ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ನಗರದ ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ೨೦೨೪-೨೫ ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮಾರ್ಚ್-೮ ಶನಿವಾರ ನಗರಸಭೆ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ವೇದಿಕೆ ಮೇಲೆ ಹಾಸಿನರಾದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ವಿ.ಗೊಂಡಬಾಳ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸಹನೆ ಸತತ ಪರಿಶ್ರಮ ಧನಾತ್ಮಕ ಚಿಂತನೆ ಕಠಿಣ ಪರಿಶ್ರಮಗಳು ಯಶಸ್ಸಿನ ಮೆಟ್ಟಿಲುಗಳು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ “ಸಹನ ರವಿ ನಾಯಕ”, “ನಾಗರತ್ನ”, “ಪ್ರವೀಣ್” ಇವರಿಗೆ ನಗದು ಬಹುಮಾನಗಳನ್ನು ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ನಗದು ಬಹುಮಾನಗಳನ್ನು ನೀಡಿದರು. ಅದೇ ರೀತಿ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಂಗಾವತಿ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಪರಶುರಾಮ್ ಕಿರಿಕಿರಿಯವರು ಮಾತನಾಡಿ, ಮಕ್ಕಳಲ್ಲಿ ಅಂಬೇಡ್ಕರ್ ಅವರ ಆದರ್ಶವನ್ನು ಮೈಗುಡಿಸಿಕೊಂಡು, ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಪಾರ್ವತಿ, ಶ್ರೀಮತಿ ಹುಲಿಗೆಮ್ಮ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಶ್ರೀಮತಿ ನಸೀಮಾ ಬಾನು ಮಾತನಾಡಿದರು.
ಶ್ರೀಮತಿ ಸರಿತಾ ಪೂಜಾರಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಜೋಶಿ ವಾರ್ಷಿಕ ವರದಿ ವಾಚನ ಮಂಡಿಸಿದರು.

ಶ್ರೀಮತಿ ಸುಧಾ ಡಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರೆ, ಕುಮಾರಸ್ವಾಮಿ ಸ್ವಾಗತಿಸಿ, ಶ್ರೀಮತಿ ಜಯಶ್ರೀ ವಂದನಾರ್ಪಣೆಗೈದರು. ಸಂಗೀತ ಶಿಕ್ಷಕರಾದ ಮಾರೆಪ್ಪ ಮಕ್ಕಳೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ವಾರ್ಡಿನ ಗುರುಹಿರಿಯರು ಉಪಸ್ಥಿತರಿದ್ದರು.

ಶೃಂಗೇರಿಯ ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಭವ್ಯವಾದ ಶುಭಯಾತ್ರೆ.

ಕೊಪ್ಪಳ: ನಗರಕ್ಕೆ ಆಗಮಿಸಿದ ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಶೋಭಾ ಯಾತ್ರೆ ಸಹಸ್ರಾರು ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಶುಕ್ರವಾರದಂದು ಜರುಗಿತು.

ಹೊಸಪೇಟೆ ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿಯ ಸದಸ್ಯರು ಹಾಡು, ಕೋಲಾಟಗಳಿಂದ ಗಮನ ಸೆಳೆದರು.

ಬಳಿಕ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜಗದ್ಗುರುಗಳಿಂದ ಆಶೀರ್ವಚನ ಜರುಗಿತು.

ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ

ನಾಟಕದಲ್ಲೇ ಹುಟ್ಟಿ ನಾಟಕದಲ್ಲಿ ಬೆಳೆದು ನಾಟಕವೇ ಜೀವನವಾಗಿರುವಾಗ ನನಗೆ ನಾಟಕ ಬೀದಿಗಿಳಿಯಿತೇ? ಎಂದು ಸಂಕಟವಾಯ್ತು ನಿಜ. ಆದರೆ ಹೆಜ್ಜೆ ಗೆಜ್ಜೆಯ ಬೀದಿ ನಾಟಕ ವೀಕ್ಷಿಸಿದಾಗ ಇದೊಂದು ಬಯಸದೇ ಬಂದ ಭಾಗ್ಯ ಎನಿಸಿತು. ಜನಮನ ರಂಜಿಸಲು ಭವ್ಯ ರಂಗಸಜ್ಜಿಕೆ ಬೇಡ. ಕೇವಲ ಬೀದಿಯೇ ಸಾಕು ಎಂಬುದನ್ನು ಮೈಸೂರು ರಮಾನಂದ್ ದೃಡಪಡಿಸಿದ್ದಾರೆ. ಈ ಮಾತುಗಳನ್ನು ಬಹಳ ಹಿಂದೆಯೇ ವರನಟ ಡಾ. ರಾಜಕುಮಾರ್ ನುಡಿದಿದ್ದಾರೆ.

ಪ್ರಭಾಕರ ಜೋಶಿ ಸಂಪಾದಕತ್ವದಲ್ಲಿ ಮೈಸೂರು ರಮಾನಂದ್ ಅಭಿನಂದನ ಗ್ರಂಥ ರಂಗಾನಂದದಲ್ಲಿ ಈ ನುಡಿಗಳನ್ನು ನಟ, ನಾಟಕಕಾರರಾದ ಶ್ರೀಕಂಠ ಗುಂಡಪ್ಪ ದಾಖಲಿಸಿದ್ದಾರೆ. ಮೈಸೂರು ರಮಾನಂದ್ ಅವರ ತಂಡ ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಪ್ರದರ್ಶಿಸಿದ ಮೊಬೈಲಾಯಣ ನಾಟಕ ವೀಕ್ಷಿಸಿದಾಗ ರಮಾನಂದ್ ಈ ನಾಟಕವನ್ನು ಜನಜಾಗೃತಿಯ ಬೀದಿ ನಾಟಕಕ್ಕಾಗಿಯೇ ಬರೆದಿದ್ದಾರೆ ಎನಿಸಿತು. ಮೊಬೈಲ್ ಕ್ರಾಂತಿಯಿ೦ದ ಅನುಕೂಲವಾಗಿರುವಂತೆ ಕಿರಿಕಿರಿಯೂ ವಿಪರೀತವಾಗಿದೆ. ಬೀದಿಯಲ್ಲಿ ನಡೆವಾಗಲೂ, ವಾಹನ ಚಲಾವಣೆ ಮಾಡುವಾಗಲೂ ಮೊಬೈಲ್‌ಯನ್ನು ಕಿವಿಗೆ ಹಿಡಿದು ಯಮಲೋಕದ ಹಾದಿಯನ್ನು ಹಿಡಿಯುವವರ ಕುರಿತಾದ ನಾಟಕದ ಕಥೆಯು ಹಾಸ್ಯ ವಿಡಂಬನಾತ್ಮಕವಾಗಿ ರೂಪು ತೆಳೆದಿದೆ.

