ಎಸ್.ಎಫ್.ಐ ನೂತನ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ.

ಗಂಗಾವತಿ: ಅಕ್ಟೋಬರ್-8 ರಂದು ಗಂಗಾವತಿ ನಗರದಲ್ಲಿ ನಡೆದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ನಡೆದ ಎಸ್.ಎಫ್.ಐ ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾಗಿ ಶಿವುಕುಮಾರ್ ಈಚನಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾಗಿ ನಾಗರಾಜು ಯು, ಹನುಮೇಶ್ ಮ್ಯಾಗೇಡಿ, ಷರೀಫ್ ಎಂ.ಪಿ., ಪೂಜಾ ಕೊಪ್ಪಳ, ಜಂಟಿ ಕಾರ್ಯದರ್ಶಿಗಳಾಗಿ ರೋಜಾ ಬಿ., ದರ್ಶನ್ ಹೊಸ್ಕೇರ, ಬಸಯ್ಯ ಹಿರೇಮಠ್, ಸದಸ್ಯರಾಗಿ ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ ಕುಷ್ಟಗಿ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು ಕೊಪ್ಪಳ, ಮೌನೇಶ್ ಕುಷ್ಟಗಿ, ದೀಪಾ ಚಲವಾದಿ, ವೈಶಾಲಿ ಹಣವಾಳ್, ಲಕ್ಷö್ಮಣ ಹೊಸಗುಡ್ಡ, ಶರಣಬಸವ. ಬಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿಯವರು, ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತದಲ್ಲಿದೆ, ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಕನ್ನಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ, ಸೂಸಜ್ಜಿತ ಕಟ್ಟಡಗಳಿಲ್ಲ, ವಿದ್ಯಾರ್ಥಿಗಳ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯವಿಲ್ಲ, ಗ್ರಾಮೀಣ ಭಾಗಗಳಿಗೆ ರಸ್ತೆ-ಬಸ್ ವ್ಯವಸ್ಥೆ ಇಲ್ಲ, ಹೀಗೆ ಹತ್ತಾರು ಸಮಸ್ಯೆಗಳು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಲು ನೇರ ಕಾರಣವಾಗಿವೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ದುಷ್ಟ ಯೋಜನೆಯು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ ತರುತ್ತಿದೆ. ಶಿಕ್ಷಣದ ಹಕ್ಕು ಎಲ್ಲರಿಗೂ ಎನ್ನುವುದು ಸಂವಿಧಾನದ ಆಶಯ, ಆದರೆ ಸರ್ಕಾರ ಅದನ್ನು “ಹಣವಿದ್ದವರಿಗೆ ಮಾತ್ರ” ಎಂಬ ರೀತಿಗೆ ತರುತ್ತಿದೆ. ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಯನ್ನು ಜಿಲ್ಲಾಧ್ಯಂತ ವಿಸ್ತರಿಸಿ, ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳ ಧ್ವನಿಯಾಗಿ ಎಸ್.ಎಫ್.ಐ. ನೂತನ ಜಿಲ್ಲಾ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಗಂಗಾವತಿಯ ಡಾ. ಚನ್ನಬಸವ ಕೊಟಗಿ ಅವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ

ಗಂಗಾವತಿ: ನಗರದ ನಿವಾಸಿಯಾದ ಚನ್ನಬಸವ ಕೊಟಗಿಯವರು ಒಬ್ಬ ವರದಿಗಾರರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ವತಿಯಿಂದ ರಾಷ್ಟ್ರೀಯ ಸಾಧಕ ಪ್ರಶಸ್ತಿ-೨೦೨೫ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶಾಂತಾ ತಿಳಿಸಿದ್ದಾರೆ.

ಚನ್ನಬಸವ ಕೊಟಗಿಯವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯನಿರ್ವಹಿಸಿ, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ & ಆರ್ಟ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರ ಈ ಸಾಧನೆಯನ್ನು ಗುರುತಿಸಿದ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ರವರು ಇವರಿಗೆ ಅಕ್ಟೋಬರ್-೧೩ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಟೌನ್‌ಹಾಲ್‌ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಇವರಿಗೆ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರು: ಗೊರೂರು ಅನಂತರಾಜು (ಹಾಸನ), ಡಾ. ವೀಣಾ ( ಸುಳ್ಯ), ಲೀಲಾವತಿ (ಹಾಸನ), ಪದ್ಮ ಆನಂದ್ (ಮೈಸೂರು) ದೀಪಿಕಾ ಚಾಟಿ (ಬೆಳಗಾವಿ), ರಾಧಾ ಟೇಕಲ್ (ಬೆಂಗಳೂರು), ಉಷಾ ನರಸಿಂಹನ್ (ಮೈಸೂರು), ಉದಯರವಿ (ಹಾಸನ), ಕೆ. ಎಂ. ಲೋಲಾಕ್ಷಿ (ಮೈಸೂರು), ಕೃಷ್ಣ ಪದಕಿ (ಶಿರಸಿ), ವಿದ್ಯಾ ಶಿರಹಟ್ಟಿ (ಧಾರಾವಾಡ ), ಗಣೇಶ ಅಮೀನಗಡ (ಮೈಸೂರು) ಯಶೋಧಾ ಡಿ (ಬೆಂಗಳೂರು), ಎನ್.ಎಲ್. ಚನ್ನೇಗೌಡ (ಹಾಸನ), ಸುಮಾ ವೀಣಾ (ಹಾಸನ), ರೂಪಾ ಜೋಶಿ (ಹುಬ್ಬಳ್ಳಿ), ಮುಕುಂದ ಗಂಗೂರ್ (ಹೊಸಪೇಟೆ), ನಾಗಲಕ್ಷ್ಮಿ ಎಂ.ಜೆ. (ಚಿಕ್ಕಮಗಳೂರು), ಡಾ. ಕರುಣಾ ಲಕ್ಷ್ಮಿ (ಮೈಸೂರು), ದಮಯಂತಿ ನರೇಗಲ್ (ಧಾರವಾಡ ), ಮಧುರಾ ಕರ್ಣಂ (ಬೆಳಗಾವಿ), ಭಾಗಿರಥಿ ಹೆಗಡೆ (ಶಿರಸಿ), ಸುಕನ್ಯಾ ಮುಕುಂದ್ (ಹಾಸನ), ಪ್ರಭಾ ದಿನಮಣಿ (ಹಾಸನ).

ಶ್ರೀ ಶಾರದಾ ಶರನ್ನ ನವರಾತ್ರಿ. ಚಂಡಿ ಹವನ ಸಂಪನ್ನ

ಗಂಗಾವತಿ. ನಗರದ ಶಂಕರಮಠದ ಶ್ರೀ ಶಾರದಾದೇ ಗುಳದಲ್ಲಿ ಬುಧವಾರ ರಂದು ನವ ಚಂಡಿ ಹವನ ಸಂಪನ್ನಗೊಂಡಿತು. ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡ ದವರಿಂದ ಸೇವಾಕರ್ತರಿಗೆ ಮಹಾಸಂಕಲ್ಪ ಹಾಗೂ ವೈದ್ಯ ನೇತೃತ್ವದಲ್ಲಿ ಪೂರ್ಣಾಹುತಿಯನ್ನು ಸಂಪನ್ನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75ನೇ ವರ್ಧಂತಿ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನವಚಂಡಿ ಹವನವನ್ನು ಆಯೋಜಿಸಲಾಗಿದ್ದು. ಇದರೊಂದಿಗೆ ದಂಪತಿ ಪೂಜೆ ಹಾಗೂ ಕನ್ನಿಕಾ ಪೂಜೆಯನ್ನು ಭಕ್ತರಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾ ತೀರ್ಥ ನಾರ್ವೆ ದಂಪತಿಗಳು, ಪವನ್ ಕುಮಾರ್, ಕಾರ್ತಿಕ್ ದಂಪತಿಗಳು ನೇತೃತ್ವ ವಹಿಸಿದ್ದರು. ಸುಮಾರು 600ಕ್ಕೂ ಅಧಿಕ ಭಕ್ತಾದಿಗಳು ವಿವಿಧ ಸಮಾಜದ ಮುಖಂಡರು ಅಮ್ಮನವರ ದರ್ಶನ ಪಡೆದು ಪುನೀತರಾದರು. ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು

ಬನ್ನಿಯಿಂದ ಬಂಗಾರದ ಜೀವನ ನಡೆಸೋಣ: ಪೂಜ್ಯ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು..

