ಗಂಗಾವತಿ: ನಗರದ ಹೆಚ್.ಆರ್.ಎಸ್.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಲಿತಾ ಭಾವಿಕಟ್ಟಿಯವರು ಡಿಸೆಂಬರ್-೧೫ ರಂದು ವಿಧಿವಶರಾಗಿದ್ದು, ಇವರ ನಿಧನಕ್ಕೆ ಹಳೆ ವಿದ್ಯಾರ್ಥಿಗಳ ಸಂಘ ತೀವ್ರ ಸಂತಾಪ ಸೂಚಿಸುತ್ತದೆ ಎಂದು ಸಂಘದ ಅಧ್ಯಕ್ಷರಾದ ಎನ್.ಜಿ ಕಾರಟಗಿಯವರು ತಿಳಿಸಿದರು. ಅವರು ಬೆಳಗಾವಿ ಅಧಿವೇಶನದಲ್ಲಿದ್ದು, ಅಲ್ಲಿಂದಲೇ ದೂರವಾಣಿ ಕರೆ ಮೂಲಕ ಸಂತಾಪ ಸೂಚಿಸಿದ್ದಾರೆ. ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಹನುಮಂತಪ್ಪ ನಾಯಕ, ಕಾರ್ಯದರ್ಶಿಯಾದ ಎಸ್.ವಿ ಪಾಟೀಲ್ ಗುಂಡೂರು, ಸದಸ್ಯರುಗಳಾದ ಕನಕಮೂರ್ತಿ, ಹಾಷ್ಮುದ್ದೀನ ವಕೀಲರು, ಸೈಯ್ಯದ ಅಲಿ, ಗಿರೀಶ್ ಬಳ್ಳಾರಿ, ಹುಸೇನಪಾಷಾ, ಹೆಚ್.ಎಂ. ಪಾಟೀಲ್, ಪಿ. ದಶರಥ ಸೇರಿದಂತೆ ಸಂಘದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಂತಾಪ ಸೂಚಿಸುವ ಮೂಲಕ ಮೃತರಿಗೆ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದ ಶ್ರೀ ಆಂಜನೇಯ ಸ್ವಾಮಿಗೆ ಹನುಮದ್ ವೃತಾಚರಣೆಯ ಪ್ರಯುಕ್ತ ತೊಟ್ಟಿಲು ಉತ್ಸವ. ಶುಕ್ರವಾರದಂದು ಸಂಭ್ರಮದಿಂದ ಜರುಗಿತು. ಪ್ರದೀಪ್ ಆಚಾರ್ ಅವರು ಸಂಕಲ್ಪ ತೊಟ್ಟಿಲು ಉತ್ಸವ. ಅಷ್ಟಾವಧಾನ ಸೇವೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರಿವೇರಿಸಿದರು. ಬಳಿಕ ರಾತ್ರಿ ದೀಪೋತ್ಸವ, ಮಹಿಳೆಯರಿಂದ ಪುರುಷರಿಂದ ಭಜನೆ ಇತರೆ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮುರಳಿಧರ್ ಕುಲಕರ್ಣಿ ಮಾತನಾಡಿ ಧಾರ್ಮಿಕ ಆಚರಣೆಯ ಮೂಲಕ ಸಮಾಜದ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಲವು ದಶಕಗಳಿಂದ ದೇವಸ್ಥಾನದಲ್ಲಿ ಹನುಮ ಜಯಂತಿ. ಹನುಮವೃತ್, ಯೋಗೀಶ್ವರ ಯಾಜ್ಞವಲ್ಕ್ಯ ಜಯಂತಿ, ಪ್ರತಿ ಹುಣ್ಣಿಮೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಸುತ್ತಾ ಬರಲಾಗಿದೆ. ಇದರಿಂದ ಸಂಘಟಿತ ಮನೋಭಾವನೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಆಚಾರ್, ಪ್ರಸನ್ನ ಆಲಂಪಲ್ಲಿ, ಪ್ರಸಾದ್, ರಂಗನಾಥ್ ವಟಗಲ್, ವೇಣುಗೋಪಾಲ್, ರಾಘವೇಂದ್ರ ಲೆಕ್ಕಿಹಾಳ, ಲಕ್ಷ್ಮಣ ಜಮಖಂಡಿ, ಸತೀಶ್ ಸಮಾಜದ ಹಿರಿಯರು ಮಹಿಳೆಯರು ಪಾಲ್ಗೊಂಡಿದ್ದರು.
