ಭಾರತ್ ವಿಕಾಸ್ ಪರಿಷತ್ ನಡೆಸಿದ ಪ್ರಾಂತಮಟ್ಟದ ಕ್ವಿಜ್ ಕಾಂಪಿಟೇಷನ್‌ನಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಾದೇಶಿಕ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಅಕ್ಟೋಬರ್-೨೬ ಭಾನುವಾರ ರಾಯಚೂರಿನಲ್ಲಿ ನಡೆದ ಭಾರತ್ ವಿಕಾಸ್ ಪರಿಷತ್ ನಡೆಸಿರುವ ಪ್ರಾಂತ ಮಟ್ಟದ ಕ್ವಿಜ್ ಕಾಂಪಿಟೇಶನ್‌ನಲ್ಲಿ ಮಹಾನ್ ಕಿಡ್ಸ್ ಶಾಲೆಯ ೮ನೇ ತರಗತಿಯ ಮಕ್ಕಳಾದ ಸಾತ್ವಿಕ್ ಮನ್ಸಾಲಿ ಹಾಗೂ ಕಾರ್ತಿಕ್ ಕೊಂಡುಕೊಂದಿ ಇವರು ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಾದೇಶಿಕ (ರೀಜಿನಲ್) ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಮಕ್ಕಳಿಗೆ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಶುಭ ಹಾರೈಸಿ, ಈ ಮಕ್ಕಳು ಪ್ರಾದೇಶಿಕ (ರೀಜಿನಲ್) ಮಟ್ಟದಲ್ಲಿ ಗೆದ್ದರೆ ರಾಷ್ಟçಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಸವಿತಾ ಗುರುವಿನಮಠ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.

https://aratt.ai/@vishwaroopa_news_blog

 

ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ಧ್ವನಿ ಸಂಚಿಕೆ ಒಂದರ ಅಂತಿಮ ಹಂತದ (Final Stage) ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಮಧುನಾಯ್ಕಲಂಬಾಣಿಯವರ ರಚನೆಯ ಸಿಂಗಾರ ಹಾಡನ್ನು ಹೊಸಪೇಟೆಯ ಖ್ಯಾತ ಗಾಯಕಿ ಶ್ರೀಮತಿ ಕಮಲಾ ಕುಲಕರ್ಣಿಯವರು ಬಿಡುಗಡೆಗೊಳಿಸಿದರು. ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಗಾಯಕಿ ಶ್ರೀಮತಿ ಲಲಿತ ಸಿದ್ದಿ ಹಾಗೂ ಈ ಹಾಡಿಗೆ ಸಂಗೀತ ಸಂಯೋಜನೆ ಶ್ರೀನಿವಾಸನಾಯ್ಕ, ಡರೆಕ್ಷನ್ ರವಿಕಿರಣ, ಎಡಿಟಿಂಗ್ ಅಭಿಷೇಕ ಎಮ್., ನೃತ್ಯ ಪಲ್ಲವಿ ಎಲ್. ಇವರದ್ದಾಗಿದೆ.

ರಾಜ್ಯದಾದ್ಯಂತ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ, ಗೌರವ ಅಧ್ಯಕ್ಷರು ಮತ್ತು ಲೇಖಕರು ಗೊರೂರು ಅನಂತರಾಜು, ಉಪಾಧ್ಯಕ್ಷರು ವಿರುಪಾಕ್ಷಪ್ಪ ಯು., ಕಾರ್ಯಕ್ರಮದ ಅಧ್ಯಕ್ಷತೆ ಕೆ ಎಸ್ ನಾಯ್ಕ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯರಾದ ಆಶಾರಾಣಿ ಬಾಬುರಾವ್ ನಡೋಣಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷರಾದ ಪಿ.ವಿ ವೆಂಕಟೇಶ್, ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಉದೇದಪ್ಪ, ನಿವೃತ್ತ ಪೋಲಿಸ್ ಅಧಿಕಾರಿಯಾದ ಡಿ.ಎಸ್. ಗಜೇಂದ್ರ ನಾಯ್ಕ, ನಭಿಸಾಬ್ ಕುಷ್ಟಗಿ, ಕರೋಕೆ ಹಾಡುಗಾರಿಕೆ ಸ್ಪರ್ಧೆಯ ತೀರ್ಪುಗಾರರಾದ ಕುಬೇರನಾಯ್ಕ, ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ, ಚಿಕ್ಕಮಗಳೂರುರವರು ಹಾಜರಿದ್ದರು.

