ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..! ಗೊರೂರು ಅನಂತರಾಜು, ಹಾಸನ.

ಎಸ್.‌ ಎಸ್.‌ ಪಡಶೆಟ್ಟಿ: ಹಾಸ್ಯ ದರ್ಶನದ ಪರಿಚಯ : ಹಾಸ್ಯ ಬರಹಗಳಿಗೆ ಪ್ರಸಿದ್ಧರಾದ. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರಾಗಿದ್ದು, ಹಾಸ್ಯ ದರ್ಶನ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಅವರೊಂದಿಗೆ ಅವರು ಬೆಂಗ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರು ನಗರದ ಹಲವೆಡೆ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲೇಖಕರ ನೆನಪುಗಳು ಮತ್ತು ಹಾಸ್ಯ ಪ್ರಯಾಣ : ಗೊರೂರಿನಲ್ಲಿ ಎಡಿಟರ್ ಆಗಿದ್ದ ರಾವ್‌ ಅವರ ಜೊತೆ ಲೇಖಕರು ಶಾಲಾ-ಕಾಲೇಜುಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾವ್ ಬೆಂಗಳೂರಿಗೆ ತೆರಳಿದ ನಂತರ ಈ ಜೊತೆಯ ಹಾಸ್ಯ ಕಾರ್ಯಕ್ರಮ ನಿಂತಿತು, ಆದರೆ ಪಡಶೆಟ್ಟರೊಂದಿಗೆ ಹಾಸ್ಯ ಕಾರ್ಯಕ್ರಮ ಮುಂದುವರಿಯಿತು. ಈ ಲೇಖನದಲ್ಲಿ ಲೇಖಕರು ತಮ್ಮ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ತೋಡಿಹಾಕಿದ್ದಾರೆ.

ಹಾಸ್ಯ ನೆನಪಿನ ಗುರುತು : ಬಾಲ್ಯದ ಅನುಭವ : ೨ನೇ ತರಗತಿಯಲ್ಲಿ ಓದುತ್ತಿದ್ದಾಗ ೧೦೬ ವರ್ಷ ಆಗಿರುವ ಅವರ ಊರಿನ ಗೌಡರ ತಂದೆ ತೀರಿಕೊಂಡರು. ಸುತ್ತ ಹಳ್ಳಿಗೆಲ್ಲಾ ಪ್ರಸಿದ್ಧರು. ಸಾವಿರಾರು ಜನ ಸೇರಿದ್ದರು. ಲೇಖಕರ ತಾಯಿಯು ನೋಡಲು ಹೊರಟಾಗ ಬಾಲಕನು ಹಿಂಬಾಲಿಸುತ್ತಾನೆ. ಅಲ್ಲಿ ತೀರಿಕೊಂಡ ಗೌಡರ ಶವದ ಮುಂದೆ ಕರೆಸಿಕೊಂಡ ಬಾಡಿಗೆ ಹೆಂಗಸರು ಅತ್ತು ಕರೆದು ಈ ಗೌಡರು ಹೇಗಿದ್ರು? ಹಾಗಿದ್ರು..ಹೀಗೆಲ್ಲಾ ಹಾಡಾಡಿ ಹೊಗಳಿ ಕೂಗಿ ಆ ಕೃತಕ ನಟನೆಗೆ ಬಾಲಕ ನಗುತ್ತಾನೆ. ಆಗ, ತಾಯಿ ಹೊಡೆಯಲು ಬಾಲಕ ಅಳತೊಡಗುತ್ತಾನೆ. ಆಗ ಒಂದು ಹೆಂಗಸು ಬಾಲಕನ ಕಡೆ ಬಂದು ‘ಏ ಕೂಸಾ ನೀನ್ಯಾಕೆ ಅಳ್ತೀಯಪ್ಪ, ಗೌಡರಂತು ಹೋಗಿಬಿಟ್ಟರು ಅಳಬೇಡ ಕಂದಾʼ ಎಂದು ಕೆನ್ನೆ ಸವರುತ್ತಾಳೆ…

ಶೈಕ್ಷಣಿಕ ಸೇವೆ ಮತ್ತು ನೆನಪಿನ ತಿರುವು : ಎಸ್.‌ ಎಸ್.‌ ಪಡಶೆಟ್ಟರು ಬೆಂಗಳೂರಿನ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ೩೨ ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿದ್ದೆ, ಅವರ ಪುಸ್ತಕ ಓದುತ್ತಾ ಮಧ್ಯೆ ಅವರಿಗೆ ಫೋನ್ ಮಾಡಿ ಎಲ್ಲಿದ್ದಿರಾ ಸರ್? ಎಂದೆ. ಗ್ರಂಥಾಲಯದಲ್ಲಿ ಇರುವುದಾಗಿ ಪಿಸುಧ್ವನಿಯಲ್ಲಿ ಹೇಳಿದರು. ಸೈಲೆಂಟ್ ಆಗಿ, ಆನಂತರ ಅವರೇ ಫೋನ್ ಮಾಡಿದರು. ಈಗೆಲ್ಲೂ ಹಾಸ್ಯ ಕಾರ್ಯಕ್ರಮ ನೀಡುತ್ತಿಲ್ಲವೇ?  ಎಂದು ಕೇಳಿದೆ. ನನಗೆ ಈಗ ವಯಸ್ಸು ೮೦ ಎಂದರು. ನಾನು ಈ ಹಿಂದೆ ಹಾಸನದಲ್ಲಿ ಶಾರದ ಕಲಾಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಇವರ ಹಾಸ್ಯ ಭಾಷಣಕ್ಕೆ ಅವಕಾಶ ಒದಗಿಸಿದ್ದೆ. ಜನರಿಗೆ ಶ್ರೀ ಕೃಷ್ಣ ಸಂಧಾನ ನಾಟಕ ನೋಡುವ ತರಾತುರಿ. ಹಾಗಾಗಿ ಇವರಿಗೆ ಹೆಚ್ಚು ಸಮಯಾವಕಾಶ ಸಿಗಲಿಲ್ಲ. ಪಾಪ, ಅಷ್ಟು ದೂರ (ಬೆಂಗಳೂರು) ಉತ್ಸಾಹದಿಂದ ಬಂದವರಿಗೆ ನಿರುತ್ಸಾಹ ಮಾಡಿಬಿಟ್ಟೆನಲ್ಲ ಎಂದು ಪೇಚಾಡಿಕೊಂಡೆ. ಸರ್, ನಿಮ್ಮ ಹಾಸ್ಯ ಕಾರ್ಯಕ್ರಮ ಬೇರೆಯೇ ಏರ‍್ಪಡಿಸಬೇಕು. ಹಾಡು, ಡ್ಯಾನ್ಸ್, ನಾಟಕ ನಡುವೆ ನಿಮ್ಮ ಹಾಸ್ಯ ಪ್ರೇಕ್ಷಕರಿಗೆ ತಲುಪಲಿಲ್ಲ ಎಂದೆ. ಛೇ ಛೇ ಹಾಗೆಂದುಕೊಳ್ಳಬೇಡಿ ಗೊರೂರು ಅನಂತರಾಜು. ನನಗೆ ಇಂತಹ ಭವ್ಯ ವೇದಿಕೆ ಒದಗಿಸಿಕೊಟ್ಟರಲ್ಲಾ ಅದೇ ದೊಡ್ಡದು ಎಂದರು. ಅದು ಅವರ ದೊಡ್ಡ ಗುಣ. ಅವರು ಅಂದು ಕೊಟ್ಟ ಪುಸ್ತಕ ಇಂದು ಓದಿದೆ. ಇದರಲ್ಲಿನ ಮೊದಲ ಲೇಖನ ನಮ್ಮೂರಿನ ಎರಡು ನಾಟಕಗಳು.
ನಮ್ಮೂರಿನಲ್ಲಿ ರೈತರು ಬಿಡುವಾಗಿರುವ ಸಮಯ ಬೇಸಿಗೆಯ ಕಾಲದಲ್ಲಿ ಬಹಳ ಉತ್ಸಾಹದಿಂದ ನಾಟಕ ಮಾಡಿ ರೈತ ಬಾಂಧವರು ಸಾಕಷ್ಟು ಸಂತೋಷಪಟ್ಟಿದ್ದಾರೆ.

ನಾಟಕ ಅನುಭವ: ದ್ರೌಪದಿ ವಸ್ತ್ರಾಭರಣ ಪ್ರಸಂಗ: ನಮ್ಮೂರಿನ ಗಿರಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತನು ಒಪ್ಪಿ ಹೋಗಿದ್ದನು. ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ. ನಾಟಕಕಾರ ನಿಂಗಣ್ಣ ದುಶ್ಯಾಸನ ಪಾತ್ರ ವಹಿಸಿದ್ದ, “ಪರಮಾನಂದೇಶ್ವರ ಯುವಕ ನಾಟಕ ಮಂಡಳಿ” ಎಂದು ಹೆಸರನ್ನಿಟ್ಟು ಸುತ್ತಲು ಹಳ್ಳಿಗಳಿಗೆಲ್ಲಾ ಪ್ರಚಾರ ಮಾಡಲಾಯಿತು. ನಾಟಕ ರಾತ್ರಿ ೧೦.೩೦ಕ್ಕೆ ಪ್ರಾರಂಭವಾಯಿತು. ಊರ ಹೊರಗೆ ಹನುಮದೇವರ ದೇವಸ್ಥಾನ ಮುಂಭಾಗ ನಾಟಕದ ಸ್ಟೇಜ್ ಮೇಲೆ ಶ್ರೀಕೃಷ್ಣ ಕುಳಿತು ಅಲ್ಲಿಂದಲೇ ಸೀರೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಕಾಶಿರಾಮ ತೆಳ್ಳನೆಯ ಏಳು ಸೀರೆಗಳನ್ನು ಉಟ್ಟುಕೊಂಡಿದ್ದ. ಪಾತ್ರದಾರಿಗಳ ನಟನೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ಒನ್ಸ್ ಮೋರ್ ಬದಲು ಮನಸ್ ಮೋರ್ ಎನ್ನುತ್ತಾರೆ. ಈಗ ದ್ರೌಪದಿ ವಸ್ತ್ರಾಭರಣ ಪ್ರಸಂಗ. ದುಃಖಪ್ರಾಪ್ತಳಾದ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ನಾಟಕಕಾರ ನಿಂಗಣ್ಣ ನಿಧಾನವಾಗಿ ಸೀರೆ ಸೆಳೆಯುವುದನ್ನು ಬಿಟ್ಟು ತುಂಬಾ ಜೋರಾಗಿ ಸೆಳೆಯುಲು ಪ್ರಾರಂಭಿಸಿದ. ಆಗ ಕಾಶಿರಾಮ ‘ಏ ನಿಂಗಣ್ಣ ನಿಧಾನವಾಗಿ ನನ್ನ ಸೀರೆ ಸೆಳೆ ?  ಎನ್ನುತ್ತಾನೆ. ಅವನು ಸಣ್ಣ ಧ್ವನಿಯಲ್ಲಿ ಹೇಳಿದ್ದು, ನಿಂಗಣ್ಣನಿಗೆ ಕೇಳಿಸಲಿಲ್ಲ. ಅದು ಯಾವ ಸ್ಫಿರಿಟ್ ಬಂದಿತ್ತೊ ನಿಂಗಣ್ಣ ಆರು ಸೀರೆ ಸೆಳೆದ. ಕೊನೆಯ ಸೀರೆ ಉಳಿದುಕೊಂಡಿದೆ. ಜೋರಾಗಿ ಎಳೆಯುತ್ತಿದ್ದಾನೆ. ಕಾಶಿರಾಮ ಸೀರೆಯ ಕೊನೆಯ ತುದಿ ಬಿಗಿಯಾಗಿ ಹಿಡಿದುಕೊಂಡು ಮೇಲಕ್ಕೆ ನೋಡಿ ಅಣ್ಣ ಕೃಷ್ಣ ನನ್ನ ಮಾನ ಕಾಪಾಡು.. ಆದರೆ ಅಷ್ಟರಲ್ಲಿ ನಿಂಗಣ್ಣ ಪೂರ್ತಿ ಸೀರೆ ಸೆಳೆದು ದ್ರೌಪದಿ ಅಂಡರ್ ವೇರ್ ಬನಿಯನ್ ಮೇಲೆ ನಿಂತ.. ಸದ್ಯ ಪ್ರೇಕ್ಷಕರು ಒನ್ಸ್ ಮೋರ್ ಎನ್ನಲಿಲ್ಲ ಅಷ್ಟೇ.

ಶಿಕ್ಷಕನ ವೃತ್ತಿ ಜೀವನ ಮತ್ತು ಕನಸಿನ ವ್ಯಾಕುಲತೆ: ಕನ್ನಡ ಅಧ್ಯಾಪಕರಾಗಿದ್ದ ಲೇಖಕರು ಹತ್ತನೇ ತರಗತಿ ಮಕ್ಕಳಿಗೆ ರನ್ನನ ಗದಾಯುದ್ದ ಪಾಠ ಮಾಡುತ್ತಿದ್ದರು. ವೈಶಂಪಾಯನ ಸನ್ನಿವೇಶದಲ್ಲಿ, ಭೀಮ ಅಲ್ಲಿಗೆ ಬಂದು ಅವಿತು ಕುಳಿತುಕೊಂಡ ದುರ್ಯೋಧನನ್ನು ಸರೋವರದಿಂದ ಹೊರಗೆ ಬರಲು ‘ಈ ಭೂತು ಎನ್ನ ಸರಂಗೇಳ್ದೊಲ್ಲದೆ ಪೊರ ಮಡುವನಲ್ಲಂ.. ಎಂದು ಗಡುಸಾಗಿ ಹೇಳುವುದನ್ನು ಹತ್ತಾರು ಸಲ ಓದಿ ಮನನ ಮಾಡಿಕೊಂಡು ರಾತ್ರಿನಿದ್ರೆಯಲ್ಲಿ  ಪುನರುಚ್ಚರಿಸಿ ಪಕ್ಕದಲ್ಲಿ ಮಲಗಿದ್ದ ಹೆಂಡತಿ ಬೆನ್ನಿಗೆ ಗುದ್ದುತ್ತಾರೆ. ‘ಅಯ್ಯೋಯ್ಯಪ್ಪೊ..ಎಂದು ಹೆಂಡತಿ ಚೀರಿ ನಿದ್ರೆಯಿಂದ ಎಚ್ಚರವಾಗಿ ಸಾರಿ ಮಿಸ್..ಎನ್ನುತ್ತಾರೆ.

ಇನ್ನೊಂದು ಸಲ ರಾಘವಾಂಕನ ಹರಿಶ್ಚಂದ್ರ ಕಾವ್ಯ ಪಾಠ ಮಾಡಬೇಕಾಗಿತ್ತು. ಅದು ಚಂದ್ರಮತಿಯ ಪ್ರಲಾಪ. ಲೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸಾವಿಗೀಡಾದ ಸನ್ನಿವೇಶ. ಚಂದ್ರಮತಿ ಮಗುವಿನ ಬಳಿಯಲ್ಲಿ ಬಂದು ‘ಏವನೇವಲೆ ಮಗನೆ ಸಾವೇಕಾಯಿತ್ತಲೆ ಚೆನ್ನಿಗನೆ..ಎಂದು ರೋಧಿಸಿ ಅಳುವ ಪ್ರಸಂಗ. ಮಕ್ಕಳಿಗೆ ನೈಜ ಪಾಠ ಮಾಡಲು ರಾತ್ರಿಯೇ ತಾಲೀಮು ಮಾಡಿ ಮಲಗಿ ರಾತ್ರಿ ನಿದ್ರೆಯಲ್ಲಿ ರೋಧಿಸಿ ಅಳಲು ಗಾಬರಿಯಿಂದ ಎಚ್ಚರಗೊಂಡ ಮಡದಿ ಇಂಥ ಸರಿರಾತ್ರಿ ಏಕೆ ಅಳುತ್ತಿರುವಿರಿ ಡಿಯರ್..ಎನ್ನಲು ‘ಸಾರಿ ಚಂದ್ರಮ.. ಎಂದು ಕನಸಿನಲ್ಲಿ ಕನವರಿಸುತ್ತಾರೆ.
ಮತ್ತೊಮ್ಮೆ ಹಾಸ್ಯ ಸಾಹಿತಿ ಬೀಚಿಯವರ ತಿಮ್ಮನ ತಲೆ ಪುಸ್ತಕ ಓದಿ ತಲೆಗೆ ತುಂಬಿಕೊಳ್ಳುತ್ತಾರೆ. ರಾತ್ರಿ ಮಲಗಿ ಪುಸ್ತಕದ ನಗೆ ಪ್ರಸಂಗ ನೆನೆದು ಜೋರಾಗಿ ನಗುತ್ತಾರೆ. ನಗುವಿನ ಧ್ವನಿಗೆ ಎಚ್ಚರವಾಗಿ ಹೆಂಡತಿ ‘ಏನ್ರೀ ನಿಮಗೆ ಬುದ್ಧಿಗಿದ್ಧಿ ಇದೆಯೇ. ಸುಮ್ಮ-ಸುಮ್ಮನೆ ನನಗೆ ರಾತ್ರಿ ಹೊಡೆಯುತ್ತೀರಿ, ಅಳುತ್ತೀರಿ, ನಡುರಾತ್ರಿ ನಗುತ್ತೀರಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದಾಗ ಪಡತರು ಬೆಪ್ಪುಕ್ಕಡಿ!ಶೆಟ್ಟ

ಭಾನುವಾರ ಸಂಜೆ ಅಕ್ಕಪಕ್ಕದ ಮನೆಯ ಹೆಂಗಸರು ಶೆಟ್ಟರ ಮನೆಯಲ್ಲಿ ಒಟ್ಟಿಗೆ ಸೇರಿ ತಮ್ಮ ಗಂಡಂದಿರ ಬಗೆಗೆ ಹಾಸ್ಯವಾಗಿ ಮಾತನಾಡುತ್ತಿರಲು ಹೆಂಡತಿ ಮಾತು ರೂಂನಲ್ಲಿ ಮಲಗಿದ್ದ ಶೆಟ್ಟರ ಕಿವಿಗೆ ಬಿದ್ದು, ತಲೆ ನೆಟ್ಟಗಾಗುತ್ತದೆ. ‘ನಮ್ಮನೆ ಯಜಮಾನರು ರಾತ್ರಿ ಹೊತ್ತು ಸುಮ್ಮಸುಮ್ಮನೆ ನನ್ನ ಬೆನ್ನಿಗೆ ಗುದ್ದುತ್ತಾರೆ, ಅಳುತ್ತಾರೆ, ಜೋರಾಗಿ ನಗುತ್ತಾರೆ ಹುಚ್ಚರಂತೆ ಆಡುತ್ತಾರೆ.. ಎನ್ನಲು ‘ಹಾಗಾದರೆ ನಿಮ್ಮ ಯಜಮಾನರಿಗೆ ಹುಚ್ಚು ಹಿಡಿದಿರುವುದು ಖರೆ ಎಂದು ಸಭೆ ತೀರ್ಮಾನಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಲು ಸಲಹೆ ನೀಡುತ್ತಾರೆ.

ಪತ್ನಿಯ ನಗು ಮತ್ತು ನಿಂಹಾನ್ಸ್‌ ಹಾಸ್ಯ ಕಥೆ: ಹೆಂಡತಿ ಮತ್ತು ಮಗನು ಗುಟ್ಟಾಗಿ ಹೇಳಿ ನೆಟ್ಟಗೆ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಲೇಖಕರಿಗೆ ಪರಿಚಯವಿರುವ ಡಾ.ಸಿ.ಚಂದ್ರಶೇಖರ್ ಇರುತ್ತಾರೆ. ಲೇಖಕರು ಆಗಲೇ ಹಾಸ್ಯದರ್ಶನ ಮಾಸಪತ್ರಿಕೆ ತರುತ್ತಿದ್ದು, ಪತ್ರಿಕೆಗೆ ಡಾಕ್ಟರ್ ಲೇಖನ ಬರೆದು ಪರಿಚಿತರಾಗಿದ್ದಾರೆ. ‘ಪಡಶೆಟ್ಟಿರೇ ನಿಮ್ಮ ಹಾಸ್ಯ ದರ್ಶನ ಪತ್ರಿಕೆಯಲ್ಲಿ ಬರುವ ಲೇಖನ ಚೆನ್ನಾಗಿವೆ. ನಿಮ್ಮ ಬುದ್ದಿಪೂರ್ವಕ ಸಂಪಾದಕೀಯ ತುಂಬಾ ಸ್ವಾರಸ್ಯಕರ.. ಎಂದು ಎಲ್ಲರಿಗೂ ಚಹ ತರಿಸಿ ಕಳಿಸುತ್ತಾರೆ.

ಪತ್ರಿಕೆಯ ಸ್ಥಗಿತ: ಹಾಸ್ಯದರ್ಶನ ನಿಂತ ಹಾಸ್ಯ: ಪಡಶೆಟ್ಟರು ನಡೆಸುತ್ತಿದ್ದ ಹಾಸ್ಯ ದರ್ಶನ ಮಾಸಪತ್ರಿಕೆ ೧೫ ವರ್ಷಕ್ಕೆ ನಿಂತುಹೋಯಿತು. ಹಾಸ್ಯದರ್ಶನದಲ್ಲಿ ನನ್ನ ಹಾಸ್ಯ ಲೇಖನ ಪ್ರಕಟಿಸಿ ಅದಕ್ಕೊಂದು ಕಾಮಿಡಿ ಕಾರ್ಟೂನ್ ಬರೆಸಿ ಚೆನ್ನಾಗಿ ಪತ್ರಿಕೆ ತರುತ್ತಿದ್ದರು. ಲೇಖಕರು ಕನ್ನಡ ಪುಸ್ತಕ ಮಾರಾಟ ಮಾಡುವ ಜೊತೆಗೆ ಹಾಸ್ಯ ದರ್ಶನ ಮಾರುತ್ತಾ ಬರೆದ ಈ ಪ್ರಸಂಗ ನಿಂತು ಹೋದ ಪತ್ರಿಕೆಯ ಕಾರಣ ತಮಾಷೆಯಾದರೂ ವಾಸ್ತವತೆ ಚಿತ್ರಿಸಿದೆ.

ವಿಜಯಪುರದಲ್ಲಿ ಹಾಸ್ಯ ಲೆಕ್ಕಾಚಾರ: ವಿಜಾಪುರದೊಬ್ಬರು ಟ್ರಾನ್ಸ್ ಫರ್‌ ರಾಗಿ ತೋಟಗಾರಿಕೆ ಇಲಾಖೆಗೆ ಬಂದಿದ್ದರು. ಕರಿಕೋಟು, ಕಚ್ಚೆಪಂಚೆ, ಕರಿಟೋಪಿ ಹಾಕಿಕೊಂಡು ಇಲಾಖೆಯ ಫೈಲ್ಸ್ಗಳನ್ನು ಗಮನಿಸುತ್ತಿದ್ದರು. ನಾನು ಹೋಗಿ ಅವರಿಗೆ ನಮಸ್ಕರಿಸಿದೆ. ಅವರದು ಹೆಣ್ಣು ಧ್ವನಿ. ನನ್ನ ಹೆಗಲಲಿದ್ದ ಪುಸ್ತಕ ಬ್ಯಾಗ್ ನೋಡಿ ‘ಏನಿದು ಗಂಟು.. ಎಂದರು. ‘ಸರ್ ಇದು ಪುಸ್ತಕಗಳ ಗಂಟು.. ಒಂದೊದಾಗಿ ಪುಸ್ತಕಗಳನ್ನು ಅವರೆದುರಿಗಿಟ್ಟೆ. ‘ನಿಮ್ಮದೂ ಬರೀ ಪುಸ್ತಕ ಮಾರಾಟ ಮಾಡುವುದೇ ಕಸುಬೆ. ಮತ್ತೇನಾದರೂ ಉದ್ಯೋಗ ಮಾಡ್ತೀರಾ.. ‘ಸರ್ ನಾನೊಂದು ಶಾಲೆಯಲ್ಲಿ ಕನ್ನಡ ಅಧ್ಯಾಪಕ. ಸುಮ್ಮನೆ ಬಿಡುವಿನ ವೇಳೆ ಪುಸ್ತಕ ಮಾರಾಟ ಮಾಡುತ್ತೇನೆ. ‘ವ್ಹಾ..ಶಹಬ್ಬಾಸ್.. ಅಲ್ರೀ ಮಾಸ್ತರ, ಸಾಲಿ ಮಾಸ್ತಾರಕಿ ಮಾಡ್ತೀರಾ. ಪುಸ್ತಕನು ಮರ‍್ತೀರಾ ವ್ಹಾ ತುಂಬಾ ಸಂತೋಷ..ಎಂದರು. ಅವರಿಗೆ ನಾನು ಹಾಸ್ಯ ದರ್ಶನ ಪತ್ರಿಕೆ ತೋರಿಸಿದೆ.

ಅಲ್ರೀ ಮಾಸ್ತರ, ಮಾಸ್ತರಿಕೀನು ಮಾಡ್ತೀರಾ ಪುಸ್ತಕನೂ ಮಾರ್ತಿರಾ, ಪತ್ರಿಕೇನು ತರ್ತೀರಾ ಶಹಬ್ಬಾಸ್! ನಿಮಗೆ ಮಕ್ಕಳೆಷ್ಟು..? ನನಗೆ ೪ ಜನ ಮಕ್ಕಳೆಂದೆ.
‘ಹೆಣ್ಣೇಸು ಗಂಡೇಸು..? ಮೂರು ಹೆಣ್ಣು, ಒಬ್ಬನೇ ಗಂಡು ಎಂದೆ.
‘ನೀವು ಪುಸ್ತಕ ಮರ‍್ತೀರಾ. ೩ ಜನ ಹೆಣ್ಣು ಮಕ್ಕಳಿದ್ದಾರೆಂದರೆ ವರದಕ್ಷಿಣೆ ಕೊಡಲಿಕ್ಕೆ ರೊಕ್ಕ ಬೇಕಲ್ರೀ.. ಎಂದು ನಾನು ಕೊಟ್ಟ ಹಾಸ್ಯದರ್ಶನ ಓದಲಿಕ್ಕೆ ಪ್ರಾರಂಭಿಸಿದರು. ೫-೧೦ ನಿಮಿಷ ಮೌನ. ‘ಅಲ್ರೀ ಮಾಸ್ತಾರ ಹಾಸ್ಯದರ್ಶನ ಅಂತೀರಿ ಒಂದು ನಗುವೇ ಬರಲಿಲ್ಲವಲ್ಲರೀ. ಇಂಥವೆಲ್ಲ ನನಗಿಷ್ಟವಿಲ್ರೀ..
ಒಂದಾದರೂ ಪುಸ್ತಕ ತೆಗೆದುಕೊಳ್ರೀ ಎಂದೆ.
‘ಏನ್ರೀ ಮಾಸ್ತಾರ ಒಂದು ನಗುವೇ ಬರಲಿಲ್ಲರ‍್ರೀ. ನಮ್ಮ ಮನ್ಯಾಗ ಒಂದು ಕ್ವಾಡಗ ಅದ. ನಾನು ಯಾವಾಗ ತಾಳಿ ಕಟ್ಟಿದಾಗಿನಿಂದ ಒಂದು ದಿವಸ ನಕ್ಕಿಲ್ರೀ. ನೀವು ಅವಳಿಗೆ ನಗುವ ಪುಸ್ತಕ ತಗೊಳ್ರೀ ನಾನು ರೊಕ್ಕ ಕೊಟ್ಟು ತೆಗೆದುಕೊಳ್ಳುತ್ತೇನೆ. ಮಾಸ್ತರ ಈ ಕನ್ನಡ ಪುಸ್ತಕ ಯಾರು ತಗೊಳ್ಳುತ್ತಾರೆ ಯಾರು ತೊಗಳಲ್ರೀ. ಜೋಳದ ರೊಟ್ಟಿ ತಗೊರ‍್ರೀ ದುಮ್ಮಾ ಹಾರಿ ಹೋಗ್ತಾವ್. ನಾನು ಬಿಜಾಪುರದಿಂದ ಬಂದು ನಾಲ್ಕು ತಿಂಗಳಾತು. ರೊಟ್ಟಿ ಮಾರೀನೆ ನೋಡಿಲ್ಲ. ಜೋಳದ ಸಜ್ಜಿರೊಟ್ಟಿ ತೆಗೆದುಕೊಂಡ್ರ‍, ನಿಮಗೆ ಒಳ್ಳೆಯ ವ್ಯಾಪಾರ ಆಗುತ್ತೆ. ಮಾಸ್ತಾರ ಒಂದು ವಿಷಯ ಹೇಳ್ತಿನಿ ಕೇಳ್ರೀ.. ಒಂದು ಹಾಸ್ಯ ದರ್ಶನ ಪ್ರತಿ ಕೊಂಡರೆ ಒಂದು ರೊಟ್ಟಿ ಫ್ರೀ ಎನ್ನಿರಿ, ಆಗ ನೋಡಿ ನಿಮ್ಮ ವ್ಯಾಪಾರ ದುಮ್ಮಾಹಾರಿ (ಸಿಕ್ಕಾಪಟ್ಟೆ) ನಿಮ್ಮೆಲ್ಲ ಪುಸ್ತಕ ಹೋಗುತ್ತವೆ… ಎಂದ ಆ ಮಹಾಶಯ ಕೊನೆಗೂ ಒಂದು ಪುಸ್ತಕ ತೆಗೆದುಕೊಳ್ಳುವುದಿಲ್ಲ. ಪಡಶೆಟ್ಟರು ತರುತ್ತಿದ್ದ ಹಾಸ್ಯದರ್ಶನದಲ್ಲಿ ವೈವಿಧ್ಯ ಹಾಸ್ಯ ಬರಹ ಇರುತ್ತಿದ್ದವು. ಅಂತೆಯೇ ಇಲ್ಲಿಯೂ ಇವೆ.

