ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದ ಚಹಾ ಅಂಗಡಿಯ ನಾಮಫಲಕ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

ಗಂಗಾವತಿ : ಜೂನ್-೨೮ ಶನಿವಾರದಂದು ತ್ರಿವಿಧ ದಾಸೋಹದ ನಾಡು ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಒಂದು ಭಾವಪೂರ್ಣ ಸಮಾರಂಭ ನಡೆಯಿತು.

ಡಾ. ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳವರ ಗ್ರಂಥ ಲೋಕಾರ್ಪಣೆಯು ಈ ದಿನದ ಆಕರ್ಷಣೆಯಾಗಿತ್ತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಸೇತುವೆ ಬಳಿ ಸ್ಥಾಪಿಸಲಾದ “ಸಿದ್ದಗಂಗಾಶ್ರೀ ಬೆಲ್ಲದ ಚಹಾ ಅಂಗಡಿ”ಗೆ ವಿಶೇಷ ಗೌರವ ದೊರೆಯಿತು.

ಅಂಗಡಿಯ ನಾಮಫಲಕವನ್ನು ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅನಾವರಣಗೊಳಿಸಿ ಸಾಂಕೇತಿಕವಾಗಿ ಉದ್ಘಾಟಿಸಿದರು.

ಅವರು ಮಾತನಾಡುತ್ತಾ “ಈ ಅಂಗಡಿ ನಾಡಿನಾದ್ಯಂತ ಹೆಸರಾಗಲಿ. ಗುರುಪರಂಪರೆ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ” ಎಂದು ಆಶೀರ್ವದಿಸಿದರು.

ಬಸನಗೌಡ ಹೊಸಳ್ಳಿ ಮತ್ತು ಅವರ ಕುಟುಂಬ ವರ್ಗ ಈ ವಿಶೇಷ ಅನುಭವದಿಂದ ಧನ್ಯರಾದರು.

ಈ ಸಮಾರಂಭದಲ್ಲಿ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ಡಾ. ಶ್ರೀ ಗೊ. ರು. ಚೆನ್ನಬಸಪ್ಪ ಅವರು ವಿಶೇಷ ಆತಿಥ್ಯ ವಹಿಸಿದರು.

ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಇತರ ಪ್ರಮುಖ ಅತಿಥಿಗಳಲ್ಲೊಬ್ಬರಾಗಿದ್ದರು.

ಇದಲ್ಲದೆ, ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಈ ಸಂಭ್ರಮದಲ್ಲಿ ಹಾರ್ದಿಕವಾಗಿ ಭಾಗವಹಿಸಿದ್ದರು.

ಮಾಹಿತಿಗಾಗಿ:
ಬಸನಗೌಡ ಹೊಸಳ್ಳಿ
ಅಧ್ಯಕ್ಷರು, ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ
ಮೊ.ನಂ: ೭೪೮೩೨೨೯೯೬೨

ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..! ಗೊರೂರು ಅನಂತರಾಜು, ಹಾಸನ.

ಎಸ್.‌ ಎಸ್.‌ ಪಡಶೆಟ್ಟಿ: ಹಾಸ್ಯ ದರ್ಶನದ ಪರಿಚಯ : ಹಾಸ್ಯ ಬರಹಗಳಿಗೆ ಪ್ರಸಿದ್ಧರಾದ. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರಾಗಿದ್ದು, ಹಾಸ್ಯ ದರ್ಶನ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಅವರೊಂದಿಗೆ ಅವರು ಬೆಂಗ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರು ನಗರದ ಹಲವೆಡೆ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲೇಖಕರ ನೆನಪುಗಳು ಮತ್ತು ಹಾಸ್ಯ ಪ್ರಯಾಣ : ಗೊರೂರಿನಲ್ಲಿ ಎಡಿಟರ್ ಆಗಿದ್ದ ರಾವ್‌ ಅವರ ಜೊತೆ ಲೇಖಕರು ಶಾಲಾ-ಕಾಲೇಜುಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾವ್ ಬೆಂಗಳೂರಿಗೆ ತೆರಳಿದ ನಂತರ ಈ ಜೊತೆಯ ಹಾಸ್ಯ ಕಾರ್ಯಕ್ರಮ ನಿಂತಿತು, ಆದರೆ ಪಡಶೆಟ್ಟರೊಂದಿಗೆ ಹಾಸ್ಯ ಕಾರ್ಯಕ್ರಮ ಮುಂದುವರಿಯಿತು. ಈ ಲೇಖನದಲ್ಲಿ ಲೇಖಕರು ತಮ್ಮ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ತೋಡಿಹಾಕಿದ್ದಾರೆ.

ಹಾಸ್ಯ ನೆನಪಿನ ಗುರುತು : ಬಾಲ್ಯದ ಅನುಭವ : ೨ನೇ ತರಗತಿಯಲ್ಲಿ ಓದುತ್ತಿದ್ದಾಗ ೧೦೬ ವರ್ಷ ಆಗಿರುವ ಅವರ ಊರಿನ ಗೌಡರ ತಂದೆ ತೀರಿಕೊಂಡರು. ಸುತ್ತ ಹಳ್ಳಿಗೆಲ್ಲಾ ಪ್ರಸಿದ್ಧರು. ಸಾವಿರಾರು ಜನ ಸೇರಿದ್ದರು. ಲೇಖಕರ ತಾಯಿಯು ನೋಡಲು ಹೊರಟಾಗ ಬಾಲಕನು ಹಿಂಬಾಲಿಸುತ್ತಾನೆ. ಅಲ್ಲಿ ತೀರಿಕೊಂಡ ಗೌಡರ ಶವದ ಮುಂದೆ ಕರೆಸಿಕೊಂಡ ಬಾಡಿಗೆ ಹೆಂಗಸರು ಅತ್ತು ಕರೆದು ಈ ಗೌಡರು ಹೇಗಿದ್ರು? ಹಾಗಿದ್ರು..ಹೀಗೆಲ್ಲಾ ಹಾಡಾಡಿ ಹೊಗಳಿ ಕೂಗಿ ಆ ಕೃತಕ ನಟನೆಗೆ ಬಾಲಕ ನಗುತ್ತಾನೆ. ಆಗ, ತಾಯಿ ಹೊಡೆಯಲು ಬಾಲಕ ಅಳತೊಡಗುತ್ತಾನೆ. ಆಗ ಒಂದು ಹೆಂಗಸು ಬಾಲಕನ ಕಡೆ ಬಂದು ‘ಏ ಕೂಸಾ ನೀನ್ಯಾಕೆ ಅಳ್ತೀಯಪ್ಪ, ಗೌಡರಂತು ಹೋಗಿಬಿಟ್ಟರು ಅಳಬೇಡ ಕಂದಾʼ ಎಂದು ಕೆನ್ನೆ ಸವರುತ್ತಾಳೆ…

ಶೈಕ್ಷಣಿಕ ಸೇವೆ ಮತ್ತು ನೆನಪಿನ ತಿರುವು : ಎಸ್.‌ ಎಸ್.‌ ಪಡಶೆಟ್ಟರು ಬೆಂಗಳೂರಿನ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ೩೨ ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿದ್ದೆ, ಅವರ ಪುಸ್ತಕ ಓದುತ್ತಾ ಮಧ್ಯೆ ಅವರಿಗೆ ಫೋನ್ ಮಾಡಿ ಎಲ್ಲಿದ್ದಿರಾ ಸರ್? ಎಂದೆ. ಗ್ರಂಥಾಲಯದಲ್ಲಿ ಇರುವುದಾಗಿ ಪಿಸುಧ್ವನಿಯಲ್ಲಿ ಹೇಳಿದರು. ಸೈಲೆಂಟ್ ಆಗಿ, ಆನಂತರ ಅವರೇ ಫೋನ್ ಮಾಡಿದರು. ಈಗೆಲ್ಲೂ ಹಾಸ್ಯ ಕಾರ್ಯಕ್ರಮ ನೀಡುತ್ತಿಲ್ಲವೇ?  ಎಂದು ಕೇಳಿದೆ. ನನಗೆ ಈಗ ವಯಸ್ಸು ೮೦ ಎಂದರು. ನಾನು ಈ ಹಿಂದೆ ಹಾಸನದಲ್ಲಿ ಶಾರದ ಕಲಾಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಇವರ ಹಾಸ್ಯ ಭಾಷಣಕ್ಕೆ ಅವಕಾಶ ಒದಗಿಸಿದ್ದೆ. ಜನರಿಗೆ ಶ್ರೀ ಕೃಷ್ಣ ಸಂಧಾನ ನಾಟಕ ನೋಡುವ ತರಾತುರಿ. ಹಾಗಾಗಿ ಇವರಿಗೆ ಹೆಚ್ಚು ಸಮಯಾವಕಾಶ ಸಿಗಲಿಲ್ಲ. ಪಾಪ, ಅಷ್ಟು ದೂರ (ಬೆಂಗಳೂರು) ಉತ್ಸಾಹದಿಂದ ಬಂದವರಿಗೆ ನಿರುತ್ಸಾಹ ಮಾಡಿಬಿಟ್ಟೆನಲ್ಲ ಎಂದು ಪೇಚಾಡಿಕೊಂಡೆ. ಸರ್, ನಿಮ್ಮ ಹಾಸ್ಯ ಕಾರ್ಯಕ್ರಮ ಬೇರೆಯೇ ಏರ‍್ಪಡಿಸಬೇಕು. ಹಾಡು, ಡ್ಯಾನ್ಸ್, ನಾಟಕ ನಡುವೆ ನಿಮ್ಮ ಹಾಸ್ಯ ಪ್ರೇಕ್ಷಕರಿಗೆ ತಲುಪಲಿಲ್ಲ ಎಂದೆ. ಛೇ ಛೇ ಹಾಗೆಂದುಕೊಳ್ಳಬೇಡಿ ಗೊರೂರು ಅನಂತರಾಜು. ನನಗೆ ಇಂತಹ ಭವ್ಯ ವೇದಿಕೆ ಒದಗಿಸಿಕೊಟ್ಟರಲ್ಲಾ ಅದೇ ದೊಡ್ಡದು ಎಂದರು. ಅದು ಅವರ ದೊಡ್ಡ ಗುಣ. ಅವರು ಅಂದು ಕೊಟ್ಟ ಪುಸ್ತಕ ಇಂದು ಓದಿದೆ. ಇದರಲ್ಲಿನ ಮೊದಲ ಲೇಖನ ನಮ್ಮೂರಿನ ಎರಡು ನಾಟಕಗಳು.
ನಮ್ಮೂರಿನಲ್ಲಿ ರೈತರು ಬಿಡುವಾಗಿರುವ ಸಮಯ ಬೇಸಿಗೆಯ ಕಾಲದಲ್ಲಿ ಬಹಳ ಉತ್ಸಾಹದಿಂದ ನಾಟಕ ಮಾಡಿ ರೈತ ಬಾಂಧವರು ಸಾಕಷ್ಟು ಸಂತೋಷಪಟ್ಟಿದ್ದಾರೆ.

