ಚಿಕ್ಕಪ್ಪ ಹೇಳಿದ ಸಂಕ್ರಾಂತಿ ಹಬ್ಬದ ಕಥೆ. -ಗೊರೂರು ಅನಂತರಾಜು.

ನಮ್ಮ ಅಣ್ಣ ನಾಗರಾಜ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದಾನೆ. ಅವರ ಕುಟುಂಬ ಅಲ್ಲಿಗೆ ಹೋಗಿ ನೆಲೆಸಿ ಬಹಳ ವರ್ಷಗಳೇ ಆಗಿವೆ. ನಮ್ಮ ಅಣ್ಣನಿಗೆ ರಾಮ ಮತ್ತು ಗೀತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಕ್ರಾಂತಿಗೆ ಕೇವಲ ಎರಡು ವಾರಗಳಿದ್ದವು. ಅಣ್ಣನ ಮೆಸೇಜ್ ಬಂದಿತು. ಸಂಕ್ರಾಂತಿ ಹಬ್ಬಕ್ಕೆ ಎಲ್ಲರೂ ಊರಿಗೆ ಬರುವುದಾಗಿ ತಿಳಿಸಿದ್ದ. ಈ ವಿಚಾರ ನಮಗೆ ಸಂತೋಷ ತಂದಿತ್ತು.
ನಮ್ಮ ಗದ್ದೆಯು ಚಂಗರವಳ್ಳಿ ನಾಲಾ ಬಯಲಿನಲ್ಲಿ ಇದೆ. ಮಳೆಗಾಲದ ಬೆಳೆಗೆ ನಾವು ರಾಜಮುಡಿ ಭತ್ತ ಹಾಕಿದ್ದೆವು. ಡಿಸೆಂಬರ್ ವೇಳೆಗೆ ಬಂಪರ್ ಬೇಳೆ ಬಂದಿತ್ತು. ಅಣ್ಣನ ಕುಟುಂಬ ಬರುವ ವೇಳೆಗೆ ಕುಯ್ಲಾಗಿ ಕಣದಲ್ಲಿ ಒಕ್ಕಣೆ ಮಾಡಿದ್ದೆವು. ಸಂಕ್ರಾಂತಿ ಕಳೆದ ಕೆಲದಿನಗಳ ನಂತರ ನಮ್ಮೂರಿನಲ್ಲಿ ರಥೋತ್ಸವ ಜಾತ್ರೆ ನಡೆಯುತ್ತದೆ. ಅದಕ್ಕಾಗಿ ಮೊದಲೇ ಯಾಕೂಬನ ಕಡೆಯಿಂದ ಮನೆಗೆ ಸುಣ್ಣ ಬಣ್ಣ ಹೊಡೆಸಿದೆವು. ನಾನು ಹಿತ್ತಲಿನಲ್ಲಿ ದನಕರುಗಳ ಮೈ ತೊಳೆಯುತ್ತಿದ್ದೆ. ಅಣ್ಣನ ಮಕ್ಕಳು ಅಲ್ಲಿಗೆ ಬಂದರು.
“ಚಿಕ್ಕಪ್ಪ, ನಾಳೇ ಸಂಕ್ರಾಂತಿಹಬ್ಬ ಅಲ್ಲವೇ..? ರಾಮ ಕುತೂಹಲದಿಂದ ಕೇಳಿದ.
“ಹೌದು ಅದಕ್ಕೆ ದನಕರುಗಳ ಮೈ ತೊಳೆದು ನಾಳೆಯ ಪೂಜೆಗೆ ಅಣಿಗೊಳಿಸುತ್ತಿದ್ದೇನೆ..
ಸಂಕ್ರಾಂತಿ ಹಬ್ಬದಂದು ದನಕರುಗಳನ್ನು ಪೂಜಿಸುವುದೇಕೆ? ಗೀತಳಿಗೂ ತಿಳಿದುಕೊಳ್ಳುವ ಕುತೂಹಲ.
ಸಂಕ್ರಾಂತಿ ಸುಗ್ಗಿಯ ಹಬ್ಬ. ಎತ್ತಿನ ಸಹಾಯವಿಲ್ಲದೆ ರೈತ ಫಸಲು ಪಡೆಯಲಾರ. ನಮಗೆ ಉಪಕಾರ ಮಾಡಿದ ದನಕರಗಳಿಗೆ ಕೃತಜ್ಞತೆ ಸಲ್ಲಿಸುವುದೇ ಪೂಜೆ ಸಂಪ್ರದಾಯ
“ಚಿಕ್ಕಪ್ಪ ನೀವು ಕತೆಗಾರರೆಂದು ಅಮ್ಮ ಹೇಳುತ್ತಿದ್ದಳು. ನಮಗೆ ಸಂಕ್ರಾಂತಿ ಹಬ್ಬದ ಬಗ್ಗೆ ಎಲ್ಲಾ ತಿಳಿಸು.
ಸಂಕ್ರಾಂತಿ ಮೂರು ದಿನಗಳ ಹಬ್ಬ. ಮೊದಲ ದಿನ ಭೋಗಿ. ಭೋಗಿ ಹಬ್ಬದಲ್ಲಿ ಋತುಗಳ ರಾಜ ಇಂದ್ರನನ್ನು ಪೂಜಿಸುವುದು. ಈ ಹಬ್ಬ ಹೊಸ ಋತು ಆರಂಭವಾಗುತ್ತಿರುವುದರ ಸೂಚನೆ.
“ಈಗ ಚಳಿ ಕಡಿಮೆಯಾಗಿ ಬೇಸಿಗೆ ಆರಂಭವಾಗುತ್ತದೆ ಅಲ್ಲವೇ ಚಿಕ್ಕಪ್ಪ..?
“ಹೌದು ಈ ಋತುವಿನಲ್ಲಿ ಹಳೇ ಎಲೆಗಳು ಉದುರಿ ಹೊಸ ಎಲೆಗಳು ಚಿಗುರುತ್ತವೆ. ಪ್ರಕೃತಿಯಂತೆ ನಮ್ಮ ಜೀವನದಲ್ಲಿಯೂ ಹೊಸ ಕಳೆ, ಉಲ್ಲಾಸ ಮೂಡಿಬರಬೇಕೆಂಬ ಆಶಾಭಾವನೆ ಇರುತ್ತದೆ.
