ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆ ಭಾರತೀಯ ಸನಾತನ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ: ರಾಘವೇಂದ್ರ ಅಳವಂಡಿಕರ್

ಗಂಗಾವತಿ: ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು.

ಅವರು ಗುರುವಾರದಂದು ನಗರದ ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.

ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ, ಹರ ಮುನಿದರೂ ಗುರು ಕಾಯುವಂತೆ ಗುರುಗಳ ಅನುಗ್ರಹವಿಲ್ಲದೆ ಶಿಷ್ಯ ಏನನ್ನೂ ಸಾಧಿಸಲಾರ.

ಇದಕ್ಕೆ ಪೂರಕವೆಂಬಂತೆ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳುವುದಾದರೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಒಳಗೊಂಡಂತೆ ಉನ್ನತ ಅಧ್ಯಯನವನ್ನು ಸಾಧನೆ ಮಾಡಲು ಎಲ್ಲ ಶಿಷ್ಯರುಗಳಿಗೆ ಸಲ್ಲುತ್ತದೆ.

ಒಟ್ಟಾರೆ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಸಂಸ್ಕಾರ ಪಡೆಯಲು ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶ್ರೀ ಶಾರದಾ ದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ, ಗುರುಪಾದುಕೆಗಳಿಗೆ ಅರ್ಚಕ ಕುಮಾರ್ ಭಟ್ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಇತರ ಪೂಜಾ ಕಾರ್ಯಕ್ರಮವನ್ನು ನಡೆಸಿದರು.

ಸಂಜೆ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಜರುಗಿದವು.

ಈ ಸಂದರ್ಭದಲ್ಲಿ ವಿನಾಯಕ ಜೋಶಿ, ಹೊಸಳ್ಳಿ ಭೀಮಶಂಕರ, ಜಗನ್ನಾಥ್ ಅಳವಂಡಿಕರ್, ಶ್ರೀನಿವಾಸ ಕರಮುಡಿ, ನಾಗೇಶ್ ಭಟ್, ವೇಣುಗೋಪಾಲ್, ಶ್ರೀನಿವಾಸ ಅಳವಂಡಿಕರ್ ಇತರರು ಉಪಸ್ಥಿತರಿದ್ದರು.

ಮಾಹಿತಿಗಾಗಿ:
ಸುದರ್ಶನ ವೈದ್ಯ
ಮೊ: ೯೪೪೯೨೨೯೪೮೮, ೬೩೬೨೪೫೯೭೬೭

ಚಿತ್ರ ಸಂತೆ ಪತ್ರಿಕೆಯಿಂದ ನೀಡಲಾಗುವ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಆಯ್ಕೆ.

ಗಂಗಾವತಿ: ರಾಜ್ಯದ ಚಿತ್ರರಂಗ ವಿಭಾಗದ ಪ್ರತಿಷ್ಠಿತ ಪತ್ರಿಕೆಯಾದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಅದರಂತೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಅವರು ಆಯ್ಕೆಯಾಗಿದ್ದಾರೆ.

ಅವರಿಗೆ ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸಿದ್ದಾರೆ. ಮತ್ತು ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿದ ಚಿತ್ರ ಸಂತೆ ಪತ್ರಿಕೆಯ ಮುಖ್ಯ ಸಂಪಾದಕರಾದ ಗಿರೀಶ್ ವಿ. ಗೌಡ ರವರು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಇವರಿಗೆ ಗಂಗಾವತಿಯ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ

ಬೆಂಗಳೂರಿನ ರಂಗ ಭೂಮಿಯಲ್ಲಿ ನಿರಂತರವಾಗಿ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರ ರಾವ್ ರವರು ನನಗೆ ಪರಿಚಿತರೇನಲ್ಲ.

ಒಂದು ತಿಂಗಳ ಹಿಂದೆ, ನಾನು ಮಾಯಸಂದ್ರದ ನಟರಾದ ಟಿ. ನಾಗರಾಜ್ ರವರ  ಬಗ್ಗೆ ಬರೆದಿರುವ ಕಲಾ ಪರಿಚಯದ ಲೇಖನವನ್ನು ಓದಿ ಅವರು ಮೆಚ್ಚುಗೆಯ ಮಾತನಾಡಿದರು.