ಗಂಗಾವತಿ: ಡಿಸೆಂಬರ್-೧೪ ಶನಿವಾರ ನಡೆದ ೫ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಸಿಂಧನೂರಿನ ಮಿಲಪ್ ಶಾದಿಮಹಲ್ನಲ್ಲಿ ಡಾ. ರಜಾಕ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ಗಂಗಾವತಿ ಸಂಸ್ಥೆ ವತಿಯಿಂದ ೨೦ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದಾರೆ. ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿನ್ನು, ಭೀಮ್ಸಿಂಗ್, ನಿರ್ಮಲ, ಪ್ರತಾಪ್ ಪಡೆದಿದ್ದು, ಅದೇರೀತಿ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅವೇಜ್, ಚಿರು, ಚರಣ್, ಅಹಾನ್ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮನೋಜ್, ವಿಜಯ್ ಕುಮಾರ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಆಲಿಯಾ, ರಾಘವೇಂದ್ರ, ಆದ್ವಿಕ್, ಯಶಿಕಾ, ಮಣಿಕಂಠ, ಚೇತನ್ ಪಡೆದಿದ್ದು, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಾಮಾರ್ಜುನ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮುತ್ತುರಾಜ್, ವಿಜಯ್, ಪ್ರಥಮ್ ಪಡೆದಿರುತ್ತಾರೆ. ಒಟ್ಟಾರೆಯಾಗಿ ಕಟಾ ವಿಭಾಗದಲ್ಲಿ ೧೦ ಪ್ರಥಮ ಸ್ಥಾನ, ೬ ದ್ವಿತೀಯ ಸ್ಥಾನ, ೪ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೫ ಪ್ರಥಮ, ೪ ದ್ವಿತೀಯ, ೮ ತೃತಿಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು. ಕರಾಟೆ ಶಿಕ್ಷಕರಾದ ಮಂಜುನಾಥ ರಾಠೋಡ್, ಮೀನಾಕ್ಷಿ, ಫಯಾಜ್, ಪ್ರಜ್ವಲ್ ನಿಂಗರಾಜ್, ಆಂಜನೇಯರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗಂಗಾವತಿ: ಹರ ಮುನಿದರು ಗುರು ಕಾಯುವ ಎಂಬ ಮಾತಿನಂತೆ ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗುರುದೋಷ ನಿವಾರಣೆಗೆ ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಗುರುಗಳ ನಾಮಸ್ಮರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು. ಅವರು ಶಂಕರ ಮಠದ ಶಾರದಾ ದೇಗುಲದಲ್ಲಿ ಶೃಂಗೇರಿ ಜಗದ್ಗುರುಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ೧೫ನೇ ವರ್ಷದ ದತ್ತಾತ್ರೇಯ ಜಯಂತೋತ್ಸವ ಉಪಯುಕ್ತ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ದತ್ತ ಕ್ಷೇತ್ರಗಳಾದ ಗಾಣಗಾಪುರ, ರಾಯಚೂರು ಸಮೀಪದ ಕೃಷ್ಣ ನದಿಯ ನಡುಗಡ್ಡೆಯಾದ ಕುರುವಪುರ ಕ್ಷೇತ್ರದ ದರ್ಶನ ಪಡೆಯಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಹಿರಿಯರು ಕಳೆದ ೧೫ ವರ್ಷದ ಶ್ರೀ ದತ್ತಾತ್ರೇಯ ಜಯಂತಿ, ಗುರುದ್ವಾದಶಿ ಆಚರಣೆಯ ಮೂಲಕ ಗುರುಗಳ ಕೃಪೆಗೆ ಪಾತ್ರರಾಗುತ್ತಾ ಬರಲಾಗಿದೆ ಎಂದು ತಿಳಿಸಿದರು. ಸಮಾರಂಭದ ಸಂಯೋಜಕರಾದ ಜಗನ್ನಾಥ ರಾವ್ ಅಳವಂಡಿಕರ ಮಾತನಾಡಿ, ದತ್ತ ಜಯಂತಿ ಉತ್ಸವಕ್ಕೆ ಶೃಂಗೇರಿ ಉಭಯ ಜಗದ್ಗುರುಗಳ ಪ್ರೇರಣೆ ಸಹಕಾರದಿಂದಾಗಿ ಸಂಪೂರ್ಣ ಯಶಸ್ಸಿಗೊಂಡಿದೆ. ಧಾರ್ಮಿಕತೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ ಎಂದರು. ಸಮಾರಂಭಕ್ಕೆ ಪೂರ್ವದಲ್ಲಿ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಾಲಕಿ ಉತ್ಸವ, ತೊಟ್ಟಿಲು ಉತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವೇದಮೂರ್ತಿ ಮಹೇಶಭಟ್ ಜೋಶಿ ನೆರವೇರಿಸಿದರು. ಚಿಕ್ಕಮಕ್ಕಳಿಂದ, ಹಿರಿಯರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು. ಈ ಸಂದರ್ಭದಲ್ಲಿ ಶಂಕರ ಮಠದ ಸೇವಾ ಟ್ರಸ್ಟ್ ಹಿರಿಯರಾದ ರಾಘವೇಂದ್ರ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶ್ರೀಪಾದರಾವ್ ಮುಧೋಳಕರ್, ದತ್ತಾತ್ರೇಯ ಹೊಸಳ್ಳಿ, ವಿಶ್ವನಾಥ್ ಅಳವಂಡಿಕರ್, ಸುಧಾಕರ್ ಜೋಶಿ, ಸೇರಿದಂತೆ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.
ಡಿ.13 ಶುಕ್ರವಾರರಂದು ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್ ಹಾಗೂ ಕಿಷ್ಕಿಂದ ಯುವ ಚಾರಣ ಬಳಗ ವತಿಯಿಂದ ನಿರ್ಮಲಾ ತುಂಗಭದ್ರಾ ಅಭಿಯಾನ ಕುರಿತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣವಾಳದಲ್ಲಿ ಪ್ರಾರ್ಥನಾ ಸಮಯದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ, ಜಲಮೂಲ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು . ಈ ಸಮಯದಲ್ಲಿ ಶಿಕ್ಷಕರಾದ ರತ್ನಾ ಕೊಟ್ರಶೆಟ್ಟಿ, ಮೇನಕಾ, ಶರಣಪ್ಪ, ಮೈಲಾರಪ್ಪ ಬೂದಿಹಾಳ ಮತ್ತು ಅತಿಥಿ ಶಿಕ್ಷಕರು ಹಾಜರಿದ್ದರು.