https://aratt.ai/@vishwaroopa_news_blog

ಹಾಸನದ ಹೆಚ್.ಎಸ್. ಪ್ರತಿಮಾ ಹಾಸನ್ ಗೆ ‘ಕೆಂಪಮ್ಮ ಪ್ರಶಸ್ತಿ’ ಪ್ರಧಾನ

ಹಾಸನ: ಅ: 26 ರಂದು ಅಕ್ಕಮಹಾದೇವಿ ಸಭಾಂಗಣ. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು ಜಾಗೃತಿ ಟ್ರಸ್ಟ್ ವತಿಯಿಂದ ಹಾಗೂ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ”ಯ ಸಹಯೋಗದಲ್ಲಿ ನಡೆಯುತ್ತಿರುವ “ನಗೆ ಹಬ್ಬ” ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯಾದ ಹಾಸನ ನಗರದ ಶಿಕ್ಷಕಿ. ಸಾಮಾಜಿಕ ಚಿಂತಕಿ. ಸಾಹಿತಿ, ಪತ್ರಕರ್ತರಾದ ಹೆಚ್.ಎಸ್.‌ ಪ್ರತಿಮಾ ಹಾಸನ್‌ ಅವರಿಗೆ “ಕೆಂಪಮ್ಮ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಅವರು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಸಂಸ್ಥಾಪಕ ಅಧ್ಯಕ್ಷರಾಗಿ, ಬಹುಮುಖ ಪ್ರತಿಭೆಯಾಗಿ, ಸದಾ ಕ್ರಿಯಾಶೀಲರಾಗಿ, ಜಿಲ್ಲೆ, ರಾಜ್ಯ, ಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯನಿರ್ವಹಿಸುತ್ತಾ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಗುರುತಿಸಿಕೊಂಡಿರುವ ಮಹಿಳಾ ಸಾಧಕಿಯಾಗಿ, ಮಹಿಳಾ ಹೋರಾಟಗಾರ್ತಿಯಾಗಿ, ಕನ್ನಡ ಪರ ಹೋರಾಟಗಾರ್ತಿಯಾಗಿ, ಸಮಾಜ ಸೇವಕಿಯಾಗಿ, ಸಂಘಟಕಿಯಾಗಿ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತಿಕವಾಗಿ ಸೇವೆ ಸಲ್ಲಿಸಿದ್ದು ಹಾಗೂ ಹಲವಾರು ಪ್ರಕಾರಗಳಲ್ಲಿ 12 ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಹಲವು ಕೃತಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಹಾಗೂ ಅಂಕಣಗಾರ್ತಿಯಾಗಿ, ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಯ್ಕೆ ಮಾಡಿ ಪ್ರತಿಷ್ಠಿತವಾದ ಈ ‘ಕೆಂಪಮ್ಮ ಪ್ರಶಸ್ತಿ ‘ ನೀಡಿ ಸನ್ಮಾನಿಸಲಾಯಿತು.

ಎಂ.ಎಸ್. ನರಸಿಂಹಮೂರ್ತಿರವರ “ಬಂಟಿ ಹೇಳಿದ ಕತೆಗಳು” (ಮಕ್ಕಳ ಇವತ್ತು ಹಾಸ್ಯಮಯ ಕತೆಗಳು) ಕೃತಿ ಬಿಡುಗಡೆ ಹಾಗೂ ಅವರ 76 ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಹಾಗೂ ಕಾರ್ಯಕ್ರಮದಲ್ಲಿ ಅಧ್ಯಕ್ಷರು ನಾಗೇಶ್, ವೈ.ವಿ. ಗುಂಡೂರಾವ್, ಹೆಚ್ ಡುಂಡಿರಾಜ್, ಅಪ್ಪಣ್ಣ ಮೇಟಿಗೌಡ, ಹೆಚ್.ಎಂ. ರಘುಕೋಟೆ ಇನ್ನೂ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.https://aratt.ai/@vishwaroopa_news_blog

ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾದ ಐ.ಎಂ.ಎ ಸಮ್ಮೇಳನ: ಡಾ|| ಅಮರೇಶ್ ಪಾಟೀಲ್

ಗಂಗಾವತಿ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗಂಗಾವತಿಯ ಅಮರ್ ಗಾರ್ಡನ್ ಸಭಾಂಗಣದಲ್ಲಿ ಜರುಗಿದ ಭಾರತೀಯ ವೈದ್ಯಕೀಯ ಸಂಘದ 91ನೆಯ ರಾಜ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಗೊಂಡಿತು ಎಂದು ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಡಾ|| ಅಮರೇಶ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ಅವರು ಅಕ್ಟೋಬರ್‌-26 ರವಿವಾರ ಸಮ್ಮೇಳನದ ಆಶಯ ನುಡಿಗಳನ್ನಾಡಿ, ಕಳೆದ ಶುಕ್ರವಾರದಿಂದ ಆರಂಭಗೊಂಡ ಈ ಸಮ್ಮೇಳನವು ರವಿವಾರದಂದು ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಬಂದ ನುರಿತ ತಜ್ಞರಿಂದ ಹಲವು ವೈವಿಧ್ಯಮಯ ವಿಷಯಗಳ ಕುರಿತು ಚಿಂತನ ಮಂಥನ ಹಾಗೂ ಅವರಿಂದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವುದರ ಮೂಲಕ ಕಿರಿಯ ವೈದ್ಯರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಸಿದ್ದಾರೆ ಎಂದು ತಿಳಿಸಿದ ಅವರು ಸಮ್ಮೇಳನಕ್ಕೆ ಆಗಮಿಸಿದ ಸಂಘದ ಪ್ರತಿನಿಧಿಗಳಿಗೆ ಕೃತಜ್ಞತಾ ಸಮರ್ಪಣೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಂಗಾವತಿ ವೈದ್ಯಕೀಯ ಸಂಘದ ನೂತನ ಅಧ್ಯಕ್ಷ ಡಾ|| ಮಲ್ಲನಗೌಡ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಡಾ|| ನಾಗರಾಜ್ ಲೋಕರೆ, ಖಜಾಂಚಿ ಡಾ|| ಅರವಿಂದ ಕೆ., ಸಹಕಾರ್ಯದರ್ಶಿ ಶ್ರೀ ಡಾ|| ಭಾನು ಪ್ರತಾಪ್ ಹೊಸಕೇರಿ ಇವರುಗಳಿಗೆ ರಾಜ್ಯಾಧ್ಯಕ್ಷ ವೀರಭದ್ರಪ್ಪ ಪ್ರಮಾಣವಚನ ಬೋಧಿಸಿದರೆ, ಈ ಹಿಂದಿನ ಅಧ್ಯಕ್ಷ ಡಾ|| ಎ.ಎಸ್ಎನ್‌ ರಾಜು ಹಾಗೂ ಕಾರ್ಯದರ್ಶಿ ಡಾ|| ನಾಗರಾಜ್ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಐ ಎಂ ಎ ಸಂಘದ ಮಾಜಿ ಅಧ್ಯಕ್ಷ ವಿವಿ ಚಿನಿವಾಲರ, ಡಾ|| ಮಲ್ಲನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://aratt.ai/@vishwaroopa_news_blog

