ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು: ಕೆ. ನಿಂಗಜ್ಜ

ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಸೆಪ್ಟೆಂಬರ್-೨೨ ರಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಗಂಗಾವತಿ ತಾಲೂಕ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ ವಹಿಸಿ ಅವರು ಪ್ರಾಸ್ತಾವಿಕ ಮಾತನಾಡಿ, ಈ ಸಂಘಕ್ಕೆ ೭೦-೮೦ ವರ್ಷಗಳ ಇತಿಹಾಸವಿದ್ದು, ೧೯೩೬ ರಲ್ಲಿ ಕೇವಲ ತಾಲೂಕು ಸಂಘಟನೆಯಾಗಿ, ಸ್ವಾತಂತ್ರ್ಯಾ ನಂತರ ಆಗಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಅವರಿಂದ ಜಿಲ್ಲಾ ಸಂಘವಾಗಿ, ಈಗ ರಾಜ್ಯಮಟ್ಟದ ಸಂಘವಾಗಿ ಬೆಳೆದಿದೆ. ಇತ್ತೀಚೆಗೆ ಈ ಸಂಘವು ಉದ್ಘಾಟನೆಗೊಂಡು ರಾಜ್ಯದಲ್ಲಿ ಮೈಸೂರು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಎಂದು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸಂಘಟನೆಯನ್ನು ಬೆಳೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಕಿರುಕುಳಗಳು, ಅವರ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದಿಂದ ಅವರಿಗೆ ಸಿಗಬೇಕಾದ ಭದ್ರತೆಯ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರಲು ಸಂಘವು ಸಿದ್ಧವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಅವರು ಮಾತನಾಡಿ, ಪತ್ರಿಕಾ ಮಾಧ್ಯಮದ ಇತಿಹಾಸ ಕುರಿತು ತಿಳಿಸುತ್ತಾ, ಮಾದ್ಯಮ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿ, ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಬಹಳ ಪ್ರಾಮುಖ್ಯತೆ ಇದ್ದು, ಅದರ ಪ್ರಾಮುಖ್ಯತೆಯನ್ನು ಪತ್ರಕರ್ತರು ಉಳಿಸಿಕೊಂಡು ಹೋಗಬೇಕು. ಈಗಿನ ಆಧುನಿಕ ಜಗತ್ತಿನಲ್ಲಿ ಎಷ್ಟೇ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಿದ್ದರೂ, ಮುದ್ರಣಾ ಮಾಧ್ಯಮಕ್ಕೆ ಅದರದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ ಎಂದು ಉಪನ್ಯಾಸ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು, ನಗರಸಭೆಯ ಅಧ್ಯಕ್ಷೆಯಾದ ಶ್ರೀಮತಿ ಹೀರಾಬಾಯಿ ಸಿಂಗ್, ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಜಿ. ಶ್ರೀಧರ ಕೇಸರಹಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಬಿ ಖಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ. ನಟೇಶ್, ಲಿಟಲ್ ಹಾರ್ಟ್ಸ್ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಹಿರಿಯ ಕಾರ್ಮಿಕ ಮುಖಂಡ ಜೆ. ಭಾರಧ್ವಾಜ್, ಕಾಂಗ್ರೆಸ್ ಮುಖಂಡ ಎಸ್.ಬಿ ಖಾದ್ರಿ, ಕನ್ನಡಪರ ಸಂಘಟನೆ ಮುಖಂಡ ಸೈಯ್ಯದ್ ಜಿಲಾನಿ ಪಾಷಾ ಖಾದ್ರಿ, ದಲಿತಪರ ಸಂಘಟನೆಗಳ ಮುಖಂಡರಾದ ಹುಲುಗಪ್ಪ ಮಾಗಿ, ಹಂಪೇಶ ಹರಿಗೋಲು, ಶಂಕರ್, ಹುಸೇನಪ್ಪ ಹಂಚಿನಾಳ, ಮಂಜುನಾಥ ಕಳ್ಳಿಮನಿ ಸೇರಿದಂತೆ ಇನ್ನಿತರರು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಮೇಶ ಕೋಟಿಯವರಿಗೆ ರಾಜ್ಯಾಧ್ಯಕ್ಷರು ನೇಮಕಾತ್ರಿ ಪತ್ರ ವಿತರಣೆ ಮಾಡಿದರು. ಅದೇರೀತಿ ಗಂಗಾವತಿ ತಾಲೂಕು ಅಧ್ಯಕ್ಷ ಸಿ.ಡಿ ರಾಮಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನಬಸವ ಮಾನವಿ ಅವರುಗಳಿಗೆ ಜಿಲ್ಲಾ ಘಟಕದಿಂದ ನೇಮಕಾತಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಸಂತಕುಮಾರ, ರಾಜ್ಯ ಪದಾಧಿಕಾರಿಯಾದ ಪ್ರಶಾಂತ್ ರವರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ, ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಉಪಸ್ಥಿತರಿದ್ದರು.

ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ರಾಜ್ಯ ಘಟಕದಿಂದ ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಹೊಸಕೇರಾ ಅವರಿಗೆ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕೋಟಿ ಅವರಿಗೆ ಹಾಗೂ ಗಂಗಾವತಿ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ವಿವಿಧ ಜಿಲ್ಲೆ, ವಿವಿಧ ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕರಾದ ಶಿವಾನಂದ ತಿಮ್ಮಾಪುರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ರಮೇಶ ಕೋಟಿ ಸ್ವಾಗತಿಸಿದರೆ, ಜೆ. ಶ್ರೀನಿವಾಸ ವಂದನಾರ್ಪಣೆ ಸಲ್ಲಿಸಿದರು.

