ಗಾನಯೋಗಿ ಪದ್ಮಭೂಷಣ ಶ್ರೀ ಪುಟ್ಟರಾಜ ಗವಾಯಿಗಳವರ ೧೧೧ನೆಯ ಜಯಂತೋತ್ಸವ. ಸಾಹಿತ್ಯ ಸಂಗೀತ ಒಂದೇ ನಾಣ್ಯದ ಎರಡು ಮುಖಗಳು: ಕಾಶಿಮ್ ಅಲಿ ಮುದ್ದಾಬಳ್ಳಿ.

ಗಂಗಾವತಿ: ಸಾಹಿತ್ಯ, ಸಂಗೀತ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಕನ್ನಡ ಸಾಹಿತ್ಯ ಸಮ್ಮೇಳನದಂಥ ಕಾರ್ಯಕ್ರಮಗಳಲ್ಲಿ ಸಂಗೀತ ಕಲಾವಿದರನ್ನು ನಿರ್ಲಕ್ಷಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಾಹಿತ್ಯಕ್ಕೆ ಶಕ್ತಿ ತುಂಬುವುದೇ ಸಂಗೀತ. ಅಂತಹ ಅದ್ಭುತ ಶಕ್ತಿಯನ್ನು ಹೊಂದಿದ ಸಂಗೀತ ಪ್ರತಿಯೊಬ್ಬರ ಮನೆಯು ಒಬ್ಬ ಸಂಗೀತಗಾರನ್ನು ಹೊಂದಬೇಕು. ಯಾವುದೇ ಅಂಗವಿಕಲಾಂಗ ಅನಾಥ ಮಕ್ಕಳು ಇದ್ದಲ್ಲಿ ಅಂತಹ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಶ್ರಮಕ್ಕೆ ಸೇರ್ಪಡೆಗೊಳಿಸುವುದರ ಮೂಲಕ ಸ್ವಾವಲಂಬಿ ಬದುಕಿಗಾಗಿ ಸಮಾಜ ಮುಖಿವಾಗಿ ಜೀವಿಸಲು ಅವಕಾಶ ಕಲ್ಪಿಸಬೇಕೆಂದು ಗಾನಯೋಗಿ ಶ್ರೀಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಕಾಶಿಮಲಿ ಮುದ್ದಾಬಳ್ಳಿ ಹೇಳಿದರು.

ಅವರು ಬುಧವಾರದಂದು ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಡಾ. ಪಂಡಿತ್ ಪುಟ್ಟರಾಜ ಸಂಗೀತ ಕಲಾ ಪರಿಷತ್ ಹಾಗೂ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿ ಆಯೋಜಿಸಿದ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜಯಂತೋತ್ಸವ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದುಗಿನ ಮಾದರಿಯಲ್ಲಿ ಭತ್ತದ ಕಣಜವನ್ನು ಎರಡನೆಯ ಕೈಲಾಸವನ್ನಾಗಿಸಿದ ಕೀರ್ತಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ. ಈ ಹಿಂದಿನಂತೆ ಬೆಳ್ಳಿ ತುಲಾಭಾರವನ್ನು ಗಂಗಾವತಿಯ ಸರ್ವಭಕ್ತರ ಸಹಕಾರದಿಂದ ನಡೆಸುವುದರ ಮೂಲಕ ಅಂಧ ಅನಾಥ ನಿರ್ಗತಿಕರ ಮಕ್ಕಳ ಬದುಕಿಗೆ ಆಸರೆ ಆಗಬೇಕೆಂದು ಸಲಹೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಜೆ. ನಾಗೇಶ್‌ರಾವ್ ನೆರವೇರಿಸಿ ಮಾತನಾಡಿ ನಗರದಲ್ಲಿ ಸಾಕಷ್ಟು ಸಂಗೀತ ಶಾಲೆಗಳನ್ನು ಹೊಂದಿದ್ದು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಸಂಗೀತ ಶಿಕ್ಷಣಕ್ಕೆ ಹೆಚ್ಚಿನ ಅಗತ್ಯ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವೆಂಕಟೇಶ್ ದಾಸನಾಳವಹಿಸಿ ಮಾತನಾಡಿ, ಹಾನಗಲ್ಲ ಗುರು ಕುಮಾರಸ್ವಾಮಿಗಳವರ ದಿವ್ಯ ದೃಷ್ಟಿಯ ಫಲವೇ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಗವಾಯಿಗಳು. ಇಂತಹ ದೈವಿ ಪುರುಷರ ಅನುಗ್ರಹದಿಂದ ಸಂಗೀತ ಕ್ಷೇತ್ರ ಸಮೃದ್ಧಿಯಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹೊಸಳ್ಳಿ ಶಂಕರಗೌಡ, ಮಲ್ಲಿಕಾರ್ಜುನಗೌಡ ಪಾಟೀಲ್, ಸುದರ್ಶನ್ ಜೋಶಿ, ಬಸವನಗೌಡ ಪಾಟೀಲ್, ದರೋಜಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಇದಕ್ಕೂ ಪೂರ್ವದಲ್ಲಿ ರುದ್ರಯ್ಯಸ್ವಾಮಿ ಅಯೋಧ್ಯ ಶ್ರೀ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿನ ಗಣ್ಯರು ಪುಷ್ಪಾರ್ಚನೆ ನಡೆಸಿದರು. ಬಳಿಕ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಿಂದ ತಡರಾತ್ರಿ ೧ ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ಜರುಗಿತು. ಶಿಕ್ಷಕ ಮೈಲಾರಪ್ಪ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ, ರೇಡಿಯೋ ನಿಲಯದಲ್ಲಿ ಸರ್ವಾಧ್ಯಕ್ಷ ಶ್ರೀ ಲಿಂಗಾರೆಡ್ಡಿ ಆಲೂರು ರವರಿಗೆ ಸನ್ಮಾನ

