ಹಂಪಿ ಉತ್ಸವದ ‘ಧ್ವನಿ ಮತ್ತು ಬೆಳಕು’ ಪ್ರದರ್ಶನಕ್ಕೆ ಗಂಗಾವತಿಯ ಎನ್.ಆರ್.ರಾಯಬಾಗಿ ಆಯ್ಕೆ

ಗಂಗಾವತಿ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ. ೨೮ ಶುಕ್ರವಾರ ಆರಂಭಗೊಳ್ಳುವ ಹಂಪಿ ಉತ್ಸವದ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ನಗರದ ಕಲಾವಿದ ಜೂನಿಯರ್ ರಾಜಕುಮಾರ ಎನ್.ಆರ್. ರಾಯಬಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ರ‍್ಕಾರದ ಮಾಹಿತಿ, ಪ್ರಸಾರ ಹಾಗೂ ಸಂಪರ್ಕ ಕೇಂದ್ರ (ಗಾಯನ ಮತ್ತು ನಾಟಕ ವಿಭಾಗ), ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತ ನೇತೃತ್ವದಲ್ಲಿ ಧ್ವನಿ ಮತ್ತು ಬೆಳಕು ಪ್ರರ‍್ಶನ ಫೆ.೨೮ ರಿಂದ ಆರಂಭಗೊಂಡು ಮಾ.೭ ರವರಗೆ ನಡೆಯಲಿದೆ. ಕಲಾವಿದ ನಾರಾಯಣ ರಾಯಬಾಗಿಯು ಸತತ ೧೬ನೇ ವರ್ಷದಲ್ಲಿ ಧ್ವನಿ ಬೆಳಕು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಈ ಮೊದಲು ‘ಕರ್ನಾಟಕ ವೈಭವ’, ‘ಶ್ರೀ ಕೃಷ್ಣದೇವರಾಯ’ ವಿಜಯನಗರ ವೈಭವ’ ಧ್ವನಿ ಬೆಳಕು ಪ್ರದರ್ಶನಗಳಲ್ಲಿ ಅಶೋಕ ಚಕ್ರವರ್ತಿ, ಶಂಕರಾಚಾರ್ಯರ, ಭರತ ಚಕ್ರವರ್ತಿ, ತಿಮ್ಮರಸ, ಅಪ್ಪಾಜಿ, ಪೊರ್ಚುಗೀಸ್ ಅಧಿಕಾರಿ, ಸಾಮಂತ ರಾಜ್, ಕನಕದಾಸ ಮತ್ತಿತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿಜಯನಗರ ವೈಭವದಲ್ಲಿ ಪುರಂದರ ದಾಸ, ಅಬ್ದುಲ್ ರಜಾಕ್, ಬ್ರಿಟಿಷ್ ಅಧಿಕಾರಿ ನಿಕೋಲಸ್ ಕೌಂಟಿ, ಗಜಪತಿ ರಾಜನ ಮಂತ್ರಿ, ಡೋಯಿಂಗ್ ಪಾಯಸ ಇನ್ನಿತರ ಪಾತ್ರಗಳಲ್ಲಿ ಅಭಿನಯಿಸುವರು.

ಮಹಾಶಿವರಾತ್ರಿ ಪ್ರಯುಕ್ತ ಗಂಗಾವತಿಯ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ

ಗಂಗಾವತಿ: ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು ಎಂದು ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದರು.

ಅಂದು ಸಂಜೆ ೬ಕ್ಕೆ ಶಿವಸ್ವರೂಪರಾದ ಶ್ರೀಗುರು ಮೌನೇಶ್ವರರಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲಿಯವರು ಚಾಲನೆ ನೀಡಿದರು.

ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸ್ಥಳೀಯ ಸಂಗೀತ ಕಲಾವಿದರಾದ ಕನಕಪ್ಪ ಚಿತ್ರಗಾರ, ಗಂಗಾಧರಯ್ಯ, ವೆಂಕಟೇಶ ದಾಸನಾಳ, ಕಾಶೀಂ ಅಲಿ ಮುದ್ದಾಬಳ್ಳಿ, ಶಿವಪ್ಪ ಹುಳ್ಳಿ, ನರಸಿಂದ ದರೋಜಿ, ಮಲ್ಲೇಶಪ್ಪ, ಸಮಾಜದ ಪ್ರತಿನಿಧಿಗಳಾದ ಸಣ್ಣೆಪ್ಪ ಕಮ್ಮಾರ, ನಾಗಪ್ಪ ಬಡಿಗೇರ ಸೇರಿದಂತೆ ಮುಂತಾದ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಸಿ.ವಿ ಸರ್ವಜ್ಞಾಚಾರ್, ಪ್ರಮುಖರಾದ ಹನುಮೇಶ ಬಡಿಗೇರ, ಬಸವರಾಜ ಬಡಿಗೇರ, ಛಾಯಾ ಭಾಸ್ಕರ, ಬಸವರಾಜ ವಣಗೇರಿ, ಶ್ರೀನಿವಾಸ ಪತ್ತಾರ, ದೇವೆಂದ್ರ ಅರ್ಕಸಾಲಿ, ಗುರುರಾಜ ಬಡಿಗೇರ, ಮಹಿಳಾ ಮಂಡಳಿಯವರು, ಯುವಮಿತ್ರರು ಪಾಲ್ಗೊಂಡು ಅಚ್ಚುಕಟ್ಟಾಗಿ ನಡೆಸಿದರು.

ಮಾರ್ಚ್-05‌ ರಂದು ಗಂಗಾವತಿಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವ

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವವು ಮಾರ್ಚ್-೦೫ ಬುಧವಾರದಂದು ನಡೆಯಲಿದೆ ಎಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ರಾಮಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೫ನೇ ವಾರ್ಷಿಕೋತ್ಸವದ ನಿಮಿತ್ಯವಾಗಿ ಅಂದು ಭಕ್ತಾದಿಗಳಿಗೆ ಲೋಕಕಲ್ಯಾಣಾರ್ಥವಾಗಿ ಭಕ್ತ ಜನರಿಗೆ ಭೋಗ ಭಾಗ್ಯ ಆಯುರಾರೋಗ್ಯ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ನವಗ್ರಹ ಪರಿಹಾರಕ್ಕಾಗಿ ಅನೇಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಂದು ಬೆಳಿಗ್ಗೆ ೫:೧೫ಕ್ಕೆ ಕಾಕಡ ಆರತಿ, ನಂತರ ಶ್ರೀಸಾಯಿಬಾಬಾ ಅವರಿಗೆ ಪಂಚಾಮೃತ ಅಭಿಷೇಕ ಪೂಜಾದಿಗಳು ನಂತರ ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮತ್ತೆ ಮಧ್ಯಾಹ್ನದ ಆರತಿ ಹಾಗೂ ಸಂಜೆ ಸಂಧ್ಯಾ ಆರತಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಕಾರಣ ಎಲ್ಲಾ ಭಕ್ತಾದಿಗಳು ಆಗಮಿಸಿ, ಶ್ರೀ ಬಾಬಾರವರ ದರ್ಶನ ಪಡೆದು ತನು, ಮನ, ಧನದಿಂದ ಸೇವೆ ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿ, ಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಸಮಿತಿಯ ಆಡಳಿತ ಮಂಡಳಿ ಮನವಿ ಮಾಡಿದೆ.

ಮಹಾಶಿವರಾತ್ರಿ ಅಂಗವಾಗಿ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪ ನಾಮಫಲಕಕ್ಕೆ ಪೂಜಾ ಕಾರ್ಯಕ್ರಮ

ಗಂಗಾವತಿ: ನಗರದ ೪ನೇ ವಾರ್ಡ್ ಸಿದ್ದಿಕೆರೆಯಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಬೇಡರ ಕಣ್ಣಪ್ಪ ಭಾವಚಿತ್ರವಿರುವ ನಾಮಫಲಕಕ್ಕೆ ಗಂಗಾವತಿ ತಾಲೂಕ ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘದ ಅಧ್ಯಕ್ಷರಾದ ಜೆ. ಸೋಮಪ್ಪ ಕವಿಗಳು ಪ್ರಕಟಣೆ ಮೂಲಕ ತಿಳಿಸಿದರು.


ಅವರು ಮಹಾಶಿವರಾತ್ರಿಯ ದಿನ ಸಂಜೆ ೬ ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬೇಡರ ಕಣ್ಣಪ್ಪನು ಮಹಾಶಿವನ ಭಕ್ತನಾಗಿ ತನ್ನ ಕಣ್ಣುಗಳನ್ನು ದಾನ ನೀಡಿದ ದಿನವೇ ಮಹಾಶಿವರಾತ್ರಿಯಾಗಿದ್ದು, ಈ ಮಹಾಶಿವರಾತ್ರಿ ಅಂಗವಾಗಿ ಶಿವನ ಭಕ್ತ ಬೇಡರ ಕಣ್ಣಪ್ಪನಿಗೆ ನಮ್ಮ ಸಂಘದಿಂದ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಚಿಕ್ಕವಂಕಲಕುಂಟಾ ದೇವಸ್ಥಾನದ ಫಕೀರೇಶ್ವರ ತಾತನವರು, ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಸಿದ್ದಿಕೆರೆ ಮಾರೆಮ್ಮ ದೇವಸ್ಥಾನದ ಅರ್ಚಕರಾದ ಪ್ರಭಾಕರ, ಸಂಘದ ಗೌರವಾಧ್ಯಕ್ಷ ನಾಗಭೂಷಣ ನಾಯಕ ರಾಂಪುರ, ಉಪಾಧ್ಯಕ್ಷರಾದ ಸಿಂಗಾಪುರ ಭೀಮರಾಯ ನಾಯಕ, ಉಮೇಶಪ್ಪ ರಾಂಪುರ, ಕಾರ್ಯದರ್ಶಿಯಾದ ಟಿ. ಅನೀಲಕುಮಾರ, ಮುಖಂಡರಾದ ಸೋಮಲಾಪುರ ಬಸಪ್ಪ ನಾಯಕ, ಸೋಮಲಾಪುರ ಶೇಖರ ನಾಯಕ, ಕೋಲ್ಕಾರ ನಾಗರಾಜ ನಾಯಕ, ಮಣ್ಣೂರು ನಾಗಪ್ಪ ನಾಯಕ, ಗಿರೀಶ ನಾಯಕ ಬಸವನದುರ್ಗ, ಟಿ. ಬಸವರಾಜ ಮಲ್ಲಾಪುರ, ಸಿಂಗಾಪುರ ಶ್ರೀನಿವಾಸ ನಾಯಕ ಸೇರಿದಂತೆ ಸಿದ್ದಿಕೆರೆ, ಸಂಗಾಪುರ, ರಾಂಪುರ ಗ್ರಾಮದ ಗುರುಹಿರಿಯರು, ಸರ್ವ ಸಮಾಜಗಳ ಮುಖಂಡರು, ಪ್ರಮುಖರು ಪಾಲ್ಗೊಂಡಿದ್ದರು.

ಶ್ರದ್ಧೆ ಭಕ್ತಿಯಿಂದ ಜರುಗಿದ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ.

ಗಂಗಾವತಿ: ಸಮೀಪದ ಶ್ರೀ ರಾಮನಗರದ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಗೋವಿಂದಾಂಬ ಸಮಿತ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ. ಶ್ರೀಕಾಂತ್ ನೇತೃತ್ವದಲ್ಲಿ. ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವಿಶ್ವಕರ್ಮ ಸಮಾಜದ ದೇವಸ್ಥಾನ ಸಮಿತಿಯ ಯುವ ಮುಖಂಡ ರಾಮ ಬ್ರಹ್ಮ ದಂಪತಿಗಳಿಂದ ಮಹಾಸಂಕಲ್ಪ ಕಲ್ಯಾಣೋತ್ಸವ ಹಾಗೂ ವೆಂಕಟ ಸೋಮೇಶ್ವರ ದಂಪತಿಗಳು ನೇತೃತ್ವವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಮ ಬ್ರಹ್ಮ ಮಾತನಾಡಿ ಕಾಲಜ್ಞಾನಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಮಹಿಮೆ ಅಪಾರವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಂತ ಅವರ ಭವಿಷ್ಯತ್ಕಾಲದ ಕಾಲಜ್ಞಾನದ ಹೇಳಿಕೆಗಳು ಈಗಾಗಲೇ ಶೇಕಡ 80 ರಷ್ಟು ಕಲಿಯುಗದಲ್ಲಿ ಕಾಣಬಹುದಾಗಿದೆ. ಶೀಘ್ರದಲ್ಲಿ ಮತ್ತೊಂದು ಅವತಾರದಲ್ಲಿ ಜನ್ಮ ತಾಳುವುದಾಗಿ ಹೇಳಿದ ಅವರು, ತಮ್ಮನ್ನು ನಂಬಿದ ಭಕ್ತರಿಗೆ ಸದಾಕಾಲ ರಕ್ಷಿಸುವುದಾಗಿ. ತಿಳಿಸಿದ್ದಾರೆ ಎಂದು ಹೇಳಿದರು.

ಅರ್ಚಕ ಶ್ರೀಕಾಂತ್ ಮಾತನಾಡಿ ಕಲಿಯುಗದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಾಲಜ್ಞಾನ ಅತ್ಯಂತ ಮಹತ್ವವಾಗಿದೆ. ಅವರ ದ್ವಾದಶ ಮಂತ್ರದಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ಹೇಳಿದರು.

ಬಳಿಕ ಮಹಾಮಂಗಳಾರತಿ ಮಹಾಪ್ರಸಾದ ದೊಂದಿಗೆ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸೂರಿ ಬಾಬು, ಸತ್ಯನಾರಾಯಣ, ರಾಮಕೃಷ್ಣ, ಪರಬ್ರಹ್ಮ ಸೇರಿದಂತೆ ಗಂಗಾವತಿ ತಾಲೂಕ ಸೇರಿದಂತೆ ಹೊಸಪೇಟೆ, ಸಿಂಧನೂರು ಭಾಗದಿಂದ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಹಾ ಶಿವರಾತ್ರಿ ಹುಣಸಿನಕೆರೆ ಬಡಾವಣೆ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ 101 ಲೀ. ಹಾಲಿನ ಅಭಿಷೇಕ, ಭಜನೆ ಹಾಡುಗಾರಿಕೆ ಕಾರ್ಯಕ್ರಮ.

ಹಾಸನ: ನಗರದ ಹುಣಸಿನಕೆರೆ ಬಡಾವಣೆಯ ಶ್ರೀ ಕಾಶಿ ವಿಶ್ವನಾಥ ದೇವಾಲಯ ಜೀರ್ಣೊದ್ಧಾರ ಸಮಿತಿ ಹಾಗೂ ಕನ್ನಡ ರತ್ನ ಯುವಕರ ಸಂಘ, ಹುಣಸಿನಕೆರೆ ಬೀದಿ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯಕ್ತ ಇದೇ ಫೆಬ್ರವರಿ 26ರ ಬುಧವಾರ ಸಂಜೆ 4 ರಿಂದ 6ರವರಗೆ 101 ಲೀ. ಹಾಲಿನ ಅಭಿಷೇಕ ನಂತರ ರಾತ್ರಿ 7ಕ್ಕೆ ಮಹಾ ಮಂಗಳಾರತಿ, 7.30ಕ್ಕೆ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.

ದೇವಾಲಯದ ಆವರಣದಲ್ಲಿನ ರಂಗ ವೇದಿಕೆಯಲ್ಲಿ ಸಂಜೆ 5.30ಕ್ಕೆ ಶ್ರೀ ಶಾರದ ಭಜನಾ ಮಂಡಳಿಯಿಂದ ಹಾಗೂ 6.30 ರಿಂದ ಶ್ರೀ ಛಾಯಾಪುತ್ರ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯುವುದು. 7.30 ರಿಂದ ಶ್ರೀಮತಿ ರಾಣಿ ಚರಾಶ್ರೀ ಮತ್ತು ಸಂಗಡಿಗರಿಂದ ಭಕ್ತಿ ಕೋಲಾಟ ಮತ್ತು ಭಕ್ತಿ ಗೀತೆ ಕಾರ್ಯಕ್ರಮ ಇರುವುದು. ರಾತ್ರಿ 11.30 ರಿಂದ ಬೆಳಗಿನ ಜಾವ 5.30 ವರೆಗೆ ಏಕಲವ್ಯ ಅಖಂಡ ಭಜನಾ ಮಂಡಳಿಯವರಿಂದ ಅಮೋಘ ಭಜನಾ ಕಾರ್ಯಕ್ರಮ ಇರುತ್ತದೆ.
ಮತ್ತು ಮಾರನೇ ದಿನ 27ರ ಗುರುವಾರ ಇದೇ ದೇವರ ಸನ್ನಿದಾನದಲ್ಲಿ ಮದ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಆರ್. ಕೃಷ್ಣಶೆಟ್ಟಿ, ಅಧ್ಯಕ್ಷರು ಸಮಿತಿಯ ಪರವಾಗಿ ವಿನಂತಿಸಿದ್ದಾರೆ.

ಇತರ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ: https://aratt.ai/@vishwaroopa_news_blog

ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮ

ಗಂಗಾವತಿ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಗತಿಸಿದ 40 ವರ್ಷದ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಅದರಂತೆ ಇಂದು ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಲೆಯ 350ಕ್ಕೂ ಹೆಚ್ಚು ಪಾಲಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳೊಂದಿಗೆ ತಮ್ಮ ಅಮೃತದ ಕೈಗಳಿಂದ ತುತ್ತು ಮಾಡಿ ಮಕ್ಕಳಿಗೆ ಊಟ ಮಾಡಿಸಿದರು. ಕಾರ್ಯಕ್ರಮವು ಪಾಲಕರಿಂದಲೇ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಗೌಡ ಪಾಟೀಲ್ ವಹಿಸಿ ಮಾತನಾಡಿದರು. ತಾಯಿಯು ದೇವರ ಸಮಾನರು ಬಾಲ್ಯದ ಮಗುವಿಗೆ ತೆಂಗಿನ ಎಳೆನೀರು ತೆಕ್ಕೊಂಡು ಬಂಗಾರದ ಮೋರೆ ತೊಳೆದವರು. ಇಂದಿನ ದಿನಮಾನಗಳಲ್ಲಿ ಅಂತಹ ಸಂಸ್ಕೃತಿಯನ್ನು ಬೆಳೆಸಿದರೆ ನಮ್ಮ ಸಮಾಜವನ್ನು ಎತ್ತರಕ್ಕೆ ಕಟ್ಟಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಾಲಪ್ಪ ಎಂ ಹಾಗೂ ಕಂಪ್ಯೂಟರ್ ಶಿಕ್ಷಕರಾದ ಮಂಜುನಾಥ್ ಎಂ. ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಶ್ರೀಮತಿ ಶಿವಗೀತಾ ಸಹ ಶಿಕ್ಷಕಿ ನುಡಿಯುತ್ತಾ ಮಕ್ಕಳ ಪ್ರೀತಿ ಹಾಗೂ ಹಾರೈಕೆಯ ಜೊತೆಗೆ ಕೈ ತುತ್ತಿನ ಮೌಲ್ಯವನ್ನು ಪಾಲಕರಿಗೆ ಮಕ್ಕಳಿಗೆ ಹೃದಯಕ್ಕೆ ಮುಟ್ಟುವಂತೆ ಹೇಳಿಕೊಟ್ಟರು. ಶಾಲೆಯ ಅನೇಕ ಮಕ್ಕಳು ತಮ್ಮ ತಾಯಂದಿರ ಬಗ್ಗೆ ಗೌರವದ ಹಾಗೂ ಮಮತೆಯ ಹಿರಿದಾದ ಮಾತುಗಳನ್ನು ನುಡಿದರು. ತಾಯಿಯ ಅಮೃತದ ಕೈತುತ್ತನ್ನು ಊಟ ಮಾಡಿ ಮಕ್ಕಳು ಹಿರಿಹಿರಿ ಹಿಗ್ಗಿದರು. ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ಮತ್ತೂ ಅಕ್ಷರ ದಾಸೋಹ ಸಿಬ್ಬಂದಿಯವರು ಭಾಗಿಯಾಗಿ ಪಾಲಕರಿಗೆ ಊಟದ ವ್ಯವಸ್ಥೆ ಕೈಗೊಂಡರು. ಎಲ್ಲ ಪಾಲಕರು ಅಭಾರಿಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತ, ಶ್ರೀಮತಿ ಸುಧಾಮಣಿ, ಶ್ರೀಮತಿ ನಾಗರತ್ನ, ಶ್ರೀಮತಿ ಲಕ್ಷ್ಮಿ ಹಾಗೂ ದೈಹಿಕ ಶಿಕ್ಷಕ ವಿರುಪಾಕ್ಷ, ಚಂದ್ರಕಲಾ, ಕುಮಾರ, ರೇಣುಕಾ ಹೆಚ್, ಶ್ರೀಮತಿ ಜುಲೇಖ, ಕು. ಶ್ರೀದೇವಿ ಎಲ್ಲರೂ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಕುಮಾರಿ ರೇಣುಕ ಶಿಕ್ಷಕಿಯರು ಮಾಡಿದರೆ, ಶ್ರೀಮತಿ ಚಂದ್ರಕಲಾ ವಂದಿಸಿದರು.

ಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಧೀಕ್ಷೆ ಹಾಗೂ ಪ್ರಾತ್ಯಕ್ಷಿತೆ ಸಮಾರಂಭ

ಗಂಗಾವತಿ: ನಗರದ ಶ್ರೀ ಕೊಟ್ಟೂರುಬಸವೇಶ್ವರ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥನದಲ್ಲಿ ಇಷ್ಟಲಿಂಗ ಧೀಕ್ಷಾ ಹಾಗೂ ಪ್ರಾತ್ಯಕ್ಷಿತೆ ಸಮಾರಂಭ ನಡೆಯಲಿದೆ ಎಂದು ಬಸವಕೇಂದ್ರದ ಗಂಗಾವತಿ ತಾಲೂಕ ಕಾರ್ಯದರ್ಶಿಯಾದ ಎ.ಕೆ. ಮಹೇಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯರು ಹಾಗೂ ಸುಳೇಕಲ್ ಬೃಹನ್ಮಠದ ಪೂಜ್ಯ ಶ್ರೀ ಭುವನೇಶ್ವರಯ್ಯ ತಾತನವರು ವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಹೊಸಪೇಟೆ ಇಷ್ಟಲಿಂಗ ಅಧ್ಯಯನ ಕೇಂದ್ರದ ಸದಸ್ಯರು ಹಾಗೂ ಉಪನ್ಯಾಸಕರಾದ ಬಸವರಾಜ ಟಿ.ಹೆಚ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇಷ್ಟಲಿಂಗದ ವೈಜ್ಞಾನಿಕ ಹಿನ್ನೆಲೆ ಹಾಗೂ ಶಿವಯೋಗ ಪ್ರಾತ್ಯಕ್ಷಿತೆಯ ವಿವರಣೆ ನೀಡಲಾಗುವುದು.

ಇಷ್ಟಲಿಂಗ ಧೀಕ್ಷೆ ಪಡೆಯುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ನೋಂದಾಯಿಸಿಕೊಂಡು, ಫೆಬ್ರವರಿ-೨೬ ಬುಧವಾರ ಬೆಳಿಗ್ಗೆ ೭:೩೦ಕ್ಕೆ ಶುಚಿರ್ಭೂತರಾಗಿ ಬಿಳಿವಸ್ತ್ರದೊಂದಿಗೆ ಪಾಲಕರೊಡಗೂಡಿ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ: ೯೯೮೬೨೧೧೯೯೧, ೯೦೩೫೪೭೪೬೭೦, ೯೧೬೪೫೩೮೫೪೦, ೯೪೪೮೬೪೯೫೨೨, ೯೯೦೦೧೯೬೩೬೩ ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಪವಿತ್ರ ತ್ರಿವೇಣಿ ಸಂಗಮದ ಕುಂಭಮೇಳದ ಜಲ ವಿತರಣೆ: ರೂಪರಾಣಿ ರಾಯಚೂರು

ಗಂಗಾವತಿ: ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಪ್ರಯಾಗರಾಜ್ ತ್ರಿವೇಣಿ ಸಂಗಮದ ಕುಂಭಮೇಳದ ಪವಿತ್ರ ಜಲವನ್ನು ಆರ್ಯವೈಶ್ಯ ಸಮಾಜದ ಬಾಂಧವರು ಸೇರಿದಂತೆ ಭಕ್ತಾದಿಗಳಿಗೆ ಸಮಾಜದ ಅಧ್ಯಕ್ಷೆ ರೂಪರಾಣಿ ರಾಯಚೂರುರವರು ಸೋಮವಾರದಂದು ವಿತರಿಸಿದರು.

ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರದಂತೆ ನಡೆಸಲಾಗುತ್ತಿರುವ ಭಜನೆ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ, ಧಾರ್ಮಿ ಕಾರ್ಯಕ್ರಮಗಳನ್ನು ಹಾಗೂ ಸೇವಾ ಕರ್ತನ ಸನ್ಮಾನವನ್ನು ದೇವಸ್ಥಾನದ ಅರ್ಚಕ ದಿಗಂಬರ್ ಭಟ್ ನೆರವೇರಿಸಿದರು. ಬಳಿಕ ಜಲ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷೆ ರೂಪರಾಣಿಯವರು, ತಾವು ತಮ್ಮ ಕುಟುಂಬದ ಸದಸ್ಯರೊಂದಿಗೆ ಕುಂಭಮೇಳಕ್ಕೆ ಹೋಗಿದ್ದು, ಅಲ್ಲಿ ದಿನಂಪ್ರತಿ ಕಂಡುಬರುವ ಕೋಟ್ಯಾಂತರ ಜನ ಭಕ್ತರ ಪವಿತ್ರ ಸ್ನಾನ, ಸಾಧು ಸಂತರು, ನಾಗ ಸಾಧುಗಳಿಂದ ಹರ ಹರ ಮಹಾದೇವ ಎಂಬ ಘೋಷಣೆ ಬಾನೆತ್ತರಕ್ಕೆ ತಲುಪುವಂತಿತ್ತು ಎಂದು ತಿಳಿಸಿದ ಅವರು ಸಮಾಜ ಬಾಂಧವರ ಒಳಿತಿಗಾಗಿ ಹಾಗೂ ಭಕ್ತರಿಗಾಗಿ ಮಹಾಶಿವರಾತ್ರಿಯ ಪ್ರಯುಕ್ತ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಸಮಾಜದ ಕಾರ್ಯದರ್ಶಿ ಈಶ್ವರ ಶೆಟ್ಟಿ ಮಾತನಾಡಿ ಭಾರತದ ಸನಾತನ ಧರ್ಮದ ಸಂಸ್ಕೃತಿ ಕುಂಭಮೇಳದಲ್ಲಿ ರಾರಾಜಿಸಿದ್ದು ಕಂಡುಬಂದಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ನೇತೃತ್ವದ ಸರಕಾರ ಭಕ್ತಾದಿಗಳಿಗೆ ಸಕಲ ಸೌಲಭ್ಯವನ್ನು ಕಲ್ಪಿಸಿದ್ದರು. ಒಟ್ಟಾರೆ ದೇವಲೋಕ ಧರೆಗಿಳಿದು ಬದಂತೆ ಬಾಸವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ ಶೆಟ್ಟಿ, ಖಜಾಂಚಿ ಮಾರುತಿ ಪ್ರಸಾದ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾಗ್ಯ ಈಶ್ವರಶೆಟ್ಟಿ, ಸೇವಾ ಕರ್ತರಾದ ಶೋಭಾರಾಣಿ ದಂಪತಿಗಳು, ಯೋಜನೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪರಿಮಳ ಬಸವರಾಜ ಬಡಿಗೇರ ಅವರಿಗೆ ರಾಜ್ಯಮಟ್ಟದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಸನ್ಮಾನ

ಯಲಬುರ್ಗಾ: ತಾಲೂಕಿನ ಗುನ್ನಾಳ ಗ್ರಾಮದ ಆಶಾ ಕಾರ್ಯಕರ್ತೆ ಪರಿಮಳ ಬಸವರಾಜ ಬಡಿಗೇರ ಅವರಿಗೆ ಧಾರವಾಡದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಪ್ರಪ್ರಥಮ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಧಾರವಾಡದ ಪಾಟೀಲ್ ಪುಟ್ಟಪ್ಪ ಸಭಾಭವನ, ವಿದ್ಯಾವರ್ಧಕ ಸಂಘ ಕಲಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಪರಿಮಳ ಬಸವರಾಜ ಬಡಿಗೇರ ಅವರು ಸುಮಾರು ವರ್ಷದಿಂದಲೂ ಆಶಾ ಕಾರ್ಯಕರ್ತೆಯಾಗಿ ಉತ್ತಮ ಕರ್ತವ್ಯನಿರ್ವಹಿಸಿದ ಪ್ರಯುಕ್ತ ಸಮಾಜದ ವತಿಯಿಂದ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಭಾಸ್ಕರ ಬಡಿಗೇರ, ಎಂ.ಸೋಮಶೇಖರ, ಡಾ.ಪವಿತ್ರಾ ಪ್ರಭಾಕರ ಆಚಾರ ಸೇರಿದಂತೆ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು, ಮುಖಂಡರು, ಸಮಾಜದ ಪ್ರಮುಖರು, ಮಹಿಳೆಯರು ಭಾಗವಹಿಸಿದ್ದರು.