ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು-ಶಿವಸ್ವಾಮಿ.

ಗಂಗಾವತಿ: ನಗರದ ಜೂನಿಯರ್ ಕಾಲೇಜಿನಲ್ಲಿ ಫೆಬ್ರವರಿ-೮ ಶನಿವಾರದಂದು ಕಾಲೇಜು ಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕರಾದ ಶ್ರೀ ಎ.ಎಂ.ಶಿವಸ್ವಾಮಿಯವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಆಗಿ ಹೋದ ಜೀವಪರ ಸಾಹಿತಿಗಳು, ಕವಿಗಳು, ದಾರ್ಶನಿಕರು, ಸಂತರು, ದಾಸರು ಇವರು ಹೇಳಿಕೊಟ್ಟ ಸಾಮರಸ್ಯದ ಬದುಕು ನಮ್ಮದಾಗಬೇಕು. ಇಂತಹ ಮಹನೀಯರ ಸಮಾಜಮುಖಿ ಚಿಂತನೆಗಳು ನೆಮ್ಮದಿಯ ಹೊಸ ಭಾರತ ಕಟ್ಟವುದಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿವೆ ಎನ್ನುವ ವಿಷಯ ಕುರಿತು ಬಹಳ ವಿಸ್ತಾರವಾಗಿ ಮಾತನಾಡಿದರು. ವಿಜ್ಞಾನದ ಸಂಶೋಧನೆಗಳ ಲಾಭವನ್ನು ನಾವು ನಮ್ಮ ಜೀವನದ ಪ್ರತಿ ಹಂತದಲ್ಲಿ ಅನುಭವಿಸುತ್ತಿದ್ದೇವೆ. ಆದರೆ ವೈಜ್ಞಾನಿಕವಾಗಿ ನಾವು ಬದುಕುವುದನ್ನು ರೂಡಿಸಿಕೊಳ್ಳಲೇ ಇಲ್ಲ ಅನ್ನೋದು ದೊಡ್ಡ ದುರಂತ. ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕದ ಅಧ್ಯಯನದ ಜೊತೆಗೆ ಕುವೆಂಪು, ಬಸವಣ್ಣ, ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು, ಕನಕದಾಸರು, ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ ಇವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು. ಈ ಮಹನಿಯರು ಹೇಳಿರುವಂತಹ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವೂ ಬದುಕಿ ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ. ಯಾಕೆಂದರೆ ತಂದೆ ತಾಯಿಯವರ ಋಣಕ್ಕಿಂತಲೂ ಸಮಾಜದ ಋಣ ದೊಡ್ಡದು. ನೀವು ಸಂಪಾದನೆ ಮಾಡಿದ್ದನ್ನು ಬರೀ ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಬಳಸದೆ ಸಮಾಜದ ಹಿತಕ್ಕಾಗಿ ಬಳಸುವುದನ್ನು ಕಲಿತರೆ ಮಾತ್ರ ಜೀವನ ಸಾರ್ಥಕ ಎಂದರು.

ಸಮಾರಂಭವನ್ನು ಕೊಪ್ಪಳ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯ, ಉಲ್ಲಾಸಭರಿತನಾದ ವ್ಯಕ್ತಿ ಹೆಚ್ಚು ಕೆಲಸ ನಿರ್ವಹಿಸಬಲ್ಲ ಹಾಗೂ ಸಾಧನೆ ಮಾಡಬಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಂತೋಷದಿಂದ ಇರಬೇಕೆಂದು ತಿಳಿ ಹೇಳಿದರು.

