ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ

ಬೆಂಗಳೂರಿನ ರಂಗ ಭೂಮಿಯಲ್ಲಿ ನಿರಂತರವಾಗಿ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರ ರಾವ್ ರವರು ನನಗೆ ಪರಿಚಿತರೇನಲ್ಲ.

ಒಂದು ತಿಂಗಳ ಹಿಂದೆ, ನಾನು ಮಾಯಸಂದ್ರದ ನಟರಾದ ಟಿ. ನಾಗರಾಜ್ ರವರ  ಬಗ್ಗೆ ಬರೆದಿರುವ ಕಲಾ ಪರಿಚಯದ ಲೇಖನವನ್ನು ಓದಿ ಅವರು ಮೆಚ್ಚುಗೆಯ ಮಾತನಾಡಿದರು.

 

ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳುಹಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದೆ.

ಅದಕ್ಕಾಗಿ, ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು ತಂಡದಿಂದ ನಾಟಕ ಇದೆ ಬನ್ನಿ ಎಂದರು.

ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದಿ೦ದ ಜುಲೈ 4 ರಿಂದ 9 ರವರೆಗೆ ಆರು ದಿನಗಳ ಪೌರಾಣಿಕ ನಾಟಕೋತ್ಸವ ಹಮ್ಮಿಕೊಂಡಿತ್ತು.

ಅದರಲ್ಲಿ ಕಲಾವಿದ ಡಿ.ವಿ. ನಾಗಮೋಹನ್‌ರವರ  ತಂಡದ ನಾಟಕ ಪ್ರದರ್ಶನ ಏರ್ಪಾಡಾಗಿತ್ತು.

 

ಸಿ.ಎ. ರಾಮಚಂದ್ರರಾವ್ ನನಗೆ ಅವರ ನಟನೆಯ ವಿಡಿಯೋ ಕಳುಹಿಸಿದರು. ಅವರು ಪೌರಾಣಿಕ ರಂಗಭೂಮಿಯಲ್ಲಿ ತುಂಬಾ ಕೆಲಸ ಮಾಡಿದ್ದಾರೆ ಎಂದು ಅವರು ಕಳುಹಿಸಿದ ಮಾಹಿತಿಯಿಂದ ತಿಳಿದುಬಂದಿತು.

 

ಇವರು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ ಅಂಚೆ ಚಿಕ್ಕಯನಪಾಳ್ಯದಲ್ಲಿ ಜನಿಸಿದರು. ಇವರು ಶ್ರೀ ಅಪ್ಪುರಾವ್ ಹಾಗೂ ಶ್ರೀಮತಿ ಬೈನಾಬಾಯಿ ಅವರ ಐದನೇ ಸುಪುತ್ರರು.

ಇವರು 12 ವರ್ಷ ಬಾಲಕನಿದ್ದಾಗಲೇ ಗುಬ್ಬಿ ಕಂಪನಿಯ ಹೆಸರಾಂತ ಸಂಗೀತ ನಿರ್ದೇಶಕರಾದ ವಿರುಪಸಂದ್ರ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ ಪೌರಾಣಿಕ ನಾಟಕದ ಬಾಲ ಭೋಜನ ಪಾತ್ರದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು.

 

ತದನಂತರ, ಅದೇ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಶ್ರೀ ಕೃಷ್ಣಗಾರುಡಿ ಎಂಬ ನಾಟಕದಲ್ಲಿ ಮಾಯಾಮೋಹಿನಿ ಪಾತ್ರವನ್ನು ಮಾಡಿ ಪಾಂಡು ವಿಜಯ ನಾಟಕದಲ್ಲಿ ಅರ್ಜುನ ಪಾತ್ರವನ್ನು ಹತ್ತು ಬಾರಿ ಮಾಡಿದ್ದಾರೆ.

ಅಂದಿನ ಕಾಲಕ್ಕೆ ಸುತ್ತ ಮುತ್ತಲಿನ ಹಳ್ಳಿಗಾಡಿನ ಜನರ ಮನಸ್ಸನ್ನು ಗೆದ್ದಿರುವ ನಾಟಕವಿದು.

ಕುರುಕ್ಷೇತ್ರ ನಾಟಕದಲ್ಲಿ ಶ್ರೀ ಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಕರ್ಣ ಹಾಗೂ ಅಭಿಮನ್ಯು ಈ ಒಂದೊಂದು ಪಾತ್ರವನ್ನು ಹಲವಾರು ಬಾರಿ ಮಾಡಿದ್ದಾರೆ.

ರಾಮಾಯಣದಲ್ಲಿ ದಶರಥ, ಶ್ರೀರಾಮ, ಆಂಜನೇಯ, ರಾವಣ ಮತ್ತು ಭರತ ಇಷ್ಟು ಪಾತ್ರಗಳನ್ನು ಹಲವು ಬಾರಿ ಮಾಡಿದ್ದಾರೆ.

ರಾಜ ವಿಕ್ರಮ ನಾಟಕದಲ್ಲಿ ವಿಕ್ರಮ, ಶನೇಶ್ವರನ ಪಾತ್ರಗಳನ್ನು, ದಾನ ಶೂರ ವೀರ ಕರ್ಣ ನಾಟಕದಲ್ಲಿ ಭೀಮನ ಪಾತ್ರ ಮಾಡಿದ್ದಾರೆ.

1985ರಲ್ಲಿ ಮಾರುತಿ ಕಲಾಬಳಗ, ಎಲೆಕ್ಟ್ರಾನಿಕ್ ಸಿಟಿ ಎಂಬ ಸಂಘ ಸ್ಥಾಪಿಸಿತು. ಈ ಸಂಘದಿಂದ ಕಳೆದ 25 ವರ್ಷಗಳಿಂದ ಅನೇಕ ನಾಟಕಗಳನ್ನು ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಿ ಜನಮನ ಸೆಳೆದಿದ್ದಾರೆ.

ಈ ಮಾರುತಿ ಕಲಾ ಬಳಗದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಕಲಾವಿದರಿಗೂ ನಟಿಸಲು ಅವಕಾಶ ಕಲ್ಪಿಸಿದ್ದಾರೆ.

ನಲ್ಲಾತಂಗ ಎಂಬ ನಾಟಕದಲ್ಲಿ ರಾಮಸಿಂಹ, ವಂಗರಾಜ, ನಲರಾಜ ವಿಜಯಸಿಂಹ, ಶ್ರೀ ಶನೇಶ್ವರ ಪಾತ್ರಗಳನ್ನು ಒಂದೊಂದು ಪಾತ್ರಗಳನ್ನು 25 ಬಾರಿ ಮಾಡಿದ್ದಾರೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2007ರಿಂದ ಈವರೆಗೆ 150 ನಾಟಕ ಪ್ರದರ್ಶಿಸಿದ್ದಾರೆ. ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ 50 ಪ್ರದರ್ಶನವಾಗಿದೆ.

ಪ್ರಚಂಡ ರಾವಣ ನಾಟಕದಲ್ಲಿ ರಾವಣ, ಆಂಜನೇಯ ಪಾತ್ರಗಳಲ್ಲಿ ಅನೇಕ ಬಾರಿ ಅಭಿನಯಿಸಿದ್ದಾರೆ.

ಸುಭದ್ರ ಕಲ್ಯಾಣ ನಾಟಕದಲ್ಲಿ ಅರ್ಜುನ ಪಾತ್ರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ತಾ. 3-2-2025 ರಂದು ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಆಧರಿಸಿದಂತೆ.

ಹೆಸರಾಂತ ರಂಗ ಕಲಾವಿದರು ರಂಗಶ್ರೀ ರಂಗಸ್ವಾಮಿ ಅವರ ಪರಿಕಲ್ಪನೆಯಲ್ಲಿ ಹೆಸರಾಂತ ರಂಗಕರ್ಮಿ ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಯುಗೇ ಯುಗೇ ಪೌರಾಣಿಕ ನಾಟಕವು ಪ್ರದರ್ಶನಗೊಂಡಿತು.

ಈ ನಾಟಕವು ಇಂಡಿಯನ್ ಬುಕ್ ಅಫ್ ರೆಕಾರ್ಡ್‌ ನಲ್ಲಿ ದಾಖಲಾಗಿದೆ. ಈ ನಾಟಕದಲ್ಲಿ ತ್ರೇತ, ದ್ವಾಪರ ಯುಗಗಳ ರಾವಣ, ದುರ್ಯೋಧನ ಒಂದೇ ವೇದಿಕೆಯಲ್ಲಿ ಬಂದು ಈ ಎರಡು ಪಾತ್ರಗಳನ್ನು ಇವರು ಯಶಸ್ಸಿಯಾಗಿ ನಿಭಾಯಿಸಿದ್ದಾರೆ.

ಬೆಂಗಳೂರಿನ ಪುರಭವನದಲ್ಲಿ 2013ರಲ್ಲಿ ಸತತ 108 ಗಂಟೆಗಳ ಕಾಲ ಪ್ರದರ್ಶಿತ ಸಮಗ್ರ ಮಹಾಭಾರತ ಪೌರಾಣಿಕ ನಾಟಕದಲ್ಲಿ ಬಬ್ರುವಾಹನ ಪಾತ್ರ ನಿರ್ವಹಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಕಲಾವಿದರು, ಇವರಿಗೆ ಹಾಗೂ ಇವರ ತಂಡಕ್ಕೆ ಪ್ರಶಸ್ತಿ, ಪುರಸ್ಕಾರ ನೀಡಿ ಸನ್ಮಾನಿಸಿವೆ.

ಈ ವರೆಗೆ 250 ನಾಟಕಗಳನ್ನು ಶ್ರೀ ಮಾರುತಿ ಕಲಾ ಬಳಗದಿಂದ ಪ್ರದರ್ಶನ ಕೊಟ್ಟಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದಲ್ಲಿ ಬಿ.ಕಾಂ ಪದವಿ ಮಾಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸನ್ ವೇರ್ ಗ್ರೂಪ್ ಆಫ್ ಕಂಪನೀಸ್ ಎಚ್.ಆರ್. ಮ್ಯಾನೇಜರ್ ಆಗಿ 16 ವರ್ಷ ಸೇವೆ ಸಲ್ಲಿಸಿ ಈಗ ಜೆ.ಡಿ.ಎಸ್ ಪಕ್ಷದ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.

 

ಕೊನೆಯದಾಗಿ, ನಾನು ರೈತ ಕುಟುಂಬದಿಂದ ಬಂದರೂ ಸಹ ಈಗಲೂ ಹಳ್ಳಿಗೆ ಹೋಗಿ ಕೃಷಿ ಕೆಲಸ ಮಾಡುತ್ತೇನೆ.

ನನ್ನ ಜೀವಿತ ಕಾಲದಲ್ಲಿ ಇನ್ನೂ 250 ನಾಟಕಗಳನ್ನು ಅಭಿನಯಿಸುವ ಅಭಿಲಾಷೆ ಇದೆ ಎನ್ನುತ್ತಾರೆ.

ಗೊರೂರು ಅನಂತರಾಜು, ಹಾಸನ
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್
ಹಾಸನ – 573201

ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ದರ್ಶನ

ಗಂಗಾವತಿ ನಗರಸಭೆ ವ್ಯಾಪ್ತಿಯ ಪಂಪಾ ನಗರದ ಗೋಂದೊಳಿ ಸಮಾಜದ ಶ್ರೀ ಪಾಂಡುರಂಗ ಮಾಹಿತಿ ದೇವಸ್ಥಾನಕ್ಕೆ ರವಿವಾರದಂದು ಆಷಾಢ ಮಾಸದ ಪ್ರಥಮ ಏಕಾದಶಿಯ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಪಾಂಡುರಂಗ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಸೇರಿದಂತೆ ವಿವಿಧ ಹೂಗಳಿಂದ ಅಲಂಕಾರಿಸಲಾಗಿತ್ತು ಎಂದು ತಿಳಿಸಿದರು.

