ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳೆಯರ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನಾoಬ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಮಹಿಳಾ ಚಿತ್ರ ಕಲಾವಿದೆಯರು ರೂಪಿಸಿರುವ ಕಲಾಕೃತಿಗಳು ಪ್ರದರ್ಶನಗೊಂಡವು.

ಪ್ರಕೃತಿಯಿಂದ ಹಿಡಿದು ಮಹಿಳೆಯರ, ಮಕ್ಕಳ ಚಿತ್ರಗಳು ಪ್ರಕೃತಿಯ ಮಡಿಲಲ್ಲಿ ಬುದ್ಧನ ಚಿತ್ರ, ಪ್ರಕೃತಿಯಲ್ಲಿ ಹಾವಿನ ಜೀವನದ ಹಾದಿ, ಹೂಗಳಲ್ಲಿ ತಾವರೆ, ಗುಲಾಬಿ ಚಿತ್ರಕಲೆಗಳು. ಕೃಷ್ಣ ಮತ್ತು ಹಡಗು,
ರಾಧಾಕೃಷ್ಣರ ಪ್ರೀತಿಯ ನೋಟ, ಕ್ರಿಯೇಟಿವ್ ವರ್ಕ್ಸ್. ಮಹಿಳಾ ದೌರ್ಜನ್ಯ ವಿರೋಧಿ ಚಿತ್ರಗಳು ಹೀಗೆ ಹಲವಾರು ವೈವಿಧ್ಯ ಚಿತ್ರಗಳು ಮಹಿಳೆಯರ ಕೈಚಳಕದಲ್ಲಿ ರೂಪು ತೆಳೆದಿವೆ.

ಎರಡು ದಿನಗಳು ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟು ಅವರ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಶ್ಲಾಘನೀಯ. ಈಗಿನ ಜಗತ್ತಿನಲ್ಲಿ ಎಲ್ಲಾ ಹೆಣ್ಣು ಮಕ್ಕಳು ಸಾಧನೆ ಮಾಡುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ತಮ್ಮ ಸಂಸಾರದ ನೌಕೆ ಮತ್ತು ಅವರವರ ವೈಯಕ್ತಿಕ ಬದುಕಿನ ಕೆಲಸಗಳನ್ನು ಮಾಡಿಕೊಂಡು ಅವರು ತಮ್ಮ ಸಾಧನೆ ಮಾಡುವಲ್ಲಿ ಗಮನ ವಹಿಸುತ್ತಾ ಬಂದಿದ್ದಾರೆ.

ಹಾಸನ ಜಿಲ್ಲೆ ಕಲೆಯ ಬೀಡು ಎಂದು ಪ್ರಸಿದ್ಧಿ ಪಡೆದಿದೆ. ಚಿತ್ರಕಲಾ ಪ್ರದಶ೯ನದಲ್ಲಿ ಭಾಗವಹಿಸಿದ ಕಲಾವಿದೆಯರೆಂದರೆ ಶೋಭಾ ಆರ್., ಸೌಮ್ಯ ಎಸ್., ಅಶ್ವಿನಿ ಹೆಚ್.ವಿ., ಲತಾ ಎಲ್‌.ಜಿ., ಹೇಮಲತಾ, ಮಂಜುಳಾ, ಚಂದ್ರಪ್ರಭ, ಅಕ್ಷರ, ಹೇಮಲತಾ ಆರ್., ಹಂಸವೇಣಿ, ವೃತಿಕ ಕುಮಾರಿ, ಸ್ಪೂರ್ತಿ, ಕೋಮಲ, ಪ್ರಕೃತಿ ಜಿ.ಆರ್., ಭೂಮಿಕ, ನಂದಿನಿ.

