ಡಾ. ಪ್ರವೀಣಕುಮಾರ ಬಿರಾದಾರ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟçಪ್ರಶಸ್ತಿ ಲಭಿಸಿದಿರುವುದು ಸ್ವಾಗತಾರ್ಹ: ಶರಣಬಸವ ದೇವರು
ಗಂಗಾವತಿ : ಜ್ಞಾನ ಶಾರದೆ ಅಕಾಡೆಮಿಯ ಸಂಸ್ಥಾಪಕರಾದ ಡಾ. ಪ್ರವೀಣಕುಮಾರ ಬಿರಾದಾರ ಕಲಬುರ್ಗಿ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟ್ರಪ್ರಶಸ್ತಿ ಲಭಿಸಿದುದು ಸ್ವಾಗತಾರ್ಹವಾಗಿದೆ ಎಂದು ಪ.ಪೂ ಶ್ರೀ ಶರಣಬಸವ ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಗಂಗಾವತಿಯ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠ ಶಾಲೆಯು  ಹಾಗೂ ಅರಳಹಳ್ಳಿ ಬೃಹನ್ಮಠದ ಪರವಾಗಿ  ಈ ಶುಭ ಸುದ್ಧಿ ಹಂಚಿಕೊಂಡರು.
ಈ ಪ್ರಶಸ್ತಿ ಜೂನ್‌ 20 ರಂದು, ಶುಕ್ರವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಬೆಂಗಳೂರಿನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಗೊಂಡಿತು.
ಡಾ. ಪ್ರವೀಣಕುಮಾರ ಬಿರಾದಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಮುಂದುವರೆಸಿ ಇನ್ನೂ ಎತ್ತರಕ್ಕೆ ಬೆಳೆಯುವ ಆಶಯವನ್ನು ವ್ಯಕ್ತಪಡಿಸಿ ಆಶೀರ್ವಾದ ಸಂದೇಶ ನೀಡಿದ್ದಾರೆ.
ಮಾಹಿತಿಗಾಗಿ:
ಶ್ರೀ ಶರಣಬಸವ ದೇವರು
ಶ್ರೀ ರಾಜರಾಜೇಶ್ವರಿ ಬೃಹನ್ಮಠ, ಅರಳಹಳ್ಳಿ
ಮೊ.ನಂ: ೮೧೫೦೯೦೮೩೮೫
ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿಸಿರುವ “ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯೋಶೋಗಾಥೆ” ಎಂಬ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ.

ಡಾ. ಮೋಹನ ಗೋಪಾಲರಾಜೇ ಅರಸ್ ಎಂಬ ಹೆಸರು ಕೇಳಿದರೆ ಕೆಲವರಿಗೆ ಅಪರಿಚಿತವಾಗಿರಬಹುದು, ಆದರೆ ಡಾ. ಎಂ.ಜಿ.ಆರ್.ಅರಸ್ ಎಂದರೇ ಸಾಹಿತ್ಯ ವಲಯದಲ್ಲಿ ಎಲ್ಲರಿಗೂ ಪರಿಚಿತರು.

ಚುಟುಕು ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಅದಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟವರು. ಚುಟುಕುಗಳು ಕೂಡ ಸಾಹಿತ್ಯದ ಒಂದು ಪ್ರಕಾರವೇ ಎಂದು ಮೂಗು ಮುರಿಯುವವರೇ ಇದ್ದ ಕಾಲದಲ್ಲಿ ಅದಕ್ಕೆ ಒಂದು ಸ್ಥಾನಮಾನ ಮಹತ್ವ ತಂದುಕೊಟ್ಟವರು ದಿನಕದ ದೇಸಾಯಿಯವರು.

ಚುಟುಕು ಸಾಹಿತ್ಯ ಇಂದು, ನಿನ್ನೆಯದಲ್ಲ. ಇದಕ್ಕೊಂದು ದೀರ್ಘವಾದ ಇತಿಹಾಸವಿದೆ. ಪಾಶ್ಚಿಮಾತ್ಯರಲ್ಲಿ ೧೯ನೇ ಶತಮಾನದ ಕವಿ ಎರ್ಡ್ವರ್ಡ್ ಲೀಯರ್ ನ್ನು ಚುಟುಕು ಸಾಹಿತ್ಯದ ಜನಕನೆಂದೇ ಕರೆಯುತ್ತಾರೆ.

ಖ್ಯಾತನಾಮರಾದ ಹೆಚ್.ಜಿ.ವೆಲ್ಸ್, ಕೆರೋಲ್, ರುಡ್‌ಯಾರ್ಡ್ ಕಿಲ್ಲಿಂಗ್, ಆಗ್ಹೆನ್ ನ್ಯಾಷ್, ಅಡೆನ್ ಜೇಮ್ಸ್ ಬೌಯ್ಸ್, ಟಿ.ಎಸ್.ಎಲಿಯಟ್, ಮಾರ್ಕ್ ಟ್ವೇನ್ ಮೊದಲಾದ ಖ್ಯಾತ ಕವಿಗಳು ಚುಟುಕು ಸಾಹಿತ್ಯದ ಲೋಕಕ್ಕೆ ಉತ್ಸಾಹ ತುಂಬಿದ್ದಾರೆ.

ಭಾರತೀಯ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯದ ನಾನಾ ರೂಪಗಳ ಪ್ರಕಾರಗಳಿವೆ. ವಚನ ಸಾಹಿತ್ಯ, ಜನಪದ ಸಾಹಿತ್ಯ, ಉರ್ದು ಶಾಯರಿ ಮೊದಲಾದವು ಚುಟುಕು ರೂಪಗಳಾಗಿ ಅಭಿವೃದ್ಧಿಯಾಗಿವೆ. ಡಿ.ವಿ.ಗುಂಡಪ್ಪ ರ “ಮಂಕುತಿಮ್ಮನ ಕಗ್ಗ” ಕೃತಿಯು ಗಂಭೀರ ಚಿಂತನಶೀಲ ಚುಟುಕುಗಳ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧವಾಗಿದೆ.

ಅಷ್ಟೇ ಗಂಭೀರ ಸ್ವರೂಪದ ಬರಹಗಳನ್ನು ದಿನಕರ ದೇಸಾಯಿ, ಚನ್ನವೀರ ಕಣವಿ, ಡಾ. ಎಂ.ಅಕ್ಬರ್ ಅಲಿಯವರ ಚುಟುಕುಗಳಲ್ಲಿ ನಾವು ಕಾಣಬಹುದು. ಚುಟುಕುಗಳಲ್ಲಿ ಪದಲಾಲಿತ್ಯವನ್ನು ಮೆರೆದವರು ವಿ.ಗ.ನಾಯಕ, ಜಿ.ಟಿ.ನಾರಾಯಣರಾವ್, ಡಾ. ಸಿ.ಪಿ.ಕೆ.ರವರು.

