ಕಲೆಯು ಮಾನವನ ಹುಟ್ಟಿನೊಂದಿಗೆ ಬೆಳೆದು ಬಂದ ಚಮತ್ಕಾರ

ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.

ಹಾಸನದ ಒಡನಾಡಿ ಚಿತ್ರಕಲಾ ಬಳಗ ಹಾಸನಾಂಬ ಕಲಾಕ್ಷೇತ್ರದ ಹೊರಂಗಣದಲ್ಲಿ ಭಾನುವಾರ ಹಾಗೂ ಸೋಮವಾರದಂದು ಏರ್ಪಡಿಸಿದ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ವಸಂತಕುಮಾರ್ ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ರಚಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್, ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು, ಅಂತರಾಷ್ಟ್ರೀ ಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್, ಇಸ್ರೋ ಮಾಜಿ ಅಧ್ಯಕ್ಷರು ಕಿರಣ್‌ಕುಮಾರ್ ಇವರೆಲ್ಲರೂ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಮಹನೀಯರು. ಕಲಾವಿದರು ಪ್ರಕೃತಿಯ ನಡುವೆ ಕುಳಿತು ಬರೆದ ಪ್ರಕೃತಿ ಚಿತ್ರಗಳು ಕಲಾತ್ಮಕವಾಗಿವೆ ಎಂದರು.

ವಿಶ್ವ ಪರಿಸರ ದಿನ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಖ್ಯಾತ ಕಲಾವಿದರು ಕೆ.ಟಿ.ಶಿವಪ್ರಸಾದ್ ಮಾತನಾಡಿ ಮನುಷ್ಯ ಚಿತ್ರ ಬಿಡಿಸಬೇಕಾದರೆ ಎಷ್ಟು ಕಷ್ಟಪಟ್ಟಿದ್ದಾರೆ? ಚಿತ್ರ ಹೇಗೆ ಶುರುವಾಯ್ತು? ಚಿತ್ರ ಹೇಗೆ ಮಾಡಿದ್ರಿ? ಬಣ್ಣ ಹೇಗೆ ಹಾಕಿದ್ರಿ? ಎಂಬುದನ್ನೆಲ್ಲಾ ಚಿತ್ರಕಾರರನ್ನು ಮಕ್ಕಳು ಕೇಳಿ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯ, “ಕಲೆ ದೇವರು ಕೊಟ್ಟ ವರವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾದಂಬರಿಗಾರ್ತಿ ಶ್ರೀಮತಿ ಸುವರ್ಣ ಕೆ.ಟಿ.ಶಿವಪ್ರಸಾದ್, “ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ,” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಡೆ ಬರಹಗಾರ ಕಲಾವಿದ ಯಾಕೂಬ್, ಕಲಾವಿದ ಚಂದ್ರಕಾಂತ್ ನಾಯರ್ ಉಪಸ್ಥಿತರಿದ್ದರು. ಗಾಯಕಿ ಶ್ರೀಮತಿ ಸುನಂದ ಕೃಷ್ಣ ಭಾವಗೀತೆ ಮತ್ತು ಜನಪದ ಗೀತೆಗಳಿಂದ ರಂಜಿಸಿದರು. ಕಲಾವಿದ ವಸಂತಕುಮಾರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯ ಯೋಗ ದಿನಾಚರಣೆ.

ಗಂಗಾವತಿ: ಜೂನ್-೨೧ ಶನಿವಾರದಂದು ಬೆಳಿಗ್ಗೆ ೬.೩೦ಕ್ಕೆ “ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆ”, ಹಾಗೂ “ನಿವೇದಿತಾ ಶಾಲೆ”ಯ ಸಹಯೋಗದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿ ‘೧೧ನೇ ಅಂತರಾಷ್ಟ್ರೀಯ ಯೋಗ’ ದಿನವನ್ನು ಆಯೋಜಿಸಲಾಗಿತ್ತು.

ಯೋಗ ಶಿಬಿರದಲ್ಲಿ ಗಂಗಾವತಿಯ ಸ್ನೇಹ ಬಳಗ ಯೋಗ ಸಂಸ್ಥೆಯ ಯೋಗ ತರಬೇತುದಾರರಾದ ಪರಸಪ್ಪ ಕುರುಗೋಡ ಹಾಗೂ ಆನಂದ ಪಟ್ಟಣಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿ ಹಾಗೂ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಶಿಬಿರದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ರುಬೀನ್ ಮಿರಜ್‌ಕರ್ ಭಾಗವಹಿಸಿ ಮಕ್ಕಳಿಗೆ ಯೋಗದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾಂತ್‌ ರಾವ್‌ರವರು ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳಿದರು.

ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಮಾನಸ ಪಾಟೀಲ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಅವರು ಮಾತನಾಡಿ ಯೋಗವು ಸಕಲ ರೋಗಗಳಿಗೆ ನಿಯಂತ್ರಕವಿದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನಿತಾ ಮಿರಜ್‌ಕರ್, ವ್ಯವಸ್ಥಾಪಕರಾದ ಮಂಜುನಾಥ, ಉಭಯ ಶಾಲೆಗಳ ಶಿಕ್ಷಕ ವೃಂದ ಹಾಗೂ ಸುಮಾರು ೬೫೦ ವಿದ್ಯಾರ್ಥಿಗಳು ಈ ಶಿಬಿರದಲ್ಲಿ  ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನವನ್ನು ಪಡೆದರು.