ಆರಂಭದಲ್ಲಿ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್‌ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಶ್ ಮಡಿವಾಳರ, ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಶ್ರೀಮತಿ ರಮಾ, ಪ್ರೌಢಶಾಲೆಯ ಉಪಪ್ರಚಾರ್ಯರಾದ ಬಸವರಾಜಯ್ಯ ಸ್ವಾಮಿಯವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅಜಗರ್ ಪಾಷಾ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರುಗಳಾದ ಡಾ. ರವಿಚಂದ್ರನ್ ಹಾಗೂ ನಿರುಪಾದಿ ನೆರೆವೇರಿಸಿದರು. ಶ್ರೀಮತಿ ಕನಕಮ್ಮ ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗಪ್ಪ ಎಂ., ಕುಮಾರಸ್ವಾಮಿ ಜಿ., ಈಶ್ವರಪ್ಪ ಸಿ., ಶ್ರೀಮತಿ ಸಾವಿತ್ರಿ ಬಿ., ಶ್ರೀಮತಿ ಲಕ್ಷ್ಮಿ ಜೆ., ರುದ್ರೇಶ ತಬಾಲಿ, ಶ್ರೀಮತಿ ಲಲಿತಾ ಕಂದಗಲ್, ಚಿದಾನಂದ ಮೇಟಿ, ಶ್ರೀಮತಿ ಶ್ರೀದೇವಿ, ಮಹೇಶ, ಶ್ರೀಮತಿ ಕವಿತಾ ಜೆ.ಎಂ. ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಉತ್ತರ ಭಾರತ ವಿಜಯಯಾತ್ರೆ ಪ್ರಯುಕ್ತ ಶಾಖಾಮಠಗಳಲ್ಲಿ ವಿಶೇಷ ಪೂಜೆ: ನಾರಾಯಣರಾವ್ ವೈದ್ಯ

ಗಂಗಾವತಿ: ಶೃಂಗೇರಿಯ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹಗಳೊಂದಿಗೆ ಹಾಗೂ ಪೂಜ್ಯರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಉತ್ತರ ಭಾರತದ ವಿಜಯ ಯಾತ್ರೆಯ ಪ್ರಯುಕ್ತ ೨೦೦ ಕ್ಕೂ ಅಧಿಕ ಶಾಖಾ ಮಠಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಶುಕ್ರವಾರದಂದು ಶ್ರೀಮಠದ ಆವರಣದಲ್ಲಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿ, ಶ್ರೀ ವಿದುಶೇಖರ ಮಹಾಸ್ವಾಮಿಗಳು ಧರ್ಮಯಾತ್ರೆಯ ಪ್ರಯುಕ್ತ ಬಳ್ಳಾರಿ, ಗಂಗಾವತಿ ಹಾಗೂ ಹೊಸಪೇಟೆಯ ಬಳಿಕ ತ್ರಿವೇಣಿ ಸಂಗಮ ಕುಂಭಮೇಳದಲ್ಲಿ ಪುಣ್ಯಸ್ನಾನವನ್ನು ನೆರವೇರಿಸುವುದರ ಮೂಲಕ ಶುಕ್ರವಾರದಂದು ಮೋಕ್ಷಪುರಿ ಕಾಶಿಯಲ್ಲಿ ಶ್ರೀ ಅನ್ನಪೂರ್ಣ ದೇವಿ ಮಂದಿರದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿದ ಪ್ರಯುಕ್ತ ಶ್ರೀಮಠದಲ್ಲಿ ಬೆಳಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಹಾಗೂ ಸಂಜೆ ಶ್ರೀ ಜಗದ್ಗುರು ಶಂಕರಾಚಾರ್ಯರು ರಚಿಸಿದ ಲಲಿತ ಸಹಸ್ರನಾಮ ಪಠಣ, ವಿಶ್ವನಾಥಾಷ್ಠಕ ಪಠಣ, ಶ್ರೀ ಕಾಳಭೈರವಾಷ್ಠಕ ಪಠಣ ಸೇರಿದಂತೆ ಶ್ರೀ ಅನ್ನಪೂಣೇಶ್ವರಿಯ ಮಹಾಪಾರಾಯಣ ಅಪಾರ ಭಕ್ತಾದಿಗಳ ಮಧ್ಯೆ ಶ್ರೀ ಶಾರದಾಶಂಕರ ಭಕ್ತಮಂಡಳಿ ಹಾಗೂ ಇತರೆ ಭಜನಾ ಮಂಡಳಿಗಳ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಜರುಗಿತು. ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಕಾಶಿಯಿಂದಲೇ ಧರ್ಮಜಾಗೃತಿ ನಡೆಸಿರುವುದು ವಿಶೇಷವಾಗಿದೆ. ಸನಾತನ ಎಂಬುವುದು ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದಾಬಾಯಿ ಬಾಲಕೃಷ್ಣ ದೇಸಾಯಿ ಶ್ರೀ ಅನ್ನಪೂಣೇಶ್ವರಿ ದೇವಿಯ ಕುರಿತು ಅತಿಥಿ ಉಪನ್ಯಾಸ ನೀಡಿದರು. ಹಾಗೆಯೇ ಆಯ್ದಕ್ಕಿ ಲಕ್ಕಮ್ಮ ವಸತಿ ನಿಲಯದ ೪೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶ್ರೀ ಶಾರದಾದೇವಿ ಅನುಗ್ರಹ ಕಲ್ಪಿಸುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ ಅಳವಂಡಿಕರ್, ಶೇಷಗಿರಿ ಗಡಾದ್, ವೇಣುಗೋಪಾಲ್, ಮೋಹನ ಲೆಕ್ಕಿಹಾಳ, ಸತೀಶ ಕೋಮಲಾಪುರ, ಪ್ರಸನ್ನ ಜೋಷಿ, ದಿಗಂಬರ ವೈದ್ಯ ಸೇರಿದಂತೆ ವಿವಿಧ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಿತು.

