗೌಡನಹಳ್ಳಿ ರಮೇಶ್ ಗೌಡರು ತಮ್ಮಳ್ಳಿಯಲ್ಲಿ ಮನೆಯ ಮಂದೆಯೇ ಸೀನರಿ ಹಾಕಿಸಿ ನಾಟಕ ಮಾಡಿಸುತ್ತಿದ್ದರು. ಇಲ್ಲಿಂದಲೇ ಮಾತನಾಡಿಸಿ ಅವರ ರ೦ ಸೇವೆ ಕುರಿತಾಗಿ ಬರೆದಿದ್ದೆ. ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಯನ್ನು ಪೋಷಿಸುವ ಕಲಾವಿದರು ಬೇಕು. ಈ ದಿಶೆಯಲ್ಲಿ ಮೋಹನ್ ರವರದು ಗಮನಾರ್ಹ ಪಾತ್ರವಿದೆ. ಈ ಪಾತ್ರದಾರಿಯನ್ನು ಫೋನ್‌ನಲ್ಲಿ ಮಾತನಾಡಿಸಿದೆ.

ಮೋಹನ್, ನಾನು ಈವರೆವಿಗೂ ನೂರಾರು ಕಲಾವಿದರ ಕುರಿತಾಗಿ ಬರೆದಿರುವೆನಷ್ಟೇ. ಇದು ನಿಮಗೂ ಗೊತ್ತು. ಆದರೂ ನೀವೇಕೆ ನನ್ನ ಬರಹಕ್ಕೆ ಸಿಗುತ್ತಿಲ್ಲ. “ಸರಿ ಸಾರ್, ಇವತ್ತು ಶನಿವಾರ. ನನಗೆ ಯಾವುದೇ ಪಂಕ್ಷನ್ ಇಲ್ಲ.
(ಇವರು ಅಡಿಗೆ ಕಂಟ್ರಾಕ್ಸರ್. ಅಡಿಗೆ ಮಾಡಿ ಬಡಿಸುವ ಬಾಣಸಿಗ. ಎಷ್ಟೋ ನಾಟಕ ಕಾರ್ಯಕ್ರಮಗಳಿಗೆ ಅನ್ನದಾನ ಮಾಡಿದ ಪುಣ್ಯಾತ್ಮ) ಬನ್ನಿ ಸಾರ್ ಮಾತನಾಡೋಣ ಎಂದರು. ಇಲ್ಲಾ ನಾನು ಬೆಂಗಳೂರಿನಲ್ಲಿದ್ದೇನೆ. ಸಮಯ ವ್ಯರ್ಥ ಮಾಡದೇ ನಮ್ಮ ರಂಗ ಸೇವೆ ಕುರಿತಾಗಿ ಮಾಹಿತಿ ಹೇಳಿ ಎಂದೆ. “ಸರಿ, ಬರಕ್ಕೂಳ್ಳಿ ಎಂದರು. ನನ್ನ ಹೆಸರು ಡಿ.ವಿ. ನಾಗಮೋಹನ್. ತಂದೆ ಹೆಸರು ಡಿ.ಕೆ. ವಿಶ್ವೇಶ್ವರಯ್ಯ. ತಾಯಿ ಸರೋಜಮ್ಮ. ನಮ್ಮ ಊರು ದಿಂಡಗೂರು. ಚನ್ನರಾಯಪಟ್ಟಣ ತಾಲೂಕಿನ ಗ್ರಾಮ. ನಾನು 18 ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಪ್ರವೇಶ ಮಾಡಿದೆ. ಮೊದಲನೇ ಪಾತ್ರ ಉತ್ತರೆ. 2ನೇ ಯದು ರುಕ್ಮಿಣಿ, ನಂತರ ನಾಗರಾಣಿ..ಹೀಗೆ ಆರಂಭದಲ್ಲಿ ಸ್ತ್ರೀ ಪಾತ್ರವೇ ಸಿಕ್ಕವು. ನಾಚಿಕೊಳ್ಳದೇ ಪಕ್ಕ ನಿಭಾಯಿಸಿದೆ. ಆ ನಂತರ ಶಕುನಿ, ದುರ್ಯೋಧನ, ಭೀಮ, ದುಶ್ಯಾಸನ, ಅರ್ಜುನ ಇನ್ನೂ ಅನೇಕ ಕುರುಕ್ಷೇತ್ರ ನಾಟಕದ ಪಾತ್ರಗಳನ್ನೆಲ್ಲ ಮಾಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿರುತ್ತೇನೆ. ಕಲಾರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಕಾರ್ಯಧ್ಯಕ್ಷನಾಗಿ, ಅನ್ನಪೂರ್ಣೇಶ್ವರಿ ಕಲಾ ಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಅಧ್ಯಕ್ಷ. ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲನು.