ನಾಟಕ ಅನುಭವ: ದ್ರೌಪದಿ ವಸ್ತ್ರಾಭರಣ ಪ್ರಸಂಗ: ನಮ್ಮೂರಿನ ಗಿರಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತನು ಒಪ್ಪಿ ಹೋಗಿದ್ದನು. ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ. ನಾಟಕಕಾರ ನಿಂಗಣ್ಣ ದುಶ್ಯಾಸನ ಪಾತ್ರ ವಹಿಸಿದ್ದ, “ಪರಮಾನಂದೇಶ್ವರ ಯುವಕ ನಾಟಕ ಮಂಡಳಿ” ಎಂದು ಹೆಸರನ್ನಿಟ್ಟು ಸುತ್ತಲು ಹಳ್ಳಿಗಳಿಗೆಲ್ಲಾ ಪ್ರಚಾರ ಮಾಡಲಾಯಿತು. ನಾಟಕ ರಾತ್ರಿ ೧೦.೩೦ಕ್ಕೆ ಪ್ರಾರಂಭವಾಯಿತು. ಊರ ಹೊರಗೆ ಹನುಮದೇವರ ದೇವಸ್ಥಾನ ಮುಂಭಾಗ ನಾಟಕದ ಸ್ಟೇಜ್ ಮೇಲೆ ಶ್ರೀಕೃಷ್ಣ ಕುಳಿತು ಅಲ್ಲಿಂದಲೇ ಸೀರೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಕಾಶಿರಾಮ ತೆಳ್ಳನೆಯ ಏಳು ಸೀರೆಗಳನ್ನು ಉಟ್ಟುಕೊಂಡಿದ್ದ. ಪಾತ್ರದಾರಿಗಳ ನಟನೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ಒನ್ಸ್ ಮೋರ್ ಬದಲು ಮನಸ್ ಮೋರ್ ಎನ್ನುತ್ತಾರೆ. ಈಗ ದ್ರೌಪದಿ ವಸ್ತ್ರಾಭರಣ ಪ್ರಸಂಗ. ದುಃಖಪ್ರಾಪ್ತಳಾದ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ನಾಟಕಕಾರ ನಿಂಗಣ್ಣ ನಿಧಾನವಾಗಿ ಸೀರೆ ಸೆಳೆಯುವುದನ್ನು ಬಿಟ್ಟು ತುಂಬಾ ಜೋರಾಗಿ ಸೆಳೆಯುಲು ಪ್ರಾರಂಭಿಸಿದ. ಆಗ ಕಾಶಿರಾಮ ‘ಏ ನಿಂಗಣ್ಣ ನಿಧಾನವಾಗಿ ನನ್ನ ಸೀರೆ ಸೆಳೆ ?  ಎನ್ನುತ್ತಾನೆ. ಅವನು ಸಣ್ಣ ಧ್ವನಿಯಲ್ಲಿ ಹೇಳಿದ್ದು, ನಿಂಗಣ್ಣನಿಗೆ ಕೇಳಿಸಲಿಲ್ಲ. ಅದು ಯಾವ ಸ್ಫಿರಿಟ್ ಬಂದಿತ್ತೊ ನಿಂಗಣ್ಣ ಆರು ಸೀರೆ ಸೆಳೆದ. ಕೊನೆಯ ಸೀರೆ ಉಳಿದುಕೊಂಡಿದೆ. ಜೋರಾಗಿ ಎಳೆಯುತ್ತಿದ್ದಾನೆ. ಕಾಶಿರಾಮ ಸೀರೆಯ ಕೊನೆಯ ತುದಿ ಬಿಗಿಯಾಗಿ ಹಿಡಿದುಕೊಂಡು ಮೇಲಕ್ಕೆ ನೋಡಿ ಅಣ್ಣ ಕೃಷ್ಣ ನನ್ನ ಮಾನ ಕಾಪಾಡು.. ಆದರೆ ಅಷ್ಟರಲ್ಲಿ ನಿಂಗಣ್ಣ ಪೂರ್ತಿ ಸೀರೆ ಸೆಳೆದು ದ್ರೌಪದಿ ಅಂಡರ್ ವೇರ್ ಬನಿಯನ್ ಮೇಲೆ ನಿಂತ.. ಸದ್ಯ ಪ್ರೇಕ್ಷಕರು ಒನ್ಸ್ ಮೋರ್ ಎನ್ನಲಿಲ್ಲ ಅಷ್ಟೇ.

ಶಿಕ್ಷಕನ ವೃತ್ತಿ ಜೀವನ ಮತ್ತು ಕನಸಿನ ವ್ಯಾಕುಲತೆ: ಕನ್ನಡ ಅಧ್ಯಾಪಕರಾಗಿದ್ದ ಲೇಖಕರು ಹತ್ತನೇ ತರಗತಿ ಮಕ್ಕಳಿಗೆ ರನ್ನನ ಗದಾಯುದ್ದ ಪಾಠ ಮಾಡುತ್ತಿದ್ದರು. ವೈಶಂಪಾಯನ ಸನ್ನಿವೇಶದಲ್ಲಿ, ಭೀಮ ಅಲ್ಲಿಗೆ ಬಂದು ಅವಿತು ಕುಳಿತುಕೊಂಡ ದುರ್ಯೋಧನನ್ನು ಸರೋವರದಿಂದ ಹೊರಗೆ ಬರಲು ‘ಈ ಭೂತು ಎನ್ನ ಸರಂಗೇಳ್ದೊಲ್ಲದೆ ಪೊರ ಮಡುವನಲ್ಲಂ.. ಎಂದು ಗಡುಸಾಗಿ ಹೇಳುವುದನ್ನು ಹತ್ತಾರು ಸಲ ಓದಿ ಮನನ ಮಾಡಿಕೊಂಡು ರಾತ್ರಿನಿದ್ರೆಯಲ್ಲಿ  ಪುನರುಚ್ಚರಿಸಿ ಪಕ್ಕದಲ್ಲಿ ಮಲಗಿದ್ದ ಹೆಂಡತಿ ಬೆನ್ನಿಗೆ ಗುದ್ದುತ್ತಾರೆ. ‘ಅಯ್ಯೋಯ್ಯಪ್ಪೊ..ಎಂದು ಹೆಂಡತಿ ಚೀರಿ ನಿದ್ರೆಯಿಂದ ಎಚ್ಚರವಾಗಿ ಸಾರಿ ಮಿಸ್..ಎನ್ನುತ್ತಾರೆ.

ಇನ್ನೊಂದು ಸಲ ರಾಘವಾಂಕನ ಹರಿಶ್ಚಂದ್ರ ಕಾವ್ಯ ಪಾಠ ಮಾಡಬೇಕಾಗಿತ್ತು. ಅದು ಚಂದ್ರಮತಿಯ ಪ್ರಲಾಪ. ಲೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸಾವಿಗೀಡಾದ ಸನ್ನಿವೇಶ. ಚಂದ್ರಮತಿ ಮಗುವಿನ ಬಳಿಯಲ್ಲಿ ಬಂದು ‘ಏವನೇವಲೆ ಮಗನೆ ಸಾವೇಕಾಯಿತ್ತಲೆ ಚೆನ್ನಿಗನೆ..ಎಂದು ರೋಧಿಸಿ ಅಳುವ ಪ್ರಸಂಗ. ಮಕ್ಕಳಿಗೆ ನೈಜ ಪಾಠ ಮಾಡಲು ರಾತ್ರಿಯೇ ತಾಲೀಮು ಮಾಡಿ ಮಲಗಿ ರಾತ್ರಿ ನಿದ್ರೆಯಲ್ಲಿ ರೋಧಿಸಿ ಅಳಲು ಗಾಬರಿಯಿಂದ ಎಚ್ಚರಗೊಂಡ ಮಡದಿ ಇಂಥ ಸರಿರಾತ್ರಿ ಏಕೆ ಅಳುತ್ತಿರುವಿರಿ ಡಿಯರ್..ಎನ್ನಲು ‘ಸಾರಿ ಚಂದ್ರಮ.. ಎಂದು ಕನಸಿನಲ್ಲಿ ಕನವರಿಸುತ್ತಾರೆ.
ಮತ್ತೊಮ್ಮೆ ಹಾಸ್ಯ ಸಾಹಿತಿ ಬೀಚಿಯವರ ತಿಮ್ಮನ ತಲೆ ಪುಸ್ತಕ ಓದಿ ತಲೆಗೆ ತುಂಬಿಕೊಳ್ಳುತ್ತಾರೆ. ರಾತ್ರಿ ಮಲಗಿ ಪುಸ್ತಕದ ನಗೆ ಪ್ರಸಂಗ ನೆನೆದು ಜೋರಾಗಿ ನಗುತ್ತಾರೆ. ನಗುವಿನ ಧ್ವನಿಗೆ ಎಚ್ಚರವಾಗಿ ಹೆಂಡತಿ ‘ಏನ್ರೀ ನಿಮಗೆ ಬುದ್ಧಿಗಿದ್ಧಿ ಇದೆಯೇ. ಸುಮ್ಮ-ಸುಮ್ಮನೆ ನನಗೆ ರಾತ್ರಿ ಹೊಡೆಯುತ್ತೀರಿ, ಅಳುತ್ತೀರಿ, ನಡುರಾತ್ರಿ ನಗುತ್ತೀರಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದಾಗ ಪಡತರು ಬೆಪ್ಪುಕ್ಕಡಿ!ಶೆಟ್ಟ

ಭಾನುವಾರ ಸಂಜೆ ಅಕ್ಕಪಕ್ಕದ ಮನೆಯ ಹೆಂಗಸರು ಶೆಟ್ಟರ ಮನೆಯಲ್ಲಿ ಒಟ್ಟಿಗೆ ಸೇರಿ ತಮ್ಮ ಗಂಡಂದಿರ ಬಗೆಗೆ ಹಾಸ್ಯವಾಗಿ ಮಾತನಾಡುತ್ತಿರಲು ಹೆಂಡತಿ ಮಾತು ರೂಂನಲ್ಲಿ ಮಲಗಿದ್ದ ಶೆಟ್ಟರ ಕಿವಿಗೆ ಬಿದ್ದು, ತಲೆ ನೆಟ್ಟಗಾಗುತ್ತದೆ. ‘ನಮ್ಮನೆ ಯಜಮಾನರು ರಾತ್ರಿ ಹೊತ್ತು ಸುಮ್ಮಸುಮ್ಮನೆ ನನ್ನ ಬೆನ್ನಿಗೆ ಗುದ್ದುತ್ತಾರೆ, ಅಳುತ್ತಾರೆ, ಜೋರಾಗಿ ನಗುತ್ತಾರೆ ಹುಚ್ಚರಂತೆ ಆಡುತ್ತಾರೆ.. ಎನ್ನಲು ‘ಹಾಗಾದರೆ ನಿಮ್ಮ ಯಜಮಾನರಿಗೆ ಹುಚ್ಚು ಹಿಡಿದಿರುವುದು ಖರೆ ಎಂದು ಸಭೆ ತೀರ್ಮಾನಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಲು ಸಲಹೆ ನೀಡುತ್ತಾರೆ.

