ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು: ಕೆ. ನಿಂಗಜ್ಜ

ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಸೆಪ್ಟೆಂಬರ್-೨೨ ರಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಗಂಗಾವತಿ ತಾಲೂಕ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ ವಹಿಸಿ ಅವರು ಪ್ರಾಸ್ತಾವಿಕ ಮಾತನಾಡಿ, ಈ ಸಂಘಕ್ಕೆ ೭೦-೮೦ ವರ್ಷಗಳ ಇತಿಹಾಸವಿದ್ದು, ೧೯೩೬ ರಲ್ಲಿ ಕೇವಲ ತಾಲೂಕು ಸಂಘಟನೆಯಾಗಿ, ಸ್ವಾತಂತ್ರ್ಯಾ ನಂತರ ಆಗಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಅವರಿಂದ ಜಿಲ್ಲಾ ಸಂಘವಾಗಿ, ಈಗ ರಾಜ್ಯಮಟ್ಟದ ಸಂಘವಾಗಿ ಬೆಳೆದಿದೆ. ಇತ್ತೀಚೆಗೆ ಈ ಸಂಘವು ಉದ್ಘಾಟನೆಗೊಂಡು ರಾಜ್ಯದಲ್ಲಿ ಮೈಸೂರು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಎಂದು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸಂಘಟನೆಯನ್ನು ಬೆಳೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಕಿರುಕುಳಗಳು, ಅವರ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದಿಂದ ಅವರಿಗೆ ಸಿಗಬೇಕಾದ ಭದ್ರತೆಯ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರಲು ಸಂಘವು ಸಿದ್ಧವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಅವರು ಮಾತನಾಡಿ, ಪತ್ರಿಕಾ ಮಾಧ್ಯಮದ ಇತಿಹಾಸ ಕುರಿತು ತಿಳಿಸುತ್ತಾ, ಮಾದ್ಯಮ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿ, ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಬಹಳ ಪ್ರಾಮುಖ್ಯತೆ ಇದ್ದು, ಅದರ ಪ್ರಾಮುಖ್ಯತೆಯನ್ನು ಪತ್ರಕರ್ತರು ಉಳಿಸಿಕೊಂಡು ಹೋಗಬೇಕು. ಈಗಿನ ಆಧುನಿಕ ಜಗತ್ತಿನಲ್ಲಿ ಎಷ್ಟೇ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಿದ್ದರೂ, ಮುದ್ರಣಾ ಮಾಧ್ಯಮಕ್ಕೆ ಅದರದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ ಎಂದು ಉಪನ್ಯಾಸ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು, ನಗರಸಭೆಯ ಅಧ್ಯಕ್ಷೆಯಾದ ಶ್ರೀಮತಿ ಹೀರಾಬಾಯಿ ಸಿಂಗ್, ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಜಿ. ಶ್ರೀಧರ ಕೇಸರಹಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಬಿ ಖಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ. ನಟೇಶ್, ಲಿಟಲ್ ಹಾರ್ಟ್ಸ್ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಹಿರಿಯ ಕಾರ್ಮಿಕ ಮುಖಂಡ ಜೆ. ಭಾರಧ್ವಾಜ್, ಕಾಂಗ್ರೆಸ್ ಮುಖಂಡ ಎಸ್.ಬಿ ಖಾದ್ರಿ, ಕನ್ನಡಪರ ಸಂಘಟನೆ ಮುಖಂಡ ಸೈಯ್ಯದ್ ಜಿಲಾನಿ ಪಾಷಾ ಖಾದ್ರಿ, ದಲಿತಪರ ಸಂಘಟನೆಗಳ ಮುಖಂಡರಾದ ಹುಲುಗಪ್ಪ ಮಾಗಿ, ಹಂಪೇಶ ಹರಿಗೋಲು, ಶಂಕರ್, ಹುಸೇನಪ್ಪ ಹಂಚಿನಾಳ, ಮಂಜುನಾಥ ಕಳ್ಳಿಮನಿ ಸೇರಿದಂತೆ ಇನ್ನಿತರರು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಮೇಶ ಕೋಟಿಯವರಿಗೆ ರಾಜ್ಯಾಧ್ಯಕ್ಷರು ನೇಮಕಾತ್ರಿ ಪತ್ರ ವಿತರಣೆ ಮಾಡಿದರು. ಅದೇರೀತಿ ಗಂಗಾವತಿ ತಾಲೂಕು ಅಧ್ಯಕ್ಷ ಸಿ.ಡಿ ರಾಮಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನಬಸವ ಮಾನವಿ ಅವರುಗಳಿಗೆ ಜಿಲ್ಲಾ ಘಟಕದಿಂದ ನೇಮಕಾತಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಸಂತಕುಮಾರ, ರಾಜ್ಯ ಪದಾಧಿಕಾರಿಯಾದ ಪ್ರಶಾಂತ್ ರವರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ, ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಉಪಸ್ಥಿತರಿದ್ದರು.

ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ರಾಜ್ಯ ಘಟಕದಿಂದ ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಹೊಸಕೇರಾ ಅವರಿಗೆ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕೋಟಿ ಅವರಿಗೆ ಹಾಗೂ ಗಂಗಾವತಿ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ವಿವಿಧ ಜಿಲ್ಲೆ, ವಿವಿಧ ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕರಾದ ಶಿವಾನಂದ ತಿಮ್ಮಾಪುರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ರಮೇಶ ಕೋಟಿ ಸ್ವಾಗತಿಸಿದರೆ, ಜೆ. ಶ್ರೀನಿವಾಸ ವಂದನಾರ್ಪಣೆ ಸಲ್ಲಿಸಿದರು.

ನೂತನವಾಗಿ ರಚನೆಗೊಂಡ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನವನ್ನು ಒದಗಿಸಿಕೊಡಲು ಶಾಸಕರಿಗೆ ಮನವಿ.

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ರಚನೆಯಾಗಿ ಉದ್ಘಾಟನೆಗೊಂಡು, ಈ ಸಂಘದ ಅಂಗಸಂಸ್ಥೆಗಳಾಗಿ ಹಲವು ಜಿಲ್ಲಾ ಸಮಿತಿಗಳು ಹಾಗೂ ತಾಲ್ಲೂಕು ಸಮಿತಿಗಳು ಈಗಾಗಲೇ ರಚನೆಯಾಗಿವೆ. ಅದರಂತೆ ನಮ್ಮ ಗಂಗಾವತಿ ತಾಲ್ಲೂಕು ಸಮಿತಿಯೂ ಕೂಡ ಸಕ್ರಿಯಗೊಂಡಿದ್ದು ಮತ್ತು ನಮ್ಮ ಸಂಘದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿದೆ. ಕೂಡಲೇ ನಮ್ಮ ಸಂಘಕ್ಕೆ ಪತ್ರಿಕಾ ಭವನದ (PRESS HALL) ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೆಪ್ಟೆಂಬರ್-೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಡೆದ ತಾಲೂಕ ಸಾರ್ವಜನಿಕ ಧ್ವಜಾರೋಹಣದ ಸಂದರ್ಭದಲ್ಲಿ ಶಾಸಕರಾದ ಜನಾರ್ಧನರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು ಎಂದು ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರಾದ ಸಿ.ಡಿ ರಾಮಕೃಷ್ಣ ತಿಳಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರಸ್ತುತ ನಮಗೆ ಯಾವುದೇ ಸ್ವಂತ ಕಟ್ಟಡ ಅಥವಾ ಸಭಾಂಗಣವಿಲ್ಲದ ಕಾರಣದಿಂದಾಗಿ, ವಿವಿಧ ಸಭೆ ಹಾಗೂ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಲು ತೊಂದರೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಸರಕಾರಿ ಕಚೇರಿ ವ್ಯಾಪ್ತಿಯಲ್ಲಿ ಪತ್ರಿಕಾ ಭವನವನ್ನು ಒದಗಿಸಿಕೊಡಬೇಕಾಗಿ ಶಾಸಕರಲ್ಲಿ ವಿನಂತಿಸಿಕೊಂಡರು. ಇದರಿಂದ ತಾಲ್ಲೂಕು ಮಟ್ಟದ ಪತ್ರಿಕೋದ್ಯಮ ಚಟುವಟಿಕೆಗಳಿಗೆ ಸೇರಿದಂತೆ ಪತ್ರಕರ್ತರಿಗೆ ಒಂದು ಕಾರ್ಯಾಲಯದ ವ್ಯವಸ್ಥೆ ಸಿಕ್ಕಂತಾಗುತ್ತದೆ. ಆದಷ್ಟು ಬೇಗ ನಮಗೆ ಪತ್ರಿಕಾ ಭವನ ವ್ಯವಸ್ಥೆ ಮಾಡಿಕೊಡಬೇಕೆಂದು ಸಂಘಟನೆಯ ಎಲ್ಲಾ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಶಾಶಕರು, ನಿಮಗೆ ಆದಷ್ಟು ಬೇಗನೇ ಪತ್ರಿಕಾ ಭವನದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್ ಕೋಟೆ. ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಆರ್ ಚನ್ನಬಸವ ಮಾನ್ವಿ, ಸದಸ್ಯರಾದ ಮಂಜುನಾಥ ವಣಗೇರಿ ಸೇರಿದಂತೆ ನಮ್ಮ ಸಂಘಕ್ಕೆ ಬೆಂಬಲ ನೀಡಿದ ಸುರೇಶ ಹಾಗೂ ಇತರ ಸದಸ್ಯರು ಇದ್ದರು.