ನಗು ಮನದಿ ಲೋಗರ ವಿಕಾರಂಗಳನು ನೋಡಿ
ಬಿಗಿ ತುಟಿಯ ದುಡಿವಂದು ನೋವಪಡುವಂದು
ಪೊಗದಂದ ವಿಶ್ವಜೀವನದ ಜೀವಾಂತರಂಗದಲಿ
ನಗು ನಗುತ ಬಾಳ್, ತೆರಳು ಮಂಕುತಿಮ್ಮ

ಎಂಬ ಡಿವಿಜಿಯವರ ಕಗ್ಗದಂತೆ ನಗು, ಅಳು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಅವುಗಳ ರಸಪಾಕವನ್ನು ಅನುಭವಿಸಿ ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ’ ಎಂಬುದನ್ನು ಧ್ಯೇಯವಾಕ್ಯವಾಗಿಸಿ ಚುಟುಕು ಸಾಹಿತ್ಯ ಪ್ರಕಾರಕ್ಕೆ ಒಂದು ನೆಲೆಯನ್ನು ತಂದುಕೊಡುವಲ್ಲಿ ಡಾ. ಎಂ.ಜಿ.ಆರ್.ಅರಸ್‌ರ ಪಾತ್ರ ಮರೆಯುವುದುಂಟೆ! ಚುಟುಕು ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ನಾಡಿನಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ರಚಿಸಿ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬೆಳಕಿಗೆ ತರುವಲ್ಲಿ ಇವರ ಯೋಜನೆ ಸಫಲವೇ! ಜನಸೇವೆಯೇ ಜೀವನ ಪುಸ್ತಕಗಳ ಮೂಲಕ ಜ್ಞಾನ ಪ್ರಸಾರವೇ ಜೀವನದ ಪರಮಪ್ರೇಮವೆಂದು ತಮ್ಮದೇ ವೈದ್ಯವಾರ್ತಾ ಪ್ರಕಾಶನ ಮೂಲಕ ೧೩೭ ಕೃತಿ ನಂತರದ ಚುಟುಕು ಯುಗಾಚಾರ್ಯ ೧೩೮ನೇ ಕೃತಿ.

ಸಿ.ಪಿ.ಕೆ ಚುಟುಕುಗಳು, ಎಚ್.ಎಸ್.ಕೆ ಚುಟುಕುಗಳು, ಚದುರಂಗ ಚುಟುಕುಗಳು, ಅಕಬರ ಅಲಿ ಚುಟುಕುಗಳು ಇವರ ಪ್ರಕಾಶನದ ಚುಟುಕು ಸಂಕಲನಗಳು. ಅರಸ್ ಅವರೇ ಬರೆದ ವೈಶಾಖದ ವೈವಿಧ್ಯ, ಚುಟುಕು ವೈಶಾಖ, ಚುಟುಕು ಮಲ್ಲಿಗೆ, ಚುಟುಕು ಚೈತ್ರ, ಚುಟುಕು ಬೆಳಕುಗಳಲ್ಲಿ ವೈವಿಧ್ಯಮಯ ಚುಟುಕುಗಳಿಂದ ಚುಟುಕು ಪ್ರಿಯರ ಮನಗೆದ್ದಿದ್ದಾರೆ.

ಸತ್ತವರ ಸಮಾಧಿಗಳ ಮೇಲೆ
ಕಾಗೆ ಗೂಬೆಗಳು ಹಿಂಡು
ಗೆದ್ದವರ ಮುಂದೆ ಬೋ
ಪರಾಕು ಧೂರ್ತರುಗಳ ದಂಡು

ಬೋ ಪರಾಕ್ ಸಂಸ್ಕೃತಿಯನ್ನು ವಿಡಂಬಿಸಿರುವ ಅರಸ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಮೈಸೂರಿನ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಆಯುರ್ವೇದ ಓದಿ ನಂತರ ಬಿ.ಎ.ಎಂ.ಎಸ್ ಪದವಿ ಪಡೆದರು. ಆಯುರ್ವೇದಿಕ್ ಕಾಲೇಜಿನಲ್ಲಿ ಇವರ ಪ್ರಾಧ್ಯಾಪಕರಾದ ಡಾ. ರಾಘವೇಂದ್ರರಾಯರು ತಮ್ಮ ಶಿಷ್ಯನ ಕುರಿತಂತೆ ಬರೆಯುತ್ತಾ ಅರಸು ಒಬ್ಬ ವಿದ್ಯಾರ್ಥಿ ಮುಖಂಡರಾಗಿ ಕಾಲೇಜಿನ ಏಳಿಗೆಗೆ ಶ್ರಮಿಸಿದ್ದಾರೆ.

ಆಯುರ್ವೇದ ವಿಭಾಗವು ಮೊದಲಿಗೆ ಆಧುನಿಕ ವೈದ್ಯಕೀಯ ಪದ್ದತಿಯ ವಿಭಾಗಕ್ಕೆ ಸೇರಿದ್ದು ಆಯುರ್ವೇದ ವಿಭಾಗದ ಬೇರ್ಪಡೆಗೆ ಶ್ರಮಿಸಿದ್ದಾರೆ. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಆಯುರ್ವೇದ ಪ್ರಚಾರ ಪರಿಷತ್ ಮತ್ತು ಆಯುರ್ವೇದ ಮಂಡಲಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ ಪದವೀಧರರನ್ನು ಸಂಘಟಿಸಿ ಅಕಾಡೆಮಿ ಆಫ್ ಆಯುರ್ವೇದವನ್ನು ಸ್ಥಾಪಿಸಿ ಏಳಿಗೆಗಾಗಿ ಶ್ರಮಿಸಿದ್ದಾರೆ.

ಇವರ ಸಂಪಾದಕತ್ವದಲ್ಲಿ ಬರುವ ವೈದ್ಯವಾರ್ತಾ ಮಾಸಿಕ ಬೆಳ್ಳಿಹಬ್ಬ ಆಚರಿಸಿದೆ. ಡಾ. ಎಂ.ಜಿ.ಆರ್.ಅರಸ್‌ರಂತಹ ಆಯುರ್ವೇದ ಅಭಿಮಾನಿಗಳು ತಮ್ಮ ನಿರಂತರ ದುಡಿಮೆಯಿಂದ ಆಯುರ್ವೇದಕ್ಕೆ ಇಂದು ಅಲೋಪಥಿಗೆ ಸಮನಾದ ಸ್ಥಾನವನ್ನು ದೊರಕಿದೆ ಎಂಬುದಾಗಿ ಡಾ. ಸಿ.ಕೆ.ಎನ್.ರಾಜರವರು ಬರೆದಿದ್ದಾರೆ.

ಅರಸು ಅವರ ಸತತ ಪರಿಶ್ರಮದ ಫಲವಾಗಿ ಸರ್ಕಾರವು ಮೂವರು ಆಯುರ್ವೇದ ವೈದ್ಯರಿಗೆ ಧನ್ವಂತರಿ ಪ್ರಶಸ್ತಿ, ಒಬ್ಬರು ಯುನಾನಿ ವೈದ್ಯ ಮತ್ತು ಒಬ್ಬರು ಹೋಮಿಯೊಪತಿ ವೈದ್ಯರಿಗೆ ಹಾನಿಮನ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದು ಮೈಸೂರಿನ ಪ್ರಸಿದ್ದ ಸಾಹಿತಿಗಳ ಒಡನಾಟದಲ್ಲಿ ಚುಟುಕು ಸಾಹಿತ್ಯದಲ್ಲಿ ಆಸಕ್ತಿ ತೆಳೆದು ಪರಿಷತ್ತು ಹುಟ್ಟುಹಾಕಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಜನಪ್ರಿಯಗೊಳಿಸಿದರು.