ಹೌದು, ಮೋಹನ್ ಹಾಸನದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹಾಸನದ ಕಲಾಭವನದಲ್ಲಿ ಕೇವಲ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಚಿಂತಿಸಿ ಪ್ರಯತ್ನಿಸಿದ್ದಾರೆ. ರತಿ ಕಲ್ಯಾಣ, ಕೌಂಡಿಲಕನ ವಧೆ, ರಾಜಾಸುಯಾಗ, ಭಕ್ತ ಪ್ರಹ್ಲಾದ, ಭಕ್ತ ಮಾಂಧಾತ, ಸತ್ಯಮಾರ್ತಿ, ತ್ರಿಜನ್ಮ ಮೋಕ್ಷ, ಮೂರೂವರೆ ವಜ್ರ, ವೀರ ಅಭಿಮನ್ಯು ಹೀಗೆ ಪೌರಾಣಿಕ ನಾಟಕಗಳನ್ನು ಅಡಿಸಿದ್ದಾರೆ. ರತ್ನ ಮಾಂಗಲ್ಯ ಸಾಮಾಜಿಕ ನಾಟಕದ ಹಾಸ್ಯ ಪಾತ್ರದ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ.. ಗೌಡ್ರು ಗದ್ಲ ನಾಟಕದಲ್ಲಿ ಮತ್ತು ಮೊನ್ನೆ ಸತಿ ಸಂಸಾರದ ಜ್ಯೋತಿ ಸಾಮಾಜಿಕ ನಾಟಕದಲ್ಲಿ ನಟಿಸಿದ್ದಾರೆ. ಕೃಷ್ಣ-5 ಬಾರಿ, ದುರ್ಯೋಧನ -2 ಬಾರಿ ಅಷ್ಟೇ ಅಲ್ಲಾ ಹತ್ತಾರು ನಾಟಕಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ..ಹಾಸನದ ಕಲಾಭವನದಲ್ಲಿ ಐದು ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ಸಂಘಟಿಸಿದ್ದಾರೆ. ಅಂದ್ದಾಗೆ ಅನಂತರಾಜು ಮತ್ತೆ ಜುಲೈ ತಿಂಗಳಲ್ಲಿ ಐದು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದೇನೆ ಎಂದರು. ಮೋಹನ್, ನಿಮ್ಮಂತಹ ರಂಗ ಸಂಘಟಕರು ಜಿಲ್ಲಾ ರಂಗಭೂಮಿಗೆ ಅವಶ್ಯ ಇದೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಶುಭಾಶಯಗಳು ಎ೦ದೆ.

ಗೊರೂರು ಅನಂತರಾಜು,
ಹಾಸನ
9449462879

ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ ನಿರ್ದೇಶನದಲ್ಲಿ ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಜಿಲ್ಲೆಯ ಅನುಭವಿ ಕಲಾವಿದರು ಸೇರಿ ರಾಜಾ ಸತ್ಯವ್ರತ ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ.