ಜೀವನಾನುಭವಗಳು ವ್ಯಕ್ತಿಯ ಶಕ್ತಿ – ಗೊರೂರು ಶಿವೇಶ್

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌.

ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಎಸ್ ಎಲ್ ಭೈರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪನವರು ಬಾಲ್ಯದಲ್ಲಿ ಸೋದರ ಸೋದರಿಯರು ತಾಯಿ ಕಳೆದುಕೊಂಡು ಅನಾಥರಾದ ಸಂದರ್ಭದಲ್ಲಿ ಹುಟ್ಟಿದ ಜೀವನದ ಪ್ರಶ್ನೆಗಳಿಗೆ ತತ್ವಶಾಸ್ತ್ರದಲ್ಲಿ ಉತ್ತರ ಕಂಡುಕೊಂಡು ಕೃತಿಗಳಲ್ಲಿ ಅವುಗಳನ್ನು ಪರಿಚಯಿಸಿದರು. ಹುಟ್ಟು ಸಾವು ಮತ್ತು ಅಸ್ತಿತ್ವಗಳ ನಿರಂತರ ಶೋಧನೆಯಲ್ಲಿರುವ ವ್ಯಕ್ತಿಗೆ ತತ್ವಶಾಸ್ತ್ರ ಬೆಳಕು ನೀಡಬಹುದಾದರೂ ಸಾಹಿತ್ಯದಲ್ಲಿ ಭಾವಗಳ ಮೂಲಕ ಪರಿಚಯಿಸಿದಾಗ ಅದು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ತತ್ವಶಾಸ್ತ್ರ ಅಧ್ಯಾಪಕರಾದ ಎಸ್ ಎಲ್ ಬೈರಪ್ಪನವರು ಜೀವನದ ಈ ಕಟು ಕಹಿ ಸತ್ಯಗಳನ್ನು ರಸಾಭಿವ್ಯಕ್ತಿ ಯ ಮೂಲಕ ಪರಿಚಯಿಸಿದ ಕಾರಣಕ್ಕೆ ಅವರು ಭಾರತದಲ್ಲಿ ಜನಪ್ರಿಯ ಕನ್ನಡ ಲೇಖಕರಾಗಿ ಹೊರಹೊಮ್ಮಿದರು ಎಂದು ವಿವರಿಸಿದರು.

ಹಲೋ ಹಾಸನ್ ದಿನಪತ್ರಿಕೆಯ ಸಂಪಾದಕರು ರವಿ ನಾಕಲಗೂಡು ಕಾರ್ಯಕ್ರಮ ಉದ್ಘಾಟಿಸಿದರು. ಕದಂಬ ಸೈನ್ಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ರಾಜ್ಯ ಉಪಾಧ್ಯಕ್ಷರು ಡಾ. ದೇವನಹಳ್ಳಿ ದೇವರಾಜ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ಉಮೇಶ, ಮಂಡ್ಯ ಜಿಲ್ಲೆ ಎಸಾ ಧ್ಯಕ್ತರು ರಾಮ ಚಿಕ್ಕ ಗೌಡನದೊಡ್ಡಿ, ನಾ ಮಹದೇವಸ್ವಾಮಿ, ಮೈಸೂರು, ನಿವೃತ್ತ ಪ್ರಾಂಶುಪಾಲರು ಹಾಸನ ತಾಲ್ಲೂಕು ಘಟಕದ ಕದಂಬ ಸೈನ್ಯೆ ಅಧ್ಯಕ್ಷರು ಗಣೇಶ್ ಅಂಕ ಪುರ, ಹೊಳೆನರಸೀಪುರ ತಾ. ಅಧ್ಯಕ್ಷರು ಪುಟ್ಟಸ್ವಾಮಿಗೌಡರು, ಅರಕಲಗೂಡು ತಾ ಅಧ್ಯಕ್ಷರು ರವಿಕುಮಾರ್, ಸಕಲೇಶಪುರ ತಾ ಅಧ್ಯಕ್ಷರು ವಿಶ್ವಾಸ್ ಡಿ ಗೌಡ, ಹಾಸನ ಜಿಲ್ಲಾ ಉಪಾಧ್ಯಕ್ಷರು ಯಾಕೂಬ್ ಗೊರೂರು ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಿರಿಕನ್ನಡ ದಿನಪತ್ರಿಕೆ ಸಂಪಾದಕರು ಎನ್. ಬಿ ಆನಂದ ಪಟೇಲ್ ನೆಲ್ಲಿಗೆರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈ. ಕೃಷ್ಣೇಗೌಡರು, ನಿವೃತ್ತ ಉಪನ್ಯಾಸಕರು ಹೆಚ್.ಆರ್.ರಂಗಸ್ವಾಮಿ ವೇದಿಕೆಯಲ್ಲಿದ್ದರು.