ಖ್ಯಾತನಾಮರಾದ ಎಚ್.ಎಸ್.ಕೆ, ಜಿ.ಟಿ.ನಾರಯಣರಾವ್, ನ್ಯಾಯಮೂರ್ತಿ ಜಿನದತ್ತ ದೇಸಾಯಿ, ಚನ್ನವೀರ ಕಣವಿ, ಪಂಚಾಕ್ಷರಿ ಹೊಸಮಠ, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅಕಬರ ಅಲಿ, ಹಿರೇಮಗಳೂರು ಕಣ್ಣನ್ ಮೊದಲಾಗಿ ಕವಿ ಸಾಹಿತಿಗಳನ್ನು ಸಮಾರಂಭಕ್ಕೆ ಕರೆಸಿ ಚುಟುಕು ಸಮ್ಮೇಳನಕ್ಕೆ ಶೋಭೆ ತಂದರು.

ಪ್ರೀತಿ ಇದ್ದಲ್ಲಿ
ಅಂಗಳವೇ ಅರಮನೆ
ದ್ವೇಷ ಇದ್ದಲ್ಲಿ
ಅರಮನೆಯೇ ಸೆರೆಮನೆ

ದ್ವೇಷ ಪ್ರೀತಿ ಇವು ಒಂದೇ ನಾಣ್ಯದ ಎರಡು ಮುಖಗಳೆಂದು ಚುಟುಕಿನಲ್ಲಿ ಪ್ರತಿಪಾದಿಸಿರುವ ಅರಸ್ ಅವರ ಚುಟುಕುಗಳಲ್ಲಿ ಹಾಸ್ಯ, ವಿಡಂಬನೆ, ಕಟಕಿ ಎಲ್ಲವೂ ಇವೆ.

ಅಂಗಾಂಗ ಪ್ರದರ್ಶನ
ಗೃಹಿಣಿಯರಿಗೆ ಮುಜುಗರ
ಬಿನ್ನಾಣಗಿತ್ತಿಯರಿಗೆ
ಸೌಂದರ್ಯ ಪ್ರದರ್ಶನ

ಅರಸು ಅವರು ಸಂಘಟಿಸಿರುವ ಚುಟುಕು ಕವಿ ಸಮ್ಮೇಳನಗಳು ಬಹುಜನಪ್ರಿಯ. ೪೦೦ ರಿಂದ ೫೦೦ ಜನ ಚುಟುಕು ಕವಿಗಳು ಭಾಗವಹಿಸಿದ ಹೆಗ್ಗಳಿಕೆ ಇದೆ. ನಾನು ಕೂಡ ಮೈಸೂರಿನಲ್ಲಿ ಒಮ್ಮೆ ಭಾಗವಹಿಸಿ ಚುಟುಕು ವಾಚಿಸಿದ್ದೇನೆ.

ಮೊದಲ ಮಗಳು ಅಮೃತ
ಎರಡನೆಯ ಮಗಳು ಅಂಜನ
ಮೂರನೆಯ ಮಗಳು
ಅಮೃತಾಂಜನ

ಇವರ ಚುಟುಕಿನಲ್ಲೇ ಸ್ವಯಂ ಕಟಕಿಯಿದೆ. ಒಟ್ಟಾರೆ ಚುಟುಕು ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮನ್ನಣೆ ವೇದಿಕೆ ಒದಗಿಸಿದ ಉತ್ತಮ ಸಂಘಟಕರಾದ ಇವರಿಗೆ ವೈದ್ಯ ರತ್ನ, ವೈದ್ಯ ಭೂಷಣ ಪ್ರಶಸ್ತಿ ಲಭಿಸಿದೆ. ಈ ಅಜಾತ ಶತ್ರು ಬಗ್ಗೆ ನಾಗವರ್ಮನ ಕಾವ್ಯಾವಲೋಕನದ ಸೂಕ್ತಿಗೆ ಅರಸು ನಿದರ್ಶನವೆಂದಿದ್ದಾರೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪ್ರಧಾನ್ ಗುರುದತ್ತ ಅವರು.

ಪಡೆಗುಂ ಮಹಿಮೋನ್ನತಿಯಂ
ಪಡೆಗುಂ ಸನ್ಮಾರ್ಗದೆಸಕಮಂ ಗುಣದೋಳ್ಪಂ
ಪಡೆಗುಂ ನಿರ್ಮಳಯಶಮಂ
ಪಡೆಗುಂ ಪಡೆಗುಂ ವಿಭುತ್ವಮಂ ಬುಧಸಂಗಂ

(ವಿದ್ವಂಸರ ಒಡನಾಟದಿಂದ ಉನ್ನತ ಮಹಿಮೆ ಲಭಿಸುತ್ತದೆ. ಸನ್ಮಾರ್ಗದಲ್ಲಿ ನಡೆಯುವ ಮನೋಧರ್ಮವನ್ನು ತಂದುಕೊಡುತ್ತದೆ. ಒಳ್ಳೆಯ ಗುಣವನ್ನು ಉಂಟುಮಾಡುತ್ತದೆ. ನಿರ್ಮಲವಾದ ಕೀರ್ತಿಯನ್ನು ಗಳಿಸುವಂತೆ ಮಾಡುತ್ತದೆ. ಒಡೆತನವನ್ನು ತಂದುಕೊಡುತ್ತದೆ.)