ಈ ತಂಡ ಕಳೆದ ಒಂದು ತಿಂಗಳಿಂದ ನಮ್ಮ ಮನೆ ಮುಂಭಾಗ ಇರುವ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಂಗ ತಾಲೀಮು ನಡೆಸುತ್ತಿತ್ತು. ಕಲಾವಿದರ ಹಾಡುಗಾರಿಕೆ ಹಾರ್ಮೋನಿಯಂ ಮಾಸ್ತರ ಸಂಗೀತ ಸಾಂಗತ್ಯದಲ್ಲಿ ಮನೆಯವರೆಗೂ ಕೇಳಿಬರುತ್ತಿತ್ತು. ನನಗೆ ಅಲ್ಲಿಗೆ ಹೋಗಿ ನೋಡುವ ಕುತೂಹಲ, ಹಾಡು ಕೇಳುವ ಬಯಕೆ ಉಂಟಾಗುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಮಗನ ಮದುವೆ ಬಿಸಿಯಲ್ಲಿ ಮುಳುಗಿಹೋಗಿ ಅತ್ತ ಕಡೆ ಧಾವಿಸಲಿಲ್ಲ. ಮದುವೆ ಕಾರ್ಯ ಮುಗಿದು ಬೆಂಗಳೂರಿನಲ್ಲಿ ಇರುವಾಗ್ಗೆ ನಾಟಕದ ಪಾಂಪ್ಲೆಟ್ ಗ್ರೂಪ್ ನಲ್ಲಿ ನೋಡಿದೆ. ಗೌಡರು ಹಾಕಿದ್ದರು. ಫೋನ್ ನಲ್ಲಿ ಸಂಪರ್ಕಿಸಿದೆ.

ಗೌಡ್ರೇ, ತಾವು ಹಾಸನ ಜಿಲ್ಲಾ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲರಾಗಿದ್ದೀರಿ. ಇನ್ನೂ ನಿಮ್ಮೂರಿನ ನಿಮ್ಮ ಮನೆ ಮುಂದೆಯೇ ಶನಿಪ್ರಭಾವ ನಾಟಕ ಮಾಡಿಸುತ್ತಿದ್ದೀರಿ. ನೀವು ಈ ಹಿಂದೆ ಹಾಸನದ ಕಲಾಭವನದಲ್ಲಿ ರತ್ನ ಮಾಂಗಲ್ಯ ಸಾಮಾಜಿಕ ನಾಟಕದಲ್ಲಿ ಅಭಿನಯಿಸಿದ್ದನ್ನು ಗಮನಿಸಿರುವೆ.
ಈಗ ನೀವು ರಾಜ ಸತ್ಯವ್ರತನ ಪ್ರಮುಖ ಪಾತ್ರವನ್ನೇ ನಿಭಾಯಿಸುತ್ತಿದ್ದೀರಿ. ನೀವು ಈವರೆಗೆ ಎಷ್ಟು ನಾಟಕಗಳಲ್ಲಿ ಯಾವ್ಯಾವ ಪಾತ್ರ ನಿಭಾಯಿಸಿದ್ದೀರಿ ಎಂದು ಕೇಳಿದೆ.

ಸಾರ್. ನೀವು ನನಗೆ ಕಲಾಭವನದ ಕಡೆ ಸಿಗಲಿಲ್ಲ. ನಾಟಕ ನೋಡಲು ಬನ್ನಿ ಎಂದರು. ಮುಂದುವರಿದು ನಾನು ಈವರೆಗೆ ನಲ್ವತ್ತು ನಾಟಕಗಳಲ್ಲಿ ನಟಿಸಿರುವುದಾಗಿ ಹೇಳಿ ದಶರಥನ ಪಾತ್ರವನ್ನು ಐದು ಬಾರಿ, ಕರ್ಣನ ಪಾತ್ರ ಹದಿಮೂರು ಬಾರಿ, ರಾಮ 5 ಸಲ, ಕೃಷ್ಣ-3 ಮತ್ತು ನಾರದನಾಗಿ ಒಮ್ಮೆ ತಂಬೂರಿ ಹಿಡಿದು ರಂಗದ ಮೇಲೆ ಬಂದಿರುವೆ ಎಂದರು. ರತ್ನ ಮಾಗಲ್ಯ ಸಾಮಾಜಿಕ ನಾಟಕದಲ್ಲಿ ನಾಲ್ಕು ಪ್ರಯೋಗ ಮತ್ತು ಗೌಡ್ರು ಗದ್ಲದಲ್ಲಿ ಒಮ್ಮೆ ಗುಡುಗಿದ್ದೇನೆ. ಇಷ್ಟೇ ಎಂದರು.

ಸದ್ಯಕ್ಕೆ ಇಷ್ಟು ಸಾಕು. ಮಂದೆಯೂ ನಿಮ್ಮ ಕಲಾಸೇವೆ ಹೀಗೆ ಸಾಗಲಿ ಜನರಿಗೆ ಮನರಂಜನೆ ದೊರೆಯಲಿ ಎಂದೆ.