ಪ್ರತಿ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥಗಳಿವೆ. ಆಯಾ ಧರ್ಮಿಯರು ತಮ್ಮ ತಮ್ಮ ಧರ್ಮಗ್ರಂಥಗಳ ಸಂಹಿತೆಯನ್ವಯ ನಡೆಯಬೇಕೆಂಬ ಆಶಯವಿದೆ. ಧರ್ಮಗ್ರಂಥಗಳ ಮೌಲ್ಯಗಳು ಎಷ್ಟೇ ಶ್ರೇಷ್ಠವಾಗಿದ್ದರೂ ಅದು ಅನ್ಯಧರ್ಮಿಯರಿಗೆ ಗೌಣ ಆದರೆ ಸಂವಿಧಾನ ಮಾತ್ರ ಸಮಸ್ತ ಜನತೆಗೆ ಅನ್ವಯಿಸುವ ರಾಷ್ಟ್ರೀಯ ಧರ್ಮಗ್ರಂಥವಾಗಿ ಎಲ್ಲಾ ಧರ್ಮಗ್ರಂಥಗಳಿಗಿಂತಲೂ ಮಿಗಿಲಾಗಿದೆ. ಹಾಗಾಗಿ ಎಲ್ಲರೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಪ್ರಾಚಾರ್ಯ, ಕನ್ನಡ ಪುಸ್ತಕ ಪ್ರಾದಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟರು.
ಅವರು ಗಂಗಾವತಿಯ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಅಜೀಂ ಪ್ರೇಮಜೀ ಫೌಂಡೇಷನ್ ನ ಸಹಯೋಗದಲ್ಲಿ ನಡೆದ ” ಭಾರತದ ಸಂವಿಧಾನದ ಮೌಲ್ಯಗಳು” ಕುರಿತು ದಿನಾಂಕ 10 ಮತ್ತು 11 ರಂದು ನಡೆದ ಎರಡು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ಕಾರ್ಯಾಗಾರದಲ್ಲಿ ಸಂವಿಧಾನದ ಮಹತ್ವ, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ಸಂವಿಧಾನದೊಂದಿಗೆ ಅಳವಡಿಸಿಕೊಳ್ಳಬೇಕಾದ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ತತ್ವ,ಸಾಮಾಜಿಕ ಜವಾಬ್ದಾರಿ , ಯಶಸ್ವಿ ಜೀವನ ರೂಪಿಸಿಕೊಳ್ಳಲು ಬೇಕಾದ ಅಂಶಗಳು ಮುಂತಾದ ಸಂಗತಿಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಯಿತು. ಕಾರ್ಯಾಗಾರದ ಪ್ರಯೋಜನೆ ಮತ್ತು ಅನುಭವಗಳನ್ನು ವಿದ್ಯಾರ್ಥಿನಿಯರು ಹಂಚಿಕೊಂಡರು. ಅಜೀಂ ಫ್ರೇಮ್ ಜೀ ಫೌಂಡೇಷನ್ನಿನ ಸಂಪನ್ಮೂಲ ವ್ಯಕ್ತಿಗಳಾದ ಹಮೀದ್, ಸತೀಶ, ಭರತೇಶ, ಉಮೇಶ ಮತ್ತು ಸವಿತ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಪ್ರೊ. ಜಿ.ಬಸವರಾಜ, ಪ್ರೊ.ಚಂದ್ರಶೇಖರ ಉಪಸ್ಥಿತರಿದ್ದರು.
