ಸೈಕಾಲಜಿ ಪ್ರಕಾರ, ವ್ಯಕ್ತಿಗಳು ನಡೆಯುವಾಗ ಫೋನ್ ನೋಡುತ್ತಾ ನಡೆದರೆ ದೇಹ ಹಾಗೂ ಮನಸ್ಸಿನ ಮೇಲೆ ಬೀರುವ ಪರಿಣಾಮಗಳು

ನಿಮ್ಮ ಫೋನ್ ಅನ್ನು ನೋಡುತ್ತಾ ನಡೆಯುವುದರಿಂದ ಮಾನಸಿಕ ಮತ್ತು ದೈಹಿಕ ಪರಿಣಾಮಗಳ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ಜನರು ನಡೆಯುವಾಗ ತಮ್ಮ ಫೋನ್ ನೋಡುತ್ತಾ ನಡೆಯುತ್ತಿದ್ದಾರೆ.

ಪ್ರತಿದಿನ ತಲೆ ತಗ್ಗಿಸಿ ಫೋನ್‌ ಆಪರೇಟ್‌ ಮಾಡುತ್ತಾ ನಡೆದಾಡುವ ಜನರನ್ನು ನಾವು ಕಾಣುತ್ತೇವೆ. ನಮ್ಮ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಇದು ಸಾಮಾನ್ಯವೆಂದು ತೋರುತ್ತಿದೆ. ಆದರೆ ಮನೋವಿಜ್ಞಾನವು ಈ ಅಭ್ಯಾಸ ನಿಮ್ಮ ದೇಹ ಮತ್ತು ಮನಸ್ಸು ಗೊಂದಲಕ್ಕೊಳಗಾಗುತ್ತದೆ ಎಂದು ಹೇಳುತ್ತದೆ. ಸಂದೇಶಗಳನ್ನು ಪರಿಶೀಲಿಸುವುದರ ಜೊತೆಗೆ, ನೀವು ಹೇಗೆ ಚಲಿಸುತ್ತಿದ್ದೀರಿ ಮತ್ತು ನೀವು ಹೇಗೆ ಭಾವಿಸುತ್ತಿದ್ದೀರಿ ಎಂಬುದರ ಕಡೆಗೆ ನೀವು ಗಮನಿಸುತ್ತಿಲ್ಲ.

ನ್ಯೂಯಾರ್ಕ್ ಅಥವಾ ಲಾಸ್ ಏಂಜಲೀಸ್‌ನಂತಹ US ನಗರಗಳಲ್ಲಿ ಕಾಲುದಾರಿಗಳು ವಾಕರ್‌ಗಳಿಂದ ತುಂಬಿರುತ್ತವೆ. ನಿಮ್ಮ ಫೋನ್‌ನತ್ತ ಕಣ್ಣು ಹಾಯಿಸುವ ಸರಳ ಕ್ರಿಯೆಯು, ನಿಮ್ಮ ನಡಿಗೆಯನ್ನು ನಿಧಾನಗೊಳಿಸಬಹುದು, ನಿಮ್ಮ ಭಂಗಿಯಲ್ಲಿ ವ್ಯತ್ಯಾಸವಾಗಿಸಬಹುದು ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು. ಇದು ದೈನಂದಿನ ನಡಿಗೆಯನ್ನು ಅತೃಪ್ತಿಗೊಳಿಸಬಹುದು ಮತ್ತು ಇನ್ನಷ್ಟು ಅಪಾಯಕಾರಿಯಾಗಿಸಬಹುದು. ಇದರ ಕುರಿತು ಸಂಶೋಧನೆಯು ನಮಗೆ ಏನು ಹೇಳುತ್ತದೆ ಎಂಬುದನ್ನು ಅನ್ವೇಷಿಸೋಣ.

ನಿಮ್ಮ ಫೋನ್ ನೋಡುತ್ತಾ ನಡೆಯುವುದರ ಹಿಂದೆ ಏನಿದೆ?

ನಡೆಯುವಾಗ ನಿಮ್ಮ ಫೋನ್‌ಗೆ ನೀವು ಅಂಟಿಕೊಂಡಾಗ, ನೀವು ಒಂದೇ ಬಾರಿಗೆ ಎರಡು ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವಿರಿ:

ಪಠ್ಯಗಳು ಅಥವಾ ಸಾಮಾಜಿಕ ಫೀಡ್‌ಗಳನ್ನು ಚಲಿಸುವುದು ಮತ್ತು ಹಿಡಿಯುವುದು. ನೀವು ಆಧುನಿಕ ಬಹುಕಾರ್ಯಕರ್ತರಾಗಿದ್ದೀರಿ ಎಂಬುದನ್ನು ಇದು ತೋರಿಸಬಹುದು ಮತ್ತು ಅವರು ಎಲ್ಲಾ ಸಮಯದಲ್ಲೂ ಅಪ್‌ಡೇಟ್ ಆಗಿರಲು ಬಯಸುತ್ತಾರೆ. ಆದಾಗ್ಯೂ ಮೆದುಳನ್ನು ಈ ರೀತಿಯಲ್ಲಿ ಕುಶಲ ಕಾರ್ಯಗಳಿಗಾಗಿ ನಿರ್ಮಿಸಲಾಗಿಲ್ಲ.

ನಿಮ್ಮ ವಿಭಜಿತ ಗಮನವು ಈ ಕ್ಷಣದಲ್ಲಿ ನೀವು ಸಂಪೂರ್ಣವಾಗಿ ಇರುವುದಿಲ್ಲ ಎಂದು ಸೂಚಿಸುತ್ತದೆ, ಆದ್ದರಿಂದ ನಿಮ್ಮ ಸುತ್ತಲಿನ ಸಣ್ಣ ಮಾಹಿತಿಯನ್ನು ನೀವು ಕಳೆದುಕೊಳ್ಳುತ್ತೀರಿ ಮತ್ತು ನಿಮ್ಮ ನೈಸರ್ಗಿಕ ಲಯವನ್ನು ನಿರ್ಲಕ್ಷಿಸಲಾಗುತ್ತದೆ. ಈ ಅಭ್ಯಾಸವು ಸಮಯವನ್ನು ಉಳಿಸಲು ನಿರುಪಯುಕ್ತ ಮಾರ್ಗವೆಂದು ತೋರುತ್ತದೆ, ಆದರೆ ಇದು ಪ್ರಚೋದನೆಯ ನಿರಂತರ ಅಗತ್ಯವನ್ನು ಸೂಚಿಸುತ್ತದೆ.