ಪಾಲಕಿ ಉತ್ಸವ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಮದ್ವ ಜಯಂತಿ ಸಂಪನ್ನ

ಗಂಗಾವತಿ.:ನಗರದ ಯೋಗೀಶ್ವರ ಯಾಜ್ಞವಲ್ಕ್ಯಮಂದಿರದಲ್ಲಿ ಗುರುವಾರದಂದು ಜರುಗಿದ ಮಧ್ವ ನವಮಿ ಉತ್ಸವ ಪಾಲಕಿ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ. ವೇದಮೂರ್ತಿ ಪ್ರದೀಪ ಆಚಾರ್ ಅವರು ವೆಂಕಟೇಶ್ ಲೆಕ್ಕಿಹಾಳ ದಂಪತಿಗಳಿಗೆ ಮಹಾಸಂಕಲ್ಪ, ಅಷ್ಟವಧಾನ ಸೇವೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನೆ ನೃತ್ಯಗಳಿಂದ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿಧರ್ ಕುಲಕರ್ಣಿ. ಸತೀಶ್. ಪ್ರಭಾಕರ್ ದಿನ್ನಿ. ತಿರುಮಲ್ ರಾವ್ ಆಲಂಪಲ್ಲಿ, ರಾಘವೇಂದ್ರ ಮೇಗೂರು ಲಕ್ಷ್ಮಣ ಜಮಖಂಡಿ. ಕೋಮಲಾಪುರ ಪ್ರಹ್ಲಾದ್ ಸೇರಿದಂತೆ ಮಹಿಳಾ ಭಜನಾ ಮಂಡಳಿಯ ಸದಸ್ಯರು. ಭಕ್ತರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಗಂಗಾವತಿ: ಫೆಬ್ರವರಿ-೭ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮ ಉದ್ಘಾಟನೆ ಮಾಡಿ, ಉದ್ಘಾಟನಾ ಭಾಷಣ ಮಾಡಿದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬುರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸನ್ನು ಕಾಣಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವೇ ಅಸ್ತ್ರ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇನೆ ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೊತೆಗೆ ಜೀವನ ನಡೆಸಲು ಸ್ವ ಸಹಾಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಕೆಲಸಕ್ಕೆ ತನ್ನದೇ ಆದ ಗೌರವವಿದೆ, ಮಾಡುವ ಕಾರ್ಯಗಳಲ್ಲಿ ಶ್ರೇಷ್ಠ, ಕನಿಷ್ಠ, ಭಾವನೆಗಳನ್ನು ಇಟ್ಟುಕೊಳ್ಳಬಾರದು, ಸರ್ಕಾರಿ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ಮಾತ್ರ ಆರ್ಥಿಕವಾಗಿ ಬಡವರೇ ಹೊರತು ವಿದ್ಯಾರ್ಥಿಗಳು ಅಲ್ಲ. ಬಡವರು ಅಥವಾ ಶ್ರೀಮಂತರಾಗುವುದು ನಿಮ್ಮ ಕೈಯಲ್ಲಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷ ಸಂಸ್ಥೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ೧೦೦ ಚೇರ್‌ಗಳನ್ನು ವಿದ್ಯಾನಿಕೇತನ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ನೆರವೇರಿಸಿದರು. ಸ್ವಾಗತವನ್ನು ಈಶ್ವರಪ್ಪ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಮದ್ಯದಲ್ಲಿ ಬಿಡುಗಡೆಯಾದವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸೋಮಶೇಖರ್ ಗೌಡ, ಅಜಗರ ಪಾಶ, ಸಾವಿತ್ರಿ, ಲಕ್ಷ್ಮಿ ಜೆ. ರಮಾ, ಲಲಿತಾ ಕಂದಗಲ್, ನಾಗಪ್ಪ ಎಂ., ಚಿದಾ