ಕಲೆ ಕಲಾವಿದರ ಪರಿಚಯಿಸುವ ಲೋಕ ದೃಷ್ಟಿ ಕಲಾ ಸೃಷ್ಟಿ ಕೃತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರಾದ ಶ್ರೀ ಗೊರೂರು ಅನಂತರಾಜುರವರು ಕಳೆದ 25 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ, ಸಾಹಿತ್ಯ ಲೋಕಕ್ಕೆ ವಿಭಿನ್ನ ಆಯಾಮಗಳಲ್ಲಿ ಕೊಡುಗೆ ನೀಡಿದವರು. ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗಳಿಸಿದ್ದಾರೆ.

ಶ್ರೀಯುತರದು ತೀರ ಸರಳ ಹಾಗೂ ಸಾತ್ವಿಕ ವ್ಯಕ್ತಿತ್ವ. ಮಾನವೀಯ ಸಂವೇದನೆಗಳು, ಅನುಕಂಪ ಪ್ರೇರಿತ ಜೀವನದೃಷ್ಟಿ, ಪರಿಸರದ ಎಲ್ಲ ಸಂಭವಗಳಿಗೆ ತೀಕ್ಷ್ಣ ಸ್ಪಂದನೆ, ಸಹಾನುಭೂತಿ, ಮುಗ್ಧತೆ, ಸ್ನೇಹಪರತೆ ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಮಾನವೀಯ ಮೌಲ್ಯಗಳು. ಬರವಣಿಗೆಯಲ್ಲಿ ಸತ್ವ ಮತ್ತು ತತ್ವಗಳಿಂದ ಕಂಗೊಳಿಸುವ ಇವರ ಸಾಹಿತ್ಯ ಶ್ರೇಷ್ಠವೆನಿಸಿತು. ಮನುಕುಲದ ಸಹಜ ಬದುಕಿನ ಚಿತ್ರಣ ಹಾಗೂ ನೀತಿಕಥೆಗಳು ಓದುಗರ ಮನ ಮುಟ್ಟುತ್ತವೆ. ಸಾರಸತ್ವ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಇವರ ಸೃಜನಶೀಲತೆ ಕ್ರಿಯಾಶೀಲತೆಗಳು ವೈವಿಧ್ಯಮಯ ಬರವಣಿಗೆಗಳಲ್ಲಿ ಕಾಣುತ್ತವೆ. ಸಮಕಾಲೀನ ಸಾಹಿತ್ಯಲೋಕದ ಸವಾಲುಗಳ ಸೂಕ್ಷ್ಮತೆಯನ್ನು ಕಲೆಯ ಮೂಲಕ ಗ್ರಹಿಸಿ ಕೃತಿಗಳಲ್ಲಿನ ಸಂವೇದನೆ ಮತ್ತು ಆಂತರಿಕ ತೀವ್ರತೆಯನ್ನು ಒಳಗಣ್ಣಿನಿಂದ ಕಂಡು ಅವುಗಳ ಬಗ್ಗೆ ವಿಮರ್ಶೆ ಮಾಡುವ ವಿಶಿಷ್ಟ ಶೈಲಿ ಅವರದು.

ಪಾಶ್ಚಿಮಾತ್ಯರಲ್ಲಿ ಸಾಮಾನ್ಯ ಮನುಷ್ಯ ಕೂಡ ದೃಶ್ಯ ಕಲೆಯನ್ನು, ಕಲಾಕೃತಿಯನ್ನು ನೋಡುವ ಬಗೆ, ಕಲೆಯನ್ನು ಆಸ್ವಾದಿಸುವ ಬಗೆಯನ್ನು ಅರಿತಿರುತ್ತಾರೆ. ದೃಶ್ಯ ಭಾಷೆ(visual language) ಅವರಿಗೆ ಸಾಹಿತ್ಯ ಓದಿದಷ್ಟೇ ಸರಳವೆನಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಕಲಾವಿದನನ್ನು ಬಿಟ್ಟರೆ ದೃಶ್ಯ ಭಾಷೆ ತಿಳಿದುಕೊಳ್ಳುವ ಗೋಜಿಗೆ ಜನಸಾಮಾನ್ಯರು ಹೋಗುವುದೇ ಇಲ್ಲ. ಹಾಗಾಗಿ ಕಲಾವಿದ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ದೂರವಿರುತ್ತದೆ. ಆದರೆ ಈ ಇಬ್ಬರ ನಡುವಿನ ಅಂತರದ ಕೊಂಡಿಯನ್ನು ಜೋಡಿಸುವ ಮಹತ್ತರ ಕಾರ್ಯವನ್ನು ತಮ್ಮ ಲೇಖನ, ವಿಮರ್ಶೆಗಳಿಂದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶ್ರೀಯುತರು ಹಲವು ದಶಕಗಳಿಂದ ಮಾಡುತ್ತಲೇ ಬಂದಿರುವುದು ಶ್ಲಾಘನೀಯವಾಗಿದೆ.

ನಾಡಿನ ಸಾಂಸ್ಕೃತಿಕ ಲೋಕವನ್ನು ಅನನ್ಯಗೊಳಿಸುವ ನಿಟ್ಟಿನಲ್ಲಿ ಕರುನಾಡಿನ ಅನೇಕ ಸಾಹಿತಿಗಳು, ವಿಚಾರವಂತರು, ಕಲಾವಿದರು ತಮ್ಮ ಕರ್ತವ್ಯವನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ಪರಂಪರೆಯನ್ನು ವರ್ತಮಾನದಲ್ಲಿ ಅದರ ಶ್ರೇಷ್ಠತೆಯನ್ನು ನೆನೆಯುತ್ತ ಅದರ ಮಹತ್ವವನ್ನು ಮತ್ತಷ್ಟು ಹೇಳಲು ನಾವು ಅವಶ್ಯವಾದದ್ದನ್ನು ಪ್ರೀತಿಸಲೇ ಬೇಕು. ಹೀಗಾಗಿ ಶ್ರೀ ಗೊರೂರು ಅನಂತರಾಜುರವರು ಅವರ ಯೋಜನೆ ಅನುಸಾರ “ಲೋಕ ದೃಷ್ಟಿ ಕಲಾ ಸೃಷ್ಟಿ” ಕೃತಿಯು ಒಬ್ಬ ಚಿತ್ರ ಕಲಾವಿದನಾಗಿರುವ ನನಗೆ ಹೆಮ್ಮೆ ಅನಿಸುತ್ತದೆ.

ಈ ಕೃತಿಯಲ್ಲಿ ಚಿತ್ರ ಕಲಾವಿದರನ್ನು ವಿಷಯವಾಗಿಸಿ ಅವರ ಅಭಿವ್ಯಕ್ತಿ ಭಾವನೆ, ದೃಷ್ಟಿಕೋನ, ಬದುಕು ಬರಹ ಇವುಗಳನ್ನು ಪರಿಚಯಿಸುವ ಕಾರ್ಯ ಬಹಳ ಮಹತ್ವವೆನಿಸುತ್ತದೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದರು ಹಾಸನ ಜಿಲ್ಲೆಯ ಕಲಾವೈಭವ, ಸಂಸ್ಕೃತಿ ಅಲ್ಲಿರುವ ಚಿತ್ರ ಕಲಾವಿದರ ನೈಪುಣ್ಯತೆಯನ್ನು ಬಹಳ ಹತ್ತಿರದಿಂದ ಬಲ್ಲವನು. ಹಾಗೂ ಗೊರೂರು ಅನಂತರಾಜುರವರನ್ನು ಅವರ ಬರಹಗಳನ್ನು ಒಬ್ಬ ಸ್ನೇಹಿತನಾಗಿ ಕಂಡವನು.

ಶ್ರೀಯುತರು ಅನೇಕ ಚಿತ್ರ ಕಲಾವಿದರ ಪರಿಚಯಿಸುವ ಜೊತೆಗೆ ಅವರ ಜೀವನ ಶೈಲಿ ಕಲಾವಿದರ ಬದುಕು ಅವರ ಶ್ರೇಷ್ಠತೆಯನ್ನು ನೈಜವಾಗಿ ಲೇಖನಿಯಿಂದ ಚಿತ್ರಿಸಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಚಿತ್ರ ಕಲಾವಿದರ ಬದುಕನ್ನು ಇತಿಹಾಸದ ಪುಟಗಳಿಗೆ ಗೊರೂರು ಅನಂತರಾಜುರವರು ಸೇರಿಸಿರುವುದು ಕಲಾವಿದರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸಿದ್ದೇನೆ. 30 ವರ್ಷಗಳಿಂದಲೂ ಅನೇಕ ನಾಟಕಗಳನ್ನು, ವಿಷಯಗಳನ್ನು ಅಭಿನಯ ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನಟನೆಯ ಗಣ್ಯರನ್ನು ಗುರುತಿಸಿ ಅವರನ್ನು ಲೇಖನದಲ್ಲಿ ಪರಿಚಯಿಸಿರುವ ಕೀರ್ತಿ ಅವರ ಬರಹ ಲೋಕಕ್ಕೆ ಮತ್ತೊಂದು ಸ್ಪೂರ್ತಿ ಅನಿಸುತ್ತದೆ. ಇವರು ಒಂದು ರೀತಿಯ “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ಣುಡಿ ಅಂಟಿ ಕೊಂಡವರಂತೆ ಕಾಣುತ್ತಾರೆ.

ಅನೇಕ ಕಲಾಕೃತಿಗಳನ್ನು ವಿಮರ್ಶೆ ಮಾಡುತ್ತಾ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುತ್ತಾ, ನಾಟಕಗಳನ್ನು ಬರೆಯುತ್ತ, ನಿರ್ದೇಶಕ, ಒಬ್ಬ ನಾಟಕಕಾರನಾಗಿ ನಾಟಕ ರಚಿಸುತ್ತ, ನಟನಾಗಿ ಅಭಿನಯಿಸುತ್ತ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕನ್ನು ಎಲ್ಲಾ ಆಯಾಮಗಳಲ್ಲೂ ಅಭಿವ್ಯಕ್ತಗೊಳಿಸಬಹುದು ಎಂಬುದಕ್ಕೆ ಗೊರೂರು ಅನಂತರಾಜುರವರರ ಅಪೂರ್ವ ಬದುಕು ಮತ್ತು ಬರಹಗಳೆ ಇದಕ್ಕೆ ಸಾಕ್ಷಿ. ಇವರು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಕೆ. ಕರೀಂ ಖಾನ್, ಡಾ. ಎಚ್.ಕೆ. ಲಕ್ಕಪ್ಪ ಗೌಡ, ಬೇಲೂರು ಕೃಷ್ಣಮೂರ್ತಿ, ಡಾ. ಮಳಲಿ ವಸಂತ್ ಕುಮಾರ್, ಸಾಹಿತಿಗಳು ರಂಗಕರ್ಮಿಗಳು, ವಿಚಾರವಂತರನ್ನು ಕೂಡ ತಮ್ಮ ಬರವಣಿಗೆ ಮೂಲಕ ಅವರ ಬದುಕಿಗೊಂದು ಗಟ್ಟಿ ನೆಲೆಯನ್ನು ತುಂಬಿ ಕೊಟ್ಟಂತಹ ಈ ನಾಡಿನ ಒಬ್ಬ ಶ್ರೇಷ್ಠ ಲೇಖಕ ಎನ್ನಲು ಹರ್ಷವೆನಿಸುತ್ತದೆ.

ಶ್ರೀಯುತರು ಜಾನಪದ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಸುಂದರಗೊಳಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ಅನೇಕ ಹಬ್ಬಗಳನ್ನು ಮತ್ತು ನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹಾಗೆ ಲೀನವಾಗಿಸಿರುವುದು ಮಹತ್ವವೆನಿಸುತ್ತದೆ. ಇವರು ಸುಮಾರು 6 ನಾಟಕಗಳನ್ನು 20 ಕಿರು ನಾಟಕಗಳನ್ನು, ವಿಜ್ಞಾನ ಮೌಲ್ಯ ಶಿಕ್ಷಣ ಇತಿಹಾಸ, ಪುರಾಣ ವಾಸ್ತವಿಕತೆ, ಧಾರ್ಮಿಕತೆ ಎಲ್ಲವನ್ನು ಚಿತ್ರಿಸುವ ಸಾಹಿತಿ ಅದುವೇ ಗೊರೂರು ಅಂತರಾಜುರವರು.

ಪ್ರಸ್ತುತ ಈ ದಿನಮಾನಗಳಲ್ಲಿ ಚಿತ್ರ ಕಲಾವಿದರನ್ನು ಅವರ ಶ್ರೇಷ್ಠ ಸಾಧನೆಗಳನ್ನು ತಮ್ಮಷ್ಟಕ್ಕೆ ತಾವೇ ಈ ಪ್ರಪಂಚವನ್ನು ವರ್ಣಮಯವಾಗಿಸಿ ಸೃಷ್ಟಿಗೆ ಮತ್ತಷ್ಟು ಚೈತನ್ಯವನ್ನು ತುಂಬುವ ಚಿತ್ರಕಲಾವಿದರ ಬಗ್ಗೆ ಬರೆಯುವುದು ಒಬ್ಬ ಬರಹಗಾರನಿಗೆ ಇರುವ ಅತಿ ಸೂಕ್ಷ್ಮತೆ ಎಂದು ನಾನು ಭಾವಿಸಿದ್ದೇನೆ. ಶ್ರೀ ಗೊರೂರು ಅನಂತರಾಜುರವರು ಕಾಲದ ಪ್ರವಾಹದಲ್ಲಿ ಕಳೆದುಹೋಗುತ್ತಿರುವ ಚಿತ್ರ ಕಲಾವಿದರ ಹತ್ತಾರು ಸಂಗತಿಗಳನ್ನು ಹಲವಾರು ಚಿತ್ರ ಕಲಾವಿದರ ರೇಖೆಗಳನ್ನು ಅವರ ವರ್ಣ ಶೈಲಿಯನ್ನು ಅವರ ಮನಸ್ಥಿತಿಯ ಓರೆ ಕೋರೆಗಳನ್ನು ಅವರ ಬದುಕಿದ ವಿಚಾರವಂತಿಕೆಯನ್ನು ಈ ಕೃತಿಯಲ್ಲಿ ಹೇಳಿರುವುದು ನನಗೆ ಬಹಳ ಅಪರೂಪವೆನಿಸುತ್ತದೆ.

ನಾನು ಸದಾ ಕ್ಯಾನ್ವಾಸ್ ಮತ್ತು ಬಣ್ಣಗಳ ಜೊತೆ ಬದುಕು ಕಳೆಯುವವನು ಬಿಳಿ ಕ್ಯಾನ್ವಾಸಿಗೆ ನಾನು ಹಚ್ಚಿದ ಬಣ್ಣಗಳಿಂದ ಕ್ಯಾನ್ವಾಸಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಅರ್ಪಿಸಿದವನು, ಆದರೆ ಬರವಣಿಗೆ ನನ್ನದಲ್ಲದು. ಆದರೂ ಸಹ ಅವರ ಪ್ರೀತಿಯ ಮನಸ್ಸಿಗೆ ಸೋತು ನನ್ನ ಬರಹ ಅಧ್ಯಾಯಕ್ಕೆ ಗೊರೂರು ಅನಂತರಾಜುರವರು ಈ ಮೂಲಕ ಸಾಕ್ಷಿಯಾಗಿದ್ದಾರೆ.

 

ಡಾ, ಬಾಬುರಾವ್ ನಡೋಣಿ
ಚಿತ್ರ ಕಲಾವಿದರು
ರಾಯಬಾಗ.
ಮೊಬೈಲ್ : 9448237722

 

ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಾಯಿತು.

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಶ್ರೀ ವೀರಾಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ. ಇವರ ಸಹಯೋಗದಲ್ಲಿ ಯುವ ನಿರ್ದೇಶಕ ಹೇಮಂತ್ ದೇವರಾಜ್ ನಿರ್ದೇಶನದಲ್ಲಿ ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮ ಸೀನರಿಯ ರಂಗಸಜ್ಜಿಕೆಯಲ್ಲಿ ಪ್ರದರ್ಶಿತವಾದ ಸಂಪೂರ್ಣ ರಾಮಾಯಣ ನಾಟಕದಲ್ಲಿ ದಶರಥನ ಪಾತ್ರದಲ್ಲಿ ನವಿಲುಹಳ್ಳಿ ವಾಸುದೇವ್ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆದರು. ಕೈಕೆ ಪಾತ್ರದಲ್ಲಿ ಲಕ್ಷ್ಮೀ ಶ್ರೀಧರ್ ನಟಿಸಿದರು.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಗಂಗಾವತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಸವನದುರ್ಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ವಿವರಿಸಿದರು. ಅವರು ಯೋಗ, ಪ್ರಾಣಾಯಾಮ ಹಾಗೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳ ಓದು ಮತ್ತು ಏಕಾಗ್ರತೆಯ ಅಭಿವೃದ್ಧಿಗೆ ಯೋಗ ಮತ್ತು ಧ್ಯಾನ ಹೇಗೆ ಸಹಾಯಕವಾಗಬಹುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.ಯೋಗ ಮತ್ತು ಪ್ರಾಣಾಯಮದ ಆಸನಗಳನ್ನು ಮಾಡಿ ತೋರಿಸಿ, ಯೋಗದ ಮಧ್ಯೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಹೇಳುವ ಮೂಲಕ ಸ್ವಯಂ ಸೇವಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಚಂದ್ರಶೇಖರ ರೆಡ್ಡಿ, ಲಿಂಗಣ್ಣ ಜಂಗಮರಹಳ್ಳಿ, ಅಜಗರ್ ಪಾಷಾ, ಈಶ್ವರಪ್ಪ, ಕುಮಾರಸ್ವಾಮಿ, ಶ್ರೀಮತಿ ರಮಾ, ಶ್ರೀಮತಿ ಶ್ರೀದೇವಿ, ಶ್ರೀಮತಿ ಲಕ್ಷೀ, ಚಿದಾನಂದ ಮೇಟಿ, ಶ್ರೀಮತಿ ಕನಕಮ್ಮ, ಮಹೇಶ್ ಹಿರೇಮಠ, ನಿರುಪಾದಿ, ಶ್ರೀಮತಿ ಕವಿತಾ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ, ಸೇವಕಿಯರು ಉಪಸ್ಥಿತರಿದ್ದರು.

ಗ್ರಂಥ ಪಾಲಕರಾದ ರಮೇಶ ಗಬ್ಬೂರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ, ಛತ್ರಪ್ಪ ತಂಬೂರಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಪ್ರಾಚಾರ್ಯರು, ಉಪನ್ಯಾಸಕರು, ಗ್ರಂಥಪಾಲಕರು ಮತ್ತು ವಿದ್ಯಾರ್ಥಿಗಳೆಲ್ಲಾ ಸೇರಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿದರು.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಕೋಟಿ ನೇಮಕ

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷ ಜಿ.ಎಮ್.ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಸಂಘದ ಸಂಘಟನೆ ಮಾಡಲು ಮತ್ತು ವೃತ್ತಿಪರ ಪತ್ರಕರ್ತರನ್ನು ಸಂಘದ ಸದಸ್ಯತ್ವ ಮಾಡಲು ಮತ್ತು ಸಂಘದ ಹೆಸರಿಗೆ ಚ್ಯುತಿ ಬರದಂತೆ ಕೆಲಸ ಮಾಡಲು ಮುಂದಾಗಲು ತಿಳಿಸಲಾಗಿದೆ.

ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ

ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ, ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ.

ಯೋಗ ಎನ್ನುವ ಪದ ಸಂಸ್ಕೃತದ ಯುಜ್‌ ಧಾತುವಿನಿಂದ ಹುಟ್ಟಿದೆ.  ಯುಜ್ ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ದೇಹ ಮತ್ತು ಮನಸ್ಸಿನ ಏಕತೆ ಪ್ರತಿನಿಧಿಸುವ ಯೋಗಾಭ್ಯಾಸ ವೇದ ಕಾಲದಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಕ್ರಿ.ಶ. 400 ರಲ್ಲಿ ಪತಂಜಲಿ ಮಹರ್ಷಿ ರಚಿಸಿದ ಯೋಗಸೂತ್ರ ಯೋಗದ ಕುರಿತಾದ ಮೊದಲ ಲಿಖಿತ ಉಲ್ಲೇಖ. ಪತಂಜಲಿ ಮಹರ್ಷಿಗಳ ಪ್ರಕಾರ ಯೋಗಃ ಚಿತ್ತ ವೖತ್ತಿ ನಿರೋಧಃ ಯೋಗವೆಂದರೆ ಚಿತ್ತದ ಚಾಂಚಲ್ಯ ವೖತ್ತಿಗಳನ್ನು ನಿರೋಧಿಸುವುದು.

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿತ ಯೋಗ ಶಾಖೆಗಳು ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ. ಅನೇಕ ಹಿಂದೂ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿ ಯೋಗದ ವಿವಿಧತೆ ತಿಳಿಸಿವೆ. ವಶಿಷ್ಠ ಮಹರ್ಷಿಗಳು ಮನಃ ಪ್ರಶಮನೋಪಾಯೋ ಯೋಗಃ ಇತಿ ಅಬಿಧೀಯತೆ. ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದಿದ್ದಾರೆ.

ಯೋಗಾಭ್ಯಾಸ ಮಾಡುವವರನ್ನು ಯೋಗಿ ಅಥವಾ ಯೋಗಿನಿ ಎನ್ನುವರು. ಪ್ರಾಚೀನ ಕಾಲದ ತಪಸ್ವಿಗಳನ್ನು ಯೋಗಿಗಳೆಂದು ಕರೆದಿದ್ದಾರೆ. ಋಷಿಗಳು ತಪಸ್ಸು ಮಾಡುವ ಕ್ರಿಯೆಗೆ ಯೋಗವೆಂದಿದ್ದಾರೆ. ಸಿಂಧೂ ಕಣಿವೆ ನಾಗರೀಕತೆಯ ಕಾಲದಲ್ಲಿ ಪತ್ತೆಯಾದ ಮೊಹರುಗಳಲ್ಲಿ ಧ್ಯಾನದ ಭಂಗಿ ಹೋಲುವ ಚಿತ್ರಗಳು ಶಾಸ್ತ್ರೀಯ ಚರ್ಯೆಗಳ ಒಂದು ವಿಧ. ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು ಎಂಬುದು ಪುರಾತನ ತತ್ವ ಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯ.

ಹಿಂದೂ ಗ್ರಂಥಗಳಲ್ಲಿ ಯೋಗ ಪದವು  ಕಠೋಪನಿಷತ್‌ನಲ್ಲಿ ಇದ್ದು ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ತಿಳಿಸಿದೆ. ಯೋಗಃ ಸಮತ್ವಂ ಉಚ್ಯತೇ. ಯೋಗ ಎಂದರೆ ಕಾರ್ಯ ತತ್ಪರತೆಯಲ್ಲಿ ಸಮಭಾವ, ಸಮಚಿತ್ತವಾಗಿರುವುದು.ಸ್ತುತಿ-ನಿಂದೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಮುಂತಾದ ದ್ವಂದ್ವ ಜೀವನದಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.

ಯೋಗದ ಪರಿಕಲ್ಪನೆಯ ಗ್ರಂಥಮೂಲಗಳು ಮಧ್ಯಕಾಲೀನ ಉಪನಿಷತ್ತುಗಳು, ಭಗವದ್ಗೀತೆ, ಮಹಾಭಾರತ, ಪತಂಜಲಿಯ ಯೋಗಸೂತ್ರಗಳು. ಭಾರತೀಯ ತತ್ವಜ್ಞಾನದ ಪ್ರಕಾರ ಯೋಗ ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ. ಇವು ರೂಢಿಯಲ್ಲಿ ಬಂದ ಭಾರತೀಯ ಷಡ್ ದರ್ಶನಗಳು. ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ.

ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ.

2014ರ ಸೆಪ್ಟೆಂಬರ್ 27ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಪ್ರಧಾನಿಗಳ ಈ ಪ್ರಸ್ತಾವನೆಗೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳಿಂದ ಬೆಂಬಲ ದೊರಕಿದೆ. 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಎಂದು ಅಧಿಕೃತವಾಗಿ ಘೋಷಿಸಿತು.

ಉತ್ತರ ಗೋಳಾರ್ಧದಲ್ಲಿ ಜೂನ್ 21 ವರ್ಷದ ಅತಿ ಉದ್ದದ ದಿನವಾಗಿದ್ದು ಯೋಗದ ದೃಷ್ಟಿಕೋನದಿಂದ ಇದು ವಿಶೇಷ ಮಹತ್ವ ಪಡೆದಿದೆ.

ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು 21-6-2015 ರಂದು ವಿಶ್ವದಾದ್ಯಂತ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಉದ್ದೇಶವೇನೆಂದರೆ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಉತ್ತಮ ಮಾರ್ಗವಾಗಿದ್ದು, ಇದು ವ್ಯಕ್ತಿಯ ಸಮಗ್ರ ಯೋಗಕ್ಷೇಮ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ದಿನವು ಯೋಗವನ್ನು ಜೀವನಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

ಈ ಮೂಲಕ ಯೋಗ ದಿನಾಚರಣೆಯು ಯೋಗದ ಪ್ರಾಚೀನ ಜ್ಞಾನವನ್ನು ಆಧುನಿಕ ಜಗತ್ತಿಗೆ ತಲುಪಿಸಿ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಕಾಪಾಡುವ ಆಶಯ ಹೊಂದಿದೆ.

ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

ಹಾಸನದ ಚಿತ್ರಕಲಾ ಶಿಕ್ಷಕರು ಮತ್ತು ಕಲಾವಿದರು ಆದ ವಸಂತಕುಮಾರ್ ಅವರ ವಾಟರ್ ಕಲರ್, ಲ್ಯಾಂಡ್ ಸ್ಕೇಪ್, ಬಾರ್ಕೋಲ್ ಮತ್ತು ಪೆನ್ಸಿಲ್ ವರ್ಕ್ಸ್ ಗಳ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಾಸನದ ಒಡನಾಡಿ ಚಿತ್ರ ಕಲಾ ಬಳಗದಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ದಿನಾಂಕ 22-6-2025ರ ಭಾನುವಾರ ಬೆ 11ಕ್ಕೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.ಹಾಸನ ಕ್ಷೇತ್ರದ ಶಾಸಕರು ಶ್ರೀ ಹೆಚ್.ಪಿ.ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸುವರು. ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಶ್ರೀ ಕೆ.ಟಿ.ಶಿವಪ್ರಸಾದ್ ವಿಶ್ವ ಪರಿಸರ ದಿನದಂದು ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು. ಸಾಹಿತಿಗಳು, ವಿಮರ್ಶಕರು, ಶ್ರೀ ಗೊರೂರು ಅನಂತರಾಜು, ಹಿರಿಯ ವ್ಯಂಗ್ಯ ಚಿತ್ರಕಾರರು, ಶ್ರೀ ಶಿವರಾಮ್, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಶ್ರೀ ಹೆಚ್. ಪಿ. ತಾರಾನಾಥ್, ಶ್ರೀಮತಿ ಭಾಗ್ಯ, ಪ್ರಾಂಶುಪಾಲರು. ಶ್ರೀಮತಿ ಸುವರ್ಣ ಕೆ.ಟಿ ಶಿವಪ್ರಸಾದ್, ಕಾದಂಬರಿಗಾರ್ತಿ, ಹಾಸನ ಮತ್ತು ಶ್ರೀಮತಿ ಸುನಂದ ಕೃಷ್ಣ, ಜನಪದ ಗಾಯಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಹಾಸನ ಕಲಾವಿದರಿಂದ ಮಲೈಮಹದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ

ಹಾಸನದ ಶ್ರೀ ಶಾರದ ಕಲಾಸಂಘದ ಕಲಾವಿದರು ಶ್ರೀ ಹೆಚ್.ಜಿ. ಗ೦ಗಾಧರ್ ನೇತೃತ್ವದಲ್ಲಿ ನಂಜನಗೂಡಿನ ಶಿವರಂಜಿನಿ ಸಾಂಸ್ಕೃತಿಕ ಕಲಾ ಬಳಗರವರು ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು, ಮಹದೇಶ್ವರ ಬೆಟ್ಟದ ದೇವಸ್ಥಾನದ ರಂಗ ಮಂದಿರದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ದಿನಾಂಕ 21-6-2025 ರ ಶನಿವಾರ ರಾತ್ರಿ 8 ಗಂಟೆಗೆ ಎ.ಸಿ. ರಾಜು ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸುವರು.ಉದ್ಘಾಟನೆ ಶ್ರೀ. ಸುನೀಲ್ ಬೋಸ್, ಸಂಸದರು,ಚಾಮರಾಜನಗರ ಜಿಲ್ಲೆ. ಅಧ್ಯಕ್ಷತೆ ಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜ ಕಲ್ಯಾಣ ಇಲಾಖೆ. ಗೌರವ ಉಪಸ್ಥಿತಿ ಡಾ.ಎಂ. ಡಿ. ಸುದರ್ಶನ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು. ಶ್ರೀ ಗೊರೂರು ಅನಂತರಾಜು, ಸಾಹಿತಿಗಳು, ಹಾಸನ. ಶ್ರೀ ಯೋಗೇಶ್, ವಕೀಲರು, ಹಾಸನ. ಗೋವಿಂದೇಗೌಡ್ರು, ಕಲಾವಿದರು, ಹಾಸನ. ಸೋಮರಾಜ್, ಕಲಾವಿದರು, ನಂಜನಗೂಡು.

ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಮಂತ್ರಾಲಯ ಪಾದಯಾತ್ರೆ, ಯೋಧರ ಹಾಗೂ ರೈತರ ಹಿತ ರಕ್ಷಣೆಗಾಗಿ ಪ್ರಾರ್ಥಿಸಿ: ದರೋಜಿ ನಾಗರಾಜ್ ಶೆಟ್ಟಿ

ಗಂಗಾವತಿ 15: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ದಿನದಂದು ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಂಕಲ್ಪ, ಭಜನೆ ಮಾಡುವುದರ ಮುಖಾಂತರ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇಶ ಕಾಯುವ ಯೋಧ ಹಾಗೂ ಅನ್ನದಾತ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ಸುಗಮವಾಗಿ ನಡೆಯಲಿ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡಂತಹ ಎಲ್ಲಾ ಪಾದಯಾತ್ರೆಗಳಿಗೆ ಶ್ರೀ ಗುರು ರಾಯರ ಅನುಗ್ರಹವಾಗಲಿ ಪಾದಯಾತ್ರೆಗೆ ಅನುಕೂಲ ಮಾಡಿದಂತ ದಾನಿಗಳಿಗೆ ರಾಯರ ಆಶೀರ್ವಾದ ಲಭಿಸಲಿ. ಈ ದೇಶದ ಸೈನಿಕರಿಗೆ, ರೈತರಿಗೆ ಗುರು ರಾಯರು ಹೆಚ್ಚಿನ ಶಕ್ತಿ ಕೊಡಲಿ ಎಂದು ಹೇಳಿದರು.

ಗುರುಗಳಾದ ಶ್ರೀ ಗುರು ಭೀಮ್ ಭಟ್ ಜೋಶಿ ಮಾತನಾಡಿ ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಪಾದಯಾತ್ರೆ ಸಮಾಜದ ಸಂಘಟನೆಗೆ ಹಾಗೂ ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಕಲಿಯುಗದ ಕಾಮಧೇನು ಶ್ರೀ ರಾಯರು ಸರ್ವರಿಗೂ ಶಾಂತಿ ಸಮೃದ್ಧಿ ಕರುಣಿಸಲಿ ಧರ್ಮ ರಕ್ಷಣೆಯ ಕಾರ್ಯ ಹೆಚ್ಚು ಹೆಚ್ಚು ನಡೆಯುವಂತಾಗಲಿ. ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಪಾದಯಾತ್ರೆ ದೇಶಕ್ಕೆ ಒಳಿತಾಗಲಿ ಎಂದು ಗುರು ರಾಯರನ್ನು ಪ್ರಾರ್ಥಿಸಿ ಆಶೀರ್ವದಿಸಿದರು.

ಜಿ.ಆರ್.ಎಸ್ ಸತ್ಯನಾರಾಯಣ ಮಾತನಾಡಿ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ನಡೆಯುವ ನಾಲ್ಕನೇ ವರ್ಷದ ಪಾದಯಾತ್ರೆ ಸುಗಮವಾಗಲಿ ಮತ್ತು ರಾಯರು ಅನುಗ್ರಹದಿಂದ ದೇಶಕ್ಕೆ ಒಳಿತಾಗಲಿ ಪಾದಯಾತ್ರೆಯಲ್ಲಿ ಭಾಗವಹಿಸಿದಂತ ಎಲ್ಲಾ ಯಾತ್ರೆಗಳಿಗೆ ರಾಯರು ಹೆಚ್ಚಿನ ಶಕ್ತಿ ಕೊಡಲಿ ದೇಶಕ್ಕೆ ಮಳೆ ಬೆಳೆ ಯಾವುದೇ ಕೊರತೆ ಆಗದಂತೆ ಮತ್ತು ಸೈನಿಕರಿಗೆ. ಕಾರ್ಮಿಕರಿಗೆ. ಬಡವರಿಗೆ. ರೈತರಿಗೆ ಶ್ರೀ ರಾಯರ ಅನುಗ್ರಹವಾಗಲಿ ಹೇಳಿದರು.

ಈ ಸಂದರ್ಭದಲ್ಲಿ ದರೋಜಿ ವೆಂಕಟೇಶ. ಹಣವಾಳ ಚಂದ್ರಶೇಖರ. ಬೆನ್ನೂರು ಪ್ರಹ್ಲಾದ. ಎನ್ ಗಂಗಾಧರ. ದಮ್ಮೂರ್ ಸುರೇಶ. ಬನ್ನಿಗೋಳ ಚಂದ್ರಶೇಖರ. ಚಿದಂಬರ. ಶೇಖರ ಸ್ವಾಮಿ. ಶಂಭುಲಿಂಗ ಹೊಸಳ್ಳಿ. ವೆಂಕಟೇಶ. ಸತ್ಯನಾರಾಯಣ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ. ಭಜನಾ ಮಂಡಳಿ ಸರ್ವ ಸದಸ್ಯರು ಹಾಗೂ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರಾದ ದಮ್ಮೂರು ರುಕ್ಮಿಣಿಮ್ಮ ಹುಷಾರಾಣಿ. ಸಂಪತ್ ಲಕ್ಷ್ಮಿ . ದಮ್ಮೂರ್ ಮಂಜುಳಾ. ದರೋಜಿ ರೇಖಾ ಸೇರಿದಂತೆ ಮಹಿಳಾ ಮಂಡಳಿಯ ಸರ್ವ ಸದಸ್ಯರು ಹಾಗೂ ಸಮಾಜದ ಹಿರಿಯರು ಸೇರಿದಂತೆ ಗಂಗಾವತಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಮಾಜ ಬಾಂಧವರು ಭಾಗವಹಿಸಿದ್ದರು.