SPECTRUM-3 ಎನ್ನುವ ಶೀರ್ಷಿಕೆಯಡಿ ಅದ್ದೂರಿಯಾಗಿ ಜರುಗಿದ ಆರೋನ್ ಮೀರಜ್‌ಕರ್ ಹಾಗೂ ನಿವೇದಿಕತ ಹಿ.ಪ್ರಾ ಶಾಲೆಗಳ ಶಾಲಾ ವಾರ್ಷಿಕೋತ್ಸವ

ಗಂಗಾವತಿ: ಜನೇವರಿ-೨೪ ಶನಿವಾರದಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ, ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆ ಮತ್ತು ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ SPECTRUM-3 ಎನ್ನುವ ಶೀರ್ಷಿಕೆಯಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಇ.ಸಿ.ಐ. ಚರ್ಚ್ನ ಬಿಷಪ್ ರವಿಕುಮಾರ್, ಅತಿಥಿಗಳಾಗಿ ಎಂ.ಎನ್.ಎಂ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಾಂತಪ್ಪ, ಯೇಸುದಾಸ್ ಫಾಸ್ಟರ್, ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್, ಖಜಾಂಚಿಗಳಾದ ಸುನೀತಾ ಮಿರಜ್‌ಕರ್, ಶಾಲೆಯ ಆಡಳಿತಾಧಿಕಾಗಳಾದ ಜಿ. ಚಂದ್ರಕಾಂತ್‌ರಾವ್, ಶಾಲೆಯ ವ್ಯವಸ್ಥಾಪಕರಾದ ಮಂಜುನಾಥ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಾನಸಾ ಪಾಟೀಲ್ ಹಾಗೂ ರೇಖಾ ಠಾಕೂರ್, ಝೀ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಇದ್ದರು.
ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಉಭಯ ಮುಖ್ಯೋಪಾಧ್ಯಾಯರು ಶಾಲಾ ವಾರ್ಷಿಕ ವರದಿ ವಾಚನವನ್ನು ಮಂಡಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ನೆರವೇರಿಸಲಾಯಿತು.
‘ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಚೈತನ್ಯವನ್ನು ಉಂಟು ಮಾಡುತ್ತವೆ. ವಿದ್ಯಾರ್ಥಿಗಳು ತುಂಬಾ ಉತ್ತಮವಾದ ನೃತ್ಯವನ್ನು ಪ್ರದರ್ಶಿಸಲಿ’ ಎಂದು ಮುಖ್ಯ ಅತಿಥಿಗಳಾದ ಬಿಷಪ್ ರವಿಕುಮಾರ್ ಅವರು ಹೇಳಿದರು.
‘ಪ್ರತಿಯೊಂದು ಮಕ್ಕಳಲ್ಲಿ ತನ್ನದೇ ಆದ ಸುಪ್ತ ಪ್ರತಿಭೆಗಳಿರುತ್ತವೆ. ಅವುಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಶಿಕ್ಷಕರಾದ ನಾವು ಮಾಡಬೇಕಾಗಿದೆ’ ಎಂದು ಅತಿಥಿಗಳಾದ ಶಾಂತಪ್ಪನವರು ನುಡಿದರು.
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ದೇವರ ಪ್ರತಿರೂಪವಿದ್ದಂತೆ. ಮಕ್ಕಳ ಈ ಕಾರ್ಯಕ್ರಮವು ಸ್ವರ್ಗದಂತೆ ಭಾಸವಾಗುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
‘ಒಂದು ಕೈ ಸೇರಿದರೆ ಚಪ್ಪಾಳೆಯಾಗದು ಎನ್ನುವಂತೆ, ಈ ಕಾರ್ಯಕ್ರಮವು ಒಬ್ಬರ ಶ್ರಮದಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ತುಂಬು ಹೃದಯದ ವಂದನೆಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್ ಅವರು ತಮ್ಮ ವಂದನಾ ನುಡಿಗಳನ್ನಾಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ ವಿಭಿನ್ನ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ಸವಿನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಪಾಲಕರು, ಪತ್ರಿಕಾ ಮಾಧ್ಯಮದವರು, ಆರಕ್ಷಕ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂಚಾರ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕುರಿತು ನಡೆದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ.

ಗಂಗಾವತಿ: ಜನವರಿ-೨೧ ಮಂಗಳವಾರದಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಕುಮಾರಿ ನಿಕಿತಾ ಮೊದಲನೇ ಸ್ಥಾನವನ್ನು, ಅಲ್ವೇರ ದ್ವಿತೀಯ ಸ್ಥಾನವನ್ನು, ವೈಷ್ಣವಿ ತೃತೀಯ ಸ್ಥಾನವನ್ನು ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಮುಶಿರ ಪ್ರಥಮ ಸ್ಥಾನವನ್ನು ಪಡೆಯುವುದರ ಮುಖಾಂತರ ತಾಲೂಕಿನಲ್ಲಿ ಮಹಾನ್ ಶಾಲೆಯ ಕೀರ್ತಿಯನ್ನು ತಂದಿದ್ದಾರೆ.
ಇಂದು ಮಂಥನ ಸಭಾಂಗಣದಲ್ಲಿ ನಡೆದ ಸಂಚಾರ ಮತ್ತು ಸುರಕ್ಷತಾ ಕಾರ್ಯಕ್ರಮದಲ್ಲಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪೊಲೀಸ್ ಉಪಾಧೀಕ್ಷರಾದ ಸಿದ್ದಲಿಂಗಪ್ಪಗೌಡ ಪಾಟೀಲ್, ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಮಾಳಿ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಶಾರದಮ್ಮ, ಆರಕ್ಷಕ ಪೊಲೀಸ್ ಉಪನಿರೀಕ್ಷಕರಾದ ಇಸ್ಮಾಯಿಲ್ ಸಾಹೇಬ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ವಸ್ತ್ರದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಶಾಲೆ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಹಾಗೂ ಪೂರ್ಣಿಮಾ, ಕುಮೋದಿನಿ, ಮಂಜುನಾಥ್, ವೀರಯ್ಯ, ಶ್ರೀದೇವಿ, ಶಿವಾನಿ, ವಿಜಯಲಕ್ಷ್ಮಿ, ಶಾಂತ ಹಿರೇಮಠ, ಚಂದ್ರಶೇಖರ, ಸಿದ್ದೇಶ್ ಇನ್ನಿತರ ಶಿಕ್ಷಕರು ಶುಭ ಹಾರೈಸಿದರು.

ಜನತಾ ಸೇವಾ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ
ಗಂಗಾವತಿ: ಜನತಾ ಸೇವಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 1999ನೇ ಸಾಲಿನ ಹಳೆ ವಿದ್ಯಾರ್ಥಿಗಳ ತಂಡದವರು ಸ್ನೇಹ ಸಮ್ಮಿಲನ ಮತ್ತು ಗುರುವಂದನಾ  ಕಾರ್ಯಕ್ರಮ ನಡೆಸಿದರು. ಸುಮಾರು 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಾಥಮಿಕ, ಪ್ರೌಢ ಘಟ್ಟದಲ್ಲಿನ ತಪ್ಪುಗಳನ್ನು ತಿದ್ದಿ ಸರಿಯಾದ ಹಾದಿಯಲ್ಲಿ ಜೀವನ ನಡೆಸಲು ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ವಿದ್ಯಾರ್ಥಿಗಳು ನೆನೆಪಿಸಿಕೊಂಡರು. 25 ವರ್ಷಗಳ ಹಿಂದೆ ಅಕ್ಷರ ಜ್ಞಾನ ಕಲಿಸಿದ 30ಕ್ಕೂ ಹೆಚ್ಚು ಶಿಕ್ಷಕರನ್ನು ಕರೆತಂದು ಸನ್ಮಾನಿಸಿದರು.
ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ್ ಕಲ್ಯಾಣಿ, ಎನ್ ವಿಜಯ್, ವಿಜಯ್ ಕುಮಾರ್ ಆಳ್ಳಿ ಜ್ಯೋತಿಶ್, ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮ ನಡೆಸುವ ತಯಾರಿಗೆ ಸಾಕ್ಷಿಯಾದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಟೋಟಗಳನ್ನು ಏರ್ಪಡಿಸಲಾಗಿತ್ತು, ಬಂದಂತ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ  ಮಾಡಲಾಗಿತ್ತು,
ಈ ಸಂದರ್ಭದಲ್ಲಿ ಶಿಕ್ಷಕರು ರಮೇಶ್ ಕುಲಕರ್ಣಿ,ಅಜ್ಮೀರ್ ನಂದಾಪುರ್, ರಾಜೇಶ್ವರ್ ರೆಡ್ಡಿ, ವರಲಕ್ಷ್ಮಿ, ಅಕ್ಕಮಹಾದೇವಿ ಪದ್ಮ ಆಶಾ ಹಾಗೂ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು  ಕುಮಾರಸ್ವಾಮಿ, ನಿರುಪಾದಿ, ಸಲೀಂ, ಸುಮಂಗಳ, ಸರಸ್ವತಿ, ಮಹಾದೇವಿ, ರೇಣುಕಾ, ವಿದ್ಯಾರ್ಥಿ ವಿದ್ಯಾರ್ಥಿನಿಯರು  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
ಜನವರಿ-೨೫ ರಿಂದ ೩೧ ರವರೆಗೆ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ

ಗಂಗಾವತಿ: ಕಿಷ್ಕಿಂಧಾ ಪ್ರತಿಷ್ಠಾನ ಗಂಗಾವತಿ, ವಿಪ್ರಸಿರಿ ಸೌಹಾರ್ದ ಸಹಕಾರ ಸಂಘ ನಿಯಮಿತ ಗಂಗಾವತಿ ಇವರಿಂದ ಜನವರಿ-೨೫ ರಿಂದ ೩೧ ರವರೆಗೆ ಸಂಜೆ ೬ ರಿಂದ ೮ ರವರೆಗೆ ನಗರದ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ ನಡೆಯಲಿದೆ ಎಂದು ಸಂಚಾಲಕರಾದ ಪವನಕುಮಾರ ಗುಂಡೂರು ಪ್ರಕಟಣೆಯಲ್ಲಿ ತಿಳಿಸಿದರು.

ಈ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಶ್ರೀ ಕೃಷ್ಣಾನಂದ ಶರಣರು ಮಾಡಲಿದ್ದು, ಪ್ರವಚನವನ್ನು ಖ್ಯಾತ ವಿದ್ವಾಂಸರಾದ ವಿದ್ವಾನ್ ಶ್ರೀ ಜಗದೀಶ ಶರ್ಮಾ ಸಂಪ ಬೆಂಗಳೂರು ಇವರು ನೀಡಲಿದ್ದಾರೆ.
ಜನವರಿ-೨೫ ಶನಿವಾರ ರಾಮಾಯಣ ಅವತಾರ, ಜನವರಿ-೨೬ ರವಿವಾರ ಶಬರಿ-ಮಾತಂಗ ಪರ್ವತ, ಜನವರಿ-೨೭ ಸೋಮವಾರ ಶ್ರೀರಾಮ-ಪಂಪಾಸರೋವರ, ಜನವರಿ-೨೮ ಮಂಗಳವಾರ ಆಂಜನೇಯ-ಅAಜನಾದ್ರಿ, ಜನವರಿ-೨೯ ಬುಧವಾರ ಸುಗ್ರೀವ-ಋಷ್ಯಮೂಕ, ಜನವರಿ-೩೦ ಗುರುವಾರ ವಾಲಿ-ತಾರಾ ಪರ್ವತ ಕುರಿತಂತೆ ಪ್ರವಚನ ನಡೆಯಲಿದೆ. ಪ್ರವಚನದ ಸಮಾರೋಪ ಸಮಾರಂಭವು ಜನವರಿ-೩೧ ಶನಿವಾರ ಸಂಜೆ ೬:೦೦ ಗಂಟೆಗೆ ರಾಮಾಯಣದ ಸಂದೇಶದೊAದಿಗೆ ನಡೆಯಲಿದೆ ಎಂದು ತಿಳಿಸಿದರು.

ಮತ್ತೊರ್ವ ಸಂಚಾಲಕರಾದ ನಾಗರಾಜ ಗುತ್ತೇದಾರ ಮಾತನಾಡಿ, ಸನಾತನ ಸಂಸ್ಕೃತಿಯನ್ನು, ಮೌಲ್ಯಗಳನ್ನು, ಆದರ್ಶನಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಿಷ್ಕಿಂಧಾ ಕಾಂಡ ವಿಶೇಷವಾಗಿ ನಮ್ಮ ನೆಲದ ಬಗ್ಗೆ ಮಾಹಿತಿ ನೀಡುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಈ ರೀತಿಯ ಪ್ರವಚನ ಕಾರ್ಯಕ್ರಮಗಳಿಗೆ ಭಾಗವಹಿಸುವುದರಿಂದ ಭತ್ತದ ಕಣಜವು ಜ್ಞಾನದ ಕಣಜ, ಆಧ್ಯಾತ್ಮಿಕ ಕಣಜ ಆಗುವುದರಲ್ಲಿ ಸಂದೇಹವಿಲ್ಲ. ಕಾರಣ ಗಂಗಾವತಿಯ ಸರ್ವ ಸಮಾಜದ ನಾಗರಿಕರು ಪ್ರವಚನದ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಇತರ ಸಂಚಾಲಕರಾದ ಜೋಗದ ನಾರಾಯಣಪ್ಪ ನಾಯಕ, ಸುಬ್ರಹ್ಮಣ್ಯ ರಾಯಕರ್, ಅಕ್ಕಿ ಚಂದ್ರಶೇಖರ, ಅರ್ಜುನ ಕೆ.ವೈ.ಟಿ.ಸಿ., ಬದರಿ ನಾರಾಯಣ ಜೋಶಿ, ಅನೀಲ್ ದೇಸಾಯಿ, ಗುರುರಾಜ ಚಿರ್ಚನಗುಡ್ಡ, ಜಗನ್ನಾಥ ಆಲಂಪಲ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಾಸನ ವಿಜಯನಗರ ಬಡಾವಣೆ ಪಾರ್ಕ್ ರಂಗವೇದಿಕೆಯಲ್ಲಿ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ

ಹಾಸನದ ವಿಜಯನಗರ ಬಡಾವಣೆ ಶ್ರೀ ಶಾರದ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು, ಹಾಸನ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘದ ೧೬ನೇ ವಾರ್ಷಿಕೋತ್ಸವ ಗಣರಾಜ್ಯೋತ್ಸವ ಅಂಗವಾಗಿ ಹೆಚ್.ಜಿ. ಗಂಗಾಧರ್ ಸಾರಥ್ಯದಲ್ಲಿ ಜನವರಿ-೨೬ ಭಾನುವಾರ ಸಂಜೆ ೪.೦೦ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವಿಜಯನಗರ ಬಡಾವಣೆ, ೨ನೇ ಹಂತ, ಬೇಲೂರು ರಸ್ತೆ ಪಾರ್ಕ್ನ ಬಯಲು ರಂಗವೇದಿಕೆಯಲ್ಲಿ ಏರ್ಪಡಿಸಿದೆ.

ಹಾಸನ ವಿಧಾನಸಬಾ ಕ್ಷೇತ್ರದ ಶಾಸಕರು ಸ್ವರೂಪ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷರು ಚಂದ್ರೇಗೌಡರು ಅಧ್ಯಕ್ಷತೆ ವಹಿಸುವರು. ಮಾಜಿ ಉಪಾಧ್ಯಕ್ಷರು ನಗರಸಭೆ, ಚಂದ್ರೇಗೌಡರು, ಸಹಾಯಕ ನಿರ್ದೇಶಕರು ಡಾ. ತಾರಾನಾಥ್, ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಬಿ.ಹೆಚ್.ನಾರಾಯಣಗೌಡರು, ಉಪಾದ್ಯಕ್ಷರು ಮಲ್ಲಿಕಾರ್ಜುನ್, ಎಸ್. ಶಿವಶಾಂತಪ್ಪ, ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿ ಬಿ.ಆರ್.ಮೊಗಣ್ಣಗೌಡರು ಉಪಸ್ಥಿತರಿರುವರು.