ಎಲ್ಲರ ಸಹಕಾರದಿಂದ ಶರನ್ನನವರಾತ್ರಿ ಕಾರ್ಯಕ್ರಮ ಯಶಸ್ವಿ: ಅಧ್ಯಕ್ಷರು ದರೋಜಿ ನಾಗರಾಜ ಶ್ರೇಷ್ಠಿ.ಗಂಗಾವತಿ: ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟಂಬರ್ 22ನೇ ತಾರೀಖಿನಿಂದ ಅಕ್ಟೋಬರ್ 1ನೇ ತಾರೀಖಿನವರೆಗೆ ನಡೆದ ಶರನ್ ನವರಾತ್ರಿಯ ಪುರಾಣವು ದೇವಸ್ಥಾನದ ಶ್ರೀ ವಾಸವಿ ವೇದಿಕೆಯಲ್ಲಿ ಹತ್ತು ದಿನಗಳವರೆಗೆ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುರಾಣದ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಸುಳೆಕಲ್ ಅವರು ಮಾತನಾಡಿ ಶರನ್ ನವರಾತ್ರಿಯ ಒಂದೊಂದು ದೇವಿಯ ಅವತಾರವು ಪುರಾಣದಲ್ಲಿ ತಿಳಿಸಲಾಯಿತು.

ಈ ಪುರಾಣದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಪ್ರತಿದಿನವೂ ದೇವಿಗೆ ಕುಂಕುಮಾರ್ಚನೆ, ಲಲಿತ ಸಹಸ್ರನಾಮಾವಳಿ, ಪುರಾಣ ಪ್ರವಚನ ಸಂಗೀತ, ಭಜನಾ ಕಾರ್ಯಕ್ರಮ ಸೇರಿದಂತೆ ಪ್ರತಿನಿತ್ಯವೂ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಲ್ಲರಿಗೂ ಶ್ರೀದೇವಿ ಕನ್ನಿಕಾಪರಮೇಶ್ವರಿ ಆಶೀರ್ವದಿಸಲಿ ಜೊತೆಗೆ ಮಹಾನಮಿ ದಿನದಂದು ಬನ್ನಿಯನ್ನು ತೆಗೆದುಕೊಂಡು ನಮ್ಮ ಜೀವನವನ್ನು ಬಂಗಾರ ಮಾಡಿಕೊಳ್ಳೋಣ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇವಸ್ಥಾನದಲ್ಲಿ ಶರನ್‌ ನವರಾತ್ರಿ ಮುಗಿಯುವರೆಗೂ ಪ್ರತಿನಿತ್ಯವೂ ನಮ್ಮ ಸಮಾಜದ ಬಾಂಧವರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರು ದಿನನಿತ್ಯವು ಪುರಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆ ತಾಯಿ ಕನ್ನಿಕಾಪರಮೇಶ್ವರಿ ಕೃಪೆಗೆ ಪಾತ್ರರಾಗಿದ್ದರೆ ಮತ್ತು ದಿನನಿತ್ಯವೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿದಂತ ವ್ಯವಸ್ಥಾಪಕರಿಗೂ ನವ ಬೃಂದಾವನ ಭಜನಾ ಮಂಡಳಿಯವರಿಗೂ ಶ್ರೀವಾಸವಿ ಮಹಿಳಾ ಮಂಡಳಿಯವರಿಗೂ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ದರೋಜಿ ನರಸಿಂಹ ಶ್ರೇಷ್ಠಿ, ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷ ಎನ್.ವಿ ಮಂಜುನಾಥ, ಗೌರವಾಧ್ಯಕ್ಷ ದರೋಜಿ ವೆಂಕಟೇಶ, ಶ್ರೀ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ ದಮ್ಮೂರು ರಾಜಕುಮಾರ, ಸಿರಿಗೇರಿ ಬಾಲಚಂದ್ರಯ್ಯ, ಮಲ್ಲಿಕಾರ್ಜುನ ಪ್ರಿನ್ಸಿಪಾಲರು ವಿದ್ಯಾನಿಕೇತನ ಕಾಲೇಜ್, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ರಾಧಿಕಾ, ಶ್ರೀಮತಿ ಉಷಾರಾಣಿ, ವಾಸವಿ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ದಮ್ಮೂರು ಮಂಜುಳ, ಶ್ರೀಮತಿ ಎಂ.ಪಿ ಸುಮಲತಾ ಸೇರಿದಂತೆ ಸಮಾಜದ ಅಪಾರ ಮುಖಂಡರು ಹಿರಿಯರ ನೇತೃತ್ವದಲ್ಲಿ ಶರನ್‌ ನವರಾತ್ರಿಯ ಕೊನೆಯ ದಿನವನ್ನು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳಿಸಲಾಯಿತು.

ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ್.

ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ….. ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ್ ಕೂಡ ಒಬ್ಬರು.

ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ್ ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದವರು. ನಾಡಿನ ಸಾಂಸ್ಕೃತಿಕ ಸೊಗಡನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು. ನಿರಂತರ 50 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ರಂಗಭೂಮಿಯಲ್ಲಿ ಬಹುಮುಖಿ ವೇಷಗಳಿಂದ, ಬಹುಮುಖ ಪ್ರತಿಭೆಯಿಂದ ಮೆರೆದವರು. ಬಹುವಿಭಾಗ ಸಿನಿಮಾ, ರಂಗ ನಿರ್ವಹಣೆಯಿಂದ ಕರ್ನಾಟಕ ರಮಾರಮಣರೆನಿಸಿದವರು.

ಕನ್ನಡದ ಹೆಮ್ಮೆಯ ವರನಟ ಡಾ.ರಾಜಕುಮಾರ್, ಡಾ.ಹಾ.ಮಾ.ನಾಯಕ್, ಡಾ.ಬಿ.ವಿ.ಕಾರಂತ್ ಮೊದಲಾದ ದಿಗ್ಗಜರು ರಮಾನಂದರ ರಂಗಕಲೆಯ ಕಾಯಕವನ್ನು ಮೆಚ್ಚಿಕೊಂಡವರಾಗಿದ್ದಾರೆ. ನಾಡಿನ ಹಲವು ಪತ್ರಿಕೆಗಳು ಮೈಸೂರು ರಮಾನಂದರ 50 ವರ್ಷಗಳ ರಂಗ ಸೇವೆಯ ಬರಹ ಪ್ರಕಟಿಸಿವೆ. ನಾಡಿನ ರಂಗ ದಿಗ್ಗಜರು ಸಾಹಿತಿ ಕಲಾವಿದರು ರಮಾನಂದ ಅವರ ಪ್ರತಿಭಾ ಸಂಪನ್ನ ಸಾಧನೆಯನ್ನು ರಂಗ ಬೆನ್ನು ತಟ್ಟಿ ಉತ್ತೇಜಿಸಿದ್ದಾರೆ. ನಟ, ನಿರ್ದೇಶಕ, ರಚನಕಾರ, ಪ್ರಕಾಶಕ, ಗೆಜ್ಜೆ ಹೆಜ್ಜೆ ರಂಗ ತಂಡ ಸಂಸ್ಥಾಪಕ, ಪತ್ರಕರ್ತ, ಪ್ರಯೋಗ ಶೀಲ ನಾಟಕಕಾರ, ರಂಗ ಸಂಚಾರಿ… ಹೀಗೆ ವಿವಿಧ ಆಯಾಮಗಳ ಬಹುಮುಖಿ ಸಾಧಕ ಮೈಸೂರು ರಮಾನಂದರು.

ಇವರು ಗೆಳೆಯರೊಂದಿಗೆ ಆರಂಭಿಸಿದ ವಾಸ್ತವ ಜೀವನದ ಸಮಸ್ಯೆಗಳು ಮತ್ತದರ ಪರಿಹಾರಗಳನ್ನು ತಿಳಿಸುವ ಬೀದಿ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದೆ. ರಂಗಭೂಮಿಯ ವಿಶ್ವಪ್ರಜ್ಞೆಯನ್ನು ಯಶಸ್ವಿಯಾಗಿ ಸಾರುತ್ತಿರುವ ಮೈಸೂರು ರಮಾನಂದ ಅವರು ಕ್ರಿಯಾಶೀಲತೆಯಲ್ಲಿ, ಸಾಮಾಜಿಕ ಕಳಕಳಿಯ ಬದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ. ಅವರು ರಂಗಭೂಮಿಯನ್ನು ವಾಸ್ತವ ಬದುಕಿನ ಸಮಸ್ಯೆಗಳ ಪರಿಹಾರದ ಕನ್ನಡಿಯಾಗಿ ದೂರದೃಷ್ಟಿ ಅವಲೋಕನ ಮೆಚ್ಚುವಂತದ್ದು, ಮೈಸೂರು ರಮಾನಂದರನ್ನು ಕಲಾವಿದರಾಗಿ ಸಂತೋಷದಿಂದ ಒಪ್ಪಿಕೊಳ್ಳುವ ಜೊತೆಗೆ ನಮ್ಮ ರಾಜ್ಯದ ಮಹಾನಂದ ಎಂದು ಬಾಚಿ ಅಪ್ಪಿಕೊಳ್ಳಬಹುದಾಗಿದೆ.

ಇವರ ಕುರಿತಂತೆ ಕೆಲ ವರ್ಷಗಳ ಹಿಂದೆ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಅದರಲ್ಲಿ ನಾನು ಕೂಡ ಬರೆದಿರುವೆ. ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಅವರು ಸರ್ಕಾರದ ಪ್ರಚಾರಾತ್ಮಕ ನೀತಿಗಳನ್ನು ಜನಸಾಮಾನ್ಯರಿಗೆ ತಮ್ಮದೇ ರಚನೆಯ ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ.
ವೈಯುಕ್ತಿಕವಾಗಿ ಸುಮಾರು 2 ದಶಕಗಳಿಂದ ಅವರು ನನಗೆ ಪರಿಚಿತರು. ಪ್ರೀತಿಯ ಒಡನಾಡಿ. ಮೈಸೂರು ರಮಾನಂದರ ಕಲಾ ಪರಿಚಯವನ್ನು ನಾನು ನಾಡಿನ ಕೆಲವು ಪತ್ರಿಕೆಗಳಲ್ಲಿ ಬರೆದಿರುವುದುಂಟು. ರಮಾನಂದ್ ರಂಗಭೂಮಿಯಲ್ಲಿ ತಾನು ಕಲಾವಿದನಾಗಿ ಬೆಳೆಯುವ ಜೊತೆಗೆ ತನ್ನ ಸಹ ಕಲಾವಿದರನ್ನು ಬೆಳೆಸಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಮಿಡಿದು ಅವರನ್ನು ಸಹ ತನ್ನೊಂದಿಗೆ ಬೆಳೆಸಿದ ಹೃದಯ ಸಂಪನ್ನರು. ಇವರಿಗೆ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನಿಜಕ್ಕೂ ಸಲ್ಲಬೇಕಿದೆ. ಅದಕ್ಕೆ ಇವರು ನಿಜವಾಗಿಯೂ ಅರ್ಹರಿದ್ದಾರೆ.

ಮೊನ್ನೆ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಗೆ ಬಂದಿದ್ದರು. ಅವರ ರಂಗ ಸಾಧನೆಯ ಬೃಹತ್ ಫೈಲ್ ನ್ನು ತೋರಿಸಿದರು. ಇದನ್ನು ಆಯ್ಕೆ ಸಮಿತಿ ನೋಡಿ ಪ್ರಶಸ್ತಿಗೆ ಪರಿಗಣಿಸಬೇಕಿದೆ ಅಷ್ಟೇ. ರಂಗಭೂಮಿಯ ಅನುಭವದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ಗುರುತರ ಪಾತ್ರಗಳಲ್ಲಿ ಗಮನಾರ್ಹ ಅಭಿನಯದಿಂದ ಮಿಂಚಿದವರು ಮೈಸೂರು ರಮಾನಂದರು. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೋ ತಿಳಿಯದು. ಇತ್ತೀಚಿಗೆ ಇವರೇ ಪ್ರದಾನ ಪಾತ್ರ ನಿರ್ವಹಿಸುತ್ತಿರುವ ಮಗ್ಗಿ ಪುಸ್ತಕ ಬಿಡುಗಡೆಯ ನಿರೀಕ್ಷಿಯಲ್ಲಿದೆ. ಮತ್ತೊಂದು ರಮಾನಂದರ ವಿಶೇಷವೆಂದರೆ ಇವರ ಮಗ ಮತ್ತು ಪತ್ನಿ ಸಹ ಕಲಾ ಬದುಕಿನಲ್ಲಿ ಇವರ ಜೊತೆಯಲ್ಲಿಯೇ ಸಾಗಿದ್ದಾರೆ. ನಗು ಎಲ್ಲಿದೆಯೋ ಅಲ್ಲಿದೆ ಅರೋಗ್ಯ ಎನ್ನುವ ರಮಾನಂದರ ಸ್ಲೋಗನ್ ನಂತೆ ಇವರು ತಮ್ಮ ಬದುಕಿನ ಉದ್ದಕ್ಕೂ ಕಲಾ ರಸಿಕರನ್ನು ನಗಿಸುತ್ತಲೇ ಬಂದಿದ್ದಾರೆ.

ಗೊರೂರು ಅನಂತರಾಜು, ಹಾಸನ
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3 ನೇ ಕ್ರಾಸ್, ಹಾಸನ – 573201

9449462879.