ಪತ್ನಿಯ ನಗು ಮತ್ತು ನಿಂಹಾನ್ಸ್‌ ಹಾಸ್ಯ ಕಥೆ: ಹೆಂಡತಿ ಮತ್ತು ಮಗನು ಗುಟ್ಟಾಗಿ ಹೇಳಿ ನೆಟ್ಟಗೆ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಲೇಖಕರಿಗೆ ಪರಿಚಯವಿರುವ ಡಾ.ಸಿ.ಚಂದ್ರಶೇಖರ್ ಇರುತ್ತಾರೆ. ಲೇಖಕರು ಆಗಲೇ ಹಾಸ್ಯದರ್ಶನ ಮಾಸಪತ್ರಿಕೆ ತರುತ್ತಿದ್ದು, ಪತ್ರಿಕೆಗೆ ಡಾಕ್ಟರ್ ಲೇಖನ ಬರೆದು ಪರಿಚಿತರಾಗಿದ್ದಾರೆ. ‘ಪಡಶೆಟ್ಟಿರೇ ನಿಮ್ಮ ಹಾಸ್ಯ ದರ್ಶನ ಪತ್ರಿಕೆಯಲ್ಲಿ ಬರುವ ಲೇಖನ ಚೆನ್ನಾಗಿವೆ. ನಿಮ್ಮ ಬುದ್ದಿಪೂರ್ವಕ ಸಂಪಾದಕೀಯ ತುಂಬಾ ಸ್ವಾರಸ್ಯಕರ.. ಎಂದು ಎಲ್ಲರಿಗೂ ಚಹ ತರಿಸಿ ಕಳಿಸುತ್ತಾರೆ.

ಪತ್ರಿಕೆಯ ಸ್ಥಗಿತ: ಹಾಸ್ಯದರ್ಶನ ನಿಂತ ಹಾಸ್ಯ: ಪಡಶೆಟ್ಟರು ನಡೆಸುತ್ತಿದ್ದ ಹಾಸ್ಯ ದರ್ಶನ ಮಾಸಪತ್ರಿಕೆ ೧೫ ವರ್ಷಕ್ಕೆ ನಿಂತುಹೋಯಿತು. ಹಾಸ್ಯದರ್ಶನದಲ್ಲಿ ನನ್ನ ಹಾಸ್ಯ ಲೇಖನ ಪ್ರಕಟಿಸಿ ಅದಕ್ಕೊಂದು ಕಾಮಿಡಿ ಕಾರ್ಟೂನ್ ಬರೆಸಿ ಚೆನ್ನಾಗಿ ಪತ್ರಿಕೆ ತರುತ್ತಿದ್ದರು. ಲೇಖಕರು ಕನ್ನಡ ಪುಸ್ತಕ ಮಾರಾಟ ಮಾಡುವ ಜೊತೆಗೆ ಹಾಸ್ಯ ದರ್ಶನ ಮಾರುತ್ತಾ ಬರೆದ ಈ ಪ್ರಸಂಗ ನಿಂತು ಹೋದ ಪತ್ರಿಕೆಯ ಕಾರಣ ತಮಾಷೆಯಾದರೂ ವಾಸ್ತವತೆ ಚಿತ್ರಿಸಿದೆ.

ವಿಜಯಪುರದಲ್ಲಿ ಹಾಸ್ಯ ಲೆಕ್ಕಾಚಾರ: ವಿಜಾಪುರದೊಬ್ಬರು ಟ್ರಾನ್ಸ್ ಫರ್‌ ರಾಗಿ ತೋಟಗಾರಿಕೆ ಇಲಾಖೆಗೆ ಬಂದಿದ್ದರು. ಕರಿಕೋಟು, ಕಚ್ಚೆಪಂಚೆ, ಕರಿಟೋಪಿ ಹಾಕಿಕೊಂಡು ಇಲಾಖೆಯ ಫೈಲ್ಸ್ಗಳನ್ನು ಗಮನಿಸುತ್ತಿದ್ದರು. ನಾನು ಹೋಗಿ ಅವರಿಗೆ ನಮಸ್ಕರಿಸಿದೆ. ಅವರದು ಹೆಣ್ಣು ಧ್ವನಿ. ನನ್ನ ಹೆಗಲಲಿದ್ದ ಪುಸ್ತಕ ಬ್ಯಾಗ್ ನೋಡಿ ‘ಏನಿದು ಗಂಟು.. ಎಂದರು. ‘ಸರ್ ಇದು ಪುಸ್ತಕಗಳ ಗಂಟು.. ಒಂದೊದಾಗಿ ಪುಸ್ತಕಗಳನ್ನು ಅವರೆದುರಿಗಿಟ್ಟೆ. ‘ನಿಮ್ಮದೂ ಬರೀ ಪುಸ್ತಕ ಮಾರಾಟ ಮಾಡುವುದೇ ಕಸುಬೆ. ಮತ್ತೇನಾದರೂ ಉದ್ಯೋಗ ಮಾಡ್ತೀರಾ.. ‘ಸರ್ ನಾನೊಂದು ಶಾಲೆಯಲ್ಲಿ ಕನ್ನಡ ಅಧ್ಯಾಪಕ. ಸುಮ್ಮನೆ ಬಿಡುವಿನ ವೇಳೆ ಪುಸ್ತಕ ಮಾರಾಟ ಮಾಡುತ್ತೇನೆ. ‘ವ್ಹಾ..ಶಹಬ್ಬಾಸ್.. ಅಲ್ರೀ ಮಾಸ್ತರ, ಸಾಲಿ ಮಾಸ್ತಾರಕಿ ಮಾಡ್ತೀರಾ. ಪುಸ್ತಕನು ಮರ‍್ತೀರಾ ವ್ಹಾ ತುಂಬಾ ಸಂತೋಷ..ಎಂದರು. ಅವರಿಗೆ ನಾನು ಹಾಸ್ಯ ದರ್ಶನ ಪತ್ರಿಕೆ ತೋರಿಸಿದೆ.

ಅಲ್ರೀ ಮಾಸ್ತರ, ಮಾಸ್ತರಿಕೀನು ಮಾಡ್ತೀರಾ ಪುಸ್ತಕನೂ ಮಾರ್ತಿರಾ, ಪತ್ರಿಕೇನು ತರ್ತೀರಾ ಶಹಬ್ಬಾಸ್! ನಿಮಗೆ ಮಕ್ಕಳೆಷ್ಟು..? ನನಗೆ ೪ ಜನ ಮಕ್ಕಳೆಂದೆ.
‘ಹೆಣ್ಣೇಸು ಗಂಡೇಸು..? ಮೂರು ಹೆಣ್ಣು, ಒಬ್ಬನೇ ಗಂಡು ಎಂದೆ.
‘ನೀವು ಪುಸ್ತಕ ಮರ‍್ತೀರಾ. ೩ ಜನ ಹೆಣ್ಣು ಮಕ್ಕಳಿದ್ದಾರೆಂದರೆ ವರದಕ್ಷಿಣೆ ಕೊಡಲಿಕ್ಕೆ ರೊಕ್ಕ ಬೇಕಲ್ರೀ.. ಎಂದು ನಾನು ಕೊಟ್ಟ ಹಾಸ್ಯದರ್ಶನ ಓದಲಿಕ್ಕೆ ಪ್ರಾರಂಭಿಸಿದರು. ೫-೧೦ ನಿಮಿಷ ಮೌನ. ‘ಅಲ್ರೀ ಮಾಸ್ತಾರ ಹಾಸ್ಯದರ್ಶನ ಅಂತೀರಿ ಒಂದು ನಗುವೇ ಬರಲಿಲ್ಲವಲ್ಲರೀ. ಇಂಥವೆಲ್ಲ ನನಗಿಷ್ಟವಿಲ್ರೀ..
ಒಂದಾದರೂ ಪುಸ್ತಕ ತೆಗೆದುಕೊಳ್ರೀ ಎಂದೆ.
‘ಏನ್ರೀ ಮಾಸ್ತಾರ ಒಂದು ನಗುವೇ ಬರಲಿಲ್ಲರ‍್ರೀ. ನಮ್ಮ ಮನ್ಯಾಗ ಒಂದು ಕ್ವಾಡಗ ಅದ. ನಾನು ಯಾವಾಗ ತಾಳಿ ಕಟ್ಟಿದಾಗಿನಿಂದ ಒಂದು ದಿವಸ ನಕ್ಕಿಲ್ರೀ. ನೀವು ಅವಳಿಗೆ ನಗುವ ಪುಸ್ತಕ ತಗೊಳ್ರೀ ನಾನು ರೊಕ್ಕ ಕೊಟ್ಟು ತೆಗೆದುಕೊಳ್ಳುತ್ತೇನೆ. ಮಾಸ್ತರ ಈ ಕನ್ನಡ ಪುಸ್ತಕ ಯಾರು ತಗೊಳ್ಳುತ್ತಾರೆ ಯಾರು ತೊಗಳಲ್ರೀ. ಜೋಳದ ರೊಟ್ಟಿ ತಗೊರ‍್ರೀ ದುಮ್ಮಾ ಹಾರಿ ಹೋಗ್ತಾವ್. ನಾನು ಬಿಜಾಪುರದಿಂದ ಬಂದು ನಾಲ್ಕು ತಿಂಗಳಾತು. ರೊಟ್ಟಿ ಮಾರೀನೆ ನೋಡಿಲ್ಲ. ಜೋಳದ ಸಜ್ಜಿರೊಟ್ಟಿ ತೆಗೆದುಕೊಂಡ್ರ‍, ನಿಮಗೆ ಒಳ್ಳೆಯ ವ್ಯಾಪಾರ ಆಗುತ್ತೆ. ಮಾಸ್ತಾರ ಒಂದು ವಿಷಯ ಹೇಳ್ತಿನಿ ಕೇಳ್ರೀ.. ಒಂದು ಹಾಸ್ಯ ದರ್ಶನ ಪ್ರತಿ ಕೊಂಡರೆ ಒಂದು ರೊಟ್ಟಿ ಫ್ರೀ ಎನ್ನಿರಿ, ಆಗ ನೋಡಿ ನಿಮ್ಮ ವ್ಯಾಪಾರ ದುಮ್ಮಾಹಾರಿ (ಸಿಕ್ಕಾಪಟ್ಟೆ) ನಿಮ್ಮೆಲ್ಲ ಪುಸ್ತಕ ಹೋಗುತ್ತವೆ… ಎಂದ ಆ ಮಹಾಶಯ ಕೊನೆಗೂ ಒಂದು ಪುಸ್ತಕ ತೆಗೆದುಕೊಳ್ಳುವುದಿಲ್ಲ. ಪಡಶೆಟ್ಟರು ತರುತ್ತಿದ್ದ ಹಾಸ್ಯದರ್ಶನದಲ್ಲಿ ವೈವಿಧ್ಯ ಹಾಸ್ಯ ಬರಹ ಇರುತ್ತಿದ್ದವು. ಅಂತೆಯೇ ಇಲ್ಲಿಯೂ ಇವೆ.

ಹಾಸ್ಯದರ್ಶನದ ವೈವಿಧ್ಯ:

ಗಿರಾಕಿ: ಸೆಲೂನಿನ ತುಂಬೆಲ್ಲ ಬರೀ ಪತ್ತೆದಾರಿ ಪುಸ್ತಕಗಳನ್ನಿಟ್ಟಿರುವಿರಲ್ಲ..ಏನಾದರೂ ಪತ್ರಿಕೆ ಇಡಬಾರದೇ?

ಮಾಲೀಕ: ಸ್ವಾಮಿ, ಈ ಪತ್ತೆದಾರಿ ಕಾದಂಬರಿ ಓದುತ್ತಿರುವಂತೆ ಗಿರಾಕಿಗಳಿಗೆ ರೋಮಾಂಚನವಾಗಿ ಅವರ ಕೂದಲು ಸೆಟೆದು ನಿಲ್ಲುತ್ತೆ. ಆಗ ಅದನ್ನು ಕತ್ತರಿಸಲು ನನಗೆ ಸುಲಭ.