ಎಪಿಎಂಸಿ ನಿರ್ದೇಶಕರು ದೇವರಾಜು, ರಂಗ ನಿರ್ದೇಶಕರು ಎ.ಸಿ.ರಾಜು, ವಕೀಲರು ಕೋರವಂಗಲ ಗ್ರಾ.ಪಂ.ಅಧ್ಯಕ್ಷರು ಯೋಗೇಶ್, ಕಲಾವಿದರು ದರ್ಶನ್ ವೆಂಕಟೇಶ್, ಹೆಚ್.ಎಂ.ಪ್ರಭಾಕರ್, ಗೋವಿಂದೇಗೌಡರು, ಗ್ಯಾರಂಟಿ ರಾಮಣ್ಣ, ನಾಗರಾಜು, ರಮೇಶ್, ಬ್ಯಾಟಚಾರ್, ಯರೇಹಳ್ಳಿ ಮಂಜೇಗೌಡ್ರು, ರಾಜಣ್ಣ ಪಟ್ನ ಆಲೂರು, ನಗರಸಭೆ ಮಾಜಿ ಸದಸ್ಯರು ಹೆಚ್.ಜಿ.ಜಯಶೇಖರ, ವಿಜಯನಗರ ಮಾಜಿ ಗ್ರಾ.ಪಂ. ಸದಸ್ಯರು ಡಿ.ಆರ್. ಲೋಹಿತ್, ಸೆಸ್ಕಾಂ ಎಂ.ಎಸ್.ಮನೋಹರ, ನ್ಯಾಯಾಂಗ ಇಲಾಖೆಯ ಉಮೇಶ್ ಎಲ್. ಹೆಚ್.ಜಿ.ವಿಜಯಕುಮಾರ್, ವಿರೂಪಾಕ್ಷ, ಹೆಚ್.ಆರ್.ರಜನಿ ವಿಶೇಷ ಆಹ್ವಾನಿತರು.

ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸುವರು. ಹೆಚ್.ಜಿ.ಗಂಗಾಧರ ತಂಡದಿAದ ಸುಗಮ ಸಂಗೀತ, ಸಾವಿತ್ರಮ್ಮ ಸಿ.ರಾಣಿ ಸಂಗಡಿಗರ ಶ್ರವಣಕುಮಾರ ಪಿತೃಭಕ್ತಿ ನಾಟಕ, ಜಾನಪದ ನೃತ್ಯ, ಕುಸುಮ ಎನ್.ಕೆ.ತಂಡ ಸೋಬಾನೆ ಪದ, ಜಗದೀಶ್ ತಂಡ ರಂಗಗೀತೆ, ಬೂದೇಶ್ವರ ಜಾನಪದ ಕಲಾತಂಡ ದುದ್ದ ಯೋಗೇಂದ್ರ ಜಾನಪದ ಗೀತೆ, ಗ್ಯಾರಂಟಿ ರಾಮಣ್ಣ ಹೆಚ್.ಜಿ. ವಿಜಯಕುಮಾರ್ ತಂಡದ ಬಾಡಿದ ಬದುಕು ಸಾಮಾಜಿಕ ನಾಟಕ ಇರುತ್ತದೆ.

ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ – ಗೊರೂರು ಅನಂತರಾಜು.