ಟಾರ್ಗೆಟ್ ಕಾಲೇಜಿನ ಪ್ರಾಂಶುಪಾಲರು ರಾಹುಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕರು ದೇವರಾಜ್ ಸ್ವಾಗತಿಸಿದರು.

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.: ಗೊರೂರು ಅನಂತರಾಜು, ಹಾಸನ

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಹಾಗೂ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ. ಚಂದ್ರಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಾರ್ಜುನ ತಾಳಗ ಬಯಲು ಸೀಮೆ ಯಕ್ಷಗಾನ ಪ್ರದರ್ಶನ ಮಾಡಲು ಗೌಡರು ದುರ್ಯೋಧನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ನನ್ನ ಗಮನ ಸೆಳೆದರು. ಅವರ ಕಲಾ ಪರಿಚಯ ಮಾಡಲು ಮಾತನಾಡಿಸಿದೆ. ಇವರು ಓರ್ವ ಪ್ರಗತಿ ಪರ ರೈತರೆಂಬುದು ಮಾತುಕತೆ ವೇಳೆ ತಿಳಿಯಿತು. ಅವರು ಮಾತನಾಡುತ್ತಾ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾ ಹೋದರು.

ನಮ್ಮ ತಂದೆ ಹೆಸರು ಸಣ್ಣಸ್ವಾಮಿಗೌಡ, ತಾಯಿ ಕಾಳಮ್ಮ. ನಮ್ಮೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ರಾಮನಹಳ್ಳಿ.
ನಮ್ಮ ತಂದೆ ಸಣ್ಣಸ್ವಾಮಿಗೌಡರು ಬಡ ಕುಟುಂಬದಲ್ಲಿ ಹುಟ್ಟಿ, ಕೇವಲ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರು ಅನಾರೋಗ್ಯದಿಂದ ನಿಧನರಾದಾಗ ನಾನು 9ನೇ ತರಗತಿ ವಿದ್ಯಾರ್ಥಿ. ಆಗಲೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷಿಗೆ ಇಳಿಯಬೇಕಾಯಿತು ಇಳಿದೆನು. ಆರಂಭದಲ್ಲಿ ರಸಗೊಬ್ಬರವನ್ನು ಬಳಸಿ ತಂಬಾಕು ಹಾಗೂ ಇತರೆ ವಾಣಿಜ್ಯ ಬೆಳೆಯನ್ನು ಬೆಳೆಯುವುದರಲ್ಲಿ ಯಶಸ್ಸು ಕಂಡೆ. ಆದರೆ ಇಳುವರಿ ಕಡಿಮೆಯಾಗಿ ಭೂಮಿಯ ಪೌಷ್ಟಿಕತೆ ಕುಂದಿತು. ರೋಗಗಳು, ನೈಸರ್ಗಿಕ ಅನಾಹುತಗಳಿಂದ ಬೆಳೆ ನಷ್ಟವಾಗಿ ಗ್ರಾಮ ತೊರೆದು ಹೋಗುವ ಪರಿಸ್ಥಿತಿ ಉಂಟಾಯಿತು.

ಆ ಸಂದರ್ಭ ಕೃಷಿ ಇಲಾಖೆಯ ಡಾ. ಭಾನುಪ್ರಕಾಶ್ ಏಡಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಸಾವಯವವಾಗಿ ಪುನರುಜ್ಜೀವಗೊಳಿಸಲು ಪ್ರಯತ್ನಿಸಿದೆ. ಸುಮಾರು ಐದು ವರ್ಷಗಳ ಕಾಲ ಶ್ರಮದ ನಂತರ ಭೂಮಿಯನ್ನು ಪೌಷ್ಟಿಕವಾಗಿಸಿ ಸಾವಯವ ಕೃಷಿಗೆ ಪ್ರವೇಶಿಸಿದೆ. ಇದರ ಫಲವಾಗಿ ಸರ್ಕಾರದಿಂದ ವಿವಿಧ ಪ್ರಶಸ್ತಿಗಳು ದೊರಕಿದವು. 2011ರಲ್ಲಿ ತಾಲ್ಲೂಕು ಯುವ ರೈತ ಪ್ರಶಸ್ತಿ, 2012ರಲ್ಲಿ ಶ್ರೀ ಶ್ರೀ ರವಿಶಂಕರ್ ಗುರುಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉತ್ತಮ ರೈತ ಪ್ರಶಸ್ತಿ, 2014ರಲ್ಲಿ ಒಂದು ಎಕರೆಗೆ 480 ಚೀಲ ಶುಂಠಿ ಇಳುವರಿ ಸಾಧನೆ, 2016ರಲ್ಲಿ ಜಿಲ್ಲಾ ಘಟಕದಿಂದ ಪ್ರಶಸ್ತಿ ಪಡೆದೆ.

2018ರಲ್ಲಿ ನನ್ನ ಭೂಮಿಯಲ್ಲಿಯೇ ರೈತ ದಿನಾಚರಣೆ ಆಯೋಜಿಸಲಾಯಿತು, ಅದರಲ್ಲಿ ಕೃಷಿ ಇಲಾಖೆಯ ಸಹಯೋಗದಿಂದ ಹಲವು ರೈತರಿಗೆ ಸನ್ಮಾನ ನೀಡಲಾಯಿತು. 2020 ರಿಂದ 2022ರ ಅವಧಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ, ನಂತರ ಕ್ರಮೇಣ ಜೀವನ ಸಹಜ ಸ್ಥಿತಿಗೆ ಮರಳಿತು. ಈಗ ಆಲೂಗೆಡ್ಡೆ, ಗೆಣಸು, ಕುಂಬಳಕಾಯಿ, ಜೇನು, ಹೈನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮುಂತಾದ ವಿವಿಧ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ.