ಹಾಸ್ಯದರ್ಶನದ ವೈವಿಧ್ಯ:

ಗಿರಾಕಿ: ಸೆಲೂನಿನ ತುಂಬೆಲ್ಲ ಬರೀ ಪತ್ತೆದಾರಿ ಪುಸ್ತಕಗಳನ್ನಿಟ್ಟಿರುವಿರಲ್ಲ..ಏನಾದರೂ ಪತ್ರಿಕೆ ಇಡಬಾರದೇ?

ಮಾಲೀಕ: ಸ್ವಾಮಿ, ಈ ಪತ್ತೆದಾರಿ ಕಾದಂಬರಿ ಓದುತ್ತಿರುವಂತೆ ಗಿರಾಕಿಗಳಿಗೆ ರೋಮಾಂಚನವಾಗಿ ಅವರ ಕೂದಲು ಸೆಟೆದು ನಿಲ್ಲುತ್ತೆ. ಆಗ ಅದನ್ನು ಕತ್ತರಿಸಲು ನನಗೆ ಸುಲಭ.

ಶಿಕ್ಷಕ: ಸುರೇಶ, ಘಜನಿ ಮೊಹಮ್ಮದ್ ಭಾರತಕ್ಕೆ ಮೊದಲನೇ ಹೆಜ್ಜೆ ಇಟ್ಟ ಕೂಡಲೇ ಏನು ಮಾಡಿದ?
ಸುರೇಶ: ಎರಡನೇ ಹೆಜ್ಜೆ ಇಟ್ಟ.

ಆತ: ಯಾಕಿಷ್ಟು ನಗ್ತಿದಾನೆ ಆತ

ಈತ: ಅವನಿಗೆ ನಗಲಿಕ್ಕೆ ಇವತ್ತು ಕೊನೆ ದಿನ

ಆತ: ಅಂದ್ರೇ?

ಈತ: ನಾಳೆ ಆತನ ಮದುವೆ..!

 

 

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ್ ತಮ್ಮ “ಹಚ್ಚೆ ದಿನ್” ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು, ಯಾವಾಗ ಕೊಟ್ಟರೆಂಬುದೇ ಮರೆತು ಹೋಗಿತ್ತು. ಮೊನ್ನೆ ಬೆಂಗಳೂರಿಗೆ ಹೊರಟಾಗ, ನನ್ನ ಪುಸ್ತಕ ರಾಶಿಯಲ್ಲಿ ಆ ಪುಸ್ತಕವು ಬಿದ್ದಿತ್ತು.

ಅನೇಕ ಪುಸ್ತಕಗಳನ್ನು ನನ್ನ ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರುತ್ತಿದ್ದಳು. ಅದರಿಂದ ಹಣ ತೆಗೆದು ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನ ಖರೀದಿಸುತ್ತಿದ್ದಳು. ಅಲ್ಲಿ “ಹಚ್ಚೆ ದಿನ್‌” ಪುಸ್ತಕ ತೆಗೆದುಕೊಂಡು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದಲ್ಲಿ ಸಂಪೂರ್ಣ ಓದಿದೆ.

“ಹಚ್ಚೆ ದಿನ್”‌ ೩೨ ಹಾಸ್ಯ ಲೇಖನಗಳ ಸಂಕಲನ. ನಾವು ನೋಡುವ ನಿತ್ಯದ ದೃಶ್ಯ, ವಸ್ತುಗಳು ಲೇಖಕಿಯ ನಿರೂಪಣಾ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ. ಮನಸ್ಸಿಗೆ ಹೊಸ ಭಾವನೆ ತಂದಿವೆ.

ಮನುಷ್ಯನ ದೇಹಾರೋಗ್ಯದಲ್ಲಿ ನಾಲಿಗೆಯ ಪಾತ್ರ ತುಂಬಾ ಮುಖ್ಯ. ಅದನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ಹೊಟ್ಟೆಗೆ ನಷ್ಟ ಮಾಡುತ್ತದೆ. ಉದಾಹರಣೆಗೆ : ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮೂಲಕ ಹೊಟ್ಟೆಗೆ ಇಳಿದವು.ʼ

ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲಾ ಜನರನ್ನು ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನುತ್ತಾನೆ. ಹಾಗೆ, ಹೊಟ್ಟೆ ಪೂರಿಗಳನ್ನು ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲುತ್ತದೆ.

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” ಎಂಬಂತೆ, ನಾಲಿಗೆಯ ತಪ್ಪಿಗೆ ಹೊಟ್ಟೆ ಶಿಕ್ಷೆ ಅನುಭವಿಸುತ್ತದೆ. ಲೇಖಕಿ ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರದ ಜೀರ್ಣ ಕ್ರಿಯೆ ಬಹಳ ಸಣ್ಣ ವಿಷಯವಲ್ಲ. ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗ್ಯಾಸ್ ಪ್ರತ್ಯಕ್ಷವಾಗಿ ಹೊಟ್ಟೆಕಿಚ್ಚು ಉಂಟುಮಾಡುತ್ತದೆ. ಡಿವಿಜಿಯವರ ಕಗ್ಗದ ಸಾಲುಗಳ ಮೂಲಕ ಅದನ್ನು ವಿಶ್ಲೇಷಿಸಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವು ಮಸಾಲೆ ಮಿಶ್ರಿತ ಆಹಾರವನ್ನು ಎರಡು ವಿಭಾಗಗಳಲ್ಲಿ ಪ್ರಕ್ರಿಯೆಗೊಳಿಸುತ್ತವೆ. ಸೀನಿಯರ್ ಮತ್ತು ಜೂನಿಯರ್ ಕರುಳಿನಲ್ಲಿ ಅದರ ಶುದ್ಧ ಅಂಶ ಬೇರ್ಪಡಿಸುತ್ತವೆ.

ಆಹಾರದ ಸ್ಕ್ರಾಪ್‌ ಭಾಗವನ್ನು ನಗರಸಭೆಯ ವಿಲೇವಾರಿಗೆ ಹಸಿಕಸ, ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪಡಿಸಿ ದೇಹದೊಳಗಿನ ಆಯಾ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯೇ ವಿಚಿತ್ರ. ವಿಷಯನ್ನು ಹಾಸ್ಯ ರೀತಿಯಲ್ಲಿ ನಿರೂಪಿಸುವಾಗ ನಗು ತಡೆಸಲಾಗದು. ಇದು ಲೇಖಕಿಯ ಶೈಲಿ ಹಾಗೂ ಶಕ್ತಿಯನ್ನು ಬಿಂಬಿಸುತ್ತದೆ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಪಡೆಯಲು ರೇಡಿಯೋ ಅಥವಾ ಪತ್ರಿಕೆಗಳಿಗೆ ನಂಬಿಕೆಯಿಟ್ಟಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್‌ ಪೌಡರ್ ನಿರ್ಮಾ. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು.

“ಹಚ್ಚೇವು ನೊರೆ ನೊರೆಯ ಸೋಪು..” ಎಂಬ ಶೀರ್ಷಿಕೆಯ ಲೇಖನ ಹಾಸ್ಯದಲ್ಲಿ ಹಾಸ್ಯ, ಭಾಷೆಯಲ್ಲಿ ಕ್ರಿಯಾಶೀಲತೆ ಹಾಗೂ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪೂರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ….ನಿನ್ನಿಂದಲೇ….ಕನಸೊಂದು ಶುರುವಾಗಿದೆ… ಎಂಬ ಸುಂದರ ಹಿಮ್ಮೇಳದೊಂದಿಗೆ, ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಮನೆ ಮನೆಗೆ ಬಂದು ನಿಲ್ಲತೊಡಗಿದವು.

ತಡವಾಗಿ ಎದ್ದವರು ಗಾಡಿ ಮುಂದೆ ಕಸ ಹಾಕಲು ಬೇಸರ ಪಡುತ್ತಾರೆ. ನಂತರ ಖಾಲಿ ಸೈಟ್‌ ನಲ್ಲಿ ಕಸ ಬಿಸಾಡುವ ಅಸಂಸ್ಕೃತತೆಗೆ ಇಳಿಯುತ್ತಾರೆ. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

ಪಾರ್ಕ್, ಫುಟ್‌ಪಾತ್ ಎಲ್ಲೆಡೆ ತ್ಯಾಜ್ಯ ತುಂಬಿ ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ.

ಬಾಲ್ಯದ ದಿನಗಳ ನೆನಪಿನಲ್ಲಿ ಲೇಖಕಿ ಮನೆ ಮುಂಭಾಗದ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣು ರಸ್ತೆಯ ಮಧ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು.

ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ, ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು.

ಅಪ್ಪನೇ ಪೈಪ್‌ ಕ್ಲೀನ್ ಮಾಡಿ, ಗೊಡ್ಡೆ ಹೊತ್ತರೆಂದು ಕೊನೆಗೆ ಸ್ವತಃ ಗುದ್ದಲಿ ಹಿಡಿದು ಸ್ವಚ್ಛತೆ ನಡೆಸಿದ ವೃತ್ತಾಂತ ಮನ ಮುಟ್ಟುತ್ತದೆ. ಸುಮಾ ಮೇಡಂ ರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು.

ಕೃತಿಯ ಶೀರ್ಷಿಕೆ “ಹಚ್ಚೆ ದಿನ್” ಹೆಣ್ಣು ಮಕ್ಕಳ ಫ್ಯಾಶನ್ ಕ್ಷೇತ್ರಕ್ಕೆ ಹಳೆಯ ಹಚ್ಚೆಯನ್ನು ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟದೆ. ಲೇಖಕಿಯು ಟ್ಯಾಟೂ ವನ್ನ ಶಿಲೆಯ ಮೇಲಿನ ಶಾಸನಗಳಂತೆ, ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ ಎಂದು ಆಧುನಿಕತೆಯೆಂದು ಪರಿಚಯಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಎನ್.ರಾಮನಾಥ್ ಅವರು ಸುಂದರವಾಗಿ ಲೇಖಕಿಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಅದು ಓದುಗರಿಗೆ ಮಾರ್ಗದರ್ಶಕವಾಗುತ್ತದೆ.

ಗುಡಿಯ ದೇವರುಗಳು ಪೂರ್ವಾಭಿಮುಖವಾಗಿ ನಿಂತಿದ್ದರೆ ನವಗ್ರಹಗಳು ಕಣ್ಣಿನಾಸ್ಪತ್ರೆಯ ರೋಗಿಗಳಂತೆ ಬೇರೆ ಬೇರೆ ದಿಕ್ಕಿಗೆ ತಿರುಗಿರುವ ಹೋಲಿಕೆ ಉಡಾಫೆ ನಗಿಸುತ್ತವೆ.

ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದಿಂದ ೩೨ ಲೇಖನಗಳು ಓದುಗರನ್ನು ನಗಿಸಲು ನೆರವಾಗುತ್ತವೆ. ಇದು ಉತ್ತಮ ಹಾಸ್ಯ ಸಾಹಿತ್ಯದ ಸಂಕಲನ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಕನ್ನಡ ರಂಗಭೂಮಿಯನ್ನು ಚಿತ್ರಿಸುವ ಕೃತಿ “ನಿಂತು ಹೋದ ಕನ್ನಡ ರಂಗವೈಭವ”

ಹಾಸನ ಜಿಲ್ಲೆಯು ಕನ್ನಡ ರಂಗಭೂಮಿಗೆ ತನ್ನದೇ ಆದಂತಹ ಎಂದೆಂದಿಗೂ ಮರೆಯಲಾಗದಂತಹ ಕಾಣಿಕೆಗಳನ್ನು ನೀಡಿದೆ. ಹಿಂದಿನ ಕಾಲದಿಂದಲೂ ನಾಟಕ ರಂಗಭೂಮಿಗೆ ಹಾಸನದಲ್ಲಿ ವಿಶೇಷ ಮನ್ನಣೆ ದೊರಕಿದೆ. ರಂಗಕ್ಷೇತ್ರದಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು ಮತ್ತು ತಂತ್ರಜ್ಞರು ಸೇರಿದಂತೆ ಹಲವರನ್ನು ಪರಿಚಯಿಸುವ ಮೂಲಕ ಸಾಹಿತ್ಯ ರಚನೆಯಲ್ಲಿ ವಿಭಿನ್ನ ಶೈಲಿಯನ್ನು ರೂಪಿಸಿರುವ ವ್ಯಕ್ತಿ ಗೊರೂರು ಅನಂತರಾಜು.

ಅವರು ರಚಿಸಿರುವ “ನಿಂತು ಹೋದ ಕನ್ನಡ ರಂಗವೈಭವ” ಎಂಬ ಕೃತಿಯ ಶೀರ್ಷಿಕೆಯೇ ನಾಟಕದ ಚೈತನ್ಯ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತದೆ. ಅವರು ನಾಟಕಗಳ ಬೆಳವಣಿಗೆ, ಆಧುನಿಕತೆ ಮತ್ತು ಅದರ ತೀವ್ರ ಕುಸಿತದ ಬಗ್ಗೆ ಚಿಂತನಾತ್ಮಕವಾಗಿ ಬರೆಯುತ್ತಾರೆ. ರಂಗಭೂಮಿಯ ನೈತಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿಕೊಡುತ್ತಾರೆ.

ಈ ಕೃತಿಯಲ್ಲಿ ಕಲಾವಿದರ ಪರಿಚಯವೊಂದರ ಮೂಲಕ ತೃಪ್ತಿಯಾಗದೆ, ರಂಗಭೂಮಿಯ ತಾತ್ವಿಕತೆಯನ್ನೂ ವಿಶ್ಲೇಷಣೆ ಮಾಡಲಾಗಿದೆ. ಲೇಖಕರ ಭಾಷೆ ಸರಳವಾಗಿದ್ದು, ಭಾವಪೂರ್ಣತೆಯಿಂದ ಕೂಡಿದೆ. ಓದುಗರಿಗೆ ಪ್ರತಿಯೊಂದು ಪುಟ ಆಲೋಚನೆಗೆ ಆಹ್ವಾನ ನೀಡುತ್ತದೆ.

ಕೃತಿಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು ರಂಗಭೂಮಿಯ ಪತನವಾಗಿದೆ. ನಾಟಕವು ಒಂದು ಕಾಲದಲ್ಲಿ ಸಮಾಜದ ದರ್ಪಣವಾಗಿತ್ತೆಂದು ಲೇಖಕರು ವಿವರಿಸುತ್ತಾರೆ. ನಾಟಕಗಳ ಒಡನಾಡಿತನ, ಸಾಮಾಜಿಕ ಪಾತ್ರ ಇಂದು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಸೂಚಿಸುತ್ತಾರೆ.

ಕೃತಿಯಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು, ತಂತ್ರಜ್ಞರು ಹೀಗೆ ಎಲ್ಲರನ್ನು ಒಳಗೊಂಡಂತೆ ಹಲವು ವ್ಯಕ್ತಿಗಳ ಪರಿಚಯ, ನಾಟಕ ರಚನೆ, ಅಭಿನಯದ ಕಥನಗಳು ಚಿತ್ರಣವಂತಾಗಿವೆ. ಇದರಿಂದ ಓದುಗರಿಗೆ ಕೇವಲ ವಿಷಯವಷ್ಟೇ ಅಲ್ಲ, ಭಾವನಾತ್ಮಕ ಅನುಭವವು ದೊರಕುತ್ತದೆ. ಈ ಕೃತಿಯು ಒಂದು ಕಾಲದಲ್ಲಿ ನಾಟಕವು ಸಮಾಜದ ದರ್ಪಣವಾಗಿತ್ತು ಎಂಬುದನ್ನು ನೆನಪಿಸುತ್ತದೆ.

ಈಗ ಅದು ಮನರಂಜನೆಯ ಉಪಕರಣವಾಗಿ ಕುಸಿದಿರುವ ಸ್ಥಿತಿಯನ್ನು, ಸ್ತಬ್ಧತೆಯ ಪರಿಸ್ಥಿತಿಯನ್ನು ಕೃತಿಯಲ್ಲಿ ಲೇಖಕರು ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಈ ಕೃತಿಯು ಕಲಾವಿದರ ಗೌರವಾರ್ಹತೆಯನ್ನು ತೋರಿಸುತ್ತದೆ. ಈ ಕೃತಿಯು ಕನ್ನಡ ರಂಗಭೂಮಿಯ ಪ್ರಾಮಾಣಿಕ ದಾಖಲೆಯಾಗಿದೆ. ಗೊರೂರು ಅನಂತರಾಜು ಅವರು ಕೇವಲ ಕಲಾವಿದರನ್ನು ಪರಿಚಯಿಸುವ ಸಾಹಿತಿ ಮಾತ್ರವಲ್ಲ, ನಾಟಕದ ಕಲಾವಿದರ ಜೀವನವನ್ನೇ ಅರ್ಥಮಾಡಿಕೊಂಡ ಕಲಾವಿದರಾಗಿ ಈ ಕೃತಿಯಲ್ಲಿ ಸ್ಪಷ್ಟ ಚಿತ್ರಣ ನೀಡುತ್ತಾರೆ.

ಲೇಖಕರು ರಂಗಭೂಮಿಗೆ ತುಂಬಾ ಹತ್ತಿರವಾದ ವ್ಯಕ್ತಿಯಾಗಿರುವುದರಿಂದ ಕೆಲವೊಮ್ಮೆ ಭಾವನಾತ್ಮಕವಾಗಿ ಹೆಚ್ಚು ವಿವರಣೆಯನ್ನು ನೀಡಿರುವ ಸಂದರ್ಭಗಳಿವೆ. ಈ ಸಂದರ್ಭಗಳು ಕೃತಿಯ ನೈಜತೆಯನ್ನು ಹೆಚ್ಚಿಸುತ್ತವೆ. “ನಿಂತು ಹೋದ ರಂಗವೈಭವ” ಎಂಬ ಲೇಖನದಲ್ಲಿ ಕನ್ನಡ ರಂಗವೈಭವ ಪತ್ರಿಕೆಯ ಸಹ ಸಂಪಾದಕರನ್ನು ಪರಿಚಯಿಸಿಕೊಂಡು ರಂಗ ಪ್ರದರ್ಶನದ ಫೋಟೋ ತೆಗೆದು ಪತ್ರಿಕೆಗಳಿಗೆ ಪರಿಚಯಿಸಲು ಲೇಖನ ಬರೆಯುವುದಾಗಿ ಕೇಳಿಕೊಳ್ಳುತ್ತಾರೆ.

ಲೇಖನಗಳನ್ನು ಬರೆಯುವುದಾದರೆ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ರಂಗವೈಭವ ಪತ್ರಿಕೆಗೆ ಬರೆಯಲು ತಿಳಿಸುತ್ತಾರೆ. ಕೋವಿಡ್- 19ರ ಮೊದಲು ರಂಗಭೂಮಿ ಹೇಗಿತ್ತು?. ಕೋವಿಡ್ ಕಾಲದಲ್ಲಿ ಅದರ ಪರಿಸ್ಥಿತಿ ಏನಾಯಿತು ಮತ್ತು ಕೋವಿಡ್ ನಂತರ ಈಗಿನ ರಂಗಭೂಮಿ ಹೇಗಿದೆ. ಎಂಬ ವಿವರವನ್ನು ಮಾತನಾಡುತ್ತಾ, ಬಸವರಾಜ ಐರಣಿಯವರ ಕಲಾ ಸೇವೆಯ ಕುರಿತ ಲೇಖನ ಇದಾಗಿದೆ.

ಲೇಖಕರು “ನಿಂತು ಹೋದ” ಪತ್ರಿಕೆಯ ಜೊತೆಗೆ ರಂಗಭೂಮಿಯ ವ್ಯಾಪ್ತಿಯೂ ಕಡಿಮೆಯಾದ ಕುರಿತು ವಿವರವಾಗಿ ಬರೆದಿದ್ದಾರೆ. 2019 ರ ನಂತರ ಪತ್ರಿಕೆಯು ವಾರಕ್ಕೊಮ್ಮೆ ರಂಗಭೂಮಿ ಕಲಾವಿದರ ಕುರಿತು ಪರಿಚಯ ಮಾಡುತ್ತಾ ಬಂದಿದೆ. ಲೇಖಕರಾದ ಬಸವರಾಜ ಐರಣಿಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ತಂದು ಕೊಡುವವರೆಗೂ ವ್ಯಾಪಿಸಿದೆ ಎಂದ ಮೇಲೆ ಈ ಲೇಖನ ಎಷ್ಟೊಂದು ಮಹತ್ವ ಪಡೆದಿದೆ ಎಂದು ತಿಳಿಯುತ್ತದೆ.

ಎಸ್.ಎಸ್.ಎಲ್.ಸಿ ಓದಿದ ಐರಣಿಯವರು ಪ್ರಿಂಟಿಂಗ್ ಪ್ರೆಸ್ ಕೆಲಸಕ್ಕೆ ಸೇರಿಕೊಂಡು ನಂತರ ನಾಟಕದ ಪಾತ್ರಗಳನ್ನು ಬಯಸಿ ಬೆಳೆದು ಬಂದ ಬಗೆಯನ್ನು ತಿಳಿಸುತ್ತದೆ. ಲೇಖಕರ ಮತ್ತೊಂದು ಲೇಖನ ಗುಡಿಹಳ್ಳಿ ನಾಗರಾಜ್ ರವರ ನೆನಪು ಮಾಡಿಕೊಂಡು ಬರೆದಂತಹ ರಂಗಸೆಲೆ ಪುಸ್ತಕದಲ್ಲಿ ಪರಿಚಯಿಸಿರುವ ನಾಟಕ ಕಂಪನಿಗಳು ಹಾಗೂ ಪಾತ್ರವರ್ಗ ಹೇಗೆ ಜನಸಮೂಹದಲ್ಲಿ ಮೋಡಿ ಮಾಡಿತು.

ಗುಡಿಹಳ್ಳಿ ನಾಗರಾಜರವರು ಹೇಗೆ ಬರಹಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಕಾದಂಬರಿಕಾರರಾಗಿ ಹೊರಹೊಮ್ಮಿದರು ಎಂಬುದನ್ನು ತಿಳಿಸುತ್ತದೆ. ಕನ್ನಡ ರಂಗಭೂಮಿಯ ಬಹಳಷ್ಟು ಜನರನ್ನು ಹೇಗೆ ಹೊರ ಜಗತ್ತಿಗೆ ಪರಿಚಯಿಸಿದರು ಎಂಬ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಪಯಣ ಲೇಖನದಲ್ಲಿ ನರಸಿಂಹರಾಜುರವರು ಹೇಗೆ ನಾಟಕ ಕಂಪೆನಿಗೆ ಪ್ರವೇಶ ಪಡೆದರು. ಎಷ್ಟೆಲ್ಲಾ ನಾಟಕ ಕಂಪೆನಿಗಳನ್ನು ಬದಲಾಯಿಸಿದರು. ಕೊನೆಯಲ್ಲಿ ಗುಬ್ಬಿ ನಾಟಕ ಕಂಪೆನಿಯಲ್ಲಿ ನೆಲೆನಿಂತು ಚಿತ್ರರಂಗ ಪ್ರವೇಶಿಸಿದ ಬಗೆ ಎಲ್ಲವನ್ನು ವಿವರಣಾತ್ಮಕವಾಗಿ ಬರೆದಿದ್ದಾರೆ.

ಎರಡನೇ ಮಹಾಯುದ್ದದ ಬಿಸಿ ನಾಟಕ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿ, ಅಂದಿನ ಕಾಲಘಟ್ಟದಲ್ಲಿ ನಟರು, ನಿರ್ದೇಶಕರು ಅನುಭವಿಸಿದ ನೋವು, ದುಃಖ-ದುಮ್ಮಾನಗಳನ್ನು ತಮ್ಮ ಲೇಖನಿಯ ಮೂಲಕ ತಿಳಿಸಿದ್ದಾರೆ. ನರಸಿಂಹರಾಜು ಅವರು ಸಿನಿಮಾ ರಂಗದಲ್ಲಿದ್ದರೂ, ರಂಗಭೂಮಿ ಕರೆದಾಗ ಮತ್ತೆ ಬಂದು ಪಾತ್ರ ಮಾಡುತ್ತಿದ್ದರು ಎಂಬುದನ್ನು ಓದುಗರ ಮನ ಮುಟ್ಟುವಂತೆ ಹೇಳಿದ್ದಾರೆ.

ಗೊರೂರು ಜಾತ್ರೆಯ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಬಂದು ಬೀಡುಬಿಡುತ್ತಿದ್ದ ಟೂರಿಂಗ್ ಟಾಕೀಸ್ ಗಳ ಬಗ್ಗೆ ಮರೆಯದೇ ಹೇಳಿರುವುದು ತನ್ನ ಊರು ಗೊರೂರು ಒಂದೊಮ್ಮೆ ಹೇಗೆ ರಂಗಭೂಮಿಯ ನೆಲೆಯಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನರಸಿಂಹರಾಜುರವರ ರಂಗಪಯಣ ಸಾಗಿದ ರೀತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಲೇಖಕರಾದ ಗೊರೂರು ಅನಂತರಾಜು ರವರು ಬರೆದಿರುವ ಮತ್ತೊಂದು ಲೇಖನದಲ್ಲಿ ರಂಗಗೀತೆಗಳ ಸಾರ್ವಭೌಮ ಎಂದೇ ಪ್ರಸಿದ್ಧರಾದ ಆರ್. ಪರಮಶಿವನ್ ರವರು ಬಡ ಕುಟುಂಬದಲ್ಲಿ ಹುಟ್ಟಿ, ಊಟಕ್ಕೂ ಗತಿಯಿಲ್ಲದ ದಿನಗಳಲ್ಲಿ ಸೋದರ ಮಾವನ ಭಿಕ್ಷಾನ್ನದಿಂದ ಒಂದು ಹೊತ್ತು ಉಂಡು ನಾಲ್ಕು ವರ್ಷಗಳು ಕಳೆದರು. ನಂತರವಷ್ಟೇ ಚಾಮುಂಡೇಶ್ವರಿ ಕಂಪೆನಿಯ ವಸಂತಸೇನ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಎದುರಿನಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದದನ್ನು ತನ್ನ ಆತ್ಮಕಥೆಯಲ್ಲಿ ನಿವೇದಿಸುತ್ತಾರೆ. ಆರ್. ಪರಮಶಿವನ್ ಅಲ್ಲದೇ 1940 ರ ಸುಮಾರಿಗೆ ಗುಬ್ಬಿ ವೀರಣ್ಣನವರು ತೆಗೆದ ಸುಭದ್ರ ಚಿತ್ರದಲ್ಲಿ ಒಂದು ಹಾಡು, ದೃಶ್ಯ ವೀರಣ್ಣನವರ ಜೊತೆಯಲ್ಲಿ ಅಭಿನಯಿಸಲು ಸಿಕ್ಕ ಅವಕಾಶವನ್ನು ನೆನಪು ಮಾಡಿಕೊಳ್ಳುತ್ತಾರೆ.

ಹೊಳೆನರಸೀಪುರಕ್ಕೆ ನಾಟಕ ನೋಡಲು ಹೋದಾಗ ಹಾರ್ಮೋನಿಯಂ ಮಾಸ್ಟರ್ ಈಗ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಎಷ್ಟು ಹೊತ್ತಾದರೂ ಬರಲಿಲ್ಲ ಅದನ್ನು ಮುಂದುವರಿಸುವ ಕಾರ್ಯ ಪರಮಶಿವನ್ ರವರಿಗೆ ಕೊಟ್ಟಿದ್ದರು. ಕೇವಲ ಹದಿನೆಂಟು ವರ್ಷದ ಹುಡುಗ ಪರಮಶಿವನ್ ಅದನ್ನು ಸುಸೂತ್ರವಾಗಿ ಹಾರ್ಮೋನಿಯಂ ವಾದಕರಾಗಿ ನಿರ್ವಹಣೆ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅಂದಿನ ಕಾಲದಲ್ಲಿ ನಾಟಕ ಕಂಪೆನಿಗಳು ಹೇಗೆ ಊರಿಂದೂರಿಗೆ ವಲಸೆ ಹೋಗುತ್ತಿದ್ದವು. ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಬದುಕುವ ಸನ್ನಿವೇಶ ಎಲ್ಲವನ್ನು ಕಟ್ಟಿಕೊಡುತ್ತಾರೆ. ನಾಟಕಗಳ ಜೀವಾಳವೇ ರಂಗಗೀತೆಗಳು, ಅವುಗಳನ್ನು ಬರೆಯುವುದು ಮತ್ತು ಹಾಡುವುದರಲ್ಲಿ ಪರಮಶಿವನ್ ರವರು ಸದಾ ಮುಂದಿರುತ್ತಾರೆ ಎಂಬುದನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.

ಈ ಕೃತಿಯಲ್ಲಿ ಪೌರಾಣಿಕ ನಾಟಕ ವಿದ್ವಾನ್ ಕಿರಗಸೂರು ರಾಜಪ್ಪನವರ ಕುರಿತು, ಸೃಜನಶೀಲ ನಿರ್ದೇಶಕಿ ಮಂಗಳಾ ವೆಂಕಟೇಶ್, ರಂಗ ಸಂಗೀತಕ್ಕೆ ಹನ್ಯಾಳು ಗೋವಿಂದೇಗೌಡರ ಕೊಡುಗೆಗಳು, ಗವೇನಹಳ್ಳಿ ಜಿ. ಎಂ. ಪ್ರದೀಪ್, ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಹಳೇಬೀಡು ಕುಳ್ಳೇಗೌಡರು, ಬಂಡಿಹಳ್ಳಿ ನಾಗರಾಜ, ಪೌರಾಣಿಕ ರಂಗ ಸಂಗೀತ ಸಾಧಕರಾದ ಹೆಚ್. ಜಿ. ಶಿವಲಿಂಗಮೂರ್ತಿ.

ಲೇಖಕರ ರಂಗ ಸಿರಿ ಕಥಾ ಐಸಿರಿ ಕುರಿತು ಡಾ. ಸುಧಾ ಹೆಚ್. ಎಸ್ ಧಾರವಾಡ ಬರೆದ ರಂಗಭೂಮಿ ಒಳ ಹೊರಗಿನ ಹೂರಣ ವಿಮರ್ಶಾ ಬರಹ, ಅಂತೆಯೇ ಗೊರೂರು ಅನಂತರಾಜು‌ ರವರು ನಟ, ನಾಟಕಕಾರರು ಎಸ್. ಎಸ್. ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ನಾಟಕ ಕೃತಿ ಮಹಾತ್ಮ ಕನಕದಾಸ ಕೃತಿ ವಿಮರ್ಶೆ, ಹಾಗೆಯೇ ಡಾ. ಬರಾಳು ಶಿವರಾಮ್ ರವರ ರಂಗವೈಭವ ಕೃತಿಯ ಪರಿಚಯ ಮುಂತಾದ ವಿಚಾರಗಳು ಸ್ಪಷ್ಟವಾಗಿ ವಿಭಿನ್ನ ದೃಷ್ಟಿಕೋನಗಳಲ್ಲಿ ಗೋಚರವಾಗತ್ತವೆ.

ಈ ಕೃತಿಗೆ ಡಾ. ಬರಾಳು ಶಿವರಾಮ್ ಮುನ್ನುಡಿಯನ್ನು ಬರೆದಿದ್ದು, ಬೆನ್ನುಡಿಯನ್ನು ಜಿ. ಎಸ್. ಪ್ರಕಾಶ್ ಬರೆದಿದ್ದಾರೆ. ಈ ಭಾಗಗಳು ಓದುಗರಿಗೆ ಗ್ರಂಥದ ಸಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. “ನಿಂತು ಹೋದ ಕನ್ನಡ ರಂಗವೈಭವ” ಕೃತಿಯು ಕನ್ನಡ ರಂಗಭೂಮಿಗೆ ಸಮರ್ಪಿತವಾದ ಬೌದ್ಧಿಕ ಚಿಂತನೆ ಹಾಗೂ ಮನನಕ್ಕೆ ಕಾರಣವಾಗುವ ವಿಶ್ಲೇಷಣಾತ್ಮಕ ದಾಖಲೆ.

ಗೊರೂರು ಅನಂತರಾಜು ಅವರು ಈ ಕೃತಿಯಲ್ಲಿ ಕನ್ನಡ ರಂಗಭೂಮಿ ಬದುಕು, ವೈಭವ, ಪತನ ಮತ್ತು ಸಾಧ್ಯತೆಯ ಬಗೆಗಿನ ಸತ್ಯವನ್ನು ನಿರ್ಭಯವಾಗಿ ಅನಾವರಣಗೊಳಿಸಿದ್ದಾರೆ. ಅವರು “ನಿಂತು ಹೋದ ಕನ್ನಡ ರಂಗಭೂಮಿ” ಯಲ್ಲಿ ವಿಭಿನ್ನ ಕಲಾವಿದರ ಬದುಕಿನ ಅನುಭವ, ವೈಚಾರಿಕತೆ ಮತ್ತು ನಿಷ್ಠೆಯ ಭಾವದಿಂದ ವ್ಯಕ್ತಪಡಿಸಿರುತ್ತಾರೆ. ಇವರ ಈ ಕೃತಿಯು ಕನ್ನಡ ರಂಗಭೂಮಿಯನ್ನು ಜನಮಾನಸ ಲೋಕಕ್ಕೆ ತಲುಪಿಸುವಲ್ಲಿ ಸಹಕಾರಿಯಾಗಿದೆ.

ಕೆ. ಎನ್. ಚಿದಾನಂದ, ಸಾಹಿತಿ, ಹಾಸನ

ಮಕ್ಕಳ ಕವಿತೆಗಳ ಗುಬ್ಬಿ ಗೂಡು ಗೊರೂರು ಅನಂತರಾಜು, ಹಾಸನ.

ಹಾಸನದ ಕವಯಿತ್ರಿ ಶ್ರೀವಿಜಯ ಅವರ ಗುಬ್ಬಿಗೂಡು ಮಕ್ಕಳ ಕವನ ಸಂಕಲನದಲ್ಲಿ 57 ಕವಿತೆಗಳಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಬಳಿಕವೂ ಮಕ್ಕಳ ಒಡನಾಟದಲ್ಲಿದ್ದು ಪಾಠ ಮಾಡುವಾಗಿನ ಶಾಲಾ ಪಠ್ಯಗಳ ಪದ್ಯಗಳು ಇವರ ನೆನಪಿನಾಳದಲ್ಲಿ ಪ್ರಭಾವ ಬೀರಿ ಆ ದಿಶೆಯಲ್ಲಿ, ಕೆಲವು ಶಿಶುಗೀತೆಗಳು ರಚನೆಗೊಂಡಿವೆ.

“ಹಗಲಲ್ಲಿ ಸೂರ್ಯನ, ಇರುಳಲಿ ಚಂದ್ರನ ಇಟ್ಟವನಾರಮ್ಮ, ಕಪ್ಪನೆ ಮುಗಿಲಲಿ ಹನಿ ಹನಿ ಮಳೆಯೂ ಇಟ್ಟವನಾರಮ್ಮ….” ಎಂಬ ಸಾಲುಗಳ ಮೂಲಕ ತಾಯಿ-ಮಗು ಸಂಭಾಷಣೆಯ ಕಲ್ಪನೆ ಮೂಡಿಸಿ, ಕಲಾತ್ಮಕ ಭಾವವನ್ನೂ ತೋರಿಸಿದ್ದಾರೆ.

ಮಗುವಿನ ಮುಗ್ದ ಪ್ರಶ್ನೆಗಳಿಗೆ ತಾಯಿಯ ಜಾಣ್ಮಿಯ ಉತ್ತರ ಸರಳ ಸಾಲುಗಳಲ್ಲಿ ರಚಿಸುವುದು ಮೇಲ್ನೋಟಕ್ಕೆ ಸುಲಭವೆಂದುಕೊಂಡರೂ, ಪ್ರಾಸಬದ್ದತೆಯಲ್ಲಿನ ರಚನೆ ಅಷ್ಟೇ ಪ್ರಾಸವೂ ಹೌದು. ಶಿಶು ಕಾವ್ಯ ರಚನೆಗೆ ಪದಕೌಶಲ್ಯವೂ ಬೇಕು. ಮಗು ಕೇಳುವ ಜಗದ ಕೌತುಕದ ಪ್ರಶ್ನೆಗೆ ತಾಯಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾಳೆ.

“ಹೂವಿಂದ ಹೂವಿಗೆ ಹಾರುವ
ಚಿಟ್ಟೆಗೆ ಬಣ್ಣ ಬಳಿದವನಾರಮ್ಮ
ತಾಯಿಯ ಹೃದಯದಿ ಮಮತೆ
ಪ್ರೀತಿಯ ಇಟ್ಟವನಾರಮ್ಮ”

“ರಾತ್ರಿ ಆಕಾಶ ತೋರಿಸಿ ಮನೆಯ ಮಹಡಿಯಲ್ಲಿ ತುತ್ತು ತಿನಿಸುತ್ತಿರುವ ತಾಯಿ ಮಗುವಿನ ಪ್ರಶ್ನೆಗಳ ಸರಮಾಲೆಗೆ ತತ್ತರಿಸಿ ಉತ್ತರದ ಹುಡುಕಾಟದಲ್ಲಿ ಆಕಾಶ ನೋಡಿದ್ದಾಳೆ ಪಾಪ”. ಇನ್ನು, ನಮ್ಮ ಮನೆಯಲ್ಲೊಂದು ಪುಟ್ಟ ಪಾಪವಿರುವುದು ಎಂಬ ಶಿಶು ಕಾವ್ಯ ನೆನಪಿಸುತ್ತದೆ ಈ ಪದ್ಯದ ಸಾಲು

“ನಮ್ಮ ಮನೆಗೆ ಒಂದು ಪುಟ್ಟ ಪಾಪು ಬಂದಿತು.
ಎತ್ತಿಕೊಳ್ಳಲು ಹೋದರೆ ಅಮ್ಮ ಬಂದು ತಡೆದಳು
ಪ್ರೀತಿಯಿಂದ ಪಾಪು ಅಪ್ಪಿ
ಮುತ್ತು ಕೊಟ್ಟಳು”

ಇನ್ನೂ ನೀನ್ಯಾರಿಗಾದೆಯೋ ಎಲೆ ಮಾನವ.. ಎಂಬ ಗೋವಿನ ಹಾಡಿನ ಮಾದರಿಯ ಈ ಪದ್ಯದಲ್ಲಿ ಪರಿಸರ ಕಾಳಜಿಯಿದೆ.

ಮರ ನಾನು ಹೆಮ್ಮರ
ನಾನೆಂದೂ ಅಮರ
ನೀನಾರಿಗಾದೆಯೋ ಪಾಮರ..

ಈಗ ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೊರಡಬೇಕಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮೇಡಂ ಬನ್ನಿ ಮಕ್ಕಳೇ ಶಾಲೆಗೆ
ಎಂದು ಕಿರು ಪದ್ಯದಲ್ಲಿ ಕರೆ ನೀಡುತ್ತಾರೆ

“ರಜೆಯು ಮುಗಿಯಿತು
ಶಾಲೆ ತೆರೆಯಿತು
ಬನ್ನಿ ಮಕ್ಕಳೆ ಶಾಲೆಗೆ
ಶಾಲೆ ನಮ್ಮ ದೇಗುಲ
ಗುರುಗಳು ನಮ್ಮ ದೇವರು..”

ನಾವು ಬಾಲ್ಯದಲ್ಲಿ ಕಂಡ ನಮ್ಮ ಹಂಚಿನ ಮನೆಯ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡನ್ನು ಇಂದು ಕಾಣುವುದು ಅಪರೂಪ.

“ನಮ್ಮ ಮನೆಯ ಸೂರಿನಲ್ಲಿ
ಗುಬ್ಬಿ ಗೂಡು ಕಟ್ಟಿತು
ಪುಟ್ಟ ಪುಟ್ಟ ಮರಿಗಳೊಡನೆ
ಅಲ್ಲಿ ವಾಸ ಮಾಡಿತು”

ಗಾಳಕ್ಕೆ ಸಿಕ್ಕ ಮೀನೊಂದು ಬೇಟೆಗಾರನಲ್ಲಿ ತನ್ನ ಪ್ರಾಣ ಭಿಕ್ಷೆ ಬೇಡುವುದು ಮರುಕ ಹುಟ್ಟಿಸುತ್ತದೆ.

ಒಂದು ದಿನ ಸಂಜೆ ನಾನು
ಗಾಳ ಹಾಕಿ ಹಿಡಿದೆ ಮೀನು
ದೀನವಾಗಿ ನನ್ನ ನೋಡಿ
ಪ್ರಾಣ ಭಿಕ್ಷೆ ಬೇಡಿತು

ಇನ್ನೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ಮಜವೇ ಬೇರೆ. ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವುದೇ ಮಜ. ಹಳ್ಳಿಯ ಗಿಡ, ಮರ, ಕೆರೆ, ಬಯಲು ಅಜ್ಜನ ತೋಟದ ಮನೆ ಮಧ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆ ತಾನೇ ಖುಷಿ ನೀಡುವುದಿಲ್ಲ.

ತೋಟದ ನಡುವೆ ಕಟ್ಟಿದ ಮನೆಯಿದು
ಸುತ್ತಲೂ ಮೇಯುವ ಹಸುಕರು
ಕೇಳುವರಾರು ನಮಗಿಲ್ಲಿ

ಗೊರೂರು ಅನಂತರಾಜು
ಹಾಸನ
ಮೊ: 9449462879

ಡಾ. ಪ್ರವೀಣಕುಮಾರ ಬಿರಾದಾರ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟçಪ್ರಶಸ್ತಿ ಲಭಿಸಿದಿರುವುದು ಸ್ವಾಗತಾರ್ಹ: ಶರಣಬಸವ ದೇವರು
ಗಂಗಾವತಿ : ಜ್ಞಾನ ಶಾರದೆ ಅಕಾಡೆಮಿಯ ಸಂಸ್ಥಾಪಕರಾದ ಡಾ. ಪ್ರವೀಣಕುಮಾರ ಬಿರಾದಾರ ಕಲಬುರ್ಗಿ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟ್ರಪ್ರಶಸ್ತಿ ಲಭಿಸಿದುದು ಸ್ವಾಗತಾರ್ಹವಾಗಿದೆ ಎಂದು ಪ.ಪೂ ಶ್ರೀ ಶರಣಬಸವ ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಗಂಗಾವತಿಯ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠ ಶಾಲೆಯು  ಹಾಗೂ ಅರಳಹಳ್ಳಿ ಬೃಹನ್ಮಠದ ಪರವಾಗಿ  ಈ ಶುಭ ಸುದ್ಧಿ ಹಂಚಿಕೊಂಡರು.
ಈ ಪ್ರಶಸ್ತಿ ಜೂನ್‌ 20 ರಂದು, ಶುಕ್ರವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಬೆಂಗಳೂರಿನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಗೊಂಡಿತು.
ಡಾ. ಪ್ರವೀಣಕುಮಾರ ಬಿರಾದಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಮುಂದುವರೆಸಿ ಇನ್ನೂ ಎತ್ತರಕ್ಕೆ ಬೆಳೆಯುವ ಆಶಯವನ್ನು ವ್ಯಕ್ತಪಡಿಸಿ ಆಶೀರ್ವಾದ ಸಂದೇಶ ನೀಡಿದ್ದಾರೆ.
ಮಾಹಿತಿಗಾಗಿ:
ಶ್ರೀ ಶರಣಬಸವ ದೇವರು
ಶ್ರೀ ರಾಜರಾಜೇಶ್ವರಿ ಬೃಹನ್ಮಠ, ಅರಳಹಳ್ಳಿ
ಮೊ.ನಂ: ೮೧೫೦೯೦೮೩೮೫
ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿಸಿರುವ “ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯೋಶೋಗಾಥೆ” ಎಂಬ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ.

ಡಾ. ಮೋಹನ ಗೋಪಾಲರಾಜೇ ಅರಸ್ ಎಂಬ ಹೆಸರು ಕೇಳಿದರೆ ಕೆಲವರಿಗೆ ಅಪರಿಚಿತವಾಗಿರಬಹುದು, ಆದರೆ ಡಾ. ಎಂ.ಜಿ.ಆರ್.ಅರಸ್ ಎಂದರೇ ಸಾಹಿತ್ಯ ವಲಯದಲ್ಲಿ ಎಲ್ಲರಿಗೂ ಪರಿಚಿತರು.

ಚುಟುಕು ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಅದಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟವರು. ಚುಟುಕುಗಳು ಕೂಡ ಸಾಹಿತ್ಯದ ಒಂದು ಪ್ರಕಾರವೇ ಎಂದು ಮೂಗು ಮುರಿಯುವವರೇ ಇದ್ದ ಕಾಲದಲ್ಲಿ ಅದಕ್ಕೆ ಒಂದು ಸ್ಥಾನಮಾನ ಮಹತ್ವ ತಂದುಕೊಟ್ಟವರು ದಿನಕದ ದೇಸಾಯಿಯವರು.

ಚುಟುಕು ಸಾಹಿತ್ಯ ಇಂದು, ನಿನ್ನೆಯದಲ್ಲ. ಇದಕ್ಕೊಂದು ದೀರ್ಘವಾದ ಇತಿಹಾಸವಿದೆ. ಪಾಶ್ಚಿಮಾತ್ಯರಲ್ಲಿ ೧೯ನೇ ಶತಮಾನದ ಕವಿ ಎರ್ಡ್ವರ್ಡ್ ಲೀಯರ್ ನ್ನು ಚುಟುಕು ಸಾಹಿತ್ಯದ ಜನಕನೆಂದೇ ಕರೆಯುತ್ತಾರೆ.

ಖ್ಯಾತನಾಮರಾದ ಹೆಚ್.ಜಿ.ವೆಲ್ಸ್, ಕೆರೋಲ್, ರುಡ್‌ಯಾರ್ಡ್ ಕಿಲ್ಲಿಂಗ್, ಆಗ್ಹೆನ್ ನ್ಯಾಷ್, ಅಡೆನ್ ಜೇಮ್ಸ್ ಬೌಯ್ಸ್, ಟಿ.ಎಸ್.ಎಲಿಯಟ್, ಮಾರ್ಕ್ ಟ್ವೇನ್ ಮೊದಲಾದ ಖ್ಯಾತ ಕವಿಗಳು ಚುಟುಕು ಸಾಹಿತ್ಯದ ಲೋಕಕ್ಕೆ ಉತ್ಸಾಹ ತುಂಬಿದ್ದಾರೆ.

ಭಾರತೀಯ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯದ ನಾನಾ ರೂಪಗಳ ಪ್ರಕಾರಗಳಿವೆ. ವಚನ ಸಾಹಿತ್ಯ, ಜನಪದ ಸಾಹಿತ್ಯ, ಉರ್ದು ಶಾಯರಿ ಮೊದಲಾದವು ಚುಟುಕು ರೂಪಗಳಾಗಿ ಅಭಿವೃದ್ಧಿಯಾಗಿವೆ. ಡಿ.ವಿ.ಗುಂಡಪ್ಪ ರ “ಮಂಕುತಿಮ್ಮನ ಕಗ್ಗ” ಕೃತಿಯು ಗಂಭೀರ ಚಿಂತನಶೀಲ ಚುಟುಕುಗಳ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧವಾಗಿದೆ.

ಅಷ್ಟೇ ಗಂಭೀರ ಸ್ವರೂಪದ ಬರಹಗಳನ್ನು ದಿನಕರ ದೇಸಾಯಿ, ಚನ್ನವೀರ ಕಣವಿ, ಡಾ. ಎಂ.ಅಕ್ಬರ್ ಅಲಿಯವರ ಚುಟುಕುಗಳಲ್ಲಿ ನಾವು ಕಾಣಬಹುದು. ಚುಟುಕುಗಳಲ್ಲಿ ಪದಲಾಲಿತ್ಯವನ್ನು ಮೆರೆದವರು ವಿ.ಗ.ನಾಯಕ, ಜಿ.ಟಿ.ನಾರಾಯಣರಾವ್, ಡಾ. ಸಿ.ಪಿ.ಕೆ.ರವರು.

ನಗು ಮನದಿ ಲೋಗರ ವಿಕಾರಂಗಳನು ನೋಡಿ
ಬಿಗಿ ತುಟಿಯ ದುಡಿವಂದು ನೋವಪಡುವಂದು
ಪೊಗದಂದ ವಿಶ್ವಜೀವನದ ಜೀವಾಂತರಂಗದಲಿ
ನಗು ನಗುತ ಬಾಳ್, ತೆರಳು ಮಂಕುತಿಮ್ಮ

ಎಂಬ ಡಿವಿಜಿಯವರ ಕಗ್ಗದಂತೆ ನಗು, ಅಳು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಅವುಗಳ ರಸಪಾಕವನ್ನು ಅನುಭವಿಸಿ ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ’ ಎಂಬುದನ್ನು ಧ್ಯೇಯವಾಕ್ಯವಾಗಿಸಿ ಚುಟುಕು ಸಾಹಿತ್ಯ ಪ್ರಕಾರಕ್ಕೆ ಒಂದು ನೆಲೆಯನ್ನು ತಂದುಕೊಡುವಲ್ಲಿ ಡಾ. ಎಂ.ಜಿ.ಆರ್.ಅರಸ್‌ರ ಪಾತ್ರ ಮರೆಯುವುದುಂಟೆ! ಚುಟುಕು ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ನಾಡಿನಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ರಚಿಸಿ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬೆಳಕಿಗೆ ತರುವಲ್ಲಿ ಇವರ ಯೋಜನೆ ಸಫಲವೇ! ಜನಸೇವೆಯೇ ಜೀವನ ಪುಸ್ತಕಗಳ ಮೂಲಕ ಜ್ಞಾನ ಪ್ರಸಾರವೇ ಜೀವನದ ಪರಮಪ್ರೇಮವೆಂದು ತಮ್ಮದೇ ವೈದ್ಯವಾರ್ತಾ ಪ್ರಕಾಶನ ಮೂಲಕ ೧೩೭ ಕೃತಿ ನಂತರದ ಚುಟುಕು ಯುಗಾಚಾರ್ಯ ೧೩೮ನೇ ಕೃತಿ.

ಸಿ.ಪಿ.ಕೆ ಚುಟುಕುಗಳು, ಎಚ್.ಎಸ್.ಕೆ ಚುಟುಕುಗಳು, ಚದುರಂಗ ಚುಟುಕುಗಳು, ಅಕಬರ ಅಲಿ ಚುಟುಕುಗಳು ಇವರ ಪ್ರಕಾಶನದ ಚುಟುಕು ಸಂಕಲನಗಳು. ಅರಸ್ ಅವರೇ ಬರೆದ ವೈಶಾಖದ ವೈವಿಧ್ಯ, ಚುಟುಕು ವೈಶಾಖ, ಚುಟುಕು ಮಲ್ಲಿಗೆ, ಚುಟುಕು ಚೈತ್ರ, ಚುಟುಕು ಬೆಳಕುಗಳಲ್ಲಿ ವೈವಿಧ್ಯಮಯ ಚುಟುಕುಗಳಿಂದ ಚುಟುಕು ಪ್ರಿಯರ ಮನಗೆದ್ದಿದ್ದಾರೆ.

ಸತ್ತವರ ಸಮಾಧಿಗಳ ಮೇಲೆ
ಕಾಗೆ ಗೂಬೆಗಳು ಹಿಂಡು
ಗೆದ್ದವರ ಮುಂದೆ ಬೋ
ಪರಾಕು ಧೂರ್ತರುಗಳ ದಂಡು

ಬೋ ಪರಾಕ್ ಸಂಸ್ಕೃತಿಯನ್ನು ವಿಡಂಬಿಸಿರುವ ಅರಸ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಮೈಸೂರಿನ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಆಯುರ್ವೇದ ಓದಿ ನಂತರ ಬಿ.ಎ.ಎಂ.ಎಸ್ ಪದವಿ ಪಡೆದರು. ಆಯುರ್ವೇದಿಕ್ ಕಾಲೇಜಿನಲ್ಲಿ ಇವರ ಪ್ರಾಧ್ಯಾಪಕರಾದ ಡಾ. ರಾಘವೇಂದ್ರರಾಯರು ತಮ್ಮ ಶಿಷ್ಯನ ಕುರಿತಂತೆ ಬರೆಯುತ್ತಾ ಅರಸು ಒಬ್ಬ ವಿದ್ಯಾರ್ಥಿ ಮುಖಂಡರಾಗಿ ಕಾಲೇಜಿನ ಏಳಿಗೆಗೆ ಶ್ರಮಿಸಿದ್ದಾರೆ.

ಆಯುರ್ವೇದ ವಿಭಾಗವು ಮೊದಲಿಗೆ ಆಧುನಿಕ ವೈದ್ಯಕೀಯ ಪದ್ದತಿಯ ವಿಭಾಗಕ್ಕೆ ಸೇರಿದ್ದು ಆಯುರ್ವೇದ ವಿಭಾಗದ ಬೇರ್ಪಡೆಗೆ ಶ್ರಮಿಸಿದ್ದಾರೆ. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಆಯುರ್ವೇದ ಪ್ರಚಾರ ಪರಿಷತ್ ಮತ್ತು ಆಯುರ್ವೇದ ಮಂಡಲಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ ಪದವೀಧರರನ್ನು ಸಂಘಟಿಸಿ ಅಕಾಡೆಮಿ ಆಫ್ ಆಯುರ್ವೇದವನ್ನು ಸ್ಥಾಪಿಸಿ ಏಳಿಗೆಗಾಗಿ ಶ್ರಮಿಸಿದ್ದಾರೆ.

ಇವರ ಸಂಪಾದಕತ್ವದಲ್ಲಿ ಬರುವ ವೈದ್ಯವಾರ್ತಾ ಮಾಸಿಕ ಬೆಳ್ಳಿಹಬ್ಬ ಆಚರಿಸಿದೆ. ಡಾ. ಎಂ.ಜಿ.ಆರ್.ಅರಸ್‌ರಂತಹ ಆಯುರ್ವೇದ ಅಭಿಮಾನಿಗಳು ತಮ್ಮ ನಿರಂತರ ದುಡಿಮೆಯಿಂದ ಆಯುರ್ವೇದಕ್ಕೆ ಇಂದು ಅಲೋಪಥಿಗೆ ಸಮನಾದ ಸ್ಥಾನವನ್ನು ದೊರಕಿದೆ ಎಂಬುದಾಗಿ ಡಾ. ಸಿ.ಕೆ.ಎನ್.ರಾಜರವರು ಬರೆದಿದ್ದಾರೆ.

ಅರಸು ಅವರ ಸತತ ಪರಿಶ್ರಮದ ಫಲವಾಗಿ ಸರ್ಕಾರವು ಮೂವರು ಆಯುರ್ವೇದ ವೈದ್ಯರಿಗೆ ಧನ್ವಂತರಿ ಪ್ರಶಸ್ತಿ, ಒಬ್ಬರು ಯುನಾನಿ ವೈದ್ಯ ಮತ್ತು ಒಬ್ಬರು ಹೋಮಿಯೊಪತಿ ವೈದ್ಯರಿಗೆ ಹಾನಿಮನ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದು ಮೈಸೂರಿನ ಪ್ರಸಿದ್ದ ಸಾಹಿತಿಗಳ ಒಡನಾಟದಲ್ಲಿ ಚುಟುಕು ಸಾಹಿತ್ಯದಲ್ಲಿ ಆಸಕ್ತಿ ತೆಳೆದು ಪರಿಷತ್ತು ಹುಟ್ಟುಹಾಕಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಜನಪ್ರಿಯಗೊಳಿಸಿದರು.

ಖ್ಯಾತನಾಮರಾದ ಎಚ್.ಎಸ್.ಕೆ, ಜಿ.ಟಿ.ನಾರಯಣರಾವ್, ನ್ಯಾಯಮೂರ್ತಿ ಜಿನದತ್ತ ದೇಸಾಯಿ, ಚನ್ನವೀರ ಕಣವಿ, ಪಂಚಾಕ್ಷರಿ ಹೊಸಮಠ, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅಕಬರ ಅಲಿ, ಹಿರೇಮಗಳೂರು ಕಣ್ಣನ್ ಮೊದಲಾಗಿ ಕವಿ ಸಾಹಿತಿಗಳನ್ನು ಸಮಾರಂಭಕ್ಕೆ ಕರೆಸಿ ಚುಟುಕು ಸಮ್ಮೇಳನಕ್ಕೆ ಶೋಭೆ ತಂದರು.

ಪ್ರೀತಿ ಇದ್ದಲ್ಲಿ
ಅಂಗಳವೇ ಅರಮನೆ
ದ್ವೇಷ ಇದ್ದಲ್ಲಿ
ಅರಮನೆಯೇ ಸೆರೆಮನೆ

ದ್ವೇಷ ಪ್ರೀತಿ ಇವು ಒಂದೇ ನಾಣ್ಯದ ಎರಡು ಮುಖಗಳೆಂದು ಚುಟುಕಿನಲ್ಲಿ ಪ್ರತಿಪಾದಿಸಿರುವ ಅರಸ್ ಅವರ ಚುಟುಕುಗಳಲ್ಲಿ ಹಾಸ್ಯ, ವಿಡಂಬನೆ, ಕಟಕಿ ಎಲ್ಲವೂ ಇವೆ.

ಅಂಗಾಂಗ ಪ್ರದರ್ಶನ
ಗೃಹಿಣಿಯರಿಗೆ ಮುಜುಗರ
ಬಿನ್ನಾಣಗಿತ್ತಿಯರಿಗೆ
ಸೌಂದರ್ಯ ಪ್ರದರ್ಶನ

ಅರಸು ಅವರು ಸಂಘಟಿಸಿರುವ ಚುಟುಕು ಕವಿ ಸಮ್ಮೇಳನಗಳು ಬಹುಜನಪ್ರಿಯ. ೪೦೦ ರಿಂದ ೫೦೦ ಜನ ಚುಟುಕು ಕವಿಗಳು ಭಾಗವಹಿಸಿದ ಹೆಗ್ಗಳಿಕೆ ಇದೆ. ನಾನು ಕೂಡ ಮೈಸೂರಿನಲ್ಲಿ ಒಮ್ಮೆ ಭಾಗವಹಿಸಿ ಚುಟುಕು ವಾಚಿಸಿದ್ದೇನೆ.

ಮೊದಲ ಮಗಳು ಅಮೃತ
ಎರಡನೆಯ ಮಗಳು ಅಂಜನ
ಮೂರನೆಯ ಮಗಳು
ಅಮೃತಾಂಜನ

ಇವರ ಚುಟುಕಿನಲ್ಲೇ ಸ್ವಯಂ ಕಟಕಿಯಿದೆ. ಒಟ್ಟಾರೆ ಚುಟುಕು ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮನ್ನಣೆ ವೇದಿಕೆ ಒದಗಿಸಿದ ಉತ್ತಮ ಸಂಘಟಕರಾದ ಇವರಿಗೆ ವೈದ್ಯ ರತ್ನ, ವೈದ್ಯ ಭೂಷಣ ಪ್ರಶಸ್ತಿ ಲಭಿಸಿದೆ. ಈ ಅಜಾತ ಶತ್ರು ಬಗ್ಗೆ ನಾಗವರ್ಮನ ಕಾವ್ಯಾವಲೋಕನದ ಸೂಕ್ತಿಗೆ ಅರಸು ನಿದರ್ಶನವೆಂದಿದ್ದಾರೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪ್ರಧಾನ್ ಗುರುದತ್ತ ಅವರು.

ಪಡೆಗುಂ ಮಹಿಮೋನ್ನತಿಯಂ
ಪಡೆಗುಂ ಸನ್ಮಾರ್ಗದೆಸಕಮಂ ಗುಣದೋಳ್ಪಂ
ಪಡೆಗುಂ ನಿರ್ಮಳಯಶಮಂ
ಪಡೆಗುಂ ಪಡೆಗುಂ ವಿಭುತ್ವಮಂ ಬುಧಸಂಗಂ

(ವಿದ್ವಂಸರ ಒಡನಾಟದಿಂದ ಉನ್ನತ ಮಹಿಮೆ ಲಭಿಸುತ್ತದೆ. ಸನ್ಮಾರ್ಗದಲ್ಲಿ ನಡೆಯುವ ಮನೋಧರ್ಮವನ್ನು ತಂದುಕೊಡುತ್ತದೆ. ಒಳ್ಳೆಯ ಗುಣವನ್ನು ಉಂಟುಮಾಡುತ್ತದೆ. ನಿರ್ಮಲವಾದ ಕೀರ್ತಿಯನ್ನು ಗಳಿಸುವಂತೆ ಮಾಡುತ್ತದೆ. ಒಡೆತನವನ್ನು ತಂದುಕೊಡುತ್ತದೆ.)

ತಾಯಿಯ ಗರ್ಭದಿಂದ
ಬಂದಾಗ ಉಸುರಿತ್ತು
ಕಾಯಕ ಮುಗಿಸಿ ಹೊರಟಾಗ
ಹೆಸರಿತ್ತು ಜಗದೆಲ್ಲೆಡೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಭಾವಚಿತ್ರ ಪ್ರಕೃತಿ ಚಿತ್ರಗಳ ಏಕವ್ಯಕ್ತಿ ಕಲಾ ಪ್ರದರ್ಶನ – ಗೊರೂರು ಅನಂತರಾಜು, ಹಾಸನ

ಹಾಸನದ ಕಲಾಭವನದ ಹೊರ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಒಡನಾಡಿ ಚಿತ್ರಕಲಾ ಬಳಗ, ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್‌ ರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದರು.

ಈ ಪ್ರದರ್ಶನದಲ್ಲಿ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ 27 ಕಲಾ ಕೃತಿಗಳು ವೀಕ್ಷಕರ ಗಮನ ಸೆಳೆದವು.

ಪ್ರತಿ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆಯಂದು ಅವರು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ದಿನ ತಮ್ಮ ಹೊಸ ಚಿತ್ರಗಳ ಪ್ರದರ್ಶನ ಮಾಡುತ್ತಾರೆ.

ಈ ಬಾರಿ ವಿಶೇಷವಾಗಿ ವಸಂತಕುಮಾರ್‌ ಅವರು ತಮ್ಮ ಪೊಟ್ರೈಟ್ ವರ್ಕ್ಸ್‌ ನಲ್ಲಿ ಜಿಲ್ಲೆಯ ಸಾಧಕರ‌ ಭಾವಚಿತ್ರಗಳನ್ನು ತಮ್ಮ ಕುಂಚಿಕೆಯಲ್ಲಿ ಸೆರೆ ಹಿಡಿದಿದರು.

ಡ್ರಾಯಿಂಗ್‌ ಶೀಟ್ ಪೆನ್ಸಿಲ್‌ ವರ್ಕ್ಸ್ ನಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಶ್ರೀಮತಿ ಭಾನು ಮುಷ್ತಾಕ್‌ ಅವರ ಚಿತ್ರವನ್ನು ಚಿತ್ರಿಸಿದ್ದಾರೆ.

ಚಾರ್ಕೋಲ್‌ ಪೆನ್ಸಿಲ್‌ ವರ್ಕ್ಸ್‌ ನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್. ಡಿ. ದೇವೇಗೌಡರ ಭಾವಚಿತ್ರವನ್ನು ಸೃಷ್ಟಿಸಿದ್ದಾರೆ.

 

ಅಂತರಾಷ್ಟ್ರೀಯ ಕಲಾವಿದ ಕೆ. ಟಿ. ಶಿವಪ್ರಸಾದ್‌ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರ ಭಾವಚಿತ್ರಗಳು ಗಮನ ಸೆಳೆಯುವಂತಿವೆ.

ಹ್ಯಾಂಡ್‌ ಲ್ಯಾಂಡ್ ಸ್ಕೇಪ್‌ ಚಿತ್ರಣಕ್ಕಾಗಿ ಈ ಬಾರಿ ಅವರು ರಸ್ತೆ ಬದಿಯ ಮರಗಳನ್ನು ಆರಿಸಿಕೊಂಡು ಕಲಾ ಕೃತಿಗಳನ್ನು ಸೃಷ್ಟಿಸಿದರು.

 

ಅರಸೀಕೆರೆ ಹುಳಿಯಾರು ರಸ್ತೆಯ ಮಳೆಯ ಗಾಳಿಗೆ ಉರುಳುವ ಮೊದಲು ಮೂವರು ಮರಗಳ ಚಿತ್ರಣ ತೈಲವರ್ಣದಲ್ಲಿ ಮೂಡಿಬಂದಿವೆ.

ಚಿಂಡೇನಹಳ್ಳಿ ಗ್ರಾಮದಲ್ಲಿ ಕಂಡ ಮರಗಳು ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಜಲವರ್ಣ ಮಾಧ್ಯಮದಲ್ಲಿ ಕಲಾತ್ಮಕವಾಗಿ ಮೂಡಿಬಂದಿವೆ.

ಎಂಟು ಚಾರ್ಕೋಲ್ ಶೀಟ್‌ಗಳಲ್ಲಿ ಚಾರ್ಕೋಲ್ ಪೆನ್ಸಿಲ್ ವರ್ಕ್, ಏಳು ಡ್ರಾಯಿಂಗ್ ಶೀಟ್‌ಗಳಲ್ಲಿ ಪೆನ್ಸಿಲ್ ವರ್ಕ್ ಪ್ರದರ್ಶನಕ್ಕಿಟ್ಟಿದ್ದರು.

ಮೂವರು ಕ್ಯಾನವಾಸ್ ಕ್ಲಾತ್ ನಲ್ಲಿ ಅಕ್ರಿಲಿಕ್ ಮಾಧ್ಯಮದ ನವೀನ ಕಲಾಕೃತಿಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಲಾ ಸಾಧನೆಗೆ ಜಿಲ್ಲಾಡಳಿತವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಚಿತ್ರಕಲೆಯು ದುಬಾರಿ ಸಾಹಸವಾದ ಕಾರಣ ಅಕಾಡೆಮಿಯ ಸಹಕಾರ ಇಲ್ಲದಿದ್ದರೆ  ಪ್ರದರ್ಶನ ನಡೆಸುವುದು ಅಸಾಧ್ಯವಾಗಿದೆ.

ವಸಂತಕುಮಾರ್ ತಮ್ಮ ಬಿಜಿ ಬದುಕಿನ ಮಧ್ಯೆ ಕೂಡ ಸೃಜನಶೀಲ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಸೋಜಿಗದ ಸೂಜಿ ಮಲ್ಲಿಗೆಯೇ ಸೈ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಕಲೆ ಕಲಾವಿದರ ಪರಿಚಯಿಸುವ ಲೋಕ ದೃಷ್ಟಿ ಕಲಾ ಸೃಷ್ಟಿ ಕೃತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರಾದ ಶ್ರೀ ಗೊರೂರು ಅನಂತರಾಜುರವರು ಕಳೆದ 25 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ, ಸಾಹಿತ್ಯ ಲೋಕಕ್ಕೆ ವಿಭಿನ್ನ ಆಯಾಮಗಳಲ್ಲಿ ಕೊಡುಗೆ ನೀಡಿದವರು. ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗಳಿಸಿದ್ದಾರೆ.

ಶ್ರೀಯುತರದು ತೀರ ಸರಳ ಹಾಗೂ ಸಾತ್ವಿಕ ವ್ಯಕ್ತಿತ್ವ. ಮಾನವೀಯ ಸಂವೇದನೆಗಳು, ಅನುಕಂಪ ಪ್ರೇರಿತ ಜೀವನದೃಷ್ಟಿ, ಪರಿಸರದ ಎಲ್ಲ ಸಂಭವಗಳಿಗೆ ತೀಕ್ಷ್ಣ ಸ್ಪಂದನೆ, ಸಹಾನುಭೂತಿ, ಮುಗ್ಧತೆ, ಸ್ನೇಹಪರತೆ ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಮಾನವೀಯ ಮೌಲ್ಯಗಳು. ಬರವಣಿಗೆಯಲ್ಲಿ ಸತ್ವ ಮತ್ತು ತತ್ವಗಳಿಂದ ಕಂಗೊಳಿಸುವ ಇವರ ಸಾಹಿತ್ಯ ಶ್ರೇಷ್ಠವೆನಿಸಿತು. ಮನುಕುಲದ ಸಹಜ ಬದುಕಿನ ಚಿತ್ರಣ ಹಾಗೂ ನೀತಿಕಥೆಗಳು ಓದುಗರ ಮನ ಮುಟ್ಟುತ್ತವೆ. ಸಾರಸತ್ವ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಇವರ ಸೃಜನಶೀಲತೆ ಕ್ರಿಯಾಶೀಲತೆಗಳು ವೈವಿಧ್ಯಮಯ ಬರವಣಿಗೆಗಳಲ್ಲಿ ಕಾಣುತ್ತವೆ. ಸಮಕಾಲೀನ ಸಾಹಿತ್ಯಲೋಕದ ಸವಾಲುಗಳ ಸೂಕ್ಷ್ಮತೆಯನ್ನು ಕಲೆಯ ಮೂಲಕ ಗ್ರಹಿಸಿ ಕೃತಿಗಳಲ್ಲಿನ ಸಂವೇದನೆ ಮತ್ತು ಆಂತರಿಕ ತೀವ್ರತೆಯನ್ನು ಒಳಗಣ್ಣಿನಿಂದ ಕಂಡು ಅವುಗಳ ಬಗ್ಗೆ ವಿಮರ್ಶೆ ಮಾಡುವ ವಿಶಿಷ್ಟ ಶೈಲಿ ಅವರದು.

ಪಾಶ್ಚಿಮಾತ್ಯರಲ್ಲಿ ಸಾಮಾನ್ಯ ಮನುಷ್ಯ ಕೂಡ ದೃಶ್ಯ ಕಲೆಯನ್ನು, ಕಲಾಕೃತಿಯನ್ನು ನೋಡುವ ಬಗೆ, ಕಲೆಯನ್ನು ಆಸ್ವಾದಿಸುವ ಬಗೆಯನ್ನು ಅರಿತಿರುತ್ತಾರೆ. ದೃಶ್ಯ ಭಾಷೆ(visual language) ಅವರಿಗೆ ಸಾಹಿತ್ಯ ಓದಿದಷ್ಟೇ ಸರಳವೆನಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಕಲಾವಿದನನ್ನು ಬಿಟ್ಟರೆ ದೃಶ್ಯ ಭಾಷೆ ತಿಳಿದುಕೊಳ್ಳುವ ಗೋಜಿಗೆ ಜನಸಾಮಾನ್ಯರು ಹೋಗುವುದೇ ಇಲ್ಲ. ಹಾಗಾಗಿ ಕಲಾವಿದ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ದೂರವಿರುತ್ತದೆ. ಆದರೆ ಈ ಇಬ್ಬರ ನಡುವಿನ ಅಂತರದ ಕೊಂಡಿಯನ್ನು ಜೋಡಿಸುವ ಮಹತ್ತರ ಕಾರ್ಯವನ್ನು ತಮ್ಮ ಲೇಖನ, ವಿಮರ್ಶೆಗಳಿಂದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶ್ರೀಯುತರು ಹಲವು ದಶಕಗಳಿಂದ ಮಾಡುತ್ತಲೇ ಬಂದಿರುವುದು ಶ್ಲಾಘನೀಯವಾಗಿದೆ.

ನಾಡಿನ ಸಾಂಸ್ಕೃತಿಕ ಲೋಕವನ್ನು ಅನನ್ಯಗೊಳಿಸುವ ನಿಟ್ಟಿನಲ್ಲಿ ಕರುನಾಡಿನ ಅನೇಕ ಸಾಹಿತಿಗಳು, ವಿಚಾರವಂತರು, ಕಲಾವಿದರು ತಮ್ಮ ಕರ್ತವ್ಯವನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ಪರಂಪರೆಯನ್ನು ವರ್ತಮಾನದಲ್ಲಿ ಅದರ ಶ್ರೇಷ್ಠತೆಯನ್ನು ನೆನೆಯುತ್ತ ಅದರ ಮಹತ್ವವನ್ನು ಮತ್ತಷ್ಟು ಹೇಳಲು ನಾವು ಅವಶ್ಯವಾದದ್ದನ್ನು ಪ್ರೀತಿಸಲೇ ಬೇಕು. ಹೀಗಾಗಿ ಶ್ರೀ ಗೊರೂರು ಅನಂತರಾಜುರವರು ಅವರ ಯೋಜನೆ ಅನುಸಾರ “ಲೋಕ ದೃಷ್ಟಿ ಕಲಾ ಸೃಷ್ಟಿ” ಕೃತಿಯು ಒಬ್ಬ ಚಿತ್ರ ಕಲಾವಿದನಾಗಿರುವ ನನಗೆ ಹೆಮ್ಮೆ ಅನಿಸುತ್ತದೆ.

ಈ ಕೃತಿಯಲ್ಲಿ ಚಿತ್ರ ಕಲಾವಿದರನ್ನು ವಿಷಯವಾಗಿಸಿ ಅವರ ಅಭಿವ್ಯಕ್ತಿ ಭಾವನೆ, ದೃಷ್ಟಿಕೋನ, ಬದುಕು ಬರಹ ಇವುಗಳನ್ನು ಪರಿಚಯಿಸುವ ಕಾರ್ಯ ಬಹಳ ಮಹತ್ವವೆನಿಸುತ್ತದೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದರು ಹಾಸನ ಜಿಲ್ಲೆಯ ಕಲಾವೈಭವ, ಸಂಸ್ಕೃತಿ ಅಲ್ಲಿರುವ ಚಿತ್ರ ಕಲಾವಿದರ ನೈಪುಣ್ಯತೆಯನ್ನು ಬಹಳ ಹತ್ತಿರದಿಂದ ಬಲ್ಲವನು. ಹಾಗೂ ಗೊರೂರು ಅನಂತರಾಜುರವರನ್ನು ಅವರ ಬರಹಗಳನ್ನು ಒಬ್ಬ ಸ್ನೇಹಿತನಾಗಿ ಕಂಡವನು.

ಶ್ರೀಯುತರು ಅನೇಕ ಚಿತ್ರ ಕಲಾವಿದರ ಪರಿಚಯಿಸುವ ಜೊತೆಗೆ ಅವರ ಜೀವನ ಶೈಲಿ ಕಲಾವಿದರ ಬದುಕು ಅವರ ಶ್ರೇಷ್ಠತೆಯನ್ನು ನೈಜವಾಗಿ ಲೇಖನಿಯಿಂದ ಚಿತ್ರಿಸಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಚಿತ್ರ ಕಲಾವಿದರ ಬದುಕನ್ನು ಇತಿಹಾಸದ ಪುಟಗಳಿಗೆ ಗೊರೂರು ಅನಂತರಾಜುರವರು ಸೇರಿಸಿರುವುದು ಕಲಾವಿದರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸಿದ್ದೇನೆ. 30 ವರ್ಷಗಳಿಂದಲೂ ಅನೇಕ ನಾಟಕಗಳನ್ನು, ವಿಷಯಗಳನ್ನು ಅಭಿನಯ ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನಟನೆಯ ಗಣ್ಯರನ್ನು ಗುರುತಿಸಿ ಅವರನ್ನು ಲೇಖನದಲ್ಲಿ ಪರಿಚಯಿಸಿರುವ ಕೀರ್ತಿ ಅವರ ಬರಹ ಲೋಕಕ್ಕೆ ಮತ್ತೊಂದು ಸ್ಪೂರ್ತಿ ಅನಿಸುತ್ತದೆ. ಇವರು ಒಂದು ರೀತಿಯ “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ಣುಡಿ ಅಂಟಿ ಕೊಂಡವರಂತೆ ಕಾಣುತ್ತಾರೆ.

ಅನೇಕ ಕಲಾಕೃತಿಗಳನ್ನು ವಿಮರ್ಶೆ ಮಾಡುತ್ತಾ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುತ್ತಾ, ನಾಟಕಗಳನ್ನು ಬರೆಯುತ್ತ, ನಿರ್ದೇಶಕ, ಒಬ್ಬ ನಾಟಕಕಾರನಾಗಿ ನಾಟಕ ರಚಿಸುತ್ತ, ನಟನಾಗಿ ಅಭಿನಯಿಸುತ್ತ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕನ್ನು ಎಲ್ಲಾ ಆಯಾಮಗಳಲ್ಲೂ ಅಭಿವ್ಯಕ್ತಗೊಳಿಸಬಹುದು ಎಂಬುದಕ್ಕೆ ಗೊರೂರು ಅನಂತರಾಜುರವರರ ಅಪೂರ್ವ ಬದುಕು ಮತ್ತು ಬರಹಗಳೆ ಇದಕ್ಕೆ ಸಾಕ್ಷಿ. ಇವರು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಕೆ. ಕರೀಂ ಖಾನ್, ಡಾ. ಎಚ್.ಕೆ. ಲಕ್ಕಪ್ಪ ಗೌಡ, ಬೇಲೂರು ಕೃಷ್ಣಮೂರ್ತಿ, ಡಾ. ಮಳಲಿ ವಸಂತ್ ಕುಮಾರ್, ಸಾಹಿತಿಗಳು ರಂಗಕರ್ಮಿಗಳು, ವಿಚಾರವಂತರನ್ನು ಕೂಡ ತಮ್ಮ ಬರವಣಿಗೆ ಮೂಲಕ ಅವರ ಬದುಕಿಗೊಂದು ಗಟ್ಟಿ ನೆಲೆಯನ್ನು ತುಂಬಿ ಕೊಟ್ಟಂತಹ ಈ ನಾಡಿನ ಒಬ್ಬ ಶ್ರೇಷ್ಠ ಲೇಖಕ ಎನ್ನಲು ಹರ್ಷವೆನಿಸುತ್ತದೆ.

ಶ್ರೀಯುತರು ಜಾನಪದ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಸುಂದರಗೊಳಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ಅನೇಕ ಹಬ್ಬಗಳನ್ನು ಮತ್ತು ನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹಾಗೆ ಲೀನವಾಗಿಸಿರುವುದು ಮಹತ್ವವೆನಿಸುತ್ತದೆ. ಇವರು ಸುಮಾರು 6 ನಾಟಕಗಳನ್ನು 20 ಕಿರು ನಾಟಕಗಳನ್ನು, ವಿಜ್ಞಾನ ಮೌಲ್ಯ ಶಿಕ್ಷಣ ಇತಿಹಾಸ, ಪುರಾಣ ವಾಸ್ತವಿಕತೆ, ಧಾರ್ಮಿಕತೆ ಎಲ್ಲವನ್ನು ಚಿತ್ರಿಸುವ ಸಾಹಿತಿ ಅದುವೇ ಗೊರೂರು ಅಂತರಾಜುರವರು.

ಪ್ರಸ್ತುತ ಈ ದಿನಮಾನಗಳಲ್ಲಿ ಚಿತ್ರ ಕಲಾವಿದರನ್ನು ಅವರ ಶ್ರೇಷ್ಠ ಸಾಧನೆಗಳನ್ನು ತಮ್ಮಷ್ಟಕ್ಕೆ ತಾವೇ ಈ ಪ್ರಪಂಚವನ್ನು ವರ್ಣಮಯವಾಗಿಸಿ ಸೃಷ್ಟಿಗೆ ಮತ್ತಷ್ಟು ಚೈತನ್ಯವನ್ನು ತುಂಬುವ ಚಿತ್ರಕಲಾವಿದರ ಬಗ್ಗೆ ಬರೆಯುವುದು ಒಬ್ಬ ಬರಹಗಾರನಿಗೆ ಇರುವ ಅತಿ ಸೂಕ್ಷ್ಮತೆ ಎಂದು ನಾನು ಭಾವಿಸಿದ್ದೇನೆ. ಶ್ರೀ ಗೊರೂರು ಅನಂತರಾಜುರವರು ಕಾಲದ ಪ್ರವಾಹದಲ್ಲಿ ಕಳೆದುಹೋಗುತ್ತಿರುವ ಚಿತ್ರ ಕಲಾವಿದರ ಹತ್ತಾರು ಸಂಗತಿಗಳನ್ನು ಹಲವಾರು ಚಿತ್ರ ಕಲಾವಿದರ ರೇಖೆಗಳನ್ನು ಅವರ ವರ್ಣ ಶೈಲಿಯನ್ನು ಅವರ ಮನಸ್ಥಿತಿಯ ಓರೆ ಕೋರೆಗಳನ್ನು ಅವರ ಬದುಕಿದ ವಿಚಾರವಂತಿಕೆಯನ್ನು ಈ ಕೃತಿಯಲ್ಲಿ ಹೇಳಿರುವುದು ನನಗೆ ಬಹಳ ಅಪರೂಪವೆನಿಸುತ್ತದೆ.

ನಾನು ಸದಾ ಕ್ಯಾನ್ವಾಸ್ ಮತ್ತು ಬಣ್ಣಗಳ ಜೊತೆ ಬದುಕು ಕಳೆಯುವವನು ಬಿಳಿ ಕ್ಯಾನ್ವಾಸಿಗೆ ನಾನು ಹಚ್ಚಿದ ಬಣ್ಣಗಳಿಂದ ಕ್ಯಾನ್ವಾಸಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಅರ್ಪಿಸಿದವನು, ಆದರೆ ಬರವಣಿಗೆ ನನ್ನದಲ್ಲದು. ಆದರೂ ಸಹ ಅವರ ಪ್ರೀತಿಯ ಮನಸ್ಸಿಗೆ ಸೋತು ನನ್ನ ಬರಹ ಅಧ್ಯಾಯಕ್ಕೆ ಗೊರೂರು ಅನಂತರಾಜುರವರು ಈ ಮೂಲಕ ಸಾಕ್ಷಿಯಾಗಿದ್ದಾರೆ.

 

ಡಾ, ಬಾಬುರಾವ್ ನಡೋಣಿ
ಚಿತ್ರ ಕಲಾವಿದರು
ರಾಯಬಾಗ.
ಮೊಬೈಲ್ : 9448237722

 

ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ

ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ, ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ.

ಯೋಗ ಎನ್ನುವ ಪದ ಸಂಸ್ಕೃತದ ಯುಜ್‌ ಧಾತುವಿನಿಂದ ಹುಟ್ಟಿದೆ.  ಯುಜ್ ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ದೇಹ ಮತ್ತು ಮನಸ್ಸಿನ ಏಕತೆ ಪ್ರತಿನಿಧಿಸುವ ಯೋಗಾಭ್ಯಾಸ ವೇದ ಕಾಲದಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಕ್ರಿ.ಶ. 400 ರಲ್ಲಿ ಪತಂಜಲಿ ಮಹರ್ಷಿ ರಚಿಸಿದ ಯೋಗಸೂತ್ರ ಯೋಗದ ಕುರಿತಾದ ಮೊದಲ ಲಿಖಿತ ಉಲ್ಲೇಖ. ಪತಂಜಲಿ ಮಹರ್ಷಿಗಳ ಪ್ರಕಾರ ಯೋಗಃ ಚಿತ್ತ ವೖತ್ತಿ ನಿರೋಧಃ ಯೋಗವೆಂದರೆ ಚಿತ್ತದ ಚಾಂಚಲ್ಯ ವೖತ್ತಿಗಳನ್ನು ನಿರೋಧಿಸುವುದು.

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿತ ಯೋಗ ಶಾಖೆಗಳು ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ. ಅನೇಕ ಹಿಂದೂ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿ ಯೋಗದ ವಿವಿಧತೆ ತಿಳಿಸಿವೆ. ವಶಿಷ್ಠ ಮಹರ್ಷಿಗಳು ಮನಃ ಪ್ರಶಮನೋಪಾಯೋ ಯೋಗಃ ಇತಿ ಅಬಿಧೀಯತೆ. ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದಿದ್ದಾರೆ.

ಯೋಗಾಭ್ಯಾಸ ಮಾಡುವವರನ್ನು ಯೋಗಿ ಅಥವಾ ಯೋಗಿನಿ ಎನ್ನುವರು. ಪ್ರಾಚೀನ ಕಾಲದ ತಪಸ್ವಿಗಳನ್ನು ಯೋಗಿಗಳೆಂದು ಕರೆದಿದ್ದಾರೆ. ಋಷಿಗಳು ತಪಸ್ಸು ಮಾಡುವ ಕ್ರಿಯೆಗೆ ಯೋಗವೆಂದಿದ್ದಾರೆ. ಸಿಂಧೂ ಕಣಿವೆ ನಾಗರೀಕತೆಯ ಕಾಲದಲ್ಲಿ ಪತ್ತೆಯಾದ ಮೊಹರುಗಳಲ್ಲಿ ಧ್ಯಾನದ ಭಂಗಿ ಹೋಲುವ ಚಿತ್ರಗಳು ಶಾಸ್ತ್ರೀಯ ಚರ್ಯೆಗಳ ಒಂದು ವಿಧ. ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು ಎಂಬುದು ಪುರಾತನ ತತ್ವ ಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯ.

ಹಿಂದೂ ಗ್ರಂಥಗಳಲ್ಲಿ ಯೋಗ ಪದವು  ಕಠೋಪನಿಷತ್‌ನಲ್ಲಿ ಇದ್ದು ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ತಿಳಿಸಿದೆ. ಯೋಗಃ ಸಮತ್ವಂ ಉಚ್ಯತೇ. ಯೋಗ ಎಂದರೆ ಕಾರ್ಯ ತತ್ಪರತೆಯಲ್ಲಿ ಸಮಭಾವ, ಸಮಚಿತ್ತವಾಗಿರುವುದು.ಸ್ತುತಿ-ನಿಂದೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಮುಂತಾದ ದ್ವಂದ್ವ ಜೀವನದಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.

ಯೋಗದ ಪರಿಕಲ್ಪನೆಯ ಗ್ರಂಥಮೂಲಗಳು ಮಧ್ಯಕಾಲೀನ ಉಪನಿಷತ್ತುಗಳು, ಭಗವದ್ಗೀತೆ, ಮಹಾಭಾರತ, ಪತಂಜಲಿಯ ಯೋಗಸೂತ್ರಗಳು. ಭಾರತೀಯ ತತ್ವಜ್ಞಾನದ ಪ್ರಕಾರ ಯೋಗ ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ. ಇವು ರೂಢಿಯಲ್ಲಿ ಬಂದ ಭಾರತೀಯ ಷಡ್ ದರ್ಶನಗಳು. ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ.

ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ.

2014ರ ಸೆಪ್ಟೆಂಬರ್ 27ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಪ್ರಧಾನಿಗಳ ಈ ಪ್ರಸ್ತಾವನೆಗೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳಿಂದ ಬೆಂಬಲ ದೊರಕಿದೆ. 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಎಂದು ಅಧಿಕೃತವಾಗಿ ಘೋಷಿಸಿತು.

ಉತ್ತರ ಗೋಳಾರ್ಧದಲ್ಲಿ ಜೂನ್ 21 ವರ್ಷದ ಅತಿ ಉದ್ದದ ದಿನವಾಗಿದ್ದು ಯೋಗದ ದೃಷ್ಟಿಕೋನದಿಂದ ಇದು ವಿಶೇಷ ಮಹತ್ವ ಪಡೆದಿದೆ.

ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು 21-6-2015 ರಂದು ವಿಶ್ವದಾದ್ಯಂತ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಉದ್ದೇಶವೇನೆಂದರೆ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಉತ್ತಮ ಮಾರ್ಗವಾಗಿದ್ದು, ಇದು ವ್ಯಕ್ತಿಯ ಸಮಗ್ರ ಯೋಗಕ್ಷೇಮ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ದಿನವು ಯೋಗವನ್ನು ಜೀವನಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

ಈ ಮೂಲಕ ಯೋಗ ದಿನಾಚರಣೆಯು ಯೋಗದ ಪ್ರಾಚೀನ ಜ್ಞಾನವನ್ನು ಆಧುನಿಕ ಜಗತ್ತಿಗೆ ತಲುಪಿಸಿ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಕಾಪಾಡುವ ಆಶಯ ಹೊಂದಿದೆ.

ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

ಹಾಸನದ ಚಿತ್ರಕಲಾ ಶಿಕ್ಷಕರು ಮತ್ತು ಕಲಾವಿದರು ಆದ ವಸಂತಕುಮಾರ್ ಅವರ ವಾಟರ್ ಕಲರ್, ಲ್ಯಾಂಡ್ ಸ್ಕೇಪ್, ಬಾರ್ಕೋಲ್ ಮತ್ತು ಪೆನ್ಸಿಲ್ ವರ್ಕ್ಸ್ ಗಳ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಾಸನದ ಒಡನಾಡಿ ಚಿತ್ರ ಕಲಾ ಬಳಗದಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ದಿನಾಂಕ 22-6-2025ರ ಭಾನುವಾರ ಬೆ 11ಕ್ಕೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.ಹಾಸನ ಕ್ಷೇತ್ರದ ಶಾಸಕರು ಶ್ರೀ ಹೆಚ್.ಪಿ.ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸುವರು. ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಶ್ರೀ ಕೆ.ಟಿ.ಶಿವಪ್ರಸಾದ್ ವಿಶ್ವ ಪರಿಸರ ದಿನದಂದು ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು. ಸಾಹಿತಿಗಳು, ವಿಮರ್ಶಕರು, ಶ್ರೀ ಗೊರೂರು ಅನಂತರಾಜು, ಹಿರಿಯ ವ್ಯಂಗ್ಯ ಚಿತ್ರಕಾರರು, ಶ್ರೀ ಶಿವರಾಮ್, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಶ್ರೀ ಹೆಚ್. ಪಿ. ತಾರಾನಾಥ್, ಶ್ರೀಮತಿ ಭಾಗ್ಯ, ಪ್ರಾಂಶುಪಾಲರು. ಶ್ರೀಮತಿ ಸುವರ್ಣ ಕೆ.ಟಿ ಶಿವಪ್ರಸಾದ್, ಕಾದಂಬರಿಗಾರ್ತಿ, ಹಾಸನ ಮತ್ತು ಶ್ರೀಮತಿ ಸುನಂದ ಕೃಷ್ಣ, ಜನಪದ ಗಾಯಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.