ಗೊರೂರು ಅನಂತರಾಜು,
ಹಾಸನ
9449462879

ಪೌರಾಣಿಕ ನಾಟಕಗಳ ಪಾತ್ರದಾರಿ ಇಂಜಿನಿಯರ್ ನಾಗರಾಜ್ ಕೆ. -ಗೊರೂರು ಅನಂತರಾಜು, ಹಾಸನ.

ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು. ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ ಪೋನ್ ಬಂತು. ಸಾರ್ ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ ಇಂಗಿತ ತಿಳಿಯಿತು. ನಿಮ್ಮ ರಂಗಭೂಮಿ ಸೇವೆ ಕುರಿತಾಗಿ ಬರೆಯುವ, ಈ ದಿಶೆಯಲ್ಲಿ ಮಾಹಿತಿ ಕಳಿಸಿ ಎಂದೆ. ಅವರು ಒಂದಿಷ್ಟು ವಿಡಿಯೋ ಕಳಿಸಿದರು. ಡೌನ್‌ಲೋಡ್ ಮಾಡಿ ನೋಡಿದೆ. ನೀವು ರಂಗಕ್ಷೇತ್ರದ ಹಾದಿಯಲ್ಲಿ ಸಾಗಿಬಂದ ಮಾಹಿತಿ ಕಳಿಸಿ ಎಂದೆ. ಸಾರ್, ನೀವು ಹಾಸನದಲ್ಲಿ ಎಲ್ಲಿ ಸಿಗ್ತೀರಾ ಎಂದರು. ನಿಮ್ಮ ಮನೆ ಎಲ್ಲಿ ಎಂದೆ. ಹಾಸನದ ಚನ್ನಪಟ್ಟಣದಲ್ಲಿ ಎಂದರು. ಸರಿ, ನಾನು ಬೆಂಗಳೂರಿನಿಂದ ಬರುತ್ತಿರುವೆ ಬಸ್ ಸ್ಟ್ಯಾಂಡ್‌ನಲ್ಲಿ ನನ್ನ ಬೈಕ್ ಇದೆ. ನೀವು ಅಲ್ಲಿಗೆ ಬನ್ನಿ ಎಂದೆ, ಬಂದಿದ್ದರು. ಇಬ್ಬರು ಬೈಕ್‌ನಲ್ಲಿ ಹೊರಟು ಹಾಸನದ ಹೋಟೆಲ್ ಹೊಕ್ಕೆವು. ಕಾಫಿ ಕುಡಿಯುತ್ತಾ ಮಾತಿಗೆಳೆದೆ. ನಾನು ೨೫ ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ನನ್ನ ಜನ್ಮ ದಿನಾಂಕ ೩೦-೫-೧೯೭೩. ನನ್ನ ಪ್ರೈಮರಿ ವಿದ್ಯಾಭ್ಯಾಸ ಸುಳಗೋಡು ಗ್ರಾಮದಲ್ಲಿ, ಪಕ್ಕದ ಗಂಜಿಗೆರೆಯಲ್ಲಿ ಮಿಡಲ್ ಸ್ಕೂಲ್. ಆಲೂರು ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ. ಡಿಪ್ಲೋಮ ಮಾಡಿದ್ದು ಹಾಸನದ ಎಲ್.ವಿ.ಪಾಲಿಟೆಕ್ನಿಕ್‌ನಲ್ಲಿ. ತಂದೆ ಹೆಸರು ಕರಿಯಯ್ಯ. ತಾಯಿ ದೇವಮ್ಮ. ೨೦೦೦ರಲ್ಲಿ ಕೆಲಸಕ್ಕೆ ಸೇರಿದೆ. ೧೯೮೪-೮೫ರಲ್ಲಿ ಸುಳಗೋಡಿನಲ್ಲಿ ಹತ್ತರ ಪ್ರಾಯದಲ್ಲಿ ರಾಮಾಯಣ ನಾಟಕದ ಚಿಕ್ಕ ಪಾತ್ರದಲ್ಲಿ ರಂಗ ಪ್ರವೇಶಿಸಿದ್ದೆ. ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಟಿ.ದಾಸರಹಳ್ಳಿಯಲ್ಲಿ ೧೯೯೭ರಲ್ಲಿ ಕೆಲವು ಪೌರಾಣಿಕ ನಾಟಕಗಳ ದೃಶ್ಯಾವಳಿಯಲ್ಲಿ ನಟಿಸಿದ್ದೆ. ಆಲೂರು ಟೌನ್‌ನಲ್ಲಿ ೨೦೧೦, ೧೨ರಲ್ಲಿ ನನ್ನ ನೇತೃತ್ವದಲ್ಲಿ ೨ ಬಾರಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಗಿದೆ. ಯಕ್ಷಗಾನವೇ ಪ್ರಧಾನವಾಗಿರುವ ದಕ್ಷಿಣ ಕರ್ನಾಟಕದ ಕಡಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲಕ್ಕೆ ಎ.ಸಿ.ರಾಜು ನಿರ್ದೇಶನದಲ್ಲಿ ಅಲ್ಲಿ ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶಿಸಿ ಹರಿಶ್ಚಂದ್ರನ ಪಾತ್ರ ನಿರ್ವಹಿಸಿದ್ದೆ. ಕಡಬ ತಾ. ಸವಣೂರಿನಲ್ಲಿ ಕುರುಕ್ಷೇತ್ರ ಆಡಿಸಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ರಾಮಾಯಣ, ಕುರುಕ್ಷೇತ್ರ ನಾಟಕಗಳ ಪಾತ್ರಗಳ ತರಬೇತಿ ನೀಡಿ ಶಾಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಶ್ರಮಿಸಿದೆ. ಸರಿ, ನೀವು ಇದುವರೆಗೆ ಯಾವ್ಯಾವ ನಾಟಕಗಳಲ್ಲಿ ಏನೇನು ಪಾತ್ರಗಳನ್ನು ನಿರ್ವಹಿಸಿದ್ದೀರಿ..? ಟೀ ಸೀಪ್ ಮಾಡುತ್ತಾ ಒಂದು ಪ್ರಶ್ನೆ ಒಗೆದೆ. ಸತ್ಯ ಹರಿಶ್ಚಂದ್ರ, ಕುರುಕ್ಷೇತ್ರ, ದೇವಿ ಮಹಾತ್ಮೆ, ರಾಮಾಯಣ ನಾಟಕದಲ್ಲಿ ೧೦ ಬಾರಿ ಶ್ರೀಕೃಷ್ಣನ ಪಾತ್ರ, ಶಕುನಿಯಾಗಿ ೧೪ ಸಲ, ೧೫ ಬಾರಿ ವಿಧುರ, ಭೀಷ್ಮ ದ್ರೋಣ ತಲಾ ಹತ್ತು ಸಲ, ನಾರದನಾಗಿಯೂ ಹತ್ತು, ದೃತರಾಷ್ಟ್ರ-೮, ಸಾತ್ಯಕಿ-೫, ಕರ್ಣ-೪, ಅರ್ಜುನ-೨, ಸೂತ್ರದಾರಿ, ದುರ್ಯೋಧನ, ಆಂಜನೇಯ, ಭರತ, ಡಂಗೂರಿ, ಮಾರೀಚ ಹೀಗೆ ಪಾತ್ರಗಳ ಪರಕಾಯ ಪ್ರವೇಶ ಹೇಳುತ್ತಾ ಹೋದರು. ಅದು ಸರಿ, ಸತ್ಯಹರಿಶ್ಚಂದ್ರನ ಪಾತ್ರ ಎಷ್ಟು ಬಾರಿ ಎಂದೆ. ಮೂರು ಸರ್ತಿ ಅಷ್ಟೇ. ಈ ಸತ್ಯಹರಿಶ್ಚಂದ್ರ ನಾಟಕವನ್ನು ಹಾಸನದ ಕಲಾಭವನದಲ್ಲಿ ಪ್ರದರ್ಶಿಸಬೇಕೆಂಬ ಆಸೆ ಇದೆ ಎಂದರು. ಖಂಡಿತ ಮಾಡಿ ನಾನು ನೋಡುವೆ ಎಂದೆ.

ಗೊರೂರು ಅನಂತರಾಜು, ಹಾಸನ.

ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.