ಸಾಮಾಜಿಕ ಸೇವೆ: 2022ರಿಂದ ಶಾಲಾ ಮತ್ತು ಕಾಲೇಜುಗಳಿಗೆ ಬಿಸಿ ಊಟಕ್ಕಾಗಿ ತೋಟದ ತರಕಾರಿಗಳನ್ನು ನೀಡುವುದು, ಗಿಡಗಳನ್ನು ನೆಡುವುದು, ಶಾಲಾ ಮಕ್ಕಳಲ್ಲಿ ಸಾವಯವ ಮತ್ತು ಸಹಜ ಕೃಷಿಯ ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿದ್ದೇನೆ.

ಕಲಾ ಕ್ಷೇತ್ರ: ಬಿಡುವಿನ ವೇಳೆಯಲ್ಲಿ ಸಾಮಾಜಿಕ ಹಾಗೂ ಪೌರಾಣಿಕ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತೇನೆ. ಸುಮಾರು 150ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದೇನೆ. ಭೀಮ, ಅರ್ಜುನ, ಶಕುನಿ, ಧರ್ಮರಾಯ, ರಾಜ ವಿಕ್ರಮ, ಗಾಣಿಗ ಶೆಟ್ಟಿ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾಸ್ಯ ಹಾಗೂ ಹೆಣ್ಣು ಪಾತ್ರಗಳನ್ನೂ ನಿಭಾಯಿಸಿದ್ದೇನೆ.

ಸಾಹಿತ್ಯ ಮತ್ತು ಸಂಘಟನೆ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಆರ್.ಬಿ. ಪುಟ್ಟೇಗೌಡ (ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ಹಾಗೂ ಗೊರೂರು ಅನಂತರಾಜು (ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವ ಅಧ್ಯಕ್ಷರು) ಅವರ ಸಹಯೋಗದಲ್ಲಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ.

ಪ್ರಶಸ್ತಿ: ಶ್ರೀನಿಧಿ ಫೌಂಡೇಶನ್, ಬೆಂಗಳೂರು ವತಿಯಿಂದ ಕರುನಾಡ ರತ್ನ ಪ್ರಶಸ್ತಿ., ಕೇರಳದಲ್ಲಿ ಉತ್ತಮ ರೈತ ಸಾಧಕ ಪ್ರಶಸ್ತಿ., ಗೋವಾದಲ್ಲಿ ಕರುನಾಡ ಕರ್ನಾಟಕ ಉತ್ತಮ ರೈತ ಪ್ರಶಸ್ತಿ., ಕಲಾ ಕ್ಷೇತ್ರದಲ್ಲಿ ಕರ್ನಾಟಕ ರತ್ನ ಕಲಾ ಪ್ರಶಸ್ತಿ., ಹಲವು ಸಂಘ ಸಂಸ್ಥೆಗಳಿಂದ ಸೇವಾ ಪ್ರಶಸ್ತಿಗಳು, ಕಲಾ ಪ್ರಶಸ್ತಿಗಳು ಹಾಗೂ ಕೃಷಿ ಪ್ರಶಸ್ತಿಗಳು ದೊರೆತಿವೆ. ಇದೇ ತಿಂಗಳು 26ನೇ ತಾರೀಖು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಇವರ ಕೃಷಿ ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ನಾನು ಅವರಿಗೆ ಅಭಿನಂದನೆಗಳು ತಿಳಿಸಿದೆ. ಗೌಡರು ಧನ್ಯವಾದಗಳು ಸಾರ್ ಎಂದರು.

ಗೊರೂರು ಅನಂತರಾಜು,
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3 ನೇ ಕ್ರಾಸ್
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ -573201

https://aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಗಂಗಾವತಿ: ಕಳೆದ ೨೫ ವರ್ಷಗಳಿಂದಲೂ ಗಂಗಾವತಿಯಲ್ಲಿ ಶಂಕರಮಠ ನಿರ್ಮಾಣಕ್ಕೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿರುವ ದಿವಂಗತ ಭೀಮಸೇನ್‌ರಾವ್ ಅಳವಂಡಿಕರ್ ಹಾಗೂ ಅದ್ವೈತ ಸಿದ್ಧಾಂತದ ಬಗ್ಗೆ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದ ದಿವಂಗತ ಅಯೋದ್ಯ ರಾಮಾಚಾರ ಅವರನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇದೆ ಎಂದು ಗಂಗಾವತಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಅಕ್ಟೋಬರ್-೧೮ ಶನಿವಾರ ಶಾರದಾ ದೇವಸ್ಥಾನದಲ್ಲಿ ಗುರು ದ್ವಾದಶಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಶಂಕರ ಜಯಂತಿ, ದತ್ತಾತ್ರೇಯ ಜಯಂತಿ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪಂಪಾಪತಿ ದೇವಸ್ಥಾನ, ನಗರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಮೇಲಿನ ಹಿರಿಯರು ಹಾಗೂ ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ನಗರದಲ್ಲಿ ಈ ಎಲ್ಲಾ ಜಯಂತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಅತ್ಯಂತ ಸುಸಜ್ಜಿತವಾದ ಶಾರದಾ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಶಕುಂತಲಾ ಅವರು ಆಚರಣೆಯ ಮಹತ್ವ ಕುರಿತು ತಿಳಿಸುತ್ತಾ, ದತ್ತಾತ್ರೇಯ ಅವತಾರಿಗಳಾದ ಶ್ರೀಪಾದ ವಲ್ಲಭರು ಸಮೀಪದ ರಾಯಚೂರಿನ ಕುರುವಪುರ ಎಂಬಲ್ಲಿ ಹಲವಾರು ವರ್ಷಗಳಕಾಲ ವಾಸವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವುದರ ಮೂಲಕ ಈ ದಿನ ನಿಜಾಂಶವನ್ನು ಹೊಂದಿದ ದಿನಾಚರಣೆಯನ್ನು ಗುರು ದ್ವಾದಶಿ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ದತ್ತ ನಾಮಗಳಿಂದ ಸಂಕಷ್ಟಗಳು ದೂರವಾಗುವುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