 

ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳುಹಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದೆ.

ಅದಕ್ಕಾಗಿ, ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು ತಂಡದಿಂದ ನಾಟಕ ಇದೆ ಬನ್ನಿ ಎಂದರು.

ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದಿ೦ದ ಜುಲೈ 4 ರಿಂದ 9 ರವರೆಗೆ ಆರು ದಿನಗಳ ಪೌರಾಣಿಕ ನಾಟಕೋತ್ಸವ ಹಮ್ಮಿಕೊಂಡಿತ್ತು.

ಅದರಲ್ಲಿ ಕಲಾವಿದ ಡಿ.ವಿ. ನಾಗಮೋಹನ್‌ರವರ  ತಂಡದ ನಾಟಕ ಪ್ರದರ್ಶನ ಏರ್ಪಾಡಾಗಿತ್ತು.

 

ಸಿ.ಎ. ರಾಮಚಂದ್ರರಾವ್ ನನಗೆ ಅವರ ನಟನೆಯ ವಿಡಿಯೋ ಕಳುಹಿಸಿದರು. ಅವರು ಪೌರಾಣಿಕ ರಂಗಭೂಮಿಯಲ್ಲಿ ತುಂಬಾ ಕೆಲಸ ಮಾಡಿದ್ದಾರೆ ಎಂದು ಅವರು ಕಳುಹಿಸಿದ ಮಾಹಿತಿಯಿಂದ ತಿಳಿದುಬಂದಿತು.

 

ಇವರು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ ಅಂಚೆ ಚಿಕ್ಕಯನಪಾಳ್ಯದಲ್ಲಿ ಜನಿಸಿದರು. ಇವರು ಶ್ರೀ ಅಪ್ಪುರಾವ್ ಹಾಗೂ ಶ್ರೀಮತಿ ಬೈನಾಬಾಯಿ ಅವರ ಐದನೇ ಸುಪುತ್ರರು.

ಇವರು 12 ವರ್ಷ ಬಾಲಕನಿದ್ದಾಗಲೇ ಗುಬ್ಬಿ ಕಂಪನಿಯ ಹೆಸರಾಂತ ಸಂಗೀತ ನಿರ್ದೇಶಕರಾದ ವಿರುಪಸಂದ್ರ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ ಪೌರಾಣಿಕ ನಾಟಕದ ಬಾಲ ಭೋಜನ ಪಾತ್ರದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು.

 

ತದನಂತರ, ಅದೇ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಶ್ರೀ ಕೃಷ್ಣಗಾರುಡಿ ಎಂಬ ನಾಟಕದಲ್ಲಿ ಮಾಯಾಮೋಹಿನಿ ಪಾತ್ರವನ್ನು ಮಾಡಿ ಪಾಂಡು ವಿಜಯ ನಾಟಕದಲ್ಲಿ ಅರ್ಜುನ ಪಾತ್ರವನ್ನು ಹತ್ತು ಬಾರಿ ಮಾಡಿದ್ದಾರೆ.

ಅಂದಿನ ಕಾಲಕ್ಕೆ ಸುತ್ತ ಮುತ್ತಲಿನ ಹಳ್ಳಿಗಾಡಿನ ಜನರ ಮನಸ್ಸನ್ನು ಗೆದ್ದಿರುವ ನಾಟಕವಿದು.

ಕುರುಕ್ಷೇತ್ರ ನಾಟಕದಲ್ಲಿ ಶ್ರೀ ಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಕರ್ಣ ಹಾಗೂ ಅಭಿಮನ್ಯು ಈ ಒಂದೊಂದು ಪಾತ್ರವನ್ನು ಹಲವಾರು ಬಾರಿ ಮಾಡಿದ್ದಾರೆ.

ರಾಮಾಯಣದಲ್ಲಿ ದಶರಥ, ಶ್ರೀರಾಮ, ಆಂಜನೇಯ, ರಾವಣ ಮತ್ತು ಭರತ ಇಷ್ಟು ಪಾತ್ರಗಳನ್ನು ಹಲವು ಬಾರಿ ಮಾಡಿದ್ದಾರೆ.