ಇಂದು ಬೆಳಿಗ್ಗೆ ಯಾವುದೋ ಒಂದು ಹೊಸ ನಂಬರ್‌ನಿಂದ ಪೋನ್ ಬಂತು. ‘ಹೇ ಅನಂತ, ನಾನು ಕಣೋ ಮಲ್ಲಪ್ಪ ದೂರ..ಎಂದಾಗ ಆಶ್ಚರ್ಯವಾಯಿತು. ‘ಏನ್, ಮಲ್ಲಪ್ಪಣ್ಣ ಚೆನ್ನಾಗಿದ್ದಿರಾ..ಎಂದೆ. ಚೆಂದ ಏನ್ ಬಂತು. ರಿಟೈರ್ಡ್ ಆಯ್ತು. ಮನೆಯಲ್ಲಿದ್ದೀನಿ. ನೀನು ಏನ್ ಮಾಡ್ತ ಇದ್ದಿಯಾ. ಇನ್ನೂ ನಾಟಕ ಬರ‍್ಕೊಂಡು ಕೂತಿದ್ದಿಯ. ತಂಡ ಕಟ್ಕೊಂಡು ತಿರುಗ್ತಿದ್ದಿಯಾ ಹೇಗೆ..? ಹೀಗೆ ನಮ್ಮ ಮಾತು ಮುಂದುವರೆದು ಪ್ಲಾಷ್ ಬ್ಯಾಕ್‌ಗೆ ಬಂದೆವು. ಮಲ್ಲಪ್ಪದೂರ ಉತ್ತಮ ನಟರು. ಅವರ ಊರು ಮೈಸೂರು ತಾ. ದೂರ. ಅದು ನಂಜನಗೂಡು ಕಡೆ ಬರುತ್ತದೆಯಂತೆ.! ನಮ್ಮೂರಿನಲ್ಲಿ ಹೇಮಾವತಿ ನದಿ ಅಣೆಕಟ್ಟೆ ಕೆಲಸ ಪ್ರಾರಂಭವಾಗಿ ಸರ್ಕಾರಿ ದಿನಗೂಲಿ ಕೆಲಸ ಸೇರಿ ಹೇಮಾವತಿ ವಸತಿ ಕಾಲೋನಿಯಲ್ಲಿ ವಾಸವಿದ್ದರು. ಆಗ ನಾನು ಹೈಸ್ಕೂಲು ವಿದ್ಯಾರ್ಥಿ. ಊರಿನಲ್ಲಿ ಜಿ.ಎಸ್.ಪ್ರಕಾಶ್ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ ದಿನ ಸಾಮಾಜಿಕ ನಾಟಕ ಕಲಿತು ಹೆಚ್‌ಆರ್‌ಪಿ ಮನರಂಜನಾ ಮಂದಿರದಲ್ಲಿ ಪ್ರದರ್ಶಿಸುತ್ತಿದ್ದರು. ಬೇಲೂರು ಕೃಷ್ಣಮೂರ್ತಿಯವರ ಲಚ್ಚಿ, ತ್ಯಾಗಿ, ಕಂಬನಿ, ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿದ ನೆನಪು. ಈ ಎಲ್ಲಾ ನಾಟಕಗಳಲ್ಲಿ ಮಲ್ಲಪ್ಪದೂರ ಅಭಿನಯಿಸಿದ್ದರು. ಈ ತಂಡ ಪ್ರದರ್ಶಿಸಿದ ಸುಳಿಯಲ್ಲಿ ಸಿಕ್ಕವರು ನಾಟಕ ರಂಗದ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. ತ್ಯಾಗಿ ನಾಟಕದ ಅಭಿನಯದಿಂದ ತ್ಯಾಗಿಮಂಜು ಎಂದೇ ಊರಿನಲ್ಲಿ ಹೆಸರಾಗಿದ್ದರು ಬ್ರದರ್ ಜಿ.ಆರ್.ಮಂಜುನಾಥ್. ನವೆಂಬರ್ ೧ಕ್ಕೆ ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿ ನನಗೆ ಸ್ಟೂಡೆಂಟ್ ಆಗಿ ಗುರುಗಳನ್ನು ನೋಡಲು ಬರುವಂತೆ ರಂಗದ ಮೇಲೆ ಮಂಜಣ್ಣ ಹೇಳಿದ್ದರು. ಯಾವುದೇ ಡೈಲಾಗ್ ಇಲ್ಲದೆ ರಂಗ ಪ್ರವೇಶಿಸಿದ್ದ ನನ್ನನ್ನು ಬ್ರದರ್ ಕಾಮಿಡಿಗೆ ಬಳಸಿಕೊಂಡು ಗೇಲಿ ಮಾಡಿ ಪ್ರೇಕ್ಷಕರನ್ನು ನಗಿಸಿದ್ದರು. ಪ್ರಥಮ ರಂಗ ಪ್ರವೇಶವೇ ನನಗೆ ಶೇಮ್.! ಬಹುಶ: ನನಗೆ ಗೊತ್ತಿಲ್ಲದೇ ಇದನ್ನೇ ಸವಾಲಾಗಿ ಸ್ವೀಕರಿಸಿ ನಟ ನಾಟಕಕಾರ, ರಂಗ ವಿಮರ್ಶಕನಾಗಿ ಬೆಳೆದೆನು. ಮುಂದೆ ಮಂಜಣ್ಣ ನಾನೇ ಬರೆದಾಡಿಸಿದ ವೀರಪ್ಪನ್ ಭೂತ ನಾಟಕದಲ್ಲಿ ನಟಿಸಿದ್ದರು. ಈ ನಾಟಕಕ್ಕೆ ನಿಜವಾಗಿಯೂ ಜೀವ ತುಂಬಿ ಜನಪ್ರಿಯತೆಗೆ ಕಾರಣರಾದವರು ಮಲ್ಲಪ್ಪದೂರ. ಆಗ ಡಿಸೆಂಬರ್ ಜನವರಿ ತಿಂಗಳಲ್ಲಿ ಹಾಸನ, ಸಕಲೇಶಪುರ, ಹೊಳೆನರಸೀಪುರ ಜಾತ್ರೆಗಳಲ್ಲಿ ಈ ನಾಟಕ ಪ್ರದರ್ಶಿಸಿದೆವು. ಹಾಸನ ಜಾತ್ರೆ ವಸ್ತು ಪ್ರದರ್ಶನದಲ್ಲಿ ಸಂಜೆ ಆರರಿಂದ ಏಳು ಗಂಟೆಯವರೆಗೆ ಜಿಲ್ಲಾ ನಾಟಕ ತಂಡಗಳಿಗೆ ಸ್ಫರ್ಧಾ ನಾಟಕಕ್ಕೆ ಅವಕಾಶ. ಅಂದು ನಮ್ಮ ನಾಟಕದ ನಂತರ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ನಾಟಕದ ಹೆಸರು ನೆನಪಿಲ್ಲ. ನಮ್ಮ ನಾಟಕದ ಮಧ್ಯೆ ನಿರೂಪಕರು ಸ್ವರೂಪ್ ಬಂದು ನಾಟಕ ಬೇಗ ಮುಗಿಸಿ ಮಾಸ್ಟರ್ ಹಿರಣ್ಣಯ್ಯನವರ ನಾಟಕ ಇದೆ ಎಂದು ಅವಸರಿಸಿ ನನಗೆ ಸಿಟ್ಟು ಬಂತು. ಆಗ ಹಿರಣ್ಣಯ್ಯನವರೇ ಏಕೆ ಅವರ ನಾಟಕಕ್ಕೆ ತೊಂದರೆ ಕೊಡ್ತಿರಿ. ಅವರು ಕಲಾವಿದರೇ ಚೆನ್ನಾಗಿ ಮಾಡ್ತಿದ್ದಾರೆ ಬಿಡಿ. ನನ್ನ ನಾಟಕ ನೋಡುವ ಆಸಕ್ತಿ ಇದ್ದವರು ಕಾಯುತ್ತಾರೆ. ನಾನು ನಾಟಕದಲ್ಲಿ ರಾಜಕಾರಣಿಗಳು ನೇರಾ ಟೀಕಿಸಿ ವಿಡಂಬಿಸಿದರೆ ಇವರು ಚಪ್ಪಲಿ ಸುತ್ತಿ ಹೊಡೆಯುತ್ತಿದ್ದಾರೆ ಅಷ್ಟೇ ಬಿಡಿ ಎಂದಿದ್ದರು. ಮಾಸ್ಟರ್ ಹಿರಣ್ಣಯ್ಯರಂತೆ ಮಲ್ಲಪ್ಪ ದೂರ ಕೂಡ ಸಂದರ್ಭೋಚಿತ ಹೊಸ ಡೈಲಾಗ್ ಹೊಡೆದು ಎದುರು ಪಾತ್ರದಾರಿಯನ್ನು ಗಲಿಬಿಲಿಗೊಳಿಸುತ್ತಿದ್ದರು. ಈ ವೀರಪ್ಪನ್ ಭೂತ ನಾಟಕ ನಾನು ಬರೆದು ಪ್ರಥಮ ಪ್ರದರ್ಶನ ತಾ. ೩೦-೧೧-೧೯೯೧ರಂದು ಗೊರೂರಿನಲ್ಲಿ ನಡೆದಿತು. ನಾಟಕ ನೋಡಿ ಕೃಪಾ ಎಂಬುವರು ತಾ. ೬-೧೨-೧೯೯೧ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಒಳ್ಳೆಯ ವಿಮರ್ಶೆ ಬರೆದಿದ್ದರು. ಯಾರಪ್ಪ ಕೃಪಾ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು ಆಶ್ಚರ್ಯಪಟ್ಟಿದ್ದೆ. ಇರಲಿ ಅಂದು ನಾನು ಸೃಷ್ಟಿಸಿದ ನಾಟಕದ ಪಾತ್ರಗಳು ಮುಂದಿನ ದಿನಗಳಲ್ಲಿ ವಾಸ್ತವವಾಗಿ ಗೋಚರಿಸಿದ್ದವು. ಆಗ ಯಾರ ಕಣ್ಣಿಗೂ ಬೀಳದ ವೀರಪ್ಪನ್ ಭೂತವಾಗಿ ಪೊಲೀಸರನ್ನು ಕಾಡುತ್ತಿದ್ದನು. ನನ್ನ ನಾಟಕದಲ್ಲೂ ವೀರಪ್ಪನ್ ಬರುವುದಿಲ್ಲ. ಬದಲು ಕಾಡಿನಲ್ಲಿ ಈರಪ್ಪ ಎಂಬ ವ್ಯಕ್ತಿ ಗಾರ್ಡ್ ಗಳ ಕೈಗೆ ಸಿಕ್ಕಿ ನಡೆಯುವ ಘಟನೆಗಳು ಕಾಲ್ಪನಿಕವಾಗಿ ರೂಪು ತೆಳೆದಿದ್ದವು. ಮುಂದೆ ಅವುಗಳಲ್ಲಿ ಒಂದಿಷ್ಟು ನಿಜವಾಗಿ ಘಟಿಸಿದವು. ಇದೇ ವರ್ಷ ೧೯೯೧ರಲ್ಲಿ ನಿಜ ವೀರಪ್ಪ ಮತ್ತು ಈರಪ್ಪ ಮುಖಾಮುಖಿ ಆಗಿದ್ದ ಸನ್ನಿವೇಶವನ್ನು ಜಿ.ಬಿ.ಅಶೋಕಕುಮಾರ್ ಅವರು ತಮ್ಮ ಹುಲಿಯ ನೆನಪು ಪುಸ್ತಕದಲ್ಲಿ ಬರೆದಿದ್ದಾರೆ.
ಬೂದುಮಲೈ ಅತ್ಯಂತ ಎತ್ತರವಾದ ಬೆಟ್ಟ. ಅದರ ಬುಡದ ಸುತ್ತಳತೆ ಸುಮಾರು ೨೫ ಕಿ.ಮೀ. ಇತ್ತು. ನಮ್ಮ ಎಲ್ಲಾ ಟೀಮ್‌ಗಳಲ್ಲಿ ಒಬ್ಬರು ಕೋಲಿಗೆ ಬಿಳಿ ಬಟ್ಟೆ ಕಟ್ಟಿಕೊಂಡು ಸಾಗುತ್ತಿದ್ದರು. ಅಕಸ್ಮಾತ್ ನಮ್ಮ ಟೀಮ್‌ಗಳು ಎದುರು ಬದುರಾದಾಗ ಕನ್‌ಪ್ಯೂಸ್ ಆಗದಿರಲಿ ಎಂಬ ಮುನ್ನೆಚ್ಚರಿಕೆಯ ಕ್ರಮ ಇದು. (ಇದೇ ರೀತಿ ನಾಟಕದಲ್ಲಿ ಎರಡು ಗಾರ್ಡ್ಗಳು ಕನ್ ಪ್ಯೂಸ್ ಆಗಿ ಎದುರುಬದುರಾಗುವ ಹಾಸ್ಯ ದೃಶ್ಯ ನಾಟಕದಲ್ಲಿ ರಂಜಿಸುತ್ತದೆ.) ಸಂಜೆ ಐದು ಗಂಟೆ ಸುಮಾರಿಗೆ ಕೆ.ಎಸ್.ಆರ್.ಪಿ. ಪೊಲೀಸರ ೧೦ ಜನರ ಒಂದು ಟೀಂ ನಮಗೆ ಎದುರಾಯಿತು. ಅದರ ನೇತೃತ್ವ ವಹಿಸಿದ್ದವರು ಕೊಡಗು ಮೂಲದ ಎಸ್.ಐ.