ವಿವಿಧ ಸಮಾಜದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಟನೆಯೊಂದಿಗೆ ಸಮಾಜ ಸೇವೆ ಎ.ವಿ.ರುದ್ರಪ್ಪಾಜಿರಾವ್ ಗೊರೂರು ಅನಂತರಾಜು, ಹಾಸನ.

ಹಾಸನದ ರಂಗಭೂಮಿಗೆ ಎ.ವಿ.ರುದ್ರಪ್ಪಾಜಿರಾವ್ ಅವರ ಕಲಾಸೇವೆ ಮರೆಯುವಂತಿಲ್ಲ. ಅವರು ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ಆಂಜನೇಯಪುರ ಗ್ರಾಮದ ಎ.ಎಲ್.ವೀರೋಜಿರಾವ್ ಮತ್ತು ಪುಟ್ಟತಾಯಮ್ಮ ದಂಪತಿಗಳ ಸುಪುತ್ರರು.

ಅವರು ದಿನಾಂಕ ೧೫-೫-೧೯೫೪ರಂದು ಜನಿಸಿದರು. ೧೯೭೪ರಲ್ಲಿ ಬಿಕಾಂ ಪೂರ್ಣಗೊಳಿಸಿ, ೧೯೭೫ರಲ್ಲಿ ಆಲೂರು ಬಿಡಿಒ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯಾರಂಭ ಮಾಡಿದರು.

ಶಿರಸ್ತೆದಾರ್ ಮತ್ತು ತಹಸೀಲ್ದಾರ್ ಹುದ್ದೆಗಳಿಗೆ ಬಡ್ತಿ ಪಡೆದು 39 ವರ್ಷಗಳ ಸೇವೆಯ ನಂತರ ನಿವೃತ್ತರಾಗಿದ್ದಾರೆ.

ಅವರು ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ನೌಕರರ ಸಂಘದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಲೇಜು ದಿನಗಳಲ್ಲಿ ಕ್ರೀಡಾಪಟು. ಅಥ್ಲೆಟಿಕ್‌ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದವರು, ಕೋಕೋ ತಂಡದ ನಾಯಕ, ಷಟಲ್‌ ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಅವರು ಸರ್ಕಾರಿ ನೌಕರರ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು. ೫ನೇ ವಯಸ್ಸಿನಲ್ಲಿ ಶನಿಮಹಾತ್ಮೆ ನಾಟಕದಲ್ಲಿ ಅಭಿನಯ ಪ್ರಾರಂಭಿಸಿದರು.

ರಾಮಾಯಣ, ಕುರುಕ್ಷೇತ್ರ, ವಿರಾಟಪರ್ವ ಮೊದಲಾದ ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕಾಲೇಜು ದಿನಗಳಲ್ಲಿ ೧೯೭೧-೭೪ ರವರೆಗೆ ಪ್ರತಿವರ್ಷ ನಾಟಕ ಸ್ಫರ್ಧೆಗಳಲ್ಲಿ ಜಯಗಳಿಸಿದ್ದರು.

ಹಾಸನದಲ್ಲಿ ೧೯೭೦ ರಿಂದ ೨೦೦೬ರವರೆಗೆ ನಾಟಕ ಪ್ರದರ್ಶನಗಳಲ್ಲಿ ಸಕ್ರಿಯರಾಗಿದ್ದರು. ಹಾಸನ ಮತ್ತು ಪ್ರದರ್ಶನದ ರಂಗಮಂಟಪದಲ್ಲಿ ಪ್ರತಿವರ್ಷ ಅವರ ತಂಡ ನಾಟಕ ಪ್ರದರ್ಶಿಸುತ್ತಿತ್ತು.

ದಿನಾಂಕ ೨೯-೧೨-೨೦೦೩ರಂದು ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ʼರಕ್ತಾಕ್ಷಿʼ ನಾಟಕದಲ್ಲಿ ಬಸವಯ್ಯನ ಪಾತ್ರ ನಿರ್ವಹಿಸಿದ್ದರು.

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಫರ್ಧೆಯಲ್ಲಿ ಶಕುನಿ ನಾಟಕದಲ್ಲಿ ಸೌಬಲನ ಪಾತ್ರ ಹಾಗೂ ಅಂಜುಮಲ್ಲಿಗೆ ನಾಟಕದಲ್ಲಿ ಗೌತಮನ ಪಾತ್ರ ನಿರ್ವಹಿಸಿದ್ದರು.

ಹಾಸನದ ಕಲಾ ಚಟುವಟಿಕೆಗಳಿಗೆ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ “ಕರ್ಣಾಟಕ ವೈಭವ” ಧ್ವನಿ-ಬೆಳಕು ನಾಟಕದಲ್ಲಿ ಸುಭಾಸ್ ಚಂದ್ರಬೋಸ್ ಪಾತ್ರವನ್ನೂ ಸಹ ನಿರ್ವಹಿಸಿದ್ದರು.

2025ರ ಮೇ 31ರಂದು ಅವರು ಓದಿದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಪತ್ರದಲ್ಲಿ ಅವರ ಸಮಾಜ ಸೇವೆ ಹಾಗೂ ಹಾಸನದ ಕಲಾಭವನ ನಿರ್ಮಾಣದ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ಉಲ್ಲೇಖಿಸಲಾಗಿದೆ.

1992ರಲ್ಲಿ ಹಾಸನದಲ್ಲಿ ನಡೆದ ನೌಕರರ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ. ಅವರು ಅಭಿನಯಿಸಿದ ಇತರೆ ಪ್ರಮುಖ ನಾಟಕಗಳು: ನಾದಬಿಂದು, ಇದಿಮಾಯಿ, ಕತ್ತಲೆ ದಾರಿ ದೂರ, ಮತ್ತೆ ಅದೇ ಕತೆ.

ಅವರು ಹಾಸ್ಯದಿಂದ ಕೂಡಿದ ನೆನಪುಗಳನ್ನು ನೆನೆಸಿ “ಮತ್ತೇನಾದರೂ ರಂಗಕತೆ ಇದೆಯಾ ಸಾರ್?” ಎಂದು ಕೇಳಿದಾಗ, “ಎಲ್ಲಾ ನಿಮಗೆ ಗೊತ್ತಲ್ಲ ಅನಂತು,” ಎಂದು ಉತ್ತರಿಸಿದರು.

ಅವರು ತಮ್ಮ 42ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿ ಹೆಚ್.ಎನ್. ಬಾರತಿಯ ನೇಪಥ್ಯ ಸಹಕಾರವನ್ನು ಸ್ಮರಿಸಿದರು.

ನಿಧಾನವಾಗಿ ಅವರು ಕಲಾ ಸೇವೆಯ ದೀರ್ಘ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅವರ ಕಲಾಪ್ರಯಾಣ, ಸಮಾಜ ಸೇವೆ, ಹಾಗೂ ಕುಟುಂಬ ಸಹಕಾರ – ಈ ಎಲ್ಲಾ ಅಂಶಗಳು ಹಾಸನದ ಕಲಾ ಪರಂಪರೆಗೆ ಹೆಮ್ಮೆ ಹೆಚ್ಚಿಸುತ್ತವೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಅನ್ನಪೂರ್ಣೇಶ್ವರಿ ಕಲಾಸಂಘ ೧೦ನೇ ವಾರ್ಷಿಕೋತ್ಸವದ ಪೌರಾಣಿಕ ನಾಟಕೋತ್ಸವ

ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ೧೦ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜುಲೈ ೪ ರಿಂದ ೯ ವರೆಗೆ ೬ ದಿನ ಪೌರಾಣಿಕ ನಾಟಕೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ತಿಳಿಸಿದ್ದಾರೆ.

೪ನೇ ತಾರೀಕು ಶುಕ್ರವಾರ ಪಿ. ಎಂ. ಮಲ್ಲೇಶ್‌ಗೌಡ್ರು, ರಂಗಸ್ವಾಮಿ ಇವರ ಶ್ರೀ ಚಾಮುಂಡೇಶ್ವರಿ ಕಲಾಸಂಘ, ಹಾಸನ ತಂಡದಿಂದ ಸಂಪೂರ್ಣ ರಾಮಾಯಣ ನಾಟಕ.

೫ನೇ ತಾರೀಕು ಶನಿವಾರ ಚಂದ್ರಶೇಖರ್ ಸಿಗರನಹಳ್ಳಿ, ಮಂಜು ತಟ್ಟೇಕೆರೆ ಇವರ ಶ್ರೀ ಲಕ್ಷ್ಮೀ ರಂಗನಾಥ ಸಾಂಸ್ಕೃತಿಕ ಕಲಾಸಂಘ, ಸಿಗರನಹಳ್ಳಿ ತಂಡದಿಂದ ಕುರುಕ್ಷೇತ್ರ ನಾಟಕ.

೬ನೇ ತಾರೀಕು ಭಾನುವಾರ ಸತೀಶ್ ಕಬ್ಬತ್ತಿ, ವೈಭವ್ ವೆಂಕಟೇಶ್ ಇವರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನ ತಂಡದಿಂದ ಚಂಡಾಸುರನ ವಧೆ ನಾಟಕ.

೭ನೇ ತಾರೀಕು ಸೋಮವಾರ ಬಾರೇಹೊಸರು ಜವರೇಗೌಡ್ರು, ಹನುಮೇಗೌಡ್ರು ಇವರ ಶ್ರೀ ಬಸವೇಶ್ವರ ಕಲಾಸಂಘ, ಹಾಸನ ತಂಡದಿಂದ ಛಲದೊಳ್ ದುರ್ಯೋಧನ ನಾಟಕ.

೮ನೇ ತಾರೀಕು ಮಂಗಳವಾರ ರಮೇಶ್ ಗೌಡಪ್ಪ, ಹೆಚ್.ಎಂ.ಪ್ರಭಾಕರ್ ಇವರ ಹಾಸನಾಂಬ ಕಲಾ ಟ್ರಸ್ಟ್, ಹಾಸನ ತಂಡದಿಂದ ಧರ್ಮರಾಜ್ಯ ಸ್ಥಾಪನೆ ನಾಟಕ

೯ನೇ ತಾರೀಕು ಬುಧವಾರ ಸಿ.ಎ.ರಾಮಚಂದ್ರರಾವ್ ಇವರ ಶ್ರೀ ಮಾರುತಿ ಕಲಾ ಬಳಗ, ಬೆಂಗಳೂರು ತಂಡದಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಸಮಾಜ ಸೇವಕರಾದ ಮಂಜುನಾಥ ಕಲಾಲ್ ಇವರಿಂದ ಆನೆಗುಂದಿ ಭಾಗದ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಗಂಗಾವತಿ: ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪುರ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಣೆ ಕಾರ್ಯಕ್ರಮ ಜುಲೈ 03 ಗುರುವಾರ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಎಂದು ಸಮಾಜಸೇವಕರಾದ ಮಂಜುನಾಥ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಜುನಾಥ ಕಲಾಲ್ ಅವರು ಮಾತನಾಡುತ್ತಾ, “ನಾವು ಕಳೆದ 13 ವರ್ಷಗಳಿಂದ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿದ್ದೇವೆ” ಎಂದು ತಿಳಿಸಿದರು. ಲಾಕ್‌ಡೌನ್ ಸಮಯದಲ್ಲಿ 6000ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ.