ರಾಜ ವಿಕ್ರಮ ನಾಟಕದಲ್ಲಿ ವಿಕ್ರಮ, ಶನೇಶ್ವರನ ಪಾತ್ರಗಳನ್ನು, ದಾನ ಶೂರ ವೀರ ಕರ್ಣ ನಾಟಕದಲ್ಲಿ ಭೀಮನ ಪಾತ್ರ ಮಾಡಿದ್ದಾರೆ.

1985ರಲ್ಲಿ ಮಾರುತಿ ಕಲಾಬಳಗ, ಎಲೆಕ್ಟ್ರಾನಿಕ್ ಸಿಟಿ ಎಂಬ ಸಂಘ ಸ್ಥಾಪಿಸಿತು. ಈ ಸಂಘದಿಂದ ಕಳೆದ 25 ವರ್ಷಗಳಿಂದ ಅನೇಕ ನಾಟಕಗಳನ್ನು ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಿ ಜನಮನ ಸೆಳೆದಿದ್ದಾರೆ.

ಈ ಮಾರುತಿ ಕಲಾ ಬಳಗದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಕಲಾವಿದರಿಗೂ ನಟಿಸಲು ಅವಕಾಶ ಕಲ್ಪಿಸಿದ್ದಾರೆ.

ನಲ್ಲಾತಂಗ ಎಂಬ ನಾಟಕದಲ್ಲಿ ರಾಮಸಿಂಹ, ವಂಗರಾಜ, ನಲರಾಜ ವಿಜಯಸಿಂಹ, ಶ್ರೀ ಶನೇಶ್ವರ ಪಾತ್ರಗಳನ್ನು ಒಂದೊಂದು ಪಾತ್ರಗಳನ್ನು 25 ಬಾರಿ ಮಾಡಿದ್ದಾರೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2007ರಿಂದ ಈವರೆಗೆ 150 ನಾಟಕ ಪ್ರದರ್ಶಿಸಿದ್ದಾರೆ. ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ 50 ಪ್ರದರ್ಶನವಾಗಿದೆ.

ಪ್ರಚಂಡ ರಾವಣ ನಾಟಕದಲ್ಲಿ ರಾವಣ, ಆಂಜನೇಯ ಪಾತ್ರಗಳಲ್ಲಿ ಅನೇಕ ಬಾರಿ ಅಭಿನಯಿಸಿದ್ದಾರೆ.

ಸುಭದ್ರ ಕಲ್ಯಾಣ ನಾಟಕದಲ್ಲಿ ಅರ್ಜುನ ಪಾತ್ರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ತಾ. 3-2-2025 ರಂದು ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಆಧರಿಸಿದಂತೆ.

ಹೆಸರಾಂತ ರಂಗ ಕಲಾವಿದರು ರಂಗಶ್ರೀ ರಂಗಸ್ವಾಮಿ ಅವರ ಪರಿಕಲ್ಪನೆಯಲ್ಲಿ ಹೆಸರಾಂತ ರಂಗಕರ್ಮಿ ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಯುಗೇ ಯುಗೇ ಪೌರಾಣಿಕ ನಾಟಕವು ಪ್ರದರ್ಶನಗೊಂಡಿತು.

ಈ ನಾಟಕವು ಇಂಡಿಯನ್ ಬುಕ್ ಅಫ್ ರೆಕಾರ್ಡ್‌ ನಲ್ಲಿ ದಾಖಲಾಗಿದೆ. ಈ ನಾಟಕದಲ್ಲಿ ತ್ರೇತ, ದ್ವಾಪರ ಯುಗಗಳ ರಾವಣ, ದುರ್ಯೋಧನ ಒಂದೇ ವೇದಿಕೆಯಲ್ಲಿ ಬಂದು ಈ ಎರಡು ಪಾತ್ರಗಳನ್ನು ಇವರು ಯಶಸ್ಸಿಯಾಗಿ ನಿಭಾಯಿಸಿದ್ದಾರೆ.