ವೇಗ ಮತ್ತು ಸಂಪರ್ಕವನ್ನು ಗೌರವಿಸುವ ಈ ಜಗತ್ತಿನಲ್ಲಿ, ನಿಮ್ಮ ಫೋನ್‌ನಲ್ಲಿ ನಿಮ್ಮ ಅವಲಂಬನೆಯಿಂದ ಒತ್ತಡವನ್ನು ಅನುಭವಿಸುತ್ತೀರಿ ಎಂದು ಹೇಳುತ್ತಿರಬಹುದು. ಲೂಪ್‌ನಲ್ಲಿ ಉಳಿಯಲು ನೀವು ಜೀವನದ ಗುಣಮಟ್ಟವನ್ನು ತ್ಯಾಗ ಮಾಡುತ್ತಿರಬಹುದು ಎಂಬುದರ ಸಂಕೇತವಾಗಿದೆ.

ವಿಚಲಿತ ನಡಿಗೆಯ ಗುಪ್ತ ಅಪಾಯಗಳು

ಪ್ರಯಾಣದಲ್ಲಿರುವಾಗ ನಿಮ್ಮ ಫೋನ್ ಬಳಸುವುದು ಪರಿಣಾಮಕಾರಿಯಾಗಿರಬಹುದು, ಆದರೆ ಇದು ಅನೇಕ ಅನಾನುಕೂಲತೆಗಳೊಂದಿಗೆ ಬರುತ್ತದೆ. ನೈಸರ್ಗಿಕವಾಗಿ ಚಲಿಸುವ ಬದಲು, ನಿಮ್ಮ ನಡಿಗೆ ಬದಲಾಗುತ್ತದೆ ಮತ್ತು ನಿಮ್ಮ ಭಂಗಿಯು ನರಳುತ್ತದೆ. ನಿಮ್ಮ ಸುತ್ತಲಿನ ಪ್ರಪಂಚವನ್ನು ನೀವು ಸಂಪೂರ್ಣವಾಗಿ ಆನಂದಿಸದ ಕಾರಣ ನಿಮ್ಮ ಮನಸ್ಥಿತಿ ಕೂಡ ಕುಗ್ಗುತ್ತದೆ. ನಿಮ್ಮ ಫೋನ್ ಅನ್ನು ನೋಡುವಾಗ ನಡೆಯುವ ಕೆಲವು ಪ್ರಮುಖ ಋಣಾತ್ಮಕ ಅಂಶಗಳು ಇಲ್ಲಿವೆ:

ನಿಧಾನವಾದ ನಡಿಗೆ:

ನೀವು ಪಠ್ಯ ಸಂದೇಶ ಅಥವಾ ಸ್ಕ್ರೋಲಿಂಗ್‌ನಲ್ಲಿ ನಿರತರಾಗಿರುವಾಗ ನೀವು ಸುಮಾರು 10% ನಿಧಾನವಾಗಿ ನಡೆಯುತ್ತೀರಿ.

ಕಳಪೆ ಭಂಗಿ:

ನಿಮ್ಮ ಸಾಧನದ ಮೇಲೆ ಕುಣಿಯುವುದು ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ.

ಕಡಿಮೆಯಾದ ಅರಿವು:

ನಿಮ್ಮ ಗಮನವು ಪರಿಸರದಿಂದ ತೇಲುತ್ತದೆ, ಇದರಿಂದ ನೀವು ಅಡೆತಡೆಗಳು ಅಥವಾ ಅಪಾಯಗಳನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚು.

ಹೆಚ್ಚಿದ ಒತ್ತಡ:

ನಡೆಯುವಾಗ ನಿಮ್ಮ ಹಾರ್ಮೋನ್‌ಗಳಲ್ಲಿ ಒತ್ತಡ ಹೆಚ್ಚಿಸಬಹುದು.

ಗಾಯದ ಹೆಚ್ಚಿನ ಅಪಾಯ:

ನೀವು ಮುಗ್ಗರಿಸುವ ಸಾಧ್ಯತೆಗಳು, ವಸ್ತುಗಳಿಗೆ ನೂಕು, ಅಥವಾ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ದುಷ್ಪರಿಣಾಮಗಳು ಕೇವಲ ಅನಾನುಕೂಲತೆಗಳಲ್ಲ, ಅವು ನಿಮ್ಮ ಆರೋಗ್ಯದ ಮೇಲೆ ನಿಜವಾದ ಪರಿಣಾಮಗಳನ್ನು ಬೀರಬಹುದು. ನಿಮ್ಮ ಫೋನ್‌ನಿಂದ ವಿಚಲಿತರಾಗಿ ನಡೆಯುವುದು ನಿಮ್ಮ ನಡಿಗೆ ವೇಗವನ್ನು ನಿಧಾನಗೊಳಿಸುತ್ತದೆ, ನಿಮ್ಮ ಸಮತೋಲನವನ್ನು ಕ್ಷೀಣಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ನೀವು ಒಂದೇ ಬಾರಿಗೆ ಹೆಚ್ಚು ಜಾದೂ ಮಾಡಲು ಪ್ರಯತ್ನಿಸುತ್ತಿರುವಿರಿ ಎಂದು ತೋರಿಸುವ ಅಭ್ಯಾಸ ಇದು.

ಮುಂದಿನ ಬಾರಿ ನೀವು ಎಲ್ಲಿಗಾದರೂ ಹೊರಡುವಾಗ, ನಿಮ್ಮ ಫೋನ್ ಅನ್ನು ಕೆಲವು ಕ್ಷಣಗಳ ಕಾಲ ದೂರ ಇಡಲು ಪ್ರಯತ್ನಿಸಿ. ತಾಜಾ ಗಾಳಿಯನ್ನು ಆನಂದಿಸಿ, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಕಣ್ತುಂಬಿಕೊಳ್ಳಿ ಮತ್ತು ನಿಮ್ಮ ದೇಹದ ನೈಸರ್ಗಿಕ ಚಲನೆಗೆ ಅವಕಾಶವನ್ನು ನೀಡಿ. ಇದು ಉತ್ತಮ ದೈಹಿಕ ಆರೋಗ್ಯ ಮತ್ತು ಸಂತೋಷದ ಮನಸ್ಥಿತಿಗೆ ಕಾರಣವಾಗುವ ಸರಳ ಹಂತವಾಗಿದೆ, ಜೊತೆಗೆ ಪರದೆಗಳಿಂದ ವಿರಾಮವನ್ನು ತೆಗೆದುಕೊಳ್ಳುವ ಕ್ಷಣವಾಗಿ ಕಾರ್ಯನಿರ್ವಹಿಸುತ್ತದೆ.