ಈರಪ್ಪ. ನಾವು ಸಿಗುತ್ತಿದ್ದಂತೆ ಅವರು ಬಾರಿ ಗಡಿಬಿಡಿ ಆತಂಕದಿಂದ ನಡೆದ ಸಂಗತಿ ವಿವರಿಸಿದರು. ಆಗಿದ್ದೇನೆಂದರೆ ಈರಪ್ಪ ಅವರ ತಂಡ ಬೂದಿಮಲೈ ಬೆಟ್ಟದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾಗ ಹಾದಿಯ ತಿರುವಿನಲ್ಲಿ ಉದ್ದ ಮೀಸೆಯ ಒಬ್ಬ ವ್ಯಕ್ತಿ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಬರುತ್ತಿದ್ದ. ಆತ ಖಾಕಿ ಪ್ಯಾಂಟ್ ಹಾಗೂ ಸ್ಯಾಂಡೋ ಬನಿಯನ್ ಧರಿಸಿದ್ದ. ಆತನ ಹಿಂದೆ ಮತ್ತೊಬ್ಬ ಎರಡೂ ಕೈಗಳಲ್ಲಿ ಸತ್ತ ಮೊಲಗಳನ್ನು ಹಿಡಿದುಕೊಂಡು ಬರುತ್ತಿದ್ದ. ಎಸ್.ಐ.ಈರಪ್ಪ ಅವರಿಗೆ ನೆರ ಮುಖಾಮುಖಿ ಆದರು. ಮೀಸೆಯ ವ್ಯಕ್ತಿಯೇ ವೀರಪ್ಪನ್. ಈ ದಿಡೀರ್ ಮುಖಾಮುಖಿಗೆ ವೀರಪ್ಪನ್ ಮತ್ತು ಈರಪ್ಪ ಇಬ್ಬರೂ ವಿಚಲಿತರಾಗಿಬಿಟ್ಟರು. ತಮಾಷೆ ಎಂದರೆ ಈರಪ್ಪ ಕೂಡ ವೀರಪ್ಪನಂತೆ ಉದ್ದ ಮೀಸೆ ಬಿಟ್ಟಿದ್ದರು. ಧೈರ್ಯ ತಂದುಕೊಂಡ ಅವರು ತಮ್ಮ ಪಾಯಿಂಟ್ ೩೦೩ ರೈಫಲ್ ಅನ್ನು ವೀರಪ್ಪನ್ ಕಡೆ ಗುರಿಯಾಗಿಟ್ಟು ಸರೆಂಡರ್ ಆಗು ಎಂದು ಕೂಗಿದರು. ಏನು ಮಾಡಬೇಕೆಂದು ತೋಚದೆ ಬಂದೂಕು ಸಮೇತ ಎರಡು ಕೈಗಳನ್ನು ಮೇಲಕ್ಕೆತ್ತಿ ನಿಂತ ವೀರಪ್ಪನ್ ಶರಣಾಗುವಂತೆ ನಟಿಸಿದ. ಆತ ಕ್ಷಣಮಾತ್ರದಲ್ಲಿ ತನ್ನ ಎಡಗಡೆಯ ಇಳಿಜಾರು ಪ್ರದೇಶದ ಪೊದೆಗಳತ್ತ ಜಿಗಿದು ಪರಾರಿಯಾದ..
ಇದೇ ರೀತಿಯ ಸನ್ನಿವೇಶದಲ್ಲಿ ಇನ್ನೊಂದು ಸ್ವರೂಪದಲ್ಲಿ ವೀರಪ್ಪನ್ ಭೂತ ನಾಟಕದ ಗಾರ್ಡ್ ಪಾತ್ರಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ನಾನು ಈ ನಾಟಕ ಬರೆದಾಗ ವೀರಪ್ಪನ ನಿಜರೂಪದ ಕಲ್ಪನೆ ಯಾರಿಗೂ ಇರಲಿಲ್ಲ. ತದನಂತರ ನಕ್ಕಿರನ್ ಪತ್ರಿಕೆಯ ಗೋಪಾಲನ್ ಮುಖಾಂತರ ವೀರಪ್ಪನ್ ಪೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದೇ ರೀತಿ ನಮ್ಮೂರಿನಲ್ಲಿ ತಿಮ್ಮೇಗೌಡ ಎಂಬುವರು ಮೀಸೆ ಬಿಟ್ಟಿದ್ದರು. ನೋಡಲು ವೀರಪ್ಪನ್ ತರಹವೇ ಇದ್ದರು. ಮಲ್ಲಪ್ಪದೂರ ಹೋಮ್‌ ಗಾರ್ಡ್ ಲೀಡರ್ ಆಗಿದ್ದರು. ತಿಮ್ಮೇಗೌಡ ಇವರ ಕೆಳಗೆ ಹೋಮ್‌ ಗಾರ್ಡ್ ಆಗಿದ್ದರು. ಒಮ್ಮೆ ಮಲ್ಲಪ್ಪದೂರ ಅನಂತು, ಈ ತಿಮ್ಮೇಗೌಡರನ್ನೇ ವೀರಪ್ಪನ್ ಪಾತ್ರಕ್ಕೆ ಹಾಕಿ ಹೊಸದಾಗಿ ನಾಟಕ ಬರಿ ಎಂದಿದ್ದರು. ಆದರೆ ಅಷ್ಟರಲ್ಲಾಗಲೇ ೧೯೯೨ರಲ್ಲೇ ಈ ನಾಟಕ ಪುಸ್ತಕ ಪಬ್ಲಿಶ್ ಮಾಡಿದ್ದೆ. ಇಂದು ಪೋನ್‌ಗೆ ಸಿಕ್ಕ ಮಲ್ಲಪ್ಪ ಈ ವಿಚಾರ ಪ್ರಸ್ತಾಪಿಸಿ ಅಂದು ಮೈಸೂರು ದಸರಾಕ್ಕೆ ಹೋಂ ಗಾರ್ಡ್ಸ್ ತಂಡ ಮೈಸೂರಿಗೆ ಹೋಗಿತಂತೆ. ಪೊಲೀಸರು ಈ ತಿಮ್ಮೇಗೌಡರನ್ನೇ ವೀರಪ್ಪನ್ ಎಂದು ಹಿಡಿದು ಕೊಂಡಿದ್ದರಂತೆ. ಆಮೇಲೆ ಐಡಿ ಕಾರ್ಡ್ ತೋರಿಸಿ ಬಿಡಿಸಿಕೊಂಡರಂತೆ. ನಾನು ಆ ನಾಟಕದಲ್ಲಿ ಊಹಿಸಿ ಬರೆದಿದ್ದ ಪತ್ರಕರ್ತನಿಂದ ಸತ್ಯ ಹೊರಬರುತ್ತದೆ. ಅಲ್ಲಿ ನಕ್ಕಿರನ್ ಗೋಪಾಲನ್ ವೀರಪ್ಪನ್ ಮುಖವನ್ನು ಹೊರ ಜಗತ್ತಿಗೆ ಮೊಟ್ಟಮೊದಲು ತೋರಿದ್ದನು. ಹಾಸ್ಯ ಪಾತ್ರಕ್ಕೆ ಹೆಸರಾಗಿದ್ದ ಮಲ್ಲಪ್ಪದೂರ ಸುಮಾರು ೬೦೦ ನಾಟಕಗಳಲ್ಲಿ ನಟಿಸಿರಬಹ್ಮದೆಂದು ಹೇಳಿದಾಗ ಆಶ್ಚರ್ಯಗೊಂಡೆನು. ಸಿನಿಮಾ ನಿರ್ಮಾಪಕ ಸಾ.ರ.ಗೋವಿಂದ್ ಅವರ ಓದಿನ ದಿನಗಳಲ್ಲಿ ಕೆಲವು ದಿನ ಗೊರೂರಿನಲ್ಲಿದ್ದರು. ಆಗ ಹೈಸ್ಕೂಲು ಮೈದಾನದಲ್ಲಿ ದಾರಿ ಯಾವುದಯ್ಯ ಮುಂದೆ ನಾಟಕ ಪ್ರದರ್ಶಿತವಾಯಿತು. ಈ ನಾಟಕದಲ್ಲಿ ಗೋವಿಂದ್ ಮತ್ತು ಮಲ್ಲಪ್ಪದೂರ ನಟಿಸಿದ್ದರು. ಈಗ ಇಬ್ಬರೂ ನಮ್ಮಿಂದ ದೂರವಿದ್ದಾರೆ. ಇರಲಿ ೧೯೯೭ರಲ್ಲಿ ಹಾಸನ ಜಿಲ್ಲೆಗೆ ಸಾಕ್ಷರತಾ ಆಂದೋಲನ ಕಾಲಿರಿಸುವ ಮೊದಲು ಬಿಜೆವಿಎಸ್‌ನಿಂದ ಸಾಕ್ಷರತಾ ಜಾಥಾ ನಡೆಯಿತು. ಆಗ ಪ್ರದರ್ಶಿತಿ ಬೀದಿ ನಾಟಕಗಳಲ್ಲಿ ಮಲ್ಲಪ್ಪ ನಟಿಸಿದ್ದರು. ಇಲಿಬೋನು ನಾಟಕ ಉಡುಪಿಯ ರಂಗಭೂಮಿ ನಾಟಕ ಸ್ಫರ್ಧೆಯಲ್ಲಿ ನೆರಳು ಬೆಳಕಿಗೆ ಬಹುಮಾನ ಪಡೆದಿದೆ. ಸುಳಿಯಲ್ಲಿ ಸಿಕ್ಕವರು ಐದಾರು ಪ್ರದರ್ಶನ ಕಂಡಿದೆ. ಬೇಲೂರು ಜಿಲ್ಲಾ ನಾಟಕ ಸ್ಫರ್ದೆಯಲ್ಲಿ ಭಾಗವಹಿಸಿದೆ. ಆಗ ಸ್ಫರ್ಧಾ ನಾಟಕಗಳಲ್ಲಿ ನಮ್ಮ ಪ್ರತಿಭೆಗಳನ್ನು ಓರೆಗಲ್ಲಿಗೆ ಹಚ್ಚುತ್ತಿದ್ದವು. ನಾನು ಕೂಡ ಇಂತಹ ಅವಕಾಶಗಳಿಂದಲೇ ಸೋಲು ಗೆಲುವಿನ ಸರಪಳಿಯಲ್ಲಿ ಸೋತು ಗೆದ್ದಿರುವುದು ನಿಜ. ಮಲ್ಲಪ ಸಾಮಾಜಿಕ ನಾಟಕ ಅಷ್ಟೇ ಅಲ್ಲಾ ಪೌರಾಣಿಕ ನಾಟಕ ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆಯಲ್ಲಿ ಶಕುನಿ, ಆದಿಮೂರ್ತಿ, ವಶಿಷ್ಟರು ಹೀಗೆ ಹತ್ತುಹಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳನ್ನು ಕಲಾವಿದರು ಹಣ ಹಾಕಿ ಹಂಚಿಕೊಂಡರೆ ಉಳಿದವು ಉಚಿತವಾಗಿ ಅಭಿನಯಿಸಲು ಇವರನ್ನು ಹುಡುಕಿ ಬರುತ್ತಿದ್ದವಂತೆ. ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ಮತ್ತು ಕರ್ನಾಟಕ ರಮಾರಮಣ ಎಂಬ ಐತಿಹಾಸಿಕ ನಾಟಕಗಳಲ್ಲೂ ನಟಿಸಿದ್ದಾರೆ. ಹಿಂದೆ ಉತ್ತರ ಕರ್ನಾಟಕದಿಂದ ಯಂಕಂಚಿ ನಾಟಕ ಕಂಪನಿ ಗೊರೂರಿನಲ್ಲಿ ಕ್ಯಾಂಪ್ ಮಾಡಿ ಮುದುಕನ ಮದುವೆ, ಬಸ್ ಕಂಡಕ್ಟರ್, ಗೌಡ್ರು ಗದ್ಲ ಮೊದಲಾದ ಸಾಮಾಜಿಕ ನಾಟಕ ಪ್ರದರ್ಶಿಸಿತು. ಈ ವೇಳೆ ನರಸಿಂಹರಾಜು, ಶೈಲಶ್ರೀ, ಸುದರ್ಶನ್ ಮೊದಲಾದ ಸಿನಿ ನಟರು ಈ ಕಂಪನಿಗೆ ಪಾತ್ರದಾರಿಗಳಾಗಿ ಬಂದು ಅಭಿನಯಿಸಿದ್ದರು. ಆಗ ಒಬ್ಬ ಕಲಾವಿದರಿಗೆ ಹುಷಾರಿಲ್ಲದಂತಾಗಿ ನಾಟಕದವರು ಮಲ್ಲಪ್ಪನವರನ್ನು ಡ್ಯಾಂ ಬಳಿ ಹುಡುಕಿಕೊಂಡು ಹೋಗಿ ಆ ಪಾತ್ರ ನಿರ್ವಹಿಸಲು ಕರೆದು ನಟಿಸಿದ್ದಾಗಿ ತಿಳಿಸಿದರು. ಡ್ಯಾಂ ಬಳಿ ಮಲ್ಲಪ್ಪ ವರ್ಕ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುಟ್ಟಿದ ದಿನಾಂಕ ಕೇಳಿದೆ. ತಾ. ೧೧.೨.೧೯೫೨ ಎಂದರು. ತಂದೆ ಡಿ.ಕೆ.ಜಮನಪ್ಪ, ತಾಯಿ ಮಹಾದೇವಮ್ಮ. ಮಿಡಲ್ ಸ್ಕೂಲ್ ವಿದ್ಯೆ ದೂರದಲ್ಲಿ ಓದಿ ಹೈಸ್ಕೂಲು ದೇವನೂರು. ಪಿಯುಸಿ ನಂಜನಗೂಡು ಮುಗಿಸಿ ದಿನಗೂಲಿ ಸೇವೆಯಿಂದ ಖಾಯಂಗೊಂಡು ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಎಸ್‌ಡಿಎ ಆಗಿ ನಿವೃತ್ತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
ಮೊ: ೯೪೪೯೪೬೨೮೭೯