ಹಿರೇಕೊಳಚಿ ಶಾಲೆಯಲ್ಲಿ ಹೈದ್ರಾಬಾದ ಕನಾ೯ಟಕ ವಿಮೋಚನಾ ದಿನಾಚರಣೆ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಳಚಿಯಲ್ಲಿ ಸೆಪ್ಟೆಂಬರ್‌-17 ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಗ್ರಾಮದ ಮಾಜಿ ಅಧ್ಯಕ್ಷರು ಶ್ರೀಮತಿ ಆಲೂರು ಗಂಗಮ್ಮ ಹಾಗೂ ಗ್ರಾಮಪಂಚಾಯತಿ ಸದಸ್ಯೆ ಶ್ರೀಮತಿ ಓಬಳ್ದಾರ್ ರೇಖಾ ರವರು ನೆರವೇರಿಸಿದರು. ಜೊತೆಗೆ ಇಂದು ವಿಶ್ವಕರ್ಮ ಜಯಂತಿಯನ್ನು ಇದೇ ಸಂದಭ೯ದಲ್ಲಿ ಪೂಜಾ.ಕಾರ್ಯಕ್ರಮದ ಮೂಲಕ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಮುಖ್ಯ ಗುರುಗಳು ಶ್ರೀ ಮಧುನಾಯ್ಕ ಎಲ್ ರವರು ವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಈ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕನಕಗಿರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ

ಇಂದು ಕನಕಗಿರಿ ತಾಲೂಕು ಪಂಚಾಯತ್‌ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ರಾಜಶೇಖರ್‌ ಅವರು ನೆರವೇರಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಕೆಡಿಪಿ ಸದಸ್ಯರು, ತಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ್ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ನಡೆಯಿತು.

ಹಾಗೂ, ಆಶಾನಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಹಾಸನದ ಸಾಹಿತಿಗಳು, ನಾಟಕಕಾರರು ಶ್ರೀ ಗೊರೂರು ಅನಂತರಾಜುರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಶ್ರೀ ಮೈಸೂರು ರಮಾನಂದ್ ಅವರು ನೀಡಿ ಸನ್ಮಾನಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಗೊರೂರು ಅನಂತರಾಜು.

ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದೇ ದಿನಾಚರಣೆಯ ಮೂಲ ಉದ್ದೇಶ… ನೇತ್ರಾಜ ಗುರುವಿನ ಮಠ.

ಗಂಗಾವತಿ: ಭಾರತ ರತ್ನ ಸಿವಿಲ್ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸಪ್ಟೆಂಬರ್ 15ರಂದು ಆಚರಿಸಲಾಗುತ್ತಿದೆ.

ಇದರ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಂಶೋಧನೆ ಬೆಳೆಸುವುದು ಎಂದು ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ನೇತ್ರಾಜ ಗುರುವಿನ ಮಠ ಹೇಳಿದರು.

ಅವರು ಶಾಲೆಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಪ್ರಯುಕ್ತ ಸರ್ ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಾ ಭಾರತವು ವೈಜ್ಞಾನಿಕ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡುವುದರ ಮೂಲಕ ಸಾಧನೆಯ ಹಾದಿಯಲ್ಲಿದೆ ಎಂಬುದಕ್ಕೆ ಇತ್ತೀಚಿನ ಉಡಾವಣೆಗಳು ಸಾಕ್ಷಿಯಾಗಿದೆ.

ಭೂಗೋಳ, ಖಗೋಳ, ಸೂರ್ಯ-ಚಂದ್ರ, ಹಗಲು-ರಾತ್ರಿ, ಗ್ರಹಣ ಮತ್ತಿತರ ವಿಷಯಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನೇತ್ರಾಜ ಗುರುವಿನ ಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಗೊತ್ತಿದ್ದ ವಿಷಯದಿಂದ ಗೊತ್ತಿಲ್ಲದ ವಿಷಯಗಳ ಕಡೆಗೆ ಸಾಗುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ವಿಶ್ವದ ವಿಸ್ಮಯಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಯ ವಸ್ತು ಪ್ರದರ್ಶನವನ್ನು ಪ್ರದರ್ಶಿಸಿದರು.. ಶಾಲಾ ಶಿಕ್ಷಕರಾದ ಚಂಪಾರಾಣಿ ಕು ಮುದಿನಿ ಸಹನಾ, ಪೂರ್ಣಿಮಾ, ಗೌಶಿಯ ಶಿಕ್ಷಕರು ಸೇರಿದಂತೆ ಪಾಲಕರುಗಳಾದ ಸುನಿಲ್ ವೈದ್ಯ, ವೆಂಕಟೇಶ, ಲತಾ, ಅಪಾರ ಪಾಲಕರು ಪಾಲ್ಗೊಂಡಿದ್ದರು.

ಜಂಗಮರ ಕಲ್ಗುಡಿ ಹಾಗೂ ಮರಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ

ಗಂಗಾವತಿ: ಶನಿವಾರ ಸಾಯಂಕಾಲ ಕಲ್ಗುಡಿ ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮುಖಂಡರಾದ ಪ್ರಸಾದ್ ಅವರು ಮಾತನಾಡಿ ತುಂಗಭದ್ರಾ ನದಿಯ ಋಣದಲ್ಲಿ ನಾವಿದ್ದೇವೆ, ಆ ಪಾದಯಾತ್ರೆಯಲ್ಲಿ ಎಲ್ಲಾ ಯುವಕರು, ರೈತರು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಮರಳಿ ಗ್ರಾಮದ ಬೊಳೋಡಿ ಬಸವೇಶ್ವರ ಸಮುದಾಯ ಭವನದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರಾದ ರಮೇಶ್ ಕುಲಕರ್ಣಿ ತಿಳಿಸಿದರು.

ಉಭಯ ಸಭೆಗಳಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮತಿಯ ಪ್ರಮುಖರಾದ ಶ್ರೀ ಜಗನ್ನಾಥ ಅಲ್ಲಂಪಲ್ಲಿ, ಮಹಮ್ಮದ್ ರಫಿ, ಡಾ|| ಶಿವಕುಮಾರ್ ಮಾಲಿಪಾಟೀಲ್, ಅರ್ಜುನ್, ಶರಣಬಸವರಾಜ ರೆಡ್ಡಿ, ಯಮನೂರಪ್ಪ ನಾಯಕ್, ಧನಂಜಯ ಉಪ್ಪಾರ, ಗಾದಿಲಿಂಗಪ್ಪ, ವೆಂಕೋಬ ಮೇಲಕ್ರಿ, ನಿರುಪಾದೆಪ್ಪ, ಶರಣಪ್ಪ ಡಿ., ವಿರೇಶಪ್ಪ ಲಕೋಟಿ, ಯಮನೂರಪ್ಪ ನಾಯಕ, ಮನ್ಸೂರ್ ಬೆಗ್, ಮೌಲಾಹುಸೇನ್, ದ್ಯಾಮಣ್ಣ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಸೆಪ್ಟೆಂಬರ್-೧೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಸಂತಸ ವ್ಯಕ್ತಪಡಿಸಿದರು.