ಬೆಂಗಳೂರಿನ ಪುರಭವನದಲ್ಲಿ 2013ರಲ್ಲಿ ಸತತ 108 ಗಂಟೆಗಳ ಕಾಲ ಪ್ರದರ್ಶಿತ ಸಮಗ್ರ ಮಹಾಭಾರತ ಪೌರಾಣಿಕ ನಾಟಕದಲ್ಲಿ ಬಬ್ರುವಾಹನ ಪಾತ್ರ ನಿರ್ವಹಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಕಲಾವಿದರು, ಇವರಿಗೆ ಹಾಗೂ ಇವರ ತಂಡಕ್ಕೆ ಪ್ರಶಸ್ತಿ, ಪುರಸ್ಕಾರ ನೀಡಿ ಸನ್ಮಾನಿಸಿವೆ.

ಈ ವರೆಗೆ 250 ನಾಟಕಗಳನ್ನು ಶ್ರೀ ಮಾರುತಿ ಕಲಾ ಬಳಗದಿಂದ ಪ್ರದರ್ಶನ ಕೊಟ್ಟಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದಲ್ಲಿ ಬಿ.ಕಾಂ ಪದವಿ ಮಾಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸನ್ ವೇರ್ ಗ್ರೂಪ್ ಆಫ್ ಕಂಪನೀಸ್ ಎಚ್.ಆರ್. ಮ್ಯಾನೇಜರ್ ಆಗಿ 16 ವರ್ಷ ಸೇವೆ ಸಲ್ಲಿಸಿ ಈಗ ಜೆ.ಡಿ.ಎಸ್ ಪಕ್ಷದ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.

 

ಕೊನೆಯದಾಗಿ, ನಾನು ರೈತ ಕುಟುಂಬದಿಂದ ಬಂದರೂ ಸಹ ಈಗಲೂ ಹಳ್ಳಿಗೆ ಹೋಗಿ ಕೃಷಿ ಕೆಲಸ ಮಾಡುತ್ತೇನೆ.

ನನ್ನ ಜೀವಿತ ಕಾಲದಲ್ಲಿ ಇನ್ನೂ 250 ನಾಟಕಗಳನ್ನು ಅಭಿನಯಿಸುವ ಅಭಿಲಾಷೆ ಇದೆ ಎನ್ನುತ್ತಾರೆ.

ಗೊರೂರು ಅನಂತರಾಜು, ಹಾಸನ
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್
ಹಾಸನ – 573201

ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ದರ್ಶನ

ಗಂಗಾವತಿ ನಗರಸಭೆ ವ್ಯಾಪ್ತಿಯ ಪಂಪಾ ನಗರದ ಗೋಂದೊಳಿ ಸಮಾಜದ ಶ್ರೀ ಪಾಂಡುರಂಗ ಮಾಹಿತಿ ದೇವಸ್ಥಾನಕ್ಕೆ ರವಿವಾರದಂದು ಆಷಾಢ ಮಾಸದ ಪ್ರಥಮ ಏಕಾದಶಿಯ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಪಾಂಡುರಂಗ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಸೇರಿದಂತೆ ವಿವಿಧ ಹೂಗಳಿಂದ ಅಲಂಕಾರಿಸಲಾಗಿತ್ತು ಎಂದು ತಿಳಿಸಿದರು.

ವಿವಿಧ ಸಮಾಜದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಟನೆಯೊಂದಿಗೆ ಸಮಾಜ ಸೇವೆ ಎ.ವಿ.ರುದ್ರಪ್ಪಾಜಿರಾವ್ ಗೊರೂರು ಅನಂತರಾಜು, ಹಾಸನ.

ಹಾಸನದ ರಂಗಭೂಮಿಗೆ ಎ.ವಿ.ರುದ್ರಪ್ಪಾಜಿರಾವ್ ಅವರ ಕಲಾಸೇವೆ ಮರೆಯುವಂತಿಲ್ಲ. ಅವರು ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ಆಂಜನೇಯಪುರ ಗ್ರಾಮದ ಎ.ಎಲ್.ವೀರೋಜಿರಾವ್ ಮತ್ತು ಪುಟ್ಟತಾಯಮ್ಮ ದಂಪತಿಗಳ ಸುಪುತ್ರರು.

ಅವರು ದಿನಾಂಕ ೧೫-೫-೧೯೫೪ರಂದು ಜನಿಸಿದರು. ೧೯೭೪ರಲ್ಲಿ ಬಿಕಾಂ ಪೂರ್ಣಗೊಳಿಸಿ, ೧೯೭೫ರಲ್ಲಿ ಆಲೂರು ಬಿಡಿಒ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯಾರಂಭ ಮಾಡಿದರು.

ಶಿರಸ್ತೆದಾರ್ ಮತ್ತು ತಹಸೀಲ್ದಾರ್ ಹುದ್ದೆಗಳಿಗೆ ಬಡ್ತಿ ಪಡೆದು 39 ವರ್ಷಗಳ ಸೇವೆಯ ನಂತರ ನಿವೃತ್ತರಾಗಿದ್ದಾರೆ.

ಅವರು ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ನೌಕರರ ಸಂಘದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಲೇಜು ದಿನಗಳಲ್ಲಿ ಕ್ರೀಡಾಪಟು. ಅಥ್ಲೆಟಿಕ್‌ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದವರು, ಕೋಕೋ ತಂಡದ ನಾಯಕ, ಷಟಲ್‌ ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಅವರು ಸರ್ಕಾರಿ ನೌಕರರ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು. ೫ನೇ ವಯಸ್ಸಿನಲ್ಲಿ ಶನಿಮಹಾತ್ಮೆ ನಾಟಕದಲ್ಲಿ ಅಭಿನಯ ಪ್ರಾರಂಭಿಸಿದರು.

ರಾಮಾಯಣ, ಕುರುಕ್ಷೇತ್ರ, ವಿರಾಟಪರ್ವ ಮೊದಲಾದ ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕಾಲೇಜು ದಿನಗಳಲ್ಲಿ ೧೯೭೧-೭೪ ರವರೆಗೆ ಪ್ರತಿವರ್ಷ ನಾಟಕ ಸ್ಫರ್ಧೆಗಳಲ್ಲಿ ಜಯಗಳಿಸಿದ್ದರು.

ಹಾಸನದಲ್ಲಿ ೧೯೭೦ ರಿಂದ ೨೦೦೬ರವರೆಗೆ ನಾಟಕ ಪ್ರದರ್ಶನಗಳಲ್ಲಿ ಸಕ್ರಿಯರಾಗಿದ್ದರು. ಹಾಸನ ಮತ್ತು ಪ್ರದರ್ಶನದ ರಂಗಮಂಟಪದಲ್ಲಿ ಪ್ರತಿವರ್ಷ ಅವರ ತಂಡ ನಾಟಕ ಪ್ರದರ್ಶಿಸುತ್ತಿತ್ತು.

ದಿನಾಂಕ ೨೯-೧೨-೨೦೦೩ರಂದು ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ʼರಕ್ತಾಕ್ಷಿʼ ನಾಟಕದಲ್ಲಿ ಬಸವಯ್ಯನ ಪಾತ್ರ ನಿರ್ವಹಿಸಿದ್ದರು.

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಫರ್ಧೆಯಲ್ಲಿ ಶಕುನಿ ನಾಟಕದಲ್ಲಿ ಸೌಬಲನ ಪಾತ್ರ ಹಾಗೂ ಅಂಜುಮಲ್ಲಿಗೆ ನಾಟಕದಲ್ಲಿ ಗೌತಮನ ಪಾತ್ರ ನಿರ್ವಹಿಸಿದ್ದರು.

ಹಾಸನದ ಕಲಾ ಚಟುವಟಿಕೆಗಳಿಗೆ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ “ಕರ್ಣಾಟಕ ವೈಭವ” ಧ್ವನಿ-ಬೆಳಕು ನಾಟಕದಲ್ಲಿ ಸುಭಾಸ್ ಚಂದ್ರಬೋಸ್ ಪಾತ್ರವನ್ನೂ ಸಹ ನಿರ್ವಹಿಸಿದ್ದರು.

2025ರ ಮೇ 31ರಂದು ಅವರು ಓದಿದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಪತ್ರದಲ್ಲಿ ಅವರ ಸಮಾಜ ಸೇವೆ ಹಾಗೂ ಹಾಸನದ ಕಲಾಭವನ ನಿರ್ಮಾಣದ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ಉಲ್ಲೇಖಿಸಲಾಗಿದೆ.