ತಾಯಿಯ ಗರ್ಭದಿಂದ
ಬಂದಾಗ ಉಸುರಿತ್ತು
ಕಾಯಕ ಮುಗಿಸಿ ಹೊರಟಾಗ
ಹೆಸರಿತ್ತು ಜಗದೆಲ್ಲೆಡೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಅಧ್ಯಯನದ ಮೂಲಕ ಸಾಹಿತ್ಯ ರಚನೆಯಾಗಬೇಕು: ರುದ್ರೇಶ ಭಂಡಾರಿ
ಗಂಗಾವತಿ : ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಿ ಮಾರ್ಪಡಬೇಕು. ಚುಟುಕು ಕವಿಗಳು ಅಧ್ಯಯನದ ಮೂಲಕ ಗಂಭೀರವಾಗಿ ಸಾಹಿತ್ಯ ರಚಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು.
ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಜೂನ್ ೨೧ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿಗೋಷ್ಠಿಗೆ ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ರೇವಣಸಿದ್ದಯ್ಯತಾತನವರು ದಿವ್ಯಸಾನಿಧ್ಯ ವಹಿಸಿದ್ದರು.
ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ನೆರವೇರಿಸಿದರು. ಬಳ್ಳಾರಿ ವೀರಶೈವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಭ್ರಮರಾಂಭ ಯಾಟೆ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಅಧ್ಯಕ್ಷರಾದ ಅಶೋಕ ಗುಡಿಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದರು. ಸಾಹಿತ್ಯಾಸಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ಗೌರಿ ಮಕ್ಕಳ ಸಾಂಸ್ಕೃತಿಕ ಸಂಕಥನ’ ಎಂಬ ಪ್ರಬಂಧ ಮಂಡನೆಗಾಗಿ ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಅಶೋಕ ಡಂಬರ್ ಅವರನ್ನು ಸನ್ಮಾನಿಸಲಾಯಿತು. ಇದೇ ರೀತಿ “ವಿಶೇಷ ಸಾಮರ್ಥ್ಯವುಳ್ಳವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಾದ್ಯತೆಗಳು” ಎಂಬ ಪ್ರಬಂಧಕ್ಕಾಗಿ ಡಾ. ವಿಜಯಕುಮಾರ ಬಡಿಗೇರರಿಗೂ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಸ್.ವಿ ಪಾಟೀಲ್ ಗುಂಡೂರು, ನಾಗಭೂಷಣ ಅರಳಿ, ರಾಘವೇಂದ್ರ ದಂಡಿನ್, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ. ನಿಂಗಜ್ಜ ಉಪಸ್ಥಿತರಿದ್ದರು. ಜೊತೆಗೆ ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸುರೇಶ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಅವರು ಭಾಗವಹಿಸಿದ್ದರು.
ಈ ಕವಿಗೋಷ್ಠಿಯಲ್ಲಿ ಯು.ಆರ್. ಶಿವರುದ್ರಪ್ಪ, ಚಿದಾನಂದ ಕೀರ್ತಿ, ಶಿವಪ್ರಸಾದ ಹಾದಿಮನಿ, ಮಾದೇವ ಮೋಟಿ, ಶರಣು, ಕರಿಸಿದ್ದನಗೌಡರು ಭಾಗವಹಿಸಿದ್ದರು, ಕವಿಗೋಷ್ಠಿಯಲ್ಲಿ ತಾರಾ ಸಂತೋಷ, ಶೋಭಾ ಗೌಡರ್ ಸೇರಿದಂತೆ ೩೫ಕ್ಕೂ ಹೆಚ್ಚು ಕವಿಗಳು ತಮ್ಮ ಚುಟುಕುಗಳು ಹಾಗೂ ಕವನಗಳೊಂದಿಗೆ ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.
(ಅಶೋಕ ಗುಡಿಕೋಟಿ)
ತಾಲೂಕ ಅಧ್ಯಕ್ಷರು,
ಕರವೇ (ಪ್ರವೀಣಕುಮಾರ ಶೆಟ್ಟಿ ಬಣ)
ಅಂಗವಿಕಲರ ಘಟಕ.
ಮೋ:ನಂ: ೯೯೭೨೭೨೩೪೦೬
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.
ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ ವತಿಯಿಂದ ಜೂನ್ ೨೮ ಮತ್ತು ೨೯ ರಂದು ೧೬ ಹಾಗೂ ೧೯ ವರ್ಷದೊಳಗಿನ ಉತ್ತಮ ಆಟಗಾರರ ಜಿಲ್ಲಾ ಮಟ್ಟದ ಆಯ್ಕೆ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ನಿಲಯದ ನಿರ್ದೇಶಕ ರಾಘವೇಂದ್ರ ತೂನ ಅವರು, ಆಸಕ್ತ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.
ಜೂನ್ ೨೮ ಶನಿವಾರ ೧೬ ವರ್ಷದೊಳಗಿನ ಆಟಗಾರರ ಆಯ್ಕೆ ಹಾಗೂ ಜೂನ್-೨೯ ಭಾನುವಾರ ೧೯ ವರ್ಷದೊಳಗಿನ ಉತ್ತಮ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಆಸಕ್ತರಿಗೆ ರಾಯಚೂರಿನ ಮಂತ್ರಾಲಯ ರಸ್ತೆಯ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಆಸಕ್ತರು ಕಲಬುರ್ಗಿಯ ಎನ್.ವಿ ಮೈದಾನದಲ್ಲಿ ಭಾಗವಹಿಸಬಹುದು. ಬೀದರ ಜಿಲ್ಲೆಯವರು ಬೀದರ್ ನ ನೆಹರು ಸ್ಟೇಡಿಯಂ ಮೈದಾನದಲ್ಲಿ, ವಿಜಯಪುರದವರು ಬಿ.ಎಲ್.ಡಿ.ಎ ಮೈದಾನದಲ್ಲಿ, ಬಾಗಲಕೋಟೆಯವರು ಬಾಗಲಕೋಟೆಯ ಬಿ.ವಿ.ವಿ.ಎಸ್ ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಪಾಲ್ಗೊಳ್ಳಬಹುದು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಸಕ್ತರು ಜಿಲ್ಲಾವಾರು ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ರಾಯಚೂರಿಗೆ ಶರಣ ರೆಡ್ಡಿ ಮೊ: (೭೮೯೨೦೬೩೪೭೦), ಕೊಪ್ಪಳಕ್ಕೆ ಚಂದ್ರಶೇಖರ ಎಂ. ಮೊ: (೯೪೪೮೬೩೩೭೪೮), ವಿಜಯಪುರಕ್ಕೆ ಎನ್.ಎಂ. ಹುತಗಿ ಮೊ: (೯೪೪೮೬೭೮೨೮೦), ಕಲಬುರ್ಗಿಗೆ ಕೆ. ವಿಶ್ವನಾಥ ಮೊ: (೯೮೮೦೨೧೨೭೬೯), ಬೀದರ್ ಗೆ ಕುಶಾಲ್ ಪಾಟೀಲ್ ಮೊ: (೯೪೪೮೪೭೬೮೮೯)‌ ಬಾಗಲಕೋಟೆಗೆ ರವಿ ಮಾಗ್ದಮ್ ಮೊ: (೯೮೪೫೩೩೨೮೬೮). ಇವರುಗಳನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಮಾಹಿತಿಗಾಗಿ
ರಾಘವೇಂದ್ರ ತೂನ
ನಿಲಯ ನಿರ್ದೇಶಕರು,
ಗ್ರಾಮೀಣ ಭಾರತಿ ೯೦.೪ ಎಫ್.ಎಂ. ರೇಡಿಯೋ ಕೇಂದ್ರ ಗಂಗಾವತಿ.
ಅeಟಟ: ೯೧೬೪೬೩೫೬೫೫
ಭಾವಚಿತ್ರ ಪ್ರಕೃತಿ ಚಿತ್ರಗಳ ಏಕವ್ಯಕ್ತಿ ಕಲಾ ಪ್ರದರ್ಶನ – ಗೊರೂರು ಅನಂತರಾಜು, ಹಾಸನ

ಹಾಸನದ ಕಲಾಭವನದ ಹೊರ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಒಡನಾಡಿ ಚಿತ್ರಕಲಾ ಬಳಗ, ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್‌ ರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದರು.

ಈ ಪ್ರದರ್ಶನದಲ್ಲಿ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ 27 ಕಲಾ ಕೃತಿಗಳು ವೀಕ್ಷಕರ ಗಮನ ಸೆಳೆದವು.

ಪ್ರತಿ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆಯಂದು ಅವರು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ದಿನ ತಮ್ಮ ಹೊಸ ಚಿತ್ರಗಳ ಪ್ರದರ್ಶನ ಮಾಡುತ್ತಾರೆ.