ನಂದ ಮೇಟಿ, ಶ್ರೀದೇವಿ, ರುದ್ರೇಶ್ ತಬಾಲಿ, ಹಾಗೂ ಅತಿಥಿ ಉಪನ್ಯಾಸಕರಾದ ಶ್ರೀಮತಿ ಕನಕಮ್ಮ, ಡಾ. ರವಿಚಂದ್ರ, ನಿರುಪಾದಿ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಮಹೇಶ್ ವಂದನಾರ್ಪಣೆ ಮಾಡಿದರು.

Read More ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಶ್ರೀ ಪ್ರಸನ್ನ ಪಂಪ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ನ ಸಂತರ್ಪಣೆ.


ಗಂಗಾವತಿ. ಇತಿಹಾಸ ಪ್ರಸಿದ್ಧ ಹಿರೇ ಜಂತಕಲ್ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಗಂಗಾವತಿ ನಗರ ಸೇರಿದಂತೆ ಜಾತ್ರೆಗೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಡೆಯನ್ನು ಆಯೋಜಿಸಲಾಗಿದೆ ಎಂದು. ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಸ್ಥಾನದಷ್ಟೇ ಅತ್ಯಂತ ಶಕ್ತಿ ಪೀಠವಾಗಿ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭಗೊಂಡ ರಥೋತ್ಸವ ಹಾಗೂ ಎರಡು ದಿನಗಳ ಕಾಲ ಜರುಗಲಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಆಗಮಿಸುವ. ಸರ್ವರಿಗೆ. ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬುಧವಾರದ ಜನಪದ ಗೀತೆಗಳು ಕಾರ್ಯಕ್ರಮ ಸೇರಿದಂತೆ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಪ್ರತಿದಿನ ಸಂಜೆ 7:00 ಯಿಂದ ರಾತ್ರಿ 11:30ವರೆಗೆ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಕಲೆ ಸಾಹಿತ್ಯ ಸಂಸ್ಕೃತಿ. ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈಡಿಗರ ಪರಮೇಶ್ವರ, ಜಿ ಆರ್ ಎಸ್ ಸತ್ಯಕುಮಾರ್, ಉಪ್ಪಾರ್ ಚಂದ್ರಶೇಖರ್, ವೈ ಸೋಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದು. ದಾಸೋಹದ ನೇತೃತ್ವವನ್ನು ಪ್ರಥಮ ದಿನದಂದು ಹೆಚ್ ಜಿ ರಾಮುಲು ಕುಟುಂಬಸ್ಥರು ಬುಧವಾರದಂದು ಜಿ ಆರ್ ಎಸ್. ಕುಟುಂಬಸ್ಥರು ಹಾಗೂ. ಗುರುವಾರದಂದು ಗಾಣಿಗ ಸಮಾಜ ಬಾಂಧವರು ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ಮುಖಂಡರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು

ಭಾರತೀಯ ಬಾಲ ವಿದ್ಯಾಲಯದ ಸುವರ್ಣ ಮಹೋತ್ಸವದ ಲೊಗೊ ವಿರುಪಾಕ್ಷಪ್ಪ ಸಿಂಗನಾಳ ಅವರಿಂದ ಬಿಡುಗಡೆ

ಗಂಗಾವತಿ: ತಾಲೂಕಿನ ಪ್ರಗತಿನಗರದ ಭಾರತೀಯ ಬಾಲ ವಿದ್ಯಾಲಯದಲ್ಲಿ ಫೆಬ್ರವರಿ-೦೮ ಮತ್ತು ೦೯ ಎರಡು ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸವದ ಲೋಗೋ ವನ್ನು ಫೆಬ್ರವರಿ-೦೨ ರವಿವಾರ ಬಿಡುಗಡೆ ಮಾಡಲಾಯಿತು.

ಈ ಲೋಗೊ ಬಿಡುಗಡೆ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಫೆಬ್ರವರಿ-೮ ಮತ್ತು ೯ ಎರಡು ದಿನಗಳು ನಡೆಯುವ ಸುವರ್ಣ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಆಚರಿಸೋಣ, ಎಲ್ಲಾ ಹಿರಿಯ ಗುರುಗಳು, ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.

ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಸುಬ್ಬರಾಜು, ಸತೀಶ, ವಿರೇಶ ಹಣವಾಳ, ಶ್ರೀಕಾಂತ ಮರಳಿ, ಮುಖ್ಯ ಗುರುಗಳಾದ ಹೇಮಂತರಾಜ ಕಲ್ಮಂಗಿ ಉಪಸ್ಥಿತರಿದ್ದರು.

ಲಕ್ಷ್ಮಿಕಾಂತ್ ಹೇರೂರು ಅವರ ಶಿಕ್ಷಣ, ಸಮಾಜಕ್ಷೇತ್ರದಲ್ಲಿನ ಸೇವೆಗೆ ಸೇಡಮ್‌ನಲ್ಲಿ “ಕಲ್ಯಾಣ ಕರ್ನಾಟಕ ಗೌರವ ಪುರಸ್ಕಾರ”

ಗಂಗಾವತಿ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಕಲಬುರ್ಗಿ ಇವರು ಜನವರಿ-೨೯ ರಿಂದ ಫೆಬ್ರವರಿ-೦೬ ರವರೆಗೆ ಸೇಡಮ್‌ನ ಕಲಬುರ್ಗಿ ರಸ್ತೆಯ ಪ್ರಕೃತಿನಗರ ಬೀರನಹಳ್ಳಿಯಲ್ಲಿ ಜರುಗಿದ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿಯ ಹಿನ್ನೆಲೆಯಲ್ಲಿ ಜನೇವರಿ-೦೪ ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಶಿಕ್ಷಣ, ಸಮಾಜಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಗಂಗಾವತಿಯ ಲಕ್ಷ್ಮೀಕಾಂತ್ ಹೇರೂರು ಅವರಿಗೆ ಕಲ್ಯಾಣ ಕರ್ನಾಟಕ ಗೌರವ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಲಕ್ಷ್ಮೀಕಾಂತ ಹೇರೂರು ಅವರು ಗೌರವ ಸ್ವೀಕರಿಸಿ, ೨೪೦ ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಆಯೋಜಿಸಿದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಕ್ಕಳ ಲೋಕ, ವಿಜ್ಞಾನ ಲೋಕ, ಕೃಷಿ ಲೋಕ, ತತ್ವ ಲೋಕ, ಕಾಯಕ ಲೋಕ, ಬಾಲ ಲೋಕ, ಸ್ವದೇಶಿ ಉದ್ಯಮ ಲೋಕ, ಉದ್ಯಮ ಲೋಕ, ಜ್ಞಾನಲೋಕ ಮುಂತಾದ ವಿವಿಧ ಆಯಾಮಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯವಾದದ್ದು. ನನ್ನ ಪ್ರತಿಭೆಗೆ ಸದಾ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಎಲ್ಲಾ ಆಡಳಿತ ಮಂಡಳಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.

ಇವರಿಗೆ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ತಿಳಿಸಿದ್ದಾರೆ.

ವಸಂತ ಪಂಚಮಿ ಪ್ರಯುಕ್ತ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.

ಗಂಗಾವತಿ. ವಸಂತ ಪಂಚಮಿ ಪ್ರಯುಕ್ತ ಸೋಮವಾರದಂದು ಶೃಂಗೇರಿಯ ಶಾರದಾ ಪೀಠದ ಗಂಗಾವತಿ ಶಂಕರ ಮಠದ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೇತೃತ್ವದಲ್ಲಿ ಜರುಗಿದವು.
ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಇವುಗಳ ಜೊತೆಗೆ 14 ಅಧಿಕ ಚಿಕ್ಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅಕ್ಷರ ಅಭ್ಯಾಸವನ್ನು ನೆರವೇರಿಸಲಾಯಿತು.
ಜೊತೆಗೆ ವಿವಿಧ ಶಾಲಾ ಕಾಲೇಜುಗಳ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಂಕಲ್ಪವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಮಾರ್ ಮಾತನಾಡಿ, ಮಾಘ ಮಾಸದ ಸೋಮವಾರ ದಿನವಾದ ಇಂದು ರೇವತಿ ನಕ್ಷತ್ರದ ಈ ಶುಭದಿನ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕಾಗಿ ಶ್ರೀ ಶಾರದಾ ಮಾತೆಯನ್ನು ಪೂಜಿಸುವ ಮಹತ್ವ ದಿನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಕಲ್ಪ, ಅಕ್ಷರ ಅಭ್ಯಾಸ ವಿದ್ಯಾರ್ಥಿಗಳಿಗೆ ನೆರವೇರಿಸಲಾಯಿತು. ಪಾಲಕರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಒಬ್ಬರ ಮನ ನೋಯಿಸದೆ ಸುದೀರ್ಘ ಸೇವೆ ಸಲ್ಲಿಸಿದ ಭೀಮಣ್ಣ ಅಜಾತ ಶತ್ರು: ರಾಘವೇಂದ್ರ ನಾಯರಿ

