ಇ-ಆಸ್ತಿ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯ ಅರ್ಜಿಗಳ ಸಲ್ಲಿಕೆಗೆ ಅವಕಾಶ

ಗಂಗಾವತಿ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೧ ವಾರ್ಡುಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇನ್ನು ಮುಂದೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿಗಳನ್ನು ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಲಾಗಿರುತ್ತದೆ.

ಸಾರ್ವಜನಿಕರು ತಮ್ಮ ಆಸ್ತಿಯ ಖಾತೆಯ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ನಾಲ್ಕು ಕೇಂದ್ರಗಳ ಮೂಲಕ ನಾಗರಿಕರಿಂದ ನೇರವಾಗಿ ಮಾಡ್ಯೂಲ್ ಮೂಲಕ ಹಾಗೂ ಹೆಲ್ಪ್ ಡೆಸ್ಕ್ ಲಾಗಿನ್ ಮೂಲಕ ಸಲ್ಲಿಸಲು ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ.ಎಂ.ಡಿ.ಎಸ್ ನಿಂದ ಅವಕಾಶ ಸಲ್ಲಿಸಿರುತ್ತಾರೆ. ಆದ ಕಾರಣ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸಹಿ/-
ಪೌರಾಯುಕ್ತರು,
ನಗರಸಭೆ, ಗಂಗಾವತಿ.

೨೦೨೫-೨೬ನೇ ಸಾಲಿನ ಕ್ರೀಡಾಕೂಟಗಳ ಪೂರ್ವಭಾವಿ ಸಭೆಯಲ್ಲಿ ಶಿವಕಾಂತ ತಳವಾರ ಇವರಿಂದ ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ ವಿತರಣೆ
ಗಂಗಾವತಿ‌ : ಅಖಂಡ ಗಂಗಾವತಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದೈಹಿಕ ಶಿಕ್ಷಣದ ಶಿಕ್ಷಕರುಗಳಿಗೆ ಇಂದು ಗಂಗಾವತಿ ನಗರದ ಎಂ.ಎನ್.ಎ.ವಿದ್ಯಾಗಿರಿ ಪ್ರೌಢಶಾಲೆಯಲ್ಲಿ ಇಂದು ೨೦೨೫-೨೬ ನೇ ಸಾಲಿನ ಕ್ರೀಡಾಕೂಟಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ನಟೇಶ್ ಹಾಗೂ ಹೊಸದಾಗಿ ದೈಹಿಕ ಶಿಕ್ಷಣ ಪರೀಕ್ಷಕರಾಗಿ ಆಗಮಿಸಿದ ಶ್ರೀಮತಿ ಸರಸ್ವತಿ ಜೂಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಮತ್ತು ತಾಲೂಕ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ, ಕಾರ್ಯದರ್ಶಿಗಳಾದ ಬಿ.ಆರ್. ಜೋಷಿ, ಎನ್.ಜಿ.ಒ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಅಧ್ಯಕ್ಷರಾದ ಗ್ರೇಡ್-೧ ಸಂಘದ ಅಧ್ಯಕ್ಷರಾದ ಬಸವರಾಜ್ ವೆಂಕಟಗಿರಿ, ಪ್ರಾಥಮಿಕ ಶಾಲೆಯ ಗ್ರೇಡ್-೨ ಸಂಘದ ಅಧ್ಯಕ್ಷರಾದ ಶಿವಕಾಂತ ತಳವಾರ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಯಂಕಪ್ಪ ತಳವಾರ್, ಜಿಲ್ಲಾ ಕಾರ್ಯದರ್ಶಿ ಟಿ. ನಾಗರಾಜ್, ಕಾರಟಗಿ ತಾಲೂಕ ಪ್ರಾ.ಶಾ.ಶಿ ಸಂಘದ ಅಧ್ಯಕ್ಷರಾದ ವಿಠ್ಠಲ್ ಜಿರಗಾಳಿ, ನಾಗಪ್ಪ, ರವಿ ನಾಯಕ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಜಯಶ್ರೀ ಸೇರಿದಂತೆ ಸುಮಾರು ಪ್ರಾಥಮಿಕ, ಪ್ರೌಢಶಾಲೆಯ ೭೦ ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರಿಗೆ ೧೭ ವರ್ಷದೊಳಗಿನ ಪ್ರೌಢಶಾಲೆಯ ಬಾಲಕ ಬಾಲಕಿಯರಿಗೆ ಇರುವ ಆಟೋಟಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹಾಗೂ ಸ.ಮಾ.ಹಿ.ಪ್ರಾ ಆನೆಗುಂದಿ ದೈಹಿಕ ಶಿಕ್ಷಕರಾದ ಶಿವಕಾಂತ್ ತಳವಾರ್ ಇವರು ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ಸ್ ಸ್ವಂತ ಹಣದಿಂದ ನೀಡಿದರು. ಇವರಿಗೆ ಎಲ್ಲಾ ಸಂಘಗಳ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.
ಮಾಹಿತಿಗಾಗಿ:
ಯಂಕಪ್ಪ ತಳವಾರ
ತಾಲೂಕ ಘಟಕದ ಅಧ್ಯಕ್ಷರು,
ದೈಹಿಕ ಶಿಕ್ಷಕರ ಸಂಘ
 ಮೊ.ನಂ: ೯೪೪೯೯೨೦೦೯೪
ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯ ಫಲಿತಾಂಶ