ಇಂದು ಧನುರ್ಮಾಸದ ಕೊನೆಯ ದಿನ. ಶಕುಂತಲ ಸುಮಂಗಲೆಯರಿಗೆ ಬಾಗಿಣ ಕೊಟ್ಟು ಬಂದಳು. ರಾತ್ರಿ ಊಟ ಮುಗಿಸಿ ವರಾಂಡದಲ್ಲಿ ಕುಳಿತ್ತಿದ್ದೆ. “ಚಿಕ್ಕಪ್ಪ ಒಂದು ಕಥೆ ಹೇಳಿ ಎನ್ನುತ್ತಾ ಗೀತಾ ಒಳಬಂದಳು. ಅವಳ ಹಿಂದೆ ರಾಮನೂ ಬಂದ. “ಸಂಕ್ರಾಂತಿ ಹಬ್ಬಕ್ಕೆ ಒಂದು ಪೌರಾಣಿಕ ಕಥೆ ಇದೆ. ಅದನ್ನೇ ಹೇಳುತ್ತೇನೆ ಕುಳಿತುಕೊಳ್ಳಿ.
ಹಿಂದೆ ತಿಲಾಕಸುರನೆಂಬ ರಕ್ಕಸನಿದ್ದ. ಬ್ರಹ್ಮನ ವರದಾನದಿಂದ ಉನ್ಮತ್ತನಾಗಿ ದೇವತೆಗಳನ್ನು ತಪೋನಿರತ ಋಷಿಗಳನ್ನು ಪೀಡಿಸುತ್ತಿದ್ದ. ಅವರೆಲ್ಲರೂ ಸೂರ್ಯದೇವನ ಮೊರೆಹೊಕ್ಕರು. ಸೂರ್ಯ ಕರ್ಕ ಮತ್ತು ಮಕರ ಎಂಬ ಹೆಂಗಸರನ್ನು ಕಳಿಸಿದ. ತಿಲಕಾಸುರನನ್ನು ಸಂಹರಿಸಿರೆಂದ. ತಿಲಕಾಸುರನಿಗೂ ಇವರಿಗೂ ಘೋರ ಯುದ್ಧ ನಡೆಯಿತು. ಮಕರ ದೇವತೆ ತನ್ನ ಬಲ್ಲೆಯಿಂದ ತಿಲಕಾಸುರನ ಹೊಟ್ಟೆ ಸೀಳಿದಳು. ತಿಲಕಾಸುರನ ಹೊಟ್ಟೆಯಲ್ಲಿ ಎಳ್ಳು ತುಂಬಿತ್ತು. ಅದನ್ನು ಹೊರಗೆ ತೆಗೆದಾಗ ಆತ ಮರಣ ಹೊಂದಿದ. ಇದರಿಂದ ಸೂರ್ಯದೇವ ಸಂತೋಷಗೊಂಡು ವರವಿತ್ತ.
ಮಕರ ಸಂಕ್ರಾಂತಿ ಎಂದರೆ ಉತ್ತರಾಯಣ ಕಾಲ. ಸೂರ್ಯದೇವನು ಉತ್ತರಾಯಣಕ್ಕೆ ಪಾದಾರ್ಪಣೆ ಮಾಡುವ ಪರ್ವಕಾಲ. ಮಾನವನು ದಕ್ಷಿಣಾಯನದಲ್ಲಿ ಮಾಡಿದ ಪಾಪಗಳು ಸಂಕ್ರಾಂತಿ ಹೆಸರಿನಲ್ಲಿ ಉತ್ತರಾಯಣದಲ್ಲಿ ಕಾಣಿಸಿಕೊಳ್ಳುವುದು. ಎಳ್ಳುದಾನ ಪಾಪ ನಿವಾರಣೆ ಎಂದು ಹೇಳುತ್ತಾರೆ.
“ಚಿಕ್ಕಪ್ಪ, ನಾಳೆ ನಾನು ಎಳ್ಳು ಬೀರಲು ಹೊಗುತ್ತೇನೆ.. ಗೀತ ಆಕಳಿಸುತ್ತಾ ಹೇಳಿದಳು.
“ನಾಳೆ ಸಂಜೆ ನೀವಿಬ್ಬರು ಹೊಸ ಬಟ್ಟೆ ಉಟ್ಟು ಎಳ್ಳು ಬೆಲ್ಲ ಬೀರಲು ಹೋಗಿ. ಈಗ ಹೋಗಿ ಮಲಗಿ.
ರಾಮ ಗೀತ ಬೆಳಿಗ್ಗೆ ತಡವಾಗಿ ಎದ್ದರು. ಆ ಹೊತ್ತಿಗೆ ಮನೆಮಂದಿಯೆಲ್ಲಾ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿದ್ದರು. ನಾನು ವರಾಂಡದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದೆ. ರಾಮ ಗೀತೆ ಅಲ್ಲಿಗೆ ಬಂದರು. ಶಕುಂತಲ ಮನೆಯ ಮುಂಬಾಗಿಲ ಹೊರಗೆ ಸುಂದರವಾಗಿ ರಂಗೋಳಿ ಬಿಡಿಸುತ್ತಿದ್ದಳು.
“ಚಿಕ್ಕಮ್ಮ ಎಷ್ಟು ಚೆನ್ನಾಗಿ ರಂಗೋಲಿ ಬಿಡಿಸಿದೆ.! ನಮ್ಮಮ್ಮನಿಗೆ ರಂಗೋಲಿ ಗಂಧವೇ ಗೊತ್ತಿಲ್ಲ.. ಗೀತಳ ಮುಖವು ಆನಂದ ಆಶ್ಚರ್ಯದಿಂದ ಅರಳಿತು.
“ಸೂರ್ಯದೇವನ ಮನವೊಲಿಕೆಗಾಗಿ ಎಲ್ಲರೂ ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ ಎಂದಳು ಶಕುಂತಲೆ.