 

ಎಸ್.ಎಸ್.ಎಲ್.ಸಿ ಫಲಿತಾಂಶಕ್ಕಾಗಿ ಶ್ರಮಿಸುತ್ತಿರುವ ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಶಿಕ್ಷಕರು: ಡಿ.ಡಿ.ಪಿ.ಐ ಶ್ರೀಶೈಲ್ ಬಿರಾದಾರ

ಗಂಗಾವತಿ: ಭಾರತ ಸೇವಾದಳ ಮತ್ತು ಶಿಕ್ಷಕರ ಸಂಘದ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಕರು ಇಲಾಖೆ ರೂಪಿಸುವ ಕಾರ್ಯಕ್ರಮಗಳಾದ ವಿಶೇಷ ತರಗತಿ, ಗುಂಪು ಅಧ್ಯಯನ, ೨೦ ಅಂಶಗಳ ಕಾರ್ಯಕ್ರಮಗಳು, ಪೂರ್ವಸಿದ್ಧತಾ ಪರೀಕ್ಷೆಗಳು, ಭೌತಿಕ ಸೌಕರ್ಯಗಳು ಸೇರಿದಂತೆ ವಿನೂತನ ಯೋಜನೆಗಳೊಂದಿಗೆ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆ ಬಸಾಪಟ್ಟಣದಲ್ಲಿ ಭಾರತ ಸೇವಾದಳ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರಕ್ಕೆ ಭೇಟಿ ನೀಡಿದ ಡಿ.ಡಿ.ಪಿ.ಐ ಶ್ರೀಶೈಲ್ ಬಿರಾದಾರ್ ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳ ಕಲಿಕಾ ಚಾರ್ಟ್ಗಳನ್ನು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಹರ್ತಿಯವರು ಮಾತನಾಡಿ ಫಲಿತಾಂಶ ಸುಧಾರಣೆಗಾಗಿ ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಹಗಲಿರುಳು ಶ್ರಮಿಸುತ್ತಿದ್ದು, ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಭಾರತ ಸೇವಾದಳ ಸಹಕಾರದೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭಾರತ ಸೇವಾದಳ ಜಿಲ್ಲಾ ಸಂಘಟನೆಯ ಕುಮಾರಸ್ವಾಮಿ ಹೆಚ್.ಬಳ್ಳಾರಿ, ತಾಲೂಕು ಅಧಿನಾಯಕ ಶಿವಾನಂದ ತಿಮ್ಮಾಪೂರ, ಪ್ರಭಾರಿ ಮುಖ್ಯೋಪಾಧ್ಯಾಯ ಹನುಮೇಶ, ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರು ಹಾಗೂ ಬಾಲಕರ ಪ್ರೌಢಶಾಲೆಯ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಮಕ್ಕಳು ದೇಶದ ಆಸ್ತಿ: ಭಾರತ್ ಸೇವಾದಳ ತಾಲೂಕ ಅಧ್ಯಕ್ಷ ಸುರೇಶ್ ಸಿಂಗನಾಳ

ಗಂಗಾವತಿ: ಮಕ್ಕಳು ದೇಶದ ಆಸ್ತಿ. ಅವರ ಮನಸ್ಸಿನಲ್ಲಿ ಜಾತಿ-ಮತ-ಭಾಷೆಯ ಭೇದಭಾವ ಬರದಂತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಧಾರ್ಮಿಕ ಐಕ್ಯತೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಭಾರತ ಸೇವಾದಳ ಸಮಿತಿಯು ಮಕ್ಕಳ ನಾಯಕತ್ವ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ತಿಳಿಸುತ್ತಾ, ಮಕ್ಕಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರದ ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಸಮಿತಿಯ ಅಧ್ಯಕ್ಷರಾದ ಸುರೇಶ ಸಿಂಗನಾಳ ಹೇಳಿದರು.

ಈ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಂಜನೇಯ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸೇವಾದಳ ಕಾರ್ಯಕ್ರಮಕ್ಕೆ ಪಂಚಾಯತಿಯು ಸರ್ವ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದ್ದು, ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಷುಸಾಬ್, ಪ್ರಬಾರಿ ಮುಖ್ಯೋಪಾಧ್ಯಾಯರಾದ ಹನುಮೇಶ್, ಜಿಲ್ಲಾ ಸಂಘಟಕರಾದ ಕುಮಾರಸ್ವಾಮಿ ಎಚ್.ಬಳ್ಳಾರಿ, ತಾಲೂಕು ಅಧಿನಾಯಕರಾದ ಶಿವಾನಂದ ತಿಮ್ಮಾಪುರ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

ಜೋಗದ ನಾರಾಯಣಪ್ಪ ನಾಯಕ್ ಅವರಿಗೆ ಪಂಪಾನಗರ ಗೃಹ ನಿರ್ಮಾಣ ಸಂಘದ ನೂತನ ಸದಸ್ಯರಿಂದ ಸನ್ಮಾನ

ಗಂಗಾವತಿ: ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ಪಂಪಾನಗರ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರುಗಳಿಂದ ಗ್ರಾಮದೇವತೆ ಶ್ರೀ ದುರ್ಗಾದೇವಿಯ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾರಾಯಣಪ್ಪ ನಾಯಕ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ. ಸನ್ಮಾನ ಸ್ವೀಕರಿಸಿದ ನಾರಾಯಣಪ್ಪ ನಾಯಕ ಮಾತನಾಡಿ, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಪ್ರಥಮ ಸಂಘವಾದ ಪಂಪಾನಗರ ಗೃಹ ನಿರ್ಮಾಣ ಮಂಡಳಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಮಂಡಳಿಯ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಹೆಚ್ಚು ಹೆಚ್ಚು ಸದಸ್ಯರು ಹಾಗೂ ಷೇರುದಾರರನ್ನು ಮಾಡಿಕೊಳ್ಳುವುದರ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ನೂತನವಾಗಿ ಆಯ್ಕೆಗೊಂಡ ಪ್ರಸನ್ನ ದೇಸಾಯಿ ಮಾತನಾಡಿ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರನ್ನಾಗಿ ಆಯ್ಕೆಗೊಳಿಸಿದ ಮಂಡಳಿಯ ಸದಸ್ಯರುಗಳಿಗೆ ಕೃತಜ್ಞತೆ ಅರ್ಪಿಸುವುದರ ಜೊತೆಗೆ ಮಂಡಳಿಯ ಹಿರಿಯ ಸದಸ್ಯರ ಸಲಹೆ ಸಹಕಾರ ಮಾರ್ಗದರ್ಶನ ಪಡೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರುಗಳಾದ ಅನಿಲ್ ಕುಷ್ಟಗಿ, ಪ್ರಶಾಂತ್ ಹಾಲಳ್ಳಿ, ಮಹಾಬಲೇಶ್ವರ ಅಂಗಡಿ, ಪದ್ಮನಾಭ, ರಾಘವೇಂದ್ರ, ಶ್ರೀನಿವಾಸ ಧೂಳ ಹಾಗೂ ಪ್ರಮುಖರಾದ ಶ್ರೀನಿವಾಸ ತಾಂದಳೆ, ಮಂಜು ಕಟ್ಟಿಮನಿ, ಚನ್ನಬಸವ ಹಾಲಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗಂಗಾವತಿ ಮುರಾಹರಿನಗರ ನಿವಾಸಿ ಹನುಮಮ್ಮಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಹಸ್ತಾಂತರ.

ಗಂಗಾವತಿ: ನಗರದ ಮುರಾಹರಿನಗರ ಕಾರ್ಯಕ್ಷೇತ್ರದ ಮಾಶಾಸನ ಪಲಾನುಭವಿ ಹನುಮಮ್ಮ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಪ್ರಕಾಶ್ ರಾವ್ ಸರ್ ಅವರು ವಾತ್ಸಲ್ಯ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜರೀನಾ ಅವರ ಮಗ ಜುಬೇರ ಅವರು, ಯೋಜನೆಯ ಹಿತೈಷಿಗಳಾದ ವಿಶ್ವನಾಥ್, ಶಿವುಕುಮಾರ್ ಅವರು ಅಮರೀಶ್ ಹಾಗೂ ಕೊಪ್ಪಳ ಪ್ರಾದೇಶಿಕ ಜ್ಞಾನ ವಿಕಾಸ ವಿಭಾಗದ ಮಾನ್ಯ ಯೋಜನಾಧಿಕಾರಿಗಳಾದ ಸುಧಾ, ಗಂಗಾವತಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ, ವಲಯದ ಮೇಲ್ವಿಚಾರಕರು ದಯಾನಂದ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ಮೇಸ್ತ್ರಿ ಸುರೇಶ ಅವರು ಸೇವಾ ಪ್ರತಿನಿಧಿ ಲತಾ, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಹುಲ್ಲೇಶ್

ಗಂಗಾವತಿ: ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ. ಭೋವಿ ಸಮಾಜ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದರ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಭೋವಿ ಸಮಾಜದ ಅಧ್ಯಕ್ಷ. ಹುಲ್ಲೇಶ್ ಹೇಳಿದರು.

ಅವರು.ಹಿರೇಜಂತಕಲ್ಲಿನ ಶ್ರೀ ಪೆದ್ದಮ್ಮ ಹಾಗೂ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವದ ಸಮಾರೂಪ ಸಮಾರಂಭವನ್ನು ಉದ್ದೇಶಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಸಮಾಜ ಬಾಂಧವರು ವೃತ್ತಿ ಧರ್ಮ ಪಾಲನೆಯ ಜೊತೆಗೆ ಗುಣಮಟ್ಟದ ಶಿಕ್ಷಣ, ಸಮಾಜದ ಸಂಘಟನೆ ಹಾಗೂ ಹೋರಾಟದ ಮೂಲಕ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜಮುಖಿಯಾಗಿ ಬಾಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ದುರ್ಗಪ್ಪ, ವೆಂಕಟೇಶ, ಹನುಮೇಶ, ಕಲ್ಲಪ್ಪ, ಪರಮೇಶ, ಭೀಮೇಶ್, ರಾಮಪ್ಪ, ಅರ್ಚಕ ದುರ್ಗೇಶ ಸೇರಿದಂತೆ ಸಮಾಜದ ಮಹಿಳೆಯರು, ಯುವಕರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಸಂತಸ: ನಾಗರಾಜ ಇಂಗಳಗಿ

ಗಂಗಾವತಿ: ಗಂಗಾವತಿಯ ಪ್ರತಿಷ್ಠಿತ ಪಂಪಾನಗರ ಗೃಹನಿರ್ಮಾಣ ಸಹಕಾರ ಮಂಡಳಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಸನ್ನ ದೇಸಾಯಿ, ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ ಹಾಗೂ ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರಾದ ಎಂ.ಜೆ ಶ್ರೀನಿವಾಸ್ ಅವರುಗಳನ್ನು ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಇಂಗಳಗಿ ಅವರ ನೇತೃತ್ವದಲ್ಲಿ ಜೆಎನ್ಎನ್ ಚಾನೆಲ್ ಕಾರ್ಯಾಲಯದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್, ಸಹಕಾರ್ಯದರ್ಶಿ ಜೆ.ವಸಂತ್ ಕುಮಾರ್, ವಾರ್ತಾಲೋಕ ಪತ್ರಿಕೆಯ ಸಂಪಾದಕರಾದ ವೆಂಕಟೇಶರಾವ್ ಕುಲಕರ್ಣಿ, ಕಿಷ್ಕಿಂದ ಟಿವಿಯ ಮಲ್ಲಿಕಾರ್ಜುನ ಗೋಟೂರ,  ಜೆಎನ್ಎನ್ ಚಾನೆಲ್ ಗಾದಿಲಿಂಗಪ್ಪ ನಾಯಕ ಹಾಗೂ ಜಿ.ಎಸ್.ಪಿ.ಎನ್ ಚಾನಲ್ ಪಿ.ದಶರಥ ಸೇರಿದಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು, ನೂತನ ನಿರ್ದೇಶಕರಿಗೆ ಮತ್ತು ಅಧ್ಯಕ್ಷರಿಗೆ ಶುಭಹಾರೈಸಿದರು.

ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಮುಂಬರುವ ದಿನಗಳಲ್ಲಿ ದೊಡ್ಡ ಸ್ಥಾನಗಳನ್ನು ಅಲಂಕರಿಸಲಿ ಎಂದು ಸಂಘದ ಅಧ್ಯಕ್ಷರು ಆಗಿರುವ ರಾಜ್ಯಮಟ್ಟದ ರಂಗಭೂಮಿ ಕಲಾವಿದರಾದ ನಾಗರಾಜ್ ಇಂಗಳಗಿ ಅವರು ಶುಭ ಹಾರೈಸಿದರು.

ಡಣಾಪುರ ಮಲ್ಲಯ್ಯ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ

ಗಂಗಾವತಿ: ತಾಲೂಕಿನ ಡಣಾಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲ ಮಾಲಾಧಾರಿಗಳಿಂದ 20ನೇ ವರ್ಷದ ಅನ್ನದಾಸೋಹ ಕಾರ್ಯವು ಜರುಗಿತು.

ತಾಲೂಕಿನ ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಬೆಳಗ್ಗೆಯಿಂದ ನಾ‌ನಾ ಬಗೆಯ ವಿಶೇಷ ಪೂಜಾ ಪುನಸ್ಕಾರಗಳು ಭಕ್ತಿ ಹಾಡು ಭಜನೆಗಳಿಂದ ಭಕ್ತಿಪೂರ್ವಕ ಜರುಗಿದವು. ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.