ನೂತನವಾಗಿ ರಚನೆಗೊಂಡ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನವನ್ನು ಒದಗಿಸಿಕೊಡಲು ಶಾಸಕರಿಗೆ ಮನವಿ.

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ರಚನೆಯಾಗಿ ಉದ್ಘಾಟನೆಗೊಂಡು, ಈ ಸಂಘದ ಅಂಗಸಂಸ್ಥೆಗಳಾಗಿ ಹಲವು ಜಿಲ್ಲಾ ಸಮಿತಿಗಳು ಹಾಗೂ ತಾಲ್ಲೂಕು ಸಮಿತಿಗಳು ಈಗಾಗಲೇ ರಚನೆಯಾಗಿವೆ. ಅದರಂತೆ ನಮ್ಮ ಗಂಗಾವತಿ ತಾಲ್ಲೂಕು ಸಮಿತಿಯೂ ಕೂಡ ಸಕ್ರಿಯಗೊಂಡಿದ್ದು ಮತ್ತು ನಮ್ಮ ಸಂಘದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿದೆ. ಕೂಡಲೇ ನಮ್ಮ ಸಂಘಕ್ಕೆ ಪತ್ರಿಕಾ ಭವನದ (PRESS HALL) ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೆಪ್ಟೆಂಬರ್-೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಡೆದ ತಾಲೂಕ ಸಾರ್ವಜನಿಕ ಧ್ವಜಾರೋಹಣದ ಸಂದರ್ಭದಲ್ಲಿ ಶಾಸಕರಾದ ಜನಾರ್ಧನರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು ಎಂದು ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರಾದ ಸಿ.ಡಿ ರಾಮಕೃಷ್ಣ ತಿಳಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರಸ್ತುತ ನಮಗೆ ಯಾವುದೇ ಸ್ವಂತ ಕಟ್ಟಡ ಅಥವಾ ಸಭಾಂಗಣವಿಲ್ಲದ ಕಾರಣದಿಂದಾಗಿ, ವಿವಿಧ ಸಭೆ ಹಾಗೂ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಲು ತೊಂದರೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಸರಕಾರಿ ಕಚೇರಿ ವ್ಯಾಪ್ತಿಯಲ್ಲಿ ಪತ್ರಿಕಾ ಭವನವನ್ನು ಒದಗಿಸಿಕೊಡಬೇಕಾಗಿ ಶಾಸಕರಲ್ಲಿ ವಿನಂತಿಸಿಕೊಂಡರು. ಇದರಿಂದ ತಾಲ್ಲೂಕು ಮಟ್ಟದ ಪತ್ರಿಕೋದ್ಯಮ ಚಟುವಟಿಕೆಗಳಿಗೆ ಸೇರಿದಂತೆ ಪತ್ರಕರ್ತರಿಗೆ ಒಂದು ಕಾರ್ಯಾಲಯದ ವ್ಯವಸ್ಥೆ ಸಿಕ್ಕಂತಾಗುತ್ತದೆ. ಆದಷ್ಟು ಬೇಗ ನಮಗೆ ಪತ್ರಿಕಾ ಭವನ ವ್ಯವಸ್ಥೆ ಮಾಡಿಕೊಡಬೇಕೆಂದು ಸಂಘಟನೆಯ ಎಲ್ಲಾ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಶಾಶಕರು, ನಿಮಗೆ ಆದಷ್ಟು ಬೇಗನೇ ಪತ್ರಿಕಾ ಭವನದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್ ಕೋಟೆ. ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಆರ್ ಚನ್ನಬಸವ ಮಾನ್ವಿ, ಸದಸ್ಯರಾದ ಮಂಜುನಾಥ ವಣಗೇರಿ ಸೇರಿದಂತೆ ನಮ್ಮ ಸಂಘಕ್ಕೆ ಬೆಂಬಲ ನೀಡಿದ ಸುರೇಶ ಹಾಗೂ ಇತರ ಸದಸ್ಯರು ಇದ್ದರು.

ಹಿರೇಕೊಳಚಿ ಶಾಲೆಯಲ್ಲಿ ಹೈದ್ರಾಬಾದ ಕನಾ೯ಟಕ ವಿಮೋಚನಾ ದಿನಾಚರಣೆ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಳಚಿಯಲ್ಲಿ ಸೆಪ್ಟೆಂಬರ್‌-17 ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಗ್ರಾಮದ ಮಾಜಿ ಅಧ್ಯಕ್ಷರು ಶ್ರೀಮತಿ ಆಲೂರು ಗಂಗಮ್ಮ ಹಾಗೂ ಗ್ರಾಮಪಂಚಾಯತಿ ಸದಸ್ಯೆ ಶ್ರೀಮತಿ ಓಬಳ್ದಾರ್ ರೇಖಾ ರವರು ನೆರವೇರಿಸಿದರು. ಜೊತೆಗೆ ಇಂದು ವಿಶ್ವಕರ್ಮ ಜಯಂತಿಯನ್ನು ಇದೇ ಸಂದಭ೯ದಲ್ಲಿ ಪೂಜಾ.ಕಾರ್ಯಕ್ರಮದ ಮೂಲಕ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಮುಖ್ಯ ಗುರುಗಳು ಶ್ರೀ ಮಧುನಾಯ್ಕ ಎಲ್ ರವರು ವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಈ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕನಕಗಿರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ

ಇಂದು ಕನಕಗಿರಿ ತಾಲೂಕು ಪಂಚಾಯತ್‌ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ರಾಜಶೇಖರ್‌ ಅವರು ನೆರವೇರಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಕೆಡಿಪಿ ಸದಸ್ಯರು, ತಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಗಂಗಾವತಿ: ನಗರದ ಶಾರದಾ ದೇಗುಲದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಆಯೋಜಿಸಿರುವ ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ನಾಲ್ಕನೆಯ ಸೋಮವಾರ ದಿನದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ಭಜನೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಜಿಲ್ಲಾ ಸಂಯೋಜಕಿ ಮಾತನಾಡಿ ಶೃಂಗೇರಿಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದ್ದು, ಭಕ್ತಿ ಮಾರ್ಗಕ್ಕೆ ಭಜನೆ ಅತ್ಯಂತ ಸಹಕಾರಿಯಾಗಿದ್ದು, ದೇವರ ನಾಮ ಸ್ಮರಣೆಯ ಮೂಲಕ ಸರ್ವರಿಗೂ ಸುಖ ಶಾಂತಿ, ಸಮೃದ್ಧಿ ದೊರೆಯುವಂತೆ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೇಮಾವತಿ ಕುಲಕರ್ಣಿ, ಸುಮಾ ಗಡದ್, ರೇಣುಕಾ, ಕುಮದಾ, ಗೀತಾ ಬಾಯಿ, ಶ್ರೀದೇವಿ ಜಗನ್ನಾಥ್ ಅಳವಂಡಿಕರ್, ರಜಿನಿ, ವೀಣಾ ಅಳವಂಡಿ ಇತರರು ಉಪಸ್ಥಿತರಿದ್ದರು.

ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಬೆಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ “ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ಪತ್ರಕರ್ತರಿಗೆ ಮಾಧ್ಯಮಶ್ರೀ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಸ್ವಾತಂತ್ರ‍್ಯಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ನಂತರ ಅಭಿವೃದ್ಧಿಯಾದ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಹೊಣೆಗಾರಿಕೆ ನಿರ್ವಹಿಸಿದೆ. ಆದರೆ ಇಂದು ಅರೆಸತ್ಯ ಮತ್ತು ಸುಳ್ಳು ಸುದ್ದಿಗಳು ಭಾರತೀಯ ಪತ್ರಿಕೋದ್ಯಮದ ಈ ಮಹೋನ್ನತ ಘನತೆಯನ್ನು ಹಾಳುಗೆಡಹುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರೂ, ಸಂಪಾದಕರೂ ಆಗಿದ್ದ ಅಂಬೇಡ್ಕರ್ ಅವರು ಸಂಘಟನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಘಟಕ ಧ್ವನಿ ಸರ್ಕಾರದ ಮತ್ತು ಸಮಾಜದ ಕಣ್ಣು ತೆರೆಸುತ್ತವೆ ಎಂದಿದ್ದರು. ಪತ್ರಿಕಾ ಸಂಘಟನೆಗಳು, ಪತ್ರಕರ್ತರ ಸಂಘಗಳು ಮಾಧ್ಯಮವನ್ನು ಜನಪರವಾಗಿ, ಭಯಮುಕ್ತವಾಗಿಡಲು ಪತ್ರಕರ್ತರು ಯಾವುದೇ ಹಿಂಜರಿಕೆಯಿಲ್ಲದೆ ವರದಿ ಮಾಡಲು ಇದು ಸಹಾಯ ಮಾಡುವ ರೀತಿಯಲ್ಲಿ ಶ್ರಮಿಸಬೇಕು. ಪತ್ರಕರ್ತರಿಗೆ ನೈತಿಕ ಮಾರ್ಗಸೂಚಿಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ಹೊಕ್ಕೇರಿ ಮಲ್ಲಿಕಾರ್ಜುನ ಸೇರಿ ಸಾಧಕರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ವಿನಯ್ ಗುರೂಜಿ, ಅರಣ್ಯ ಸಚಿವ ಈಶ್ವರಖಂಡ್ರೆ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸಂಘದ ಪದಾಧಿಕಾರಿಗಳಿದ್ದರು.

ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಗಂಗಾವತಿ: ಅದ್ವೈತ ಸಿದ್ದಾಂತದ ತಳಹದಿಯ ಮೇಲೆ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ಪೀಠಗಳಲ್ಲಿ ಪ್ರಥಮ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶೃಂಗೇರಿ ಶಾರದಾ ಪೀಠ ತನ್ನದೇ ಆದ ಗುರು ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೀಠವು ಸನಾತನ ಧರ್ಮದ ರಕ್ಷಣೆ ಹಾಗೂ ದೇಶದ ಸುಭಿಕ್ಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಮಂಗಳವಾರ ಶಾರದಾ ದೇವಸ್ಥಾನದಲ್ಲಿ ಜಗದ್ಗುರು ಶ್ರೀಶ್ರೀ ವಿದುಶೇಖರ ಮಹಾಸ್ವಾಮಿಗಳವರ ೩೩ನೆಯ ವರ್ಧಂತಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯದೃಷ್ಟಿಯ ಪರಿಣಾಮವಾಗಿ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ತಮ್ಮ ೨೨ನೇ ವಯಸ್ಸಿನಲ್ಲಿ ಜನವರಿ-೨೩, ೨೦೧೫ ರಂದು ತಮ್ಮ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಅನುಗ್ರಹಿಸಿದರು. ಬಳಿಕ ಗುರುಗಳ ಅನುಗ್ರಹದಂತೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಧರ್ಮ ವಿಜಯಯಾತ್ರೆ, ಪ್ರಯಾಗರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನ, ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಷ್ಠಾಪನೆ ಸೇರಿದಂತೆ ದೇಶ ಯುದ್ಧದ ಸ್ಥಿತಿಯಲ್ಲಿದ್ದಾಗಲೇ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಶ್ರೀ ಶಾರದಾ ಪೀಠ ಪ್ರಸಾದದ ರೂಪದಲ್ಲಿ ಎರಡು ಲಕ್ಷ ರೂಪಾಯಿ ಕಳಿಸಿಕೊಟ್ಟರು. ದೇಶ ಕಾಯುವ ಯೋಧರಿಗಾಗಿ ಪ್ರತಿವರ್ಷ ಶಾರದಾ ಪೀಠದಿಂದ ಆರ್ಥಿಕ ನೆರವು ನೀಡುತ್ತಿರುವುದು ಅವರ ಅಪ್ರತಿಮ ದೇಶಭಕ್ತಿಯನ್ನು ಬಿಂಬಿಸುತ್ತದೆ. ನಗರದಲ್ಲಿ ಶ್ರೀಮಠ ಸ್ಥಾಪನೆಗೊಂಡು ಎಂಟು ವರ್ಷಗಳು ಪೂರೈಸುತ್ತಿದ್ದು, ಉಭಯ ಜಗದ್ಗುರುಗಳ ಅನುಗ್ರಹದಂತೆ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದ ಅವರು, ಸಮರ್ಥ ಪೀಠಾಧೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಕ್ತಿ ತುಂಬುತ್ತಿದ್ದಾರೆ. ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಅಷ್ಟೋತ್ತರ ಪಾರಾಯಣ, ಶಿವ ಪಂಚಾಕ್ಷರಿ ಸ್ತೋತ್ರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಅನಿಲ್, ನಾಗೇಶ ಭಟ್, ಶ್ರೀನಿವಾಸ ಕರಮುಡಿ, ಭೀಮಾಶಂಕರ ಹೊಸಳ್ಳಿ, ಪವನ್ ಜೋಶಿ, ಮೋಹನ್ ಲೆಕ್ಕಿಹಾಳ, ವೇಣು, ಪ್ರಶಾಂತ್ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ

ವಿದುಶೇಖರ ಮಹಾಸ್ವಾಮಿಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು. ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ.

2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ ಮೊದಲ ಬಾರಿ ಆಗಮಿಸಿದಾಗ ಈ ಕ್ಷೇತ್ರ ಬಾಲಕನನ್ನು ಸೆಳೆದಿರಲೇಬೇಕು. ಪುನ: 2008 ರಲ್ಲಿ ತಂದೆಯವರೊಂದಿಗೆ ಬಂದರು. ಆಗಲೇ ತಮಗೆ ಶೃಂಗೇರಿಯೇ ಕರ್ಮಭೂಮಿ ಎಂದವರ ಮನಸ್ಸು ಗಟ್ಟಿ ಮಾಡಿತ್ತು.

2009 ರಲ್ಲಿ ಮತ್ತೆ ಶೃಂಗೇರಿಗೆ ಬಂದಾಗ ಜಗದ್ಗುರುಗಳಿಂದ ತಾನು ಶಾಸ್ತ್ರ ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದರು. ತಂದೆಯವರ ಅನುಮತಿ ನಂತರ ಜಗದ್ಗುರುಗಳ ಅನುಮತಿಯೂ ದೊರಕಿತು. ಕೇವಲ ಒಂದೂವರೆ ವರ್ಷದಲ್ಲಿ ಸಂಸ್ಕೃತ ಕಲಿತಿದ್ದು ಮಾತ್ರವಲ್ಲ ಕನ್ನಡದಲ್ಲಿ ಉಪನ್ಯಾಸ ನೀಡುವಷ್ಟು ಅವರು ಸಮರ್ಥರಾಗಿದ್ದರು. ಉಳಿದವರಿಗೆ ಒಂದೇ ಭಾಷೆ ಕಲಿಯಲು ಕನಿಷ್ಠ ನಾಲ್ಕು ವರ್ಷದ ಕಲಿಕೆ ಅಗತ್ಯವಾದರೆ ಇವರಿಗೆ ಇಷ್ಟು ಸ್ವಲ್ಪ ಸಮಯದಲ್ಲೇ ಎರಡು ಭಾಷೆಯ ಹಿಡಿತ ಸಿದ್ಧಿಸಿತ್ತು.

ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯವನ್ನು ಶೃಂಗೇರಿಯ ವಿದ್ವಾನ್ ಶಿವಕುಮಾರ ಶರ್ಮ ಬೋಧಿಸಿದರೆ ವಿದ್ವಾನ್ ಕೃಷ್ಣ ರಾಜ ಭಟ್ಟರು ವ್ಯಾಕರಣ ಬೋಧಿಸಿದರು. ಎಲ್ಲವೂ ಬಹುಬೇಗ ಕಲಿತ ಬ್ರಹ್ಮಚಾರಿ ಅಚ್ಚರಿಗೆ ಕಾರಣರಾದರು. ಸೂಕ್ಷ್ಮ ಗ್ರಾಹಿ ಬ್ರಹ್ಮಚಾರಿಯಯ ಗುಣ ಸ್ವಭಾವ, ಜ್ಞಾನದಾಹ ಅರಿತ ಜಗದ್ಗುರುಗಳು ತಾವೇ ಶಾಸ್ತ್ರ ಕಲಿಸಲು ನಿರ್ಧರಿಸಿದರು. ಎರಡು ವರ್ಷ ಜಗದ್ಗುರುಗಳಿಂದ ಶಿಕ್ಷಣ ದೊರಕಿತು. ನ್ಯಾಯ ಶಾಸ್ತ್ರ, ಮೀಮಾಂಸ ಮತ್ತು ವೇದಾಂತ ಕಲಿಕೆ ಸಾಗುತ್ತಿದ್ದಾಗಲೇ ಅವರ 22 ನೇ ವಯಸ್ಸಿನಲ್ಲೇ ಜನವರಿ 23.2015 ರಂದು ಜಗದ್ಗುರುಗಳು ಅವರಿಗೆ ಸನ್ಯಾಸವಿತ್ತು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೀವಿಧುಶೇಖರ ಭಾರತಿ ಎಂಬ ಯೋಗಪಟ್ಟನೀಡಿದರು.

ಆಗ ಜಗದ್ಗುರುಗಳು ತಮಗೆ ಅತ್ಯಂತ ಪೂಜನೀಯರಾದ ತಮ್ಮ ಪರಮಗುರು ಸ್ಮರಣೆಯಲ್ಲಿ ತಾವು ಶ್ರೀ ವಿಧುಶೇಖರ ಎಂಬ ಯೋಗಪಟ್ಟ ನೀಡುತ್ತಿದ್ದು ವಿಧು ಎಂದರೆ ಚಂದ್ರನೆಂದೇ ಅರ್ಥ ಎಂದು ವಿವರ ನೀಡಿದ್ದರು.

ಮುಂದೆ ಎರಡು ವರ್ಷಗಳ ಕಾಲ ಅವರು ತಮ್ಮ ಗುರುವರ್ಯರಿಂದ ಸಂಪೂರ್ಣ ವೇದಾಂತ ಶಾಸ್ತ್ರಹೃದ್ಗತ ಮಾಡಿಕೊಂಡರು. ತಮಿಳು ಶಿಕ್ಷಣವನ್ನೇನೂ ಅವರು ಪಡೆದವರಲ್ಲ. 2017 ರಲ್ಲಿ ತಮ್ಮ ಗುರುವರ್ಯರೊಂದಿಗೆ ಧರ್ಮ ವಿಜಯಯಾತ್ರೆ ಕೈಗೊಂಡಾಗ ಅವರ ತಮಿಳುನಾಡಿನಲ್ಲಿ ತಮಿಳಿನಲ್ಲೇ ಅನುಗ್ರಹ ಭಾಷಣ ಮಾಡಿದರು. ಮುಂದೆ ಅವರು ತಮಿಳುನಾಡಿನ ವಿಜಯಯಾತ್ರೆಯ ಸಂಧರ್ಭದಲ್ಲೆಲ್ಲಾ ತಾವು ತಮಿಳು ಮಾತೃಭಾಷೆಯವರೇ ಎಂಬ ರೀತಿ ಉಪನ್ಯಾಸ ನೀಡಿದರು. ತಮ್ಮ 25ನೇ ವಯಸ್ಸಿನಲ್ಲೇ ಜಗದ್ಗುರುಗಳ ಅನುಜ್ಞೆಯಂತೆ ಅವರು ಐದು ತಿಂಗಳ ಧರ್ಮವಿಜಯ ಯಾತ್ರೆಯನ್ನು ಕರ್ನಾಟಕ, ಆಂದ್ರಗಳಲ್ಲಿ ಕೈಗೊಂಡರು. ನಂತರ 4 ತಿಂಗಳ ಮಹಾರಾಷ್ಟ್ರ ವಿಜಯಯಾತ್ರೆಯನ್ನು ಮಾಡಿದರು. 2020 ರಲ್ಲಿ ಕೇರಳದಲ್ಲಿ ವಿಜಯಯಾತ್ರೆಯನ್ನು ಕೈಗೊಂಡರು ಮತ್ತು ಮಲೆಯಾಳಿಯಲ್ಲೇ ಅನುಗ್ರಹ ಭಾಷಣ ಮಾಡಿದರು. 2022 ರಲ್ಲಿ ತಮ್ಮ ಗುರುವರ್ಯರ ಅನುಜ್ಞೆಯಂತೆ ದ್ವಾರಕೆಗೆ ತೆರಳಿ ದ್ವಾರಕಾ ಮತ್ತು ಬದರೀ ಶಂಕರಾಚಾರ್ಯರ ಪಟ್ಟಾಭಿಷೇಕ ನಡೆಸಿ ಅನುಗ್ರಹಿಸಿದರು. ಆಗ ಅವರು ಹಿಂದಿ ಭಾಷೆಯ ಉಪನ್ಯಾಸ ಗಮನ ಸೆಳೆಯಿತು.

ಅವನಿ ಶೃಂಗೇರಿ ಮಠ, ನೆಲಮಾವು ಮಠಗಳ ಮಠಾದಿಪತಿಗಳಿಗೆ ಅವರು ಪಟ್ಟಾಭಿಷೇಕ ಮಾಡಿದರು. ಕಾಶ್ಮೀರದ ಟ್ವೀಟ್ವಾಲ್ ಗೆ ತಮ್ಮ ಗುರುವರ್ಯರ ಆದೇಶದಂತೆ ತೆರಳಿ ಶಾರದಾಂಬೆಯ ಪ್ರಾಣ ಪ್ರತಿಷ್ಠೆ ಮಾಡಿ ಅಭಿನವ ಶಂಕರಾಚಾರ್ಯರೆನಿಸಿದರು. ಅವರು ಗುರುವರ್ಯರ ಆದೇಶದಂತೆ ಧರ್ಮ ಪ್ರಬೋಧನೆಗಾಗಿ ನಿರಂತರ ಧರ್ಮ ವಿಜಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪರಿವ್ರಾಜಕಾಚಾರ್ಯರೆನಿಸಿದ್ದಾರೆ.
ಅವರು ದೇವಸ್ಥಾನಗಳಲ್ಲಿ ನಡೆಸುವ ಪೂಜೆ, ದೇವಸ್ಥಾನಗಳ ಕುಂಭಾಭಿಷೇಕದಲ್ಲಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳುವ ರೀತಿ ಭಕ್ತರ ಹೃನ್ಮನ ಸೆಳೆಯುತ್ತದೆ.