ಗಂಗಾವತಿ: ಅರವತ್ತು ವರ್ಷದ ಬದುಕಿನಲ್ಲಿ ನಲವತ್ತೆರಡು ವರ್ಷಗಳನ್ನು ಕೆನರಾ ಬ್ಯಾಂಕ್ ಸೇವೆಯಲ್ಲಿಯೇ ಕಳೆದುದು ವಿಶೇಷವಲ್ಲ. ಇಡೀ ತನ್ನ ಸೇವಾ ಅವಧಿಯಲ್ಲಿ ಸಹೋದ್ಯೋಗಿ ಹಾಗೂ ಗ್ರಾಹಕರಿಗೆ ಮನ ನೋಯುವಂತಹ ಒಂದೇ ಒಂದು ಮಾತನ್ನಾಡದ ಭೀಮಣ್ಣನವರದು ವಿಸ್ಮಯ ವ್ಯಕ್ತಿತ್ವವೆಂದು ಅಖಿಲ ಭಾರತ ಕೆನರಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕೆನರಾಬ್ಯಾಂಕ್‌ನಲ್ಲಿ ಸೇವಾ ನಿವೃತ್ತಿಹೊಂದಿದ ಭೀಮಣ್ಣನವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭೀಮಣ್ಣನವರು ನನಗೆ ಸಹೋದ್ಯೋಗಿಯ ಜೊತೆಗೆ ನನಗೆ ಅಣ್ಣನ ಸ್ಥಾನದಲ್ಲಿದ್ದರು ಎಂದು ೩೩ ವರ್ಷಗಳ ಹಿಂದಿನ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ನಿವೃತ್ತಿಯ ನಂತರವೂ ಗಂಗಾವತಿ ಶಾಖೆಯಲ್ಲಿ ನೆನಪು ಮಾಡಿಕೊಳ್ಳುವ ವ್ಯಕ್ತಿತ್ವ ಭೀಮಣ್ಣನವರದು ಎಂದು ತಮ್ಮ ಹಲವಾರು ಪ್ರಸಂಗಗಳನ್ನು ಹಂಚಿಕೊಂಡರು.
ನಿವೃತ್ತ ನೌಕರರಾದ ರಾಘವೇಂದ್ರರಾವ್ ಅಳವಂಡಿಕರ್, ಕೆ. ಬಸವರಾಜ, ಮಹಾದೇವಪ್ಪ ಐಲಿ, ವೈ.ಎಸ್ ಕಲ್ಲೂರು, ಹೆಚ್. ರೇಣುಕಪ್ಪ ತಮ್ಮ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.
ಭೌತಿಕವಾಗಿ ಭೀಮಣ್ಣನವರನ್ನು ಮುಟ್ಟಬಹುದೇ ಹೊರತು ಅವರ ವ್ಯಕ್ತಿತ್ವವನ್ನು ನಾವು ಮುಟ್ಟಲಾರೆವು ಎಂದು ಜುಲೈನಗರ ಶಾಖೆಯ ಬಿ.ಕೆ ವಾಸುದೇವರಾವ್ ಹೇಳಿದರೆ, ಕಾರಟಗಿ ಶಾಖೆಯ ಚಿದಂಬರ ಮುಜುಂದಾರ ಅವರು ಭೀಮಣ್ಣನವರ ಸೇವಾ ಅವಧಿಯ ಕೆಲ ಪ್ರಸಂಗಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಭೀಮಣ್ಣನವರ ಕುಟುಂಬವರ್ಗವು ಪಾಲ್ಗೊಂಡಿದ್ದು, ಮಕ್ಕಳಾದ ಪ್ರೇಮಲಕ್ಷ್ಮಿ, ಪ್ರಮೋದ ಹಾಗೂ ಪ್ರವೀಣ್ ರವರು ಮಾತನಾಡಿ, ಭೀಮಣ್ಣನವರ ಮಕ್ಕಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು. ಭೀಮಣ್ಣನವರ ಶ್ರೀಮತಿಯಾದ ರೇಣುಕಾ ಅವರು ಆನಂದಬಾಷ್ಪಗಳೊಂದಿಗೆ ಮೌನವಾಗಿಯೇ ಕಾರ್ಯಕ್ರಮವನ್ನು ಆಸ್ವಾದಿಸಿದರು.
ನೌಕರರಾದ ಶಿವಕುಮಾರ, ಬಸವರಾಜ, ಸುದರ್ಶನ, ರಾಜಶೇಖರ್ ಭೀಮಣ್ಣನವರ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.
ಶಾಖಾ ವ್ಯವಸ್ಥಾಪಕರಾದ ಸುಧೀಂದ್ರ ಜೋಶಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬ್ಯಾಂಕ್‌ನ ಠೇವಣಿ ಹಾಗೂ ವಸೂಲಾತಿಯಲ್ಲಿ ಭೀಮಣ್ಣನವರ ಸೇವೆ ಮರೆಯಲಾರದಂತಹುದು ಎಂದು ತಿಳಿಸಿದರು.
ಅನಿವಾರ್ಯ ಕಾರಣಗಳಿಂದ ಮುಖ್ಯ ವ್ಯವಸ್ಥಾಪಕ ಆರ್. ಗಿರಿಧರನ್ ಅವರ ಅನುಪಸ್ಥಿತಿಯನ್ನು ಜ್ಞಾಪಿಸಿಕೊಂಡ ನೌಕರರು, ಅವರು ಸಮಾರಂಭದಲ್ಲಿದ್ದಿದ್ದರೆ ಇನ್ನೂ ಹೆಚ್ಚಿನ ಮೆರುಗು ಬರುತ್ತಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಣ್ಣನವರು, ನಾನು ಬೇರೆ, ಬ್ಯಾಂಕ್ ಬೇರೆ ಎಂದು ತಿಳಿದುಕೊಳ್ಳದಿರುವುದೇ ಇಂದಿನ ತಮ್ಮ ಪ್ರೀತಿ, ವಿಶ್ವಾಸಕ್ಕೆ ಕಾರಣ ಎಂದು ತಾವು ಕಷ್ಟಪಟ್ಟ ಹಿಂದಿನ ಘಟನೆಗಳನ್ನು ಜ್ಞಾಪಿಸಿಕೊಂಡು ಕೆನರಾ ಬ್ಯಾಂಕ್ ನೌಕರಿಗೆ ಬರಲು ತಮ್ಮ ಧಣಿ ಬೃಂದಾವನ ಹೋಟಲ್‌ನ ದಿ|| ಸತ್ಯನಾರಾಯಣರವರೇ ಕಾರಣ ಎಂದು ಹೃದಯತುಂಬಿ ಹೇಳಿದರು.
ಶಾಖೆಯ ಕ್ಯಾಷಿಯರ್ ಹನುಮಂತಪ್ಪ ಇವರು ಅಚ್ಚುಕಟ್ಟಾಗಿ ಸಭಾ ನಿರ್ವಹಣೆಗೈದರು.