ಈ ಬಾರಿ ವಿಶೇಷವಾಗಿ ವಸಂತಕುಮಾರ್‌ ಅವರು ತಮ್ಮ ಪೊಟ್ರೈಟ್ ವರ್ಕ್ಸ್‌ ನಲ್ಲಿ ಜಿಲ್ಲೆಯ ಸಾಧಕರ‌ ಭಾವಚಿತ್ರಗಳನ್ನು ತಮ್ಮ ಕುಂಚಿಕೆಯಲ್ಲಿ ಸೆರೆ ಹಿಡಿದಿದರು.

ಡ್ರಾಯಿಂಗ್‌ ಶೀಟ್ ಪೆನ್ಸಿಲ್‌ ವರ್ಕ್ಸ್ ನಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಶ್ರೀಮತಿ ಭಾನು ಮುಷ್ತಾಕ್‌ ಅವರ ಚಿತ್ರವನ್ನು ಚಿತ್ರಿಸಿದ್ದಾರೆ.

ಚಾರ್ಕೋಲ್‌ ಪೆನ್ಸಿಲ್‌ ವರ್ಕ್ಸ್‌ ನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್. ಡಿ. ದೇವೇಗೌಡರ ಭಾವಚಿತ್ರವನ್ನು ಸೃಷ್ಟಿಸಿದ್ದಾರೆ.

 

ಅಂತರಾಷ್ಟ್ರೀಯ ಕಲಾವಿದ ಕೆ. ಟಿ. ಶಿವಪ್ರಸಾದ್‌ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರ ಭಾವಚಿತ್ರಗಳು ಗಮನ ಸೆಳೆಯುವಂತಿವೆ.

ಹ್ಯಾಂಡ್‌ ಲ್ಯಾಂಡ್ ಸ್ಕೇಪ್‌ ಚಿತ್ರಣಕ್ಕಾಗಿ ಈ ಬಾರಿ ಅವರು ರಸ್ತೆ ಬದಿಯ ಮರಗಳನ್ನು ಆರಿಸಿಕೊಂಡು ಕಲಾ ಕೃತಿಗಳನ್ನು ಸೃಷ್ಟಿಸಿದರು.

 

ಅರಸೀಕೆರೆ ಹುಳಿಯಾರು ರಸ್ತೆಯ ಮಳೆಯ ಗಾಳಿಗೆ ಉರುಳುವ ಮೊದಲು ಮೂವರು ಮರಗಳ ಚಿತ್ರಣ ತೈಲವರ್ಣದಲ್ಲಿ ಮೂಡಿಬಂದಿವೆ.

ಚಿಂಡೇನಹಳ್ಳಿ ಗ್ರಾಮದಲ್ಲಿ ಕಂಡ ಮರಗಳು ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಜಲವರ್ಣ ಮಾಧ್ಯಮದಲ್ಲಿ ಕಲಾತ್ಮಕವಾಗಿ ಮೂಡಿಬಂದಿವೆ.

ಎಂಟು ಚಾರ್ಕೋಲ್ ಶೀಟ್‌ಗಳಲ್ಲಿ ಚಾರ್ಕೋಲ್ ಪೆನ್ಸಿಲ್ ವರ್ಕ್, ಏಳು ಡ್ರಾಯಿಂಗ್ ಶೀಟ್‌ಗಳಲ್ಲಿ ಪೆನ್ಸಿಲ್ ವರ್ಕ್ ಪ್ರದರ್ಶನಕ್ಕಿಟ್ಟಿದ್ದರು.

ಮೂವರು ಕ್ಯಾನವಾಸ್ ಕ್ಲಾತ್ ನಲ್ಲಿ ಅಕ್ರಿಲಿಕ್ ಮಾಧ್ಯಮದ ನವೀನ ಕಲಾಕೃತಿಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಲಾ ಸಾಧನೆಗೆ ಜಿಲ್ಲಾಡಳಿತವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಚಿತ್ರಕಲೆಯು ದುಬಾರಿ ಸಾಹಸವಾದ ಕಾರಣ ಅಕಾಡೆಮಿಯ ಸಹಕಾರ ಇಲ್ಲದಿದ್ದರೆ  ಪ್ರದರ್ಶನ ನಡೆಸುವುದು ಅಸಾಧ್ಯವಾಗಿದೆ.

ವಸಂತಕುಮಾರ್ ತಮ್ಮ ಬಿಜಿ ಬದುಕಿನ ಮಧ್ಯೆ ಕೂಡ ಸೃಜನಶೀಲ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಸೋಜಿಗದ ಸೂಜಿ ಮಲ್ಲಿಗೆಯೇ ಸೈ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಕಲೆಯು ಮಾನವನ ಹುಟ್ಟಿನೊಂದಿಗೆ ಬೆಳೆದು ಬಂದ ಚಮತ್ಕಾರ

ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.

ಹಾಸನದ ಒಡನಾಡಿ ಚಿತ್ರಕಲಾ ಬಳಗ ಹಾಸನಾಂಬ ಕಲಾಕ್ಷೇತ್ರದ ಹೊರಂಗಣದಲ್ಲಿ ಭಾನುವಾರ ಹಾಗೂ ಸೋಮವಾರದಂದು ಏರ್ಪಡಿಸಿದ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ವಸಂತಕುಮಾರ್ ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ರಚಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್, ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು, ಅಂತರಾಷ್ಟ್ರೀ ಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್, ಇಸ್ರೋ ಮಾಜಿ ಅಧ್ಯಕ್ಷರು ಕಿರಣ್‌ಕುಮಾರ್ ಇವರೆಲ್ಲರೂ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಮಹನೀಯರು. ಕಲಾವಿದರು ಪ್ರಕೃತಿಯ ನಡುವೆ ಕುಳಿತು ಬರೆದ ಪ್ರಕೃತಿ ಚಿತ್ರಗಳು ಕಲಾತ್ಮಕವಾಗಿವೆ ಎಂದರು.

ವಿಶ್ವ ಪರಿಸರ ದಿನ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಖ್ಯಾತ ಕಲಾವಿದರು ಕೆ.ಟಿ.ಶಿವಪ್ರಸಾದ್ ಮಾತನಾಡಿ ಮನುಷ್ಯ ಚಿತ್ರ ಬಿಡಿಸಬೇಕಾದರೆ ಎಷ್ಟು ಕಷ್ಟಪಟ್ಟಿದ್ದಾರೆ? ಚಿತ್ರ ಹೇಗೆ ಶುರುವಾಯ್ತು? ಚಿತ್ರ ಹೇಗೆ ಮಾಡಿದ್ರಿ? ಬಣ್ಣ ಹೇಗೆ ಹಾಕಿದ್ರಿ? ಎಂಬುದನ್ನೆಲ್ಲಾ ಚಿತ್ರಕಾರರನ್ನು ಮಕ್ಕಳು ಕೇಳಿ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯ, “ಕಲೆ ದೇವರು ಕೊಟ್ಟ ವರವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾದಂಬರಿಗಾರ್ತಿ ಶ್ರೀಮತಿ ಸುವರ್ಣ ಕೆ.ಟಿ.ಶಿವಪ್ರಸಾದ್, “ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ,” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಡೆ ಬರಹಗಾರ ಕಲಾವಿದ ಯಾಕೂಬ್, ಕಲಾವಿದ ಚಂದ್ರಕಾಂತ್ ನಾಯರ್ ಉಪಸ್ಥಿತರಿದ್ದರು. ಗಾಯಕಿ ಶ್ರೀಮತಿ ಸುನಂದ ಕೃಷ್ಣ ಭಾವಗೀತೆ ಮತ್ತು ಜನಪದ ಗೀತೆಗಳಿಂದ ರಂಜಿಸಿದರು. ಕಲಾವಿದ ವಸಂತಕುಮಾರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯ ಯೋಗ ದಿನಾಚರಣೆ.

ಗಂಗಾವತಿ: ಜೂನ್-೨೧ ಶನಿವಾರದಂದು ಬೆಳಿಗ್ಗೆ ೬.೩೦ಕ್ಕೆ “ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆ”, ಹಾಗೂ “ನಿವೇದಿತಾ ಶಾಲೆ”ಯ ಸಹಯೋಗದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿ ‘೧೧ನೇ ಅಂತರಾಷ್ಟ್ರೀಯ ಯೋಗ’ ದಿನವನ್ನು ಆಯೋಜಿಸಲಾಗಿತ್ತು.

ಯೋಗ ಶಿಬಿರದಲ್ಲಿ ಗಂಗಾವತಿಯ ಸ್ನೇಹ ಬಳಗ ಯೋಗ ಸಂಸ್ಥೆಯ ಯೋಗ ತರಬೇತುದಾರರಾದ ಪರಸಪ್ಪ ಕುರುಗೋಡ ಹಾಗೂ ಆನಂದ ಪಟ್ಟಣಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿ ಹಾಗೂ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಶಿಬಿರದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ರುಬೀನ್ ಮಿರಜ್‌ಕರ್ ಭಾಗವಹಿಸಿ ಮಕ್ಕಳಿಗೆ ಯೋಗದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾಂತ್‌ ರಾವ್‌ರವರು ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳಿದರು.

ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಮಾನಸ ಪಾಟೀಲ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಅವರು ಮಾತನಾಡಿ ಯೋಗವು ಸಕಲ ರೋಗಗಳಿಗೆ ನಿಯಂತ್ರಕವಿದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನಿತಾ ಮಿರಜ್‌ಕರ್, ವ್ಯವಸ್ಥಾಪಕರಾದ ಮಂಜುನಾಥ, ಉಭಯ ಶಾಲೆಗಳ ಶಿಕ್ಷಕ ವೃಂದ ಹಾಗೂ ಸುಮಾರು ೬೫೦ ವಿದ್ಯಾರ್ಥಿಗಳು ಈ ಶಿಬಿರದಲ್ಲಿ  ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನವನ್ನು ಪಡೆದರು.

ಕಲೆ ಕಲಾವಿದರ ಪರಿಚಯಿಸುವ ಲೋಕ ದೃಷ್ಟಿ ಕಲಾ ಸೃಷ್ಟಿ ಕೃತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರಾದ ಶ್ರೀ ಗೊರೂರು ಅನಂತರಾಜುರವರು ಕಳೆದ 25 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ, ಸಾಹಿತ್ಯ ಲೋಕಕ್ಕೆ ವಿಭಿನ್ನ ಆಯಾಮಗಳಲ್ಲಿ ಕೊಡುಗೆ ನೀಡಿದವರು. ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗಳಿಸಿದ್ದಾರೆ.

ಶ್ರೀಯುತರದು ತೀರ ಸರಳ ಹಾಗೂ ಸಾತ್ವಿಕ ವ್ಯಕ್ತಿತ್ವ. ಮಾನವೀಯ ಸಂವೇದನೆಗಳು, ಅನುಕಂಪ ಪ್ರೇರಿತ ಜೀವನದೃಷ್ಟಿ, ಪರಿಸರದ ಎಲ್ಲ ಸಂಭವಗಳಿಗೆ ತೀಕ್ಷ್ಣ ಸ್ಪಂದನೆ, ಸಹಾನುಭೂತಿ, ಮುಗ್ಧತೆ, ಸ್ನೇಹಪರತೆ ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಮಾನವೀಯ ಮೌಲ್ಯಗಳು. ಬರವಣಿಗೆಯಲ್ಲಿ ಸತ್ವ ಮತ್ತು ತತ್ವಗಳಿಂದ ಕಂಗೊಳಿಸುವ ಇವರ ಸಾಹಿತ್ಯ ಶ್ರೇಷ್ಠವೆನಿಸಿತು. ಮನುಕುಲದ ಸಹಜ ಬದುಕಿನ ಚಿತ್ರಣ ಹಾಗೂ ನೀತಿಕಥೆಗಳು ಓದುಗರ ಮನ ಮುಟ್ಟುತ್ತವೆ. ಸಾರಸತ್ವ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಇವರ ಸೃಜನಶೀಲತೆ ಕ್ರಿಯಾಶೀಲತೆಗಳು ವೈವಿಧ್ಯಮಯ ಬರವಣಿಗೆಗಳಲ್ಲಿ ಕಾಣುತ್ತವೆ. ಸಮಕಾಲೀನ ಸಾಹಿತ್ಯಲೋಕದ ಸವಾಲುಗಳ ಸೂಕ್ಷ್ಮತೆಯನ್ನು ಕಲೆಯ ಮೂಲಕ ಗ್ರಹಿಸಿ ಕೃತಿಗಳಲ್ಲಿನ ಸಂವೇದನೆ ಮತ್ತು ಆಂತರಿಕ ತೀವ್ರತೆಯನ್ನು ಒಳಗಣ್ಣಿನಿಂದ ಕಂಡು ಅವುಗಳ ಬಗ್ಗೆ ವಿಮರ್ಶೆ ಮಾಡುವ ವಿಶಿಷ್ಟ ಶೈಲಿ ಅವರದು.

ಪಾಶ್ಚಿಮಾತ್ಯರಲ್ಲಿ ಸಾಮಾನ್ಯ ಮನುಷ್ಯ ಕೂಡ ದೃಶ್ಯ ಕಲೆಯನ್ನು, ಕಲಾಕೃತಿಯನ್ನು ನೋಡುವ ಬಗೆ, ಕಲೆಯನ್ನು ಆಸ್ವಾದಿಸುವ ಬಗೆಯನ್ನು ಅರಿತಿರುತ್ತಾರೆ. ದೃಶ್ಯ ಭಾಷೆ(visual language) ಅವರಿಗೆ ಸಾಹಿತ್ಯ ಓದಿದಷ್ಟೇ ಸರಳವೆನಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಕಲಾವಿದನನ್ನು ಬಿಟ್ಟರೆ ದೃಶ್ಯ ಭಾಷೆ ತಿಳಿದುಕೊಳ್ಳುವ ಗೋಜಿಗೆ ಜನಸಾಮಾನ್ಯರು ಹೋಗುವುದೇ ಇಲ್ಲ. ಹಾಗಾಗಿ ಕಲಾವಿದ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ದೂರವಿರುತ್ತದೆ. ಆದರೆ ಈ ಇಬ್ಬರ ನಡುವಿನ ಅಂತರದ ಕೊಂಡಿಯನ್ನು ಜೋಡಿಸುವ ಮಹತ್ತರ ಕಾರ್ಯವನ್ನು ತಮ್ಮ ಲೇಖನ, ವಿಮರ್ಶೆಗಳಿಂದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶ್ರೀಯುತರು ಹಲವು ದಶಕಗಳಿಂದ ಮಾಡುತ್ತಲೇ ಬಂದಿರುವುದು ಶ್ಲಾಘನೀಯವಾಗಿದೆ.