ಗಂಗಾವತಿ : ಇತ್ತೀಚೆಗೆ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅದರಲ್ಲಿ, ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ಕುಮಾರಿ ಸಹಸ್ರ.ಹೆಚ್, ಕುಮಾರಿ ರೋಜಾ ಮತ್ತು ಖುಷಿತ್ ಆರಾಧ್ಯ. ಈ ೦೩ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಗಂಗಾವತಿ ನಗರಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

ಈ ಫಲಿತಾಂಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಒಡೆಯರ್ ಮತ್ತು ಆಡಳಿತಾಧಿಕಾರಿ ಬಿ.ಎಸ್ ಪ್ರಕಾಶ ಅವರಿಗೆ ಅಮೇಜಿಂಗ್ ಕೋಚ್ ಮೆಡಲ್‌ನ್ನು ಪ್ರಧಾನ ಮಾಡಲಾಗಿದೆ.

ವಿದ್ಯಾರ್ಥಿಗಳ ಈ ಯಶಸ್ಸಿಗೆ ಕಾರಣೀಕರ್ತರಾದ ಪಾಲಕರಿಗೂ, ಶಿಕ್ಷಕ ವೃಂದದವರಿಗೂ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಯಿತು.

ಮಾಹಿತಿಗಾಗಿ
(ಶ್ರೀಮತಿ ಶೈಲಜಾ ಒಡೆಯರ್)
ಸಂಸ್ಥೆಯ ಮುಖ್ಯಸ್ಥರು,
ಮೊ.ನಂ: ೯೮೪೫೩೬೨೫೬೭

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಭರದ್ವಾಜ್

ಗಂಗಾವತಿ : ನಗರದ ಬಸ್ ನಿಲ್ದಾಣದ ಹತ್ತಿರ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಜೂನ್ ೨೫, ಬುಧವಾರದಂದು ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಜರುಗಿತು. ಸಭೆಯನ್ನು ಸಂಘದ ಕಾನೂನು ಸಲಹೆಗಾರ ಶೇಖರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಶೇಖರಗೌಡ ಪಾಟೀಲ್ ಅವರು ಸಂಘದ ಮೂಲ ಧ್ಯೇಯ ಮತ್ತು ಉದ್ದೇಶಗಳ ಕುರಿತು ಸದಸ್ಯರಿಗೆ ವಿವರವಾಗಿ ತಿಳಿಸಿದರು. ಪ್ರಸ್ತುತ ಜಿಲ್ಲೆಯಾದ್ಯಂತ ಅಂತರರಾಜ್ಯ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವಿಚಾರವನ್ನು ಹೇಳಿದರು.

ಮಹಿಳಾ ಕಾರ್ಮಿಕರಿಗೆ ನಿತ್ಯ ಎದುರಾಗುವ ತೊಂದರೆಗಳು ಮತ್ತು ಕಾರ್ಮಿಕರಿಗೆ ಅನ್ವಯಿಸುವ ಕಾಯ್ದೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಾರ್ಮಿಕರ ಬೋಗಸ್ ಕಾರ್ಡ್‌ಗಳು ಕಂಡುಬಂದರೆ ತಕ್ಷಣವೇ ಸಂಘ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭ ಮೃತ ಕಾರ್ಮಿಕ ಸೋಮಪ್ಪ ಬುನಾದಿ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾಧ್ಯಕ್ಷ ಭಾರಧ್ವಾಜ್ ಅವರು ಮಾತನಾಡಿ, ಇದು ನೋಂದಣಿ ಪೂರ್ವ ಸಭೆಯಾಗಿದ್ದು, ಶೀಘ್ರದಲ್ಲಿಯೇ ಸಂಘದ ಅಧಿಕೃತ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಅವರು ಮುಂದುವರಿದು, ಎಲ್ಲಾ ಸದಸ್ಯರು ಸಂಘದ ನೀತಿ-ನಿಯಮಗಳಿಗೆ ಬದ್ಧರಾಗಿ, ಸಂಘದ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.

 

(ಭರದ್ವಾಜ್)
ಗೌರವಾಧ್ಯಕ್ಷರು
ಮೊ: ೯೭೪೦೭೫೭೫೫೦

ಜಿಲ್ಲಾ ಕಾರಾಗೃಹದ ಬಂಧಿಗಳಿಗೆ ಧ್ಯಾನದ ಮೂಲಕ ಮನ ಪರಿವರ್ತನೆಗೊಳ್ಳಲು ಕರೆ: ಲಲಿತಾ ಕಂದಗಲ್

ಗಂಗಾವತಿ : ಧ್ಯಾನ, ಜ್ಞಾನ, ಸತ್ಸಂಗ, ಮತ್ತು ಸ್ವಾಧ್ಯಾಯಗಳು ಎಂತಹ ಕಠಿಣ ಮನಸುಗಳನ್ನು ಕೂಡ ಪರಿವರ್ತನೆ ಗೊಳಿಸಬಲ್ಲವು ಎಂದು ಧ್ಯಾನ ಶಿಕ್ಷಕಿ ಲಲಿತಾ ನಾರಾಯಣ ಕಂದಗಲ್ ರವರು ನುಡಿದರು.

ಅವರು ಜೂನ್-೨೨ ಭಾನುವಾರ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನಡೆದ ʼಚಿಂತನ ಮಂಥನʼ ಕಾರ್ಯಕ್ರಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಕಾರಾಗೃಹದ ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಜೈಲುವಾಸ ಶಿಕ್ಷೆಯಲ್ಲ, ಅದು  ಒಂದು ಹೊಸ ಶಿಕ್ಷಣ,” ಎಂದು ಅವರು ಹೇಳಿದರು. ಅನೇಕ ಮಹನೀಯರಾದ ನೆಹರು, ಗಾಂಧಿ, ನೆಲ್ಸನ್ ಮಂಡೇಲಾರಂತಹ ಜೈಲುವಾಸದಲ್ಲಿದ್ದಾಗಲೇ ಆ ಸಂದರ್ಭವನ್ನು ಅಧ್ಯಯನಕ್ಕಾಗಿ, ಬರವಣಿಗೆಗಾಗಿ ಬಳಸಿಕೊಂಡು ಜೈಲುವಾಸವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.

ಅದೇ ರೀತಿ ನೀವು ಕೂಡ ಧ್ಯಾನ, ಅಧ್ಯಯನದಲ್ಲಿ ತೊಡಗಿ ಪರಿವರ್ತನೆಗೆ ಮುಂದಾಗಿ ಎಂದು ನುಡಿದರು. ಕಾರಾಗೃಹದಂತ ಸ್ಥಳಗಳಲ್ಲಿ ಚಿಂತನ ಮಂಥನದಂತಹ ಅತ್ಯುತ್ತಮ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಾಗೃಹ ಅಧ್ಯಕ್ಷಕರನ್ನು ಮತ್ತು ಅಲ್ಲಿನ ಸಿಬ್ಬಂದಿಗಳನ್ನು ತುಂಬು ಹೃದಯದಿಂದ ಅಭಿನಂದಿಸಿದರು.

ವಿಶೇಷ ಆಹ್ವಾನಿತರಾದ ಡಾ. ನಾರಾಯಣ ಕಂದಗಲ್ ರವರು ಬಂಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪಶ್ಚಾತಾಪಕ್ಕಿಂತ ಮಿಗಿಲಾದ ಪರಿವರ್ತನೆ ಮತ್ತೊಂದಿಲ್ಲ. ನಿಮ್ಮೊಳಗಿನ ಅರಿವೇ ನಿಮಗೆ ಗುರು. ನೀವು ಈ ಕ್ಷಣದಲ್ಲಿಯೇ ಪರಿವರ್ತನೆಗೊಳ್ಳಲು ಸಾಧ್ಯವಿದೆ. ಅದಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ನುಡಿದರು.

ಜೈಲಿನ ಬಂಧಿಯೊಬ್ಬರು ಇಂತಹ ಧ್ಯಾನ, ಸತ್ಸಂಗದಂತಹ ಸಂಗತಿ ನನಗೆ ಮೊದಲೇ ತಿಳಿದಿದ್ದರೆ ಬಹುಶಃ ನಾನು ಈ ಸ್ಥಳಕ್ಕೆ ಬರುತ್ತಿರಲಿಲ್ಲವೇನೊ ಎಂದು ಭಾವುಕರಾಗಿ ನುಡಿದರು.

ಕೊಪ್ಪಳ ಜಿಲ್ಲಾ ಕಾರಾಗೃಹದ ಅಧ್ಯಕ್ಷಕರಾದ ಅಂಬರೀಶ್ ಪೂಜಾರ್ ರವರು ಅಧ್ಯಕ್ಷತೆ ವಹಿಸಿ ಧ್ಯಾನ ಶಿಕ್ಷಕರ ಸಲಹೆಗಳನ್ನು ಗಂಭೀರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಮಾನಸಿಕ ಆಪ್ತ ಸಮಾಲೋಚಕರಾದ ಏ. ಕೆ. ಹಾವೋಜಿ ಅವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಜೈಲಿನ ಸಿಬ್ಬಂದಿ ರಾಥೋಡ್ ರವರು ಪ್ರಾರ್ಥನೆ ಮಾಡಿದರು.

ಜೈಲರ್ ಶ್ರೀರಾಮುಲು, ಸಹಾಯಕ ಜೈಲರ್ ಎಲ್. ಎಸ್. ತಿಪ್ಪೇಸ್ವಾಮಿ ಹಾಗೂ ಜೈಲಿನ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

 

ಮಾಹಿತಿಗಾಗಿ
ಶ್ರೀಮತಿ ಲಲಿತಾ ನಾರಾಯಣ ಕಂದಗಲ್
ಧ್ಯಾನ ಶಿಕ್ಷಕರು, ಗಂಗಾವತಿ.
ಮೊ ನಂ: ೯೪೮೦೭೭೨೩೩೨

ಅಧ್ಯಯನದ ಮೂಲಕ ಸಾಹಿತ್ಯ ರಚನೆಯಾಗಬೇಕು: ರುದ್ರೇಶ ಭಂಡಾರಿ
ಗಂಗಾವತಿ : ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಿ ಮಾರ್ಪಡಬೇಕು. ಚುಟುಕು ಕವಿಗಳು ಅಧ್ಯಯನದ ಮೂಲಕ ಗಂಭೀರವಾಗಿ ಸಾಹಿತ್ಯ ರಚಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು.
ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಜೂನ್ ೨೧ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿಗೋಷ್ಠಿಗೆ ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ರೇವಣಸಿದ್ದಯ್ಯತಾತನವರು ದಿವ್ಯಸಾನಿಧ್ಯ ವಹಿಸಿದ್ದರು.
ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ನೆರವೇರಿಸಿದರು. ಬಳ್ಳಾರಿ ವೀರಶೈವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಭ್ರಮರಾಂಭ ಯಾಟೆ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಅಧ್ಯಕ್ಷರಾದ ಅಶೋಕ ಗುಡಿಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದರು. ಸಾಹಿತ್ಯಾಸಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ಗೌರಿ ಮಕ್ಕಳ ಸಾಂಸ್ಕೃತಿಕ ಸಂಕಥನ’ ಎಂಬ ಪ್ರಬಂಧ ಮಂಡನೆಗಾಗಿ ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಅಶೋಕ ಡಂಬರ್ ಅವರನ್ನು ಸನ್ಮಾನಿಸಲಾಯಿತು. ಇದೇ ರೀತಿ “ವಿಶೇಷ ಸಾಮರ್ಥ್ಯವುಳ್ಳವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಾದ್ಯತೆಗಳು” ಎಂಬ ಪ್ರಬಂಧಕ್ಕಾಗಿ ಡಾ. ವಿಜಯಕುಮಾರ ಬಡಿಗೇರರಿಗೂ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಸ್.ವಿ ಪಾಟೀಲ್ ಗುಂಡೂರು, ನಾಗಭೂಷಣ ಅರಳಿ, ರಾಘವೇಂದ್ರ ದಂಡಿನ್, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ. ನಿಂಗಜ್ಜ ಉಪಸ್ಥಿತರಿದ್ದರು. ಜೊತೆಗೆ ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸುರೇಶ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಅವರು ಭಾಗವಹಿಸಿದ್ದರು.
ಈ ಕವಿಗೋಷ್ಠಿಯಲ್ಲಿ ಯು.ಆರ್. ಶಿವರುದ್ರಪ್ಪ, ಚಿದಾನಂದ ಕೀರ್ತಿ, ಶಿವಪ್ರಸಾದ ಹಾದಿಮನಿ, ಮಾದೇವ ಮೋಟಿ, ಶರಣು, ಕರಿಸಿದ್ದನಗೌಡರು ಭಾಗವಹಿಸಿದ್ದರು, ಕವಿಗೋಷ್ಠಿಯಲ್ಲಿ ತಾರಾ ಸಂತೋಷ, ಶೋಭಾ ಗೌಡರ್ ಸೇರಿದಂತೆ ೩೫ಕ್ಕೂ ಹೆಚ್ಚು ಕವಿಗಳು ತಮ್ಮ ಚುಟುಕುಗಳು ಹಾಗೂ ಕವನಗಳೊಂದಿಗೆ ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.
(ಅಶೋಕ ಗುಡಿಕೋಟಿ)
ತಾಲೂಕ ಅಧ್ಯಕ್ಷರು,
ಕರವೇ (ಪ್ರವೀಣಕುಮಾರ ಶೆಟ್ಟಿ ಬಣ)
ಅಂಗವಿಕಲರ ಘಟಕ.
ಮೋ:ನಂ: ೯೯೭೨೭೨೩೪೦೬
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.
ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ ವತಿಯಿಂದ ಜೂನ್ ೨೮ ಮತ್ತು ೨೯ ರಂದು ೧೬ ಹಾಗೂ ೧೯ ವರ್ಷದೊಳಗಿನ ಉತ್ತಮ ಆಟಗಾರರ ಜಿಲ್ಲಾ ಮಟ್ಟದ ಆಯ್ಕೆ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ನಿಲಯದ ನಿರ್ದೇಶಕ ರಾಘವೇಂದ್ರ ತೂನ ಅವರು, ಆಸಕ್ತ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.
ಜೂನ್ ೨೮ ಶನಿವಾರ ೧೬ ವರ್ಷದೊಳಗಿನ ಆಟಗಾರರ ಆಯ್ಕೆ ಹಾಗೂ ಜೂನ್-೨೯ ಭಾನುವಾರ ೧೯ ವರ್ಷದೊಳಗಿನ ಉತ್ತಮ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಆಸಕ್ತರಿಗೆ ರಾಯಚೂರಿನ ಮಂತ್ರಾಲಯ ರಸ್ತೆಯ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಆಸಕ್ತರು ಕಲಬುರ್ಗಿಯ ಎನ್.ವಿ ಮೈದಾನದಲ್ಲಿ ಭಾಗವಹಿಸಬಹುದು. ಬೀದರ ಜಿಲ್ಲೆಯವರು ಬೀದರ್ ನ ನೆಹರು ಸ್ಟೇಡಿಯಂ ಮೈದಾನದಲ್ಲಿ, ವಿಜಯಪುರದವರು ಬಿ.ಎಲ್.ಡಿ.ಎ ಮೈದಾನದಲ್ಲಿ, ಬಾಗಲಕೋಟೆಯವರು ಬಾಗಲಕೋಟೆಯ ಬಿ.ವಿ.ವಿ.ಎಸ್ ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಪಾಲ್ಗೊಳ್ಳಬಹುದು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಸಕ್ತರು ಜಿಲ್ಲಾವಾರು ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ರಾಯಚೂರಿಗೆ ಶರಣ ರೆಡ್ಡಿ ಮೊ: (೭೮೯೨೦೬೩೪೭೦), ಕೊಪ್ಪಳಕ್ಕೆ ಚಂದ್ರಶೇಖರ ಎಂ. ಮೊ: (೯೪೪೮೬೩೩೭೪೮), ವಿಜಯಪುರಕ್ಕೆ ಎನ್.ಎಂ. ಹುತಗಿ ಮೊ: (೯೪೪೮೬೭೮೨೮೦), ಕಲಬುರ್ಗಿಗೆ ಕೆ. ವಿಶ್ವನಾಥ ಮೊ: (೯೮೮೦೨೧೨೭೬೯), ಬೀದರ್ ಗೆ ಕುಶಾಲ್ ಪಾಟೀಲ್ ಮೊ: (೯೪೪೮೪೭೬೮೮೯)‌ ಬಾಗಲಕೋಟೆಗೆ ರವಿ ಮಾಗ್ದಮ್ ಮೊ: (೯೮೪೫೩೩೨೮೬೮). ಇವರುಗಳನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಮಾಹಿತಿಗಾಗಿ
ರಾಘವೇಂದ್ರ ತೂನ
ನಿಲಯ ನಿರ್ದೇಶಕರು,
ಗ್ರಾಮೀಣ ಭಾರತಿ ೯೦.೪ ಎಫ್.ಎಂ. ರೇಡಿಯೋ ಕೇಂದ್ರ ಗಂಗಾವತಿ.
ಅeಟಟ: ೯೧೬೪೬೩೫೬೫೫
ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯ ಯೋಗ ದಿನಾಚರಣೆ.

ಗಂಗಾವತಿ: ಜೂನ್-೨೧ ಶನಿವಾರದಂದು ಬೆಳಿಗ್ಗೆ ೬.೩೦ಕ್ಕೆ “ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆ”, ಹಾಗೂ “ನಿವೇದಿತಾ ಶಾಲೆ”ಯ ಸಹಯೋಗದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿ ‘೧೧ನೇ ಅಂತರಾಷ್ಟ್ರೀಯ ಯೋಗ’ ದಿನವನ್ನು ಆಯೋಜಿಸಲಾಗಿತ್ತು.

ಯೋಗ ಶಿಬಿರದಲ್ಲಿ ಗಂಗಾವತಿಯ ಸ್ನೇಹ ಬಳಗ ಯೋಗ ಸಂಸ್ಥೆಯ ಯೋಗ ತರಬೇತುದಾರರಾದ ಪರಸಪ್ಪ ಕುರುಗೋಡ ಹಾಗೂ ಆನಂದ ಪಟ್ಟಣಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿ ಹಾಗೂ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಶಿಬಿರದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ರುಬೀನ್ ಮಿರಜ್‌ಕರ್ ಭಾಗವಹಿಸಿ ಮಕ್ಕಳಿಗೆ ಯೋಗದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾಂತ್‌ ರಾವ್‌ರವರು ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳಿದರು.

ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಮಾನಸ ಪಾಟೀಲ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಅವರು ಮಾತನಾಡಿ ಯೋಗವು ಸಕಲ ರೋಗಗಳಿಗೆ ನಿಯಂತ್ರಕವಿದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನಿತಾ ಮಿರಜ್‌ಕರ್, ವ್ಯವಸ್ಥಾಪಕರಾದ ಮಂಜುನಾಥ, ಉಭಯ ಶಾಲೆಗಳ ಶಿಕ್ಷಕ ವೃಂದ ಹಾಗೂ ಸುಮಾರು ೬೫೦ ವಿದ್ಯಾರ್ಥಿಗಳು ಈ ಶಿಬಿರದಲ್ಲಿ  ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನವನ್ನು ಪಡೆದರು.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಗಂಗಾವತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಸವನದುರ್ಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ವಿವರಿಸಿದರು. ಅವರು ಯೋಗ, ಪ್ರಾಣಾಯಾಮ ಹಾಗೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳ ಓದು ಮತ್ತು ಏಕಾಗ್ರತೆಯ ಅಭಿವೃದ್ಧಿಗೆ ಯೋಗ ಮತ್ತು ಧ್ಯಾನ ಹೇಗೆ ಸಹಾಯಕವಾಗಬಹುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.ಯೋಗ ಮತ್ತು ಪ್ರಾಣಾಯಮದ ಆಸನಗಳನ್ನು ಮಾಡಿ ತೋರಿಸಿ, ಯೋಗದ ಮಧ್ಯೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಹೇಳುವ ಮೂಲಕ ಸ್ವಯಂ ಸೇವಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಚಂದ್ರಶೇಖರ ರೆಡ್ಡಿ, ಲಿಂಗಣ್ಣ ಜಂಗಮರಹಳ್ಳಿ, ಅಜಗರ್ ಪಾಷಾ, ಈಶ್ವರಪ್ಪ, ಕುಮಾರಸ್ವಾಮಿ, ಶ್ರೀಮತಿ ರಮಾ, ಶ್ರೀಮತಿ ಶ್ರೀದೇವಿ, ಶ್ರೀಮತಿ ಲಕ್ಷೀ, ಚಿದಾನಂದ ಮೇಟಿ, ಶ್ರೀಮತಿ ಕನಕಮ್ಮ, ಮಹೇಶ್ ಹಿರೇಮಠ, ನಿರುಪಾದಿ, ಶ್ರೀಮತಿ ಕವಿತಾ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ, ಸೇವಕಿಯರು ಉಪಸ್ಥಿತರಿದ್ದರು.

ಗ್ರಂಥ ಪಾಲಕರಾದ ರಮೇಶ ಗಬ್ಬೂರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ, ಛತ್ರಪ್ಪ ತಂಬೂರಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಪ್ರಾಚಾರ್ಯರು, ಉಪನ್ಯಾಸಕರು, ಗ್ರಂಥಪಾಲಕರು ಮತ್ತು ವಿದ್ಯಾರ್ಥಿಗಳೆಲ್ಲಾ ಸೇರಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿದರು.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಕೋಟಿ ನೇಮಕ

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷ ಜಿ.ಎಮ್.ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಸಂಘದ ಸಂಘಟನೆ ಮಾಡಲು ಮತ್ತು ವೃತ್ತಿಪರ ಪತ್ರಕರ್ತರನ್ನು ಸಂಘದ ಸದಸ್ಯತ್ವ ಮಾಡಲು ಮತ್ತು ಸಂಘದ ಹೆಸರಿಗೆ ಚ್ಯುತಿ ಬರದಂತೆ ಕೆಲಸ ಮಾಡಲು ಮುಂದಾಗಲು ತಿಳಿಸಲಾಗಿದೆ.