ತಿಪ್ಪೇಸ್ವಾಮಿ ಹೆಚ್. ಅವರ ಸಂಶೋದನೆಗೆ ಬಳ್ಳಾರಿ ವಿ.ವಿ ಡಾಕ್ಟರೇಟ್

ಗಂಗಾವತಿ: ನಗರದ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತಿಪ್ಪೇಸ್ವಾಮಿ ಹೆಚ್. ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ “ಎ ಸ್ಟಡಿ ಆನ್ ಪರ್ಫಾಮೆನ್ಸ್ ಆಫ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಂಡ್ ಇಟ್ಸ್ ಅಸೊಸಿಯೇಟ್ ಬ್ಯಾಂಕ್ಸ್ ಬಿಫೋರ್ ಆಂಡ್ ಆಫ್ಟರ್ ದಿ ಮರ್ಜರ್” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.
ಇವರ ಈ ಮಹಾಪ್ರಬಂಧಕ್ಕೆ ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಭೀಮನಗೌಡ ರವರು ಮಾರ್ಗದರ್ಶನ ನೀಡಿದ್ದಾರೆ.
ಈ ಕುರಿತು ತಿಪ್ಪೇಸ್ವಾಮಿ ಹೆಚ್. ಮಾತನಾಡಿ ನಾನು ಮೂಲತಃ ಕಂಪ್ಲಿ ತಾಲೂಕಿನ ನಂ: ೧೫ ಗೋನಾಳ ಗ್ರಾಮದ ಗ್ರಾಮೀಣ ನಿವಾಸಿಯಾಗಿದ್ದು, ಸಹಾಯಕ ಪ್ರಾಧ್ಯಾಪಕ ವೃತ್ತಿಯೊಂದಿಗೆ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲದೊಂದಿಗೆ ಈ ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಈ ಮಹಾಪ್ರಬಂಧವನ್ನು ಮಂಡಿಸಿರುತ್ತೇನೆ ಎಂದು ತಿಳಿಸಿದರು.
ಇವರಿಗೆ ಕುಟುಂಬಸ್ಥರು, ಸ್ನೇಹಿತರು, ವಿ.ಎಸ್.ಕೆ.ಯು.ಬಿ ಮತ್ತು ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ, ಸಿಬ್ಬಂದಿವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.