“ಚಿಕ್ಕಮ್ಮ ಹೇಳಿದ್ದು ಸರಿ, ಈ ಬೀದಿಯ ಎಲ್ಲರ ಮನೆ ಮುಂದೆಯೂ ಬಣ್ಣಬಣ್ಣದ ರಂಗೋಲಿ ಕಂಗೊಳಿಸುತ್ತಿದೆ. ಗೀತ ಒಂದು ಸುತ್ತು ಬೀದಿ ಸುತ್ತಿ ಬಂದಳು. ಅಡಿಗೆ ಮನೆಯಲ್ಲಿ ತಯಾರಾಗುತ್ತಿದ್ದ ಪೊಂಗಲಿನ ವಾಸನೆ ರಾಮನ ಮೂಗಿಗೆ ಬಡಿಯಿತು. ಅಡಿಗೆ ಮನೆಯೊಳಗೆ ಬಗ್ಗೆ ನೋಡಿದ. ಒಂದು ಮಡಿಕೆಯಲ್ಲಿ ಪೊಂಗಲ್ ಬೇಯುತ್ತಿತ್ತು.
“ಚಿಕ್ಕಪ್ಪ, ಇವತ್ತಿನ ವಿಶೇಷ ಪೊಂಗಲ್ ಅಲ್ಲವೇ.?
“ಹೌದು, ಇದು ಸೂರ್ಯನಿಗೆ ಪ್ರಿಯವಾದ ಪದಾರ್ಥ. ಆದರೆ ನೀವು ಸ್ನಾನ ಮಾಡದೇ ಅದನ್ನು ಮುಟ್ಟುವಂತಿಲ್ಲ. ಹೋಗಿ ಸ್ನಾನ ಮಾಡಿಕೊಂಡು ಬನ್ನಿ.
ಮನೆಯವರೆಲ್ಲಾ ಹೊಲದ ಮನೆ ಕಡೆ ಹೋದೆವು. ಸಗಣಿಯಿಂದ ಬೆಳವಣ್ಣನನ್ನು ಮಾಡಿ ತುಂಬೆ ಹೂವನ್ನು ಮುಡಿಸಿದೆವು. ಪೊಂಗಲ್ ಮಡಿಕೆಯನ್ನು ಇರಿಸಿ ವಿಧಿವತ್ತಾಗಿ ಅರ್ಪಿಸಿದೆವು. ಇದ್ದಕ್ಕಿದ್ದಂತೆ ಭಾರಿ ಗದ್ದಲ ಕೇಳಿಸಿತು. ಮಕ್ಕಳಿಬ್ಬರು ನೋಡಲು ಓಡಿದರು. ಸುಂದರವಾಗಿ ಅಲಂಕರಿಸಿದ್ದ ಎತ್ತುಗಳು ಹುಚ್ಚೆದ್ದು ಓಡುತ್ತಿದ್ದವು. ಅವುಗಳನ್ನು ಬೆನ್ನೆಟ್ಟಿ ಹಿಡಿಯಲು ಯುವಕರು ಹರಸಾಹಸ ಮಾಡುತ್ತಿದ್ದರು.
“ಚಿಕ್ಕಪ್ಪ, ಇದೇನು ಪಂದ್ಯ.? ರಾಮ ಕೇಳಿದ.
“ಇದು ದನ ಬಿಟ್ಟು ಹಿಡಿಯುವ ಪಂದ್ಯ. ಸಾಹಸಿಗರು ದನಗಳ ಕೊರಳಿಗೆ ಕೈ ಹಾಕಿ ಅದನ್ನು ಬಿಗಿಯಾಗಿ ಹಿಡಿಯುತ್ತಾರೆ. ದನಗಳ ಕೊಂಬಿಗೆ ಕಟ್ಟಿರುವ ಗಂಟನ್ನು ಕಿತ್ತುಕೊಳ್ಳುತ್ತಾರೆ. ಇದರಲ್ಲಿ ಹಣವನ್ನು ಇಟ್ಟಿರುತ್ತಾರೆ.
ಸಂಜೆ ಊರಿನಲ್ಲಿ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಅಲ್ಲಿಗೆ ಮನೆಯ ದನಕರುಗಳನ್ನು ಹೊಡೆದುಕೊಂಡು ಹೊರಟೆ. ರಾಮ ಗೀತ ಜೊತೆಗೆ ಬಂದರು. ವಿಶಾಲವಾದ ಜಾಗದಲ್ಲಿ ಹುಲ್ಲುಗಳನ್ನು ಹರವಿದ್ದರು. ಬೆಂಕಿ ಹಚ್ಚಿಸಿದಾಗ ಎರಡಾಳು ಎತ್ತರಕ್ಕೆ ಜ್ವಾಲೆ ಎದ್ದಿತು. ಊರಿನ ದನಕರುಗಳನ್ನು ಅದರೊಳಗೆ ನುಗ್ಗಿಸಿದರು. ನಮ್ಮ ಮನೆಯ ದನಕರಗಳನ್ನು ಕಿಚ್ಚು ಹಾಯಿಸಿದೆ.
“ಚಿಕ್ಕಪ್ಪ, ಈ ದನಕರುಗಳನ್ನು ಅದೇಕೆ ಬೆಂಕಿಯಲ್ಲಿ ನುಗ್ಗಿಸುವಿರಿ..? ರಾಮನಿಗೆ ಕುತೂಹಲ.
“ದನಕರುಗಳ ಮೈಯಲ್ಲಿ ಉಣ್ಣೆ ಹುಳು ಅಂಟಿಕೊಂಡಿರುತ್ತವೆ. ಹೀಗೆ ಕಿಚ್ಚು ಹಾಯಿಸಿದಾಗ ಅವು ಸಾಯುತ್ತವೆ. ಕಿಚ್ಚು ಹಾಯಿಸಿ ನಂತರ ಮನೆಯವರೆಲ್ಲಾ ದೇವಾಲಯಕ್ಕೆ ಹೋಗಿ ಗ್ರಾಮ ದೇವತೆ ಮಾರಮ್ಮನನ್ನು ಪೂಜಿಸಿದೆವು. ಸಂಕ್ರಾಂತಿಯ ಮರುದಿನ ಪರ್ವಕಾಲದ ಕರಿ. ಎಳೆಯ ಮಕ್ಕಳಿದ್ದವರ ಮನೆಗಳಲ್ಲಿ ಕರಿ ಎರೆಯುವ ಸಂಪ್ರದಾಯವಿದೆ. ವರ್ಷ ತೊಡಕೆಂದು ಮಾರನೇ ದಿನ ಬಾಡಿನೂಟದ ಸಮಾರಾಧನೆಯು ಕೆಲವರ ಮನೆಯಲ್ಲಿ ಇರುತ್ತದೆ.