ಸನಾತನಕ್ಕೆ ಅಂತ್ಯ ಎಂಬುದು ಇಲ್ಲವೇ ಇಲ್ಲ. ಅದು ನಿರಂತರ ಶಾಶ್ವತ ಅಜರಾಮರ: ಪರಮಪೂಜ್ಯ ಶ್ರೀ ವಿದುಶೇಖರ ಮಹಾಸ್ವಾಮಿಗಳು

ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಜನ್ಮ ತಾಳಿದ ಆದಿ ಗುರು ಶಂಕರಾಚಾರ್ಯರು ದೇಶದ ನಾಲ್ಕು ಭಾಗಗಳಲ್ಲಿ ಪೀಠಗಳನ್ನು ಸ್ಥಾಪಿಸುವುದರ ಮೂಲಕ ಸನಾತನ ಧರ್ಮದ ಸಂರಕ್ಷಕರಾಗಿ ಶ್ರೀಮಠದ ಪರಂಪರೆ ಮುಂದುವರೆಯುತ್ತಿದ್ದು ಹೀಗಾಗಿ ಸನಾತನಕ್ಕೆ ಅಂತ್ಯವೇ ಇಲ್ಲ ಅದು ಶಾಶ್ವತ ಅಜರಾಮರ ಎಂದು ಶೃಂಗೇರಿಯ ಕಿರಿಯ ಪೀಠಾಧಿಕಾರಿಗಳಾದ ಶ್ರೀ ವಿದುಶೇಖರ ಭಾರತೀಯ ತೀರ್ಥ ಸ್ವಾಮಿಗಳು ಆಶೀರ್ವಚನದಲ್ಲಿ ನುಡಿದರು.

ಅವರು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಅವರ ಸನ್ಯಾಸ ಸ್ವೀಕಾರ ಸುವರ್ಣೋತ್ಸವ ಸಂಭ್ರಮಾಚರಣೆ ಹಾಗೂ ವಿಜಯ ಯಾತ್ರೆ ಪ್ರಯುಕ್ತ ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಮಂಗಳವಾರದಂದು ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವದಿಸಿದರು. ಸನಾತನ ಎಂಬುದು ನಮ್ಮ ದೇಶದ ಪರಂಪರೆ ಹಾಗೂ ಸಂಸ್ಕೃತಿಯಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ವಿದೇಶಿಗರು ಸಹ ಇಲ್ಲಿಯ ಪದ್ಧತಿಗಳನ್ನು ಅನುಸರಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇತರೆ ಅನ್ಯ ಧರ್ಮೀಯರ ಕಾಲದ ಸಂಕಷ್ಟದ ಸಂದರ್ಭದಲ್ಲಿ ಪುನರ್ ಸ್ಥಾಪಿಸಿದ ಕೀರ್ತಿಗೆ ಆದಿ ಗುರು ಶ್ರೀ ಶಂಕರಾಚಾರ್ಯರು ಪ್ರಥಮರು ಎಂದು ಹೇಳಬಹುದು. ಪುನರಪಿ ಜನನಂ ಪುನರಪಿ ಮರಣಂ ಎನ್ನುವಂತೆ ಹುಟ್ಟಿದ ಜನ್ಮ ಸಾರ್ಥಕವಾಗಲೂ ಗುಣಮಟ್ಟದ ಸಂಸ್ಕಾರಗಳನ್ನು ಮಾನವೀಯ ಮೌಲ್ಯಗಳನ್ನು. ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಫಲವತ್ತಾದ ಭೂಮಿ ಒಂದಕ್ಕೆ ಯಾವ ಬೀಜವನ್ನು ನಾವು ಹಾಕಿ ನೀರು ಹಾಕಿ ಬೆಳೆಸುವುದು ಎಷ್ಟು ಮುಖ್ಯವೋ ಆ ಬೀಜದಲ್ಲಿರುವ ಗುಣಮಟ್ಟ ಅಂದರೆ ಸಂಸ್ಕಾರ ಅವಶ್ಯವಾಗಿರುತ್ತದೆ ಎಂದು ಹತ್ತು ಹಲವಾರು ಸಂದೇಶದ ಮಹಾತ್ಮಗಳನ್ನು ಕುರಿತು ಮಾಹಿತಿ ನೀಡಿದರು. ಜೊತೆಗೆ ಶೃಂಗೇರಿ ಪೀಠದ ೧೨ನೇ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಅನುಗ್ರಹದಿಂದ ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೊಳ್ಳುವುದರ ಮೂಲಕ ಸನಾತನದ ಸಂರಕ್ಷಣೆಗೆ ಆಳ್ವಿಕೆಯ ನಾಲ್ಕು ಮನೆತನಗಳು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಶಂಕರ ಮಠದಲ್ಲಿ ನವೀಕೃತಗೊಂಡ ಭವನಕ್ಕೆ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಹೆಸರನ್ನು ನಾಮಕರಣಗೊಳಿಸಬೇಕೆಂದು ಸಲಹೆ ನೀಡಿದರು. ಒಟ್ಟಾರೆ ದೇವರು ಒಬ್ಬನೇ ನಾಮ ಹಲವು ಎಂಬಂತೆ ಹರಿ ಹಾಗೂ ಹರ ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ಸಂರಕ್ಷಣೆಗಾಗಿ ವಿವಿಧ ನಾಮದ ಅಡಿಯಲ್ಲಿ ದೇವರುಗಳಿಗೆ ಪ್ರಾರ್ಥಿಸಿಕೊಳ್ಳಲಾಗುತ್ತದೆ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಹಾಗೂ ಗಂಗಾವತಿಯ ಸಮಸ್ತ ನಾಗರೀಕರ ಪರವಾಗಿ ಅಭಿನಂದನಾ ಪತ್ರ ನೀಡಿ, ಗೌರವ ಸಮರ್ಪಣೆಯನ್ನು ನಾರಾಯಣರಾವ್. ವೈದ್ಯ ಹಾಗೂ ಮಹೇಶ್ ಭಟ್ ಜೋಶಿ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು. ಸಾವಿರಾರು ಭಕ್ತಾದಿಗಳು, ಆಸ್ತಿಕ ಬಂಧುಗಳು, ವಿವಿಧ ಸಮಾಜದ ಮುಖಂಡರು, ಅನ್ಯರೂ ಪಡೆದುಕೊಂಡರು.

ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರ ಪುರ ಪ್ರವೇಶ ಹಾಗೂ ಶ್ರದ್ಧೆ ಭಕ್ತಿಯಿಂದ ಜರುಗಿದ ಶೋಭಾಯಾತ್ರೆ

ಗಂಗಾವತಿ: ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಪ್ರಯುಕ್ತ, ಪುರಪ್ರವೇಶ ಮಾಡುವುದರ ಮೂಲಕ ಸರ್ವ ಭಕ್ತಾದಿಗಳು ಸಕಲ ವಾದ್ಯ ವೈಭವದೊಂದಿಗೆ ವಿವಿಧ ಮಹಿಳಾ ಭಜನಾ ಮಂಡಳಿಯವರ ಸೊಗಸಾದ ಕೋಲಾಟ, ಭಜನೆ. ಋತಿಜ್ವರ, ವೇದ ಮಂತ್ರ ಘೋಷದೊಂದಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿಕೊಳ್ಳುವುದರ ಮೂಲಕ ವಾಲ್ಮೀಕಿ ವೃತ್ತದಲ್ಲಿ ವೇದಮೂರ್ತಿ ಮಹೇಶ್ ಭಟ್ ತಂಡದವರಿಂದ ಮಹರ್ಷಿ ವಾಲ್ಮೀಕಿ ಅವರಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸರ್ವಲಾoಕೃತ ತೆರೆದ ವಾಹನ ಮೂಲಕ ಶೋಭಾ ಯಾತ್ರೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರುಗಳಾದ ವೀರಭದ್ರಪ್ಪ ನಾಯಕ. ಜೋಗದ ನಾರಾಯಣಪ್ಪ ನಾಯಕ ಸೇರಿದಂತೆ ತಾಲೂಕ ಬ್ರಾಹ್ಮಣ ಸಮಾಜದ ಭಾಂಧವರು. ವಿವಿಧ ಸಮಾಜದ ಮುಖಂಡರು ಯಾವುದೇ ಭೇದ ಭಾವ ಇಲ್ಲದೆ ಸರ್ವ ಜನಾಂಗದವರು ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂದಿತು.

ರಾಜಬೀದಿಯ ಉದ್ದಕ್ಕೂ ಸತೀಶ್ ಗುರೂಜಿ ಅವರ ನೇತೃತ್ವದ ಶ್ರೀ ರಾಮನಗರ ಕಲ್ಗೂಡಿ ಹೇರೂರು ನವ ಬೃಂದಾವನ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ಮಹಿಳೆಯರು ದಾರಿ ಉದ್ದಕ್ಕೂ ವಿಶೇಷ ಗಮನ ಸೆಳೆದರು. ಕೊಪ್ಪಳ ರಾಯಚೂರು ವಿಜಯನಗರ ಜಿಲ್ಲೆ ಗದಗ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ. ರಾಘವೇಂದ್ರ ಮೇಗೂ ರ್ ಸುದರ್ಶನ್ ಜೋಶಿ. ಆರ್ಯವೈಶ್ಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .

ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯ ಫಲಿತಾಂಶ

ಗಂಗಾವತಿ: ಇತ್ತೀಚೆಗೆ ಕಲಬುರ್ಗಿಯಲ್ಲಿ ೬ನೇ ರಾಷ್ಟ್ರಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ೪೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೦ ವಿದ್ಯಾರ್ಥಿಗಳು ಸೂಪರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಕುಶಿತ್ ಆರಾಧ್ಯ ಯು., ಪ್ರಥಮ್, ಆಯುಷ್ ಎನ್., ಫಾತಿಮ ತು ಜೋರಾ, ಅಮತು ರೆಹಮಾನ್, ಸೋನುಶ್ರೀ ಎ.ಟಿ., ನಿರೀಕ್ಷಾ, ರೋಜಾ ಯು., ರಿತಿಕಾ ಐಲಿ ಮತ್ತು ಶಿವಾಂಶ್ ಕೌಟಿ ಇವರುಗಳು ಪಡೆದುಕೊಂಡಿರುತ್ತಾರೆ.

ಗಡಿನ್ ಹೆಚ್.ಡಿ., ಮೊಹಮ್ಮದ್ ಅಯಾನ್, ಕೃತಿಕಾ ಎಸ್.ಹೆಚ್., ಪ್ರಿಯಾಶ್ರೀ, ಸಾತ್ವಿಕಾ ಆರ್., ಸನಾತನಿ ಹಿರೇಮಠ, ಯಶೋಧರೆ ಧಾನಿ ಈ ಏಳು ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಉಳಿದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪಾಲಕರಿಗೂ ಜೀನಿಯಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಮತ್ತು ಆಡಳಿತಾಧಿಕಾರಿಯಾದ ಬಿ.ಎಸ್ ಪ್ರಕಾಶರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಮಾಜದಲ್ಲಿ ಅನಿಷ್ಟ ಮೂಡನಂಬಿಕೆಗಳ ವಿರುದ್ಧ ನಿಷ್ಠುರವಾಗಿ ವಚನಗಳನ್ನು ಬರೆದ ಏಕೈಕ ನಿಜಶರಣ ಚೌಡಯ್ಯ

ಗಂಗಾವತಿ: ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರವಿರುವ ಶ್ರೀ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಸಮಾಜ ಬಾಂಧವರೆಲ್ಲರೂ ಸೇರಿ ನಿಜಶರಣ ಚೌಡಯ್ಯ ಶರಣರ ಜಯಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.

ಡಂಬದವೈರಿ ವೀರಗಣಾಚಾರಿ, ನಿಜದನಗಾರಿ, ಸಮಾಜದಲ್ಲಿ ಮೌಡ್ಯತೆಯ ವಿರುದ್ದ, ಅನಿಷ್ಠ ಪದ್ದತಿಗಳ ವಿರುದ್ದ, ಮೂಡನಂಬಿಕೆಗಳ ವಿರುದ್ಧ ನೇರವಾಗಿ ತಮ್ಮ ವಚನಾಮೃತದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಕಠೋರವಾಗಿ ನಿಷ್ಠುರವಾಗಿ ತನ್ನ ಹೆಸರಿನಲ್ಲಿಯೇ ವಚನಗಳನ್ನು ಬರೆದ ಏಕೈಕ ನಿಜಶರಣ ಅಂದರೆ ಅದು ಅಂಬಿಗರ ಚೌಡಯ್ಯನವರು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕ ಅಧ್ಯಕ್ಷರಾದ ಹನುಮೇಶ ಭಟಾರಿ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಲ್ಲಿ ಇವರು ಕೂಡ ಒಬ್ಬರಾಗಿ ಸಮನ್ವಯತೆ, ಸಹಬಾಳ್ವೆ, ಸಮಾನತೆ ವಿಷಯವಾಗಿ ನೇರವಾಗಿ ಪ್ರತಿಪಾದಿಸುತ್ತಿದ್ದರು. ಇಂತಹ ಒಬ್ಬ ನಾಡಿನ ಶ್ರೇಷ್ಠ ದಾರ್ಶನಿಕನ ೯೦೫ನೇ ಜಯಂತಿಯನ್ನು ಈ ದಿನ ನಾವು ಆಚರಿಸುತ್ತಿದ್ದೇವೆ. ಈ ಶರಣರ ಸಂಸ್ಕೃತಿಯನ್ನು ಉಳಿಸಿ, ಬೆಳೆಸೋಣ ಎಂದು ತಿಳಿಸಿದರು.
ಹಾಗೆಯೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ನೀಡುವ ರಾಜ್ಯಮಟ್ಟದ ಜೆ ನಾರಾಯಣಸ್ವಾಮಿ ಪ್ರಶಸ್ತಿಗೆ ಬಾಜನರಾದ ಗಂಗಾಮತ ಸಮಾಜದ ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ ಇವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥ, ನಗರಸಭೆಯ ಅಧ್ಯಕ್ಷ ಮೌಲಸಾಬ, ತಹಸಿಲ್ದಾರರಾದ ಯು. ನಾಗರಾಜ, ಮುಖಂಡರಾದ ನಾರಾಯಣಪ್ಪ ನಾಯಕ, ಸಮಾಜದ ಮುಖಂಡರಾದ ಮುಸ್ಟೂರು ರಾಜಶೇಖರಪ್ಪ, ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ ಮಡ್ಡೇರ್, ಬಿ. ಅಶೋಕ, ಅಂಬಿಗರ ಅಂಜಿನಪ್ಪ, ಬಿ. ರಾಜು, ಎಚ್.ವೈ. ಮನಗೂಳಿ, ಮಲ್ಲಿಕಾರ್ಜುನ ಮುಕ್ಕುಂದಿ, ಆನೆಗುಂದಿ ಭೋಗೇಶ್, ಮರಳಿ ನಿರುಪಾದಿ, ಹೊಸಳ್ಳಿ ಮರಿಯಪ್ಪ, ಮರಳಿ ಹೊನ್ನಪ್ಪ, ಕೋಟಿ ಮಹಾದೇವಪ್ಪ, ಸಿದ್ದು ಹೊಸಳ್ಳಿ, ಮಲ್ಲಾಪುರ ಎರಿಸ್ವಾಮಿ, ಭೈರೇಶ, ಹನುಮೇಶ, ಗೋಪಿ, ಮೋಹನ್, ರಾಜೇಂದ್ರ ಬಟಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

ಹಾವೇರಿ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಂಡೆಯಲ್ಲಿ ಚೌಡದಾನಪುರದಲ್ಲಿ ಅಂಬಿಗರ ಚೌಡಯ್ಯ ಪೀಠ ಇದ್ದು, ಈ ಹಿಂದೆ ೨೦೧೭ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ೩೨ ಕೋಟಿಗಳಲ್ಲಿ ಕೂಡಲಸಂಗಮ ಮಾದರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಇವರ ಸಮಾಧಿಯನ್ನು ಜೀರ್ಣೋದ್ಧಾರ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಆ ಭರವಸೆ ಇನ್ನು ಈಡೇರಿಲ್ಲ, ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತೊಮ್ಮೆ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿರುವುದರಿಂದ ಬಡ ಸಮಾಜದ ಒಳಿತಿಗಾಗಿ ಸಮಾಜದ ಬೇಡಿಕೆಯನ್ನು ಈಡೇರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.

VISHWAROOPA NEWS BLOG

Infinite

Skip to content ↓