ಶೃಂಗೇರಿಯ ಅತ್ಯಂತ ಪ್ರಸಿದ್ಧ ವಾಕ್ಯಾರ್ಥ ಸಭೆಗಳಲ್ಲಿ ಅವರು ಅಧ್ಯಕ್ಷತೆವಹಿಸಿ ನಿರ್ವಹಿಸುವ ರೀತಿ ದೇಶದ ಪ್ರಖ್ಯಾತ ಪಂಡಿತರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಧರ್ಮ ಆಚರಣೆಗೆ ಅವರು ನೀಡುವ ಉಪನ್ಯಾಸಗಳು ಮನಸ್ಸಿಗೆ ನಾಟುತ್ತದೆ. ಸತತ ಅಧ್ಯಯನ ಮತ್ತು ಅಧ್ಯಾಪನ ನಡೆಸುವ ಅವರು ತಮ್ಮ ಅನುಗ್ರಹ ಭಾಷಣಗಳಲ್ಲಿ ಭಗವದ್ಗೀತೆ, ಶಂಕರ ಭಾಷ್ಯ, ವೇದ, ಉಪನಿಷತ್, ಶಂಕರ ವಿಜಯ, ಪುರಾಣಗಳ ಶ್ಲೋಕಗಳನ್ನು ಪೋಣಿಸುವ ರೀತಿ ಅವರ ಅಪಾರ ವಿದ್ವತ್ ಗೆ ಸಾಕ್ಷಿ ಹೇಳುತ್ತದೆ.

ಶೃಂಗೇರಿಯ ಗುರುಪರಂಪರೆಯ ಎಲ್ಲಾ ವಿಶೇಷಣಗಳೂ ಅವರಲ್ಲಿ ಮೈತಾಳಿದೆ. ಈ ವರ್ಷದ ಅವರ ಉತ್ತರ ಭಾರತದ ಧರ್ಮ ವಿಜಯ ಯಾತ್ರೆ ಉದ್ದಕ್ಕೂ ಕಂಡ ದೃಶ್ಯ ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ನವ ನಕ್ಷತ್ರೋದಯವಾಗಿದ್ದಕ್ಕೆ ಸಾಕ್ಷಿ ಒದಗಿಸಿತು. ಪ್ರಯಾಗರಾಜ್ ಮಹಾ ಕುಂಭದಲ್ಲಿ ಅವರು ಮೌನಿ ಅಮವಾಸ್ಯೆಯ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದಕ್ಕೂ ಮೊದಲು ಅಲ್ಲಿ ಪ್ರತಿದಿನ ಶಾಸ್ತ್ರ ಸಭೆ ನಡೆಸಿದರು. ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಮೂರು ಆಮ್ನಾಯ ಪೀಠಾದೀಶ್ವರರು ಪಾಲ್ಗೊಂಡ ಧರ್ಮ ಸಂಸತ್ ಅಧ್ಯಕ್ಷತೆ ವಹಿಸಿದರು.

ಕಾಶಿಯಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಪ್ರತಿಷ್ಠಾ ಕುಂಭಾಭಿಷೇಕ ನಡೆಸಿದರು. ತಮ್ಮ ಗುರುವರ್ಯರು ಎಲ್ಲೆಲ್ಲಿ ತೆರಳಿ ಅನುಗ್ರಹಿಸಿದ್ದರೋ ಅಲ್ಲೆಲ್ಲಾ ತೆರಳಿ ಅನುಗ್ರಹಿಸಿದರು. ಕಾಶೀ ವಿಶ್ವನಾಥನ ಪೂಜೆ ನೇರವೇರಿಸಿದರು.

ಈಗಾಗಲೇ ಅವರು ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಾದ ತಿರಚಂದೂರು ಮತ್ತು ಪಳನಿಗೆ ತೆರಳಿ ಪೂಜೆ ನೆರವೇರಿಸಿದ್ದಾರೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂಬತ್ತು ಕಡೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇಶಾದ್ಯಂತ ನೂರಾರು ದೇವಸ್ಥಾನಗಳ ಕುಂಭಾಭಿಷೇಕ, ಪ್ರತಿಷ್ಠಾ ಕಾರ್ಯಕ್ರಮ ನಡೆಸಿದ್ದಾರೆ.

ಎಲ್ಲಕ್ಕೂ ಶಿಖರಪ್ರಾಯವಾಗಿ ಅವರ ಅಚಲ ಗುರುಭಕ್ತಿ ಸಾಟಿ ಇಲ್ಲದ್ದು. ಎಲ್ಲೇ ಶೃಂಗೇರಿಯಿಂದ ದೂರ ತೆರಳಲಿ ತಮ್ಮ ಗುರುವರ್ಯರ ಸ್ಮರಣೆ ಮಾಡದೇ ಅವರು ಅನುಗ್ರಹ ಭಾಷಣ ನೀಡುವುದೇ ಇಲ್ಲ.ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳ ಸನ್ಯಾಸ ಸ್ವೀಕರಿಸಿದ ಸುವರ್ಣ ವರ್ಷಾಚರಣೆಯನ್ನು ಅವರು ಅಭೂತಪೂರ್ವವಾಗಿ ಆಚರಿಸಿದರು. ಸುವರ್ಣ ಭಾರತಿ ಕಾರ್ಯಕ್ರಮ ಒಂದು ನವ ಇತಿಹಾಸ ಸೃಷ್ಟಿಸಿತು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ “ನಮ: ಶಿವಾಯ” ಶ್ರೀ ಭಾರತೀತೀರ್ಥ ಮಹಿಸ್ವಾಮಿಗಳ ಸುವರ್ಣ ವರ್ಷದ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಕಂಠಗಳು ಏಕಕಾಲಕ್ಕೆ ಒಂದೆಡೆ ಶಂಕರ ಭಗವತ್ಪಾದರ ಸ್ತೋತ್ರ ಪಠಣ ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿತು.