ಗೊರೂರು ಅನಂತರಾಜು,
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-೫೭೩೨೦೧
ಮೊ: ೯೪೪೯೪೬೨೮೭೯.

ವಿಜಯನಗರ ವಿಜಯ ಮಹೋತ್ಸವ ವಿಶ್ವ ಶಾಂತಿ ಹೋಮ

ಗಂಗಾವತಿ: ಭಾರತ ಅಭ್ಯುತ್ತಾನ ಮಂಗಳ ಯಾತ್ರಾದ ಎಲ್ಲಾ ಸದಸ್ಯರಿಂದ ತಾಲೂಕಿನ ಆನೆಗುಂದಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಇದೇ ಕ್ರೋಧಿ ನಾಮ ಸಂವತ್ಸರದ ಪುಷ್ಯ ಮಾಸದ ಬುಧವಾರ ಅಂದರೆ ಜನವರಿ-೨೨ ಬುಧವಾರ ಬೆಳಿಗ್ಗೆ ೭ ರಿಂದ ಸಂಜೆ ೮ ರವರೆಗೆ ವಿಶ್ವ ಶಾಂತಿ ಹೋಮ ಹಾಗೂ ನರಸಿಂಹ ಹೋಮವನ್ನು ನೆರವೇರಿಸಲು ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿದೆ.

ಎಲ್ಲರೂ ಬಂಧು ಬಾಂಧವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನರಸಿಂಹ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಹಾಗೂ ವಿಶ್ವ ಶಾಂತಿ ಹೋಮದ ಮೂಲಕ ಒಬ್ಬ ಜವಾಬ್ದರಿಯುತ ಪ್ರಜೆಯಾಗಿ ಜಗತ್ತಿಗೆ ಶಾಂತಿಯನ್ನು ಪಸರಿಸಲು ಸಹಕಾರ ನೀಡಬೇಕೆಂದು ಭಾರತ ಅಭ್ಯುತ್ತಾನದ ವತಿಯಿಂದ ಕೊರಲಾಗಿದೆ.
ಸದರಿ ದಿನದಂದು ಮದ್ಯಾಹ್ನ ೧ ರಿಂದ ಹಾಗೂ ಸಂಜೆ ೮ ರಿಂದ ಪ್ರಸಾದ ವಿನಿಯೋಗ ಇರುತ್ತದೆ.

ಶಂಕರ ಮಠದ ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ಶೃಂಗೇರಿಯ ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಯಶಸ್ವಿಗೆ ಪ್ರಾರ್ಥಿಸಿ ಗಣಪತಿ ಹೋಮ.