ಈ ವೇಳೆ ಮಲ್ಲಯ್ಯ ಮಾಲಾದಾರಿಗಳಾದ ಜೆ ಬೀಮನಗೌಡ, ಪಿ.ಪಿ.ಮಂಜುನಾಥ, ವೀರನಾಗಪ್ಪ, ಬಸವರಾಜ ವೈ, ಪಿಡ್ಡಪ್ಪ, ಮಂಜುನಾಥ ಕುಂಬಾರ, ಲಿಂಗರಾಜ ಹೂಗಾರ, ಮೃತ್ಯುಂಜಯ, ಮೌನೇಶ, ಸಿ ಹೆಚ್ ಮಂಜುನಾಥ, ವೀರನಗೌಡ, ಮಲ್ಲಿಕಾರ್ಜುನ, ರಾಜೇಂದ್ರ , ಮಲ್ಲಿಕಾರ್ಜುನ, ಮಡ್ಢೆರ ಮಂಜುನಾಥ, ಬಿ. ಬೃಂದಾ ಹಾಗೂ ಭಕ್ತಾದಿಗಳು ಭಾಗಿಯಾಗಿದ್ದರು.

ಹೃದಯದ ಕವಿತೆ ಹೃದಯ ಮಿಡಿವ ಕವಿತೆ

ಬದುಕಿನುದ್ದಕ್ಕೂ ಹಲವಾರು ಘಟ್ಟಗಳನ್ನು ದಾಟಿ ಬರುವ ಮನುಷ್ಯ ವ್ಯಕ್ತಿಗತವಾಗಿ ತನ್ನದೇ ಆದ ವೈವಿಧ್ಯಮಯ ಅನುಭವಗಳನ್ನು ಹೊಂದುತ್ತಾನೆ. ಗಳಿಸಿ ಉಳಿಸುತ್ತಾ ತಿಳಿದು ಕಲಿಯುತ್ತಾ ಸಿಹಿ, ಕಹಿ ಅನುಭವಗಳನ್ನು ಹೊಂದುತ್ತಾ ವಯಸ್ಸು ಇಳಿಮುಖವಾದಂತೆ ಸಾಗಿ ಬಂದ ಹಾದಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ಅಲ್ಲೊಂದು ಅಗಾಧ ಪ್ರಪಂಚವೇ ತೆರೆದುಕೊಳ್ಳುತ್ತದೆ. ನಮ್ಮ ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಇತ್ತೀಚೆಗಷ್ಟೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಹಿರಿಯ ಜೀವ. ಸಾವಿತ್ರಿ ಬಿ. ಗೌಡ ಅವರ ಕೃತಿಯನ್ನು ತಮ್ಮದೇ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ಪರಿಚಯಿಸುತ್ತಾರೆ. ಸಾವಿತ್ರಿ ಬಿ.ಗೌಡ ಅವರು ತಮ್ಮ ಹರೆಯದಲ್ಲೇ ಹಾಸನ ನಗರವನ್ನು ಕಂಡವರು. ಈಗ ಇಳಿವಯಸ್ಸಿನಲ್ಲಿರುವ ಅವರಿಗೆ ಅಂದಿಗೂ ಇಂದಿಗೂ ಕಾಣುವ ಅಗಾಧವಾದ ಬದಲಾವಣೆಯನ್ನು ಲೇಖನ ರೂಪದಲ್ಲಿ ಬರೆದು ಪ್ರಕಟಿಸಿ ಬಂದ ನೂರಾರು ಪ್ರತಿಕ್ರಿಯೆಗಳಿಂದ ಪುಳಕಿತಗೊಳ್ಳುತ್ತಾರೆ. ಅಲ್ಲದೆ ಅವರ ಸಾಹಿತ್ಯಕ್ಕೆ ತನ್ಮೂಲಕ ಅಗಾಧ ಪ್ರೇರಣೆಯನ್ನು ನೀಡುವ ಆ ಲೇಖನ ಮುಂದೆ ಹಲವಾರು ಸಾಹಿತ್ಯದ ಪ್ರಕಾರಗಳ ಮೂಲಕ ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಹಾದಿಯೇ ತೆರೆದುಕೊಂಡಂತಾಗುತ್ತದೆ. ಹಾಗೆಯೇ ತಾವು ಬರೆದ ಕವಿತೆಗಳನ್ನು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಾಚಿಸುವುದರ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿ ಪುಸ್ತಕ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಒಂದು ಕೊಡುಗೆಯನ್ನು ನೀಡಿರುತ್ತಾರೆ. ಇಂತಹ ಹಿರಿಯ ಲೇಖಕಿಯವರ ಬಗ್ಗೆ ಬರೆಯುತ್ತಾ ಗೊರೂರು ಅನಂತರಾಜು ಅವರು ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತಾರೆ.