ಶೃಂಗೇರಿಯಲ್ಲಿ ಗುರುವರ್ಯರ ಗೌರವಾರ್ತ ನಡೆದ ತ್ರಿವೇಣಿ ಸಂಗಮವೂ ಒಂದು ವಿಶ್ವ ದಾಖಲೆಯೇ. ಶೃಂಗೇರಿಯಂತ ಪುಟ್ಟ ಹಳ್ಳಿಯಲ್ಲಿ ಐವತ್ತು ಸಹಸ್ರ ಭಕ್ತರು ಸ್ತೋತ್ರ ಪಠಣ ಮಾಡಿ ಇತಿಹಾಸ ಸೃಷ್ಟಿಸಿದರು.

ದೇಶ ಯುದ್ದ ಸ್ಥಿತಿಯಲ್ಲಿದ್ದಾಗಲೇ ಜಗದ್ಗುರುಗಳು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಆ ಸಂಧರ್ಭ ಅವರು ಪುರ ಪ್ರವೇಶ ಮಾಡುವಾಗ ಸಂಪ್ರದಾಯದಂತೆ ತಮ್ಮ ಶೋಭಾಯಾತ್ರೆ ಸಿದ್ಧತೆ ಆಗಿದ್ದರೂ ಅದನ್ನು ನಿರಾಕರಿಸಿದರು. ದೇಶ ಸಂಕಷ್ಟದಲ್ಲಿದೆ ನಮ್ಮ ಶೋಭಾಯಾತ್ರೆ ಬೇಡ ಎಂದರು. ದೇಶದ ಒಳಿತಿಗಾಗಿ ಅವಿರತ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಉಪದೇಶಿಸಿದರು. ಕಾಶ್ಮೀರದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಶಾರದಾ ಪ್ರಸಾದ ರೂಪವಾಗಿ ತಲಾ ಎರಡು ಲಕ್ಷ ರೂ ಕಳಿಸಿಕೊಟ್ಟರು.ಅವರ ಅಪ್ರತಿಮ ದೇಶಭಕ್ತಿ ಶ್ರೀ ವಿದ್ಯಾರಣ್ಯರನ್ನು ನೆನಪಿಗೆ ತರುವಂತಿತ್ತು.

ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರನ್ನು ಆಗಲೇ ದೇಶದ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಅನೇಕ ರಾಜ್ಯದ ರಾಜ್ಯಪಾಲರು, ಗೃಹಸಚಿವರೂ ಸೇರಿದಂತೆ ಕೇಂದ್ರದ ಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಒಳಗೊಂಡಂತೆ ಅನೇಕ ಮುಖ್ಯ ಮಂತ್ರಿಗಳು, ಧಾರ್ಮಿಕ ಮುಖಂಡರು, ನ್ಯಾಯ ಮೂರ್ತಿಗಳು, ಎಲ್ಲಾ ಕ್ಷೇತ್ರಗಳ ಮುಖಂಡರು ಭೇಟಿ ಆಗಿ ಅನುಗ್ರಹ ಪಡೆದಿದ್ದಾರೆ.

ಸಕಲ ಶಾಸ್ತ್ರ ಪಾರಂಗತರಾಗಿ, ವೇದಾಂತ ಹೃದ್ಗತ ಮಾಡಿಕೊಂಡು ನೈಜ ಸನ್ಯಾಸಿಯಾಗಿ ಸನಾತನ ಧರ್ಮದ ತೋರುಬೆಳಕಾಗಿ ಅವರು ಮೂಡಿ ಬಂದಿದ್ದಾರೆ. ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠವನ್ನು ಮುನ್ನೆಡೆಸುವ ಸಮರ್ಥ ಪೀಠಾದೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಶಕ್ತಿ ತುಂಬುತ್ತಿದ್ದಾರೆ. ತಮ್ಮ ಶಿಷ್ಯರು ತಮಗೆ ಪ್ರತಿಕ್ಷಣ ಆನಂದ ಉಂಟು ಮಾಡುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿದ್ದುದನ್ನು ಅವರ ಓದಬಲ್ಲರು.

ಶೃಂಗೇರಿಗೆ ಅತ್ಯಂತ ಯೋಗ್ಯ ಉತ್ತರಾಧಿಕಾರಿಯನ್ನು ಜಗನ್ಮಾತೆ ಶಾರದಾಂಬೆ ಅನುಗ್ರಹಿಸಿದ್ದಾಳೆ ಎಂಬ ಜಗದ್ಗುರು ಶ್ರೀ ಭಾರತೀತೀರ್ಥರ ಮಾತು ಅಕ್ಷರಶಃ ಸತ್ಯವಾಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನೆಡೆಯುತ್ತಿದ್ದಾರೆ.

 

ಶ್ರೀ ನಾರಾಯಣರಾವ್‌ ವೈದ್ಯ

ಧರ್ಮದರ್ಶಿಗಳು, ಶೃಂಗೇರಿ ಶಂಕರಮಠ

ಶಾರದಾ ನಗರ, ಗಂಗಾವತಿ.

 

ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ದರ್ಶನ

ಗಂಗಾವತಿ ನಗರಸಭೆ ವ್ಯಾಪ್ತಿಯ ಪಂಪಾ ನಗರದ ಗೋಂದೊಳಿ ಸಮಾಜದ ಶ್ರೀ ಪಾಂಡುರಂಗ ಮಾಹಿತಿ ದೇವಸ್ಥಾನಕ್ಕೆ ರವಿವಾರದಂದು ಆಷಾಢ ಮಾಸದ ಪ್ರಥಮ ಏಕಾದಶಿಯ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಪಾಂಡುರಂಗ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಸೇರಿದಂತೆ ವಿವಿಧ ಹೂಗಳಿಂದ ಅಲಂಕಾರಿಸಲಾಗಿತ್ತು ಎಂದು ತಿಳಿಸಿದರು.