ಇದಕ್ಕೂ ಪೂರ್ವದಲ್ಲಿ ದತ್ತ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪುಷ್ಪಾರ್ಚನೆ ಸೇರಿದಂತೆ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು. ಜೊತೆಗೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಮಹಾಪ್ರಸಾದ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ರಾಘವೇಂದ್ರ ಅಳವಂಡಿಕರ್, ಪ್ರಹ್ಲಾದರಾವ್ ಮಾಸ್ಟರ್, ಕಾಶಿನಾಥ್ ಜೋಶಿ, ಮಹೇಶ್ ಜೋಶಿ, ಬಾಲಕೃಷ್ಣ ದೇಸಾಯಿ


ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ. ಅರಸೀಕೆರೆ ತಾಲ್ಲೂಕು ಅಧ್ಯಕ್ಷರಾಗಿ ಡಾ.ಬಸವರಾಜ್ ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ.

ಹಾಸನ ಜಿಲ್ಲಾ ಘಟಕವು ಸುಂದರೇಶ ಡಿ ಉಡುವಾರೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾಕುಂಚ ವಿಭಿನ್ನ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಲವಾ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುತ್ತಾ ಎಲೆ ಮರೆ ಕಾಯಿಯಂತಿರುವ ನೂರಾರು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಸುತ್ತಾ ಬಂದಿದೆ.

ಪ್ರಸ್ತುತ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾಘಟಕದ ಅರ ಅರಸೀಕೆರೆ ತಾಲ್ಲೂಕಿನ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ  ಬಸವರಾಜ್ ರವರನ್ನು ನೇಮಿಸಿ ರಾಜ್ಯಾಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ.

ಡಾ. ಬಸವರಾಜ್ ರವರು ಸಹಾಯಕ ಪ್ರಾಧ್ಯಾಪಕರಾಗಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಶಿಕ್ಷಣ ತಜ್ಞರು, ಪರಿಸರವಾದಿಗಳು, ವೈಚಾರಿಕ ಚಿಂತಕರು ಆಗಿರುವ ಡಾ.ಬಸವರಾಜ್ ಕಳೆದ ಹತ್ತು ವರ್ಷಗಳಿಂದ ಅರಸೀಕೆರೆಯಲ್ಲಿ ವಿವಿದ ಕನ್ನಡಪರ ಹಾಗೂ ವೈಚಾರಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಡು ನುಡಿ, ಭಾಷೆ ಕನ್ನಡ ತಾಯಿಯ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಡಿ.ಉಡುವಾರೆ, ಗೌರವಾಧ್ಯಕ್ಷರಾದ ಶ್ರೀ ವೇಂಕಟೇಶ ಉದಯ ವರದಿ ಪತ್ರಿಕೆಯ ಸಂಪಾದಕರು ಹಾಸನ, ಡಾ. ಲೋಕೇಶ ಉಪನ್ಯಾಸಕರು ಹೊಳೆನರಸೀಪುರ, ಡಾ. ಬರಳು ಶಿವರಾಮ ಚನ್ನರಾಯಪಟ್ಟಣ ತಾಲ್ಲೂಕು. ಡಾ. ಹರೀಶ್ ಉಪನ್ಯಾಸಕರು ಅರಸೀಕೆರೆ. ಡಾ. ಗಿರೀಶ್ ಮರಡಿ ಉಪನ್ಯಾಸಕರು ಹಾಸನ. ಕಾರ್ಯದರ್ಶಿಗಳಾದ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ ಆರ್. ಅಧ್ಯಕ್ಷರು:ವಿಶ್ವಾಸ್ ಡಿ. ಗೌಡರು ಸಕಲೇಶಪುರತಾಲ್ಲೂಕು. ಪರಮೇಶ್ ಮಡಬಲು. ಗಿರಿಜಾ ನಿರ್ವಾಣಿ. ರಾಣಿ ಚಿರಾಶ್ರಿ. ಬೋರೇಗೌಡರು ಅರಸೀಕೆರೆ. ಬೇಲೂರು. ಪುಟ್ಟೇಗೌಡರು ಅಧ್ಯಕ್ಷರು ಅರಕಲಗೂಡು. ಹಾಗು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸರಳತೆಯಿಂದ ಶ್ರೇಷ್ಠತೆಯೆಡೆಗೆ ಪಯಣಿಸಿದ ‘ದೇಶಪ್ರೇಮಿ- ಜನರಾಷ್ಟ್ರಪತಿ’ ಡಾ. ಎಪಿಜೆ ಅಬ್ದುಲ್ ಕಲಾಂ: ಪ್ರೊ. ಕರಿಗೂಳಿ

ತಾಲೂಕಿನ ಶ್ರೀರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಬ್ದುಲ್ ಕಲಾಂ ರವರ ಜಯಂತಿ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಡಗರ ಸಂಭ್ರಮದಿಂದ ಜರುಗಿದವು. ನನ್ನ ಜನುಮದಿನಕ್ಕೂ ಹಾಗೂ ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವುದರ ಮೂಲಕ ಯುವಕರಿಗೆ ಚಿರಸ್ಫೂರ್ತಿಯಾಗಿರುವ ಡಾ. ಕಲಾಂ ರವರ ಆಶಯದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಮ್ಮ ಕಾಲೇಜು ಸ್ವಚ್ಛ ಕಾಲೇಜು ಅಭಿಯಾನದ ಅಡಿಯಲ್ಲಿ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್‌-15 ರಂದು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೈನಂದಿನ ತರಗತಿಗಳ ನಂತರ ಬೆಳಿಗ್ಗೆ 11:30ಕ್ಕೆ ಕಾಲೇಜು ಆವರಣ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಖುಷಿಯಿಂದ ಪಾಲ್ಗೊಡು ಕಾಲೇಜಿನ ಮೈದಾನವನ್ನು ಸ್ವಚ್ಛಗೊಳಿಸಿದರು. ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಶೋಕ ಹಾಗೂ ಶಿವರಾಜಕುಮಾರ್ ಅವರನ್ನು ಕಾಲೇಜಿನ ಆವರಣ ಸುಂದರವಾಗಿ ಕಾಣುವಂತೆ ಮಾಡಲು ಸ್ವಯಂಪ್ರೇರಣೆಯಿಂದ ಯಂತ್ರೋಪಕರಣದ ಮುಖಾಂತರ ಸ್ವಚ್ಛಗೊಳಿಸಿದ್ದಕ್ಕಾಗಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಡಾ. ಸರಫರಾಜ್ ಅಹ್ಮದ್ ಅವರು ಸನ್ಮಾನ ಮಾಡಿದರು.

ಅಂತರಾಷ್ಟ್ರೀಯ ಕೈತೊಳೆಯುವ ದಿನ

ಕಾಲೇಜು ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಮೈದಾನದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಕೈತೊಳೆಯುವ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ಸೂಕ್ಷ್ಮಾಣುಜೀವಿ ನಮ್ಮ ಕೈ ಮೂಲಕ ದೇಹವನ್ನು ಸೇರಿ ಕಾಲರಾ, ಟೈಫಾಯ್ಡ್, ಹೆಪಿಟೈಟಸ್ ಬಿ, ರಕ್ತಹೀನತೆ, ಅಪೌಷ್ಟಿಕತೆಗೆ ಯಾವ ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ದೈನಂದಿನ ಜೀವನದಲ್ಲಿ ಕೈ ತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು. ನಂತರ ಅದೇ ಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕೈ ತೊಳೆಯುವ ಮುಖಾಂತರ ಅಂತರಾಷ್ಟ್ರೀಯ ಕೈತೊಳೆಯುವ ದಿನವನ್ನು ಆಚರಿಸಲಾಯಿತು.

ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜಯಂತಿ ಆಚರಣೆ

ನಂತರ ಕಾಲೇಜಿನ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯ ಅಂಗವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಗೂಳಿ ಅವರು ಮಾತನಾಡುತ್ತಾ ಕಲಾಂ ಜೀ ರವರ ಬಹುಮುಖ್ಯ ಹೇಳಿಕೆಯಾದ ‘ ಕನಸೆoದರೆ ನಿದ್ರೆಯ ಕಾಣುವುದು ಅಲ್ಲ ಬದಲಾಗಿ ನಿಮ್ಮನ್ನು ನಿದ್ರಿಸಲು ಬಿಡಲಾರದ್ದು ಕನಸು ಆದುದರಿಂದ ಕನಸುಗಳನ್ನು ಹಗಲು ಅಥವಾ ರಾತ್ರಿ ಕಾಣದೆ ದೊಡ್ಡ ಮಟ್ಟದಲ್ಲಿ ವಿಚಾರ ಮಾಡಿ ಅಂತಹ ಸಾಧನೆಗೋಸ್ಕರ ನಿಮ್ಮ ಸುಖನಿದ್ರೆ ತ್ಯಾಗ ಮಾಡಿ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಾಧಕರಾಗಿ ಹೊರಹೊಮ್ಮುವುದರಿಂದ ನಿಮ್ಮ ಬದುಕು ಹಸನಾಗುತ್ತದೆ ಹಾಗೂ ಕಾಲೇಜಿಗೆ ಗೌರವ ಬರುತ್ತದೆ. ನಿಮ್ಮ ಗುರಿಮುಟ್ಟಲು ಕಾಲೇಜಿನ ಸಕಲ ಸಂಪನ್ಮೂಲಗಳ ಸದ್ಬಳಕೆ ಮಾಡಕೊಳ್ಳಲು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ, ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯ ರಾಜಕೀಯ ನಾಯಕರು ಹಾಗೂ ಕ್ಷೇತ್ರದ ಶಾಸಕರು ಸೇರಿದಂತೆ ಎಲ್ಲರನ್ನೂ ಬಳಸಿಕೊಳ್ಳಿ ಎಂದು ಪ್ರಾಂಶುಪಾಲರಾದ ಕರಿಗೂಳಿ ಅವರು ತಿಳಿಸಿದರು.
ಇದೇ ಸಮಯದಲ್ಲಿ ನಮ್ಮ ಕಾಲೇಜಿನ ಗ್ರಂಥಾಲಯ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ವರ್ಷದ ಪುಸ್ತಕಗಳನ್ನು ವಿತರಿಸಲಾಯಿತು.