ಗಂಗಾವತಿ. ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಜನವರಿ-21 ಹಾಗೂ 22 ರಂದು ಜರುಗಲಿರುವ ವಿಜಯ ಯಾತ್ರೆ 2025 ರ ಯಶಸ್ವಿಗೆ ಪ್ರಾರ್ಥಿಸಿಕೊಂಡು ಸೋಮವಾರದಂದು ಪೂಜ್ಯರಿಂದ ಲೋಕಾರ್ಪಣೆಗೊಳ್ಳಲಿರುವ ನವೀಕರಿಸಿದ ಸಭಾಂಗಣದ ಆವರಣದಲ್ಲಿ ಪ್ರಥಮ ಪೂಜೆ, ವಿಘ್ನ ವಿನಾಶಕ ಗಣಪತಿ ಪೂಜೆ, ಹೋಮವನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡದವರು ಸಾಂಗತವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿ ಕಿರಿಯ ಸ್ವಾಮೀಜಿಗಳು ವಿಜಯ ಯಾತ್ರೆಯ ಹಿನ್ನೆಲೆಯಲ್ಲಿ ಭಕ್ತ ಕೋಟಿ ಅನುಗ್ರಹಿಸಲು ನಗರಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಾಗಣಪತಿ ಹೋಮದೊಂದಿಗೆ ಯಾವುದೇ ರೀತಿಯ ಸಂಕಷ್ಟಗಳು ಆಗಬಾರದು ಎಂಬ ಉದ್ದೇಶದಿಂದ ಈ ಹೋಮದಿಂದಲೇ  ಸದರಿ ದಿನಗಳಂದು ವಿಜಯ ಯಾತ್ರೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಕಲ ಭಕ್ತಾದಿಗಳು ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೇದಮೂರ್ತಿ ಮಹೇಶ್ ಭಟ್ಟ ಜೋಶಿ ಸೇರಿದಂತೆ ಶಂಕರ ಮಠದ ಹಿರಿಯ ಸದಸ್ಯರಾದ ರಾಘವೇಂದ್ರ ಅಳವಂಡಿಕರ್. ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ರಾಘವೇಂದ್ರ ಮೇಗೂರು. ಜಗನ್ನಾಥ್ ರಾವ್ ಅಳವಂಡಿಕರ್. ಶ್ರೀನಿವಾಸ ಕರಮುಡಿ, ಸುದರ್ಶನ ವೈದ್ಯ, ಭೀಮಸೇನ್ ರಾವ್. ವೇಣು ಇತರರು ಉಪಸ್ಥಿತರಿದ್ದರು.

ಅಮೀತಕುಮಾರ ರೆಡ್ಡಿ ಅವರ ಸಂಶೋದನೆಗೆ ಬಳ್ಳಾರಿ ವಿ.ವಿ ಡಾಕ್ಟರೇಟ್

ಗಂಗಾವತಿ: ನಗರದ ಸಂಕಲ್ಪ ಕಾಲೇಜಿನ ನಿರ್ದೇಶಕರು ಹಾಗೂ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಅಮೀತಕುಮಾರ ರೆಡ್ಡಿಯವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ವರ್ಚುವಲ್ ಬ್ಯಾಂಕಿಂಗ್ ಪ್ರಾಕ್ಟೀಸ್ ಆಫ್ ಪಬ್ಲಿಕ್ ಆ್ಯಂಡ್‌ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್: ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಸಿಟಿ ಎಂಬ ವಿಷಯದ ಕುರಿತು ಕೈಗೊಂಡ ಅಧ್ಯಯನದಲ್ಲಿ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.

ಇವರ ಅಧ್ಯಯನಕ್ಕೆ ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೇಘರಾಜ ಬಿ. ರವರು ಮಾರ್ಗದರ್ಶನ ನೀಡಿದ್ದಾರೆ.

ಈ ಕುರಿತು ಅಮೀತಕುಮಾರ ರೆಡ್ಡಿ ಮಾತನಾಡಿ ನಾನು ಪ್ರಾಧ್ಯಾಪಕನಾಗಿ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲದೊಂದಿಗೆ ವರ್ಚುವಲ್ ಬ್ಯಾಂಕಿಂಗ್ ಪ್ರಾಕ್ಟೀಸ್ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್: ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಸಿಟಿ ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಪೂರೈಸಿರುತ್ತೇನೆ ಎಂದು ತಿಳಿಸಿದರು.

ಶೃಂಗೇರಿ ಜಗದ್ಗುರುಗಳ ವಿಜಯಯಾತ್ರೆ ನಗರಕ್ಕೆ ಆಗಮನ: ನಾರಾಯಣರಾವ್ ವೈದ್ಯ

ಗಂಗಾವತಿ: ಸನಾತನ ಧರ್ಮದ ಪ್ರವರ್ತಕರಾದ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ಪ್ರಪ್ರಥಮ ಪೀಠವೆಂದಿನಿಸಿದ ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಮಿದುಶೇಖರ ಮಹಾಸ್ವಾಮಿಗಳು ಈಗಾಗಲೇ ವಿಜಯಯಾತ್ರೆಯನ್ನು ಆರಂಭಿಸಿದ್ದು, ಜನವರಿ-೨೧ ರಂದು ಗಂಗಾವತಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.

ಅವರು ಶಂಕರಮಠದ ಕಾರ್ಯಾಲಯದಲ್ಲಿ ಪತ್ರಿಕಾ ವರದಿಗಾರರ ಹಾಗೂ ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಸುವರ್ಣ ಭಾರತಿ ಮಹೋತ್ಸವ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ವಿಜಯಯಾತ್ರೆಯ ಅಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿನ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗುರ್, ಸುದರ್ಶನ್ ಜೋಶಿ, ತಿರುಮಲ್‌ರಾವ್ ಆಲಂಪಲ್ಲಿ, ಮುರಳೀಧರ ಕುಲಕರ್ಣಿ ಇತರರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ನಾರಾಯಣರಾವ್ ವೈದ್ಯ ಅವರು ಜನವರಿ-೨೧ ಮಂಗಳವಾರದಂದು ಜುಲೈನಗರದಿಂದ ಮೋಟಾರ್ ಬೈಕ್ ರ‍್ಯಾಲಿ ಮೂಲಕ ಶ್ರೀಗಳನ್ನು ಸ್ವಾಗತಿಸಿ, ಶ್ರೀಗಳ ಪುರ ಪ್ರವೇಶ, ಪೂರ್ಣಕುಂಭ ಸ್ವಾಗತ, ವಾಲ್ಮೀಕಿ ವೃತ್ತದಿಂದ ಶುಭಾಯಾತ್ರೆಯ ಮೂಲಕ ಶಂಕರ ಮಠಕ್ಕೆ ಆಗಮನ, ನಂತರ ಧೂಳಿ ಪಾದಪೂಜೆ, ಜ್ಯೋತಿ ಬೆಳಗಿಸುವುದರ ಮೂಲಕ ನವೀಕೃತ ಸಭಾಂಗಣದ ಉದ್ಘಾಟನೆ ಮಾಡಲಿದ್ದು, ಶ್ರೀಗಳವರಿಗೆ ಫಲ ಸಮರ್ಪಣೆ ಹಾಗೂ ಶ್ರೀಗಳಿಂದ ಆಶೀರ್ವಚನ, ಶ್ರೀ ಚಂದ್ರಮೌಳೇಶ್ವರ ಪೂಜೆ ಪ್ರಸಾದ ವಿನಿಯೋಗ ಜರುಗಲಿದೆ.