ಪೌರಕಾರ್ಮಿಕರಿಗೆ ಆಹಾರ ಕಿಟ್, ಶಾಲಾ ಮಕ್ಕಳಿಗೆ 2013ರಿಂದ ಪ್ರತಿವರ್ಷ ನೋಟ್ ಪುಸ್ತಕ ವಿತರಣೆಯ ಕಾರ್ಯ, ದೇವಸ್ಥಾನ ಜೀರ್ಣೋದ್ಧಾರ, ಬಡರೋಗಿಗಳಿಗೆ ಚಿಕಿತ್ಸಾ ಸಹಾಯ, ಎಂ.ಎನ್.ಎ. ಕಾಲೇಜಿಗೆ ಗೇಟ್ ಕೊಡುಗೆ, ಆಟೋ ಚಾಲಕರು ಹಾಗೂ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ, ಜುಲೈ 03ರಂದು ಆನೆಗೊಂದಿಯ ಸರ್ಕಾರಿ ಪೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಆನೆಗುಂದಿ ದುರ್ಗಾದೇವಿ ದೇವಾಲಯದ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಗೆ ಜನಪ್ರಿಯ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್‌ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಮಾಜಿ ಶಾಸಕರು ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಲಿತಾರಾಣಿ, ಶ್ರೀಕೃಷ್ಣದೇವರಾಯಲು, ಹರಿಹರದೇವರಾಯಲು ಭಾಗವಹಿಸಲಿದ್ದಾರೆ.
ಇದೇ ವೇಳೆ, ಆನೆಗುಂದಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷ ಛತ್ರಪ್ಪ ಲಂಬಾಣಿ, ಸಣಾಪುರ ಅಧ್ಯಕ್ಷ ಅಶೋಕ್, ಸಂಗಾಪುರ ಅಧ್ಯಕ್ಷೆ ಮಂಜುಳಾ ಲೋಕೇಶ್ ನಾಯ್ಕ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರರ ಉಪಸ್ಥಿತಿಯು ಕಲ್ಪಿಸಲಾಗಿದೆ.
ಆನೆಗುಂದಿ, ಸಂಗಾಪುರ, ಸಣಾಪುರ, ಮಲ್ಲಾಪುರ ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ.
ಮಾಹಿತಿಗಾಗಿ:
(ಮಂಜುನಾಥ ಕಲಾಲ್)
ಸಮಾಜ ಸೇವಕರು, ಗಂಗಾವತಿ
ಮೊ.ನಂ: ೮೯೭೦೬೪೭೦೮೦
ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದ ಚಹಾ ಅಂಗಡಿಯ ನಾಮಫಲಕ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

ಗಂಗಾವತಿ : ಜೂನ್-೨೮ ಶನಿವಾರದಂದು ತ್ರಿವಿಧ ದಾಸೋಹದ ನಾಡು ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಒಂದು ಭಾವಪೂರ್ಣ ಸಮಾರಂಭ ನಡೆಯಿತು.

ಡಾ. ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳವರ ಗ್ರಂಥ ಲೋಕಾರ್ಪಣೆಯು ಈ ದಿನದ ಆಕರ್ಷಣೆಯಾಗಿತ್ತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಸೇತುವೆ ಬಳಿ ಸ್ಥಾಪಿಸಲಾದ “ಸಿದ್ದಗಂಗಾಶ್ರೀ ಬೆಲ್ಲದ ಚಹಾ ಅಂಗಡಿ”ಗೆ ವಿಶೇಷ ಗೌರವ ದೊರೆಯಿತು.

ಅಂಗಡಿಯ ನಾಮಫಲಕವನ್ನು ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅನಾವರಣಗೊಳಿಸಿ ಸಾಂಕೇತಿಕವಾಗಿ ಉದ್ಘಾಟಿಸಿದರು.

ಅವರು ಮಾತನಾಡುತ್ತಾ “ಈ ಅಂಗಡಿ ನಾಡಿನಾದ್ಯಂತ ಹೆಸರಾಗಲಿ. ಗುರುಪರಂಪರೆ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ” ಎಂದು ಆಶೀರ್ವದಿಸಿದರು.

ಬಸನಗೌಡ ಹೊಸಳ್ಳಿ ಮತ್ತು ಅವರ ಕುಟುಂಬ ವರ್ಗ ಈ ವಿಶೇಷ ಅನುಭವದಿಂದ ಧನ್ಯರಾದರು.

ಈ ಸಮಾರಂಭದಲ್ಲಿ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ಡಾ. ಶ್ರೀ ಗೊ. ರು. ಚೆನ್ನಬಸಪ್ಪ ಅವರು ವಿಶೇಷ ಆತಿಥ್ಯ ವಹಿಸಿದರು.

ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಇತರ ಪ್ರಮುಖ ಅತಿಥಿಗಳಲ್ಲೊಬ್ಬರಾಗಿದ್ದರು.

ಇದಲ್ಲದೆ, ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಈ ಸಂಭ್ರಮದಲ್ಲಿ ಹಾರ್ದಿಕವಾಗಿ ಭಾಗವಹಿಸಿದ್ದರು.

ಮಾಹಿತಿಗಾಗಿ:
ಬಸನಗೌಡ ಹೊಸಳ್ಳಿ
ಅಧ್ಯಕ್ಷರು, ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ
ಮೊ.ನಂ: ೭೪೮೩೨೨೯೯೬೨

ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..! ಗೊರೂರು ಅನಂತರಾಜು, ಹಾಸನ.

ಎಸ್.‌ ಎಸ್.‌ ಪಡಶೆಟ್ಟಿ: ಹಾಸ್ಯ ದರ್ಶನದ ಪರಿಚಯ : ಹಾಸ್ಯ ಬರಹಗಳಿಗೆ ಪ್ರಸಿದ್ಧರಾದ. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರಾಗಿದ್ದು, ಹಾಸ್ಯ ದರ್ಶನ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಅವರೊಂದಿಗೆ ಅವರು ಬೆಂಗ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರು ನಗರದ ಹಲವೆಡೆ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲೇಖಕರ ನೆನಪುಗಳು ಮತ್ತು ಹಾಸ್ಯ ಪ್ರಯಾಣ : ಗೊರೂರಿನಲ್ಲಿ ಎಡಿಟರ್ ಆಗಿದ್ದ ರಾವ್‌ ಅವರ ಜೊತೆ ಲೇಖಕರು ಶಾಲಾ-ಕಾಲೇಜುಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾವ್ ಬೆಂಗಳೂರಿಗೆ ತೆರಳಿದ ನಂತರ ಈ ಜೊತೆಯ ಹಾಸ್ಯ ಕಾರ್ಯಕ್ರಮ ನಿಂತಿತು, ಆದರೆ ಪಡಶೆಟ್ಟರೊಂದಿಗೆ ಹಾಸ್ಯ ಕಾರ್ಯಕ್ರಮ ಮುಂದುವರಿಯಿತು. ಈ ಲೇಖನದಲ್ಲಿ ಲೇಖಕರು ತಮ್ಮ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ತೋಡಿಹಾಕಿದ್ದಾರೆ.

ಹಾಸ್ಯ ನೆನಪಿನ ಗುರುತು : ಬಾಲ್ಯದ ಅನುಭವ : ೨ನೇ ತರಗತಿಯಲ್ಲಿ ಓದುತ್ತಿದ್ದಾಗ ೧೦೬ ವರ್ಷ ಆಗಿರುವ ಅವರ ಊರಿನ ಗೌಡರ ತಂದೆ ತೀರಿಕೊಂಡರು. ಸುತ್ತ ಹಳ್ಳಿಗೆಲ್ಲಾ ಪ್ರಸಿದ್ಧರು. ಸಾವಿರಾರು ಜನ ಸೇರಿದ್ದರು. ಲೇಖಕರ ತಾಯಿಯು ನೋಡಲು ಹೊರಟಾಗ ಬಾಲಕನು ಹಿಂಬಾಲಿಸುತ್ತಾನೆ. ಅಲ್ಲಿ ತೀರಿಕೊಂಡ ಗೌಡರ ಶವದ ಮುಂದೆ ಕರೆಸಿಕೊಂಡ ಬಾಡಿಗೆ ಹೆಂಗಸರು ಅತ್ತು ಕರೆದು ಈ ಗೌಡರು ಹೇಗಿದ್ರು? ಹಾಗಿದ್ರು..ಹೀಗೆಲ್ಲಾ ಹಾಡಾಡಿ ಹೊಗಳಿ ಕೂಗಿ ಆ ಕೃತಕ ನಟನೆಗೆ ಬಾಲಕ ನಗುತ್ತಾನೆ. ಆಗ, ತಾಯಿ ಹೊಡೆಯಲು ಬಾಲಕ ಅಳತೊಡಗುತ್ತಾನೆ. ಆಗ ಒಂದು ಹೆಂಗಸು ಬಾಲಕನ ಕಡೆ ಬಂದು ‘ಏ ಕೂಸಾ ನೀನ್ಯಾಕೆ ಅಳ್ತೀಯಪ್ಪ, ಗೌಡರಂತು ಹೋಗಿಬಿಟ್ಟರು ಅಳಬೇಡ ಕಂದಾʼ ಎಂದು ಕೆನ್ನೆ ಸವರುತ್ತಾಳೆ…

ಶೈಕ್ಷಣಿಕ ಸೇವೆ ಮತ್ತು ನೆನಪಿನ ತಿರುವು : ಎಸ್.‌ ಎಸ್.‌ ಪಡಶೆಟ್ಟರು ಬೆಂಗಳೂರಿನ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ೩೨ ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿದ್ದೆ, ಅವರ ಪುಸ್ತಕ ಓದುತ್ತಾ ಮಧ್ಯೆ ಅವರಿಗೆ ಫೋನ್ ಮಾಡಿ ಎಲ್ಲಿದ್ದಿರಾ ಸರ್? ಎಂದೆ. ಗ್ರಂಥಾಲಯದಲ್ಲಿ ಇರುವುದಾಗಿ ಪಿಸುಧ್ವನಿಯಲ್ಲಿ ಹೇಳಿದರು. ಸೈಲೆಂಟ್ ಆಗಿ, ಆನಂತರ ಅವರೇ ಫೋನ್ ಮಾಡಿದರು. ಈಗೆಲ್ಲೂ ಹಾಸ್ಯ ಕಾರ್ಯಕ್ರಮ ನೀಡುತ್ತಿಲ್ಲವೇ?  ಎಂದು ಕೇಳಿದೆ. ನನಗೆ ಈಗ ವಯಸ್ಸು ೮೦ ಎಂದರು. ನಾನು ಈ ಹಿಂದೆ ಹಾಸನದಲ್ಲಿ ಶಾರದ ಕಲಾಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಇವರ ಹಾಸ್ಯ ಭಾಷಣಕ್ಕೆ ಅವಕಾಶ ಒದಗಿಸಿದ್ದೆ. ಜನರಿಗೆ ಶ್ರೀ ಕೃಷ್ಣ ಸಂಧಾನ ನಾಟಕ ನೋಡುವ ತರಾತುರಿ. ಹಾಗಾಗಿ ಇವರಿಗೆ ಹೆಚ್ಚು ಸಮಯಾವಕಾಶ ಸಿಗಲಿಲ್ಲ. ಪಾಪ, ಅಷ್ಟು ದೂರ (ಬೆಂಗಳೂರು) ಉತ್ಸಾಹದಿಂದ ಬಂದವರಿಗೆ ನಿರುತ್ಸಾಹ ಮಾಡಿಬಿಟ್ಟೆನಲ್ಲ ಎಂದು ಪೇಚಾಡಿಕೊಂಡೆ. ಸರ್, ನಿಮ್ಮ ಹಾಸ್ಯ ಕಾರ್ಯಕ್ರಮ ಬೇರೆಯೇ ಏರ‍್ಪಡಿಸಬೇಕು. ಹಾಡು, ಡ್ಯಾನ್ಸ್, ನಾಟಕ ನಡುವೆ ನಿಮ್ಮ ಹಾಸ್ಯ ಪ್ರೇಕ್ಷಕರಿಗೆ ತಲುಪಲಿಲ್ಲ ಎಂದೆ. ಛೇ ಛೇ ಹಾಗೆಂದುಕೊಳ್ಳಬೇಡಿ ಗೊರೂರು ಅನಂತರಾಜು. ನನಗೆ ಇಂತಹ ಭವ್ಯ ವೇದಿಕೆ ಒದಗಿಸಿಕೊಟ್ಟರಲ್ಲಾ ಅದೇ ದೊಡ್ಡದು ಎಂದರು. ಅದು ಅವರ ದೊಡ್ಡ ಗುಣ. ಅವರು ಅಂದು ಕೊಟ್ಟ ಪುಸ್ತಕ ಇಂದು ಓದಿದೆ. ಇದರಲ್ಲಿನ ಮೊದಲ ಲೇಖನ ನಮ್ಮೂರಿನ ಎರಡು ನಾಟಕಗಳು.
ನಮ್ಮೂರಿನಲ್ಲಿ ರೈತರು ಬಿಡುವಾಗಿರುವ ಸಮಯ ಬೇಸಿಗೆಯ ಕಾಲದಲ್ಲಿ ಬಹಳ ಉತ್ಸಾಹದಿಂದ ನಾಟಕ ಮಾಡಿ ರೈತ ಬಾಂಧವರು ಸಾಕಷ್ಟು ಸಂತೋಷಪಟ್ಟಿದ್ದಾರೆ.

ನಾಟಕ ಅನುಭವ: ದ್ರೌಪದಿ ವಸ್ತ್ರಾಭರಣ ಪ್ರಸಂಗ: ನಮ್ಮೂರಿನ ಗಿರಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತನು ಒಪ್ಪಿ ಹೋಗಿದ್ದನು. ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ. ನಾಟಕಕಾರ ನಿಂಗಣ್ಣ ದುಶ್ಯಾಸನ ಪಾತ್ರ ವಹಿಸಿದ್ದ, “ಪರಮಾನಂದೇಶ್ವರ ಯುವಕ ನಾಟಕ ಮಂಡಳಿ” ಎಂದು ಹೆಸರನ್ನಿಟ್ಟು ಸುತ್ತಲು ಹಳ್ಳಿಗಳಿಗೆಲ್ಲಾ ಪ್ರಚಾರ ಮಾಡಲಾಯಿತು. ನಾಟಕ ರಾತ್ರಿ ೧೦.೩೦ಕ್ಕೆ ಪ್ರಾರಂಭವಾಯಿತು. ಊರ ಹೊರಗೆ ಹನುಮದೇವರ ದೇವಸ್ಥಾನ ಮುಂಭಾಗ ನಾಟಕದ ಸ್ಟೇಜ್ ಮೇಲೆ ಶ್ರೀಕೃಷ್ಣ ಕುಳಿತು ಅಲ್ಲಿಂದಲೇ ಸೀರೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಕಾಶಿರಾಮ ತೆಳ್ಳನೆಯ ಏಳು ಸೀರೆಗಳನ್ನು ಉಟ್ಟುಕೊಂಡಿದ್ದ. ಪಾತ್ರದಾರಿಗಳ ನಟನೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ಒನ್ಸ್ ಮೋರ್ ಬದಲು ಮನಸ್ ಮೋರ್ ಎನ್ನುತ್ತಾರೆ. ಈಗ ದ್ರೌಪದಿ ವಸ್ತ್ರಾಭರಣ ಪ್ರಸಂಗ. ದುಃಖಪ್ರಾಪ್ತಳಾದ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ನಾಟಕಕಾರ ನಿಂಗಣ್ಣ ನಿಧಾನವಾಗಿ ಸೀರೆ ಸೆಳೆಯುವುದನ್ನು ಬಿಟ್ಟು ತುಂಬಾ ಜೋರಾಗಿ ಸೆಳೆಯುಲು ಪ್ರಾರಂಭಿಸಿದ. ಆಗ ಕಾಶಿರಾಮ ‘ಏ ನಿಂಗಣ್ಣ ನಿಧಾನವಾಗಿ ನನ್ನ ಸೀರೆ ಸೆಳೆ ?  ಎನ್ನುತ್ತಾನೆ. ಅವನು ಸಣ್ಣ ಧ್ವನಿಯಲ್ಲಿ ಹೇಳಿದ್ದು, ನಿಂಗಣ್ಣನಿಗೆ ಕೇಳಿಸಲಿಲ್ಲ. ಅದು ಯಾವ ಸ್ಫಿರಿಟ್ ಬಂದಿತ್ತೊ ನಿಂಗಣ್ಣ ಆರು ಸೀರೆ ಸೆಳೆದ. ಕೊನೆಯ ಸೀರೆ ಉಳಿದುಕೊಂಡಿದೆ. ಜೋರಾಗಿ ಎಳೆಯುತ್ತಿದ್ದಾನೆ. ಕಾಶಿರಾಮ ಸೀರೆಯ ಕೊನೆಯ ತುದಿ ಬಿಗಿಯಾಗಿ ಹಿಡಿದುಕೊಂಡು ಮೇಲಕ್ಕೆ ನೋಡಿ ಅಣ್ಣ ಕೃಷ್ಣ ನನ್ನ ಮಾನ ಕಾಪಾಡು.. ಆದರೆ ಅಷ್ಟರಲ್ಲಿ ನಿಂಗಣ್ಣ ಪೂರ್ತಿ ಸೀರೆ ಸೆಳೆದು ದ್ರೌಪದಿ ಅಂಡರ್ ವೇರ್ ಬನಿಯನ್ ಮೇಲೆ ನಿಂತ.. ಸದ್ಯ ಪ್ರೇಕ್ಷಕರು ಒನ್ಸ್ ಮೋರ್ ಎನ್ನಲಿಲ್ಲ ಅಷ್ಟೇ.

ಶಿಕ್ಷಕನ ವೃತ್ತಿ ಜೀವನ ಮತ್ತು ಕನಸಿನ ವ್ಯಾಕುಲತೆ: ಕನ್ನಡ ಅಧ್ಯಾಪಕರಾಗಿದ್ದ ಲೇಖಕರು ಹತ್ತನೇ ತರಗತಿ ಮಕ್ಕಳಿಗೆ ರನ್ನನ ಗದಾಯುದ್ದ ಪಾಠ ಮಾಡುತ್ತಿದ್ದರು. ವೈಶಂಪಾಯನ ಸನ್ನಿವೇಶದಲ್ಲಿ, ಭೀಮ ಅಲ್ಲಿಗೆ ಬಂದು ಅವಿತು ಕುಳಿತುಕೊಂಡ ದುರ್ಯೋಧನನ್ನು ಸರೋವರದಿಂದ ಹೊರಗೆ ಬರಲು ‘ಈ ಭೂತು ಎನ್ನ ಸರಂಗೇಳ್ದೊಲ್ಲದೆ ಪೊರ ಮಡುವನಲ್ಲಂ.. ಎಂದು ಗಡುಸಾಗಿ ಹೇಳುವುದನ್ನು ಹತ್ತಾರು ಸಲ ಓದಿ ಮನನ ಮಾಡಿಕೊಂಡು ರಾತ್ರಿನಿದ್ರೆಯಲ್ಲಿ  ಪುನರುಚ್ಚರಿಸಿ ಪಕ್ಕದಲ್ಲಿ ಮಲಗಿದ್ದ ಹೆಂಡತಿ ಬೆನ್ನಿಗೆ ಗುದ್ದುತ್ತಾರೆ. ‘ಅಯ್ಯೋಯ್ಯಪ್ಪೊ..ಎಂದು ಹೆಂಡತಿ ಚೀರಿ ನಿದ್ರೆಯಿಂದ ಎಚ್ಚರವಾಗಿ ಸಾರಿ ಮಿಸ್..ಎನ್ನುತ್ತಾರೆ.

ಇನ್ನೊಂದು ಸಲ ರಾಘವಾಂಕನ ಹರಿಶ್ಚಂದ್ರ ಕಾವ್ಯ ಪಾಠ ಮಾಡಬೇಕಾಗಿತ್ತು. ಅದು ಚಂದ್ರಮತಿಯ ಪ್ರಲಾಪ. ಲೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸಾವಿಗೀಡಾದ ಸನ್ನಿವೇಶ. ಚಂದ್ರಮತಿ ಮಗುವಿನ ಬಳಿಯಲ್ಲಿ ಬಂದು ‘ಏವನೇವಲೆ ಮಗನೆ ಸಾವೇಕಾಯಿತ್ತಲೆ ಚೆನ್ನಿಗನೆ..ಎಂದು ರೋಧಿಸಿ ಅಳುವ ಪ್ರಸಂಗ. ಮಕ್ಕಳಿಗೆ ನೈಜ ಪಾಠ ಮಾಡಲು ರಾತ್ರಿಯೇ ತಾಲೀಮು ಮಾಡಿ ಮಲಗಿ ರಾತ್ರಿ ನಿದ್ರೆಯಲ್ಲಿ ರೋಧಿಸಿ ಅಳಲು ಗಾಬರಿಯಿಂದ ಎಚ್ಚರಗೊಂಡ ಮಡದಿ ಇಂಥ ಸರಿರಾತ್ರಿ ಏಕೆ ಅಳುತ್ತಿರುವಿರಿ ಡಿಯರ್..ಎನ್ನಲು ‘ಸಾರಿ ಚಂದ್ರಮ.. ಎಂದು ಕನಸಿನಲ್ಲಿ ಕನವರಿಸುತ್ತಾರೆ.
ಮತ್ತೊಮ್ಮೆ ಹಾಸ್ಯ ಸಾಹಿತಿ ಬೀಚಿಯವರ ತಿಮ್ಮನ ತಲೆ ಪುಸ್ತಕ ಓದಿ ತಲೆಗೆ ತುಂಬಿಕೊಳ್ಳುತ್ತಾರೆ. ರಾತ್ರಿ ಮಲಗಿ ಪುಸ್ತಕದ ನಗೆ ಪ್ರಸಂಗ ನೆನೆದು ಜೋರಾಗಿ ನಗುತ್ತಾರೆ. ನಗುವಿನ ಧ್ವನಿಗೆ ಎಚ್ಚರವಾಗಿ ಹೆಂಡತಿ ‘ಏನ್ರೀ ನಿಮಗೆ ಬುದ್ಧಿಗಿದ್ಧಿ ಇದೆಯೇ. ಸುಮ್ಮ-ಸುಮ್ಮನೆ ನನಗೆ ರಾತ್ರಿ ಹೊಡೆಯುತ್ತೀರಿ, ಅಳುತ್ತೀರಿ, ನಡುರಾತ್ರಿ ನಗುತ್ತೀರಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದಾಗ ಪಡತರು ಬೆಪ್ಪುಕ್ಕಡಿ!ಶೆಟ್ಟ

ಭಾನುವಾರ ಸಂಜೆ ಅಕ್ಕಪಕ್ಕದ ಮನೆಯ ಹೆಂಗಸರು ಶೆಟ್ಟರ ಮನೆಯಲ್ಲಿ ಒಟ್ಟಿಗೆ ಸೇರಿ ತಮ್ಮ ಗಂಡಂದಿರ ಬಗೆಗೆ ಹಾಸ್ಯವಾಗಿ ಮಾತನಾಡುತ್ತಿರಲು ಹೆಂಡತಿ ಮಾತು ರೂಂನಲ್ಲಿ ಮಲಗಿದ್ದ ಶೆಟ್ಟರ ಕಿವಿಗೆ ಬಿದ್ದು, ತಲೆ ನೆಟ್ಟಗಾಗುತ್ತದೆ. ‘ನಮ್ಮನೆ ಯಜಮಾನರು ರಾತ್ರಿ ಹೊತ್ತು ಸುಮ್ಮಸುಮ್ಮನೆ ನನ್ನ ಬೆನ್ನಿಗೆ ಗುದ್ದುತ್ತಾರೆ, ಅಳುತ್ತಾರೆ, ಜೋರಾಗಿ ನಗುತ್ತಾರೆ ಹುಚ್ಚರಂತೆ ಆಡುತ್ತಾರೆ.. ಎನ್ನಲು ‘ಹಾಗಾದರೆ ನಿಮ್ಮ ಯಜಮಾನರಿಗೆ ಹುಚ್ಚು ಹಿಡಿದಿರುವುದು ಖರೆ ಎಂದು ಸಭೆ ತೀರ್ಮಾನಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಲು ಸಲಹೆ ನೀಡುತ್ತಾರೆ.

ಪತ್ನಿಯ ನಗು ಮತ್ತು ನಿಂಹಾನ್ಸ್‌ ಹಾಸ್ಯ ಕಥೆ: ಹೆಂಡತಿ ಮತ್ತು ಮಗನು ಗುಟ್ಟಾಗಿ ಹೇಳಿ ನೆಟ್ಟಗೆ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಲೇಖಕರಿಗೆ ಪರಿಚಯವಿರುವ ಡಾ.ಸಿ.ಚಂದ್ರಶೇಖರ್ ಇರುತ್ತಾರೆ. ಲೇಖಕರು ಆಗಲೇ ಹಾಸ್ಯದರ್ಶನ ಮಾಸಪತ್ರಿಕೆ ತರುತ್ತಿದ್ದು, ಪತ್ರಿಕೆಗೆ ಡಾಕ್ಟರ್ ಲೇಖನ ಬರೆದು ಪರಿಚಿತರಾಗಿದ್ದಾರೆ. ‘ಪಡಶೆಟ್ಟಿರೇ ನಿಮ್ಮ ಹಾಸ್ಯ ದರ್ಶನ ಪತ್ರಿಕೆಯಲ್ಲಿ ಬರುವ ಲೇಖನ ಚೆನ್ನಾಗಿವೆ. ನಿಮ್ಮ ಬುದ್ದಿಪೂರ್ವಕ ಸಂಪಾದಕೀಯ ತುಂಬಾ ಸ್ವಾರಸ್ಯಕರ.. ಎಂದು ಎಲ್ಲರಿಗೂ ಚಹ ತರಿಸಿ ಕಳಿಸುತ್ತಾರೆ.

ಪತ್ರಿಕೆಯ ಸ್ಥಗಿತ: ಹಾಸ್ಯದರ್ಶನ ನಿಂತ ಹಾಸ್ಯ: ಪಡಶೆಟ್ಟರು ನಡೆಸುತ್ತಿದ್ದ ಹಾಸ್ಯ ದರ್ಶನ ಮಾಸಪತ್ರಿಕೆ ೧೫ ವರ್ಷಕ್ಕೆ ನಿಂತುಹೋಯಿತು. ಹಾಸ್ಯದರ್ಶನದಲ್ಲಿ ನನ್ನ ಹಾಸ್ಯ ಲೇಖನ ಪ್ರಕಟಿಸಿ ಅದಕ್ಕೊಂದು ಕಾಮಿಡಿ ಕಾರ್ಟೂನ್ ಬರೆಸಿ ಚೆನ್ನಾಗಿ ಪತ್ರಿಕೆ ತರುತ್ತಿದ್ದರು. ಲೇಖಕರು ಕನ್ನಡ ಪುಸ್ತಕ ಮಾರಾಟ ಮಾಡುವ ಜೊತೆಗೆ ಹಾಸ್ಯ ದರ್ಶನ ಮಾರುತ್ತಾ ಬರೆದ ಈ ಪ್ರಸಂಗ ನಿಂತು ಹೋದ ಪತ್ರಿಕೆಯ ಕಾರಣ ತಮಾಷೆಯಾದರೂ ವಾಸ್ತವತೆ ಚಿತ್ರಿಸಿದೆ.

ವಿಜಯಪುರದಲ್ಲಿ ಹಾಸ್ಯ ಲೆಕ್ಕಾಚಾರ: ವಿಜಾಪುರದೊಬ್ಬರು ಟ್ರಾನ್ಸ್ ಫರ್‌ ರಾಗಿ ತೋಟಗಾರಿಕೆ ಇಲಾಖೆಗೆ ಬಂದಿದ್ದರು. ಕರಿಕೋಟು, ಕಚ್ಚೆಪಂಚೆ, ಕರಿಟೋಪಿ ಹಾಕಿಕೊಂಡು ಇಲಾಖೆಯ ಫೈಲ್ಸ್ಗಳನ್ನು ಗಮನಿಸುತ್ತಿದ್ದರು. ನಾನು ಹೋಗಿ ಅವರಿಗೆ ನಮಸ್ಕರಿಸಿದೆ. ಅವರದು ಹೆಣ್ಣು ಧ್ವನಿ. ನನ್ನ ಹೆಗಲಲಿದ್ದ ಪುಸ್ತಕ ಬ್ಯಾಗ್ ನೋಡಿ ‘ಏನಿದು ಗಂಟು.. ಎಂದರು. ‘ಸರ್ ಇದು ಪುಸ್ತಕಗಳ ಗಂಟು.. ಒಂದೊದಾಗಿ ಪುಸ್ತಕಗಳನ್ನು ಅವರೆದುರಿಗಿಟ್ಟೆ. ‘ನಿಮ್ಮದೂ ಬರೀ ಪುಸ್ತಕ ಮಾರಾಟ ಮಾಡುವುದೇ ಕಸುಬೆ. ಮತ್ತೇನಾದರೂ ಉದ್ಯೋಗ ಮಾಡ್ತೀರಾ.. ‘ಸರ್ ನಾನೊಂದು ಶಾಲೆಯಲ್ಲಿ ಕನ್ನಡ ಅಧ್ಯಾಪಕ. ಸುಮ್ಮನೆ ಬಿಡುವಿನ ವೇಳೆ ಪುಸ್ತಕ ಮಾರಾಟ ಮಾಡುತ್ತೇನೆ. ‘ವ್ಹಾ..ಶಹಬ್ಬಾಸ್.. ಅಲ್ರೀ ಮಾಸ್ತರ, ಸಾಲಿ ಮಾಸ್ತಾರಕಿ ಮಾಡ್ತೀರಾ. ಪುಸ್ತಕನು ಮರ‍್ತೀರಾ ವ್ಹಾ ತುಂಬಾ ಸಂತೋಷ..ಎಂದರು. ಅವರಿಗೆ ನಾನು ಹಾಸ್ಯ ದರ್ಶನ ಪತ್ರಿಕೆ ತೋರಿಸಿದೆ.

ಅಲ್ರೀ ಮಾಸ್ತರ, ಮಾಸ್ತರಿಕೀನು ಮಾಡ್ತೀರಾ ಪುಸ್ತಕನೂ ಮಾರ್ತಿರಾ, ಪತ್ರಿಕೇನು ತರ್ತೀರಾ ಶಹಬ್ಬಾಸ್! ನಿಮಗೆ ಮಕ್ಕಳೆಷ್ಟು..? ನನಗೆ ೪ ಜನ ಮಕ್ಕಳೆಂದೆ.
‘ಹೆಣ್ಣೇಸು ಗಂಡೇಸು..? ಮೂರು ಹೆಣ್ಣು, ಒಬ್ಬನೇ ಗಂಡು ಎಂದೆ.
‘ನೀವು ಪುಸ್ತಕ ಮರ‍್ತೀರಾ. ೩ ಜನ ಹೆಣ್ಣು ಮಕ್ಕಳಿದ್ದಾರೆಂದರೆ ವರದಕ್ಷಿಣೆ ಕೊಡಲಿಕ್ಕೆ ರೊಕ್ಕ ಬೇಕಲ್ರೀ.. ಎಂದು ನಾನು ಕೊಟ್ಟ ಹಾಸ್ಯದರ್ಶನ ಓದಲಿಕ್ಕೆ ಪ್ರಾರಂಭಿಸಿದರು. ೫-೧೦ ನಿಮಿಷ ಮೌನ. ‘ಅಲ್ರೀ ಮಾಸ್ತಾರ ಹಾಸ್ಯದರ್ಶನ ಅಂತೀರಿ ಒಂದು ನಗುವೇ ಬರಲಿಲ್ಲವಲ್ಲರೀ. ಇಂಥವೆಲ್ಲ ನನಗಿಷ್ಟವಿಲ್ರೀ..
ಒಂದಾದರೂ ಪುಸ್ತಕ ತೆಗೆದುಕೊಳ್ರೀ ಎಂದೆ.
‘ಏನ್ರೀ ಮಾಸ್ತಾರ ಒಂದು ನಗುವೇ ಬರಲಿಲ್ಲರ‍್ರೀ. ನಮ್ಮ ಮನ್ಯಾಗ ಒಂದು ಕ್ವಾಡಗ ಅದ. ನಾನು ಯಾವಾಗ ತಾಳಿ ಕಟ್ಟಿದಾಗಿನಿಂದ ಒಂದು ದಿವಸ ನಕ್ಕಿಲ್ರೀ. ನೀವು ಅವಳಿಗೆ ನಗುವ ಪುಸ್ತಕ ತಗೊಳ್ರೀ ನಾನು ರೊಕ್ಕ ಕೊಟ್ಟು ತೆಗೆದುಕೊಳ್ಳುತ್ತೇನೆ. ಮಾಸ್ತರ ಈ ಕನ್ನಡ ಪುಸ್ತಕ ಯಾರು ತಗೊಳ್ಳುತ್ತಾರೆ ಯಾರು ತೊಗಳಲ್ರೀ. ಜೋಳದ ರೊಟ್ಟಿ ತಗೊರ‍್ರೀ ದುಮ್ಮಾ ಹಾರಿ ಹೋಗ್ತಾವ್. ನಾನು ಬಿಜಾಪುರದಿಂದ ಬಂದು ನಾಲ್ಕು ತಿಂಗಳಾತು. ರೊಟ್ಟಿ ಮಾರೀನೆ ನೋಡಿಲ್ಲ. ಜೋಳದ ಸಜ್ಜಿರೊಟ್ಟಿ ತೆಗೆದುಕೊಂಡ್ರ‍, ನಿಮಗೆ ಒಳ್ಳೆಯ ವ್ಯಾಪಾರ ಆಗುತ್ತೆ. ಮಾಸ್ತಾರ ಒಂದು ವಿಷಯ ಹೇಳ್ತಿನಿ ಕೇಳ್ರೀ.. ಒಂದು ಹಾಸ್ಯ ದರ್ಶನ ಪ್ರತಿ ಕೊಂಡರೆ ಒಂದು ರೊಟ್ಟಿ ಫ್ರೀ ಎನ್ನಿರಿ, ಆಗ ನೋಡಿ ನಿಮ್ಮ ವ್ಯಾಪಾರ ದುಮ್ಮಾಹಾರಿ (ಸಿಕ್ಕಾಪಟ್ಟೆ) ನಿಮ್ಮೆಲ್ಲ ಪುಸ್ತಕ ಹೋಗುತ್ತವೆ… ಎಂದ ಆ ಮಹಾಶಯ ಕೊನೆಗೂ ಒಂದು ಪುಸ್ತಕ ತೆಗೆದುಕೊಳ್ಳುವುದಿಲ್ಲ. ಪಡಶೆಟ್ಟರು ತರುತ್ತಿದ್ದ ಹಾಸ್ಯದರ್ಶನದಲ್ಲಿ ವೈವಿಧ್ಯ ಹಾಸ್ಯ ಬರಹ ಇರುತ್ತಿದ್ದವು. ಅಂತೆಯೇ ಇಲ್ಲಿಯೂ ಇವೆ.

ಹಾಸ್ಯದರ್ಶನದ ವೈವಿಧ್ಯ:

ಗಿರಾಕಿ: ಸೆಲೂನಿನ ತುಂಬೆಲ್ಲ ಬರೀ ಪತ್ತೆದಾರಿ ಪುಸ್ತಕಗಳನ್ನಿಟ್ಟಿರುವಿರಲ್ಲ..ಏನಾದರೂ ಪತ್ರಿಕೆ ಇಡಬಾರದೇ?

ಮಾಲೀಕ: ಸ್ವಾಮಿ, ಈ ಪತ್ತೆದಾರಿ ಕಾದಂಬರಿ ಓದುತ್ತಿರುವಂತೆ ಗಿರಾಕಿಗಳಿಗೆ ರೋಮಾಂಚನವಾಗಿ ಅವರ ಕೂದಲು ಸೆಟೆದು ನಿಲ್ಲುತ್ತೆ. ಆಗ ಅದನ್ನು ಕತ್ತರಿಸಲು ನನಗೆ ಸುಲಭ.

ಶಿಕ್ಷಕ: ಸುರೇಶ, ಘಜನಿ ಮೊಹಮ್ಮದ್ ಭಾರತಕ್ಕೆ ಮೊದಲನೇ ಹೆಜ್ಜೆ ಇಟ್ಟ ಕೂಡಲೇ ಏನು ಮಾಡಿದ?
ಸುರೇಶ: ಎರಡನೇ ಹೆಜ್ಜೆ ಇಟ್ಟ.

ಆತ: ಯಾಕಿಷ್ಟು ನಗ್ತಿದಾನೆ ಆತ

ಈತ: ಅವನಿಗೆ ನಗಲಿಕ್ಕೆ ಇವತ್ತು ಕೊನೆ ದಿನ

ಆತ: ಅಂದ್ರೇ?

ಈತ: ನಾಳೆ ಆತನ ಮದುವೆ..!

 

 

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ್ ತಮ್ಮ “ಹಚ್ಚೆ ದಿನ್” ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು, ಯಾವಾಗ ಕೊಟ್ಟರೆಂಬುದೇ ಮರೆತು ಹೋಗಿತ್ತು. ಮೊನ್ನೆ ಬೆಂಗಳೂರಿಗೆ ಹೊರಟಾಗ, ನನ್ನ ಪುಸ್ತಕ ರಾಶಿಯಲ್ಲಿ ಆ ಪುಸ್ತಕವು ಬಿದ್ದಿತ್ತು.

ಅನೇಕ ಪುಸ್ತಕಗಳನ್ನು ನನ್ನ ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರುತ್ತಿದ್ದಳು. ಅದರಿಂದ ಹಣ ತೆಗೆದು ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನ ಖರೀದಿಸುತ್ತಿದ್ದಳು. ಅಲ್ಲಿ “ಹಚ್ಚೆ ದಿನ್‌” ಪುಸ್ತಕ ತೆಗೆದುಕೊಂಡು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದಲ್ಲಿ ಸಂಪೂರ್ಣ ಓದಿದೆ.

“ಹಚ್ಚೆ ದಿನ್”‌ ೩೨ ಹಾಸ್ಯ ಲೇಖನಗಳ ಸಂಕಲನ. ನಾವು ನೋಡುವ ನಿತ್ಯದ ದೃಶ್ಯ, ವಸ್ತುಗಳು ಲೇಖಕಿಯ ನಿರೂಪಣಾ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ. ಮನಸ್ಸಿಗೆ ಹೊಸ ಭಾವನೆ ತಂದಿವೆ.

ಮನುಷ್ಯನ ದೇಹಾರೋಗ್ಯದಲ್ಲಿ ನಾಲಿಗೆಯ ಪಾತ್ರ ತುಂಬಾ ಮುಖ್ಯ. ಅದನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ಹೊಟ್ಟೆಗೆ ನಷ್ಟ ಮಾಡುತ್ತದೆ. ಉದಾಹರಣೆಗೆ : ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮೂಲಕ ಹೊಟ್ಟೆಗೆ ಇಳಿದವು.ʼ

ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲಾ ಜನರನ್ನು ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನುತ್ತಾನೆ. ಹಾಗೆ, ಹೊಟ್ಟೆ ಪೂರಿಗಳನ್ನು ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲುತ್ತದೆ.

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” ಎಂಬಂತೆ, ನಾಲಿಗೆಯ ತಪ್ಪಿಗೆ ಹೊಟ್ಟೆ ಶಿಕ್ಷೆ ಅನುಭವಿಸುತ್ತದೆ. ಲೇಖಕಿ ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರದ ಜೀರ್ಣ ಕ್ರಿಯೆ ಬಹಳ ಸಣ್ಣ ವಿಷಯವಲ್ಲ. ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗ್ಯಾಸ್ ಪ್ರತ್ಯಕ್ಷವಾಗಿ ಹೊಟ್ಟೆಕಿಚ್ಚು ಉಂಟುಮಾಡುತ್ತದೆ. ಡಿವಿಜಿಯವರ ಕಗ್ಗದ ಸಾಲುಗಳ ಮೂಲಕ ಅದನ್ನು ವಿಶ್ಲೇಷಿಸಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವು ಮಸಾಲೆ ಮಿಶ್ರಿತ ಆಹಾರವನ್ನು ಎರಡು ವಿಭಾಗಗಳಲ್ಲಿ ಪ್ರಕ್ರಿಯೆಗೊಳಿಸುತ್ತವೆ. ಸೀನಿಯರ್ ಮತ್ತು ಜೂನಿಯರ್ ಕರುಳಿನಲ್ಲಿ ಅದರ ಶುದ್ಧ ಅಂಶ ಬೇರ್ಪಡಿಸುತ್ತವೆ.

ಆಹಾರದ ಸ್ಕ್ರಾಪ್‌ ಭಾಗವನ್ನು ನಗರಸಭೆಯ ವಿಲೇವಾರಿಗೆ ಹಸಿಕಸ, ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪಡಿಸಿ ದೇಹದೊಳಗಿನ ಆಯಾ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯೇ ವಿಚಿತ್ರ. ವಿಷಯನ್ನು ಹಾಸ್ಯ ರೀತಿಯಲ್ಲಿ ನಿರೂಪಿಸುವಾಗ ನಗು ತಡೆಸಲಾಗದು. ಇದು ಲೇಖಕಿಯ ಶೈಲಿ ಹಾಗೂ ಶಕ್ತಿಯನ್ನು ಬಿಂಬಿಸುತ್ತದೆ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಪಡೆಯಲು ರೇಡಿಯೋ ಅಥವಾ ಪತ್ರಿಕೆಗಳಿಗೆ ನಂಬಿಕೆಯಿಟ್ಟಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್‌ ಪೌಡರ್ ನಿರ್ಮಾ. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು.

“ಹಚ್ಚೇವು ನೊರೆ ನೊರೆಯ ಸೋಪು..” ಎಂಬ ಶೀರ್ಷಿಕೆಯ ಲೇಖನ ಹಾಸ್ಯದಲ್ಲಿ ಹಾಸ್ಯ, ಭಾಷೆಯಲ್ಲಿ ಕ್ರಿಯಾಶೀಲತೆ ಹಾಗೂ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪೂರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ….ನಿನ್ನಿಂದಲೇ….ಕನಸೊಂದು ಶುರುವಾಗಿದೆ… ಎಂಬ ಸುಂದರ ಹಿಮ್ಮೇಳದೊಂದಿಗೆ, ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಮನೆ ಮನೆಗೆ ಬಂದು ನಿಲ್ಲತೊಡಗಿದವು.

ತಡವಾಗಿ ಎದ್ದವರು ಗಾಡಿ ಮುಂದೆ ಕಸ ಹಾಕಲು ಬೇಸರ ಪಡುತ್ತಾರೆ. ನಂತರ ಖಾಲಿ ಸೈಟ್‌ ನಲ್ಲಿ ಕಸ ಬಿಸಾಡುವ ಅಸಂಸ್ಕೃತತೆಗೆ ಇಳಿಯುತ್ತಾರೆ. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

ಪಾರ್ಕ್, ಫುಟ್‌ಪಾತ್ ಎಲ್ಲೆಡೆ ತ್ಯಾಜ್ಯ ತುಂಬಿ ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ.

ಬಾಲ್ಯದ ದಿನಗಳ ನೆನಪಿನಲ್ಲಿ ಲೇಖಕಿ ಮನೆ ಮುಂಭಾಗದ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣು ರಸ್ತೆಯ ಮಧ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು.

ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ, ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು.

ಅಪ್ಪನೇ ಪೈಪ್‌ ಕ್ಲೀನ್ ಮಾಡಿ, ಗೊಡ್ಡೆ ಹೊತ್ತರೆಂದು ಕೊನೆಗೆ ಸ್ವತಃ ಗುದ್ದಲಿ ಹಿಡಿದು ಸ್ವಚ್ಛತೆ ನಡೆಸಿದ ವೃತ್ತಾಂತ ಮನ ಮುಟ್ಟುತ್ತದೆ. ಸುಮಾ ಮೇಡಂ ರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು.

ಕೃತಿಯ ಶೀರ್ಷಿಕೆ “ಹಚ್ಚೆ ದಿನ್” ಹೆಣ್ಣು ಮಕ್ಕಳ ಫ್ಯಾಶನ್ ಕ್ಷೇತ್ರಕ್ಕೆ ಹಳೆಯ ಹಚ್ಚೆಯನ್ನು ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟದೆ. ಲೇಖಕಿಯು ಟ್ಯಾಟೂ ವನ್ನ ಶಿಲೆಯ ಮೇಲಿನ ಶಾಸನಗಳಂತೆ, ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ ಎಂದು ಆಧುನಿಕತೆಯೆಂದು ಪರಿಚಯಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಎನ್.ರಾಮನಾಥ್ ಅವರು ಸುಂದರವಾಗಿ ಲೇಖಕಿಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಅದು ಓದುಗರಿಗೆ ಮಾರ್ಗದರ್ಶಕವಾಗುತ್ತದೆ.

ಗುಡಿಯ ದೇವರುಗಳು ಪೂರ್ವಾಭಿಮುಖವಾಗಿ ನಿಂತಿದ್ದರೆ ನವಗ್ರಹಗಳು ಕಣ್ಣಿನಾಸ್ಪತ್ರೆಯ ರೋಗಿಗಳಂತೆ ಬೇರೆ ಬೇರೆ ದಿಕ್ಕಿಗೆ ತಿರುಗಿರುವ ಹೋಲಿಕೆ ಉಡಾಫೆ ನಗಿಸುತ್ತವೆ.

ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದಿಂದ ೩೨ ಲೇಖನಗಳು ಓದುಗರನ್ನು ನಗಿಸಲು ನೆರವಾಗುತ್ತವೆ. ಇದು ಉತ್ತಮ ಹಾಸ್ಯ ಸಾಹಿತ್ಯದ ಸಂಕಲನ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಕನ್ನಡ ರಂಗಭೂಮಿಯನ್ನು ಚಿತ್ರಿಸುವ ಕೃತಿ “ನಿಂತು ಹೋದ ಕನ್ನಡ ರಂಗವೈಭವ”

ಹಾಸನ ಜಿಲ್ಲೆಯು ಕನ್ನಡ ರಂಗಭೂಮಿಗೆ ತನ್ನದೇ ಆದಂತಹ ಎಂದೆಂದಿಗೂ ಮರೆಯಲಾಗದಂತಹ ಕಾಣಿಕೆಗಳನ್ನು ನೀಡಿದೆ. ಹಿಂದಿನ ಕಾಲದಿಂದಲೂ ನಾಟಕ ರಂಗಭೂಮಿಗೆ ಹಾಸನದಲ್ಲಿ ವಿಶೇಷ ಮನ್ನಣೆ ದೊರಕಿದೆ. ರಂಗಕ್ಷೇತ್ರದಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು ಮತ್ತು ತಂತ್ರಜ್ಞರು ಸೇರಿದಂತೆ ಹಲವರನ್ನು ಪರಿಚಯಿಸುವ ಮೂಲಕ ಸಾಹಿತ್ಯ ರಚನೆಯಲ್ಲಿ ವಿಭಿನ್ನ ಶೈಲಿಯನ್ನು ರೂಪಿಸಿರುವ ವ್ಯಕ್ತಿ ಗೊರೂರು ಅನಂತರಾಜು.

ಅವರು ರಚಿಸಿರುವ “ನಿಂತು ಹೋದ ಕನ್ನಡ ರಂಗವೈಭವ” ಎಂಬ ಕೃತಿಯ ಶೀರ್ಷಿಕೆಯೇ ನಾಟಕದ ಚೈತನ್ಯ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತದೆ. ಅವರು ನಾಟಕಗಳ ಬೆಳವಣಿಗೆ, ಆಧುನಿಕತೆ ಮತ್ತು ಅದರ ತೀವ್ರ ಕುಸಿತದ ಬಗ್ಗೆ ಚಿಂತನಾತ್ಮಕವಾಗಿ ಬರೆಯುತ್ತಾರೆ. ರಂಗಭೂಮಿಯ ನೈತಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿಕೊಡುತ್ತಾರೆ.

ಈ ಕೃತಿಯಲ್ಲಿ ಕಲಾವಿದರ ಪರಿಚಯವೊಂದರ ಮೂಲಕ ತೃಪ್ತಿಯಾಗದೆ, ರಂಗಭೂಮಿಯ ತಾತ್ವಿಕತೆಯನ್ನೂ ವಿಶ್ಲೇಷಣೆ ಮಾಡಲಾಗಿದೆ. ಲೇಖಕರ ಭಾಷೆ ಸರಳವಾಗಿದ್ದು, ಭಾವಪೂರ್ಣತೆಯಿಂದ ಕೂಡಿದೆ. ಓದುಗರಿಗೆ ಪ್ರತಿಯೊಂದು ಪುಟ ಆಲೋಚನೆಗೆ ಆಹ್ವಾನ ನೀಡುತ್ತದೆ.

ಕೃತಿಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು ರಂಗಭೂಮಿಯ ಪತನವಾಗಿದೆ. ನಾಟಕವು ಒಂದು ಕಾಲದಲ್ಲಿ ಸಮಾಜದ ದರ್ಪಣವಾಗಿತ್ತೆಂದು ಲೇಖಕರು ವಿವರಿಸುತ್ತಾರೆ. ನಾಟಕಗಳ ಒಡನಾಡಿತನ, ಸಾಮಾಜಿಕ ಪಾತ್ರ ಇಂದು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಸೂಚಿಸುತ್ತಾರೆ.

ಕೃತಿಯಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು, ತಂತ್ರಜ್ಞರು ಹೀಗೆ ಎಲ್ಲರನ್ನು ಒಳಗೊಂಡಂತೆ ಹಲವು ವ್ಯಕ್ತಿಗಳ ಪರಿಚಯ, ನಾಟಕ ರಚನೆ, ಅಭಿನಯದ ಕಥನಗಳು ಚಿತ್ರಣವಂತಾಗಿವೆ. ಇದರಿಂದ ಓದುಗರಿಗೆ ಕೇವಲ ವಿಷಯವಷ್ಟೇ ಅಲ್ಲ, ಭಾವನಾತ್ಮಕ ಅನುಭವವು ದೊರಕುತ್ತದೆ. ಈ ಕೃತಿಯು ಒಂದು ಕಾಲದಲ್ಲಿ ನಾಟಕವು ಸಮಾಜದ ದರ್ಪಣವಾಗಿತ್ತು ಎಂಬುದನ್ನು ನೆನಪಿಸುತ್ತದೆ.

ಈಗ ಅದು ಮನರಂಜನೆಯ ಉಪಕರಣವಾಗಿ ಕುಸಿದಿರುವ ಸ್ಥಿತಿಯನ್ನು, ಸ್ತಬ್ಧತೆಯ ಪರಿಸ್ಥಿತಿಯನ್ನು ಕೃತಿಯಲ್ಲಿ ಲೇಖಕರು ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಈ ಕೃತಿಯು ಕಲಾವಿದರ ಗೌರವಾರ್ಹತೆಯನ್ನು ತೋರಿಸುತ್ತದೆ. ಈ ಕೃತಿಯು ಕನ್ನಡ ರಂಗಭೂಮಿಯ ಪ್ರಾಮಾಣಿಕ ದಾಖಲೆಯಾಗಿದೆ. ಗೊರೂರು ಅನಂತರಾಜು ಅವರು ಕೇವಲ ಕಲಾವಿದರನ್ನು ಪರಿಚಯಿಸುವ ಸಾಹಿತಿ ಮಾತ್ರವಲ್ಲ, ನಾಟಕದ ಕಲಾವಿದರ ಜೀವನವನ್ನೇ ಅರ್ಥಮಾಡಿಕೊಂಡ ಕಲಾವಿದರಾಗಿ ಈ ಕೃತಿಯಲ್ಲಿ ಸ್ಪಷ್ಟ ಚಿತ್ರಣ ನೀಡುತ್ತಾರೆ.

ಲೇಖಕರು ರಂಗಭೂಮಿಗೆ ತುಂಬಾ ಹತ್ತಿರವಾದ ವ್ಯಕ್ತಿಯಾಗಿರುವುದರಿಂದ ಕೆಲವೊಮ್ಮೆ ಭಾವನಾತ್ಮಕವಾಗಿ ಹೆಚ್ಚು ವಿವರಣೆಯನ್ನು ನೀಡಿರುವ ಸಂದರ್ಭಗಳಿವೆ. ಈ ಸಂದರ್ಭಗಳು ಕೃತಿಯ ನೈಜತೆಯನ್ನು ಹೆಚ್ಚಿಸುತ್ತವೆ. “ನಿಂತು ಹೋದ ರಂಗವೈಭವ” ಎಂಬ ಲೇಖನದಲ್ಲಿ ಕನ್ನಡ ರಂಗವೈಭವ ಪತ್ರಿಕೆಯ ಸಹ ಸಂಪಾದಕರನ್ನು ಪರಿಚಯಿಸಿಕೊಂಡು ರಂಗ ಪ್ರದರ್ಶನದ ಫೋಟೋ ತೆಗೆದು ಪತ್ರಿಕೆಗಳಿಗೆ ಪರಿಚಯಿಸಲು ಲೇಖನ ಬರೆಯುವುದಾಗಿ ಕೇಳಿಕೊಳ್ಳುತ್ತಾರೆ.

ಲೇಖನಗಳನ್ನು ಬರೆಯುವುದಾದರೆ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ರಂಗವೈಭವ ಪತ್ರಿಕೆಗೆ ಬರೆಯಲು ತಿಳಿಸುತ್ತಾರೆ. ಕೋವಿಡ್- 19ರ ಮೊದಲು ರಂಗಭೂಮಿ ಹೇಗಿತ್ತು?. ಕೋವಿಡ್ ಕಾಲದಲ್ಲಿ ಅದರ ಪರಿಸ್ಥಿತಿ ಏನಾಯಿತು ಮತ್ತು ಕೋವಿಡ್ ನಂತರ ಈಗಿನ ರಂಗಭೂಮಿ ಹೇಗಿದೆ. ಎಂಬ ವಿವರವನ್ನು ಮಾತನಾಡುತ್ತಾ, ಬಸವರಾಜ ಐರಣಿಯವರ ಕಲಾ ಸೇವೆಯ ಕುರಿತ ಲೇಖನ ಇದಾಗಿದೆ.

ಲೇಖಕರು “ನಿಂತು ಹೋದ” ಪತ್ರಿಕೆಯ ಜೊತೆಗೆ ರಂಗಭೂಮಿಯ ವ್ಯಾಪ್ತಿಯೂ ಕಡಿಮೆಯಾದ ಕುರಿತು ವಿವರವಾಗಿ ಬರೆದಿದ್ದಾರೆ. 2019 ರ ನಂತರ ಪತ್ರಿಕೆಯು ವಾರಕ್ಕೊಮ್ಮೆ ರಂಗಭೂಮಿ ಕಲಾವಿದರ ಕುರಿತು ಪರಿಚಯ ಮಾಡುತ್ತಾ ಬಂದಿದೆ. ಲೇಖಕರಾದ ಬಸವರಾಜ ಐರಣಿಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ತಂದು ಕೊಡುವವರೆಗೂ ವ್ಯಾಪಿಸಿದೆ ಎಂದ ಮೇಲೆ ಈ ಲೇಖನ ಎಷ್ಟೊಂದು ಮಹತ್ವ ಪಡೆದಿದೆ ಎಂದು ತಿಳಿಯುತ್ತದೆ.

ಎಸ್.ಎಸ್.ಎಲ್.ಸಿ ಓದಿದ ಐರಣಿಯವರು ಪ್ರಿಂಟಿಂಗ್ ಪ್ರೆಸ್ ಕೆಲಸಕ್ಕೆ ಸೇರಿಕೊಂಡು ನಂತರ ನಾಟಕದ ಪಾತ್ರಗಳನ್ನು ಬಯಸಿ ಬೆಳೆದು ಬಂದ ಬಗೆಯನ್ನು ತಿಳಿಸುತ್ತದೆ. ಲೇಖಕರ ಮತ್ತೊಂದು ಲೇಖನ ಗುಡಿಹಳ್ಳಿ ನಾಗರಾಜ್ ರವರ ನೆನಪು ಮಾಡಿಕೊಂಡು ಬರೆದಂತಹ ರಂಗಸೆಲೆ ಪುಸ್ತಕದಲ್ಲಿ ಪರಿಚಯಿಸಿರುವ ನಾಟಕ ಕಂಪನಿಗಳು ಹಾಗೂ ಪಾತ್ರವರ್ಗ ಹೇಗೆ ಜನಸಮೂಹದಲ್ಲಿ ಮೋಡಿ ಮಾಡಿತು.

ಗುಡಿಹಳ್ಳಿ ನಾಗರಾಜರವರು ಹೇಗೆ ಬರಹಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಕಾದಂಬರಿಕಾರರಾಗಿ ಹೊರಹೊಮ್ಮಿದರು ಎಂಬುದನ್ನು ತಿಳಿಸುತ್ತದೆ. ಕನ್ನಡ ರಂಗಭೂಮಿಯ ಬಹಳಷ್ಟು ಜನರನ್ನು ಹೇಗೆ ಹೊರ ಜಗತ್ತಿಗೆ ಪರಿಚಯಿಸಿದರು ಎಂಬ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಪಯಣ ಲೇಖನದಲ್ಲಿ ನರಸಿಂಹರಾಜುರವರು ಹೇಗೆ ನಾಟಕ ಕಂಪೆನಿಗೆ ಪ್ರವೇಶ ಪಡೆದರು. ಎಷ್ಟೆಲ್ಲಾ ನಾಟಕ ಕಂಪೆನಿಗಳನ್ನು ಬದಲಾಯಿಸಿದರು. ಕೊನೆಯಲ್ಲಿ ಗುಬ್ಬಿ ನಾಟಕ ಕಂಪೆನಿಯಲ್ಲಿ ನೆಲೆನಿಂತು ಚಿತ್ರರಂಗ ಪ್ರವೇಶಿಸಿದ ಬಗೆ ಎಲ್ಲವನ್ನು ವಿವರಣಾತ್ಮಕವಾಗಿ ಬರೆದಿದ್ದಾರೆ.

ಎರಡನೇ ಮಹಾಯುದ್ದದ ಬಿಸಿ ನಾಟಕ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿ, ಅಂದಿನ ಕಾಲಘಟ್ಟದಲ್ಲಿ ನಟರು, ನಿರ್ದೇಶಕರು ಅನುಭವಿಸಿದ ನೋವು, ದುಃಖ-ದುಮ್ಮಾನಗಳನ್ನು ತಮ್ಮ ಲೇಖನಿಯ ಮೂಲಕ ತಿಳಿಸಿದ್ದಾರೆ. ನರಸಿಂಹರಾಜು ಅವರು ಸಿನಿಮಾ ರಂಗದಲ್ಲಿದ್ದರೂ, ರಂಗಭೂಮಿ ಕರೆದಾಗ ಮತ್ತೆ ಬಂದು ಪಾತ್ರ ಮಾಡುತ್ತಿದ್ದರು ಎಂಬುದನ್ನು ಓದುಗರ ಮನ ಮುಟ್ಟುವಂತೆ ಹೇಳಿದ್ದಾರೆ.

ಗೊರೂರು ಜಾತ್ರೆಯ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಬಂದು ಬೀಡುಬಿಡುತ್ತಿದ್ದ ಟೂರಿಂಗ್ ಟಾಕೀಸ್ ಗಳ ಬಗ್ಗೆ ಮರೆಯದೇ ಹೇಳಿರುವುದು ತನ್ನ ಊರು ಗೊರೂರು ಒಂದೊಮ್ಮೆ ಹೇಗೆ ರಂಗಭೂಮಿಯ ನೆಲೆಯಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನರಸಿಂಹರಾಜುರವರ ರಂಗಪಯಣ ಸಾಗಿದ ರೀತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಲೇಖಕರಾದ ಗೊರೂರು ಅನಂತರಾಜು ರವರು ಬರೆದಿರುವ ಮತ್ತೊಂದು ಲೇಖನದಲ್ಲಿ ರಂಗಗೀತೆಗಳ ಸಾರ್ವಭೌಮ ಎಂದೇ ಪ್ರಸಿದ್ಧರಾದ ಆರ್. ಪರಮಶಿವನ್ ರವರು ಬಡ ಕುಟುಂಬದಲ್ಲಿ ಹುಟ್ಟಿ, ಊಟಕ್ಕೂ ಗತಿಯಿಲ್ಲದ ದಿನಗಳಲ್ಲಿ ಸೋದರ ಮಾವನ ಭಿಕ್ಷಾನ್ನದಿಂದ ಒಂದು ಹೊತ್ತು ಉಂಡು ನಾಲ್ಕು ವರ್ಷಗಳು ಕಳೆದರು. ನಂತರವಷ್ಟೇ ಚಾಮುಂಡೇಶ್ವರಿ ಕಂಪೆನಿಯ ವಸಂತಸೇನ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಎದುರಿನಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದದನ್ನು ತನ್ನ ಆತ್ಮಕಥೆಯಲ್ಲಿ ನಿವೇದಿಸುತ್ತಾರೆ. ಆರ್. ಪರಮಶಿವನ್ ಅಲ್ಲದೇ 1940 ರ ಸುಮಾರಿಗೆ ಗುಬ್ಬಿ ವೀರಣ್ಣನವರು ತೆಗೆದ ಸುಭದ್ರ ಚಿತ್ರದಲ್ಲಿ ಒಂದು ಹಾಡು, ದೃಶ್ಯ ವೀರಣ್ಣನವರ ಜೊತೆಯಲ್ಲಿ ಅಭಿನಯಿಸಲು ಸಿಕ್ಕ ಅವಕಾಶವನ್ನು ನೆನಪು ಮಾಡಿಕೊಳ್ಳುತ್ತಾರೆ.

ಹೊಳೆನರಸೀಪುರಕ್ಕೆ ನಾಟಕ ನೋಡಲು ಹೋದಾಗ ಹಾರ್ಮೋನಿಯಂ ಮಾಸ್ಟರ್ ಈಗ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಎಷ್ಟು ಹೊತ್ತಾದರೂ ಬರಲಿಲ್ಲ ಅದನ್ನು ಮುಂದುವರಿಸುವ ಕಾರ್ಯ ಪರಮಶಿವನ್ ರವರಿಗೆ ಕೊಟ್ಟಿದ್ದರು. ಕೇವಲ ಹದಿನೆಂಟು ವರ್ಷದ ಹುಡುಗ ಪರಮಶಿವನ್ ಅದನ್ನು ಸುಸೂತ್ರವಾಗಿ ಹಾರ್ಮೋನಿಯಂ ವಾದಕರಾಗಿ ನಿರ್ವಹಣೆ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅಂದಿನ ಕಾಲದಲ್ಲಿ ನಾಟಕ ಕಂಪೆನಿಗಳು ಹೇಗೆ ಊರಿಂದೂರಿಗೆ ವಲಸೆ ಹೋಗುತ್ತಿದ್ದವು. ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಬದುಕುವ ಸನ್ನಿವೇಶ ಎಲ್ಲವನ್ನು ಕಟ್ಟಿಕೊಡುತ್ತಾರೆ. ನಾಟಕಗಳ ಜೀವಾಳವೇ ರಂಗಗೀತೆಗಳು, ಅವುಗಳನ್ನು ಬರೆಯುವುದು ಮತ್ತು ಹಾಡುವುದರಲ್ಲಿ ಪರಮಶಿವನ್ ರವರು ಸದಾ ಮುಂದಿರುತ್ತಾರೆ ಎಂಬುದನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.

ಈ ಕೃತಿಯಲ್ಲಿ ಪೌರಾಣಿಕ ನಾಟಕ ವಿದ್ವಾನ್ ಕಿರಗಸೂರು ರಾಜಪ್ಪನವರ ಕುರಿತು, ಸೃಜನಶೀಲ ನಿರ್ದೇಶಕಿ ಮಂಗಳಾ ವೆಂಕಟೇಶ್, ರಂಗ ಸಂಗೀತಕ್ಕೆ ಹನ್ಯಾಳು ಗೋವಿಂದೇಗೌಡರ ಕೊಡುಗೆಗಳು, ಗವೇನಹಳ್ಳಿ ಜಿ. ಎಂ. ಪ್ರದೀಪ್, ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಹಳೇಬೀಡು ಕುಳ್ಳೇಗೌಡರು, ಬಂಡಿಹಳ್ಳಿ ನಾಗರಾಜ, ಪೌರಾಣಿಕ ರಂಗ ಸಂಗೀತ ಸಾಧಕರಾದ ಹೆಚ್. ಜಿ. ಶಿವಲಿಂಗಮೂರ್ತಿ.

ಲೇಖಕರ ರಂಗ ಸಿರಿ ಕಥಾ ಐಸಿರಿ ಕುರಿತು ಡಾ. ಸುಧಾ ಹೆಚ್. ಎಸ್ ಧಾರವಾಡ ಬರೆದ ರಂಗಭೂಮಿ ಒಳ ಹೊರಗಿನ ಹೂರಣ ವಿಮರ್ಶಾ ಬರಹ, ಅಂತೆಯೇ ಗೊರೂರು ಅನಂತರಾಜು‌ ರವರು ನಟ, ನಾಟಕಕಾರರು ಎಸ್. ಎಸ್. ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ನಾಟಕ ಕೃತಿ ಮಹಾತ್ಮ ಕನಕದಾಸ ಕೃತಿ ವಿಮರ್ಶೆ, ಹಾಗೆಯೇ ಡಾ. ಬರಾಳು ಶಿವರಾಮ್ ರವರ ರಂಗವೈಭವ ಕೃತಿಯ ಪರಿಚಯ ಮುಂತಾದ ವಿಚಾರಗಳು ಸ್ಪಷ್ಟವಾಗಿ ವಿಭಿನ್ನ ದೃಷ್ಟಿಕೋನಗಳಲ್ಲಿ ಗೋಚರವಾಗತ್ತವೆ.

ಈ ಕೃತಿಗೆ ಡಾ. ಬರಾಳು ಶಿವರಾಮ್ ಮುನ್ನುಡಿಯನ್ನು ಬರೆದಿದ್ದು, ಬೆನ್ನುಡಿಯನ್ನು ಜಿ. ಎಸ್. ಪ್ರಕಾಶ್ ಬರೆದಿದ್ದಾರೆ. ಈ ಭಾಗಗಳು ಓದುಗರಿಗೆ ಗ್ರಂಥದ ಸಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. “ನಿಂತು ಹೋದ ಕನ್ನಡ ರಂಗವೈಭವ” ಕೃತಿಯು ಕನ್ನಡ ರಂಗಭೂಮಿಗೆ ಸಮರ್ಪಿತವಾದ ಬೌದ್ಧಿಕ ಚಿಂತನೆ ಹಾಗೂ ಮನನಕ್ಕೆ ಕಾರಣವಾಗುವ ವಿಶ್ಲೇಷಣಾತ್ಮಕ ದಾಖಲೆ.

ಗೊರೂರು ಅನಂತರಾಜು ಅವರು ಈ ಕೃತಿಯಲ್ಲಿ ಕನ್ನಡ ರಂಗಭೂಮಿ ಬದುಕು, ವೈಭವ, ಪತನ ಮತ್ತು ಸಾಧ್ಯತೆಯ ಬಗೆಗಿನ ಸತ್ಯವನ್ನು ನಿರ್ಭಯವಾಗಿ ಅನಾವರಣಗೊಳಿಸಿದ್ದಾರೆ. ಅವರು “ನಿಂತು ಹೋದ ಕನ್ನಡ ರಂಗಭೂಮಿ” ಯಲ್ಲಿ ವಿಭಿನ್ನ ಕಲಾವಿದರ ಬದುಕಿನ ಅನುಭವ, ವೈಚಾರಿಕತೆ ಮತ್ತು ನಿಷ್ಠೆಯ ಭಾವದಿಂದ ವ್ಯಕ್ತಪಡಿಸಿರುತ್ತಾರೆ. ಇವರ ಈ ಕೃತಿಯು ಕನ್ನಡ ರಂಗಭೂಮಿಯನ್ನು ಜನಮಾನಸ ಲೋಕಕ್ಕೆ ತಲುಪಿಸುವಲ್ಲಿ ಸಹಕಾರಿಯಾಗಿದೆ.

ಕೆ. ಎನ್. ಚಿದಾನಂದ, ಸಾಹಿತಿ, ಹಾಸನ

ಇ-ಆಸ್ತಿ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯ ಅರ್ಜಿಗಳ ಸಲ್ಲಿಕೆಗೆ ಅವಕಾಶ

ಗಂಗಾವತಿ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೧ ವಾರ್ಡುಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇನ್ನು ಮುಂದೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿಗಳನ್ನು ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಲಾಗಿರುತ್ತದೆ.

ಸಾರ್ವಜನಿಕರು ತಮ್ಮ ಆಸ್ತಿಯ ಖಾತೆಯ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ನಾಲ್ಕು ಕೇಂದ್ರಗಳ ಮೂಲಕ ನಾಗರಿಕರಿಂದ ನೇರವಾಗಿ ಮಾಡ್ಯೂಲ್ ಮೂಲಕ ಹಾಗೂ ಹೆಲ್ಪ್ ಡೆಸ್ಕ್ ಲಾಗಿನ್ ಮೂಲಕ ಸಲ್ಲಿಸಲು ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ.ಎಂ.ಡಿ.ಎಸ್ ನಿಂದ ಅವಕಾಶ ಸಲ್ಲಿಸಿರುತ್ತಾರೆ. ಆದ ಕಾರಣ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸಹಿ/-
ಪೌರಾಯುಕ್ತರು,
ನಗರಸಭೆ, ಗಂಗಾವತಿ.