ಅಚ್ಚುಕಟ್ಟಾಗಿ ಚಿತ್ರಕಲೆ ಪ್ರದರ್ಶಿಸಲು ಮಹಿಳೆಯರಿಗೆ ಬೆಂಬಲ ನೀಡಿ ಮಾರ್ಗದರ್ಶನ ನೀಡಿದವರು ಹಿರಿಯ ಕಲಾವಿದರಾದ ಹಾಸನದ ಬಿ.ಎಸ್. ದೇಸಾಯಿ, ಚನ್ನರಾಯಪಟ್ಟಣದ ಪ್ರಭಾಕರ್ ಎಸ್.ವೈ., ಸುರೇಶ್ ಅತ್ನಿ ಮತ್ತು ಶಿವಕುಮಾರ್ ಆರ್., ಕಲಾವಿದೆಯರಿಗೆ ಸ್ಪೂರ್ತಿ ನೀಡಿ ಅಭಿನಂದಿಸಲು ಬಂದು ಮಾರ್ಗದರ್ಶನ ಮಾಡಿದವರು ಗೊರೂರು ಆನಂತರಾಜು ಸಾಹಿತಿಗಳು, ಹಾಸನ ಮತ್ತು ಕೆ.ಎನ್. ಶಂಕರಪ್ಪ ಕಲ್ಯಾಡಿ
ಕಾರ್ಯದರ್ಶಿಗಳು, ಸಂಸ್ಕಾರ ಭಾರತಿ ಮತ್ತು ಚಿತ್ರಕಲಾವಿದರು.

ಹೊರರಾಜ್ಯ ಮಹಿಳೆಯರ ಸಹಕಾರದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಉತ್ತಮ ಕಾರ್ಯಕ್ರಮವಾಗಿತ್ತು.  https://aratt.ai/@vishwaroopa_news_blog

ದಲಿತ ಸಾಹಿತ್ಯ ಪರಿಷತ್‌ನಿಂದ ಸಾವಿತ್ರಿ ಬಾಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶೇಷ ಉಪನ್ಯಾಸ.
ಗಂಗಾವತಿ: ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಗಂಗಾವತಿ ವತಿಯಿಂದ ಮಾರ್ಚ್‌-8 ರಂದು ಸಾವಿತ್ರಿ ಬಾಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶೈಲಜಾ ಹಿರೇಮಠರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಭಾರತೀಯ ವೈದ್ಯಕೀಯ ಭವನ (ಐ.ಎಂ.ಎ) ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕ ಅಧ್ಯಕ್ಷರಾದ ಛತ್ರಪ್ಪ ತಂಬೂರಿ ಹಾಗೂ ಕಾರ್ಯದರ್ಶಿಯಾದ ಮೈಲಾರಪ್ಪ ಬೂದಿಹಾಳ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮ ಉದ್ಘಾಟನೆ ಯನ್ನು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಮಾಡಲಿದ್ದು, ಅಧ್ಯಕ್ಷತೆಯನ್ನು ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ವಹಿಸಲಿದ್ದಾರೆ. ಸಾವಿತ್ರಿ ಬಾಪುಲೆರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರು ಹಾಗೂ ಪತ್ರಕರ್ತರು ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಮಾಡಲಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಿಕ್ಷಕಿಯಾದ ಶ್ರೀಮತಿ ಶಾರದಾ ಸುಂಕಪ್ಪ ಓದಲಿದ್ದಾರೆ.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 18 ಜನರಿಗೆ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯನ್ನು ಕೊಪ್ಪಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ್‌ ನೀಡಲಿದ್ದಾರೆ. ಶ್ರೀರಾಮನಗರದ ಇಂದಿರಾಗಾಂಧಿ ವಸತಿ ಶಾಲೆಯ ಸಾಧನೆಗೈದ ಇಬ್ಬರು ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ವೈದ್ಯರು, ಸಾಹಿತಿಗಳು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು, ವೈದ್ಯರು, ಸಾಹಿತಿಗಳು ಹಾಗೂ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ರಂಜನಿ ಆರತಿ, ಬಿದಾನಂದ ಬರಗೂರು ಹಾಗೂ ಸಂಗಡಿಗರಿಂದ ಅರಿವಿನ ಹಾಡುಗಳು ಮೂಡಿಬರಲಿವೆ. https://aratt.ai/@vishwaroopa_news_blog
ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ ನಾಟಕ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು.

ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು ನೋಡಬಯಸುತ್ತದೆ.

ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.

ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು ೧೯೫೧ರಲ್ಲಿ ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು ಅಘಾತಕಾರಿ. ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.
೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.

ಸ್ವಾತಂತ್ರ್ಯ ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ. ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ ದೃಶ್ಯ ಯಾಕೋ ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು.

ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು, ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು.

ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು. ಅನಿತಾ ಕಾರ್ಯಪ್ಪರವರು ನಾಟಕದ ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್ ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  https://aratt.ai/@vishwaroopa_news_blog

ಗೊರೂರು ಅನಂತರಾಜು, ಹಾಸನ.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ

ದನಗಳ ಜಾತ್ರೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ

ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಕೆ. ಹಿರಿಹಳ್ಳಿ ಗ್ರಾಮದಲ್ಲಿ 4ನೇ ವರ್ಷದ ದನಗಳ ಜಾತ್ರೆ ಒಂದು ವಾರ ಯಶಸ್ವಿಯಾಗಿ ನಡೆಯಿತು.

ಈ ಪ್ರಯುಕ್ತ ಕಲಾತಂಡಗಳಿಂದ ಕೋಲಾಟ ಬಯಲಾಟ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಾನುವಾರ ರಾತ್ರಿ ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯ ಶ್ರೀ ಆಂಜನೇಯ ಹಾಗೂ ಶನೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹರುನಳ್ಳಿ ಕುಮಾರ್ ನಿರ್ದೇಶನ ನಲ್ಲಿ ರಾಜ ಸತ್ಯವ್ರತ ನಾಟಕ ಪ್ರದರ್ಶಿಸಿದರು.

ಮಧ್ಯಾಹ್ನ ಹಾಸನ ಜಿಲ್ಲಾ ಕದಂಬ ಸೈನ್ಯ ಕನ್ನಡ ಸಂಘಟನೆಯ ಕಲಾವಿದರು ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ನಾಟಕಕಾರರು ಗೊರೂರು ಅನಂತರಾಜು ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಲಾವಿದರಾದ ಅಂಕಪುರ ಎ.ಹೆಚ್. ಗಣೀಶ್, ಅರಕಲಗೂಡು ಬೆಕ್ರೀ ರಾಜೇಗೌಡರು, ಮತ್ತು ಗಾಯಕರು ಶ್ರೀಕಾಂತ್ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಸೇವಾ ಕಾರ್ಯಗಳು ನಡೆದವು. ಗ್ರಾಮಸ್ತರು ಮತ್ತು ದನಗಳ ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ಗ್ರಾಮದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.  https://aratt.ai/@vishwaroopa_news_blog

ಗಂಗಾವತಿಯ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪನ ಜಯಂತಿ ಆಚರಣೆ

ಗಂಗಾವತಿ: ಬೇಟೆಗಾರನಾದ ಕಣ್ಣಪ್ಪ ಶಿವನಿಗೆ ತನ್ನ ಕಣ್ಣನ್ನು ನೀಡುವ ಮುಖಾಂತರ ಶಿವಮೆಚ್ಚಿದ ಬೇಡರ ಕಣ್ಣಪ್ಪ ಎಂದು ಖ್ಯಾತಿಯನ್ನು ಪಡೆದಿದ್ದು, ಶಿವನೊಲಿದ ದಿನವೇ ಶಿವರಾತ್ರಿಯಾಗಿದೆ ಎಂದು ಅಖಿಲ ಪಿರಾಮಿಡ್‌ ಧ್ಯಾನ ಕೇಂದ್ರದ ಶ್ರೀಮತಿ ಲಲಿತಾ ವಗ್ಗ ಹೇಳಿದರು.

ಅವರು ಗಂಗಾವತಿಯ ಸಿದ್ದಿಕೆರೆಯಲ್ಲಿ ಫೆಬ್ರವರಿ-15 ರವಿವಾರದಂದು ಬೇಡರ ಕಣ್ಣಪ್ಪ ಸಂಘ ಗಂಗಾವತಿ ಹಾಗೂ ಗಂಗಾವತಿ ತಾಲೂಕು ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಆಚರಿಸಿದ ಬೇಡರ ಕಣ್ಣಪ್ಪ ಜಯಂತಿಯಲ್ಲಿ ಬೇಡರ ಕಣ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದಯಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲ, ಪ್ರತಿ ಪ್ರಾಣಿಗೂ ನಮ್ಮಂತೆ ಬದುಕುವ ಹಕ್ಕಿದೆ, ಮಾಂಸಹಾರ ಬಿಟ್ಟು ಶಾಖಾಹಾರಕ್ಕೆ ಮಹತ್ವ ನೀಡಿ ಎಂದು ಕರೆಕೊಟ್ಟರು.

ಇದೇ ಸಂದರ್ಭದಲ್ಲಿ ಕಾಮಧೇನು ನ್ಯೂಟ್ರಿಷನ್‌ ಸೆಂಟರ್‌ನ ಶಿವದೀಪಕ್‌ ಹಾದಿಮನಿ ಮಾತನಾಡಿ, ಭಕ್ತಿಗೆ ಯಾವುದೇ ನಿಯಮಗಳಿಲ್ಲ, ದೇವರು ಒಲಿಯಲು ಸತ್ಯ, ಶುದ್ಧ ಕಾಯಕದ ಜೊತೆಗೆ ನಿರ್ಮಲವಾದ ಮನಸ್ಸು ಇರಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಿಂಗಾಪುರ ಭೀಮರಾಯ ನಾಯಕ, ಬಸಪ್ಪ ನಾಯಕ ಸೋಮಲಾಪುರ, ಭೀಮಣ್ಣ ನಾಯಕ ಗುಡ್ಡೇಕಲ್‌, ಹನುಮಂತಪ್ಪ ನಾಯಕ ಕೋಲ್ಕಾರ್‌, ಗಿರಿಶ್ ನಾಯಕ ಬಸವನದುರ್ಗ, ಜಾನ್‌ ನಾಯಕ ಜೋಗದ, ಪ್ರಭಾಕರ ಅರ್ಚಕರು, ರಾಮಣ್ಣ ನಾಯಕ ತೊಂಡೇಕಟದ, ನಾರಾಯಣ ವಗ್ಗಾ, ಪರಸಪ್ಪ ನಾಯಕ ಕ್ಯಾಡೇವು, ಸಿಂಗಾಪುರ ಶ್ರೀನಿವಾಸ ನಾಯಕ, ಹೇಮಂತ ತಳಕಲ್‌, ಶ್ರೀಮತಿ ವಿನುತಾ ಶಿವದೀಪಕ್‌ ಹಾದಿಮನಿ, ಕುಮಾರಿ ರಿಷಿಕಾ, ಕುಮಾರಿ ಹರ್ಷಿಕಾ ಸೇರಿದಂತೆ ಮತ್ತಿತರು ಇದ್ದರು. https://aratt.ai/@vishwaroopa_news_blog

ಗಂಗಾವತಿ ಸೂರ್ಯನಾಯಕ ತಾಂಡದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ

ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂರ್ಯನಾಯಕ ತಾಂಡದಲ್ಲಿ ಫೆಬ್ರವರಿ-15 ರಂದು ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಮಾಜದ ಮುಖಂಡ ಶಂಕರ ನಾಯ್ಕ ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಬಳಿಕ ಮಾತನಾಡಿ, ಶ್ರಮ ಜೀವಿಗಳು, ಅಲೆಮಾರಿ ಬುಡಕಟ್ಟು ಸಮುದಾಯದ ಶ್ರಮಿಕ ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರ ಕೊಡುಗೆ ಇದೆ ಎಂದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ, ಗ್ರಾ.ಪಂ. ಸದಸ್ಯೆ ಗೌರಮ್ಮ ಶಂಕರ ನಾಯ್ಕ, ಸಮಾಜದ ಮುಖಂಡರಾದ ಹನುಮಂತಪ್ಪ ನಾಯ್ಕ, ಶಂಕ್ರಪ್ಪ ಡಾವು, ಸಕ್ರಪ್ಪ ಕಾರಬಾರಿ, ಹನುಮಂತಪ್ಪ ಪೂಜಾರಿ, ಬಾಲಾಜಿ ಮೇಸ್ತ್ರಿ, ಎಸ್.ವಿ ಗೋಪಾಲಕೃಷ್ಣ, ಹಾಗೂ ಯುವಕರು, ಮಹಿಳೆಯರು ಸೇರಿದಂತೆ ಇತರರು ಇದ್ದರು.  https://aratt.ai/@vishwaroopa_news_blog

ಪೂಜ್ಯ ಪುಟ್ಟಪರ್ತಿ ಸಾಯಿಬಾಬಾ ರವರ ಜನ್ಮ ಶತಮಾನೋತ್ಸವದ ರಥಯಾತ್ರೆಗೆ ಗಂಗಾವತಿಯಲ್ಲಿ ಅದ್ಧೂರಿ ಸ್ವಾಗತ.

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆಯಲ್ಲಿ ಫೆಬ್ರವರಿ-13 ರಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೊಪ್ಪಳ ಜಿಲ್ಲೆ ಇವರ ಸಹಯೋಗದಲ್ಲಿ ಪ್ರೇಮವತಾರಿ ಶ್ರೀ ಸತ್ಯಸಾಯಿ ಬಾಬಾರವರ ಜನ್ಮದಿನದ ಶತವರ್ಷ ಸಂಭ್ರಮಾಚರಣೆ ನಿಮಿತ್ಯ ನಗರಕ್ಕೆ ಆಗಮಿಸಿದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥೋತ್ಸವವನ್ನು ಅದ್ದೂರಿಯಾಗಿ ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರುತ್ತಾ ಬರಮಾಡಿಕೊಳ್ಳಲಾಯಿತು.