ಜನವರಿ-೨೨ ಬುಧವಾರ ಶ್ರೀಮಠದ ರಕ್ಷಕರಿಂದ ಶ್ರೀ ಚಂದ್ರಮೌಳೇಶ್ವರಕ್ಕೆ ಪೂಜೆ, ಶ್ರೀಗಳ ದರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾ ವಂದನೆ, ಶ್ರೀಗಳಿಂದ ಅನುಗ್ರಹ ಸಂದೇಶ, ಆಶೀರ್ವಚನ, ತೀರ್ಥಪ್ರಸಾದ ವಿತರಣೆ ಹಾಗೂ ಫಲ ಮಂತ್ರಾಕ್ಷತೆಯೊಂದಿಗೆ ವಿಜಯಯಾತ್ರೆ ಸಂಪನ್ನಗೊಳ್ಳಲಿದೆ.

ಈ ಶುಭ ಸಂದರ್ಭದಲ್ಲಿ ಸರ್ವಸಮಾಜದ ಬಂಧುಗಳು, ಅಪಾರ ಸಂಖ್ಯೆಯ ಭಕ್ತಾದಿಗಳು ಈ ಎರಡೂ ದಿನದ ವಿಜಯ ಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಹಾಗೂ ಶ್ರೀ ಶಾರದಾದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.

ಆನೆಗುಂದಿಯಲ್ಲಿ ಶ್ರೀಕೃಷ್ಣದೇವರಾಯರ ೫೫೪ನೇ ಜಯಂತಿ ಆಚರಣೆ

ಗಂಗಾವತಿ: ಇಂದು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ೫೫೪ನೇ ಜಯಂತಿಯ ಅಂಗವಾಗಿ ಆನೆಗುಂದಿಯಲ್ಲಿ ರಾಜಾ ಶ್ರೀ ಕೃಷ್ಣದೇವರಾಯರ ಪುತ್ಥಳಿಗೆ ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅಮ್ಮನವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಶ್ರೀಮತಿ ಲಲಿತಾರಾಣಿ ಅಮ್ಮನವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಚಿತ್ರನಟ ವಿಷ್ಣುತೀರ್ಥ ಜೋಶಿ, ಮಾಜಿ ಗ್ರಾ.ಪಂ ಅಧ್ಯಕ್ಷ ತಿರುಕಪ್ಪ, ಮುಖಂಡರಾದ ಕುಪ್ಪರಾಜು, ರಾಘವೇದ್ರ ರಾಜು, ಸುದರ್ಶನ್ ವರ್ಮಾ, ರಾಘವೇಂದ್ರ, ನಾಗಪ್ಪ, ಬಿಎಂ ವೆಂಕಟೇಶ, ಗುರು ಯಾದವ್, ಟಿ. ಚಂದ್ರು, ರಮೇಶ್, ಬಾಲಯ್ಯ, ಊರಿನ ಗುರು ಹಿರಿಯರು ಸೇರಿದಂತೆ ಅಮ್ಮನವರ ಅಭಿಮಾನಿಗಳು ಉಪಸ್ಥಿತರಿದ್ದರು.

ಸಂಕಲ್ಪ ಕಾಲೇಜಿಗೆ ೭ ರ‍್ಯಾಂಕ್ ಹಾಗೂ ೨ ಚಿನ್ನದ ಪದಕ

ಗಂಗಾವತಿ: ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಪ್ರಕಟಿಸಿದ ೨೦೨೩-೨೪ನೇ ಸಾಲಿನ ಎನ್.ಇ.ಪಿ ಪಠ್ಯದ ಪದವಿ ಪರೀಕ್ಷೆಯಲ್ಲಿ ನಗರದ ಸಂಕಲ್ಪ ಪದವಿ ಕಾಲೇಜಿಗೆ ೭ ರ‍್ಯಾಂಕ್ ಮತ್ತು ೨ ಚಿನ್ನದ ಪದಕ ಲಭಿಸಿವೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಹರ್ಷ ವ್ಯಕ್ತಪಡಿಸಿದರು.