ಸತ್ತು ಯಮಲೋಕ ಸೇರಿದವರ ವಿಚಾರಣೆ ಯಮನ ಆಸ್ಥಾನದಲ್ಲಿ ಪ್ರಾರಂಭವಾಗುಲ್ಲಿ೦ದ ನಾಟಕ ಹಾಸ್ಯದ ಧಾಟಿಯಲ್ಲೇ ಆರಂಭವಾಗುತ್ತದೆ. ಚಿತ್ರಗುಪ್ತನ ದಾಖಲೆಯಂತೆ ವಿಚಾರಣೆಗೆ ಒಳಪಡುವವರು ಮೊಬೈಲ್ ಮತ್ತು ಸೆಲ್ಫಿ ಸನ್ನಿಯಿಂದ ನಿಧನರಾದವರು. ನಾವು ದಿನನಿತ್ಯ ಪತ್ರಿಕೆಗಳಲ್ಲಿ ಓದುವ ಸುದ್ದಿಯೇ ನಾಟಕಕ್ಕೆ ಸರಕಾಗಿದೆ. ಇಂದಿನ ದಿನಮಾನಗಳಲ್ಲಿ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಅಪಘಾತಗಳಿಗೆ ತುತ್ತಾಗುತ್ತಿರುವ ಘಟನೆಗಳು ಸರ್ವೆಸಾಮಾನ್ಯವಾಗಿದೆ. ಮನುಷ್ಯ ಸಂಬಂಧವನ್ನು ಹೆಚ್ಚಿಸುವಲ್ಲಿ ಮೊಬೈಲ್ ಸಹಕಾರಿಯಾಗಿರುವುದನ್ನು ಮರೆಯಲಾಗುವುದಿಲ್ಲ. ನಾಟಕದಲ್ಲಿ ಇಬ್ಬರು ವ್ಯಕ್ತಿಗಳು ಸ್ವರ್ಗ ಮತ್ತು ನರಕದಲ್ಲಿ ಟಾಕ್ ಟೈಮ್ ಪರಿಭಾಷೆಯಲ್ಲಿ ತಮ್ಮ ಸಾವಿನ ಕುರಿತಂತೆ ಮಾತನಾಡಿಕೊಳ್ಳುವುದು ವಿಪರ್ಯಾಸವಾಗಿದೆ. ಯಮಲೋಕದಲ್ಲಿ ಚಿತ್ರಗುಪ್ತನ ಬಳಿಯಲ್ಲೂ ಮೊಬೈಲ್ ಇರುವುದನ್ನು ಕಂಡು ಸ್ವಯಂ ಯಮನೇ ಬೆರಗಾಗುತ್ತಾನೆ. ಯಮಲೋಕದಲ್ಲಿ ನಿಂತು ಭೂಲೋಕವನ್ನು ವೀಕ್ಷಿಸುತ್ತಾ ವಾಹನ ಓಡಿಸುವಾಗ ಮೊಬೈಲ್‌ನಲ್ಲಿ ಮಾತಾಡಿಕೊಂಡು ಅಪಘಾತಕ್ಕೆ ತುತ್ತಾಗುವವರು ಸೆಲ್ಪಿ ತೆಗೆಯುತ್ತಾ ಬೆಟ್ಟದಿಂದ ಜಾರಿಬಿದ್ದು ಸಾಯುವವರನ್ನು ಕಂಡು ಯಮ ವಿಕಟ ನಗೆ ನಗುತ್ತಾನೆ.

ಮುಂದೆ ಕಥೆ ಯಮಲೋಕದಿಂದ ಭೂಲೋಕಕ್ಕೆ ಶಿಪ್ಟ್ ಆಗುತ್ತದೆ. ಇಲ್ಲಿಯ ಒಂದು ಒಟ್ಟು ಕುಟುಂಬವೊಂದರಲ್ಲಿ ಅಜ್ಜ, ಅಪ್ಪ ಮತ್ತು ಮಗ ಈ ಮೂರು ತಲೆಮಾರಿನ ಕೊಂಡಿಯ ನಡುವೆ ಮೊಬೈಲ್ ವಸ್ತು ವಿಷಯವೇ ಪ್ರಧಾನವಾಗಿದೆ. ನಾಟಕದಲ್ಲಿ ಘಟಿಸುವ ದೃಶ್ಯಾವಳಿಗಳು ನಮ್ಮ ಬೆನ್ನನ್ನು ನಾವೇ ತಿರುಗಿ ನೋಡಿಕೊಳ್ಳುವಂತಿದೆ. ಮಾತಿನಲ್ಲಿ ಲವಲವಿಕೆ ಇದೆ. ತಾತನಿಗೆ ಆಪರೇಷನ್ ಮಾಡುತ್ತಲೇ ಮೊಬೈಲ್ ಅಟೆಂಡ್ ಮಾಡುವ ವೈದ್ಯರು ಮಾಡಿದ ಅವಾಂತರ ನನ್ನ (ಗೊರೂರು ಅನಂತರಾಜು) ಒಂದು ಹನಿಗವನ ನೆನಪಿಸುತ್ತದೆ. ಆಪರೇಷನ್ ಮಾಡಿ, ಹೊಲಿಯುವಾಗ ಹೊಟ್ಟೆಯಲ್ಲಿ ಸೂಜಿ ಮರೆತಿದ್ದ ವೈದ್ಯರು ಸೂಜಿ ತೆಗೆಯುವಾಗ ಕತ್ತರಿ ಮರೆತಿದ್ದರು. ಅಂತೆಯೇ ನಾಟಕದಲ್ಲಿ ವೈದ್ಯರು ವೈಬ್ರೇಷನ್ ಮೋಡ್ಡ್‌ ನಲ್ಲಿ ಮೊಬೈಲ್‌ನ್ನು ತಾತನ ಹೊಟ್ಟೆಯಲ್ಲೇ ಇಟ್ಟು ಹೊಲಿದು ಬಿಡುವ ದೃಶ್ಯ ರಂಜನೀಯವಾಗಿದೆ. ಇದೊಂದು ಜನಜಾಗೃತಿಯ ನಾಟಕ. ಹಾಗೆಂದು ಇದು ಯಾವುದೋ ಮೊಬೈಲ್ ಕಂಪನಿಯ ಜಾಹೀರಾತಲ್ಲ. ಆದರೂ ಬೀದಿ ನಾಟಕವಾಗಿ ಪ್ರದರ್ಶಿಸಬಹುದಾದ ಈ ನಾಟಕ ರಮಾನಂದ್‌ರ ಇನ್ನಿತರೇ ರಚನೆಗಳಾದ ಕುಡಿತಾಯಣ, ಪರಿಸರಾಯಣ, ಟ್ರಾಪಿಕಾಯಣ, ಎಚ್ಚರ ತಪ್ಪಿದರೆ..? ಈ ಮಾದರಿಯದೇ ಆಗಿದೆ. ಮೊಬೈಲ್ ಬಳಸುವಾಗ ಎಚ್ಚರ ತಪ್ಪಿದರೆ ಪರಲೋಕ ಯಾತ್ರೆ ಎಂಬುದನ್ನು ಸೂಚ್ಯವಾಗಿ ಹಾಸ್ಯದ ಭಾಷೆಯಲ್ಲೇ ತಿಳಿಸುತ್ತದೆ. ಅಂತೆಯೇ ಥಿಯೇಟರ್‌ನಲ್ಲಿ ಪ್ರದರ್ಶಿಸುವಾಗ ಮೇಕಪ್, ರಂಗಸಜ್ಜಿಕೆ, ವಸ್ತ್ರಾಲಂಕಾರ, ಸಂಗೀತ ಇತ್ಯಾದಿ ಎಲ್ಲಾ ಅಂಶಗಳಿಗೂ ಪ್ರಾಮುಖ್ಯತೆ ನೀಡಿ ಪ್ರದರ್ಶನಗೊಂಡ ನಾಟಕ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸಾಫಲ್ಯ ಸಾಧಿಸಿದೆ.

ಗೊರೂರು ಅನಂತರಾಜು, ಹಾಸನ.
ಮೊಬೈಲ್: ೯೪೪೯೪೬೨೮೭೯.

ವಿಳಾಸ: ಹುಣಸಿನಕೆರೆ ಬಡಾವಣೆ, ವಲ್ಲಬಾಯಿ ರಸ್ತೆ, ಸಂತೇಪೇಟೆ ಶಾಲೆ ಹಿಂಭಾಗ,

ಹಾಸನ-೫೭೩೨೦

ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ

ಗಂಗಾವತಿ: ಮೊದಲನೆಯದಾಗಿ ನಾಡಿನ ಸಮಸ್ತ ಮಹಿಳೆಯರಿಗೆ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು”. ಸಾಧನೆ ಮತ್ತು ಕಷ್ಟ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಷ್ಟ ತೊಂದರೆ ಇಲ್ಲದ ಸಾಧನೆಯನ್ನು ಕೊಂಡಾಡುವಾಗ ಸಮಾಜವು ‘ಸಾಧನೆ’ ಎಂದು ಕರೆಯುವುದಕ್ಕೆ ಲೆಕ್ಕವಿಲ್ಲದಷ್ಟು ಸಬೂಬನ್ನು ಲೇಪಿಸಿ ಸಾಧನೆಯ ಮೆರಗನ್ನೆ ಬರಿದು ಮಾಡುತ್ತದೆ. ಸಮಾಜದ ಲೆಕ್ಕ ಬಿಡಿ, ಸಾಧಕನ ಮನಸ್ಸೆ ಶ್ರಮವಿರದ, ಕಷ್ಟವಿರದ ಸಾಧನೆಯನ್ನು ಒಪ್ಪಿಕೊಳ್ಳುವದಿಲ್ಲ. ಅದರಲ್ಲಿಯೂ ಮಹಿಳೆಯರ ಸಾಧನೆಯ ಆದಿಯು ಪುರುಷರ ಸಾಧನೆಯ ಹಾದಿಗಿಂತಲೂ ಕಷ್ಟದಾಯಕವಾಗಿರುತ್ತದೆ. ಆಧುನಿಕ ಕಲ್ಯಾಣ ಸಮಾಜದಲ್ಲಿ ಸಮಾನತೆಯ ಮಂತ್ರದ ಗುಣಗಾನ ಸದ್ದು ಮಾಡುತ್ತಿದ್ದರೂ, ಪುರುಷ ಪ್ರಧಾನ ವ್ಯವಸ್ಥೆ ವಾಸ್ತವವಾಗಿರುವುದು ಸತ್ಯ. ಈ ವ್ಯವಸ್ಥೆಯಲ್ಲಿ ಲಕ್ಷಕ್ಕೆ ಒಬ್ಬರಾದರೂ ಮಹಿಳಾ ಸಾಧಕಿಯರು ನಮ್ಮ ನಿತ್ಯದ ಬದುಕಿನ ವಾತಾವರಣದಲ್ಲಿ ಜೀವನಕ್ಕೆ ಸ್ಪೂರ್ತಿಯಾಗುತ್ತಿರುವುದು ವಿಶೇಷ. ಅಂತಹ ಮಹಿಳಾ ಸಾಧಕರೆ, ಕರಾಟೆ ಪಟು ಮತ್ತು ತರಬೇತುದಾರರಾದ ಕಲ್ಯಾಣಿ ಅಪ್ಸಾನಿ.

ಕಲ್ಯಾಣಿಯವರು ಬಾಲ್ಯದಲ್ಲಿಯೇ ಗ್ರಾಮೀಣ ಬದುಕಿನ ಹಿನ್ನೆಲೆ ಹೊಂದಿದವರಾಗಿದ್ದು, ಉತ್ತಮ ಶಿಕ್ಷಣ ಪಡೆದು ಕನ್ನಡ ಶಿಕ್ಷಕಿಯಾಗಿ ಗಂಗಾವತಿಯ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವ ಕಲ್ಯಾಣಿಯವರಿಗೆ ತಮ್ಮ ಜೀವನದಲ್ಲಿ ಉಂಟಾದ ಕೌಟುಂಬಿಕ ಬಿರುಕು-ತೊಂದರೆಗಳ ಸವಾಲಿನ ಸಾಲುಗಳೆ ಅವರು ಒಬ್ಬ ಆದರ್ಶ ಕ್ರೀಡಾಪಟು ಮತ್ತು ತರಬೇತುದಾರರಾಗಿ ಸಾಧನೆ ಮಾಡುವುದಕ್ಕೆ ಮೆಟ್ಟಿಲಾಗಿದೆ. ಯಾವುದೇ ರೀತಿಯ ಕ್ರೀಡೆಯ ಹಿನ್ನೆಲೆಯನ್ನು ಹೊಂದಿರದ ಅವರಿಗೆ ಸಾಧಿಸಬೇಕೆಂಬ ತುಡಿತದಲ್ಲಿದ್ದಾಗ, ಅವರನ್ನು ಒಬ್ಬ ಮಹಿಳಾ ಕರಾಟೆ ಕ್ರೀಡಾಪಟು ಮತ್ತು ತರಬೇತುದಾರರನ್ನಾಗಿ ಮಾಡಿದ ಕೀರ್ತಿ ಗಂಗಾವತಿಯ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿಗಳಾದ ಹಾಗೂ ಖ್ಯಾತ ಅಂತರಾಷ್ಟ್ರೀಯ ಕರಾಟೆ ತರಬೇತುದಾರರಾದ ಡಾ. ಜಬೀವುಲ್ಲಾ ಗುರುಗಳಿಗೆ ಸಲ್ಲುತ್ತದೆ. ಶ್ರೀಮತಿ ಕಲ್ಯಾಣಿಯವರು ತಮ್ಮ ೩೦ನೇ ವಯಸ್ಸಿನಲ್ಲಿ ಕರಾಟೆ ಕಲಿಯುವುದಕ್ಕೆ ಪ್ರಾರಂಭಿಸಿ ನಿರಂತರವಾಗಿ ೦೨ ವರ್ಷಗಳ ಕಾಲ ದೇಹ ದಂಡಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಲ್ಪನಿಕ ಯುದ್ಧ ಕಲೆ ಮತ್ತು ಫೈಟ್ ವಿಭಾಗ ಎರಡರಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಪದಕ ಪಡೆದಿರುತ್ತಾರೆ. ಅಲ್ಲದೆ ಕಳೆದ ವರ್ಷ (೨೦೨೪) ಹುಬ್ಬಳ್ಳಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಲ್ಪನಿಕ ಯುದ್ಧ ಕಲೆ ಮತ್ತು ಫೈಟ್ ವಿಭಾಗ ಎರಡರಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಪದಕ ಪಡೆದಿರುತ್ತಾರೆ. ಇದು ಕಲ್ಯಾಣಿಯವರ ಸಾಧನಾ ಕ್ಷೇತ್ರಕ್ಕೆ ಮೂಡಿದ ಗರಿಮೆಯಾಗಿದೆ.
ಕೇವಲ ಕರಾಟೆ ಪಟುಗಳಾಗಿ ಸಾಧನೆ ಮಾಡುವುದಲ್ಲದೇ, ಡಾ. ಜಬೀವುಲ್ಲಾ ಗುರುಗಳ ಗರಡಿಯಲ್ಲಿ ಕರಾಟೆ ಪಟ್ಟುಗಳನ್ನು ಕರಗತ ಮಾಡಿಕೊಂಡು, ಕರಾಟೆ ಕ್ಷೇತ್ರದಲ್ಲಿ ತರಬೇತುದಾರರಾಗುವುದಕ್ಕೆ ಬೇಕಾದ ‘ಬ್ಲ್ಯಾಕ್ ಬೆಲ್ಟ್’ (೧೦ನೇ) ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗಂಗಾವತಿ ನಾಡಿನ ಭಾಗದಲ್ಲಿ ಅತ್ಯುತ್ತಮ ಕರಾಟೆ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂದುವರೆದು ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿನೀಯರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದಿರುವುದು ಪ್ರಶಂಸನೀಯವಾಗಿದೆ. ಅಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಲ್ಯಾಣಿಯವರು ಬಡ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿ, ಉತ್ತಮ ಕ್ರೀಡಾಪಟುಗಳನ್ನಾಗಿ ಬೆಳೆಸುವಂತಹ ಮಹಾನ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ಸರ್ಕಾರದ ವಸತಿ ಶಾಲಾ ವಿಧ್ಯಾರ್ಥಿನಿಯರಿಗೆ “ಓಬವ್ವ ಆತ್ಮ ರಕ್ಷಣಾ ಕಲೆ” ಯೋಜನೆಯ ಅಡಿಯಲ್ಲಿ ಕನಕಗಿರಿ, ಮೇಹದಾಳ ಕಿತ್ತೂರರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡುತ್ತಿದ್ದಾರೆ.
ಕಲ್ಯಾಣಿಯವರ ಕರಾಟೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿದ ಗಂಗಾವತಿಯ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯು ಅವರಿಗೆ “ಕ್ರೀಡಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅದರ ಜೋತೆಗೆ ಸಂಸ್ಥೆಯ ಸಂಘಟನಾ ಕಾರ್ಯದರ್ಶಿಯ ಸ್ಥಾನವನ್ನು ನೀಡಿ ಸಾಧನೆಯ ಪಥದಲ್ಲಿ ಸಾಗುವಂತೆ ಜವಾಬ್ದಾರಿ ವಹಿಸಲಾಗಿರುತ್ತದೆ.
‘ಸಾಧನೆ ಮಾಡುವದಕ್ಕೆ ವಯಸ್ಸಿನ ಲೆಕ್ಕ ನೆವತ್ಯ’ ಎನ್ನುವ ಸತ್ಯವನ್ನು ಕಲ್ಯಾಣಿಯವರ ಸಾಧನೆಯೇ ಮುಂದಿನವರಿಗೆ ದಾರಿಯಾಗಲಿದೆ. ಮನೆಯವರ ಮತ್ತು ಕುಟುಂಬದವರ ಸಹಾಯವಿರದಿದ್ದರೂ, ಸಾಧಿಸುವ ಛಲವಿರುವ ಮಹಿಳೆ, ಎಷ್ಟೇ ತೊಂದರೆಗಳು ಎದುರಾದರೂ ಸಾಧನೆಗೆ ಆ ತೊಂದರೆಗಳೇ ಮೆಟ್ಟಿಲಾಗಿ ಪರಿವರ್ತನೆಗಳಾಗುತ್ತವೆ ಎಂಬುದು ಕಲ್ಯಾಣಿ ರವರ ಸಾಧನೆಯ ಪಯಣ ಮಾದರಿಯಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿ ಸಮರ್ಪಣೆ, ಸಾಗರದಲ್ಲಿ ಹರಿದು ಬಂತು ಭಕ್ತ ಸಮೂಹ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಮಾರ್ಚ್-5 ಬುಧವಾರರಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು.

ಇದೇ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಹಾಗೂ ಬೆಳ್ಳಿ ಪ್ರಭಾವಳಿಯನ್ನು ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸಮರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜೋಶಿ ಹಾಗೂ ಋತುಜರ್ ತಂಡದವರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಸಾಯಿಬಾಬಾ ನಾಮಸ್ಮರಣೆಯನ್ನು ನಡೆಸಲಾಯಿತು. ಬಳಿಕ ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ. ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್‌ನ ಟಿ.ರಾಮಕೃಷ್ಣ ಮಾತನಾಡಿ, ಸಾಕ್ಷಾತ್ ದತ್ತಾತ್ರೇಯ ಅವತಾರಗಳಾದ ಶ್ರೀ ಸಾಯಿಬಾಬಾ ಅವರು ನಂಬಿ ಬಂದ ಭಕ್ತರ ಉದ್ಧಾರಕ್ಕೆ ಅನುಗ್ರಹಿಸುವ ಗುರು ಪರಂಪರೆಯಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು. ಅವರ ಜೀವಿತ ಅವಧಿಯಲ್ಲಿನ ಪವಾಡಗಳು, ಮಹಿಮೆಗಳು ಅಪಾರವಾಗಿದೆ ಎಂದು ಹೇಳಿದರು.

ಸದಸ್ಯರುಗಳಾದ ಎಸ್ ಸುರೇಶ್, ಪಂಪಾಪತಿ, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ರಾಮಕೃಷ್ಣ, ಗುರುರಾಜ, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್,. ಡಾ|| ಎ.ಎಸ್.ಎನ್ ರಾಜು ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗೋಪಿ ರಕ್ತ ಭಂಡಾರ ಕೇಂದ್ರದ ರವರಿಂದ ರಕ್ತದಾನ ಶಿಬಿರ ನಡೆಸಲಾಯಿತು.

ಮಾರ್ಚ್-4‌ ರಂದು ಜರುಗಿದ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ

ಗಂಗಾವತಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿ ಭಾವನೆಯಿಂದ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಸಕಲ ವಾದ್ಯ, ವೈಭವದೊಂದಿಗೆಹೊರಟ ಮಹಾರಥೋತ್ಸವದಲ್ಲಿ ಭಕ್ತಾದಿಗಳು ನಾಣ್ಯ ಹಾಗೂ ಉತ್ತತ್ತಿಯನ್ನು ರಥೋತ್ಸವಕ್ಕೆ ಸಮರ್ಪಿಸಿ ತಮ್ಮ ಭಕ್ತಿ ಭಾವವನ್ನು. ವ್ಯಕ್ತಪಡಿಸಿದರು. ರಥೋತ್ಸವ ಕಲ್ಮಠದವರೆಗೆ ತೆರಳಿ ದೇವಸ್ಥಾನಕ್ಕೆ ಆಗಮಿಸಿತು.

ಈ. ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹೇಶ್, ಹೊಸಳ್ಳಿ ಶಂಕರಗೌಡ, ನವಲಿ ವಾಸು, ಪರಗಿ ನಾಗರಾಜ್ ಸೇರಿದಂತೆ ವಿವಿಧ ಸಮಾಜ ಬಾಂಧವರು ಪಾಲ್ಗೊಂಡಿದ್ದರು..

ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲಯದಲ್ಲಿ ಮಾರ್ಚ್-4‌ ಮಂಗಳವಾರದಂದು ತ್ರಿಬಾಷಾ ಕವಿ ಅಂಧರ ಬಾಳಿನ ಆಶಾಕಿರಣ ಗದಗ ವೀರೇಶ್ವರ ಪುಣ್ಯಶ್ರಮದ ದಿವ್ಯಜ್ಯೋತಿ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸುನಿತಾ ಗಂಗಾವತಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭವ್ಯ ಚಲ್ಲಯ್ಯ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಸಂಗೀತದ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಮೋದ್ ಅವರ ಹಾರ್ಮೋನಿಯಂ ಸಾಥ್‌, ಶರಣುಕುಮಾರ್ ಹಾಗೂ ಮಹಾಂತೇಶ್ ಸುಧೀರ್ ಅವರು ತಬಲವಾದನ ನಡೆಸಿಕೊಟ್ಟರು. ಗೀತಾ ಹಾಗೂ ಸಮಾಜ ಕ್ಷೇತ್ರದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಭಾರತ ರತ್ನ ಮರಣೋತ್ತರ ಪ್ರಶಸ್ತಿ ನೀಡಬೇಕೆಂದು. ಆಗ್ರಹಿಸಿದರು.

ಉಮಾಕಾಂತ ಅವರೆಡ್ಡಿ ಅವರಿಗೆ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪ್ರದಾನ.

ಗಂಗಾವತಿ: ತಾವರಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಸಹಪ್ರಾಧ್ಯಾಪಕರಾದ ಉಮಾಕಾಂತ ಅವರೆಡ್ಡಿ ಆವರಿಗೆ ಆಂಧ್ರಪ್ರದೇಶದ ಕುಪ್ಪಮ್‌ನ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಆಂಗ್ಲಭಾಷೆ ವಿಭಾಗದ ಸಂಶೋಧನಾ ವಿದ್ಯಾರ್ಥಿ ಉಮಾಕಾಂತ ಅವರೆಡ್ಡಿ ಅವರು ಡಾ. ಜಿ. ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಡಾ. ಅಮಿತಾವ್ ಘೋಶ್: ಎ ನ್ಯಾಷನಲಿಸ್ಟಿಕ್ ಅಪ್ರೋಚ್’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.
ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇವರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಶಾರ್ಟ್ ಬಾಸ್ ದೋಸ್ತಾ ಕಾಮಿಡಿ ಟಾಕ್..!

ಆತ: ಮದುವೆಯಾಗಿ ಹತ್ತು ವರ್ಷ ಆಯ್ತು. ನಾನು ಈಗಲೂ ಒಬ್ಬಳನ್ನು ಪ್ರೀತಿಸ್ತಿದ್ದೀನಿ.
ಈತ: ನಿನ್ನ ಹೆಂಡ್ತಿನ ಅಷ್ಟೊಂದು ಪ್ರೀತಿಸ್ತೀಯಾ..?
ಆತ: ಹೆಂಡತಿನ ಯಾರದ್ರು ಪ್ರೀತಿ ಮಾಡ್ತಾರಾ..?
ಈತ: ಹಾಗಾದ್ರೇ ಅವಳು ಬೇರೇನಾ..ಯಾರು ಅವಳು..?
ಆತ: ಅವಳ್ಯಾರು ಅಂತ ಹೇಳಿದ್ರೇ ನನ್ನ ಹಂಡತಿ ಕಿಕ್‌ಹೌಟ್ ಮಾಡ್ತಾಳೆ.
ಈತ: ನೀವು ಒಳ್ಳೆಯ ಹಾಸ್ಯ ಸಾಹಿತಿಗಳು ಖರೆ, ನಿಮ್ಮ ಹಾಸ್ಯ ಬರಹಗಳ ಐವತ್ತು ಪುಸ್ತಕಗಳು ಪ್ರಕಟವಾಗಿವೆ ಬರಾಬರ್ ಓಕೆ. . ಆದರೆ ಇದಾದ ಮೇಲೆ ನಿಮ್ಮಲ್ಲಿ ಆಗಿರುವ ಬದಲಾವಣೆ ಆದರೂ ಏನು ಮಾರಾಯರೇ..!
ಆತ: ಮೊದಲು ನಾನು ಬರೆಯಲು ಖುರ್ಚಿ ಮತ್ತು ಟೇಬಲ್ ಮಾತ್ರ ಉಪಯೋಗಿಸುತ್ತಿದ್ದೆ. ಈಗ ನೆಲದ ಮೇಲೆ ಕುಳಿತೇ ಬರಿತ್ತಿದ್ದಿನಿ. ಬೆನ್ನು ಇನ್ನು ಬಾಗಿಲ್ಲ. ತಲೆ ಕೂದಲಿಗೆ ಮಾತ್ರ ಕಪ್ಪು ಬಣ್ಣ ಹಚ್ಚಿದ್ದೇನೆ. ನನ್ನ ಬರಹಕ್ಕೆ ಅಲ್ಲಾ..
ಈತ: ನಿನ್ನ ಹೆಂಡತಿಗೆ ಅವಳಿ ಜವಳಿ ಮಕ್ಕಳಾಯಿತು ಅಂತ ಕೇಳಿ ತುಂಬಾ ಸಂತೋಷ ಆಯಿತು ಮಾರಾಯ. ಆದರೆ ಪಾಪ ಸಿಜೇರಿಯನ್‌ಗೆ ತುಂಬಾ ಹಣ ಖರ್ಚಾಗಿದೆಯೆಂದು ತಿಳಿದು ಬೇಸರವಾಯಿತು.
ಆತ: ಆದ್ರೂ ಒಂದೇ ಖರ್ಚಿನಲ್ಲಿ ಎರಡು ಮಕ್ಕಳಾಯಿತ್ತಲ್ಲ ಅದೇ ಸಂತೋಷ ದೋಸ್ತಾ…


ಈತ: ನನಗೆ ತುಂಬಾ ಬೇಜಾರಾಗಿದೆ. ಅದಕ್ಕೆ ಬಾರ್‌ನಲ್ಲಿ ಎರಡು ಪೆಗ್ ಕುಡಿದೆ.
ಆತ: (ಮನದಲ್ಲಿ) ಎಲ್ಲಾ ಬಡ್ಡಿ ಮಗ ನನ್ನ ಕರೆಯದೇ ಹೋಗಿದ್ದಿಯಾ ಚಾಂಡಲ (ಪ್ರಕಟ) ಹೌದಾ..! ಏನಾಗಿದೆ ನಿನಗೆ..?
ಈತ: ನನ್ನ ಹೆಂಡತಿ ಎರಡು ತಿಂಗಳ ಹಿಂದೆ ತಾಯಿ ಮನೆಗೆ ಹೋದವಳು ತಿರುಗಿ ಬಂದಿಲ್ಲ.
ಆತ: ಎಂತಹ ಅದೃಷ್ಟವಂತನಯ್ಯ ನೀನು. ನನ್ನ ದುರಾದೃಷ್ಟ ನೋಡು ನನ್ನ ಹೆಂಡತಿ ಕತ್ತು ಹಿಡಿದು ದಬ್ಬಿದರೂ ತೌರಿಗೆ ಅಂತ ಈ ಊರು ಬಿಟ್ಟು ಹೋಗ್ತಿಲ್ಲ. ಅವಳ ಕಾಟ ತಡೆಯಲಾಗದೆ ಬಾರ್‌ಗೆ ಕುಡಿಯೋಕೆ ಹೋಗ್ತ ಇದ್ದಿನಿ. ಬರ‍್ತಿಯಾ, ಕಂಪನಿ ಕೊಡ್ತಿಯಾ..?
ಈತ: ಷಹಜಹಾನ್ ತಾಜ್ ಮಹಲ್ ಏಕೆ ಕಟ್ಟಿಸಿದ ಗೊತ್ತಾ ದೋಸ್ತಾ..
ಆತ: ಹೆಂಡತಿಯ ಮೇಲೆ ತುಂಬಾ ಪ್ರೀತಿ ಇತ್ತು ಅದಕ್ಕೆ ಅಲ್ವಾ ಮಾರಾಯ..
ಈತ: ನನಗೇನೋ ಅನುಮಾನ. ಹೆಂಡತಿ ಸತ್ತ ಖುಷಿಗೂ ಏಕಿರಬಾರದು. ಹೌದಲ್ಲೋ..?
ಆತ: ಇಬ್ಬರು ಹೆಂಗಸರು ನನ್ನ ಬದುಕನ್ನು ನರಕ ಮಾಡಿಬಿಟ್ಟರು ಮಾರಾಯ
ಈತ: ಯಾರಪ್ಪ ಆ ಪುಣ್ಯಾತಗಿತ್ತಿಯರು..
ಆತ: ನನ್ನ ಮೊದಲನೇ ಹೆಂಡತಿ ಸಾಯುವ ತನಕ ಕಾಟ ಕೊಟ್ಟಳು. ಈಗ ಎರಡನೇ ಹೆಂಡತಿ ಕಾಟ ತಡೆಯಲಾರದೆ ಜೀವನ ನರಕ ಆಗಿದೆ.
ಈತ: ಏನಯ್ಯ ಮದುವೆ ಮಾಡಿಕೊಂಡಿದ್ದಿಯೋ ಅಥವಾ ಈಗಲೂ ನೀನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಿಯೋ ಏನು ಕತೆ.
ಆತ: ಎರಡು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದ್ರೇ ಹೇಗೆ ದೋಸ್ತಾ. ನಿನ್ನ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಬರೆದುಕೋ ಹೌದು.
ಈತ: ನನ್ನ ಹೆಂಡತಿ ತುಂಬಾ ಸೋಮಾರಿ. ಆದರೆ ತಾಯಿ ಮನೆಗೆ ಹೋಗು ಅಂದ್ರೇ ಮಾತ್ರ ಬೇಗ ಸೀರೆಗಳನ್ನು ಬ್ಯಾಗಿಗೆ ತುಂಬಿಕೊಂಡು ರೆಡಿಯಾಗ್ತಾಳೆ ಗೆಳೆಯ.
ಆತ: ನನ್ನ ಹೆಂಡತಿ ಇನ್ನೂ ಸೋಮಾರಿ ಮಾರಾಯ. ತಾಯಿ ಮನೆಲೇ ಐದಾರು ಸೀರೆ ಇಟ್ಟಿರ‍್ತಾಳೆ.
ಈತ: ನೀವು ಬರೆದಿರುವ ವ್ಯಂಗ್ಯಚಿತ್ರಕ್ಕೆ ಬಹುಮಾನ ಬಂದಿದೆ. ಕಂಗ್ರಾಚುಲೇಶನ್.
ಆತ: ಎಲ್ಲಾ ಇದೇ ರೀತಿ ಹೇಳ್ತಿದ್ದಾರೆ. ಆದರ ನಾನು ವ್ಯಂಗ್ಯಚಿತ್ರವನ್ನೇ ಬರೆದಿಲ್ಲ.
ಈತ: ಮತ್ತೆ ಬಹುಮಾನ ಹೇಗೆ ಬಂತು..?
ಆತ: ಪತ್ರಿಕೆಯವರು ವ್ಯಂಗ್ಯಚಿತ್ರ ಸ್ಫರ್ಧೆ ಮತ್ತು ಕಥಾ ಸ್ಫರ್ಧೆ ಎರಡನ್ನೂ ದೀಪಾವಳಿ ವಿಶೇಷಾಂಕಕ್ಕೆ ಕರೆದಿದ್ರು. ನಾನು ಕಥೆ ಜೊತೆಗೆ ನನ್ನ ಪೋಟೊ ಕಳಿಸಿದ್ದೆ. ನನ್ನ ಪೋಟೋನೇ ವ್ಯಂಗ್ಯಚಿತ್ರವೆಂದು ತಪ್ಪಾಗಿ ಭಾವಿಸಿ ಬಹುಮಾನ ಕೊಟ್ಟಿದ್ದಾರೆ.
ಈತ: ನಿನ್ನ ಹೆಂಡ್ತಿ ಕಾಣೆಯಾಗಿದ್ದಾಳೆ ಅಂತ ಬೀದಿಯಲ್ಲಿ ಮಾತನಾಡ್ತಿದ್ದರಲ್ಲಾ.. ಪೇಪರ್‌ನಲ್ಲಿ ಹಾಕ್ಸೋದಿಲ್ವೇ..?
ಆತ: ಅದನ್ನೇ ಯೋಚಿಸ್ತಿದ್ದಿನಿ. ಒಂದು ಹತ್ತು ದಿನ ಕಳೆಯಲಿ. ಹೆಂಡತಿ ಕಾಣೆಯಾಗಿ ಮೂರು ದಿನ ಆಗಿಲ್ಲ. ಆಗಲೇ ಹೆಂಡತಿ ಬೇಕು ಅಂತ ಜಾಹೀರಾತು ಕೊಟ್ಟಿದ್ದಾನಲ್ಲಾ ಬಡ್ಡಿ ಮಗ ಅಂತ ಜನ ನನ್ನ ಬಗ್ಗೆ ತಪ್ಪಾಗಿ ತಿಳ್ಕೋಬಾರದಲ್ವಾ..!
ಈತ: ನಾನು ಒಂದು ಮದುವೆ ಮಾಡಿಕೊಳ್ಳಬೇಕೆಂದಿದ್ದೇನೆ..
ಆತ: ಎಲ್ಲರೂ ಒಂದೇ ಮದುವೆ ಮಾಡಿಕೊಳ್ಳೋದು ದೋಸ್ತಾ
ಈತ: ಪ್ರೀತಿ ಮಾಡಿ ಆಮೇಲೆ ಮದುವೆ ಆದ್ರೇ ತುಂಬಾ ಚೆನ್ನಾಗಿರುತ್ತೆ ಅಲ್ವಾ ದೋಸ್ತಾ,,
ಆತ: ಪ್ರೀತಿ ಮಾಡೋದೇನೋ ತುಂಬಾ ಚೆನ್ನಾಗಿರುತ್ತೆ. ಆದರೆ ಮದುವೆ ಆಗೋದು ಚೆನ್ನಾಗಿರೊಲ್ಲ..
ಈತ: ಏನು ಸ್ವಾಮಿ ನೀವು ಕೇಳ್ತಾ ಇರೋದು. ಹುಡುಗಿಯನ್ನು ಕೊಟ್ಟು ಜೊತೆಗೆ ವರದಕ್ಷಿಣೆನೂ ಕೊಡಬೇಕೆ..?
ಆತ: ನಿಮಗೆ ಎರಡು ಕೊಡೋದಿಕ್ಕೆ ಇಷ್ಟವಿಲ್ಲದಿದ್ರೇ ವರದಕ್ಷಿಣೆ ಕೊಡಿ. ನಿಮ್ಮ ಹುಡುಗಿ ನಿಮ್ಮ ಮನೆಯಲ್ಲೇ ಇರಲಿ ಏನಂತೀರಿ..?
ಈತ: ನೋಡು ಗೆಳೆಯ, ಟೈಂಪಾಸ್‌ಗೆ ಅಂತ ಒಂದು ಪ್ರಶ್ನೇ ಕೇಳ್ತಿನಿ. ಉತ್ತರ ಹೇಳ್ತಿಯಾ..
ಆತ: ನೋಡು ಮೈಸೂರಿನಿಂದ ಹಾಸನಕ್ಕೆ ಒಂದುರೈಲು ೫೦ ಕಿ.ಮೀ.ವೇಗದಲ್ಲಿ ಮತ್ತು ಒಂದು ಕಾರು ೫೦ ಮೈಲಿ ವೇಗದಲ್ಲಿ ಬರ‍್ತಾ ಇದ್ರೇ ನನ್ನ ವಯಸ್ಸೆಷ್ಟು..?
ಈತ: ನಿನ್ನ ವಯಸ್ಸು ಐವತ್ತು.
ಆತ: ಅರೇ..! ಸರಿಯಾದ ಉತ್ತರ. ಲೆಕ್ಕಾಚಾರ ಯಾವ ರೀತಿ ಮಾಡ್ದೇ ದೋಸ್ತಾ..?
ಈತ: ಲೆಕ್ಕಾಚಾರ ಎಲ್ಲಿ ಬಂತು ಮಣ್ಣು. ಆಚೆ ಬೀದಿಲಿ ಒಬ್ಬ ಅರೆಹುಚ್ಚ ಇದ್ದಾನೆ. ಅವನ ವಯಸ್ಸು ಇಪ್ಪತ್ತೈದು. ನೀನು ಸಂಪೂರ್ಣ ಹುಚ್ಚ ಇದ್ದಿ. ಅದಕ್ಕೆ ಐವತ್ತು..!
ಆತ: ಈಗಿನ ಕಾಲದಲ್ಲಿ ಗಂಡು ಯಾರೋ ಹೆಣ್ಣು ಯಾರೋ ಎಂದು ಪತ್ತೆ ಮಾಡೋದೆ ಕಷ್ಟ. ಅಲ್ಲಿ ನೋಡು ದೋಸ್ತಾ. ಆ ಡ್ಯಾನ್ಸ್ ಮಾಡುತ್ತಿರುವ ಹುಡುಗ ಹೇಗೆ ಹುಡುಗಿಯ ಹಾಗೇ ನುಲಿದಾಡುತ್ತಿದ್ದಾನೆ.
ಆಕೆ: ಯಾರ್ ಹೇಳಿದ್ದು. ಅವಳು ಹುಡುಗ ಅಂತ..?
ಆತ: ಸಾರಿ ನನಗೆ ಗೊತ್ತಾಗಲಿಲ್ಲ. ನೀವು ಅವಳ ತಂದೆ ಅಂತ ಕಾಣ್ಸುತ್ತೆ..?
ಆಕೆ: ಯಾರ‍್ರೀ ತಂದೆ..! ನಿಮಗೆ ಕಣ್ಣು ಕಾಣ್ಸೊಲ್ವ..? ನಾನು ಅವಳ ತಾಯಿ.
ಆತ: ಇದು ಯಾವ ಸೀಮೆ ಊರಯ್ಯ. ಯಾವ ಅಂಗಡಿಯಲ್ಲಿ ಕೇಳಿದ್ರು ಸಿಗ್ತಿಲ್ಲ.
ಈತ: ಅಂಥದ್ದೇನು ಕೇಳ್ದಯ್ಯಾ ನೀನು..?
ಆತ: ಅಂಥದ್ದೇನು ಇಲ್ಲ. ಕೇವಲ ಸಾಲ ಮಾತ್ರ ಕೇಳ್ದೆ ಅಷ್ಟೇ. ಹೀ..ಹೀ.. (ಪೆಚ್ಚು ನಗೆ)
ಈತ: ನನ್ನ ಹೆಂಡತಿ ನನಗಿಷ್ಟವಾದ ತರಕಾರಿ ಹಾಕಿ ಅಡಿಗೆ ಮಾಡುವುದಿಲ್ಲ. ಅದಕ್ಕೆ ತಕ್ಕ ಶಾಸ್ತಿ ಮಾಡಿದೆ.
ಆತ: (ಗಾಬರಿ ಧ್ವನಿಯಲ್ಲಿ) ಏನು ಮಾಡಿದೆ ಮಾರಾಯ..?
ಈತ: ನಾನೇ ಅಡುಗೆ ಮಾಡಲು ಪ್ರಾರಂಭಿಸಿದೆ.
ಆತ: ಹೋ ಹೌದ..? ನಿನ್ನ ಕೈ ರುಚಿ ನೋಡಬೇಕಯ್ಯ. ಇವತ್ತು ರಾತ್ರಿ ನಿಮ್ಮ ಮನೆಗೆ ಊಟಕ್ಕೆ ಬರ‍್ತಿನಿ.
ಈತ: ಇನ್ನು ಮುಂದೆ ನಿನಗೆ ಕೆಟ್ಟಕಾಲ ಪ್ರಾರಂಭವಾಯಿತು.
ಆತ: ಅದ್ಹೇಗೆ ಹೇಳ್ತಿಯ..? ನಿನಗೇನು ಜೋತಿಷ್ಯ ಗೊತ್ತ..?
ಈತ: ಇದನ್ನು ಹೇಳೋದಿಕ್ಕೆ ಜ್ಯೋತಿಷ್ಯ ಏಕೆ ಗೊತ್ತಿರಬೇಕು. ನಿನ್ನ ಮದುವೆ ಬರುವ ಭಾನುವಾರ ಅಂತ ಈಗ ತಾನೇ ಹೇಳಿದೆಯೆಲ್ಲಾ..!

ಗೊರೂರು ಅನಂತರಾಜು, ಹಾಸನ.
ಮೊಬೈಲ್: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧,

ಭಕ್ತಿ ಮಾರ್ಗಕ್ಕೆ ಜಾತಿ ಧರ್ಮದ ಹಂಗಿಲ್ಲ: ಕೆ.ಎಫ್. ಮುದ್ದಾಬಳ್ಳಿ

ಗಂಗಾವತಿ: ಸಂಗೀತ ಎಂಬುದು ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಯಾವುದೇ ಜಾತಿ ಮತ ಎಣಿಸದೆ, ಸರ್ವರನ್ನೂ ಆಕರ್ಷಿಸುವ ದಿವ್ಯಶಕ್ತಿ ಸಂಗೀತ ಹೊಂದಿದೆ ಎಂದು ಗಾನಯೋಗಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಕೆಎಫ್ ಮುದ್ದಾಬಳ್ಳಿ ಹೇಳಿದರು.

ಅವರು. ಕಳೆದ ಮಹಾ ಶಿವರಾತ್ರಿ ಪ್ರಯುಕ್ತ ಹಿರೇಜಂತಕಲ್‌ನ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಅಬೀದಾ ಬೇಗಂ, ಕಲಾವಿದ ವೆಂಕಟೇಶ್ ದಾಸನಾಳ ಇತರರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಣ್ಣಪ್ಪ ಕಮ್ಮಾರ್. ಜಿ.ನಾಗೇಶ್ವರ ರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.