೨ನೇ ರಾಜ್ಯ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆ.

ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ಮತ್ತು ಆಯುಷ್ ಇಲಾಖೆ ವಿಜಯನಗರ ಜಿಲ್ಲಾ ಸಂಘಟಿತ ೨ನೇ ರಾಜ್ಯ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್ ಫೆಬ್ರವರಿ-೧೬ ಭಾನುವಾರ ಹಂಪಿಯ ಶಿವರಾಮ ಅವಧೂತ ಮಂಟಪದಲ್ಲಿ ನಡೆಯಿತು.

ಈ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ೧೪ ಸ್ಪರ್ದಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು ಎಂದು ಯೋಗ ತರಬೇತಿದಾರರಾದ ಎನ್. ಭಾನುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದರು.

ಅದರಲ್ಲಿ ೮ ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಾನಿಧ್ಯ, ದ್ವಿತೀಯ ಸ್ಥಾನವನ್ನು ಆವಂತಿಕಾ ಪಡೆದರೆ, ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಹೃತ್ವಿಕ್ ಪಡೆದರು. ಅದೇರೀತಿ ೮ ರಿಂದ ೧೦ ವಯಸ್ಸಿನ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಿ. ನಿತಿಕಾ, ದ್ವಿತೀಯ ಸ್ಥಾನವನ್ನು ಶ್ರೇಯಾ ಕುಲಕರ್ಣಿ ಪಡೆದರೆ, ಬಾಲಕರ ವಿಭಾಗದಲ್ಲಿ ನಿತಿನ್ ಎರಡನೇ ಸ್ಥಾನ ಪಡೆದು ಚಾಂಪಿಯನ್ ಆಪ್ ದಿ ಚಾಂಪಿಯನ್ ಆಗಿ ಹಂಪಿ ಕುಮಾರ ಎನ್ನುವ ಪ್ರಶಸ್ತಿ ಪಡೆದರು. ಅದೇರೀತಿ ೧೧ ರಿಂದ ೧೪ ವಯಸ್ಸಿನ ವರ್ಗದಲ್ಲಿ ಪ್ರಥಮ ಸ್ಥಾನವನ್ನು ಕೆ ಪ್ರಬಂಜನ್ ಪಡೆದರು. ಈ ಸ್ಪರ್ಧೆಯಲ್ಲಿ ಇನ್ನಿತರ ವಿದ್ಯಾರ್ಥಿಗಳಾಗಿ ಭಾರ್ಗವಿ, ವಿನಯ್, ಅನುಷಾ, ವಿಶಾಲ್, ನಿಹಾರಿಕಾ, ಎನ್ ಚೇತನ್ ಕೃಷ್ಣಾ ರೆಡ್ಡಿ, ಕೆ ಅನನ್ಯಾ ಭಾಗವಹಿಸಿ ಪ್ರಮಾಣಪತ್ರ ಮತ್ತು ಪದಕ ಪಡೆದರು.

ಈ ವಿದ್ಯಾರ್ಥಿಗಳಿಗೆ ಪ್ರಗತಿ ಕ್ರೀಡಾ ಅಕಾಡೆಮಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್, ನಿರ್ದೇಶಕರಾದ ಜಗನ್ನಾಥ ಆಲಂಪಲ್ಲಿ ಅವರು, ಯೋಗ ತರಬೇತುದಾರರಾದ ಎನ್. ಭಾನುಪ್ರಸಾದ್ ಮತ್ತು ಸಹಕರಿಸಿದ ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.

ಮಹಾತ್ಮ ಗಾಂಧೀಜಿ ಕಂಡ ಗ್ರಾಮಗಳ ಅಭಿವೃದ್ದಿ ಕನಸು ಧರ್ಮಸ್ಥಳ ವಿರೇಂದ್ರ ಹೆಗ್ಡೆಯವರ ಯೋಜನೆಗಳ ಮೂಲಕ ಸಾಕಾರ: ಜೆ. ಚಂದ್ರಶೇಖರ

ಗಂಗಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ (ರಿ) ಟ್ರಸ್ಟ್ ಗಂಗಾವತಿ ವತಿಯಿಂದ ಫೆಬ್ರವರಿ -16 ರವಿವಾರ ಗಂಗಾವತಿ ನಗರದ ಲಕ್ಷ್ಮೀ ಕ್ಯಾಂಪ್ ನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಜೆ ಚಂದ್ರಶೇಖರ್ ರವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಗಾಂಧೀಜಿಯವರ ಗ್ರಾಮಗಳ ಅಭಿವೃದ್ದಿಗೆ ಕಂಡ ಕನಸನ್ನು ಪೂಜ್ಯ ಹೆಗ್ಡೆಯವರು ಧರ್ಮಸ್ಥಳ ಯೋಜನೆ ಮೂಲಕ ಸಾಕಾರ ಮಾಡುತಲಿದ್ದಾರೆ, ಬಡವರ ಅಭಿವೃದ್ಧಿಯನ್ನೇ ಮೂಲ ಗುರಿಯಾಗಿಸಿಕೊಂಡಿರುವ ಪೂಜ್ಯರು, ಆರ್ಥಿಕ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದ್ದಾರೆ. ಡಾ ಹೇಮಾವತಿ ಅಮ್ಮನವರು ಮಹಿಳೆಯರಿಗೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಶಿಸ್ತು, ಸ್ವಚ್ಛತೆ, ಧ್ಯಾನದಂತ ಕಾರ್ಯಕ್ರಮಗಳ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಬುನಾದಿಯನ್ನು ಹಾಕುವಂತ ಕೆಲಸ ಮಾಡುತ್ತಿದ್ದಾರೆ. ಇದರ ಸದುಪಯೋಗಪಡಿಸಿಕೊಂಡರೆ ಗ್ರಾಮಗಳ ಅಭಿವೃದ್ಧಿ ಮಾಡಲು ಬೇರೆ ಯಾರೂ ಬರಬೇಕಾಗಿಲ್ಲ, ನಾವೇ ಸಾಕು ಎಂದು ಪ್ರೇರಣಾ ಮಾತುಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ಎ, ಯವರು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಜೇಶ್ವರಿ ವಕೀಲರು ಆನೆಗುಂದಿ ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಲಿತಾ ನಾರಾಯಣರವರು, ಮಹಾಲಕ್ಷ್ಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀ ಶಂಕರನಾಗ್ ನರಸಪ್ಪ ಗೌಳಿ ಯವರು, ಶಂಕರನಾಯಕ ರವರು ಸೇರಿದಂತೆ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ ರವರು ತಾಲೂಕಿನ ಸಿಬ್ಬಂದಿಗಳು ಸೇವಾಪ್ರತಿನಿಧಿಗಳು ಸೇರಿದಂತೆ ಜ್ಞಾನವಿಕಾಸ ಕಾರ್ಯಕ್ರಮದ ಸರ್ವ ಸದಸ್ಯರು ಉಪಸ್ಥಿರಿದ್ದರು.

೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಶ್ಲಾಘನೀಯ: ಲಲಿತಾ ರಾಣಿ

ಗಂಗಾವತಿ: ವಿವಿಧ ಕ್ಷೇತ್ರಗಳಲ್ಲಿ ೩೨ ಸಾಧಕರನ್ನು ಗುರುತಿಸಿ, ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ ಎಂದು ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.

ಅವರು ಭಾನುವಾರ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀ ಚನ್ನಬಸವ ಪ್ರಕಾಶನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಮಹಿಳಾ ಕವನ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದ ೧೦೮ನೇ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟಕ ಪರಶುರಾಮ ಪ್ರಿಯ ಅವರು ಕಳೆದ ೨೫ ವರ್ಷಗಳಿಂದ ಅನೇಕ ಸಂಘ, ಸಂಸ್ಥೆಗಳ ಮೂಲಕ ಉತ್ತಮ ಕಾರ್ಯಕ್ರಮ, ಸಮಾರಂಭ ನಡೆಸುತ್ತಾ ಬಂದಿದ್ದಾರೆ. ಇದು ಸಾಮಾನ್ಯ ಕಾರ್ಯವಲ್ಲ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿ ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಕಸಾಪ ಭವನ ಇದ್ದೂ ಇಲ್ಲದಂತಾಗಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳದ ಕೊರತೆ ಬರಬಾರದು. ಈ ನಿಟ್ಟಿನಲ್ಲಿ ಕಸಾಪ ಪದಾಧಿಕಾರಿಗಳು ಗಮನಹರಿಸಿ ಕಸಾಪ ಭವನ ಸ್ವಚ್ಚತೆ ಕಾಪಾಡಬೇಕು ಎಂದರು.

ಮಾಜಿ ಕಾಡಾ ಅಧ್ಯಕ್ಷ, ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಮಯದಲ್ಲಿ ಪತ್ರಕರ್ತರಾದ ಎಸ್.ಎಂ.ಪಟೇಲ್, ರಾಮಮೂರ್ತಿ ನವಲಿ, ಸಿ.ಮಹಾಲಕ್ಷ್ಮೀ, ಡಾ|| ಶಿವಕುಮಾರ ಮಾಲಿಪಾಟೀಲ್, ಬಿ.ಸಿ.ಐಗೋಳ, ಪಂಚಾಕ್ಷರಕುಮಾರ, ಮಾರುತಿ ಐಲಿ, ಚನ್ನಬಸಪ್ಪ ಬಳಗಾರ ಉಡುಪಿ, ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಹಾವೇರಿ, ವಿಷ್ಣುತೀರ್ಥ ಜೋಶಿ, ವಿ.ಎಸ್.ಶಿವಪ್ಪಯ್ಯನಮಠ ಯಲಬುರ್ಗಾ ಸೇರಿದಂತೆ ೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಂತರ ಪತ್ರಕರ್ತ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದಿಂದ ನಡೆದ ೧೦೮ನೇ ಕವಿಗೋಷ್ಠಿಯಲ್ಲಿ ಶಾಮೀದ್ ಲಾಠಿ, ಶಶಿಕಲಾ ಕುರುಗೋಡು, ಚಿದಾನಂದ ಕೀರ್ತಿ, ಭೀಮನಗೌಡ ಕೇಸರಹಟ್ಟಿ, ಜಯಶ್ರೀ ಹಕ್ಕಂಡಿ ಮತ್ತಿತರರು ಕವನ ವಾಚಿಸಿದರು.

ನಿವೃತ್ತ ಪ್ರಾಚಾರ್ಯ ಬಸವರಾಜ ಐಗೋಳ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ ಆರ‍್ಹಾಳ, ಗುರುರಾಜ ಬೆಳ್ಳುಬ್ಬಿ, ಪಿ.ಎಂ.ಸುಬ್ರಮಣ್ಯಂ, ಎಂ.ಪರಶುರಾಮ ಪ್ರಿಯ, ಕೃಷ್ಣ ಆಶೀಶ್, ರಗಡಪ್ಪ ಹೊಸಳ್ಳಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಶಿಕ್ಷಕ ಸುಂಕಪ್ಪ ಸ್ವಾಗತಿಸಿ, ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರೂಪಿಸಿದರು.

ಸೂರ್ಯನಾಯಕನತಾಂಡದಲ್ಲಿ ಪ್ರಥಮ ಬಾರಿಗೆ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿ ಅದ್ಧೂರಿ ಆಚರಣೆ

ಗಂಗಾವತಿ: ನಗರದ ಹೊರವಲಯದ ಸೂರ್ಯನಾಯಕನತಾಂಡದಲ್ಲಿ ಇದೇ ಪ್ರಥಮ ಬಾರಿಗೆ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಜಯಂತಿಯ ನಿಮಿತ್ಯ ಸಂತ ಸೇವಾಲಾಲ್ ಭಾವಚಿತ್ರದೊಂದಿಗೆ ತಾಂಡಾದಲ್ಲಿ ಕುಂಭ ಹೊತ್ತ ಮಹಿಳೆಯರೊಂದಿಗೆ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದ ಹತ್ತಿರದಲ್ಲಿರುವ ಬಂಜಾರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿವೃತ್ತ ಶಿಕ್ಷಕರಾದ ರಾಜಶೇಖರ ಅವರಿಗೆ ಹಾಗೂ ಸ.ಕಿ.ಪ್ರಾ ಶಾಲೆಯ ಮುಖ್ಯಗುರುಗಳಾದ ಮಲ್ಲಿಕಾರ್ಜುನರವರಿಗೆ ಹಾಗೂ ಹಿರಿಯ ಶಿಕ್ಷಕರಾದ ಪ್ರಭಯ್ಯ ಹಿರೇಮಠರವರಿಗೆ ಬಂಜಾರ ಸಮಾಜದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಜಯಂತಿ ಪಾಲ್ಗೊಂಡ ಎಲ್ಲರಿಗೂ ಅನ್ನಸಂತರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಾಜಿ ಚವ್ಹಾಣ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಮರೇಶ ರಾಠೋಡ್, ಎಸ್.ಡಿ.ಎಂ.ಸಿ ಸದಸ್ಯ ಶಿವಪ್ಪ, ಬಸಾಪಟ್ಟಣ ಗ್ರಾ.ಪಂ ಸದಸ್ಯೆ ಗೌರಮ್ಮ ಶಂಕರ ನಾಯಕ, ಮಾಜಿ ಗ್ರಾ.ಪಂ ಸದಸ್ಯ ಶಂಕರ ನಾಯಕ, ತಾಂಡಾದ ಹಿರಿಯರಾದ ಕಟ್ಟಿಮನಿ ಹನುಮಂತಪ್ಪ ನಾಯಕ, ಸಕ್ರಪ್ಪ ಕಾರಭಾರಿ, ಶಂಕ್ರಪ್ಪ ಡಾವು, ಹನುಮಂತಪ್ಪ ಪೂಜಾರಿ, ನಿವೃತ್ತ ಕಂದಾಯ ಅಧಿಕಾರಿ ಎಸ್.ವಿ ಗೋಪಾಲಕೃಷ್ಣ ಸೇರಿದಂತೆ ತಾಂಡಾದ ಹಿರಿಯ ಮುಖಂಡರು, ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಟೆಡೆಕ್ಸ್, ಟೆಡ್‌ಟಾಕ್ ಮಾದರಿಯಲ್ಲಿ ಭಾರತದ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮ ಮಹಾನ್ ಕಿಡ್ಸ್ ಶಾಲೆಯಲ್ಲಿ: ನೇತ್ರಾಜ್ ಗುರುವಿನಮಠ

ಗಂಗಾವತಿ: ಫೆಬ್ರವರಿ-15 ಶನಿವಾರ ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಮಹಾನ್ ಕಿಡ್ ಟಾಕ್ಸ್ ಎನ್ನುವ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಇದು ಭಾರತದಲ್ಲಿ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮವಾಗಿದೆ ಎಂದು ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನಮಠ ಪ್ರಕಟಣೆಯಲ್ಲಿ ತಿಳಿಸಿದರು.

ಶಾಲೆಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಪ್ರತಿ ಶನಿವಾರ ೨೦ ಮಕ್ಕಳಿಗೆ ಈ ವೇದಿಕೆಯನ್ನು ನೀಡಲಾಗುತ್ತಿದ್ದು, ಮಕ್ಕಳು ಮಾತನಾಡುವ ಮೊದಲು ವಿಷಯವನ್ನು ತಿಳಿದುಕೊಳ್ಳಬೇಕು. ವಿಷಯವನ್ನು ತಿಳಿದುಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು. ಈ ಒಂದು ಕಾರ್ಯಕ್ರಮದಿಂದ ಮಕ್ಕಳ ಕಲಿಕೆ ಇನ್ನು ಉನ್ನತ ಮಟ್ಟಕ್ಕೆ ಏರಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಟೆಡೆಕ್ಸ್, ಟೆಡ್‌ಟಾಕ್ ಮಾದರಿಯನ್ನು ಹೋಲುವ ಕಾರ್ಯಕ್ರಮ ಇದಾಗಿದ್ದು ಭಾರತದಲ್ಲಿ ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಥ ಒಂದು ವಿನೂತನ ಪ್ರಯೋಗವನ್ನು ಮಾಡಲಾಗಿದೆ. ಈ ವೇದಿಕೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳು ವಾರಕ್ಕೆ ೨೦ ಮಕ್ಕಳಂತೆ ಮಕ್ಕಳು ತಮಗೆ ಇಷ್ಟ ಇರುವ ವಿಶೇಷ ವಿಷಯವನ್ನು ಎಲ್ಲಾ ಮಕ್ಕಳ ಮತ್ತು ಪಾಲಕರ ಮುಂದೆ ಮಾತನಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಬೇರೆ ಬೇರೆ ವಿಷಯಗಳ ಮೇಲೆ ತುಂಬಾ ಕ್ರಿಯಾತ್ಮಕವಾಗಿ ಮಾತನಾಡಿದರು. ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು ಮಕ್ಕಳ ಕಲಿಕೆ ಆತ್ಮವಿಶ್ವಾಸ, ಶಬ್ದಗಳ ಬಳಕೆ, ಹೊಸ ಹೊಸ ವಿಷಯಗಳನ್ನು ಕಲಿಯುವುದು, ಕಲಿತಿರುವುದನ್ನು ಎಲ್ಲರ ಮುಂದೆ ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ಇಂಥ ವೇದಿಕೆಯನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಯೋಜಿಸಿದ್ದಕ್ಕಾಗಿ ಪಾಲಕರು ಹರ್ಷ ವ್ಯಕ್ತಪಡಿಸಿ, ನಮ್ಮ ಮಕ್ಕಳಿಗೆ ಈ ಶಾಲೆಯಲ್ಲಿ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಪಾಲಕರು ಶ್ಲಾಘಿಸಿದರು.

ಈ ಶನಿವಾರ ಎಂ.ಡಿ ಇರ್ಫಾನ್ ಚೆಸ್ ಕುರಿತು, ಆಲ್ ಫಾಲ್ಸ್ ಸಮಯದ ಕುರಿತು, ಜಿಯಾನ್ ಅಲಿ ಊಟದ ಅಭ್ಯಾಸದ ಕುರಿತು, ಅಭಿಜ್ಞಾ ಯಾಕೆ ನಾವು ಧನ್ಯವಾದಗಳು ಹೇಳಬೇಕು, ಅರ್ಹಾನ್ ಸೌರಮಂಡಲದ ಕುರಿತು, ಅರ್ಫಾನಿ ದಯೆ ಕುರಿತು, ಆಧ್ಯ ಎಸ್.ಹೆಚ್ ನೀರಿನ ಕುರಿತು, ಶಿಫಾ ನಾವು ಬೆಳಗ್ಗೆ ಎದ್ದ ತಕ್ಷಣ ಏನು ಮಾಡುತ್ತಿದ್ದೇವೆ, ಫರ್ಹಾಜ್ ಆರೋಗ್ಯವೇ ಭಾಗ್ಯ, ಸಾಯಿ ತನ್ವಿ ನಾನು ನನ್ನ ಸಾಕುಪ್ರಾಣಿಯಿಂದ ಏನನ್ನು ಕಲಿತಿರುವೆ, ಅನ್ವಿತ ಯಾರನ್ನು ಜಡ್ಜ್ ಮಾಡಬಾರದು, ಕೃತಿಕ ಯುನಿಟಿ ಇಸ್ ಸ್ಟ್ರೆಂಥ್, ಅಂಚಿತ ಸ್ಮಾರ್ಟ್ ವರ್ಕ್, ಶಾಹಿಂ ಹೌ ಪ್ರಾಕ್ಟೀಸ್ ಮೇಟ್ ಮ್ಯಾನ್ ಪರ್ಫೆಕ್ಟ್, ಜಜಾ ಹುಸ್ನ ಎಲ್ಲಾ ಸಂದರ್ಭಗಳಲ್ಲೂ ಹೇಗೆ ಸಂತೋಷವಾಗಿರಬೇಕು, ಸಾತ್ವಿಕ್ ಇನ್ಫೇಶನ್ ಹಣದುಬ್ಬರ, ಕಾರ್ತಿಕ್ ಬಿಟ್ ಕಾಯಿನ್, ತೋಹಿದ ಶಿಕ್ಷಕರ ಕುರಿತು, ಅಲ್ವೇರ ಶಿಕ್ಷಣದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ಮಕ್ಕಳ ಕಲಿಕೆಗೆ ಮಹಾನ್ ಕಿಡ್ಸ್ ಶಾಲೆ ಎಲ್ಲಾ ರೀತಿಯಿಂದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪಾಲಕರು ಮಕ್ಕಳಿಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪೂರ್ಣಿಮಾ, ಮಂಜುನಾಥ್, ಕುಮುದಿನಿ, ದೀಪ, ಸಹನಾ ಶೈಲಜಾ, ಚಂದ್ರಶೇಖರ್ ಕುಂಬಾರ್, ಸಿದ್ದೇಶ್, ತೇಜಸ್ವಿನಿ, ಮುತ್ತ, ಸಲಿನಾ, ಶಾಂತಿ ಸೇರಿದಂತೆ ಪಾಲಕರು ಕೂಡ ಇದ್ದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳ ಸಹಕಾರ ಅಗತ್ಯ: ಡಾ|| ಅಮರೇಶ ಪಾಟೀಲ್

ಗಂಗಾವತಿ: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಆದರೂ ಅವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ದೊರೆಯಲಿ ಎಂಬ ಉದ್ದೇಶದಿಂದ ತಮಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಾರೆ. ಸರಕಾರದ ಜೊತೆಗೆ ನಾವೂ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಜವಾಬ್ದಾರಿ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಅಷ್ಟೇ ಇರುತ್ತದೆ ಎಂದು ಗಂಗಾವತಿಯ ಖ್ಯಾತ ಮಕ್ಕಳ ತಜ್ಞರು ಹಾಗೂ ಐಎಪಿ ವಿಜಯನಗರ ಶಾಖೆಯ ಅಧ್ಯಕ್ಷರಾದ ಡಾ|| ಅಮರೇಶ್ ಪಾಟೀಲ್ ಅವರು ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಗಂಗಾವತಿಯ ಸ.ಹಿ.ಪ್ರಾ. ಶಾಲೆ ವಿರುಪಾಪುರ ತಾಂಡಾದಲ್ಲಿ ಆಯೋಜಿಸಿದ್ದ ದಾನಿಗಳಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗೆ ಎಲ್.ಇ.ಡಿ ಟಿ.ವಿ ದೇಣಿಗೆ ನೀಡಿ ಮಾತನಾಡಿದರು. ಸರಕಾರ ಕೊಡುವ ಬಿಸಿ ಊಟ, ಹಾಲು, ಮೊಟ್ಟೆ, ಪಠ್ಯಪುಸ್ತಕ, ಸಮವಸ್ತçಗಳ ಜೊತೆಗೆ ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಪರಿಣಾಮಕಾರಿಯಾದ ಶಿಕ್ಷಣ ಸಿಗಲಿ ಎಂಬ ಸದುದ್ದೇಶದಿಂದ ಶ್ರೀಮತಿ ಶ್ರೀದೇವಿಯವರು ಎಲ್.ಇ.ಡಿ ಟಿವಿಯ ಅವಶ್ಯಕತೆ ನಮ್ಮ ಶಾಲೆಗೆ ಇದೆ ಎನ್ನುವ ವಿಷಯ ಪ್ರಸ್ತಾಪಿಸಿದಾಗ ನಾನು ಅತ್ಯಂತ ಸಂತೋಷದಿAದ ಎಲ್.ಇ.ಡಿ ಟಿವಿಯನ್ನು ನೀಡಲು ಒಪ್ಪಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳುತ್ತಾ ಬನ್ನಿ ಸರ್ಕಾರಿ ಶಾಲೆಗಳನ್ನು ಉಳಿಸೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗಂಗಾವತಿಯ ಸಿಎಂಎಸ್ ಎಂಟರ್‌ ಪ್ರೈಸಸ್‌ನ ಮಾಲಿಕರಾದ ಶ್ರೀ ಅಮಿತ್‌ಕುಮಾರ್, ಚಂದ್ರಶೇಖರ ಬಲಕುಂದಿ ಅವರು ಶಾಲಾ ದಾಖಲಾತಿಗಳ ಸಂರಕ್ಷಣೆಯ ಉದ್ದೇಶದಿಂದ ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಅಲ್ಮಾರವನ್ನು ಹಾಗೂ ವಿರುಪಾಪುರ ತಾಂಡಾದ ಗುತ್ತಿಗೆದಾರರಾದ ಶ್ರೀ ವೆಂಕಟೇಶ್ ನಾಯಕ್ ಮಾತಾಳೋ ಇವರು ಐದು ಸಾವಿರ ರೂಪಾಯಿ ಬೆಲೆಬಾಳುವ ಡಯಾಸ್ ಅನ್ನು ದೇಣಿಗೆ ನೀಡಿದ್ದರಿಂದ, ಈ ಮೂವರು ದಾನಿಗಳಿಗೆ ಶಾಲೆಯವತಿಯಿಂದ ಗೌರವ ಸಮರ್ಪಣೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಮುಖ್ಯೋಪಾಧ್ಯಾಯರು ಸ.ಕಿ.ಪ್ರಾ ಶಾಲೆ ವಿರುಪಾಪುರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗೌರವ ಸಮರ್ಪಣೆಯ ನಂತರ ಮುಖ್ಯೋಪಾಧ್ಯಾಯರಾದ ರಾಮಣ್ಣ ಅವರು ಸರಕಾರದ ಜೊತೆಗೆ ಇಂತಹ ದಾನಿಗಳು ಕೈ ಜೋಡಿಸಿದಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ನಿಮ್ಮ ಸಹಾಯ ಸಹಕಾರ ಸದಾ ನಮ್ಮೊಂದಿಗೆ ಇರಲಿ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

ಸಹ ಶಿಕ್ಷಕಿಯಾದ ಜಿ. ಶ್ರೀದೇವಿ ಕೃಷ್ಣಪ್ಪ ಅವರು “ಪ್ರಾರ್ಥಿಸುವ ತುಟಿಗಳಿಗಿಂತ ದಾನ ನೀಡುವ ಕೈ ದೊಡ್ಡದು” ಎಂಬಂತೆ ಶಾಲೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಪ್ರಸ್ತಾಪ ಮಾಡಿದ ತಕ್ಷಣ ದೇಣಿಗೆ ನೀಡಲು ಒಪ್ಪಿಕೊಂಡ ಮೂವರು ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದುರುಗಪ್ಪ, ಶಿಕ್ಷಣ ಪ್ರೇಮಿಗಳು, ಸಹ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸತತ ಅಧ್ಯಯನ ಮೂಲಕ ಚುಟುಕು ಸಾಹಿತ್ಯದ ಶ್ರೀಮಂತಿಕೆ. ಜಿಲ್ಲಾ ಮಟ್ಟದ ೩ನೆಯ ಕವಿಗೋಷ್ಠಿಯಲ್ಲಿ ಕವಿ -ಶಿ.ಕಾ ಬಡಿಗೇರ ಸಲಹೆ

ಕೊಪ್ಪಳ: ಚುಟುಕು ಸಾಹಿತ್ಯಕ್ಕೆ ಅಪಾರ ಮಹತ್ವ ಇದೆ ಉದಯೋನ್ಮುಖ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುಟುಕು ಸಾಹಿತ್ಯ ಅಧ್ಯಯನ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರತ್ನಿಸಬೇಕೆಂದು ಹಿರಿಯ ಸಾಹಿತಿ ಶಿ.ಕಾ.ಬಡಿಗೇರ ಅಭಿಪ್ರಾಯಪಟ್ಟರು.

ಅವರು ಭಾನುವಾರ ಸಮೀಪದ ಭಾಗ್ಯನಗರದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿ ಚುಟುಕು ವಾಚಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ಅಖಂಡ ರಾಯಚೂರು ಜಿಲ್ಲೆ ಇದ್ದಾಗ ಕೊಪ್ಪಳ ಜಿಲ್ಲೆಯ ಅನೇಕ ಸಾಹಿತ್ಯ ಆಸಕ್ತರು ಚುಟುಕು ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ನಡೆಸಲು ಅವಕಾಶ ಬೆಳೆಸಿಕೊಂಡು ಬಂದಿದ್ದಾರೆ ಈಗಲೂ ಸಹ ಪರಿಷತ್ತಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅದರ ಕಾಯ೯ಚಟುವಟಿಕೆಗಳನ್ನು ವಿಸ್ತರಣೆ ಅತ್ಯಂತ ಲವಲವಿಕೆಯಿಂದ ಆಯೋಜನೆ ಮಾಡುತ್ತಿರುವುದು ಸಾಹಿತಿಗಳ ಉತ್ಸಾಹ ತುಂಬುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಯುವ ಸಾಹಿತಿಗಳನ್ನು ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಸಂದೇಶ ಮೂಡಲಿ ಎಂದು ಆಶಿಸಿದರು.

ವಿಶೇಷ ಉಪನ್ಯಾಸ : ಕೊಪ್ಪಳ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆದ ಬಂದ ದಾರಿ ಕುರಿತು ಶಿಕ್ಷಕ, ಸಾಹಿತಿ ಕಲ್ಲಪ್ಪ ಕವಳಕೇರಿ ಮಾತನಾಡಿ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹನೀಯರಲ್ಲಿ ಸಾಕಷ್ಟು ಜನ ಇದ್ದಾರೆ, ಗ್ರಾಮೀಣ ಭಾಗದಲ್ಲಿಯೂ ಸಹ ಸಾಹಿತ್ಯಾಸಕ್ತರಿಗೆ ತಾವು ಪ್ಯಾಂಟು ಶರ್ಟು, ಮಹಿಳೆಯರಿಗೆ ಸೀರೆ ವಿತರಿಸಿ ಸನ್ಮಾನ ಕಾರ್ಯಕ್ರಮ ಮಾಡಿದ ಉದಾಹರಣೆಗಳಿವೆ, ಸಾಹಿತ್ಯ ಆಸಕ್ತರ ಸಂಖ್ಯೆ ಕೊಪ್ಪಳ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿದೆ. ಬಹಳಷ್ಟು ಕವಿಗಳು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಳಪ್ಪ, ವೀರಾಪುರ ವಕೀಲರು ಹಾಗೂ ಅಮಿನ ಸಾಹೇಬ ಮುಲ್ಲಾ ಅವರು ಕನ್ನಡ ಭಾಷೆ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ನಮ್ಮ ಮಾತೃಭಾಷೆಯನ್ನು ಪ್ರೀತಿಸಲೇಬೇಕು, ಎಲ್ಲಾ ಭಾಷೆಗಳನ್ನು ಗೌರವಿಸುತ್ತ, ನಮ್ಮ ಕನ್ನಡವನ್ನು ಬೆಳೆಸೋಣ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡು
ಸಾಹಿತ್ಯದ ಸವಿಯನ್ನು ಎಲ್ಲೆಡೆಯೂ ಪಸರಿಸುವ ಕಾರ್ಯ ಮಾಡೋಣ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮಹಾಂತೇಶ ನೆಲಾಗಣಿ ಅವರು ಸಾಹಿತ್ಯ, ಸಾಂಸ್ಕೃತಿಕ, ಕಾರ್ಯಕ್ರಮಗಳು, ಹೆಚ್ಚು ಹೆಚ್ಚು ನಡೆಯುವುದರಿಂದ ಸಾಹಿತ್ಯವೂ ಬೆಳೆಯುತ್ತದೆ ನಾವೂ ಬೆಳೆಯುತ್ತೇವೆ ಎಂದು ಹೇಳಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕವಿ/ ಕವಿಯತ್ರಿಯರಾದ ಪುಷ್ಪಲತಾ ಯೋಳಭಾವಿ, ಎ.ಪಿ.ಅಂಗಡಿ, ವಿದ್ಯಾಶ್ರೀ . ಇತರರು ಚುಟುಕು ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹಾಂತೇಶ ನೆಲಾಗಣಿ ಅವರನ್ನು ಕವಿಯತ್ರಿ, ಶಿಕ್ಷಕಿ, ವಿದ್ಯಾಶ್ರೀ ಹಿರೇಮಠ ದಂಪತಿಗಳು ಸನ್ಮಾನಿಸಿದರು.

ಸಂಸ್ಕಾರಗಳ ಅನುಕರಣೆ ಮಕ್ಕಳ ಶಿಕ್ಷಣದ ಭಾಗವಾಗಬೇಕು: ನಾಗರಾಜ ಗುತ್ತೇದಾರ

ಕೊಪ್ಪಳ: ಕೊಪ್ಪಳದ ಸೇವಾಭಾರತಿಯ ವಿದ್ಯಾವಿಕಾಸ ಪ್ರಕಲ್ಪದ ಮನೆಪಾಠ ಕೇಂದ್ರಗಳ ವಾರ್ಷಿಕೋತ್ಸವವು ಫೆಬ್ರವರಿ-೦೯ ರಂದು ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಜರುಗಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗಂಗಾವತಿಯ ಸಂಕಲ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆ ಬಗ್ಗೆ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಶ್ರದ್ಧಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಮತಿ ಪಟ್ಟಣಶೆಟ್ಟಿ ಅವರು ಸೇವಾಭಾರತಿಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು.

ಸೇವಾಭಾರತಿಯ ವಿಭಾಗ ಸಂಯೋಜಕರಾದ ಪ್ರಾಣೇಶ ಜೋಶಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಜಯಶ್ರೀ ಪಲ್ಲೇದ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ಶಾರದಾ ಕೊರಗಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಪ್ರಕಲ್ಪದ ಸಮಿತಿಯ ಅಧ್ಯಕ್ಷರಾದ ಅಮರೇಶ ಪಾಟೀಲ, ವಿಶ್ವಸ್ತರಾದ ಮಾ. ಬಸವರಾಜ ಡಂಬಳ, ಸಮಿತಿಯ ಕಾರ್ಯದರ್ಶಿಯಾದ ಮಹಾದೇವಪ್ಪ ಕೌಲಗಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮಹಾಲಕ್ಷ್ಮಿ ಕಂದಾರಿ, ದೀಪಾ ಕುಲಕರ್ಣಿ, ಬಸವರಾಜ ಸಮಗಂಡಿ, ಕಾರ್ಯಕರ್ತರಾದ ಗೀತಾ ಐಲಿ, ಹುಲಿಗೆಮ್ಮ ಉಂಕಿ, ವಿದ್ಯಾವಿಕಾಸ ಪ್ರಕಲ್ಪದ ಭಾಗ್ಯನಗರದ ಹಾಗೂ ಕೊಪ್ಪಳದ ಶಿಕ್ಷಕಿಯರು, ಸೇವಾ ಭಾರತಿಯ ಹಿತೈಷಿಗಳ ೩೫೦ ಕ್ಕೊ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ನಂತರ ನಡೆದ ಪಾಲಕರ ಸಭೆಯಲ್ಲಿ ೯೦ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಮಧ್ಯಾಹ್ನ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಾತೆಯರು ಎಲ್ಲಾ ಮಕ್ಕಳಿಗೆ ಮಾತೃ ಭೋಜನದ ಸವಿಯನ್ನು ಉಣಿಸಿದರು. ಊಟದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೆಪಾಠ ಕೇಂದ್ರದ ಮಕ್ಕಳು ಪ್ರತಿಭಾ ಪ್ರದರ್ಶನ ನೀಡಿದರು.
ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ಫೆಬ್ರವರಿ-೮ ಶನಿವಾರದಂದು ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವೇ||ಮೂ|| ಸಿದ್ದರಾಮಯ್ಯ ಗುರುವಿನ್, ಶ್ರೀ ವೇ||ಮೂ|| ಸಿದ್ದಯ್ಯ ಗುರುವಿನ್ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಶಾಸಕರು ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಇವರು ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ೩೭ ವರ್ಷಗಳಿಂದ ಈ ಸಂಸ್ಥೆಯು ಶಿಕ್ಷಣ ನೀಡುತ್ತಾ ಬಂದಿರುವುದು ಅತ್ಯಂತ ಮಹತ್ವ ಪೂರ್ಣವಾದ ವಿಷಯವಾಗಿದೆ. ಇಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯ. ಇಂತಹ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಗೆ ಶಾಸಕರ ಅನುದಾನದಲ್ಲಿ ಮತ್ತು ವೈಯಕ್ತಿಕವಾಗಿ ಈ ಶಾಲೆಗೆ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ನಂತರ ಶಾಲಾ ಮಕ್ಕಳಿಂದ ರಚಿತವಾದ ‘ಅಕ್ಷರ ದೀವಿಗೆ’ ಎಂಬ ಹಸ್ತಪ್ರತಿಯನ್ನು ಮಾಜಿ ಶಾಸಕರಾದ ಪರಣ್ಣ ಮನವಳ್ಳಿ ಅವರು ಬಿಡುಗಡೆಗೊಳಿಸಿ ಮಾತನಾಡುತ್ತಾ, ಈ ಸಂಸ್ಥೆ ಗ್ರಾಮೀಣ ಭಾಗದಲ್ಲಿ ೧೯೮೯ ರಿಂದ ಶಿಕ್ಷಣ ನೀಡುತ್ತಾ ಬಂದಿರುವುದು ತುಂಬಾ ಸಂತೋಷಕರವಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸಣ್ಣೆಪ್ಪರವರು ಮಾತನಾಡುತ್ತಾ, ಈ ನಮ್ಮ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದಲ್ಲಿದ್ದರೂ ಸಹ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವೈದ್ಯರು, ಸೈನಿಕರು, ಶಿಕ್ಷಣಾಧಿಕಾರಿಗಳಾಗಿ, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿಯವರಿಗೆ ಮತ್ತು ಮಾಜಿ ಶಾಸಕರಾದ ಶ್ರೀ ಪರಣ್ಣ ಮನವಳ್ಳಿ ಅವರಿಗೆ ವಿದ್ಯಾ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ವೇದಿಕೆ ಮೇಲೆ ವಾಣಿಜ್ಯೋದ್ಯಮಿಗಳಾದ ಎಂ ಸರ್ವೇಶ್, ಸಂಸ್ಥೆಯ ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ ಎಚ್., ಆಡಳಿತ ಮಂಡಳಿಯ ಸದಸ್ಯರಾದ ದ್ಯಾಮಪ್ಪ ಅಂಗಡಿ, ಸಣ್ಣಕ್ಕಿ ನೀಲಪ್ಪ, ಹನುಮಂತಪ್ಪ ಗಡ್ಡಿ ವಡ್ಡರಟ್ಟಿ, ಕೆ ಬಾಳಪ್ಪ ವೆಂಕಟಗಿರಿ, ವಾಣಿಕುಮಾರ್ ಕಂಬಳಿ, ಎಚ್ ಹನುಮೇಶ್, ಹನುಮೇಶ್ ಉಣ್ಣೆಕುರಿ ವೆಂಕಟಗಿರಿ, ಶಾಲೆಯ ಮುಖ್ಯಗುರುಗಳಾದ ನಿಂಗಪ್ಪ ಗುಂಡೂರು, ಶಾಲಾ ಶಿಕ್ಷಕ, ಶಿಕ್ಷಕಿಯವರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಪ್ರವೀಣ್‌ಕುಮಾರ್ ಶಿಕ್ಷಕರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ನಾಗಭೂಷಣ ವಾಲ್ಮೀಕಿ ನಿರೂಪಿಸಿ, ಶಿಕ್ಷಕ ಹನುಮೇಶ್ ಬಿಂಗಿ ವಂದಿಸಿದರು.

ನಂತರ ಮಕ್ಕಳಿಂದ ಮನೋರಂಜನ ಕಾರ್ಯಕ್ರಮಗಳು ನಡೆದವು.

ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ಫೆಬ್ರವರಿ-೧೩ ರಿಂದ ೨೪ ರವರೆಗೆ ಸಂಸ್ಕೃತ ಜ್ಞಾನ ಸಂಪಾದನಾ ಶಿಬಿರ

ಗಂಗಾವತಿ: ಶ್ರೀ ಹಾನಗಲ್ಲ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಮತ್ತು ಕನ್ನಡ ಜಾಗೃತಿ ಸಮಿತಿ ಇವರ ಸಹಯೋಗದಲ್ಲಿ ಶ್ರೀ ಗುರು ಕುಮಾರೇಶ್ವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಫೆಬ್ರವರಿ-13 ಗುರುವಾರದಿಂದ, 24 ಸೋಮವಾರದವರೆಗೆ ಪ್ರತಿದಿನ ಸಂಜೆ 5:30 ರಿಂದ 7:೦೦ ರವರೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಸ್ಕೂಲ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಸಂಸ್ಕೃತ ಜ್ಞಾನ ಸಂಪಾದನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅರಳಹಳ್ಳಿ ರಾ.ರಾ ಬೃಹನ್ಮಠದ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಶಿಬಿರದಲ್ಲಿ ಬೋಧಕರಾಗಿ ಗದಗ ಬೆಟಗೇರಿಯ ಸಂಸ್ಕೃತ ಶಿಕ್ಷಕರಾದ ಪೂಜ್ಯ ಶ್ರೀ ಶಾಂತಕುಮಾರ ದೇವರು ಆಗಮಿಸಲಿದ್ದು, ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಹಾಗೂ ನಮ್ಮ ದೇಶದ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಅವಶ್ಯವಿದ್ದು, ಸಂಸ್ಕೃತವು ವಾಕ್‌ಶುದ್ಧಿ, ಜ್ಞಾನದ ಅಭಿವೃದ್ಧಿ, ಸುಸಂಸ್ಕೃತ ನಡೆನುಡಿಯನ್ನು ತಿಳಿಸುವ ಭಾಷೆಯಾಗಿದ್ದು, ಜ್ಞಾನ ಸಾಗರವನ್ನು ಒಳಗೊಂಡ ಸಂಸ್ಕೃತವನ್ನು ಕಲಿಯಲು ಇದೊಂದು ಸುವರ್ಣವಕಾಶವಾಗಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿ ಇರುವುದಿಲ್ಲ. ಸರ್ವ ಸಂಸ್ಕೃತ ಭಾಷಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ತರಬೇತಿಯಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೧೫೦೯೦೮೩೮೫, ೯೬೧೧೭೪೫೩೬೯ ಗೆ ಸಂಪರ್ಕಿಸಬಹುದು.