ಗಂಗಾವತಿ: ಇಂದು ಲಯನ್ಸ್ ಕ್ಲಬ್ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಂವಾದ ಅತ್ಯಂತ ಯಶಸ್ವಿಯಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಮಾಧವನ್ ಸಿ.ಪಿ ಹಾಗೂ ರಾಘವ್ ಗೋ-ಸಿರಿ ಅವರು ತುಂಗಭದ್ರಾ ಅಭಿಯಾನದ ಪಾದಯಾತ್ರೆ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಪರಿಸರವಾದಿಗಳಾದ ಡಾ|| ಎ. ಸೋಮರಾಜು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ಜಿ. ಚಂದ್ರಪ್ಪ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು. ಗಂಗಾವತಿಯ ಪ್ರಮುಖ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ಸ್ನೇಹಬಳಗದ ಅಧ್ಯಕ್ಷರಾದ ಶ್ಯಾಮಮೂರ್ತಿ ಐಲಿ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನೂಲ್ವಿ, ದಲಿತ ಸಾಹಿತ್ಯ ಪರಿಷತ್ತಿನ ಛತ್ರಪ್ಪ ತಂಬೂರಿ, ಶರಣ ಸಾಹಿತ್ಯ ಪರಿಷತ್ತಿನ ಜೆ. ನಾಗರಾಜ, ಜೈನ ಸಮಾಜದ ಉಗಮರಾಜ ಬಂಬ್, ಆಯುಷ್ ಅಧ್ಯಕ್ಷರಾದ ಡಾ|| ಬಸವರಾಜ, ಕಾರ್ಯದರ್ಶಿ ಡಾ|| ಸುನೀಲ್ ಅರಳಿ, ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಸೌಹಾರ್ಧ ಸಹಕಾರಿ ಒಕ್ಕೂಟದ ಸುಧಾಕರ, ಸತೀಶ್, ಕ್ಲೀನ್ ಗ್ರೀನ್ ಶ್ರೀರಾಮನಗರದ ಎಂ.ಡಿ ರಫಿ, ಮೌಲಾಸಾಬ್, ನೌಕರ ಸಂಘದ ಅಧ್ಯಕ್ಷರಾದ ಶಿವಶಂಕರ ಹಾಗೂ ನಿವೃತ್ತ ನೌಕರರ ಸಂಘದ ಶರಭಣ್ಣ, ಅಲೆಮಾರಿ ಸಮುದಾಯದ ಅಧ್ಯಕ್ಷ ಆರ್. ಕೃಷ್ಣ, ಭಾರತೀಯ ಪ್ರಜಾಸೇನೆಯ ಬಸವರಾಜ ಮ್ಯಾಗಳಮನಿ, ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷರಾದ ಜಂಬಣ್ಣ ಐಲಿ, ಸೇಂಟ್ ಫಾಲ್ಸ್ ಶಿಕ್ಷಣ ಸಂಸ್ಥೆಯ ಸರ್ವೇಶ್ ವಸ್ತçದ್, ಶರಣ ಕಲಾಬಳಗದ ರಮೇಶ ಗಬ್ಬೂರು, ಹೀಗೆ ೩೫ ಕ್ಕಿಂತ ಹೆಚ್ಚಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ|| ಶಿವಕುಮಾರ ಮಾಲಿಪಾಟೀಲ್ ಸ್ವಾಗತಿಸಿದರು. ಪವನಕುಮಾರ ಗುಂಡೂರು ವಂದನಾರ್ಪಣೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಮಂಜುನಾಥ ಕಟ್ಟಿಮನಿ, ವಿನಯ ಪಾಟೀಲ್ ಹಾಗೂ ಗಂಗಾವತಿ ಚಾರಣ ಬಳಗದ ಮಂಜುನಾಥ ಗುಡ್ಲಾನೂರು, ಮೈಲಾರಪ್ಪ ಬೂದಿಹಾಳ. ಉಲ್ಲಾಸ್, ಕೆ.ವೈ.ಟಿ.ಸಿ ಪ್ರಮುಖರಾದ ಅರ್ಜುನ್, ಸೌಮ್ಯ, ಪಂಪಾಪತಿ, ಪ್ರಕಾಶ, ಗ್ರಾಮೀಣ ಭಾರತೀಯ ರೆಡಿಯೋದ ರಾಘವೇಂದ್ರ ತೂನಾ ಭಾಗವಹಿಸಿದ್ದರು.
ಗಂಗಾವತಿ: ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆಯಾಗಿದೆ. ಈ ಭಾಷೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದೇವನಗರಲಿಪಿ ಎಂದು ಕರೆಯುತ್ತಾರೆ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಷೆಯು ಯಾವುದೇ ಮತ, ಧರ್ಮಕ್ಕೆ ಮೀಸಲಾಗಿರುವುದಿಲ್ಲ. ಯಾರು ಬೇಕಾದರೂ ಕಲಿಯಬಹುದು, ಇದಕ್ಕೆ ವಯೋಮಿತಿ ಇರುವುದಿಲ್ಲ ಎಂದು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಶರಣಬಸವ ತಾತನವರು ತಿಳಿಸಿದರು. ಅವರು ಡಿಸೆಂಬರ್-೮ ಭಾನುವಾರ ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಈ ಸಂಸ್ಕೃತ ಸಂಭಾಷಣಾ ಶಿಬಿರವು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರ ಸಹಯೋಗದಲ್ಲಿ ನವೆಂಬರ್-೨೮ ರಿಂದ ೧೧ ದಿನಗಳವರೆಗೆ ೧ನೇ ತರಗತಿಯಿಂದ ೯ನೇ ತರಗತಿ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ಈ ೧೧ ದಿನಗಳ ಪರ್ಯಂತ ಸಂಸ್ಕೃತ ಶಿಕ್ಷಕರಾದ ಶ್ರೀಮತಿ ಪಂಪಾದೇವಿಯವರು ನಡೆಸಿಕೊಟ್ಟಿದ್ದು, ಇವರಿಗೆ ಗಣ್ಯವ್ಯಕ್ತಿಗಳಿಂದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಮಾಡಿದರು, ಅಧ್ಯಕ್ಷತೆಯನ್ನು ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವಕೀಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಸಂಡೂರು, ಸಮಾಜ ಸೇವಕರಾದ ಹಿರೇಜಂತಕಲ್ಲಿನ ಎಸ್.ಬಿ ಹಿರೇಮಠ, ಉಪನ್ಯಾಸಕರಾದ ವಿರುಪಾಕ್ಷಯ್ಯ, ಶಿಕ್ಷಕರಾದ ದುರ್ಗಾಪ್ರಸಾದ, ಕೆ.ಎಸ್.ಆರ್.ಟಿ.ಸಿ ನಿವೃತ್ತ ನಿರ್ವಾಹಕರಾದ ಬಸವನಗೌಡ ಹೊಸಕೇರಿ, ಶಿಕ್ಷಕಿಯಾದ ಶೃತಿ ತಾವರಗೇರಾ ಆಗಮಿಸಿದ್ದರು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಅರಳಹಳ್ಳಿಯ ಬೃಹನ್ಮಠದ ರೇವಣಸಿದ್ದಯ್ಯ ತಾತನವರು ಮಾಡಿದರು.
ಗಂಗಾವತಿ: ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದರೆ ನಾವು ಅಂದುಕೊಂಡಿದ್ದೆಲ್ಲ ಸಾಧಿಸಲು ಸಾಧ್ಯ ಎಂದು ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಬಂತೇಜಿ ಹೇಳಿದರು. ಗಂಗಾವತಿ ನಗರದ ೨೮ನೇ ವಾರ್ಡ್ ಚಲವಾದಿ ಓಣಿ, ಹಿರೇಜಂತಕಲ್ ಬೌದ್ಧ ಅನುಯಾಯಿಗಳು ಹಮ್ಮಿಕೊಂಡಿದ್ದ ಸನ್ನತಿ ಪಂಚಶೀಲ ಪಾದಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿ ಬಂತೇಜಿ ಪಂಚಶೀಲ ಪಠಣ ಮಾಡಿ ಅದರ ಮಹತ್ವವನ್ನು ತಿಳಿಸಿದರು. ಯಾವುದೇ ವ್ಯಕ್ತಿ ಕಳ್ಳತನ ಮಾಡಬಾರದು. ಮೋಸ, ವಂಚನೆ ಇಂತಹ ಕೆಟ್ಟ ದುಶ್ಚಟಗಳನ್ನು ಮಾಡಬಾರದೆಂದು ಬೌದ್ಧ ಬಂತೇಜಿ ಹೇಳಿದರು. ಈ ಪಂಚಶೀಲಯಾತ್ರೆಯ ಉದ್ದೇಶ ಬೌದ್ಧ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಬೌದ್ಧ ಬಂತೇಜಿಯವರು ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಸನ್ನತ್ತಿ ಗ್ರಾಮದಿಂದ ಬೆಂಗಳೂರು ವಿಧಾನಸೌಧದವರೆಗೆ, ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಕೈಗೊಂಡಿರುವ ಪಂಚಶೀಲ ಉದ್ದೇಶವು ವಿಶೇಷವಾಗಿ ಸಾಮ್ರಾಟ ಆಶೋಕ ಚಕ್ರವರ್ತಿಯ ಕಾಲದಲ್ಲಿ ಕೆತ್ತನೆಯಾಗಿರುವ ಶಿಲಾ ಶಾಸನಗಳು ಇರುವ ಸ್ಥಳಗಳಿಗೆ ಕಡ್ಡಾಯವಾಗಿ ಬೇಟಿಕೊಟ್ಟು, ದಾರಿಯುದ್ದಕ್ಕೂ ನಿಗದಿತ ಗ್ರಾಮಗಳಲ್ಲಿ ರಾತ್ರಿಹೊತ್ತು ವಸತಿ ಇದ್ದು, ಸಾಗುತ್ತಿರುವ ಪಾದಯಾತ್ರೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಉದ್ದೇಶಿತ ಸನ್ನತ್ತಿ ಗ್ರಾಮದಲ್ಲಿ ಬೌದ್ಧ ನಿಗಮ ವಿಹಾರ ಸ್ಥಾಪನೆ, ಕರ್ನಾಟಕದಲ್ಲಿನ ಶಿಲಾಶಾಸನಗಳನ್ನು ಆಭಿವೃದ್ಧಿಪಡಿಸುವುದು, ಬೌದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರೆಯುದ್ದಕ್ಕೂ ಇರುವ ಹಳ್ಳಿಗಳ, ಗ್ರಾಮಗಳ, ತಾಲೂಕುಗಳ, ಜಿಲ್ಲಾ ನಗರಗಳ ಬೌದ್ಧ ಉಪಾಸಕರು, ಅನುಯಾಯಿಗಳು, ರಾಜಕಾರಣಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದೆ ಎಂದು ಪಾದಯಾತ್ರೆ ಕೈಗೊಂಡಿರುವ ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ನಗರದ ಪಂಚಶೀಲ ಪಾದಯಾತ್ರೆಯಲ್ಲಿ ತಿಳಿಸಿದರು. ಮುಂದಿನ ಪಾದಯಾತ್ರೆಯಲ್ಲಿ ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿನ ಶಿಲಾ ಶಾಸನಗಳನ್ನು ನೋಡಿಕೊಂಡು ಜನವರಿ-೨೪ ರಂದು ವಿಧಾನಸೌಧಕ್ಕೆ ತಲುಪಿ ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು, ಅಂದಿನ ದಿನ ೫೦ ಸಾವಿರಕ್ಕೂ ಹೆಚ್ಚು ಜನ ಬೌದ್ಧ ಉಪಾಸಕರು, ಅನುಯಾಯಿಗಳು ಬೆಂಗಳೂರಿನಲ್ಲಿ ಸೇರಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಅಧ್ಯಕ್ಷರಾದ ಹರ್ಷಪ್ಪ ಕೋರಿ, ಚಲವಾದಿ ಸಮಾಜದ ಗೌರವಾಧ್ಯಕ್ಷ ಹುಲುಗಪ್ಪ ಮಾಗಿ, ಹುಸೇನಪ್ಪ ಹಂಚಿನಾಳ ವಕೀಲರು, ಲೋಕಪ್ಪ, ರಮೇಶ್ ಗೊಬ್ಬೂರು, ಬಸಪ್ಪ ಆಗೋಲಿ, ಲಿಂಗಣ್ಣ ಜಂಗಮರಹಳ್ಳಿ, ಭೀಮೇಶ್ ಕರಿಮೂತಿ, ಮರಿಸ್ವಾಮಿ ಬರಗೂರು, ತಿಮ್ಮಣ್ಣ ವಕೀಲರು ಮುಂಡೋಸ್, ರಾಮಣ್ಣ ಕಿರಿಕಿರಿ, ರವಿ ಆರತಿ, ಮಲ್ಲಿಕಾರ್ಜುನ್ ಗೋಟೂರು, ವೀರೇಶ್ ಆರತಿ, ಆಂಜನೇಯ ಸೋಮನಾಳ, ಹುಲ್ಲೇಶ್ ಬಂಡಿ ಸೇರಿದಂತೆ ಅನೇಕ ಬೌದ್ದ ಅನುಯಾಯಿಗಳು ಭಾಗವಹಿಸಿದ್ದರು.
ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಗುರು ಮೌನೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್-೯ ಸೋಮವಾರ ಸಂಜೆ ೭:೩೦ ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲ ರವರ ನೇತೃತ್ವದಲ್ಲಿ ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯಕಾರಿ ಮಂಡಳಿ ರಚನೆ ಮಾಡಿ ಮಾತನಾಡಿದ ನಾಗೇಶಕುಮಾರ ಕಂಸಾಲರವರು ನಮ್ಮ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜವನ್ನು ಬಲಪಡಿಸಿ ಶ್ರೇಯೋಭಿವೃದ್ದಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು, ಮುಖಂಡರು, ಕಾರ್ಯಕಾರಿ ಮಂಡಳಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ಒಗ್ಗೂಡಿಸಿ ಬಲಪಡಿಸಬೇಕೆಂದು ಕರೆಕೊಟ್ಟರು. ನೂತನ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷರಾಗಿ ಜಿ. ಮಂಜುನಾಥ ಸರಾಫ್, ಅಧ್ಯಕ್ಷರಾಗಿ ಕಾಳೇಶ ಬಡಿಗೇರ, ಉಪಾಧ್ಯಕ್ಷರುಗಳಾಗಿ ಮನೋಹರ ವಿಶ್ವಕರ್ಮ ಮಲಕನಮರಡಿ, ಗುರುನಾಥ ಬಡಿಗೇರ ಗಂಗಾವತಿ, ಕಾರ್ಯದರ್ಶಿಯಾಗಿ ಚಿದಂಬರ ದಿಕ್ಷಿತ್, ಸಹಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ಪತ್ತಾರ, ಖಜಾಂಚಿಯಾಗಿ ದೇವೆಂದ್ರಪ್ಪ ಬಡಿಗೇರ ಹಣವಾಳ, ನಿರ್ದೇಶಕರುಗಳಾಗಿ ಗುರಪ್ಪ ಬಡಿಗೇರ ಹೊಸಳ್ಳಿ, ಬಸವರಾಜ ಬಡಿಗೇರ, ಸಣ್ಣೆಪ್ಪ ಕಮ್ಮಾರ, ವೀರೇಶ ಮಾಚಳ್ಳಿ, ಪ್ರಶಾಂತ ಸುತಾರ, ಪ್ರಶಾಂತ ಸೋನಾರ ಶಿಲ್ಪಿ, ರುದ್ರೇಶ ಬಡಿಗೇರ ಆರ್ಹಾಳ, ಮಲ್ಲಿಕಾರ್ಜುನ ಆಚಾರ ಇವರುಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ವಿ ಸರ್ವಜ್ಞ ಆಚಾರ್, ಶಂಕ್ರಪ್ಪ ಮನವಾಚಾರ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರು, ಮಹಿಳಾ ಮಂಡಳಿ ಸದಸ್ಯರು, ಯುವಕರು ಉಪಸ್ಥಿತರಿದ್ದರು.