1992ರಲ್ಲಿ ಹಾಸನದಲ್ಲಿ ನಡೆದ ನೌಕರರ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ. ಅವರು ಅಭಿನಯಿಸಿದ ಇತರೆ ಪ್ರಮುಖ ನಾಟಕಗಳು: ನಾದಬಿಂದು, ಇದಿಮಾಯಿ, ಕತ್ತಲೆ ದಾರಿ ದೂರ, ಮತ್ತೆ ಅದೇ ಕತೆ.

ಅವರು ಹಾಸ್ಯದಿಂದ ಕೂಡಿದ ನೆನಪುಗಳನ್ನು ನೆನೆಸಿ “ಮತ್ತೇನಾದರೂ ರಂಗಕತೆ ಇದೆಯಾ ಸಾರ್?” ಎಂದು ಕೇಳಿದಾಗ, “ಎಲ್ಲಾ ನಿಮಗೆ ಗೊತ್ತಲ್ಲ ಅನಂತು,” ಎಂದು ಉತ್ತರಿಸಿದರು.

ಅವರು ತಮ್ಮ 42ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿ ಹೆಚ್.ಎನ್. ಬಾರತಿಯ ನೇಪಥ್ಯ ಸಹಕಾರವನ್ನು ಸ್ಮರಿಸಿದರು.

ನಿಧಾನವಾಗಿ ಅವರು ಕಲಾ ಸೇವೆಯ ದೀರ್ಘ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅವರ ಕಲಾಪ್ರಯಾಣ, ಸಮಾಜ ಸೇವೆ, ಹಾಗೂ ಕುಟುಂಬ ಸಹಕಾರ – ಈ ಎಲ್ಲಾ ಅಂಶಗಳು ಹಾಸನದ ಕಲಾ ಪರಂಪರೆಗೆ ಹೆಮ್ಮೆ ಹೆಚ್ಚಿಸುತ್ತವೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಅನ್ನಪೂರ್ಣೇಶ್ವರಿ ಕಲಾಸಂಘ ೧೦ನೇ ವಾರ್ಷಿಕೋತ್ಸವದ ಪೌರಾಣಿಕ ನಾಟಕೋತ್ಸವ

ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ೧೦ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜುಲೈ ೪ ರಿಂದ ೯ ವರೆಗೆ ೬ ದಿನ ಪೌರಾಣಿಕ ನಾಟಕೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ತಿಳಿಸಿದ್ದಾರೆ.

೪ನೇ ತಾರೀಕು ಶುಕ್ರವಾರ ಪಿ. ಎಂ. ಮಲ್ಲೇಶ್‌ಗೌಡ್ರು, ರಂಗಸ್ವಾಮಿ ಇವರ ಶ್ರೀ ಚಾಮುಂಡೇಶ್ವರಿ ಕಲಾಸಂಘ, ಹಾಸನ ತಂಡದಿಂದ ಸಂಪೂರ್ಣ ರಾಮಾಯಣ ನಾಟಕ.

೫ನೇ ತಾರೀಕು ಶನಿವಾರ ಚಂದ್ರಶೇಖರ್ ಸಿಗರನಹಳ್ಳಿ, ಮಂಜು ತಟ್ಟೇಕೆರೆ ಇವರ ಶ್ರೀ ಲಕ್ಷ್ಮೀ ರಂಗನಾಥ ಸಾಂಸ್ಕೃತಿಕ ಕಲಾಸಂಘ, ಸಿಗರನಹಳ್ಳಿ ತಂಡದಿಂದ ಕುರುಕ್ಷೇತ್ರ ನಾಟಕ.

೬ನೇ ತಾರೀಕು ಭಾನುವಾರ ಸತೀಶ್ ಕಬ್ಬತ್ತಿ, ವೈಭವ್ ವೆಂಕಟೇಶ್ ಇವರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನ ತಂಡದಿಂದ ಚಂಡಾಸುರನ ವಧೆ ನಾಟಕ.

೭ನೇ ತಾರೀಕು ಸೋಮವಾರ ಬಾರೇಹೊಸರು ಜವರೇಗೌಡ್ರು, ಹನುಮೇಗೌಡ್ರು ಇವರ ಶ್ರೀ ಬಸವೇಶ್ವರ ಕಲಾಸಂಘ, ಹಾಸನ ತಂಡದಿಂದ ಛಲದೊಳ್ ದುರ್ಯೋಧನ ನಾಟಕ.