ತಮ್ಮ ತಂದೆ ವ್ಯಾಪಾರದ ಜೊತೆ ಜೊತೆಗೆ ಭಾನುವಾರದ ಸಂತೆಗೆ ವ್ಯಾಪಾರಕ್ಕೆoದು ಬರುತ್ತಿದ್ದ ಹಲವಾರು ಮಂದಿಗೆ ತಮ್ಮ ಮನೆಯೇ ಒಂದು ಸುಂಕವಿಲ್ಲದ ತಂಗುದಾಣವಾಗಿತ್ತೆಂದು ಹೇಳುತ್ತಾ. ತಮ್ಮ ತಾಯಿಯೂ ಕೂಡ ಮುತ್ತುಗದ ಎಲೆಗಳನ್ನು ಜೋಡಿಸಿ ಊಟದ ಎಲೆಗಳನ್ನಾಗಿ ಮಾಡಿ ಅದನ್ನು ಮಾರಿ ಬಂದ ಹಣದಿಂದ ತಮ್ಮ ಎಲೆ ಅಡಿಕೆ ಖರ್ಚನ್ನು ಭರಿಸುತ್ತಿದ್ದುದಲ್ಲದೇ ತಮ್ಮೊಡನೆ ಮಾತನಾಡಲು ಸ್ನೇಹಿತೆಯಾಗಿ ವ್ಯಾಪಾರಕ್ಕಾಗಿ ತಮ್ಮ ಮನೆಗೆ ಬಂದು ತಂಗುತಿದ್ದ ದೊಡ್ಡಕೊಂಡುಗೊಳ್ಳದಮ್ಮನೇ ಆತ್ಮೀಯ ಗೆಳತಿಯಾಗಿರುತಿದ್ದಳು ಎನ್ನುವುದರೊಂದಿಗೆ ಹಾಗೆ ಬರುವ ಹಲವಾರು ಮಂದಿಯೊಂದಿಗೆ ನಡೆಯುತ್ತಿದ್ದ ಚರ್ಚೆಗಳು ಸಂಭಾಷಣೆಗಳಿಂದಲೇ ಒಂದು ಮನೋರಂಜನೇಯ ವಾತಾವರಣ ಸೃಷ್ಟಿಯಾಗುತ್ತಿತ್ತು ಎನ್ನುವಾಗ ನಿಜಕ್ಕೂ ಅಂದಿನ ಕಾಲ ಅದೆಷ್ಟು ಆತ್ಮೀಯವಾದ ಬಂಧಗಳನ್ನು ಬೆಸೆಯುತ್ತಿತ್ತು ಎನ್ನುವುದನ್ನು ನಿರೂಪಿಸುತ್ತದೆ. ಹಾಗೆಯೇ ಸಾವಿತ್ರಿ ಬಿ ಗೌಡ ಅವರು ಕೂಡ ತಮ್ಮ ಪ್ರಾಯದ ದಿನಗಳಲ್ಲಿ ಹೊಲಿಗೆ, ಕಸೂತಿ, ಉಲ್ಲನ್ ಹೀಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಅದರ ಮೂಲಕ ತಾನು ಒಬ್ಬ ಕಲೆಗಾರ್ತಿ ಎಂದು ನಿರೂಪಿಸಿದ್ದಲ್ಲದೆ ಈ ಮುಪ್ಪಿನಕಾಲದಲ್ಲೂ ಒಬ್ಬ ಕವಿಯತ್ರಿಯಾಗಿ ಸಾಹಿತಿಯಾಗಿ ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಮೊಹರನ್ನು ಒತ್ತಿರುವುದು ಶ್ಲಾಘನೀಯ ಹಾಗೂ ತಮಗೆ ವಯಸ್ಸಾಯ್ತು ಇನ್ನೇನೂ ಮಾಡಲು ಸಾಧ್ಯವಿಲ್ಲ ತಾವು ಅಶಕ್ತರು ಎನ್ನುವವರಿಗೆ ಅವರ ಜೀವನ ಸಂದೇಶ ನೀಡಿರುವುದು ಸತ್ಯ. ಅಲ್ಲದೇ ನಾವೆಲ್ಲರೂ ಕಂಡಂತೆ ಅವರ ಇಳಿ ಪ್ರಾಯದ ದೇಹ ಸ್ಪಂದಿಸದೆ ಹೋದರೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ಸಾಹಿತ್ಯಾಸಕ್ತರೊಡನೆ ಬೆರೆಯಬೇಕು ಎನ್ನುವ ತೀವ್ರವಾದ ತುಡಿತ ಹರೆಯದವರನ್ನೂ ನಾಚಿಸುವಂಥದ್ದು. ಹಾಗೆ ತಮ್ಮ ಮದುವೆಯಾದ ದಿನಗಳು ಗಂಡನ ಮನೆ, ಊರು ವಾತಾವರಣ, ಪತಿಯ ಸಾಂಗತ್ಯ, ಪತಿಯವರು ತಮಗೆ ಹಾಗೂ ಇತರ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದ ಗೌರವ ಮರ್ಯಾದೆಗಳನ್ನು ನೆನೆಯುತ್ತಾ ಅವರು ತಮ್ಮನ್ನು ಅಗಲಿದ ನೋವು ಯಾತನೆಗಳ ದಿನಗಳಲ್ಲಿ ಕೊರೊನಾದ ಆತಂಕಕಾರಿ ಪರಿಸ್ಥಿತಿಯಲ್ಲಿಯೂ ಪರ್ಸ್, ಚೌಕಬಾರಾ, ಚೆಸ್ ನ ಹಾಸುಗಳನ್ನು ಹೊಲಿಯುತ್ತಾ ದಿನದೂಡಿದ ಸಂದರ್ಭವನ್ನು ನೆನೆದು ಇತ್ತೀಚೆಗೆ ಸಾಹಿತ್ಯದಲ್ಲಿ ತೊಡಗಿಕೊಂಡು ಅದರ ಮೂಲಕ ತಮ್ಮಲ್ಲಿ ಅಡಗಿದ್ದ ಇನ್ನೊಂದು ಪ್ರತಿಭೆಗೆ ವೇದಿಕೆ ಸಿಕ್ಕಂತಾಗಿದ್ದರೂ ತಮ್ಮ ಇಂದಿನ ಅಸಹಾಯಕ ಸ್ಥಿತಿ, ಇನ್ನೂ ಏನೋ ಸಾಧಿಸಬೇಕೆಂಬ ಹಂಬಲವಿದ್ದರೂ ಸಹಕರಿಸದ ವಯಸ್ಸು ಇಂತಹ ಹಲವಾರು ವಿಚಾರಗಳನ್ನು ಗೊರೂರು ಅನಂತರಾಜು ಅವರು ಮನಮುಟ್ಟುವಂತೆ ಈ ಲೇಖನದ ಮೂಲಕ ತಿಳಿಸುತ್ತಾರೆ.

ಮಾಲಾ ಚೆಲುವನಹಳ್ಳಿ
ಬರಹಗಾರ್ತಿ
ಚೆಲುವನಹಳ್ಳಿ,
ಅರಸೀಕೆರೆ ತಾಲ್ಲೂಕು.

ಕಲೆಯ ಅಭಿಮಾನದಿಂದ ಲೇಖನಿಯಲ್ಲಿ
ಒಲವಿನಲಿ ಸ್ನೇಹವನು ಮಾಡುತಲಿ ನಡೆಯುತಿರೆ
ಸಲುಗೆಯನು ನೀಡುತಲಿ ಕಾರ್ಯದಲಿಯೆ
ಮಲಿನತೆಯ ತೋರದಲೆ ಮನವದವು ಶುದ್ಧವಿರೆ
ಕಲಿಸುತಲಿ ಸಾಗುವರು
ಲಕ್ಷ್ಮಿ ದೇವಿ……

ನಮಗೆ ಮಾರ್ಗದರ್ಶನ ನೀಡುವ ಬಹುಮುಖ ಪ್ರತಿಭೆಯ ಗುರುಗಳು ಶ್ರೀ ಗೊರೂರು ಅನಂತರಾಜುರವರು ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಾ ಹೊಸದಾಗಿ ಬಂದ ಯುವ ಪ್ರತಿಭೆಗಳಿಗೆ ವೇದಿಕೆಗಳನ್ನು ನೀಡುವುದರಲ್ಲಿ ಬಹಳಷ್ಟು ಯಶಸ್ಸು ಕಂಡವರು. ಸತತವಾಗಿ ಸಾಹಿತ್ಯ ಲೋಕದಲ್ಲಿ ಮಿಂದು ಎಲ್ಲರೊಂದಿಗೂ ಸ್ನೇಹಿತರಾಗಿ ಪ್ರೀತಿ ವಿಶ್ವಾಸದಲ್ಲಿ ಬರಹ ಲೋಕದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದವರು. ಕೆಲಸ ಕಾರ್ಯಗಳಲ್ಲಿ ಸಲುಗೆಯನ್ನು ನೀಡುತ ಯಾವುದರಲ್ಲೂ ಮಲಿನತೆಯನ್ನು ತೋರದೆ ಮನವನ್ನು ಶುದ್ಧವಾಗಿಟ್ಟುಕೊಂಡವರು. ಕಲಿಕೆಯನ್ನು ಕಲಿಯದವರಿಗೆ, ಕಲಿಸುತ ಆಗದು ಎಂದು ಹೇಳಬಾರದು ಕೆಲಸ ಆಗುವುದು ಎಂದು ಮಾಡುತ್ತಿರಬೇಕು ಎಂದು ತಿಳಿಸಿದವರು.
ಇಂತಹ ಬಹುಮುಖ ಪ್ರತಿಭೆಯ ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ ಸಂತಸದ ವಿಚಾರವಾಗಿದೆ.