ಗಂಗಾವತಿ: ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ಇಂದು ನಗರದ ಗ್ರಾಮೀಣ ಭಾರತಿ ೯೦.೪ ಎಫ್. ಎಂ. ರೇಡಿಯೋ ನಿಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನಗರದಲ್ಲಿ ಮಾ.೨೭, ೨೮ರಂದು ಹಮ್ಮಿಕೊಳ್ಳಲಾಗಿರುವ ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಕಥೆಗಾರ, ಖ್ಯಾತ ನಿರೂಪಕ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ನಗರದ ವಿವೇಕಾನಂದ ಕಾಲೋನಿಯಲ್ಲಿರುವ ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ನಿಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಆಲೂರುರವರು ನನ್ನ ಸಾಹಿತ್ಯ ಕೃಷಿ, ಕನ್ನಡ ಸೇವೆಯನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಗರದಲ್ಲಿ ಇದೇ ಮಾರ್ಚ್ ೨೭ ಮತ್ತು ೨೮ ರಂದು ನಡೆಯಲಿರುವ ಸಮ್ಮೇಳನಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ರೇಡಿಯೋ ನಿಲಯದ ನಿರ್ದೇಶಕರಾದ ರಾಘವೇಂದ್ರ ತೂನ, ವ್ಯವಸ್ಥಾಪಕರಾದ ಲಾವಣ್ಯ ಅಂಚಕಟ್ಲು, ಖ್ಯಾತ ನಟ ವಿಷ್ಣುತೀರ್ಥ ಜೋಶಿ, ವಕೀಲರು ಶರದ್ ದಂಡಿನ್, ನಗರಸಭೆ ಸದಸ್ಯ ವಾಸುದೇವ ನವಲಿ, ಸಾಹಿತಿ ಅರಳಿ ನಾಗಭೂಷಣ, ವೀರೇಶ್, ಸುಬ್ರಹ್ಮಣ್ಯ ರಾಯಕರ್, ವಕೀಲರು ಶಿವಾನಂದಸ್ವಾಮಿ ನವಲಿ, ರೂಪನಗೌಡ ಸಂಗಾಪುರ ಸೇರಿದಂತೆ ಇತರರಿದ್ದರು.

NTEP ಕಾರ್ಯಕ್ರಮದಡಿಯಲ್ಲಿ ಉತ್ತಮ ಆಶಾಕಾರ್ಯಕರ್ತೆಯಾಗಿ ಹಿರೇಬೆಣಕಲ್‌ನ ಶಾಂತಮ್ಮ ಬೂದಗುಂಪ ಆಯ್ಕೆ.

ಗಂಗಾವತಿ: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NTEP ಕಾರ್ಯಕ್ರಮದ ಅಡಿಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಶಾಂತಮ್ಮ ಬೂದುಗುಂಪರವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ, ೨೦೨೪ನೇ ಸಾಲಿನ ಅತ್ಯುತ್ತಮ ಉದ್ಯೋಗಿ ಎಂದು ಆಯ್ಕೆ ಮಾಡಲಾಗಿದೆ.

ಅವರಿಗೆ ಮಾರ್ಚ್ ೨೪ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಕೊಪ್ಪಳದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಿಶ್ವ ಕ್ಷಯರೋಗ ದಿನ ೨೦೨೫ ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಹಾಗೂ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಶ್ರೀಮತಿ ಶಾಂತಮ್ಮ ಬೂದಗುಂಪ ಅವರಿಗೆ ಹಿರೇಬೆಣಕಲ್ ಗ್ರಾಮದ ಸಾರ್ವಜನಿಕರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ಅಪಾರ ಭಕ್ತಸಮೂಹ ಹೊಂದಿದ ಪೂಜ್ಯ ದೊಡ್ಡ ಯಮನೂರಪ್ಪ ನವಣಕ್ಕಿಯವರ ನಿಧನ: ಭಕ್ತ ಸಮೂಹ ಸಂತಾಪ

ಗಂಗಾವತಿ: ಗಂಗಾವತಿಯ ದೈವೀ ಪುರುಷ ಪೂಜ್ಯನೀಯ ಲಿಂಗೈಕ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರ ಹಿರಿಯ ಸುಪುತ್ರರಾದ ಪೂಜ್ಯನೀಯ ಶ್ರೀ ದೊಡ್ಡ ಯಮನಪ್ಪ ನವಣಕ್ಕಿಯವರು ತಂದೆಯವರ ಮಾರ್ಗದಲ್ಲಿಯೇ ಸೇವೆಯನ್ನು ಸಲ್ಲಿಸಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದು, ಅವರು ಭಾನುವಾರ ರಾತ್ರಿ ೯ ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವು ಮಾರ್ಚ್-೨೪ ಸೋಮವಾರ ಗಂಗಾವತಿಯ ಜುಲೈನಗರದ ಬೈಪಾಸ್ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು.

ಪೂಜ್ಯರ ಆತ್ಮಕ್ಕೆ ಶಾಂತಿ ಸಿಗಲೆಂದು ಕುರುಹಿನಶೆಟ್ಟಿ ಸಮಾಜದ ಯಜಮಾನರುಗಳು, ಎಂ. ಮಲ್ಲಿಕಾರ್ಜುನ ನಾಗಪ್ಪ, ಚೆಗೂರು ಶ್ಯಾಮಣ್ಣ, ಏಳುಬಾವಿ ಕುಬೇರಪ್ಪ, ತಟ್ಟಿ ನಾಗಪ್ಪ, ಶ್ಯಾವಿ ತಿಪ್ಪಣ್ಣ ಹಾಗೂ ಕುರುಗೋಡು ಬಸವರಾಜ ಈ ಎಲ್ಲಾ ಸಮಾಜದ ಯಜಮಾನರು ಹಾಗೂ ಅಪಾರ ಬಂದು ಬಳಗದವರು ಮತ್ತು ಭಕ್ತ ಸಮೂಹದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 50ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾನಗಲ್ ಶ್ರೀಗಳ 11 ದಿನದ ಪುರಾಣ ಕಾರ್ಯಕ್ರಮ ಜರುಗಿಸಲಾಯಿತು.

ಜಾತ್ರಾ ದಿನದ ಅಂಗವಾಗಿ ಶರಣ ಬಸವೇಶ್ವರ ಮೂರ್ತಿಗೆ ಪೂಜಾ ಪುನಸ್ಕಾರ ಹಾಗೂ ಹೋಮ ಹವನಗಳನ್ನು ಅರ್ಚಕರಿಂದ ನೆರೆವೆರಿಸಲಾಯಿತು.

ಬೆಳಗಿನ ಜಾವ ವದುವರರನ್ನು ಕರೆತಂದು ಡಣಾಪೂರ ಗ್ರಾಮದ ತುಂಗಾಭದ್ರ ನದಿಗೆ ತೆರಳಿ ಕುಂಭಕಳಸಗಳಿಂದ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಸಕಲವಾದ್ಯವೃಂದಗಳಿಂದ, ಡೊಳ್ಳು, ವಿವಿದ ಮೇಳಗಳಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಕಲ ಭಕ್ತಾದಿಗಳೊಳಗೊಂಡ ಧರ್ಮ ಸಭೆಯಲ್ಲಿ ಮೂರು ನವಜೋಡಿಗಳು ಸಾಮೂಹಿಕ ವಿವಾಹಿತರಾಗಿ ಶ್ರೀ ಶರಣ ಬಸವೇಶ್ವರ ಭಕ್ತಿಗೆ ಪಾತ್ರರಾದರು.  ಬಳಿಕ ಶರಣ ಬಸವೇಶ್ವರ ಜಾತ್ರಮಹೋತ್ಸವಕ್ಕೆ ಆಗಮಿಸಿದ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರೆವೆರಿಸಲಾಯಿತು. ವಿಶೇಷವಾಗಿ ಅನ್ನಸಂತಪರ್ಣೆಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಭಕ್ತಾದಿಗಳಿಗೆ ನೀರನ್ನು ಲೋಟದಲ್ಲಿ ಸರಬರಾಜು ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದ್ದು ವಿಶೇಷ, ಗ್ರಾಮದ ಸಕಲರು ಭಾಗಿಯಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರೆವೆರಿಸಿದರು.

ಸಂಜೆ ಶ್ರೀಶರಣ ಬಸವೇಶ್ವರ ಮಹಾರಥೋತ್ಸವಕ್ಕೆ ಹೆಬ್ಬಾಳ ಶ್ರೀಗಳು ಚಾಲನೆ ನೀಡಿದರು. ಈ ವೇಳೆ ತಿರುಪತ್ತೆಪ್ಪ ತಾತನವರು, ಅಯೋದ್ಯ ಹಾಲಮಠ ಗುರುಗಳು ಗ್ರಾಮದ ಹಿರಿಯರು ಭಾಗಿ ಇದ್ದು ಯಶಸ್ವಿಗೊಳಿಸಿದರು.

ಮಹಿಳೆಗೆ ಅನುಕಂಪ ಬೇಡ, ಅವಕಾಶ ನೀಡಿ: ಡಾ.ಶೋಭಾ.ಕೆ.ಎಸ್.

ಇಂದು ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮಾರಂಭವನ್ನು ಜ್ಯೋತಿ ಬೆಳಗಿ ವಿನೂತನ ವಿಶೇಷ ರೀತಿಯಲ್ಲಿ ತೊಟ್ಟಿಲು ತೂಗುವ ಮೂಲಕ ಉದ್ಘಾಟಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್.ರವರು ಇತ್ತೀಚಿನ ಶತಮಾನಗಳಲ್ಲಿ ಮಹಿಳೆ ಆಧುನಿಕ ಯುಗದಲ್ಲಿ ತೀವ್ರವಾಗಿ ಸದೃಢವಾಗುತ್ತಿರುವುದರಿಂದ ಮಹಿಳೆಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ಘನ ಉಪಸ್ಥಿತರಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕರಿಗೂಳಿ ಯವರು ಸರ್ವ ರಂಗಗಳಲ್ಲಿ ಮಹಿಳೆಗೆ ಸಮಾನತೆ ಸಿಗಬೇಕು. ತಾಯಿ, ಹೆಂಡತಿ, ಸಹೋದರಿಯಾಗುವ ಮಹಿಳೆ ಉನ್ನತ ಶಿಕ್ಷಣ ಕಲಿತು ಅತ್ಯುನ್ನತ ಹುದ್ದೆಗೆ ಅಲಂಕೃತರಾಗಬೇಕೆಂದು ಆಶಿಸಿದರು.

ಘನ ಉಪಸ್ಥಿತರಿದ್ದ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಸರ್ಫರಾಜ್ ಅಹ್ಮದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಪ್ರತಿಯೊಬ್ಬರೂ ತಾಯಿ ಮುಖ್ಯ.ಅಲ್ಲದೇ ಶಿಕ್ಷಣದಿಂದ ತಮ್ಮ ಗುರಿಗಳು ಅತ್ಯುತ್ತವಾಗಲೆಂದು ಶುಭಕೋರಿದರು.

ಬೋಧಕೇತರರಾದ ಶ್ರೀಮತಿ ಜಬೀನಾ ಬೇಗಂ ಅವರು ಮಾತನಾಡಿ ಸರ್ವಸಮತೆಯ ಬಾಳು ಬೇಕೆಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಹಾಗೂ ಮಹತ್ವ, ಪ್ರಸ್ತುತ ದಿನಗಳಲ್ಲಿ ಮಹಿಳೆಯ ಸ್ಥಾನದ ಕುರಿತು ಪ್ರಾಸ್ತಾವಿಕವಾಗಿ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ತಾತಪ್ಪ.ಕೆ ಇವರು ಅಭಿಪ್ರಾಯಿಸಿದರು.

ಸದರಿ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು, ನಾಡಿನ ಮಹಿಳಾ ಸಾಧಕಿಯರ ಕುರಿತಾಗಿ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳೇ ಭಾಷಣ ಮಾಡಿದರು.

ವಿದ್ಯಾರ್ಥಿನಿಯರಾದ ಸೂಫಿಯಾ ರವರು ಸಿಂಧುತಾಯಿ ಸಕ್ಪಾಲ್ ರ ಕುರಿತು, ಲಾವಣ್ಯರವರು ಸೂಲಗಿತ್ತಿ ನರಸಮ್ಮರ ಕುರಿತು , ರಾಧಿಕಾರವರು ತುಳಿಸಿಗೌಡ, ಪಲ್ಲವಿಯವರು ಸುನೀತಾ ವಿಲಿಯಮ್ಸ್, ಗಾಯತ್ರಿ ಎಂಬ ವಿದ್ಯಾರ್ಥಿನಿ ಭೀಮವ್ವ ದೊಡ್ಡ ಬಾಳಪ್ಪರ ಕುರಿತು ಮಹೇಶ್ವರಿರವರು ಅಕ್ಕಮಹಾದೇವಿ, ಅಂಬ್ರೀನ್ ಬೇಗಂ ಅವರು ಬಾನು ಮುಷ್ತಾಕ್ ರವರ ಕುರಿತು ವಿಚಾರ ಮಂಡನೆ ಮಾಡಿದರು, ನಂತರ ಕಾರ್ಯಕ್ರಮದಲ್ಲಿ ವಿಷಯಮಂಡನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ನೀಡಿ ಪ್ರೋತ್ಸಾಹ ಗೌರವ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಾಣಿಜ್ಯ ಶಾಸ್ತ್ರದ ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಅಖಿಲಾಂಡೇಶ್ವರಿ ವಾಸಂಶೆಟ್ಟಿ ಇವರನ್ನು ಗೌರವಿಸಲಾಯಿತು.

ಇತ್ತೀಚೆಗೆ ಆಂಧ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್ ಅವರನ್ನು ಹಾಗೂ ಮಹಿಳಾ ಸಿಬ್ಬಂದಿಯವರಾದ ಸಂಧ್ಯಾ, ಜಬೀನಾ ಬೇಗಂ, ಶಾಂತಮ್ಮ, ಸಾವಿತ್ರಮ್ಮ ಇವರನ್ನು ಸನ್ಮಾನಿಸಲಾಯಿತು.

ಪ್ರಾಧ್ಯಾಪಕರಾದ ರವಿಕುಮಾರ್, ವಿರೂಪಾಕ್ಷ, ಶಂಕ್ರಪ್ಪ, ಶಶಿಕುಮಾರ್, ವೆಂಕಟರಾಜು, ಪೀರಾವಲಿ, ದೇವರಾಜ್, ಪರಶುರಾಮ್,ಈಶಪ್ಪ ಮೇಟಿ, ದುರ್ಗಾ ಕೃಷ್ಣ, ಉಪಸ್ಥಿತರಿದ್ದರು.

ರತ್ನಾ, ನಿರ್ಮಲ ಸ್ವಾಗತಿಸಿದರೆ, ದಾಕ್ಷಾಯಿಣಿ, ರಕ್ಷಿತಾ, ಪ್ರತಿಭಾ, ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಸಮಸ್ತ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದರು

ಅದ್ಧೂರಿಯಾಗಿ ಜರುಗಿದ ಶ್ರೀಗುರು ಬೆಟ್ಟದಲಿಂಗೇಶ್ವರ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವವು ಮಾರ್ಚ್-೨೨ ಶನಿವಾರ ಅದ್ಧೂರಿಯಗಿ ಜರುಗಿತು.

ಹಿಂದಿನ ದಿನ ಮಾರ್ಚ್-೨೧ ಶುಕ್ರವಾರ ೧೩೩ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿದ್ದು, ಮಾರ್ಚ್-೨೨ ಫಾಲ್ಗುಣ ಬಹುಳ ಅಷ್ಠಮಿ ಶನಿವಾರ ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೧೫ ರಿಂದ ೧೨:೧೫ ರವರೆಗಿನ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು. ಮದ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಸಂಜೆ ೫:೦೦ ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ನಡೆಯಿತು.

ಈ ಉತ್ಸವದ ಸಾನಿಧ್ಯವನ್ನು ಹೆಬ್ಬಾಳ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಪರಣ್ಣ್ಣ ಮುನವಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಚಿಕ್ಕಬೆಣಕಲ್ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.
ಮಾರ್ಚ್-೨೩ ಭಾನುವಾರ ಸಂಜೆ ಕಡುಬಿನ ಕಾಳಗ ನಡೆಯಲಿದೆ.

ಬಸವ ನೀಲಾಂಬಿಕೆ ಮಹಿಳಾ ಸಂಘದವತಿಯಿಂದ ಮಾರ್ಚ್-೨೦ ರಂದು ಹಿರೆಜಂತಕಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಗಂಗಾವತಿ: ನಗರದ ಹಿರೇಜಂತಕಲ್‌ನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಾರ್ಚ್-೨೦ ಗುರುವಾರದಂದು ಬಸವ ನೀಲಾಂಬಿಕೆ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಮ್ಮ ಆರೇಗಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ಮುಮ್ತಾಜ್ ಬೇಗಂ, ವಿಜಯಲಕ್ಷ್ಮಿ, ಅರ್ಚನಾ ರಾಘವೇಂದ್ರ ಶಿರಿಗೇರಿ, ಲಲಿತಮ್ಮ ತಿಪ್ಪೇರುದ್ರಸ್ವಾಮಿ, ಗೌರಮ್ಮ ಕುಂಬಾರ, ಮಂಜುಳಾ ಹೊಸಪೇಟೆ, ಸಿಂಧು, ಶೋಭಾ ರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೌರಮ್ಮ ಕುಂಬಾರ್, ಉಪಾಧ್ಯಕ್ಷರಾದ ಶೈಲಮ್ಮ, ಕಾರ್ಯದರ್ಶಿಯಾದ ಸೌಭಾಗ್ಯ, ಸಹಕಾರ್ಯದಶಿಯಾದ ಶರಣಮ್ಮ, ಖಜಾಂಚಿಯಾದ ಗಂಗಮ್ಮ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

ವಡ್ಡರಹಟ್ಟಿಯ ಮುದುಕಪ್ಪ ಗಡ್ಡಿ ಸಹೋದರರಿಂದ ಚಿಕ್ಕಬೆಣಕಲ್‌ನ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಕೆ.ಜಿ ಬೆಳ್ಳಿ ಪೇಟ ಸಮರ್ಪಣೆ.

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹಿರಿಯರಾದ ಮುದುಕಪ್ಪ ಗಡ್ಡಿ ಸಹೋದರರು ಮತ್ತು ಕುಟುಂಬದ ಸದಸ್ಯರು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಒಂದು ಕೆಜಿ ಬೆಳ್ಳಿಯ ಪೇಟವನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.

ಅವರ ಕುಟುಂಬವು ವಂಶಪಾರಂಪರ್ಯವಾಗಿ ಶ್ರೀ ಬೆಟ್ಟದಲಿಂಗೇಶ್ವರ ದೇವರಿಗೆ ಜಾತ್ರೆಯ ಸಮಯದಲ್ಲಿ ಪಾದಯಾತ್ರೆ ಮಾಡುತ್ತಾ ಬಂದಿದ್ದು, ಅದರಂತೆ ಈ ವರ್ಷದ ಮಾರ್ಚ್-೨೨ ರಂದು ನಡೆಯುವ ಶ್ರೀ ಬೆಟ್ಟದ ಲಿಂಗೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ಕಾಣಿಕೆ ಸಮರ್ಪಿಸಿದರು.

ಅವರಿಗೆ ಶ್ರೀಮಠದ ಎಂ.ದೊಡ್ಡ ಬಸವರಾಜ ಹಾಗೂ ಎಂ.ಲಿಂಗಪ್ಪನವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಶ್ರೀ ಬೆಟ್ಟದಲಿಂಗೇಶ್ವರ ದೇವರು ಶ್ರೀಮುರುಕಪ್ಪ ಗಡ್ಡಿ ಕುಟುಂಬಕ್ಕೆ ಸುಖ, ಶಾಂತಿ, ಸಂಪತ್ತು ನೀಡಲಿ, ಆಯುಷ್ಯ, ಆರೋಗ್ಯ ನೀಡಲಿ ಎಂದು ಶ್ರೀಮಠದ ವತಿಯಿಂದ ಶುಭ ಹಾರೈಸಲಾಯಿತು.

ಸಂಚಲನ ಮೂಡಿಸಿದ ನ್ಯಾಯಾಧೀಶರ ಪಾದಯಾತ್ರೆ

ಗಂಗಾವತಿ: ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ನಡೆದ ನ್ಯಾಯಾಧೀಶರ ನೇತೃತ್ವದ ಪಾದಯಾತ್ರೆ ಗಂಗಾವತಿ ನಗರದಲ್ಲಿ ಸಂಚಲನ ಮೂಡಿಸಿದೆ.

ತಾಲೂಕು ಕಾನೂನು ನೆರವು ಸಮಿತಿ, ಗಂಗಾವತಿ ವಕೀಲರ ಸಂಘ, ನಗರಸಭೆ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್, ಗ್ರಾಮೀಣ ರೇಡಿಯೋ ಭಾರತಿ ಇವರುಗಳು ಮುಂದಾಳತ್ವದಲ್ಲಿ ಪಾದಯಾತ್ರೆಯು ಶ್ರೀಕೃಷ್ಣದೇವರಾಯ ವೃತ್ತದಿಂದ ಚಾಲನೆಗೊಂಡು ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತದ ಮೂಲಕ ಗಾಂಧಿವೃತ್ತ ತಲುಪಿತು. ಅಲ್ಲಿ ಸ್ವಚ್ಛತೆಯ ಮೂಲಮಂತ್ರ ಸಾರಿದ ಮಹಾತ್ಮಗಾಂಧಿಜಿಯವರ ಪುತ್ಥಳಿಗೆ ನ್ಯಾಯಾಧೀಶರು ಮಾಲಾರ್ಪಣೆ ಮಾಡಿ ಅಲ್ಲಿ ನೆರೆದಿದ್ದ ಜನರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರದ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಗೌರವಾನ್ವಿತ ನ್ಯಾಯಧೀಶರಾದ ಸದಾನಂದ ನಾಯ್ಕರವರು ಮಾತನಾಡಿ, ಸಾರ್ವಜನಿಕರು ನಗರದ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಗಾಗಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸ್ವ-ಇಚ್ಛೆಯಿಂದ ತ್ಯಜಿಸಬೇಕು ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ನಾಯಕ ಏಕಬಳಕೆ ಪ್ಲಾಸ್ಟಿಕ್ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಪೌರಾಯುಕ್ತರಾದ ಆರ್. ವಿರುಪಾಕ್ಷಮೂರ್ತಿಯವರು ಮಾತನಾಡಿ, ಮಾರ್ಚ್-೩೧ ರಿಂದ ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್ ನಗರದಲ್ಲಿ ಬಂದ್ ಮಾಡಲಾಗಿದೆ. ಇದಕ್ಕೆ ನಾಗರಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಕರೆಕೊಟ್ಟರು.

ಪ್ಲಾಸ್ಟಿಕ್ ಮುಕ್ತ ಅಭಿಯಾನದ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಗಂಗಾವತಿ ನಮ್ಮ ಕನಸಿಗೆ ನ್ಯಾಯಾಧೀಶರು ಮುನ್ನುಡಿ ಬರೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಈ ಅಭಿಯಾನ ಮುಂದುವರೆಸಿ ಜನ, ಜಾನುವಾರುಗಳಿಗೆ ಮಾರಕವಾಗಿರುವ ಈ ಪ್ಲಾಸ್ಟಿಕ್ ಭೂತದ ಉಪಟಳವನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿ ಭಾಗವಹಿಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ನಂತರ ಗಾಂಧಿವೃತ್ತದಿಂದ ದುರ್ಗಮ್ಮನಗುಡಿಯವರೆಗೆ ಗೌರವಾನ್ವಿತ ನ್ಯಾಯಾಧೀಶರುಗಳಾದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್, ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ, ಹೆಚ್ಚುವರಿ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಿದರು. ಅದಕ್ಕೆ ಅಂಗಡಿ ಮಾಲಿಕರು ಉತ್ತಮವಾಗಿ ಸ್ಪಂದನೆ ನೀಡಿದರು.

ಪ್ಲಾಸ್ಟಿಕ್ ರಹಿತ ಮಣ್ಣಲ್ಲಿ ಕರಗುವ ಕ್ಯಾರಿಬ್ಯಾಗ್‌ಗಳನ್ನು ಹಣ್ಣಿನ ಹಾಗೂ ಕಾಯಿಪಲ್ಯೆ, ಹೂವಿನ ಅಂಗಡಿಗಳಿಗೆ ವಿತರಿಸಲಾಯಿತು. ಪ್ಲಾಸ್ಟಿಕ್ ಮುಕ್ತ ಅಭಿಯಾನ ಸಮಿತಿಯವರು ತರಿಸಿದ್ದ ೯೦ ಕೆ.ಜಿ ಪ್ಲಾಸ್ಟಿಕ್ ರಹಿತ ಕ್ಯಾರಿಬ್ಯಾಗ್‌ಗಳನ್ನು ವ್ಯಾಪಾರಸ್ಥರಿಗೆ ವಿತರಿಸಲಾಯಿತು.

ಪ್ಲಾಸ್ಟಿಕ ಭೂತ ವೇಷಧಾರಿಯು ಅಭಿಯಾನದಲ್ಲಿ ಸಾರ್ವಜನಿಕರ ಗಮನ ಸೆಳೆದನು.

ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯರಾದ ಡಾ|| ಎ.ಸೋಮರಾಜು, ಡಾ|| ಜಿ. ಚಂದ್ರಪ್ಪ, ಅಧ್ಯಕ್ಷರಾದ ಡಾ|| ವಿ.ಎಸ್.ಎನ್ ರಾಜು, ವೈದ್ಯಕೀಯ ಮಹಿಳಾ ಘಟಕದ ಡಾ|| ಮೇಧಾ, ಭಾರತಿ ಹೊಸಳ್ಳಿ, ನಗರಸಭೆಯ ಅಭಿಯಂತರರಾದ ಚೇತನ್, ಆರೋಗ್ಯ ನಿರೀಕ್ಷಕರಾದ ನಾಗರಾಜ, ಸಹಕಾರಿ ಸಂಘಗಳ ಒಕ್ಕೂಟದ ಸುಧಾಕರ, ಶ್ರಮಜೀವಿ ಕಲ್ಯಾಣ ಕರ್ನಾಟಕ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಆ ಒಕ್ಕೂಟದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಿವಕುಮಾರಗೌಡ, ಕಿಷ್ಕಿಂದ ಚಾರಣ ಬಳಗದ ಅರ್ಜುನ್, ಹರನಾಯಕ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ರಾಮಣ್ಣ ನಾಯಕ, ಪಂಪಣ್ಣ ನಾಯಕ, ಅರ್ಜುನ ನಾಯಕ, ವಿರುಪಾಕ್ಷಿಗೌಡ ನಾಯಕ, ಚನ್ನಬಸವ ಜೇಕಿನ್ ಹಾಗೂ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಅವರು ಅಭಿಯಾನದಲ್ಲಿ ಭಾಗವಹಿಸಿ ಮೆರಗು ತಂದರು. ರಾಘವೇಂದ್ರ ಚೌಡ್ಕಿಯವರು ಪ್ಲಾಸ್ಟಿಕ್ ಮುಕ್ತಿಗಾಗಿ ಜಾಗೃತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.

ನಗರಸಭೆಯ ಅಧ್ಯಕ್ಷರಾದ ಮೌಲಾಸಾಬ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಸುಚೇತಾ ಶಿರಿಗೇರಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ರೈತ ಸಂಘದ ಶರಣೇಗೌಡ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಬಸವರಾಜ ಮ್ಯಾಗಳಮನಿ, ಆಯುಷ್ ಬಳಗದ ಡಾ|| ಸುನೀಲ್ ಅರಳಿ, ಡಾ|| ಎಸ್.ಬಿ ಹಂದ್ರಾಳ, ಡಾ|| ವಿಜಯ್ ಗೌಡರ್, ಕಿಷ್ಕಿಂದಾ ಐ.ಡಿ.ಎ ವತಿಯಿಂದ ಡಾ|| ಕಿರಣ್, ಡಾ|| ಅಬ್ದುಲ್ ನಬಿ, ರಾಜಸ್ಥಾನಿ ಸಮಾಜ ಬಾಂಧವರು, ಆರ್ಯವೈರ್ಶ ಸಮಾಜದ ರೂಪಾರಾಣಿ ರಾಯಚೂರು, ಅಲೆಮಾರಿ ಬುಡ್ಗಜಂಗಮ ಸಮಾಜದ ಆರ್. ಕೃಷ್ಣ, ಸಾಹಿತಿಗಳಾದ ಶರಣಬಸಪ್ಪ ಕೋಲ್ಕಾರ, ಪವನಕುಮಾರ ಗುಂಡೂರು, ಕಿಷ್ಕಿಂದ ಹೋರಾಟ ಸಮಿತಿಯ ಮಂಜುನಾಥ ಕಟ್ಟಿಮನಿ, ಪರಿಸರ ಸೇವಾ ಟ್ರಸ್ಟ್ನ ಮಂಜುನಾಥ ಗುಡ್ಲಾನೂರು, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಹಾಲಕ್ಷ್ಮಿ ಕೇಸರಹಟ್ಟಿ, ಪ್ರಗತಿಪರ ಚಿಂತಕರಾದ ಶೈಲಜಾ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ರುದ್ರೇಶ ರ‍್ಹಾಳ, ಗಂಗಾವತಿ ಚಾರಣ ಬಳಗದ ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ಉಲ್ಲಾಸ, ಸೋಮಪ್ಪ ಜೂರಟಗಿ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.