ಕಾಲೇಜಿನ ಬಿ.ಕಾಂ ವಿಭಾಗದಲ್ಲಿ ಜೇಬಾ ಸೈಯದ್ ಖಲೀಲುಲ್ಲಾ ಖಾದ್ರಿ ಶೇ ೯೫.೪೬ ಅಂಕದೊಂದಿಗೆ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ, ಬಿ.ಎ ವಿಭಾಗದಲ್ಲಿ ಸುಭದ್ರಾ ವಿರೂಪಾಕ್ಷ ಬಢಿಗೇರ್ ಶೇ ೯೧.೧೭ ಅಂಕ ಪಡೆಯುವುದರೊಂದಿಗೆ ೬ನೇ ರ‍್ಯಾಂಕ್ ಮತ್ತು ವಿಷಯವಾರು ಐಚ್ಛಿಕ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಬಿ.ಎ ವಿಭಾಗದಲ್ಲಿ ಉಮಾ ಉಡೇಗೋಳ ಯಂಕಪ್ಪ ಶೇ ೯೧೫೫ (೪ನೇ ರ‍್ಯಾಂಕ್), ಹನುಮಂತಿ ಹನುಮಂತಪ್ಪ ಶೇ ೯೧.೩೭ (೫ನೇ ರ‍್ಯಾಂಕ್), ಅನಿತಾ ಈರಪ್ಪ ಕೋರಿ ಶೇ ೯೦.೭೨ (೧೦ನೇ ರ‍್ಯಾಂಕ್), ಬಿ.ಕಾಂ ವಿಭಾಗದಲ್ಲಿ ಅಕ್ಷತಾ ಲಕ್ಷ್ಮಣ ದಾಸನೂರು ಶೇ ೯೪.೮೪ (೫ನೇ ರ‍್ಯಾಂಕ್), ಜಿ. ಜಯಶ್ರೀ ಅಮರೇಗೌಡ ಶೇ ೯೪.೭೯ (೬ನೇ ರ‍್ಯಾಂಕ್) ಅಂಕಗಳನ್ನು ಪಡೆಯುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿ, ಉಪಾಧ್ಯಕ್ಷರಾದ ಎಂ.ಆರ್. ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಸಿಂಗನಾಳ, ನಿರ್ದೇಶಕರಾದ ಅಮಿತಕುಮಾರ ರೆಡ್ಡಿ, ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಶುಭ ಹಾರೈಸಿದ್ದಾರೆ.

ಮಾಯಾವತಿಯವರ ೬೯ನೇ ಜನ್ಮದಿನದ ನಿಮಿತ್ಯ ನಗರದಲ್ಲಿ ಕಾರ್ಯಕರ್ತರಿಂದ ಸಮಾಜಮಖಿ ಕಾರ್ಯಗಳು.

ಗಂಗಾವತಿ: ಬಹುಜನ ಸಮಾಜ ಪಕ್ಷದ ಹಿರಿಯ ನಾಯಕಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಜನ್ಮದಿನದ ನಿಮಿತ್ಯ ಜನವರಿ-೧೫ ಬುಧವಾರ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾಯಾವತಿಯವರ ಜನ್ಮ ದಿನದ ಆಚರಣೆ ಮಾಡಲಾಯಿತು ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಹುಲಿಗೇಶ ದೇವರಮನಿ ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಮಾಯಾವತಿಯವರ ಜನ್ಮದಿನಾಚರಣೆ ನಿಮಿತ್ಯ ನಗರದ ಅನಾಥಾಶ್ರಮದಲ್ಲಿ ಕೇಕ್ ಕಟ್ ಮಾಡಿ, ಅಲ್ಲಿನ ಮಕ್ಕಳಿಗೆ ಹಣ್ಣು-ಹಂಪಲು ವಿತರಿಸಿ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಮಾತನಾಡಿದರು. ಮಾಯಾವತಿಯವರು ಸಾಕಷ್ಟು ಏಳುಬೀಳುಗಳನ್ನು ದಾಟಿ ರಾಜಕೀಯ ಪ್ರವೇಶಿಸಿ, ದಲಿತರ ಪರವಾಗಿ, ಶೋಷಿತರ ಪರವಾಗಿ ಅನೇಕ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವರಿಗೆ ಆ ದೇವರು ಹೆಚ್ಚಿನ ಆಯುಷ್ಯ ಆರೋಗ್ಯ ಕರುಣಿಸಿ ರಾಜಕೀಯ ಜೀವನ ವೃದ್ಧಿಸಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಿದರು

Go back

Your message has been sent

Warning
Warning
Warning
Warning

Warning.

ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಮಲ್ಲೇಶ ನಾಯಕ, ರಮೇಶ ಕಾಳೆ, ಶಾಂತಕುಮಾರ, ದೊಡ್ಡ ಮಾರೆಪ್ಪ, ಮಲ್ಲೇಶ ನಾಯ್ಕ, ನಿಂಗಪ್ಪ ನಾಯಕ, ನೀಲಪ್ಪ, ಹುಲುಗಪ್ಪ ಕೊಜ್ಜಿ ಹಾಗೂ ಪಕ್ಷದ ಇತರರು ಹಾಜರಿದ್ದರು.

ಹಿರೇಬೆಣಕಲ್ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಆಚರಣೆ

ಗಂಗಾವತಿ: ತಾಲೂಕಿನ ಹಿರೇಬೇಣಕಲ್ ಗ್ರಾಮದಲ್ಲಿ ಜನವರಿ-೧೨ ರವಿವಾರ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತಶ್ರಯದಲ್ಲಿ ಶ್ರೇಷ್ಠ ಸಂತ ಶ್ರೀ ಸ್ವಾಮಿ ವಿವೇಕಾನಂದರ ೧೬೨ನೆಯ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.

ಈ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗಂಗಾವತಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪಗೌಡ ಆರ್ ಪಾಟೀಲ್ ಅವರು ಹಾಗೂ ವೇದಿಕೆ ಮೇಲಿನ ಎಲ್ಲ ಮಹನೀಯರಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಸ್ವಾಮಿ ವಿವೇಕಾನಂದರ ಕುರಿತು ಶ್ರೀ ಶಾಂತವೀರಯ್ಯ ಸ್ವಾಮಿ ಗಂಧದ ಶಿಕ್ಷಕರಿಂದ ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮಕ್ಕೆ ಸುಗಮ ಸಂಗೀತವನ್ನು ಶಿವಲಿಂಗಯ್ಯ ಶಾಸ್ತಿçಗಳು ಮತ್ತು ರಿಜ್ವಾನ್ ಮುದ್ದಬಳ್ಳಿಯವರು ನೆರವೇರಿಸಿದರು.
ಈ ಜಯಂತ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಿದ್ದಗಂಗಾ ಶ್ರೀ ಮೆಲೋಡೀಸ್ ಆರ್ಕೆಸ್ಟಾç ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬೇಣಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ವಿಶೇಷ ಆಹ್ವಾನಿತರಾಗಿ ಗಂಗಾವತಿಯ ದಂತವೈದ್ಯರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಆನಂದ್ ಕೊಟ್ರಪ್ಪ ಅಕ್ಕಿ, ಅನ್ನಪೂರ್ಣ ಮೇಡಂ, ಬಸವರಾಜ್ ಹೇಮಗುಡ್ಡ ವಕೀಲರು, ಗ್ರಾಮದ ಸಮಸ್ತ ಹಿರಿಯರು, ಸಂಘದ ಸರ್ವ ಸದಸ್ಯರು ಈ ನಾಡಿನ ಹೆಸರಾಂತ ಕಲಾವಿದರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಚಂದ್ರಶೇಖರ್ ಕುಂಬಾರ್ ನಿರ್ವಹಿಸಿದರೆ, ಪ್ರಾಸ್ತಾವಿಕ ನುಡಿಯನ್ನು ಶ್ರೀ ಕನಕನಗೌಡ ಬಸಾಪುರ ನುಡಿದರು. ಸ್ವಾಗತ ಭಾಷಣವನ್ನು ಶ್ರೀ ನಾಗರಾಜ್ ಡಣಪೂರ ಮಾಡಿದರು.
ಬಸನಗೌಡ ಹೊಸಳ್ಳಿ, ಮಾಲತೇಶ್ ಕುಕುನೂರ್ ಸೇರಿದಂತೆ ಸಮಸ್ತ ಹಿರೇಬೇಣಕಲ್ ಗ್ರಾಮದ ಯುವಕ ಮಿತ್ರರು, ಶಾಲೆಯ ಮುದ್ದು ಮಕ್ಕಳು, ತಾಯಂದಿರು ಭಾಗವಹಿಸಿದ ಈ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಸಂಜೆ ೬ ರಿಂದ ರಾತ್ರಿ ಒಂದು ಗಂಟೆಯವರೆಗೆ ಯಶಸ್ವಿಯಾಗಿ ನೆರವೇರಿತು ಎಂದು ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷರಾದ ಬಸನಗೌಡ ಹೊಸಳ್ಳಿ ಇವರು ವರದಿ ನೀಡಿದರು.

ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳು ಹಾಗೂ ಪಾಲಕರಿಗೆ ಕಬ್ಬು ನೀಡುವ ಮೂಲಕ ಮಕರ ಸಂಕ್ರಾಂತಿ ಆಚರಣೆ

ಗಂಗಾವತಿ: ಇಂದು ಮಹಾನ್ ಕಿಡ್ಸ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ಯ ಎಲ್ಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಕಬ್ಬನ್ನು ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಮಯದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ್ ಮಾತನಾಡಿ ಈಗಿನ ಮಕ್ಕಳಿಗೆ ಕಬ್ಬನ್ನು ತಿನ್ನುವುದು ಗೊತ್ತಿಲ್ಲ. ಪಾಲಕರು ಕೂಡ ಆ ಪ್ರಯತ್ನವನ್ನು ಮಾಡುವುದಿಲ್ಲ. ಮಕ್ಕಳಿಗೆ ಕಬ್ಬನ್ನು ತಿನ್ನುವ ರೂಢಿಯನ್ನು ಮಾಡಿದಲ್ಲಿ ಮಕ್ಕಳ ಆರೋಗ್ಯವು ಚೆನ್ನಾಗಿರುತ್ತೆ ಹಾಗೂ ಮಕ್ಕಳ ಹಲ್ಲುಗಳು ಕೂಡ ಚೆನ್ನಾಗಿರುತ್ತವೆ. ಹಾಗಾಗಿ ಪ್ರತಿ ವರ್ಷವೂ ಮಕ್ಕಳಿಗೆ ಹಾಗೂ ಪಾಲಕರಿಗೆ ಶಾಲೆಯಿಂದ ಕಬ್ಬನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕಿಯಾದ ಸವಿತಾ ಗುರುವಿನಮಠರವರು ಶಾಲೆಯ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಸಮಸ್ತ ಗಂಗಾವತಿ ನಾಗರಿಕರಿಗೆ ಮಕರ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪೂರ್ಣಿಮಾ, ಮಂಜುನಾಥ, ಚಂದ್ರಶೇಖರ, ಪ್ರಸಾದ್, ಕುಮುದಿನಿ, ಚಂಪಾರಣೆ, ಶಾಂತ ಹಿರೇಮಠ, ಮುತ್ತ, ತೇಜಸ್ವಿನಿ ಸೇರಿದಂತೆ ಇನ್ನಿತರ ಶಿಕ್ಷಕರಿದ್ದರು.

VISHWAROOPA NEWS BLOG

Infinite

Skip to content ↓