ಕರಾಟೆ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಶಿವರಾಜ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಮೀನಾಕ್ಷಿ -೩೬ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಬಾಲಕರ ಪ್ರೌಢ ವಿಭಾಗದಲ್ಲಿ ಮಹೇಶ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಿರೇಬೆಣಕಲ್‌ನ ಸ.ಹಿ.ಪ್ರಾ ಶಾಲೆ ಖೋ-ಖೋ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-೧೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಿತು.

ಅದರಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ-ಖೋ ತಂಡವು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ವಿಜೇತರಾದ ಈ ತಂಡದ ವಿದ್ಯಾರ್ಥಿಗಳಿಗೆ ಹಿರೇಬೆಣಕಲ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾರೈಸಿದರು.

ಸರ್ವ ಸದಸ್ಯರು ಗ್ರಾಮದ ಶಿಕ್ಷಣ ಪ್ರೇಮಿಗಳು, ಕ್ರೀಡಾಭಿಮಾನಿಗಳು ಹಾಗೂ ನಾಗನಕಲ್ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಅತ್ಯಂತ ಸಡಗರ ಸಂಭ್ರಮದಿದ ಅಭಿನಂದಿಸಿ, ಮುಂದಿನ ಕಲಬುರ್ಗಿ ವಿಭಾಗ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಲೆಂದು ತಂಡಕ್ಕೆ ಹಾರೈಸಿದರು.

ಗಂಗಾವತಿಯಲ್ಲಿ ಹಾನಗಲ್ಲ ಶಿವಯೋಗಿಗಳ ಜಯಂತ್ಯೋತ್ಸವ ಆಚರಣೆಗೆ ಸಂತಸ: ಶರಣಬಸವ ದೇವರು

ಗಂಗಾವತಿ ನಗರದಲ್ಲಿ ಸೆ.೧೦ ರಿಂದ ೨೦ ರವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ೧೫೮ನೇ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು.

ಅದಕ್ಕೆ ನಗರದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಸಂಸ್ಥಾಪಕ ಗುರುಗಳಾದ ಶ್ರೀ ಶರಣಬಸವ ದೇವರು ಸಂತಸ ವ್ಯಕ್ತಪಡಿಸಿದರು.

ಹಾನಗಲ್ಲ ಶಿವಯೋಗಿಗಳ ಜಯಂತ್ಯೋತ್ಸವದ ಯಶಸ್ವಿಗೆ ಸರ್ವರೂ ಸನ್ನದ್ಧರಾಗಬೇಕೆಂದು ಕರೆ ನೀಡಿದ್ದಾರೆ.

ಅವರು ಜನರಲ್ಲಿ ದುಶ್ಚಟಗಳನ್ನು ದೂರಗೊಳಿಸಿ, ಅರಿವು ಮೂಡಿಸಲು ನಾಡಿನ ನೂರಾರು ಪೂಜ್ಯರು ಆಗಮಿಸುತ್ತಿರುವುದು ನಮ್ಮ ತಾಲೂಕಿಗೆ ಸಂದ ಭಾಗ್ಯವಾಗಿದೆ.

ಹೀಗಾಗಿ ಈ ಹತ್ತು ದಿನಗಳ ಕಾಲ ನಡೆಯುವ ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶಿವಯೋಗಿ ಮಂದಿರವನ್ನು ಸ್ಥಾಪಿಸಿ ವಿಭೂತಿ ತಯಾರಿಸುವ ಸಂಸ್ಥೆ ಕಟ್ಟಿ ಗೋವುಗಳ ರಕ್ಷಣೆ ಮಾಡುವುದರ ಜೊತೆಗೆ ನಾಡಿನ ಸಮಸ್ತ ಜನರಲ್ಲಿ ಸಂಸ್ಕಾರ, ಆಧ್ಯಾತ್ಮ, ಸಂಗೀತ, ಸಂಸ್ಕೃತ ಪಾಂಡಿತ್ಯವನ್ನು ನೀಡುವ ದೊಡ್ಡ ಸಂಸ್ಥೆಯನ್ನು ಕಟ್ಟಿ ಸಮಾಜ ಪರಿವರ್ತನೆ ರೂವಾರಿಗಳಾಗಿರುವ ಪೂಜ್ಯ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮವನ್ನು ಗಂಗಾವತಿಯಲ್ಲಿ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.

ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಪೂಜ್ಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶರಣಬಸವ ದೇವರು ತಿಳಿಸಿದರು.