ವಿವಿಧ ಸಮಾಜದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಮಂತ್ರಾಲಯ ಪಾದಯಾತ್ರೆ, ಯೋಧರ ಹಾಗೂ ರೈತರ ಹಿತ ರಕ್ಷಣೆಗಾಗಿ ಪ್ರಾರ್ಥಿಸಿ: ದರೋಜಿ ನಾಗರಾಜ್ ಶೆಟ್ಟಿ

ಗಂಗಾವತಿ 15: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ದಿನದಂದು ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಂಕಲ್ಪ, ಭಜನೆ ಮಾಡುವುದರ ಮುಖಾಂತರ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇಶ ಕಾಯುವ ಯೋಧ ಹಾಗೂ ಅನ್ನದಾತ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ಸುಗಮವಾಗಿ ನಡೆಯಲಿ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡಂತಹ ಎಲ್ಲಾ ಪಾದಯಾತ್ರೆಗಳಿಗೆ ಶ್ರೀ ಗುರು ರಾಯರ ಅನುಗ್ರಹವಾಗಲಿ ಪಾದಯಾತ್ರೆಗೆ ಅನುಕೂಲ ಮಾಡಿದಂತ ದಾನಿಗಳಿಗೆ ರಾಯರ ಆಶೀರ್ವಾದ ಲಭಿಸಲಿ. ಈ ದೇಶದ ಸೈನಿಕರಿಗೆ, ರೈತರಿಗೆ ಗುರು ರಾಯರು ಹೆಚ್ಚಿನ ಶಕ್ತಿ ಕೊಡಲಿ ಎಂದು ಹೇಳಿದರು.

ಗುರುಗಳಾದ ಶ್ರೀ ಗುರು ಭೀಮ್ ಭಟ್ ಜೋಶಿ ಮಾತನಾಡಿ ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಪಾದಯಾತ್ರೆ ಸಮಾಜದ ಸಂಘಟನೆಗೆ ಹಾಗೂ ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಕಲಿಯುಗದ ಕಾಮಧೇನು ಶ್ರೀ ರಾಯರು ಸರ್ವರಿಗೂ ಶಾಂತಿ ಸಮೃದ್ಧಿ ಕರುಣಿಸಲಿ ಧರ್ಮ ರಕ್ಷಣೆಯ ಕಾರ್ಯ ಹೆಚ್ಚು ಹೆಚ್ಚು ನಡೆಯುವಂತಾಗಲಿ. ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಪಾದಯಾತ್ರೆ ದೇಶಕ್ಕೆ ಒಳಿತಾಗಲಿ ಎಂದು ಗುರು ರಾಯರನ್ನು ಪ್ರಾರ್ಥಿಸಿ ಆಶೀರ್ವದಿಸಿದರು.

ಜಿ.ಆರ್.ಎಸ್ ಸತ್ಯನಾರಾಯಣ ಮಾತನಾಡಿ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ನಡೆಯುವ ನಾಲ್ಕನೇ ವರ್ಷದ ಪಾದಯಾತ್ರೆ ಸುಗಮವಾಗಲಿ ಮತ್ತು ರಾಯರು ಅನುಗ್ರಹದಿಂದ ದೇಶಕ್ಕೆ ಒಳಿತಾಗಲಿ ಪಾದಯಾತ್ರೆಯಲ್ಲಿ ಭಾಗವಹಿಸಿದಂತ ಎಲ್ಲಾ ಯಾತ್ರೆಗಳಿಗೆ ರಾಯರು ಹೆಚ್ಚಿನ ಶಕ್ತಿ ಕೊಡಲಿ ದೇಶಕ್ಕೆ ಮಳೆ ಬೆಳೆ ಯಾವುದೇ ಕೊರತೆ ಆಗದಂತೆ ಮತ್ತು ಸೈನಿಕರಿಗೆ. ಕಾರ್ಮಿಕರಿಗೆ. ಬಡವರಿಗೆ. ರೈತರಿಗೆ ಶ್ರೀ ರಾಯರ ಅನುಗ್ರಹವಾಗಲಿ ಹೇಳಿದರು.

ಈ ಸಂದರ್ಭದಲ್ಲಿ ದರೋಜಿ ವೆಂಕಟೇಶ. ಹಣವಾಳ ಚಂದ್ರಶೇಖರ. ಬೆನ್ನೂರು ಪ್ರಹ್ಲಾದ. ಎನ್ ಗಂಗಾಧರ. ದಮ್ಮೂರ್ ಸುರೇಶ. ಬನ್ನಿಗೋಳ ಚಂದ್ರಶೇಖರ. ಚಿದಂಬರ. ಶೇಖರ ಸ್ವಾಮಿ. ಶಂಭುಲಿಂಗ ಹೊಸಳ್ಳಿ. ವೆಂಕಟೇಶ. ಸತ್ಯನಾರಾಯಣ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ. ಭಜನಾ ಮಂಡಳಿ ಸರ್ವ ಸದಸ್ಯರು ಹಾಗೂ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರಾದ ದಮ್ಮೂರು ರುಕ್ಮಿಣಿಮ್ಮ ಹುಷಾರಾಣಿ. ಸಂಪತ್ ಲಕ್ಷ್ಮಿ . ದಮ್ಮೂರ್ ಮಂಜುಳಾ. ದರೋಜಿ ರೇಖಾ ಸೇರಿದಂತೆ ಮಹಿಳಾ ಮಂಡಳಿಯ ಸರ್ವ ಸದಸ್ಯರು ಹಾಗೂ ಸಮಾಜದ ಹಿರಿಯರು ಸೇರಿದಂತೆ ಗಂಗಾವತಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಮಾಜ ಬಾಂಧವರು ಭಾಗವಹಿಸಿದ್ದರು.