ವಿವೇಕ ಭಾರತಿ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು, ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಪೂಜೆಯನ್ನು ಸಲ್ಲಿಸಿದರು. ವೇದಘೋಷದೊಂದಿಗೆ ಬರಮಾಡಿಕೊಂಡ ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ನ ಜಿಲ್ಲಾಧ್ಯಕ್ಷರಾದ ವೀರೇಶ್ ಶ್ರೇಷ್ಠಿ ಸ್ವಾಗತಿಸಿದರು. ಉತ್ತರ ಕರ್ನಾಟಕ ಭಾಗದ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಮತ್ತು ಉತ್ತರ ಕರ್ನಾಟಕ ಭಾಗದ ಮಹಿಳಾ ಸಯೋಜಕರಾದ ಶ್ರೀಮತಿ ಪ್ರಿಯಾ ಪೈ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರದಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಸಿಳ್ಳೆಕ್ಯಾತರ್ ಇವರಿಗೆ ಮೈಸೂರು ರಾಜಮನೆತನದ ಡಾ. ಶ್ರೀಮತಿ ಪ್ರಮೋದಾ ದೇವಿ ಇವರ ಸವಿ ನೆನಪಿಗಾಗಿ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಸದಸ್ಯರು ಗೌರವ ಸಭರ್ಪಣೆ ಸಲ್ಲಿಸಿದರು. ನಂತರ ಈಶ್ವರಾಂಬ ಪುರಸ್ಕೃತರಾದ ಶ್ರೀಮತಿ ಸರೋಜಾ ಬಾಕಳೆ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದ್ಮನಾಭಯ್ಯ ಅವರು ಹಿತನುಡಿ ನುಡಿದರು ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಕುಲಕರ್ಣಿ ಮತ್ತು ರಂಗಪ್ಪನವರು ಉಪಸ್ಥಿತರಿದ್ದರು. ನಂತರ ಸ್ವಾಮಿಯವರಿಗೆ ಬ್ರಹ್ಮ ಪೀಠದೊಂದಿಗೆ ನೈವೇದ್ಯ ಸಲ್ಲಿಸಿ, ಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾಕರ, ವೀರಯ್ಯ, ಶ್ರೀಮತಿ ಸೌಮ್ಯ ಪ್ರಭಾಕರ್, ಶ್ರೀಮತಿ ಜನಾದ್ರಿ ರಾಧಾ ರಾಣಿ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅಶೋಕ್, ಕಾರ್ಯದರ್ಶಿ ಸುಬ್ರಹ್ಮಣ್ಯ ದರೋಜಿ, ಅಶೋಕ್ ರಾಯಕರ್‌, ಸುಬ್ರಹ್ಮಣ್ಯ ರಾಯ್ಕರ್ ಮತ್ತು ಸಾಯಿಬಾಬಾ ಭಕ್ತರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕರಾದ ನಿಂಗರಾಜ್ ಬಿ ನಿರೂಪಿಸಿದರು ಮತ್ತು ಷಡಕ್ಷರಿ ಯವರು ವಂದಿಸಿದರು.  https://aratt.ai/@vishwaroopa_news_blog

ಗೊರೂರು ಅನಂತರಾಜು ಪ್ರವಾಸಿ ಲೇಖನಗಳ ತಲಕಾಡು ಪಂಚಲಿಂಗ ದರ್ಶನ

“ದೇಶ ಸುತ್ತು ಕೋಶ ಓದು” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ.

ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ಹಿರಿಯರು ಸಾಹಿತಿಗಳು ಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಮೂಡಿ ಬಂದಿರುವ ಅನೇಕ ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ.

ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ.ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ.

ಮುಂದುವರೆಯುತ್ತಾ ಶ್ರೀಯುತರು ಮೂಗೂರು ತ್ರಿಪುರ ಸುಂದರಿ ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ. ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ. “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ ಮುಕ್ತಿ ಎನ್ನುತ್ತಾರೆ.

ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ.

ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ.

ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ]

ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.

ತೇರು ಹರಿದಾವೋ ತಾನಕ್ಕೆ ನಿಂತಾವೋ
ತಾರೋ ಚನ್ನಯ್ಯ ಜವನವಾ
ತಾರೋ ಚೆನ್ನಯ್ಯ ಜವನವಾ
ಬಾಳೆಹಣ್ಣು
ಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ
ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .
ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ.

ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ

ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿ
ದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯ
ಸ್ವಾಮಿ ನಿನ್ನ ಮದುವೆ ಶನಿವಾರ
ಎಂದು ಹಾಡಿ ಹೊಗಳುತ್ತಾರೆ.

ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣ
ದುಂಡು ಮಲ್ಲಿಗೆ ಮಕರಂದ
ಬೇಟ್ಗಾರ
ರಂಗನೇರ್ಯಾನೆ ಹೊಸ ತೇರು

ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಸಾರಸ್ಪತಲೋಕ ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  https://aratt.ai/@vishwaroopa_news_blog

ಶ್ರೀಮತಿ ಮಧುಮಾಲತಿ ರುದ್ರೇಶ್ ಬೇಲೂರು
ಮೊಬೈಲ್: 9035342149

ಬೆಳಗಾವಿಯಲ್ಲಿ ಕನಾ೯ಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯ ಮಟ್ಟದ ನುಡಿ ವೈಭವ ಸಮಾರಂಭ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಜಿಲ್ಲಾ ಘಟಕ ಬೆಳಗಾವಿ ಇವರ ವತಿಯಿಂದ ಬೆಳಗಾವಿ ನಗರದ ಮಹಾಂತೇಶ ನಗರ, ಮಹಾಂತ ಭವನದಲ್ಲಿ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ಸಮಾರಂಭ ನಡೆಯಿತು.

ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಕಾರ್ಯಕ್ರಮ ಉದ್ಘಾಟಸಿದರು. ಹಿರಿಯ ಸಾಹಿತಿಗಳು ಶ್ರೀಮತಿ ಹೇಮಾವತಿ ಸೊನೊಳ್ಳಿ ಸರ್ವಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ವೈ. ಮೆಣಸಿನಕಾಯಿ, ಹಿರಿಯ ಸಾಹಿತಿಗಳು ಶ್ರೀಮತಿ ರೇಖಾ ಅಂಗಡಿ ದಳವಾಯಿ. ಶಿಕ್ಷಕರ ಸಂಘದ ಗ್ರಾಮೀಣ ಅಧ್ಯಕ್ಷ ಚಂದ್ರಶೇಖರ ಕೋಲಕಾರ, ಸುನೀಲ ಪರಿಟ್, ಶಿಕ್ಷಕರ ಸಂಘಗಳ ಪರಿಷತ್ ರಾಜ್ಯಾಧ್ಯಕ್ಷ ಸಂಗಮೇಶ ಖನ್ನಿನಾಯ್ಕರ, ಸರಕಾರಿ ಎಸ್.ಸಿ, ಎಸ್ಟಿ ಸಮಾನ ಮನಸ್ಕ ಶಿಕ್ಷಕರ ವೇದಿಕೆ ಅಧ್ಯಕ್ಷರು ಸುಮಾ ದೊಡಮನಿ, ಬರಹಗಾರರ ಸಂಘದ ಗ್ರಾಮೀಣ ಅಧ್ಯಕ್ಷೆ ಎಸ್.ಎನ್. ಉಪ್ಪಿನ, ಸಾವಿತ್ರಿ ಬಾಯಿ ಫುಲೆ ಸಂಘದ ಗ್ರಾಮೀಣ ಅಧ್ಯಕ್ಷೆ ಶ್ಯಾಮಲಾ ಪಾಟೀಲ, ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷೆ ಚಾಂದಬಿ ಕಲಾಲ, ಪಮ್ಮಾರ್, ವಿಕಲಚೇತನ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಠಲ್ ಯಕಾಜ್ನವರ ಆಗಮಿಸಿದ್ದರು.

ಇದೇ ಸಂದರ್ಭ ರಾಜ್ಯಾಧ್ಯಕ್ಷ ಮಧುನಾಯಕ್ ಲಂಬಾಣಿರವರ ಮೂರು ಕೃತಿಗಳು ಬಿಡುಗಡೆಗೊoಡವು. ನಾಡಿನ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಶಿಕ್ಷಣ ಸಾರಥಿ ಪ್ರಶಸ್ತಿ, ಚಿತ್ರಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳ ಸಾಹಿತ್ಯ ಪರಿಷತ್ತುನ ಮಹಾದೇವಿ ಪಾಟೀಲ ಪ್ರಾರ್ಥನೆ ಮಾಡಿದರು. ಕಲಾವಿದರು ನಾಡಗೀತೆ, ರೈತ ಗೀತೆ, ಹಾಡಿದರು. ಸರಕಾರಿ ಕನ್ನಡ ಮಾದರಿ ಶಾಲೆ ಕಂಗ್ರಾಳಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು.

ಬರಹಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಗಂಗಮ್ಮ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ,ಕ್ಷೇಮಾಭಿವೃದ್ಧಿ, ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು ವಿಜಯಕುಮಾರ ಪುಷ್ಪಾ ಹಿರೇಮಠ್ ಕಂಬಾಲಿಮಠ ಪ್ರವೀಣ್ ಪಾಳೇಕರ್ ನಧಾಫ್ ನಿತಿನ್ ಮೆಣಸಿನ ಕಾಯಿ ಆಗಮಿಸಿದ್ದರು.

ಸಾಹಿತಿಗಳು ಕ.ರಾ.ಬ. ಸಂಘದ ಗೌ.ಅಧ್ಯಕ್ಷರು ಗೊರೂರು ಅನಂತರಾಜು ಕಾರ್ಯಕ್ರಮ ಯಶಸ್ವಿಗೆ ಶುಭ ಸಂದೇಶ ಕಳಿಸಿ ಹಾರೈಸಿದರು. ರುದ್ರೇಶ ಬಡಿಗೇರ ವಂದನಾರ್ಪಣೆ ಮಾಡಿದರು. https://aratt.ai/@vishwaroopa_news_blog

ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರಿಂದ ಶ್ರೀಕೃಷ್ಣದೇವರಾಯ ಜಯಂತಿ ಆಚರಣೆ.

ಗಂಗಾವತಿ: ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅಮ್ಮನವರ ನೇತೃತ್ವದಲ್ಲಿ ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ರಾಜಾ ಶ್ರೀಕೃಷ್ಣದೇವರಾಯರ ಜಯಂತಿಯನ್ನು ಶ್ರೀಕೃಷ್ಣದೇವರಾಯರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ, ಸಿಹಿ ತಿಂಡಿ ವಿತರಿಸಿ ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜಮಾತೆ ಅಮ್ಮನವರು ಅಖಂಡ ಹಿಂದೂ ಸಾಮ್ರಾಜ್ಯವನ್ನು ಸಂರಕ್ಷಿಸಿ ಕೃಷಿ, ಸಾಹಿತ್ಯ, ವಿದ್ವಾಂಸರು, ಕವಿಗಳು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಅತ್ಯಂತ ಸುಂದರ ಮತ್ತು ಸಮೃದ್ಧಿಯ ರಾಜ್ಯವನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲಿದ್ದು, ನಾವು ಅಂತವರ ವಂಶಿಕರಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಅವರ ಆದರ್ಶಗಳನ್ನು ಸರ್ವರೂ ಪಾಲಿಸುವಂತಾಗಲಿ ಎಂದು ತಿಳಿಸಿದರು.

ಚಿತ್ರನಟ ವಿಷ್ಣುತೀರ್ಥ ಜೋಶಿಯವರು ಮಾತನಾಡಿ, ಫೆಬ್ರವರಿ-೧೨ ರಂದು ಪ್ರಪಂಚದಾಧ್ಯಂತ ಬಿಡುಗಡೆಗೊಳ್ಳಲಿರುವ ಕನ್ನಡ ಚಿತ್ರ “ಸಂಕೀರ್ತನ” ಚಿತ್ರದಲ್ಲಿ ಶ್ರೀಕೃಷ್ಣದೇವರಾಯರ ಪಾತ್ರ ನಿರ್ವಹಿಸಿರುವದು ನನ್ನ ಪುಣ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಉಪಾಧ್ಯಕ್ಷರಾದ ಪೂರ್ಣಿಮಾ, ಪಿಡಿಒ ಮಲ್ಲಿಕಾರ್ಜುನ್ ಕಡಿವಾಳ, ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ನಾಯಕ ಬಾಳೆಕಾಯಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರಾದ ನಾಗಪ್ಪ, ಮಾಜಿ ಅಧ್ಯಕ್ಷರಾದ ತಿರುಕಪ್ಪ, ಯುವರಾಜ್, ರಮೇಶ್, ಚಂದ್ರಪ್ಪ, ರಾಘವೇಂದ್ರ, ಶ್ರವಣಕುಮಾರ ರಾಯಕರ್ ಉಪಸ್ಥಿತರಿದ್ದರು.   https://aratt.ai/@vishwaroopa_news_blog