೮ನೇ ತಾರೀಕು ಮಂಗಳವಾರ ರಮೇಶ್ ಗೌಡಪ್ಪ, ಹೆಚ್.ಎಂ.ಪ್ರಭಾಕರ್ ಇವರ ಹಾಸನಾಂಬ ಕಲಾ ಟ್ರಸ್ಟ್, ಹಾಸನ ತಂಡದಿಂದ ಧರ್ಮರಾಜ್ಯ ಸ್ಥಾಪನೆ ನಾಟಕ

೯ನೇ ತಾರೀಕು ಬುಧವಾರ ಸಿ.ಎ.ರಾಮಚಂದ್ರರಾವ್ ಇವರ ಶ್ರೀ ಮಾರುತಿ ಕಲಾ ಬಳಗ, ಬೆಂಗಳೂರು ತಂಡದಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಸಮಾಜ ಸೇವಕರಾದ ಮಂಜುನಾಥ ಕಲಾಲ್ ಇವರಿಂದ ಆನೆಗುಂದಿ ಭಾಗದ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಗಂಗಾವತಿ: ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪುರ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಣೆ ಕಾರ್ಯಕ್ರಮ ಜುಲೈ 03 ಗುರುವಾರ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಎಂದು ಸಮಾಜಸೇವಕರಾದ ಮಂಜುನಾಥ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಜುನಾಥ ಕಲಾಲ್ ಅವರು ಮಾತನಾಡುತ್ತಾ, “ನಾವು ಕಳೆದ 13 ವರ್ಷಗಳಿಂದ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿದ್ದೇವೆ” ಎಂದು ತಿಳಿಸಿದರು. ಲಾಕ್‌ಡೌನ್ ಸಮಯದಲ್ಲಿ 6000ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ.

ಪೌರಕಾರ್ಮಿಕರಿಗೆ ಆಹಾರ ಕಿಟ್, ಶಾಲಾ ಮಕ್ಕಳಿಗೆ 2013ರಿಂದ ಪ್ರತಿವರ್ಷ ನೋಟ್ ಪುಸ್ತಕ ವಿತರಣೆಯ ಕಾರ್ಯ, ದೇವಸ್ಥಾನ ಜೀರ್ಣೋದ್ಧಾರ, ಬಡರೋಗಿಗಳಿಗೆ ಚಿಕಿತ್ಸಾ ಸಹಾಯ, ಎಂ.ಎನ್.ಎ. ಕಾಲೇಜಿಗೆ ಗೇಟ್ ಕೊಡುಗೆ, ಆಟೋ ಚಾಲಕರು ಹಾಗೂ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ, ಜುಲೈ 03ರಂದು ಆನೆಗೊಂದಿಯ ಸರ್ಕಾರಿ ಪೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಆನೆಗುಂದಿ ದುರ್ಗಾದೇವಿ ದೇವಾಲಯದ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಗೆ ಜನಪ್ರಿಯ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್‌ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಮಾಜಿ ಶಾಸಕರು ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಲಿತಾರಾಣಿ, ಶ್ರೀಕೃಷ್ಣದೇವರಾಯಲು, ಹರಿಹರದೇವರಾಯಲು ಭಾಗವಹಿಸಲಿದ್ದಾರೆ.
ಇದೇ ವೇಳೆ, ಆನೆಗುಂದಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷ ಛತ್ರಪ್ಪ ಲಂಬಾಣಿ, ಸಣಾಪುರ ಅಧ್ಯಕ್ಷ ಅಶೋಕ್, ಸಂಗಾಪುರ ಅಧ್ಯಕ್ಷೆ ಮಂಜುಳಾ ಲೋಕೇಶ್ ನಾಯ್ಕ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರರ ಉಪಸ್ಥಿತಿಯು ಕಲ್ಪಿಸಲಾಗಿದೆ.
ಆನೆಗುಂದಿ, ಸಂಗಾಪುರ, ಸಣಾಪುರ, ಮಲ್ಲಾಪುರ ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ.
ಮಾಹಿತಿಗಾಗಿ:
(ಮಂಜುನಾಥ ಕಲಾಲ್)
ಸಮಾಜ ಸೇವಕರು, ಗಂಗಾವತಿ
ಮೊ.ನಂ: ೮೯೭೦೬೪೭೦೮೦