ರಂಗಭೂಮಿ ಮಾತ್ರವಲ್ಲದೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನನಿತ್ಯದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ, ಬರವಣಿಗೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಗುತ್ತಿರುವುದು ನಮಗೆಲ್ಲ ಪ್ರೇರಣೆಯ ವಿಚಾರ.
ಲೆಕ್ಕವಿಲ್ಲದಷ್ಟು ಸನ್ಮಾನ ಪ್ರಶಸ್ತಿಗಳನ್ನು ಪಡೆದು ಯಾವುದೇ ಜಂಬವಿಲ್ಲದೆ ನಮ್ಮಂತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಮೊದಲಿಗರು. ಇವರ ಕೃತಿ “ಕಲೆ. ಸೆಲೆ” ಯಲ್ಲಿ
ರಂಗಭೂಮಿಯ ಕ್ರಿಯಶೀಲ ವ್ಯಕ್ತಿತ್ವ ಗೊರೂರು ಅನಂತರಾಜು ಇದು
ಕೃತಿಕಾರರ ಪರಿಚಯ ಬರಹ. ಕೃತಿಯ 40 ಲೇಖನಗಳಲ್ಲಿ ನಾಟಕ, ಚಿತ್ರಕಲೆ, ನೃತ್ಯ ಸಂಗೀತ ಸಾಧಕರ ಪರಿಚಯ ಲೇಖನಗಳು ಕಲೆಯ ಸೆಳೆತಕ್ಕೆ ಒಳಗಾಗಿ ಆ ಪ್ರಕಾರದಲ್ಲಿ ತಮ್ಮ ಕಲಾ ಕೌಶಲ್ಯತೆ ತೋರಿ ಗುರುತಿಸಿಕೊಂಡವರದು. ಇಲ್ಲಿ ಇತ್ತೀಚೆಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದ ಮಹನೀಯರು ಒಳಗೊಂಡಿದ್ದಾರೆ.
ಪ್ರದರ್ಶಿತ ನಾಟಕಗಳನ್ನು ವೀಕ್ಷಿಸಿ ಬರೆದ ವಿಮರ್ಶೆ ಲೇಖನಗಳು, ನಟರು, ಚಿತ್ರ ಕಲಾವಿದರು, ಗಾಯಕರು ಉತ್ತಮ ಚಲನಚಿತ್ರಗಳು ಮತ್ತು ನೃತ್ಯ ಹೀಗೆ ಹಲವಾರು ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡ ಕಲಾ ವೈವಿಧ್ಯತೆಯ ಕೃತಿ ಇದು.

ಮೊದಲನೇ ನಾಟಕ ವಿಮರ್ಶೆ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕಗಳು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಗಿವೆ. ಲೇಖಕರು ಈ ನಾಟಕಗಳನ್ನು ನೋಡಿ ಬರೆದಿದ್ದು ಪೂರ್ಣ ಮಾಹಿತಿ ಒಳಗೊಂಡ ಈ ಲೇಖನ ಉತ್ತಮ ಪ್ರಯೋಗ.

‘ಶಿಶುನಾಳ ಷರೀಫರ ಜೀವನ ಗಾಥೆ’

ಎರಡು ನಾಟಕಗಳ ಪ್ರದರ್ಶನ ಸುಲಲಿತವಾಗಿ ಓದುಗರ ಮನ ಮುಟ್ಟುವಂತೆ ವಿಚಾರಗಳನ್ನು ವ್ಯಕ್ತಪಡಿಸುವ ಕಲೆಯು ಸರಳತೆಯಿಂದ ಕೂಡಿ ಅರ್ಥಪೂರ್ಣವಾಗಿದೆ. ಹಾಸನದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಂಜುನಾಥ ಬೆಳಕೆರೆ ರಚಿತ ಶರೀಫ ನಾಟಕ ಪ್ರದರ್ಶಿಸಿದರು. ಇಲ್ಲಿ ನಾಟಕದ ವಿಚಾರ ಸಾರವತ್ತಾಗಿ ತಿಳಿಸಿದ್ದಾರೆ.
ನಂತರದ ಐತಿಹಾಸಿಕ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ ನಾಟಕಗಳಲ್ಲಿ ಐತಿಹಾಸಿಕ ಹಿನ್ನೋಟ ವಿಭಿನ್ನ ಪ್ರಯೋಗ ಬಹಳ ಸೊಗಸಾಗಿ ಅಲ್ಲಿಯೇ ಕುಳಿತಿದ್ದೇವೆನೋ ಎಂಬಂತೆ ಭಾಸವಾಗಿ ವಿಚಾರ ವಿಷಯ ಮನದಟ್ಟಾಗುತ್ತವೆ. ಕೇರಿ ಹಾಡು ನಾಟಕ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಾಸನ ಹೇಮಾವತಿ ನಗರದ ಎಲೈಟ್ ಶಾಲೆಯ ರಂಗಮಂದಿರದಲ್ಲಿ ಚನ್ನರಾಯಪಟ್ಟಣ ತಾ. ದಿಂಡಗೂರಿನ ಮಾತೆ ಸಾವಿತ್ರಿ ಪುಲೆ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಕಲಾವಿದರು ಕೆ ಚಂದ್ರಶೇಖರ್ ರಚನೆ ನಿರ್ದೇಶನದಲ್ಲಿ ಪ್ರದರ್ಶಿಸಿ ಸರಳ ರಂಗ ಸಜ್ಜಿಕೆಯಲ್ಲಿ ಗ್ರಾಮ್ಯ ಬದುಕಿನ ನೈಜ ಚಿತ್ರಣ ಅನಾವರಣಗೊ೦ಡಿದೆ. ಹೀಗೆಯೇ ನಾಟಕಗಳು ರಂಗಭೂಮಿಯ ಮೇಲೆ ಯಾವ ರೀತಿ ವೈಭವಿಕರಿಸಿವೆ ಎಂಬುದನ್ನು ಪ್ರದರ್ಶನ ವಿವರಣೆಯಲ್ಲಿ ಕಾಣಬಹುದಾಗಿದೆ. ಮಹಾಭಾರತ ಪದ್ಮವ್ಯೂಹ ನಾಟಕ ರಂಗಾಯಣ ನಾಟಕ ವಿ ದ ಪೀಪಲ್ ಆಫ್ ಇಂಡಿಯಾ, ದಕ್ಷ ಕಥಾ ದೇವಿ ಕಾವ್ಯ, ಬಾಡಿದ ಬದುಕು ನಾಟಕ ಮತ್ತು ನಾಟಕಕಾರ ಗ್ಯಾರಂಟಿ ರಾಮಣ್ಣರ ಪರಿಚಯ ಪ್ರಚಂಡ ರಾವಣ ನಾಟಕ ಮತ್ತು ಪಾತ್ರಧಾರಿ ಜಗದೀಶ್ ರಾಮಘಟ್ಟ ಪರಿಚಯ, ಪೌರಾಣಿಕ ನಾಟಕಗಳು ರಂಗಗೀತೆಗಳೇ ರ್ಮೆಲುಗೈ! ಆನಂತರದಲ್ಲಿ ದಿಬ್ಬೂರು ರಮೇಶ್ ಅವರ ಇವನಾರವ ನಾಟಕ ವಿಮರ್ಶೆ, ಅಶೋಕನ ಯುದ್ಧ ಮಾತಿನಲ್ಲಿ ಗೆದ್ದ ಬಾಲೆ, ದೇವಿ ಮಹಾತ್ಮೆ ನಾಟಕ ಗೋವಿಂದಗೌಡರು, ಹಾಡು ನಾಟಕ ಎರಡಕ್ಕೂ ಸೈ ರಾಣಿ ಚರಾಶ್ರೀ.. ಹೀಗೆ ನಾಟಕ ಮತ್ತು ಕಲಾವಿದರ ವ್ಯಕ್ತಿ ಪರಿಚಯಗಳನ್ನು ನಾಟಕಗಳ ಜೊತೆಗೆ ಕಾಣಬಹುದಾಗಿದೆ. ಆನಂತರದಲ್ಲಿ ಕೆಲವು ಪ್ರಶಸ್ತಿ ವಿಜೇತ ಚಲನಚಿತ್ರಗಳ ಬಗ್ಗೆಯೂ ಸೊಗಸಾಗಿ ವಿಚಾರಗಳು ಓದುಗರ ಕಣ್ಮುಂದೆ ಬರುವಂತೆ ಬರೆದಿದ್ದಾರೆ. ನಾ ನೋಡಿದ ಶ್ರೀಮಂತ ಚಲನಚಿತ್ರ, ಬ್ರಹ್ಮ ಕಮಲ ಚಲನಚಿತ್ರ, ಪ್ರಮುಖವಾಗಿ ವಿಶ್ಲೇಷಿಸಲ್ಪಟ್ಟಿವೆ. ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಮಕ್ಕಳ ನೃತ್ಯ ಪ್ರದರ್ಶನ, ನಾಟ್ಯ ಪ್ರತಿಭೆ ಸುಬ್ರತಾ ಪಿ. ಚನ್ನರಾಯಪಟ್ಟಣ, ಬಾಲ ಪ್ರತಿಭೆ ಶೃಜನ್ಯ ಜೆ. ಕೋಟ್ಯಾನ್, ಭರತನಾಟ್ಯ ಪ್ರವೀಣೆ ಯೋಗಿತಾ ಪಿ ಪಾಟೀಲ್ ಇವು ನೃತ್ಯ ಪ್ರಕಾರದವು. ತತ್ವಪದ ಗಾಯಕರು ಜೆ.ಪಿ. ಶಿವನಂಜೇಗೌಡರು, ತತ್ವಪದ ಗಾಯಕ ಯೋಗೇಂದ್ರ ದುದ್ದ ಇವರು ಜನಪದ ಗಾಯಕರು ಮತ್ತು ಸಾಧಕರು ಭಾವಚಿತ್ರ ರಚನೆಯ ಬಾಬುರಾವ್ ನಡೋಣಿ ನಾಡಿನ ಅದ್ಭುತ ಚಿತ್ರ ಕಲಾವಿದರು. ಚಿತ್ರ ಕಲಾವಿದೆಯರು ಪ್ರೀತಿ ಹೆಚ್ ಪಿ , ಚಂದ್ರಪ್ರಭಾ, ಮಂಜುಳ,ವಿಮಲ ಎಸ್.ಕೆ. ನೇಚರ್ ಆರ್ಟಿಸ್ಟ್ ಮುರಳಿ ಎಸ್ ಕೆ ಭರವಸೆಯ ಚಿತ್ರಕಲಾವಿದ ಬಿ ಎಸ್ ನಂದನ ಭರವಸೆಯ ಯುವ ಪ್ರತಿಭೆಗಳು. ಜಾನಪದ ಕಲಾವಿದ ಶಿವಣ್ಣ ಬಿರಾದಾರ, ಕೊಳಲು ವಾದನ ಆರ್ ಬಿ ಪುಟ್ಟೇಗೌಡರು, ಗಮಕಿ ಸಿ.ಪಿ. ವಿದ್ಯಾಶಂಕರ, ಜನಪದ ಗಾಯಕ ಕುಮಾರ್ ಕಟ್ಟೆ ಬೆಳಗುಳಿ, ಇವರು ತಮ್ಮ ತಮ್ಮ ಕಲಾಕ್ಷೇತ್ರದ ಸಾಧಕರೇ ಸೈ. ಅಬ್ಬಾ! ಅದು ಅದ್ಭುತ ಗಾಲಿ ನೃತ್ಯ ಲೇಖನ ನಿಜಕ್ಕೂ ಅದ್ಭುತವೇ! ರಂಗ ನಿರ್ದೇಶಕ ಗಾಡೇನಹಳ್ಳಿ ವೀರಭದ್ರಾಚಾರ್, ಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ, ಸಾಹಿತ್ಯ ಪರಿಚರಿಕೆ ಕನ್ನಡ ಸೇವೆ ಸಿಸಿರಾ ಇವು ಕಲೆ ಸಂಸ್ಕೃತಿ ಉಳಿಸಬಲ್ಲವು.

ಕಲಾ ಸಾಧಕರ ಬಗ್ಗೆ, ನಾಟಕಗಳ ಬಗ್ಗೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ, ಎಲೆ ಮರೆಕಾಯಿಯಾಗಿ ಉಳಿದ ಕಲಾವಿದರ ವಿಚಾರಗಳನ್ನು ಒಳಗೊಂಡ ಕೃತಿ ಕಲೆ ಸೆಲೆ ಕಲಾವಿದರನ್ನು ಬೆಳಕಿಗೆ ತರುವಲ್ಲಿ ಸಾಫಲ್ಯ ಸಾಧಿಸಿದೆ.

ಹೆಚ್.ಎಸ್. ಪ್ರತಿಮಾ ಹಾಸನ್.