ನಾಡಿನ ಸಾಂಸ್ಕೃತಿಕ ಲೋಕವನ್ನು ಅನನ್ಯಗೊಳಿಸುವ ನಿಟ್ಟಿನಲ್ಲಿ ಕರುನಾಡಿನ ಅನೇಕ ಸಾಹಿತಿಗಳು, ವಿಚಾರವಂತರು, ಕಲಾವಿದರು ತಮ್ಮ ಕರ್ತವ್ಯವನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ಪರಂಪರೆಯನ್ನು ವರ್ತಮಾನದಲ್ಲಿ ಅದರ ಶ್ರೇಷ್ಠತೆಯನ್ನು ನೆನೆಯುತ್ತ ಅದರ ಮಹತ್ವವನ್ನು ಮತ್ತಷ್ಟು ಹೇಳಲು ನಾವು ಅವಶ್ಯವಾದದ್ದನ್ನು ಪ್ರೀತಿಸಲೇ ಬೇಕು. ಹೀಗಾಗಿ ಶ್ರೀ ಗೊರೂರು ಅನಂತರಾಜುರವರು ಅವರ ಯೋಜನೆ ಅನುಸಾರ “ಲೋಕ ದೃಷ್ಟಿ ಕಲಾ ಸೃಷ್ಟಿ” ಕೃತಿಯು ಒಬ್ಬ ಚಿತ್ರ ಕಲಾವಿದನಾಗಿರುವ ನನಗೆ ಹೆಮ್ಮೆ ಅನಿಸುತ್ತದೆ.

ಈ ಕೃತಿಯಲ್ಲಿ ಚಿತ್ರ ಕಲಾವಿದರನ್ನು ವಿಷಯವಾಗಿಸಿ ಅವರ ಅಭಿವ್ಯಕ್ತಿ ಭಾವನೆ, ದೃಷ್ಟಿಕೋನ, ಬದುಕು ಬರಹ ಇವುಗಳನ್ನು ಪರಿಚಯಿಸುವ ಕಾರ್ಯ ಬಹಳ ಮಹತ್ವವೆನಿಸುತ್ತದೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದರು ಹಾಸನ ಜಿಲ್ಲೆಯ ಕಲಾವೈಭವ, ಸಂಸ್ಕೃತಿ ಅಲ್ಲಿರುವ ಚಿತ್ರ ಕಲಾವಿದರ ನೈಪುಣ್ಯತೆಯನ್ನು ಬಹಳ ಹತ್ತಿರದಿಂದ ಬಲ್ಲವನು. ಹಾಗೂ ಗೊರೂರು ಅನಂತರಾಜುರವರನ್ನು ಅವರ ಬರಹಗಳನ್ನು ಒಬ್ಬ ಸ್ನೇಹಿತನಾಗಿ ಕಂಡವನು.

ಶ್ರೀಯುತರು ಅನೇಕ ಚಿತ್ರ ಕಲಾವಿದರ ಪರಿಚಯಿಸುವ ಜೊತೆಗೆ ಅವರ ಜೀವನ ಶೈಲಿ ಕಲಾವಿದರ ಬದುಕು ಅವರ ಶ್ರೇಷ್ಠತೆಯನ್ನು ನೈಜವಾಗಿ ಲೇಖನಿಯಿಂದ ಚಿತ್ರಿಸಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಚಿತ್ರ ಕಲಾವಿದರ ಬದುಕನ್ನು ಇತಿಹಾಸದ ಪುಟಗಳಿಗೆ ಗೊರೂರು ಅನಂತರಾಜುರವರು ಸೇರಿಸಿರುವುದು ಕಲಾವಿದರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸಿದ್ದೇನೆ. 30 ವರ್ಷಗಳಿಂದಲೂ ಅನೇಕ ನಾಟಕಗಳನ್ನು, ವಿಷಯಗಳನ್ನು ಅಭಿನಯ ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನಟನೆಯ ಗಣ್ಯರನ್ನು ಗುರುತಿಸಿ ಅವರನ್ನು ಲೇಖನದಲ್ಲಿ ಪರಿಚಯಿಸಿರುವ ಕೀರ್ತಿ ಅವರ ಬರಹ ಲೋಕಕ್ಕೆ ಮತ್ತೊಂದು ಸ್ಪೂರ್ತಿ ಅನಿಸುತ್ತದೆ. ಇವರು ಒಂದು ರೀತಿಯ “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ಣುಡಿ ಅಂಟಿ ಕೊಂಡವರಂತೆ ಕಾಣುತ್ತಾರೆ.

ಅನೇಕ ಕಲಾಕೃತಿಗಳನ್ನು ವಿಮರ್ಶೆ ಮಾಡುತ್ತಾ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುತ್ತಾ, ನಾಟಕಗಳನ್ನು ಬರೆಯುತ್ತ, ನಿರ್ದೇಶಕ, ಒಬ್ಬ ನಾಟಕಕಾರನಾಗಿ ನಾಟಕ ರಚಿಸುತ್ತ, ನಟನಾಗಿ ಅಭಿನಯಿಸುತ್ತ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕನ್ನು ಎಲ್ಲಾ ಆಯಾಮಗಳಲ್ಲೂ ಅಭಿವ್ಯಕ್ತಗೊಳಿಸಬಹುದು ಎಂಬುದಕ್ಕೆ ಗೊರೂರು ಅನಂತರಾಜುರವರರ ಅಪೂರ್ವ ಬದುಕು ಮತ್ತು ಬರಹಗಳೆ ಇದಕ್ಕೆ ಸಾಕ್ಷಿ. ಇವರು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಕೆ. ಕರೀಂ ಖಾನ್, ಡಾ. ಎಚ್.ಕೆ. ಲಕ್ಕಪ್ಪ ಗೌಡ, ಬೇಲೂರು ಕೃಷ್ಣಮೂರ್ತಿ, ಡಾ. ಮಳಲಿ ವಸಂತ್ ಕುಮಾರ್, ಸಾಹಿತಿಗಳು ರಂಗಕರ್ಮಿಗಳು, ವಿಚಾರವಂತರನ್ನು ಕೂಡ ತಮ್ಮ ಬರವಣಿಗೆ ಮೂಲಕ ಅವರ ಬದುಕಿಗೊಂದು ಗಟ್ಟಿ ನೆಲೆಯನ್ನು ತುಂಬಿ ಕೊಟ್ಟಂತಹ ಈ ನಾಡಿನ ಒಬ್ಬ ಶ್ರೇಷ್ಠ ಲೇಖಕ ಎನ್ನಲು ಹರ್ಷವೆನಿಸುತ್ತದೆ.