ತಂಬಾಕು ವಿರೋಧಿ ದಿನ ದ ಅಂಗವಾಗಿ ವ್ಯಸನಮುಕ್ತ ಯುವಜನತೆಯಿಂದ ಸದೃಢ ಸಮಾಜದ ನಿರ್ಮಾಣ ಕಾರ್ಯಕ್ರಮ
ವ್ಯಸನಗಳು ವಿದ್ಯಾರ್ಥಿ ಜೀವನವನ್ನಷ್ಟೇ ಅಲ್ಲ, ಇಡೀ ಬದುಕನ್ನೇ ನಾಶ ಮಾಡುತ್ತವೆ. ಹಾಗಾಗಿ ಎಲ್ಲರೂ ವ್ಯಸನಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಮೊದಲು ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳು ವ್ಯಸನಗಳಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ರೀತಿಯಲ್ಲಿ ಅಗತ್ಯ ಸಹಾಯ ಮಾಡುವ ಮುಖಾಂತರ ವ್ಯಸನಗಳಿಂದ ಮುಕ್ತರಾಗುವಂತೆ ಮನಃಪರಿವರ್ತನೆ ಮಾಡಬೇಕು. ವಿದ್ಯಾರ್ಥಿಗಳೂ ಕೂಡ ವ್ಯಸನಗಳಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ನಡೆಸಿ ಉತ್ತಮ ಪ್ರಬಂಧ ರಚಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ತಂಬಾಕು ಸೇವನೆ, ಮದ್ಯ ಸೇವನೆ ಹಾಗೂ ಇನ್ನಿತರ ಮಾದಕ ವಸ್ತುಗಳ ಪರಿಚಯ ಗ್ರಾಮೀಣ ಭಾಗದಲ್ಲಿ ಕಡಿಮೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ವ್ಯಸನಗಳಿಂದ ದೂರ ಉಳಿಯಬೇಕು, ಇದರಿಂದ ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿ ಎಂದು ತಿಳಿಸಿದರು. ವ್ಯಸನಗಳಿಂದಾಗುವ ಹಾನಿಗಳನ್ನು ತಿಳಿಸುವ ಉದ್ದೇಶದಿಂದ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹೆಚ್.ಎಂ. ಗುರುರಾಜ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸಾಂಸ್ಕೃತಿಕ ಸಂಚಾಲಕರಾದ ವೀರೇಶ ಅವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತ ಮಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಕೊನೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

ಸಸಿಸನೆಡುವ ಕಾರ್ಯಕ್ರಮ

ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಶ್ರೀರಾಮನಗರ ರವರ ಸಹಯೋಗದಲ್ಲಿ ನಮ್ಮ ಕಾಲೇಜಿನಲ್ಲಿ ಸಸಿನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಾರ್ಫರಾಜ್ ಅಹ್ಮದ್ ವಿರುಪಾಕ್ಷ ಕೆ, ಡಾ. ಶಶಿಕುಮಾರ ರವಿಕುಮಾರ ಮತ್ತು ಉಪನ್ಯಾಸಕರಾದ ವೆಂಕಟರಾಜು ಈಶಪ್ಪ ಮೇಟಿ, ವಿಜಯಕುಮಾರ,
ಡಾ. ಅರ್ಜುನ್, ನಂದಕುಮಾರ, ಪರಶುರಾಮ, ಪೀರಾವಲಿ, ಗ್ರಂಥಪಾಲಕರಾದ ಡಾ. ದೇವರಾಜ ಹಾಗೂ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣ ಹಾಜರಿದ್ದರು.

ಸೌಂದರ್ಯ ಲಹರಿ ಪಾರಾಯಣದಿಂದ ಸಂಕಷ್ಟ ದೂರ: ವೀಣಾ ಅಳವಂಡಿಕರ್

ಗಂಗಾವತಿ: ನಗರದ ಶಂಕರ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ವಿರಚಿತ ಸೌಂದರ್ಯ ಲಹರಿ ಸಪ್ತಾಹವನ್ನು ಅಕ್ಟೋಬರ್‌-11 ರಿಂದ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ವೀಣಾ ರಾಘವೇಂದ್ರ ಅಳವಂಡಿಕರ್‌ ಹಾಗೂ ಸಂಚಾಲಕಿ ಗಾಯತ್ರಿ ಶ್ರೀಧರ್ ಅಳವಂಡಿಕರ್‌ ಮಾತನಾಡಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳ 75 ನೆಯ ವರ್ಧಂತಿ ಮಹೋತ್ಸವ ಹಾಗೂ ಆನಂದ ಭಾರತಿ ಅಡಿಯಲ್ಲಿ ದೇಶಾದ್ಯಂತ ಶಂಕರ ಮಠಗಳಲ್ಲಿ ಶ್ರೀ ಸೌಂದರ್ಯ ಲಹರಿ ಸಪ್ತಾಹವನ್ನು ನಡೆಸಲಾಗುತ್ತಿದ್ದು ಇದರಿಂದ ಸಂಕಷ್ಟಗಳು ದೂರವಾಗುವುದರ ಜೊತೆಗೆ ಪಾರಾಯಣದಿಂದ ಬಹು ರೋಗ ನಿವಾರಣೆ ಆಗುವುದು ಎಂದು ಪಾರಾಯಣದ ಮಹತ್ವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.