ಶಿಕ್ಷಕ: ಸುರೇಶ, ಘಜನಿ ಮೊಹಮ್ಮದ್ ಭಾರತಕ್ಕೆ ಮೊದಲನೇ ಹೆಜ್ಜೆ ಇಟ್ಟ ಕೂಡಲೇ ಏನು ಮಾಡಿದ?
ಸುರೇಶ: ಎರಡನೇ ಹೆಜ್ಜೆ ಇಟ್ಟ.

ಆತ: ಯಾಕಿಷ್ಟು ನಗ್ತಿದಾನೆ ಆತ

ಈತ: ಅವನಿಗೆ ನಗಲಿಕ್ಕೆ ಇವತ್ತು ಕೊನೆ ದಿನ

ಆತ: ಅಂದ್ರೇ?

ಈತ: ನಾಳೆ ಆತನ ಮದುವೆ..!

 

 

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ್ ತಮ್ಮ “ಹಚ್ಚೆ ದಿನ್” ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು, ಯಾವಾಗ ಕೊಟ್ಟರೆಂಬುದೇ ಮರೆತು ಹೋಗಿತ್ತು. ಮೊನ್ನೆ ಬೆಂಗಳೂರಿಗೆ ಹೊರಟಾಗ, ನನ್ನ ಪುಸ್ತಕ ರಾಶಿಯಲ್ಲಿ ಆ ಪುಸ್ತಕವು ಬಿದ್ದಿತ್ತು.

ಅನೇಕ ಪುಸ್ತಕಗಳನ್ನು ನನ್ನ ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರುತ್ತಿದ್ದಳು. ಅದರಿಂದ ಹಣ ತೆಗೆದು ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನ ಖರೀದಿಸುತ್ತಿದ್ದಳು. ಅಲ್ಲಿ “ಹಚ್ಚೆ ದಿನ್‌” ಪುಸ್ತಕ ತೆಗೆದುಕೊಂಡು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದಲ್ಲಿ ಸಂಪೂರ್ಣ ಓದಿದೆ.

“ಹಚ್ಚೆ ದಿನ್”‌ ೩೨ ಹಾಸ್ಯ ಲೇಖನಗಳ ಸಂಕಲನ. ನಾವು ನೋಡುವ ನಿತ್ಯದ ದೃಶ್ಯ, ವಸ್ತುಗಳು ಲೇಖಕಿಯ ನಿರೂಪಣಾ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ. ಮನಸ್ಸಿಗೆ ಹೊಸ ಭಾವನೆ ತಂದಿವೆ.

ಮನುಷ್ಯನ ದೇಹಾರೋಗ್ಯದಲ್ಲಿ ನಾಲಿಗೆಯ ಪಾತ್ರ ತುಂಬಾ ಮುಖ್ಯ. ಅದನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ಹೊಟ್ಟೆಗೆ ನಷ್ಟ ಮಾಡುತ್ತದೆ. ಉದಾಹರಣೆಗೆ : ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮೂಲಕ ಹೊಟ್ಟೆಗೆ ಇಳಿದವು.ʼ

ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲಾ ಜನರನ್ನು ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನುತ್ತಾನೆ. ಹಾಗೆ, ಹೊಟ್ಟೆ ಪೂರಿಗಳನ್ನು ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲುತ್ತದೆ.

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” ಎಂಬಂತೆ, ನಾಲಿಗೆಯ ತಪ್ಪಿಗೆ ಹೊಟ್ಟೆ ಶಿಕ್ಷೆ ಅನುಭವಿಸುತ್ತದೆ. ಲೇಖಕಿ ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರದ ಜೀರ್ಣ ಕ್ರಿಯೆ ಬಹಳ ಸಣ್ಣ ವಿಷಯವಲ್ಲ. ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗ್ಯಾಸ್ ಪ್ರತ್ಯಕ್ಷವಾಗಿ ಹೊಟ್ಟೆಕಿಚ್ಚು ಉಂಟುಮಾಡುತ್ತದೆ. ಡಿವಿಜಿಯವರ ಕಗ್ಗದ ಸಾಲುಗಳ ಮೂಲಕ ಅದನ್ನು ವಿಶ್ಲೇಷಿಸಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವು ಮಸಾಲೆ ಮಿಶ್ರಿತ ಆಹಾರವನ್ನು ಎರಡು ವಿಭಾಗಗಳಲ್ಲಿ ಪ್ರಕ್ರಿಯೆಗೊಳಿಸುತ್ತವೆ. ಸೀನಿಯರ್ ಮತ್ತು ಜೂನಿಯರ್ ಕರುಳಿನಲ್ಲಿ ಅದರ ಶುದ್ಧ ಅಂಶ ಬೇರ್ಪಡಿಸುತ್ತವೆ.

ಆಹಾರದ ಸ್ಕ್ರಾಪ್‌ ಭಾಗವನ್ನು ನಗರಸಭೆಯ ವಿಲೇವಾರಿಗೆ ಹಸಿಕಸ, ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪಡಿಸಿ ದೇಹದೊಳಗಿನ ಆಯಾ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯೇ ವಿಚಿತ್ರ. ವಿಷಯನ್ನು ಹಾಸ್ಯ ರೀತಿಯಲ್ಲಿ ನಿರೂಪಿಸುವಾಗ ನಗು ತಡೆಸಲಾಗದು. ಇದು ಲೇಖಕಿಯ ಶೈಲಿ ಹಾಗೂ ಶಕ್ತಿಯನ್ನು ಬಿಂಬಿಸುತ್ತದೆ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಪಡೆಯಲು ರೇಡಿಯೋ ಅಥವಾ ಪತ್ರಿಕೆಗಳಿಗೆ ನಂಬಿಕೆಯಿಟ್ಟಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್‌ ಪೌಡರ್ ನಿರ್ಮಾ. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು.

“ಹಚ್ಚೇವು ನೊರೆ ನೊರೆಯ ಸೋಪು..” ಎಂಬ ಶೀರ್ಷಿಕೆಯ ಲೇಖನ ಹಾಸ್ಯದಲ್ಲಿ ಹಾಸ್ಯ, ಭಾಷೆಯಲ್ಲಿ ಕ್ರಿಯಾಶೀಲತೆ ಹಾಗೂ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪೂರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ….ನಿನ್ನಿಂದಲೇ….ಕನಸೊಂದು ಶುರುವಾಗಿದೆ… ಎಂಬ ಸುಂದರ ಹಿಮ್ಮೇಳದೊಂದಿಗೆ, ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಮನೆ ಮನೆಗೆ ಬಂದು ನಿಲ್ಲತೊಡಗಿದವು.

ತಡವಾಗಿ ಎದ್ದವರು ಗಾಡಿ ಮುಂದೆ ಕಸ ಹಾಕಲು ಬೇಸರ ಪಡುತ್ತಾರೆ. ನಂತರ ಖಾಲಿ ಸೈಟ್‌ ನಲ್ಲಿ ಕಸ ಬಿಸಾಡುವ ಅಸಂಸ್ಕೃತತೆಗೆ ಇಳಿಯುತ್ತಾರೆ. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

ಪಾರ್ಕ್, ಫುಟ್‌ಪಾತ್ ಎಲ್ಲೆಡೆ ತ್ಯಾಜ್ಯ ತುಂಬಿ ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ.

ಬಾಲ್ಯದ ದಿನಗಳ ನೆನಪಿನಲ್ಲಿ ಲೇಖಕಿ ಮನೆ ಮುಂಭಾಗದ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣು ರಸ್ತೆಯ ಮಧ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು.

ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ, ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು.

ಅಪ್ಪನೇ ಪೈಪ್‌ ಕ್ಲೀನ್ ಮಾಡಿ, ಗೊಡ್ಡೆ ಹೊತ್ತರೆಂದು ಕೊನೆಗೆ ಸ್ವತಃ ಗುದ್ದಲಿ ಹಿಡಿದು ಸ್ವಚ್ಛತೆ ನಡೆಸಿದ ವೃತ್ತಾಂತ ಮನ ಮುಟ್ಟುತ್ತದೆ. ಸುಮಾ ಮೇಡಂ ರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು.

ಕೃತಿಯ ಶೀರ್ಷಿಕೆ “ಹಚ್ಚೆ ದಿನ್” ಹೆಣ್ಣು ಮಕ್ಕಳ ಫ್ಯಾಶನ್ ಕ್ಷೇತ್ರಕ್ಕೆ ಹಳೆಯ ಹಚ್ಚೆಯನ್ನು ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟದೆ. ಲೇಖಕಿಯು ಟ್ಯಾಟೂ ವನ್ನ ಶಿಲೆಯ ಮೇಲಿನ ಶಾಸನಗಳಂತೆ, ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ ಎಂದು ಆಧುನಿಕತೆಯೆಂದು ಪರಿಚಯಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಎನ್.ರಾಮನಾಥ್ ಅವರು ಸುಂದರವಾಗಿ ಲೇಖಕಿಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಅದು ಓದುಗರಿಗೆ ಮಾರ್ಗದರ್ಶಕವಾಗುತ್ತದೆ.

ಗುಡಿಯ ದೇವರುಗಳು ಪೂರ್ವಾಭಿಮುಖವಾಗಿ ನಿಂತಿದ್ದರೆ ನವಗ್ರಹಗಳು ಕಣ್ಣಿನಾಸ್ಪತ್ರೆಯ ರೋಗಿಗಳಂತೆ ಬೇರೆ ಬೇರೆ ದಿಕ್ಕಿಗೆ ತಿರುಗಿರುವ ಹೋಲಿಕೆ ಉಡಾಫೆ ನಗಿಸುತ್ತವೆ.

ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದಿಂದ ೩೨ ಲೇಖನಗಳು ಓದುಗರನ್ನು ನಗಿಸಲು ನೆರವಾಗುತ್ತವೆ. ಇದು ಉತ್ತಮ ಹಾಸ್ಯ ಸಾಹಿತ್ಯದ ಸಂಕಲನ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಕನ್ನಡ ರಂಗಭೂಮಿಯನ್ನು ಚಿತ್ರಿಸುವ ಕೃತಿ “ನಿಂತು ಹೋದ ಕನ್ನಡ ರಂಗವೈಭವ”

ಹಾಸನ ಜಿಲ್ಲೆಯು ಕನ್ನಡ ರಂಗಭೂಮಿಗೆ ತನ್ನದೇ ಆದಂತಹ ಎಂದೆಂದಿಗೂ ಮರೆಯಲಾಗದಂತಹ ಕಾಣಿಕೆಗಳನ್ನು ನೀಡಿದೆ. ಹಿಂದಿನ ಕಾಲದಿಂದಲೂ ನಾಟಕ ರಂಗಭೂಮಿಗೆ ಹಾಸನದಲ್ಲಿ ವಿಶೇಷ ಮನ್ನಣೆ ದೊರಕಿದೆ. ರಂಗಕ್ಷೇತ್ರದಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು ಮತ್ತು ತಂತ್ರಜ್ಞರು ಸೇರಿದಂತೆ ಹಲವರನ್ನು ಪರಿಚಯಿಸುವ ಮೂಲಕ ಸಾಹಿತ್ಯ ರಚನೆಯಲ್ಲಿ ವಿಭಿನ್ನ ಶೈಲಿಯನ್ನು ರೂಪಿಸಿರುವ ವ್ಯಕ್ತಿ ಗೊರೂರು ಅನಂತರಾಜು.

ಅವರು ರಚಿಸಿರುವ “ನಿಂತು ಹೋದ ಕನ್ನಡ ರಂಗವೈಭವ” ಎಂಬ ಕೃತಿಯ ಶೀರ್ಷಿಕೆಯೇ ನಾಟಕದ ಚೈತನ್ಯ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತದೆ. ಅವರು ನಾಟಕಗಳ ಬೆಳವಣಿಗೆ, ಆಧುನಿಕತೆ ಮತ್ತು ಅದರ ತೀವ್ರ ಕುಸಿತದ ಬಗ್ಗೆ ಚಿಂತನಾತ್ಮಕವಾಗಿ ಬರೆಯುತ್ತಾರೆ. ರಂಗಭೂಮಿಯ ನೈತಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿಕೊಡುತ್ತಾರೆ.

ಈ ಕೃತಿಯಲ್ಲಿ ಕಲಾವಿದರ ಪರಿಚಯವೊಂದರ ಮೂಲಕ ತೃಪ್ತಿಯಾಗದೆ, ರಂಗಭೂಮಿಯ ತಾತ್ವಿಕತೆಯನ್ನೂ ವಿಶ್ಲೇಷಣೆ ಮಾಡಲಾಗಿದೆ. ಲೇಖಕರ ಭಾಷೆ ಸರಳವಾಗಿದ್ದು, ಭಾವಪೂರ್ಣತೆಯಿಂದ ಕೂಡಿದೆ. ಓದುಗರಿಗೆ ಪ್ರತಿಯೊಂದು ಪುಟ ಆಲೋಚನೆಗೆ ಆಹ್ವಾನ ನೀಡುತ್ತದೆ.

ಕೃತಿಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು ರಂಗಭೂಮಿಯ ಪತನವಾಗಿದೆ. ನಾಟಕವು ಒಂದು ಕಾಲದಲ್ಲಿ ಸಮಾಜದ ದರ್ಪಣವಾಗಿತ್ತೆಂದು ಲೇಖಕರು ವಿವರಿಸುತ್ತಾರೆ. ನಾಟಕಗಳ ಒಡನಾಡಿತನ, ಸಾಮಾಜಿಕ ಪಾತ್ರ ಇಂದು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಸೂಚಿಸುತ್ತಾರೆ.

ಕೃತಿಯಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು, ತಂತ್ರಜ್ಞರು ಹೀಗೆ ಎಲ್ಲರನ್ನು ಒಳಗೊಂಡಂತೆ ಹಲವು ವ್ಯಕ್ತಿಗಳ ಪರಿಚಯ, ನಾಟಕ ರಚನೆ, ಅಭಿನಯದ ಕಥನಗಳು ಚಿತ್ರಣವಂತಾಗಿವೆ. ಇದರಿಂದ ಓದುಗರಿಗೆ ಕೇವಲ ವಿಷಯವಷ್ಟೇ ಅಲ್ಲ, ಭಾವನಾತ್ಮಕ ಅನುಭವವು ದೊರಕುತ್ತದೆ. ಈ ಕೃತಿಯು ಒಂದು ಕಾಲದಲ್ಲಿ ನಾಟಕವು ಸಮಾಜದ ದರ್ಪಣವಾಗಿತ್ತು ಎಂಬುದನ್ನು ನೆನಪಿಸುತ್ತದೆ.

ಈಗ ಅದು ಮನರಂಜನೆಯ ಉಪಕರಣವಾಗಿ ಕುಸಿದಿರುವ ಸ್ಥಿತಿಯನ್ನು, ಸ್ತಬ್ಧತೆಯ ಪರಿಸ್ಥಿತಿಯನ್ನು ಕೃತಿಯಲ್ಲಿ ಲೇಖಕರು ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಈ ಕೃತಿಯು ಕಲಾವಿದರ ಗೌರವಾರ್ಹತೆಯನ್ನು ತೋರಿಸುತ್ತದೆ. ಈ ಕೃತಿಯು ಕನ್ನಡ ರಂಗಭೂಮಿಯ ಪ್ರಾಮಾಣಿಕ ದಾಖಲೆಯಾಗಿದೆ. ಗೊರೂರು ಅನಂತರಾಜು ಅವರು ಕೇವಲ ಕಲಾವಿದರನ್ನು ಪರಿಚಯಿಸುವ ಸಾಹಿತಿ ಮಾತ್ರವಲ್ಲ, ನಾಟಕದ ಕಲಾವಿದರ ಜೀವನವನ್ನೇ ಅರ್ಥಮಾಡಿಕೊಂಡ ಕಲಾವಿದರಾಗಿ ಈ ಕೃತಿಯಲ್ಲಿ ಸ್ಪಷ್ಟ ಚಿತ್ರಣ ನೀಡುತ್ತಾರೆ.

ಲೇಖಕರು ರಂಗಭೂಮಿಗೆ ತುಂಬಾ ಹತ್ತಿರವಾದ ವ್ಯಕ್ತಿಯಾಗಿರುವುದರಿಂದ ಕೆಲವೊಮ್ಮೆ ಭಾವನಾತ್ಮಕವಾಗಿ ಹೆಚ್ಚು ವಿವರಣೆಯನ್ನು ನೀಡಿರುವ ಸಂದರ್ಭಗಳಿವೆ. ಈ ಸಂದರ್ಭಗಳು ಕೃತಿಯ ನೈಜತೆಯನ್ನು ಹೆಚ್ಚಿಸುತ್ತವೆ. “ನಿಂತು ಹೋದ ರಂಗವೈಭವ” ಎಂಬ ಲೇಖನದಲ್ಲಿ ಕನ್ನಡ ರಂಗವೈಭವ ಪತ್ರಿಕೆಯ ಸಹ ಸಂಪಾದಕರನ್ನು ಪರಿಚಯಿಸಿಕೊಂಡು ರಂಗ ಪ್ರದರ್ಶನದ ಫೋಟೋ ತೆಗೆದು ಪತ್ರಿಕೆಗಳಿಗೆ ಪರಿಚಯಿಸಲು ಲೇಖನ ಬರೆಯುವುದಾಗಿ ಕೇಳಿಕೊಳ್ಳುತ್ತಾರೆ.

ಲೇಖನಗಳನ್ನು ಬರೆಯುವುದಾದರೆ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ರಂಗವೈಭವ ಪತ್ರಿಕೆಗೆ ಬರೆಯಲು ತಿಳಿಸುತ್ತಾರೆ. ಕೋವಿಡ್- 19ರ ಮೊದಲು ರಂಗಭೂಮಿ ಹೇಗಿತ್ತು?. ಕೋವಿಡ್ ಕಾಲದಲ್ಲಿ ಅದರ ಪರಿಸ್ಥಿತಿ ಏನಾಯಿತು ಮತ್ತು ಕೋವಿಡ್ ನಂತರ ಈಗಿನ ರಂಗಭೂಮಿ ಹೇಗಿದೆ. ಎಂಬ ವಿವರವನ್ನು ಮಾತನಾಡುತ್ತಾ, ಬಸವರಾಜ ಐರಣಿಯವರ ಕಲಾ ಸೇವೆಯ ಕುರಿತ ಲೇಖನ ಇದಾಗಿದೆ.

ಲೇಖಕರು “ನಿಂತು ಹೋದ” ಪತ್ರಿಕೆಯ ಜೊತೆಗೆ ರಂಗಭೂಮಿಯ ವ್ಯಾಪ್ತಿಯೂ ಕಡಿಮೆಯಾದ ಕುರಿತು ವಿವರವಾಗಿ ಬರೆದಿದ್ದಾರೆ. 2019 ರ ನಂತರ ಪತ್ರಿಕೆಯು ವಾರಕ್ಕೊಮ್ಮೆ ರಂಗಭೂಮಿ ಕಲಾವಿದರ ಕುರಿತು ಪರಿಚಯ ಮಾಡುತ್ತಾ ಬಂದಿದೆ. ಲೇಖಕರಾದ ಬಸವರಾಜ ಐರಣಿಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ತಂದು ಕೊಡುವವರೆಗೂ ವ್ಯಾಪಿಸಿದೆ ಎಂದ ಮೇಲೆ ಈ ಲೇಖನ ಎಷ್ಟೊಂದು ಮಹತ್ವ ಪಡೆದಿದೆ ಎಂದು ತಿಳಿಯುತ್ತದೆ.

ಎಸ್.ಎಸ್.ಎಲ್.ಸಿ ಓದಿದ ಐರಣಿಯವರು ಪ್ರಿಂಟಿಂಗ್ ಪ್ರೆಸ್ ಕೆಲಸಕ್ಕೆ ಸೇರಿಕೊಂಡು ನಂತರ ನಾಟಕದ ಪಾತ್ರಗಳನ್ನು ಬಯಸಿ ಬೆಳೆದು ಬಂದ ಬಗೆಯನ್ನು ತಿಳಿಸುತ್ತದೆ. ಲೇಖಕರ ಮತ್ತೊಂದು ಲೇಖನ ಗುಡಿಹಳ್ಳಿ ನಾಗರಾಜ್ ರವರ ನೆನಪು ಮಾಡಿಕೊಂಡು ಬರೆದಂತಹ ರಂಗಸೆಲೆ ಪುಸ್ತಕದಲ್ಲಿ ಪರಿಚಯಿಸಿರುವ ನಾಟಕ ಕಂಪನಿಗಳು ಹಾಗೂ ಪಾತ್ರವರ್ಗ ಹೇಗೆ ಜನಸಮೂಹದಲ್ಲಿ ಮೋಡಿ ಮಾಡಿತು.

ಗುಡಿಹಳ್ಳಿ ನಾಗರಾಜರವರು ಹೇಗೆ ಬರಹಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಕಾದಂಬರಿಕಾರರಾಗಿ ಹೊರಹೊಮ್ಮಿದರು ಎಂಬುದನ್ನು ತಿಳಿಸುತ್ತದೆ. ಕನ್ನಡ ರಂಗಭೂಮಿಯ ಬಹಳಷ್ಟು ಜನರನ್ನು ಹೇಗೆ ಹೊರ ಜಗತ್ತಿಗೆ ಪರಿಚಯಿಸಿದರು ಎಂಬ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಪಯಣ ಲೇಖನದಲ್ಲಿ ನರಸಿಂಹರಾಜುರವರು ಹೇಗೆ ನಾಟಕ ಕಂಪೆನಿಗೆ ಪ್ರವೇಶ ಪಡೆದರು. ಎಷ್ಟೆಲ್ಲಾ ನಾಟಕ ಕಂಪೆನಿಗಳನ್ನು ಬದಲಾಯಿಸಿದರು. ಕೊನೆಯಲ್ಲಿ ಗುಬ್ಬಿ ನಾಟಕ ಕಂಪೆನಿಯಲ್ಲಿ ನೆಲೆನಿಂತು ಚಿತ್ರರಂಗ ಪ್ರವೇಶಿಸಿದ ಬಗೆ ಎಲ್ಲವನ್ನು ವಿವರಣಾತ್ಮಕವಾಗಿ ಬರೆದಿದ್ದಾರೆ.

ಎರಡನೇ ಮಹಾಯುದ್ದದ ಬಿಸಿ ನಾಟಕ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿ, ಅಂದಿನ ಕಾಲಘಟ್ಟದಲ್ಲಿ ನಟರು, ನಿರ್ದೇಶಕರು ಅನುಭವಿಸಿದ ನೋವು, ದುಃಖ-ದುಮ್ಮಾನಗಳನ್ನು ತಮ್ಮ ಲೇಖನಿಯ ಮೂಲಕ ತಿಳಿಸಿದ್ದಾರೆ. ನರಸಿಂಹರಾಜು ಅವರು ಸಿನಿಮಾ ರಂಗದಲ್ಲಿದ್ದರೂ, ರಂಗಭೂಮಿ ಕರೆದಾಗ ಮತ್ತೆ ಬಂದು ಪಾತ್ರ ಮಾಡುತ್ತಿದ್ದರು ಎಂಬುದನ್ನು ಓದುಗರ ಮನ ಮುಟ್ಟುವಂತೆ ಹೇಳಿದ್ದಾರೆ.

ಗೊರೂರು ಜಾತ್ರೆಯ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಬಂದು ಬೀಡುಬಿಡುತ್ತಿದ್ದ ಟೂರಿಂಗ್ ಟಾಕೀಸ್ ಗಳ ಬಗ್ಗೆ ಮರೆಯದೇ ಹೇಳಿರುವುದು ತನ್ನ ಊರು ಗೊರೂರು ಒಂದೊಮ್ಮೆ ಹೇಗೆ ರಂಗಭೂಮಿಯ ನೆಲೆಯಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನರಸಿಂಹರಾಜುರವರ ರಂಗಪಯಣ ಸಾಗಿದ ರೀತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಲೇಖಕರಾದ ಗೊರೂರು ಅನಂತರಾಜು ರವರು ಬರೆದಿರುವ ಮತ್ತೊಂದು ಲೇಖನದಲ್ಲಿ ರಂಗಗೀತೆಗಳ ಸಾರ್ವಭೌಮ ಎಂದೇ ಪ್ರಸಿದ್ಧರಾದ ಆರ್. ಪರಮಶಿವನ್ ರವರು ಬಡ ಕುಟುಂಬದಲ್ಲಿ ಹುಟ್ಟಿ, ಊಟಕ್ಕೂ ಗತಿಯಿಲ್ಲದ ದಿನಗಳಲ್ಲಿ ಸೋದರ ಮಾವನ ಭಿಕ್ಷಾನ್ನದಿಂದ ಒಂದು ಹೊತ್ತು ಉಂಡು ನಾಲ್ಕು ವರ್ಷಗಳು ಕಳೆದರು. ನಂತರವಷ್ಟೇ ಚಾಮುಂಡೇಶ್ವರಿ ಕಂಪೆನಿಯ ವಸಂತಸೇನ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಎದುರಿನಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದದನ್ನು ತನ್ನ ಆತ್ಮಕಥೆಯಲ್ಲಿ ನಿವೇದಿಸುತ್ತಾರೆ. ಆರ್. ಪರಮಶಿವನ್ ಅಲ್ಲದೇ 1940 ರ ಸುಮಾರಿಗೆ ಗುಬ್ಬಿ ವೀರಣ್ಣನವರು ತೆಗೆದ ಸುಭದ್ರ ಚಿತ್ರದಲ್ಲಿ ಒಂದು ಹಾಡು, ದೃಶ್ಯ ವೀರಣ್ಣನವರ ಜೊತೆಯಲ್ಲಿ ಅಭಿನಯಿಸಲು ಸಿಕ್ಕ ಅವಕಾಶವನ್ನು ನೆನಪು ಮಾಡಿಕೊಳ್ಳುತ್ತಾರೆ.

ಹೊಳೆನರಸೀಪುರಕ್ಕೆ ನಾಟಕ ನೋಡಲು ಹೋದಾಗ ಹಾರ್ಮೋನಿಯಂ ಮಾಸ್ಟರ್ ಈಗ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಎಷ್ಟು ಹೊತ್ತಾದರೂ ಬರಲಿಲ್ಲ ಅದನ್ನು ಮುಂದುವರಿಸುವ ಕಾರ್ಯ ಪರಮಶಿವನ್ ರವರಿಗೆ ಕೊಟ್ಟಿದ್ದರು. ಕೇವಲ ಹದಿನೆಂಟು ವರ್ಷದ ಹುಡುಗ ಪರಮಶಿವನ್ ಅದನ್ನು ಸುಸೂತ್ರವಾಗಿ ಹಾರ್ಮೋನಿಯಂ ವಾದಕರಾಗಿ ನಿರ್ವಹಣೆ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅಂದಿನ ಕಾಲದಲ್ಲಿ ನಾಟಕ ಕಂಪೆನಿಗಳು ಹೇಗೆ ಊರಿಂದೂರಿಗೆ ವಲಸೆ ಹೋಗುತ್ತಿದ್ದವು. ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಬದುಕುವ ಸನ್ನಿವೇಶ ಎಲ್ಲವನ್ನು ಕಟ್ಟಿಕೊಡುತ್ತಾರೆ. ನಾಟಕಗಳ ಜೀವಾಳವೇ ರಂಗಗೀತೆಗಳು, ಅವುಗಳನ್ನು ಬರೆಯುವುದು ಮತ್ತು ಹಾಡುವುದರಲ್ಲಿ ಪರಮಶಿವನ್ ರವರು ಸದಾ ಮುಂದಿರುತ್ತಾರೆ ಎಂಬುದನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.

ಈ ಕೃತಿಯಲ್ಲಿ ಪೌರಾಣಿಕ ನಾಟಕ ವಿದ್ವಾನ್ ಕಿರಗಸೂರು ರಾಜಪ್ಪನವರ ಕುರಿತು, ಸೃಜನಶೀಲ ನಿರ್ದೇಶಕಿ ಮಂಗಳಾ ವೆಂಕಟೇಶ್, ರಂಗ ಸಂಗೀತಕ್ಕೆ ಹನ್ಯಾಳು ಗೋವಿಂದೇಗೌಡರ ಕೊಡುಗೆಗಳು, ಗವೇನಹಳ್ಳಿ ಜಿ. ಎಂ. ಪ್ರದೀಪ್, ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಹಳೇಬೀಡು ಕುಳ್ಳೇಗೌಡರು, ಬಂಡಿಹಳ್ಳಿ ನಾಗರಾಜ, ಪೌರಾಣಿಕ ರಂಗ ಸಂಗೀತ ಸಾಧಕರಾದ ಹೆಚ್. ಜಿ. ಶಿವಲಿಂಗಮೂರ್ತಿ.

ಲೇಖಕರ ರಂಗ ಸಿರಿ ಕಥಾ ಐಸಿರಿ ಕುರಿತು ಡಾ. ಸುಧಾ ಹೆಚ್. ಎಸ್ ಧಾರವಾಡ ಬರೆದ ರಂಗಭೂಮಿ ಒಳ ಹೊರಗಿನ ಹೂರಣ ವಿಮರ್ಶಾ ಬರಹ, ಅಂತೆಯೇ ಗೊರೂರು ಅನಂತರಾಜು‌ ರವರು ನಟ, ನಾಟಕಕಾರರು ಎಸ್. ಎಸ್. ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ನಾಟಕ ಕೃತಿ ಮಹಾತ್ಮ ಕನಕದಾಸ ಕೃತಿ ವಿಮರ್ಶೆ, ಹಾಗೆಯೇ ಡಾ. ಬರಾಳು ಶಿವರಾಮ್ ರವರ ರಂಗವೈಭವ ಕೃತಿಯ ಪರಿಚಯ ಮುಂತಾದ ವಿಚಾರಗಳು ಸ್ಪಷ್ಟವಾಗಿ ವಿಭಿನ್ನ ದೃಷ್ಟಿಕೋನಗಳಲ್ಲಿ ಗೋಚರವಾಗತ್ತವೆ.

ಈ ಕೃತಿಗೆ ಡಾ. ಬರಾಳು ಶಿವರಾಮ್ ಮುನ್ನುಡಿಯನ್ನು ಬರೆದಿದ್ದು, ಬೆನ್ನುಡಿಯನ್ನು ಜಿ. ಎಸ್. ಪ್ರಕಾಶ್ ಬರೆದಿದ್ದಾರೆ. ಈ ಭಾಗಗಳು ಓದುಗರಿಗೆ ಗ್ರಂಥದ ಸಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. “ನಿಂತು ಹೋದ ಕನ್ನಡ ರಂಗವೈಭವ” ಕೃತಿಯು ಕನ್ನಡ ರಂಗಭೂಮಿಗೆ ಸಮರ್ಪಿತವಾದ ಬೌದ್ಧಿಕ ಚಿಂತನೆ ಹಾಗೂ ಮನನಕ್ಕೆ ಕಾರಣವಾಗುವ ವಿಶ್ಲೇಷಣಾತ್ಮಕ ದಾಖಲೆ.

ಗೊರೂರು ಅನಂತರಾಜು ಅವರು ಈ ಕೃತಿಯಲ್ಲಿ ಕನ್ನಡ ರಂಗಭೂಮಿ ಬದುಕು, ವೈಭವ, ಪತನ ಮತ್ತು ಸಾಧ್ಯತೆಯ ಬಗೆಗಿನ ಸತ್ಯವನ್ನು ನಿರ್ಭಯವಾಗಿ ಅನಾವರಣಗೊಳಿಸಿದ್ದಾರೆ. ಅವರು “ನಿಂತು ಹೋದ ಕನ್ನಡ ರಂಗಭೂಮಿ” ಯಲ್ಲಿ ವಿಭಿನ್ನ ಕಲಾವಿದರ ಬದುಕಿನ ಅನುಭವ, ವೈಚಾರಿಕತೆ ಮತ್ತು ನಿಷ್ಠೆಯ ಭಾವದಿಂದ ವ್ಯಕ್ತಪಡಿಸಿರುತ್ತಾರೆ. ಇವರ ಈ ಕೃತಿಯು ಕನ್ನಡ ರಂಗಭೂಮಿಯನ್ನು ಜನಮಾನಸ ಲೋಕಕ್ಕೆ ತಲುಪಿಸುವಲ್ಲಿ ಸಹಕಾರಿಯಾಗಿದೆ.

ಕೆ. ಎನ್. ಚಿದಾನಂದ, ಸಾಹಿತಿ, ಹಾಸನ

ಇ-ಆಸ್ತಿ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯ ಅರ್ಜಿಗಳ ಸಲ್ಲಿಕೆಗೆ ಅವಕಾಶ

ಗಂಗಾವತಿ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೧ ವಾರ್ಡುಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇನ್ನು ಮುಂದೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿಗಳನ್ನು ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಲಾಗಿರುತ್ತದೆ.

ಸಾರ್ವಜನಿಕರು ತಮ್ಮ ಆಸ್ತಿಯ ಖಾತೆಯ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ನಾಲ್ಕು ಕೇಂದ್ರಗಳ ಮೂಲಕ ನಾಗರಿಕರಿಂದ ನೇರವಾಗಿ ಮಾಡ್ಯೂಲ್ ಮೂಲಕ ಹಾಗೂ ಹೆಲ್ಪ್ ಡೆಸ್ಕ್ ಲಾಗಿನ್ ಮೂಲಕ ಸಲ್ಲಿಸಲು ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ.ಎಂ.ಡಿ.ಎಸ್ ನಿಂದ ಅವಕಾಶ ಸಲ್ಲಿಸಿರುತ್ತಾರೆ. ಆದ ಕಾರಣ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸಹಿ/-
ಪೌರಾಯುಕ್ತರು,
ನಗರಸಭೆ, ಗಂಗಾವತಿ.

೨೦೨೫-೨೬ನೇ ಸಾಲಿನ ಕ್ರೀಡಾಕೂಟಗಳ ಪೂರ್ವಭಾವಿ ಸಭೆಯಲ್ಲಿ ಶಿವಕಾಂತ ತಳವಾರ ಇವರಿಂದ ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ ವಿತರಣೆ
ಗಂಗಾವತಿ‌ : ಅಖಂಡ ಗಂಗಾವತಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದೈಹಿಕ ಶಿಕ್ಷಣದ ಶಿಕ್ಷಕರುಗಳಿಗೆ ಇಂದು ಗಂಗಾವತಿ ನಗರದ ಎಂ.ಎನ್.ಎ.ವಿದ್ಯಾಗಿರಿ ಪ್ರೌಢಶಾಲೆಯಲ್ಲಿ ಇಂದು ೨೦೨೫-೨೬ ನೇ ಸಾಲಿನ ಕ್ರೀಡಾಕೂಟಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ನಟೇಶ್ ಹಾಗೂ ಹೊಸದಾಗಿ ದೈಹಿಕ ಶಿಕ್ಷಣ ಪರೀಕ್ಷಕರಾಗಿ ಆಗಮಿಸಿದ ಶ್ರೀಮತಿ ಸರಸ್ವತಿ ಜೂಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಮತ್ತು ತಾಲೂಕ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ, ಕಾರ್ಯದರ್ಶಿಗಳಾದ ಬಿ.ಆರ್. ಜೋಷಿ, ಎನ್.ಜಿ.ಒ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಅಧ್ಯಕ್ಷರಾದ ಗ್ರೇಡ್-೧ ಸಂಘದ ಅಧ್ಯಕ್ಷರಾದ ಬಸವರಾಜ್ ವೆಂಕಟಗಿರಿ, ಪ್ರಾಥಮಿಕ ಶಾಲೆಯ ಗ್ರೇಡ್-೨ ಸಂಘದ ಅಧ್ಯಕ್ಷರಾದ ಶಿವಕಾಂತ ತಳವಾರ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಯಂಕಪ್ಪ ತಳವಾರ್, ಜಿಲ್ಲಾ ಕಾರ್ಯದರ್ಶಿ ಟಿ. ನಾಗರಾಜ್, ಕಾರಟಗಿ ತಾಲೂಕ ಪ್ರಾ.ಶಾ.ಶಿ ಸಂಘದ ಅಧ್ಯಕ್ಷರಾದ ವಿಠ್ಠಲ್ ಜಿರಗಾಳಿ, ನಾಗಪ್ಪ, ರವಿ ನಾಯಕ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಜಯಶ್ರೀ ಸೇರಿದಂತೆ ಸುಮಾರು ಪ್ರಾಥಮಿಕ, ಪ್ರೌಢಶಾಲೆಯ ೭೦ ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರಿಗೆ ೧೭ ವರ್ಷದೊಳಗಿನ ಪ್ರೌಢಶಾಲೆಯ ಬಾಲಕ ಬಾಲಕಿಯರಿಗೆ ಇರುವ ಆಟೋಟಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹಾಗೂ ಸ.ಮಾ.ಹಿ.ಪ್ರಾ ಆನೆಗುಂದಿ ದೈಹಿಕ ಶಿಕ್ಷಕರಾದ ಶಿವಕಾಂತ್ ತಳವಾರ್ ಇವರು ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ಸ್ ಸ್ವಂತ ಹಣದಿಂದ ನೀಡಿದರು. ಇವರಿಗೆ ಎಲ್ಲಾ ಸಂಘಗಳ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.
ಮಾಹಿತಿಗಾಗಿ:
ಯಂಕಪ್ಪ ತಳವಾರ
ತಾಲೂಕ ಘಟಕದ ಅಧ್ಯಕ್ಷರು,
ದೈಹಿಕ ಶಿಕ್ಷಕರ ಸಂಘ
 ಮೊ.ನಂ: ೯೪೪೯೯೨೦೦೯೪
ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯ ಫಲಿತಾಂಶ

ಗಂಗಾವತಿ : ಇತ್ತೀಚೆಗೆ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅದರಲ್ಲಿ, ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ಕುಮಾರಿ ಸಹಸ್ರ.ಹೆಚ್, ಕುಮಾರಿ ರೋಜಾ ಮತ್ತು ಖುಷಿತ್ ಆರಾಧ್ಯ. ಈ ೦೩ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಗಂಗಾವತಿ ನಗರಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

ಈ ಫಲಿತಾಂಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಒಡೆಯರ್ ಮತ್ತು ಆಡಳಿತಾಧಿಕಾರಿ ಬಿ.ಎಸ್ ಪ್ರಕಾಶ ಅವರಿಗೆ ಅಮೇಜಿಂಗ್ ಕೋಚ್ ಮೆಡಲ್‌ನ್ನು ಪ್ರಧಾನ ಮಾಡಲಾಗಿದೆ.

ವಿದ್ಯಾರ್ಥಿಗಳ ಈ ಯಶಸ್ಸಿಗೆ ಕಾರಣೀಕರ್ತರಾದ ಪಾಲಕರಿಗೂ, ಶಿಕ್ಷಕ ವೃಂದದವರಿಗೂ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಯಿತು.

ಮಾಹಿತಿಗಾಗಿ
(ಶ್ರೀಮತಿ ಶೈಲಜಾ ಒಡೆಯರ್)
ಸಂಸ್ಥೆಯ ಮುಖ್ಯಸ್ಥರು,
ಮೊ.ನಂ: ೯೮೪೫೩೬೨೫೬೭

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಭರದ್ವಾಜ್

ಗಂಗಾವತಿ : ನಗರದ ಬಸ್ ನಿಲ್ದಾಣದ ಹತ್ತಿರ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಜೂನ್ ೨೫, ಬುಧವಾರದಂದು ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಜರುಗಿತು. ಸಭೆಯನ್ನು ಸಂಘದ ಕಾನೂನು ಸಲಹೆಗಾರ ಶೇಖರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಶೇಖರಗೌಡ ಪಾಟೀಲ್ ಅವರು ಸಂಘದ ಮೂಲ ಧ್ಯೇಯ ಮತ್ತು ಉದ್ದೇಶಗಳ ಕುರಿತು ಸದಸ್ಯರಿಗೆ ವಿವರವಾಗಿ ತಿಳಿಸಿದರು. ಪ್ರಸ್ತುತ ಜಿಲ್ಲೆಯಾದ್ಯಂತ ಅಂತರರಾಜ್ಯ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವಿಚಾರವನ್ನು ಹೇಳಿದರು.

ಮಹಿಳಾ ಕಾರ್ಮಿಕರಿಗೆ ನಿತ್ಯ ಎದುರಾಗುವ ತೊಂದರೆಗಳು ಮತ್ತು ಕಾರ್ಮಿಕರಿಗೆ ಅನ್ವಯಿಸುವ ಕಾಯ್ದೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಾರ್ಮಿಕರ ಬೋಗಸ್ ಕಾರ್ಡ್‌ಗಳು ಕಂಡುಬಂದರೆ ತಕ್ಷಣವೇ ಸಂಘ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭ ಮೃತ ಕಾರ್ಮಿಕ ಸೋಮಪ್ಪ ಬುನಾದಿ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾಧ್ಯಕ್ಷ ಭಾರಧ್ವಾಜ್ ಅವರು ಮಾತನಾಡಿ, ಇದು ನೋಂದಣಿ ಪೂರ್ವ ಸಭೆಯಾಗಿದ್ದು, ಶೀಘ್ರದಲ್ಲಿಯೇ ಸಂಘದ ಅಧಿಕೃತ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಅವರು ಮುಂದುವರಿದು, ಎಲ್ಲಾ ಸದಸ್ಯರು ಸಂಘದ ನೀತಿ-ನಿಯಮಗಳಿಗೆ ಬದ್ಧರಾಗಿ, ಸಂಘದ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.

 

(ಭರದ್ವಾಜ್)
ಗೌರವಾಧ್ಯಕ್ಷರು
ಮೊ: ೯೭೪೦೭೫೭೫೫೦

ಜಿಲ್ಲಾ ಕಾರಾಗೃಹದ ಬಂಧಿಗಳಿಗೆ ಧ್ಯಾನದ ಮೂಲಕ ಮನ ಪರಿವರ್ತನೆಗೊಳ್ಳಲು ಕರೆ: ಲಲಿತಾ ಕಂದಗಲ್

ಗಂಗಾವತಿ : ಧ್ಯಾನ, ಜ್ಞಾನ, ಸತ್ಸಂಗ, ಮತ್ತು ಸ್ವಾಧ್ಯಾಯಗಳು ಎಂತಹ ಕಠಿಣ ಮನಸುಗಳನ್ನು ಕೂಡ ಪರಿವರ್ತನೆ ಗೊಳಿಸಬಲ್ಲವು ಎಂದು ಧ್ಯಾನ ಶಿಕ್ಷಕಿ ಲಲಿತಾ ನಾರಾಯಣ ಕಂದಗಲ್ ರವರು ನುಡಿದರು.

ಅವರು ಜೂನ್-೨೨ ಭಾನುವಾರ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನಡೆದ ʼಚಿಂತನ ಮಂಥನʼ ಕಾರ್ಯಕ್ರಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಕಾರಾಗೃಹದ ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಜೈಲುವಾಸ ಶಿಕ್ಷೆಯಲ್ಲ, ಅದು  ಒಂದು ಹೊಸ ಶಿಕ್ಷಣ,” ಎಂದು ಅವರು ಹೇಳಿದರು. ಅನೇಕ ಮಹನೀಯರಾದ ನೆಹರು, ಗಾಂಧಿ, ನೆಲ್ಸನ್ ಮಂಡೇಲಾರಂತಹ ಜೈಲುವಾಸದಲ್ಲಿದ್ದಾಗಲೇ ಆ ಸಂದರ್ಭವನ್ನು ಅಧ್ಯಯನಕ್ಕಾಗಿ, ಬರವಣಿಗೆಗಾಗಿ ಬಳಸಿಕೊಂಡು ಜೈಲುವಾಸವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.

ಅದೇ ರೀತಿ ನೀವು ಕೂಡ ಧ್ಯಾನ, ಅಧ್ಯಯನದಲ್ಲಿ ತೊಡಗಿ ಪರಿವರ್ತನೆಗೆ ಮುಂದಾಗಿ ಎಂದು ನುಡಿದರು. ಕಾರಾಗೃಹದಂತ ಸ್ಥಳಗಳಲ್ಲಿ ಚಿಂತನ ಮಂಥನದಂತಹ ಅತ್ಯುತ್ತಮ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಾಗೃಹ ಅಧ್ಯಕ್ಷಕರನ್ನು ಮತ್ತು ಅಲ್ಲಿನ ಸಿಬ್ಬಂದಿಗಳನ್ನು ತುಂಬು ಹೃದಯದಿಂದ ಅಭಿನಂದಿಸಿದರು.

ವಿಶೇಷ ಆಹ್ವಾನಿತರಾದ ಡಾ. ನಾರಾಯಣ ಕಂದಗಲ್ ರವರು ಬಂಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪಶ್ಚಾತಾಪಕ್ಕಿಂತ ಮಿಗಿಲಾದ ಪರಿವರ್ತನೆ ಮತ್ತೊಂದಿಲ್ಲ. ನಿಮ್ಮೊಳಗಿನ ಅರಿವೇ ನಿಮಗೆ ಗುರು. ನೀವು ಈ ಕ್ಷಣದಲ್ಲಿಯೇ ಪರಿವರ್ತನೆಗೊಳ್ಳಲು ಸಾಧ್ಯವಿದೆ. ಅದಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ನುಡಿದರು.

ಜೈಲಿನ ಬಂಧಿಯೊಬ್ಬರು ಇಂತಹ ಧ್ಯಾನ, ಸತ್ಸಂಗದಂತಹ ಸಂಗತಿ ನನಗೆ ಮೊದಲೇ ತಿಳಿದಿದ್ದರೆ ಬಹುಶಃ ನಾನು ಈ ಸ್ಥಳಕ್ಕೆ ಬರುತ್ತಿರಲಿಲ್ಲವೇನೊ ಎಂದು ಭಾವುಕರಾಗಿ ನುಡಿದರು.

ಕೊಪ್ಪಳ ಜಿಲ್ಲಾ ಕಾರಾಗೃಹದ ಅಧ್ಯಕ್ಷಕರಾದ ಅಂಬರೀಶ್ ಪೂಜಾರ್ ರವರು ಅಧ್ಯಕ್ಷತೆ ವಹಿಸಿ ಧ್ಯಾನ ಶಿಕ್ಷಕರ ಸಲಹೆಗಳನ್ನು ಗಂಭೀರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಮಾನಸಿಕ ಆಪ್ತ ಸಮಾಲೋಚಕರಾದ ಏ. ಕೆ. ಹಾವೋಜಿ ಅವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಜೈಲಿನ ಸಿಬ್ಬಂದಿ ರಾಥೋಡ್ ರವರು ಪ್ರಾರ್ಥನೆ ಮಾಡಿದರು.

ಜೈಲರ್ ಶ್ರೀರಾಮುಲು, ಸಹಾಯಕ ಜೈಲರ್ ಎಲ್. ಎಸ್. ತಿಪ್ಪೇಸ್ವಾಮಿ ಹಾಗೂ ಜೈಲಿನ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

 

ಮಾಹಿತಿಗಾಗಿ
ಶ್ರೀಮತಿ ಲಲಿತಾ ನಾರಾಯಣ ಕಂದಗಲ್
ಧ್ಯಾನ ಶಿಕ್ಷಕರು, ಗಂಗಾವತಿ.
ಮೊ ನಂ: ೯೪೮೦೭೭೨೩೩೨

ಮಕ್ಕಳ ಕವಿತೆಗಳ ಗುಬ್ಬಿ ಗೂಡು ಗೊರೂರು ಅನಂತರಾಜು, ಹಾಸನ.

ಹಾಸನದ ಕವಯಿತ್ರಿ ಶ್ರೀವಿಜಯ ಅವರ ಗುಬ್ಬಿಗೂಡು ಮಕ್ಕಳ ಕವನ ಸಂಕಲನದಲ್ಲಿ 57 ಕವಿತೆಗಳಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಬಳಿಕವೂ ಮಕ್ಕಳ ಒಡನಾಟದಲ್ಲಿದ್ದು ಪಾಠ ಮಾಡುವಾಗಿನ ಶಾಲಾ ಪಠ್ಯಗಳ ಪದ್ಯಗಳು ಇವರ ನೆನಪಿನಾಳದಲ್ಲಿ ಪ್ರಭಾವ ಬೀರಿ ಆ ದಿಶೆಯಲ್ಲಿ, ಕೆಲವು ಶಿಶುಗೀತೆಗಳು ರಚನೆಗೊಂಡಿವೆ.

“ಹಗಲಲ್ಲಿ ಸೂರ್ಯನ, ಇರುಳಲಿ ಚಂದ್ರನ ಇಟ್ಟವನಾರಮ್ಮ, ಕಪ್ಪನೆ ಮುಗಿಲಲಿ ಹನಿ ಹನಿ ಮಳೆಯೂ ಇಟ್ಟವನಾರಮ್ಮ….” ಎಂಬ ಸಾಲುಗಳ ಮೂಲಕ ತಾಯಿ-ಮಗು ಸಂಭಾಷಣೆಯ ಕಲ್ಪನೆ ಮೂಡಿಸಿ, ಕಲಾತ್ಮಕ ಭಾವವನ್ನೂ ತೋರಿಸಿದ್ದಾರೆ.

ಮಗುವಿನ ಮುಗ್ದ ಪ್ರಶ್ನೆಗಳಿಗೆ ತಾಯಿಯ ಜಾಣ್ಮಿಯ ಉತ್ತರ ಸರಳ ಸಾಲುಗಳಲ್ಲಿ ರಚಿಸುವುದು ಮೇಲ್ನೋಟಕ್ಕೆ ಸುಲಭವೆಂದುಕೊಂಡರೂ, ಪ್ರಾಸಬದ್ದತೆಯಲ್ಲಿನ ರಚನೆ ಅಷ್ಟೇ ಪ್ರಾಸವೂ ಹೌದು. ಶಿಶು ಕಾವ್ಯ ರಚನೆಗೆ ಪದಕೌಶಲ್ಯವೂ ಬೇಕು. ಮಗು ಕೇಳುವ ಜಗದ ಕೌತುಕದ ಪ್ರಶ್ನೆಗೆ ತಾಯಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾಳೆ.

“ಹೂವಿಂದ ಹೂವಿಗೆ ಹಾರುವ
ಚಿಟ್ಟೆಗೆ ಬಣ್ಣ ಬಳಿದವನಾರಮ್ಮ
ತಾಯಿಯ ಹೃದಯದಿ ಮಮತೆ
ಪ್ರೀತಿಯ ಇಟ್ಟವನಾರಮ್ಮ”

“ರಾತ್ರಿ ಆಕಾಶ ತೋರಿಸಿ ಮನೆಯ ಮಹಡಿಯಲ್ಲಿ ತುತ್ತು ತಿನಿಸುತ್ತಿರುವ ತಾಯಿ ಮಗುವಿನ ಪ್ರಶ್ನೆಗಳ ಸರಮಾಲೆಗೆ ತತ್ತರಿಸಿ ಉತ್ತರದ ಹುಡುಕಾಟದಲ್ಲಿ ಆಕಾಶ ನೋಡಿದ್ದಾಳೆ ಪಾಪ”. ಇನ್ನು, ನಮ್ಮ ಮನೆಯಲ್ಲೊಂದು ಪುಟ್ಟ ಪಾಪವಿರುವುದು ಎಂಬ ಶಿಶು ಕಾವ್ಯ ನೆನಪಿಸುತ್ತದೆ ಈ ಪದ್ಯದ ಸಾಲು

“ನಮ್ಮ ಮನೆಗೆ ಒಂದು ಪುಟ್ಟ ಪಾಪು ಬಂದಿತು.
ಎತ್ತಿಕೊಳ್ಳಲು ಹೋದರೆ ಅಮ್ಮ ಬಂದು ತಡೆದಳು
ಪ್ರೀತಿಯಿಂದ ಪಾಪು ಅಪ್ಪಿ
ಮುತ್ತು ಕೊಟ್ಟಳು”

ಇನ್ನೂ ನೀನ್ಯಾರಿಗಾದೆಯೋ ಎಲೆ ಮಾನವ.. ಎಂಬ ಗೋವಿನ ಹಾಡಿನ ಮಾದರಿಯ ಈ ಪದ್ಯದಲ್ಲಿ ಪರಿಸರ ಕಾಳಜಿಯಿದೆ.

ಮರ ನಾನು ಹೆಮ್ಮರ
ನಾನೆಂದೂ ಅಮರ
ನೀನಾರಿಗಾದೆಯೋ ಪಾಮರ..

ಈಗ ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೊರಡಬೇಕಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮೇಡಂ ಬನ್ನಿ ಮಕ್ಕಳೇ ಶಾಲೆಗೆ
ಎಂದು ಕಿರು ಪದ್ಯದಲ್ಲಿ ಕರೆ ನೀಡುತ್ತಾರೆ

“ರಜೆಯು ಮುಗಿಯಿತು
ಶಾಲೆ ತೆರೆಯಿತು
ಬನ್ನಿ ಮಕ್ಕಳೆ ಶಾಲೆಗೆ
ಶಾಲೆ ನಮ್ಮ ದೇಗುಲ
ಗುರುಗಳು ನಮ್ಮ ದೇವರು..”

ನಾವು ಬಾಲ್ಯದಲ್ಲಿ ಕಂಡ ನಮ್ಮ ಹಂಚಿನ ಮನೆಯ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡನ್ನು ಇಂದು ಕಾಣುವುದು ಅಪರೂಪ.

“ನಮ್ಮ ಮನೆಯ ಸೂರಿನಲ್ಲಿ
ಗುಬ್ಬಿ ಗೂಡು ಕಟ್ಟಿತು
ಪುಟ್ಟ ಪುಟ್ಟ ಮರಿಗಳೊಡನೆ
ಅಲ್ಲಿ ವಾಸ ಮಾಡಿತು”

ಗಾಳಕ್ಕೆ ಸಿಕ್ಕ ಮೀನೊಂದು ಬೇಟೆಗಾರನಲ್ಲಿ ತನ್ನ ಪ್ರಾಣ ಭಿಕ್ಷೆ ಬೇಡುವುದು ಮರುಕ ಹುಟ್ಟಿಸುತ್ತದೆ.

ಒಂದು ದಿನ ಸಂಜೆ ನಾನು
ಗಾಳ ಹಾಕಿ ಹಿಡಿದೆ ಮೀನು
ದೀನವಾಗಿ ನನ್ನ ನೋಡಿ
ಪ್ರಾಣ ಭಿಕ್ಷೆ ಬೇಡಿತು

ಇನ್ನೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ಮಜವೇ ಬೇರೆ. ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವುದೇ ಮಜ. ಹಳ್ಳಿಯ ಗಿಡ, ಮರ, ಕೆರೆ, ಬಯಲು ಅಜ್ಜನ ತೋಟದ ಮನೆ ಮಧ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆ ತಾನೇ ಖುಷಿ ನೀಡುವುದಿಲ್ಲ.

ತೋಟದ ನಡುವೆ ಕಟ್ಟಿದ ಮನೆಯಿದು
ಸುತ್ತಲೂ ಮೇಯುವ ಹಸುಕರು
ಕೇಳುವರಾರು ನಮಗಿಲ್ಲಿ

ಗೊರೂರು ಅನಂತರಾಜು
ಹಾಸನ
ಮೊ: 9449462879