ಶ್ರೀಯುತರು ಜಾನಪದ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಸುಂದರಗೊಳಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ಅನೇಕ ಹಬ್ಬಗಳನ್ನು ಮತ್ತು ನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹಾಗೆ ಲೀನವಾಗಿಸಿರುವುದು ಮಹತ್ವವೆನಿಸುತ್ತದೆ. ಇವರು ಸುಮಾರು 6 ನಾಟಕಗಳನ್ನು 20 ಕಿರು ನಾಟಕಗಳನ್ನು, ವಿಜ್ಞಾನ ಮೌಲ್ಯ ಶಿಕ್ಷಣ ಇತಿಹಾಸ, ಪುರಾಣ ವಾಸ್ತವಿಕತೆ, ಧಾರ್ಮಿಕತೆ ಎಲ್ಲವನ್ನು ಚಿತ್ರಿಸುವ ಸಾಹಿತಿ ಅದುವೇ ಗೊರೂರು ಅಂತರಾಜುರವರು.

ಪ್ರಸ್ತುತ ಈ ದಿನಮಾನಗಳಲ್ಲಿ ಚಿತ್ರ ಕಲಾವಿದರನ್ನು ಅವರ ಶ್ರೇಷ್ಠ ಸಾಧನೆಗಳನ್ನು ತಮ್ಮಷ್ಟಕ್ಕೆ ತಾವೇ ಈ ಪ್ರಪಂಚವನ್ನು ವರ್ಣಮಯವಾಗಿಸಿ ಸೃಷ್ಟಿಗೆ ಮತ್ತಷ್ಟು ಚೈತನ್ಯವನ್ನು ತುಂಬುವ ಚಿತ್ರಕಲಾವಿದರ ಬಗ್ಗೆ ಬರೆಯುವುದು ಒಬ್ಬ ಬರಹಗಾರನಿಗೆ ಇರುವ ಅತಿ ಸೂಕ್ಷ್ಮತೆ ಎಂದು ನಾನು ಭಾವಿಸಿದ್ದೇನೆ. ಶ್ರೀ ಗೊರೂರು ಅನಂತರಾಜುರವರು ಕಾಲದ ಪ್ರವಾಹದಲ್ಲಿ ಕಳೆದುಹೋಗುತ್ತಿರುವ ಚಿತ್ರ ಕಲಾವಿದರ ಹತ್ತಾರು ಸಂಗತಿಗಳನ್ನು ಹಲವಾರು ಚಿತ್ರ ಕಲಾವಿದರ ರೇಖೆಗಳನ್ನು ಅವರ ವರ್ಣ ಶೈಲಿಯನ್ನು ಅವರ ಮನಸ್ಥಿತಿಯ ಓರೆ ಕೋರೆಗಳನ್ನು ಅವರ ಬದುಕಿದ ವಿಚಾರವಂತಿಕೆಯನ್ನು ಈ ಕೃತಿಯಲ್ಲಿ ಹೇಳಿರುವುದು ನನಗೆ ಬಹಳ ಅಪರೂಪವೆನಿಸುತ್ತದೆ.

ನಾನು ಸದಾ ಕ್ಯಾನ್ವಾಸ್ ಮತ್ತು ಬಣ್ಣಗಳ ಜೊತೆ ಬದುಕು ಕಳೆಯುವವನು ಬಿಳಿ ಕ್ಯಾನ್ವಾಸಿಗೆ ನಾನು ಹಚ್ಚಿದ ಬಣ್ಣಗಳಿಂದ ಕ್ಯಾನ್ವಾಸಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಅರ್ಪಿಸಿದವನು, ಆದರೆ ಬರವಣಿಗೆ ನನ್ನದಲ್ಲದು. ಆದರೂ ಸಹ ಅವರ ಪ್ರೀತಿಯ ಮನಸ್ಸಿಗೆ ಸೋತು ನನ್ನ ಬರಹ ಅಧ್ಯಾಯಕ್ಕೆ ಗೊರೂರು ಅನಂತರಾಜುರವರು ಈ ಮೂಲಕ ಸಾಕ್ಷಿಯಾಗಿದ್ದಾರೆ.

 

ಡಾ, ಬಾಬುರಾವ್ ನಡೋಣಿ
ಚಿತ್ರ ಕಲಾವಿದರು
ರಾಯಬಾಗ.
ಮೊಬೈಲ್ : 9448237722

 

ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಾಯಿತು.

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಶ್ರೀ ವೀರಾಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ. ಇವರ ಸಹಯೋಗದಲ್ಲಿ ಯುವ ನಿರ್ದೇಶಕ ಹೇಮಂತ್ ದೇವರಾಜ್ ನಿರ್ದೇಶನದಲ್ಲಿ ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮ ಸೀನರಿಯ ರಂಗಸಜ್ಜಿಕೆಯಲ್ಲಿ ಪ್ರದರ್ಶಿತವಾದ ಸಂಪೂರ್ಣ ರಾಮಾಯಣ ನಾಟಕದಲ್ಲಿ ದಶರಥನ ಪಾತ್ರದಲ್ಲಿ ನವಿಲುಹಳ್ಳಿ ವಾಸುದೇವ್ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆದರು. ಕೈಕೆ ಪಾತ್ರದಲ್ಲಿ ಲಕ್ಷ್ಮೀ ಶ್ರೀಧರ್ ನಟಿಸಿದರು.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಗಂಗಾವತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಸವನದುರ್ಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ವಿವರಿಸಿದರು. ಅವರು ಯೋಗ, ಪ್ರಾಣಾಯಾಮ ಹಾಗೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳ ಓದು ಮತ್ತು ಏಕಾಗ್ರತೆಯ ಅಭಿವೃದ್ಧಿಗೆ ಯೋಗ ಮತ್ತು ಧ್ಯಾನ ಹೇಗೆ ಸಹಾಯಕವಾಗಬಹುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.ಯೋಗ ಮತ್ತು ಪ್ರಾಣಾಯಮದ ಆಸನಗಳನ್ನು ಮಾಡಿ ತೋರಿಸಿ, ಯೋಗದ ಮಧ್ಯೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಹೇಳುವ ಮೂಲಕ ಸ್ವಯಂ ಸೇವಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಚಂದ್ರಶೇಖರ ರೆಡ್ಡಿ, ಲಿಂಗಣ್ಣ ಜಂಗಮರಹಳ್ಳಿ, ಅಜಗರ್ ಪಾಷಾ, ಈಶ್ವರಪ್ಪ, ಕುಮಾರಸ್ವಾಮಿ, ಶ್ರೀಮತಿ ರಮಾ, ಶ್ರೀಮತಿ ಶ್ರೀದೇವಿ, ಶ್ರೀಮತಿ ಲಕ್ಷೀ, ಚಿದಾನಂದ ಮೇಟಿ, ಶ್ರೀಮತಿ ಕನಕಮ್ಮ, ಮಹೇಶ್ ಹಿರೇಮಠ, ನಿರುಪಾದಿ, ಶ್ರೀಮತಿ ಕವಿತಾ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ, ಸೇವಕಿಯರು ಉಪಸ್ಥಿತರಿದ್ದರು.

ಗ್ರಂಥ ಪಾಲಕರಾದ ರಮೇಶ ಗಬ್ಬೂರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ, ಛತ್ರಪ್ಪ ತಂಬೂರಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಪ್ರಾಚಾರ್ಯರು, ಉಪನ್ಯಾಸಕರು, ಗ್ರಂಥಪಾಲಕರು ಮತ್ತು ವಿದ್ಯಾರ್ಥಿಗಳೆಲ್ಲಾ ಸೇರಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿದರು.