ಗಂಗಾವತಿ ತಾಲೂಕಿನ ಆಚಾರನರಸಾಪೂರದಲ್ಲಿ ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬ ಅದ್ದೂರಿ ಆಚರಣೆ

ಗಂಗಾವತಿ: ಇತ್ತೀಚೆಗೆ ಫೆಬ್ರವರಿ-೨೧ ರಂದು ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬವನ್ನು ತಾಲೂಕಿನ ಆಚಾರ ನರಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು ಎಂದು ಮರಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಕೆ.ಎಂ ರವರು ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಈ ಕಲಿಕಾ ಹಬ್ಬದಲ್ಲಿ ಶಿಕ್ಷಣ ಪ್ರೇಮಿ ನಾಗರಾಜ ಬರಗೂರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಟಗಿ ವಲಯದ ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಪಿ.ಸಿ ಇವರು ದೀಪ ಬೆಳಗಿಸುವುದರೊಂದಿಗೆ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ನಾಗರಾಜ್ ಬರಗೂರು ಮಾತನಾಡಿ ಶಾಲೆಯ ಶ್ರೇಯೋಭಿವೃದ್ಧಿಗಾಗಿ ನಾವು ಸದಾ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮರಳಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಸುಮಂಗಳ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹನುಮಂತಪ್ಪ, ಚಂದ್ರೇಗೌಡ, ಚನ್ನಮಲ್ಲಿಕಾರ್ಜುನ ಮಠ ಟ್ರಸ್ಟ್ ಕಮಿಟಿಯ ಸದಸ್ಯರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ಗಾದಿಲಿಂಗಪ್ಪ, ಲಿಂಗನಗೌಡ ಎಂ.ಪಿ., ದ್ಯಾಮಣ್ಣ ಊರಿನ ಗಣ್ಯರು, ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ಲಸ್ಟರ್‌ನ ಎಲ್ಲಾ ಶಾಲೆಯ ಮುಖ್ಯ ಗುರುಗಳು ಹಾಗೂ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗಂಗಾವತಿಯ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ವಿನೂತನ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ

ಗಂಗಾವತಿ: ಫೆಬ್ರವರಿ-೨೮ ಶುಕ್ರವಾರದಂದು ಜಯನಗರದಲ್ಲಿರುವ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ ಕಾರ್ಯಕ್ರಮ ಎಂದರೆ ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಾಗುತ್ತಾರೆ ಮತ್ತು ಅವರು ತಮ್ಮ ಆಯ್ಕೆಯ ವಿಷಯದ ಬಗ್ಗೆ ಒಂದು ಪರಿಕಲ್ಪನೆಯನ್ನು ವಿವರಿಸುತ್ತಾರೆ ಅಥವಾ ಸಣ್ಣ ಪ್ರಾತ್ಯಕ್ಷಿಕೆಯನ್ನು ನೀಡುತ್ತಾರೆ.

ಭಾಗವಹಿಸುವಾಗ ವಿದ್ಯಾರ್ಥಿಗಳು ಒಂದು ಪರಿಕಲ್ಪನೆಯನ್ನು ಉತ್ತಮವಾಗಿ ಕಲಿಯಲು ಪ್ರೇರೇಪಿಸಲ್ಪಡುತ್ತಾರೆ. ಪ್ರೇಕ್ಷಕರ ಮುಂದೆ ನಿರಾಳವಾಗಿರುವುದು ಕಷ್ಟ. ಅದಕ್ಕಾಗಿಯೇ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಅವರಿಗೆ ಸವಾಲು ಹಾಕುವ ಮೂಲಕ ಅವರ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಸಾಮಾನ್ಯ ಪಠ್ಯಪುಸ್ತಕಗಳನ್ನು ಮೀರಿ ಯೋಚಿಸಲು ಪ್ರೋತ್ಸಾಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಆರಿಸಿಕೊಂಡು ಅದನ್ನು ತಮಗೆ ಇಷ್ಟವಾದ ಸೃಜನಶೀಲ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ.

ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಪೋಷಕರಾಗಿ ಆಗಮಿಸಿದ ಡಾ|| ಹೇಮಲತಾ ಹಾಗೂ ಡಾ|| ನಾಗರಾಜ್ ಅವರು ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಕಾರ್ಯದರ್ಶಿಗಳಾದ ರಾಜಕಿರಣ್ ಇಂಗಳಹಳ್ಳಿ ಹಾಗೂ ಶ್ರೀಮತಿ ಐಶ್ವರ್ಯ ರಾಜಕಿರಣ್ ಇಂಗಳಹಳ್ಳಿ ಹಾಗೂ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅರುಣದೇವಿ ಮೇಡಂ ಅವರು ಕೂಡ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮುಖಾಂತರ ಪ್ರೋತ್ಸಾಹಿಸಿದರು.

ಹಾಗೆಯೇ ವಿದ್ಯಾರ್ಥಿಗಳ ನೇತೃತ್ವ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಮುದಾಯ ