ಶೃಂಗೇರಿಯ ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಭವ್ಯವಾದ ಶುಭಯಾತ್ರೆ.

ಕೊಪ್ಪಳ: ನಗರಕ್ಕೆ ಆಗಮಿಸಿದ ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಶೋಭಾ ಯಾತ್ರೆ ಸಹಸ್ರಾರು ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಶುಕ್ರವಾರದಂದು ಜರುಗಿತು.

ಹೊಸಪೇಟೆ ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿಯ ಸದಸ್ಯರು ಹಾಡು, ಕೋಲಾಟಗಳಿಂದ ಗಮನ ಸೆಳೆದರು.

ಬಳಿಕ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜಗದ್ಗುರುಗಳಿಂದ ಆಶೀರ್ವಚನ ಜರುಗಿತು.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿ ಸಮರ್ಪಣೆ, ಸಾಗರದಲ್ಲಿ ಹರಿದು ಬಂತು ಭಕ್ತ ಸಮೂಹ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಮಾರ್ಚ್-5 ಬುಧವಾರರಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು.

ಇದೇ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಹಾಗೂ ಬೆಳ್ಳಿ ಪ್ರಭಾವಳಿಯನ್ನು ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸಮರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜೋಶಿ ಹಾಗೂ ಋತುಜರ್ ತಂಡದವರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಸಾಯಿಬಾಬಾ ನಾಮಸ್ಮರಣೆಯನ್ನು ನಡೆಸಲಾಯಿತು. ಬಳಿಕ ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ. ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್‌ನ ಟಿ.ರಾಮಕೃಷ್ಣ ಮಾತನಾಡಿ, ಸಾಕ್ಷಾತ್ ದತ್ತಾತ್ರೇಯ ಅವತಾರಗಳಾದ ಶ್ರೀ ಸಾಯಿಬಾಬಾ ಅವರು ನಂಬಿ ಬಂದ ಭಕ್ತರ ಉದ್ಧಾರಕ್ಕೆ ಅನುಗ್ರಹಿಸುವ ಗುರು ಪರಂಪರೆಯಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು. ಅವರ ಜೀವಿತ ಅವಧಿಯಲ್ಲಿನ ಪವಾಡಗಳು, ಮಹಿಮೆಗಳು ಅಪಾರವಾಗಿದೆ ಎಂದು ಹೇಳಿದರು.

ಸದಸ್ಯರುಗಳಾದ ಎಸ್ ಸುರೇಶ್, ಪಂಪಾಪತಿ, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ರಾಮಕೃಷ್ಣ, ಗುರುರಾಜ, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್,. ಡಾ|| ಎ.ಎಸ್.ಎನ್ ರಾಜು ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗೋಪಿ ರಕ್ತ ಭಂಡಾರ ಕೇಂದ್ರದ ರವರಿಂದ ರಕ್ತದಾನ ಶಿಬಿರ ನಡೆಸಲಾಯಿತು.

ಮಾರ್ಚ್-4‌ ರಂದು ಜರುಗಿದ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ

ಗಂಗಾವತಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿ ಭಾವನೆಯಿಂದ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಸಕಲ ವಾದ್ಯ, ವೈಭವದೊಂದಿಗೆಹೊರಟ ಮಹಾರಥೋತ್ಸವದಲ್ಲಿ ಭಕ್ತಾದಿಗಳು ನಾಣ್ಯ ಹಾಗೂ ಉತ್ತತ್ತಿಯನ್ನು ರಥೋತ್ಸವಕ್ಕೆ ಸಮರ್ಪಿಸಿ ತಮ್ಮ ಭಕ್ತಿ ಭಾವವನ್ನು. ವ್ಯಕ್ತಪಡಿಸಿದರು. ರಥೋತ್ಸವ ಕಲ್ಮಠದವರೆಗೆ ತೆರಳಿ ದೇವಸ್ಥಾನಕ್ಕೆ ಆಗಮಿಸಿತು.

ಈ. ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹೇಶ್, ಹೊಸಳ್ಳಿ ಶಂಕರಗೌಡ, ನವಲಿ ವಾಸು, ಪರಗಿ ನಾಗರಾಜ್ ಸೇರಿದಂತೆ ವಿವಿಧ ಸಮಾಜ ಬಾಂಧವರು ಪಾಲ್ಗೊಂಡಿದ್ದರು..

ಉಮಾಕಾಂತ ಅವರೆಡ್ಡಿ ಅವರಿಗೆ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪ್ರದಾನ.

ಗಂಗಾವತಿ: ತಾವರಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಸಹಪ್ರಾಧ್ಯಾಪಕರಾದ ಉಮಾಕಾಂತ ಅವರೆಡ್ಡಿ ಆವರಿಗೆ ಆಂಧ್ರಪ್ರದೇಶದ ಕುಪ್ಪಮ್‌ನ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಆಂಗ್ಲಭಾಷೆ ವಿಭಾಗದ ಸಂಶೋಧನಾ ವಿದ್ಯಾರ್ಥಿ ಉಮಾಕಾಂತ ಅವರೆಡ್ಡಿ ಅವರು ಡಾ. ಜಿ. ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಡಾ. ಅಮಿತಾವ್ ಘೋಶ್: ಎ ನ್ಯಾಷನಲಿಸ್ಟಿಕ್ ಅಪ್ರೋಚ್’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.
ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇವರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಭಕ್ತಿ ಮಾರ್ಗಕ್ಕೆ ಜಾತಿ ಧರ್ಮದ ಹಂಗಿಲ್ಲ: ಕೆ.ಎಫ್. ಮುದ್ದಾಬಳ್ಳಿ

ಗಂಗಾವತಿ: ಸಂಗೀತ ಎಂಬುದು ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಯಾವುದೇ ಜಾತಿ ಮತ ಎಣಿಸದೆ, ಸರ್ವರನ್ನೂ ಆಕರ್ಷಿಸುವ ದಿವ್ಯಶಕ್ತಿ ಸಂಗೀತ ಹೊಂದಿದೆ ಎಂದು ಗಾನಯೋಗಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಕೆಎಫ್ ಮುದ್ದಾಬಳ್ಳಿ ಹೇಳಿದರು.

ಅವರು. ಕಳೆದ ಮಹಾ ಶಿವರಾತ್ರಿ ಪ್ರಯುಕ್ತ ಹಿರೇಜಂತಕಲ್‌ನ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಅಬೀದಾ ಬೇಗಂ, ಕಲಾವಿದ ವೆಂಕಟೇಶ್ ದಾಸನಾಳ ಇತರರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಣ್ಣಪ್ಪ ಕಮ್ಮಾರ್. ಜಿ.ನಾಗೇಶ್ವರ ರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ರಾಜ ಮನೆತನದ ಶ್ರೀರಂಗದೇವರಾಯಲು ಜನ್ಮ ದಿನೋತ್ಸವ

ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮಾರ್ಚ್-೩ ಸೋಮವಾರ ವಿಜಯನಗರ ಸಾಮ್ರಾಜ್ಯದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ೮೭ನೇ ವರ್ಷದ ಜನ್ಮದಿನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗೊಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹಲವಾರು ತಲೆಮಾರುಗಳಿಂದ ಇವರ ವಂಶಸ್ಥರಾಗಿ ಇದೇ ಆನೆಗೊಂದಿ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ. ಶ್ರೀರಂಗದೇವರಾಯಲು ರಾಜಕೀಯಕ್ಕೆ ಪ್ರವೇಶಿಸಿ ಸತತ ಐದುಬಾರಿ ಕನಕಗಿರಿ ಮತ್ತು ಗಂಗಾವತಿ ಎರಡು ಕ್ಷೇತ್ರಗಳಿಗೆ ಶಾಸಕರಾಗಿ, ಸಚಿವರಾಗಿ ರೈತಾಪಿ ವರ್ಗದ ಜನರ ಹಿತವನ್ನು ಕಾಯುತ್ತ ಮತ್ತು ದೀನ-ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಹಂಪಿ ಉತ್ಸವವನ್ನು ಆಚರಿಸುವಾಗ ಎಂ.ಪಿ. ಪ್ರಕಾಶ್ ರವರ ಮನವೊಲಿಸಿ ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವವು ನಡೆಯುವಂತೆ ಮಾಡಿದ್ದರು. ಆನೆಗುಂದಿ ಉತ್ಸವವನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಉತ್ತಮ ಜನಸೇವೆಯನ್ನು ಮಾಡಿ ಶ್ರೀರಂಗದೇವರಾಯಲುರವರು ಜನಮಾನಸದಲ್ಲಿ ಅಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಈಗ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರ ೮೭ನೇ ವರ್ಷದ ಜನ್ಮ ದಿನೋತ್ಸವವನ್ನು ನಾವು ಸದಾ ಆಚರಣೆ ಮಾಡುತ್ತಾ ಬರುತ್ತೇವೆ ಎಂದು ಅವರ ಕಟ್ಟಾ ಬೆಂಬಲಿಗರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಹೆಚ್.ಎಂ. ಸಿದ್ದರಾಮಸ್ವಾಮಿ ಮಾಧ್ಯಮ ದೊಂದಿಗೆ ಮಾತನಾಡಿ ಹೇಳಿದರು.

ಜೊತೆಗೆ ಶ್ರೀರಂಗದೇವರಾಯಲು ಅವರ ದೂರದೃಷ್ಟಿ ಮತ್ತು ಅವರ ಜನಸೇವೆ, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಬೆಳೆಯಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ವಿಷ್ಣುತೀರ್ಥ ಜೋಶಿ, ಗ್ರಾ.ಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ವಿರುಪಾಕ್ಷಯ್ಯ ಸ್ವಾಮಿ, ಕೆ. ತಿರುಕಪ್ಪ, ರವಿಕುಮಾರ ಮತ್ತು ಅವರ ಅಭಿಮಾನಿ ಬಳಗದ ಜೊತೆಗೆ ಆನೆಗುಂದಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಡುಗೆ ಮನೆಯೇ ವಿಜ್ಞಾನದ ಲ್ಯಾಬ್, ತಾಯಿಯೇ ವಿಜ್ಞಾನದ ಗುರು: ಹಿರಿಯ ವಿಜ್ಞಾನಿ ಮಹಾಂತಶಿವಯೋಗಿ

ಗಂಗಾವತಿ: ಮಕ್ಕಳಿಗೆ ಅಡುಗೆ ಮನೆಯೆ ವಿಜ್ಞಾನದ ಲ್ಯಾಬ್ ಇದ್ದಹಾಗೆ, ತಾಯಿಯೇ ವಿಜ್ಞಾನ ಗುರು ಎಂದು ಗಂಗಾವತಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿಗಳಾದ ಮಹಾಂತಶಿವಯೋಗಿಯವರು ಹೇಳಿದರು.

ಅವರು ಮಾರ್ಚ್-೩ ಸೋಮವಾರ ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಚರಿಸಲಾದ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಯ ಮಕ್ಕಳು ಮಾಡಿದ ಸ್ಪ್ರೇಯನ್ನು ಖಾಲಿ ಬೋರ್ಡ್‌ನಲ್ಲಿ ಸಿಂಪಡಿಸಿದಾಗ ವೆಲ್‌ಕಮ್ ಟು ಮಹಾನ್ ಸೈನ್ಸ್ ಡೇ ಎಂದು ಗೋಚರಿಸಿತು. ಮಹಾನ್ ಕಿಡ್ಸ್ ಶಾಲೆ ಮಕ್ಕಳು ಬಯೋಲಜಿ, ಫಿಸಿಕ್ಸ್, ಕೆಮಿಸ್ಟ್ರಿ, ಬಯೋಸೈನ್ಸ್ ಗಳ ಮಾಡೆಲ್‌ಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿ ಫಾರಿನ್ ಸಿಕ್ ಲ್ಯಾಬ್‌ಗಳಲ್ಲಿ ಫಿಂಗರ್ ಪ್ರಿಂಟ್ ಹೇಗೆ ತೆಗೆಯಲಾಗುತ್ತದೆ ಹಾಗೂ ಡಿಎನ್‌ಎ ಟೆಸ್ಟ್ ಮತ್ತು ಗ್ಯಾಲಕ್ಸಿ, ತ್ರಿಡಿ ಪ್ರಾಜೆಕ್ಟರ್‌ಗಳು, ವಿಆರ್, ರಕ್ತಪರೀಕ್ಷೆ ಮಾಡೆಲ್‌ಗಳು, ಸ್ಟಾರ್ಚ್‌ಗಳನ್ನು ತೆಗೆಯುವುದು ತಮ್ಮ ವಯಸ್ಸಿಗೆ ಮೀರಿದ ವಿಜ್ಞಾನ ಪ್ರದರ್ಶನಗಳನ್ನು ಮಕ್ಕಳು ಮಾಡಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಮಾತನಾಡಿ, ನಮ್ಮ ಶಾಲೆಯಲ್ಲಿ ವಿಜ್ಞಾನವನ್ನು ಪ್ರತಿನಿತ್ಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ಪಾಲಕರು ಪಾಲ್ಗೊಂಡು ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ತುಂಬಾ ಸಂತೋಷದಿಂದ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಮಾಡುತ್ತಿರುವುದರಿಂದ ಮಕ್ಕಳು ಸಂತೋಷದಿಂದ ಪ್ರತಿಯೊಂದು ವಿಷಯದಲ್ಲೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಹಾಗೂ ಕಲಿಯುತ್ತಿದ್ದಾರೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಈ ಸಂದರ್ಭಧಲ್ಲಿ ಶಿಕ್ಷಕರಾದ ಚಂಪರಾಣಿ, ತೇಜಸ್ವಿನಿ, ತಿಮ್ಮಪ್ಪ, ಸಿದ್ದೇಶ್, ಮುತ್ತ, ಕುಮುದಿನಿ, ವಿಜಯಲಕ್ಷ್ಮಿ, ಶಾಂತ, ಚಂದ್ರಶೇಖರ್ ಕುಂಬಾರ್, ಮಂಜುನಾಥ್ ತಳವಾರ್, ಮಂಜುನಾಥ್, ಪ್ರಸಾದ್, ಶ್ವೇತ, ತಿಮ್ಮಪ್ಪ, ಮಂಜುನಾಥ್, ಶ್ರೀದೇವಿ, ವೀರಯ್ಯ, ಅಸ್ಮ ಸೇರಿದಂತೆ ಇತರ ಶಿಕ್ಷಕರು ಇದ್ದರು.

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ದೇವರಾಜ ಬೂದುಗುಂಪ ನೇಮಕ

ಗಂಗಾವತಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ನರಸಿಂಹಲು ಚಿಂತಲಕುಂಟ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರುಗಳ ನೇತೃತ್ವದಲ್ಲಿ ಮಾರ್ಚ್-೩ ಸೋಮವಾರ ಗಂಗಾವತಿ ನಗರದ ಸರ್ಕೀಟ್ ಹೌಸ್‌ನಲ್ಲಿ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರನ್ನಾಗಿ ದೇವರಾಜ ಬೂದುಗುಂಪ ಅವರನ್ನು ನೇಮಕ ಮಾಡಲಾಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿಯವರು ನೇಮಕಾತಿ ಆದೇಶ ಪತ್ರ ನೀಡಿ, ಕಾರಟಗಿ ತಾಲ್ಲೂಕ ಕೇಂದ್ರದಾಧ್ಯಂತ ಪ್ರವಾಸ ಮಾಡಿ ಅಥವಾ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆ ಬಲಪಡಿಸಲು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಸಂಭ್ರಮ, ಪ್ರಭಾವಳಿ ಸಮರ್ಪಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಇದೇ ಮಾರ್ಚ್ 5 ಬುಧವಾರ ರಂದು ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಟಿ ರಾಮಕೃಷ್ಣ ಹಾಗೂ ಟ್ರಸ್ಟ್ ನ ಸದಸ್ಯರುಗಳಾದ ಎಸ್ ಸುರೇಶ್, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ಗುರುರಾಜ್, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್ಪ, ಡಾ|| ಎ.ಎಸ್.ಎನ್ ರಾಜು  ಹಾಗೂ ಕಿರಣ್ ಕುಮಾರ್ ಹೇಳಿದರು.

ಅವರು ಶನಿವಾರದಂದು ದೇವಸ್ಥಾನದ ವಾರ್ಷಿಕೋತ್ಸವ ಆಚರಣೆಗೆ ಸಂಬಂಧಿಸಿದಂತೆ ಭಕ್ತಾದಿಗಳಿಗೆ ಲೋಕ ಕಲ್ಯಾಣಾರ್ಥಕವಾಗಿ ಭೋಗ ಭಾಗ್ಯ, ಆರೋಗ್ಯ, ಐಶ್ವರ್ಯ ಪ್ರಾಪ್ತಿಗಾಗಿ ಹಾಗೂ ನವಗ್ರಹ ದೋಷ ಪರಿಹಾರಕ್ಕಾಗಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಸ್ಥಾಪಿತಗೊಂಡು 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಸಾಯಿಬಾಬಾ ಮಹಾರಾಜರಿಗೆ ಪ್ರಭಾವಳಿಯನ್ನು ಸಮರ್ಪಿಸಲಾಗುತ್ತದೆ ಎಂದು ತಿಳಿಸಿದ ಅವರು, ಅಂದು ಬೆಳಿಗ್ಗೆ ಕಾಕಡ ಆರತಿ. ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು. ಬೆಳಿಗ್ಗೆ 10:30ಕ್ಕೆ ತೀರ್ಥ ಪ್ರಸಾದ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಬೆಳ್ಳಿ ಅಥವಾ ಹಣದ ರೂಪದಲ್ಲಿ ಕಾಣಿಕೆಯನ್ನು ಶ್ರೀ ಸಾಯಿಬಾಬಾ ಅವರಿಗೆ ಸಲ್ಲಿಸುವುದರ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

 

ಮಾರ್ಚ್ 7ರಂದು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ್ ಮಹಾಸ್ವಾಮಿಗಳ ಆಗಮನ: ಕೃಷ್ಣ ಪದಕಿ

ಗಂಗಾವತಿ: ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶೃಂಗೇರಿಯ ಶ್ರೀ ಶಾರದಾ ಪೀಠ 36ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸತ್ವ ಪ್ರಯುಕ್ತ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಅಡಿಯಲ್ಲಿ ಶ್ರೀಮಠದ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರು ಮಾರ್ಚ್-7 ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀ ಶಂಕರ ಸೇವಾ ಸಮಿತಿ ಕೋಟೆ ಕೊಪ್ಪಳ ಅಧ್ಯಕ್ಷರಾದ ಕೃಷ್ಣ ಪದಕಿ. ವೆಂಕಟೇಶ್ ಪದಕಿ. ಶ್ರೀನಿವಾಸ್ ಹಾಗೂ ಡಿವಿ ಜೋಶಿ ಕೊಪ್ಪಳ ಅವರು ಹೇಳಿದರು.

ಅವರು ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೊಪ್ಪಳದ ಪದಕಿ ಟೌನ್ ಶಿಪ್ ಉದ್ದೇಶಿತ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಮಾರ್ಚ್-8 ರಂದು ಜರುಗಲಿದ್ದು, ಪ್ರಯುಕ್ತ ಮಾರ್ಚ್-7 ಶುಕ್ರವಾರ ಸಂಜೆ 6 ಗಂಟೆಗೆ ಪುರ ಪ್ರವೇಶ, ಪೂರ್ಣ ಕುಂಭ ಸ್ವಾಗತದ ಮೂಲಕ ಶುಭ ಯಾತ್ರೆ ಈಶ್ವರ ಪಾರ್ಕ್ ಹೊಸಪೇಟೆ ರಸ್ತೆಯಿಂದ ಕಿನ್ನಾಳ ರಸ್ತೆಯ ಮೂಲಕ ವಾಸವಿ ಮಂಗಲ ಭವನದವರಿಗೆ ಸಕಲ ವಾದ್ಯ ವೈಭವ ಹಾಗೂ ವಿವಿಧ ಬಜನಾ ತಂಡದ ಸದಸ್ಯರೊಂದಿಗೆ ಶ್ರದ್ಧೆ ಭಕ್ತಿಯಿಂದ ಸ್ವಾಗತಿಸಿಕೊಳ್ಳಲಾಗುವುದು.

ಸಂಜೆ 7:30 ಕ್ಕೆ ಶ್ರೀಗಳಿಗೆ ಧೂಳಿ ಪಾದಪೂಜೆ, ಫಲ ಸಮರ್ಪಣೆ,  ಭಿನ್ನ ವತ್ತಳೆ, ಅರ್ಪಣೆಯ ಜೊತೆಗೆ ಆಶೀರ್ವಚನ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದ ಅವರು ಮಾರ್ಚ್‌-8 ಶನಿವಾರ ಬೆಳಗ್ಗೆ ಶ್ರೀಮಠದ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ. 11:30 ಕ್ಕೆ ಶ್ರೀಗಳಿಗೆ ಭಕ್ತರಿಂದ ಪಾದುಕಾಪೂಜೆ, ವಸ್ತ್ರ ಸಮರ್ಪಣೆ, ದೀಕ್ಷಾ ವಂದನೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಶ್ರೀಗಳಿಂದ ಪರ ಮಂತ್ರಾಕ್ಷತೆ ಹಾಗೂ ಮಹಾಪ್ರಸಾದದೊಂದಿಗೆ ಸಂಪನ್ನಗೊಳ್ಳುವುದು ಎಂದು ತಿಳಿಸಿದ ಅವರು ಈ ಒಂದು ಧಾರ್ಮಿಕ. ಆಚರಣೆಗೆ ಗಂಗಾವತಿಯ ಶಂಕರ ಮಠದ ಹಾಗೂ ಆಸ್ತಿಕ ಬಂಧುಗಳು ಭಾಗವಿಸುವಂತೆ ಮನವಿ ಮಾಡಿದರು.

ಇದಕ್ಕೆ ಸಂಬಂಧಿಸಿದಂತೆ ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ಅನುಪಸ್ಥಿತಿಯಲ್ಲಿ ರಾಘವೇಂದ್ರ ಅಳವಂಡಿಕರ್ ಮಾತನಾಡಿ, ಕೊಪ್ಪಳದಲ್ಲಿ ಶಂಕರಮಠ ನಿರ್ಮಾಣಗೊಳ್ಳುತ್ತಿರುವುದು ಅತ್ಯಂತ ಸಂತಸದಾಯಕವಾಗಿದೆ. ತಮ್ಮ ಮೇಲಿನ ಎರಡು ದಿನದ ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸುವುದರ ಮೂಲಕ ತುಂಬು ಹೃದಯದ ಸಹಕಾರವನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದರು.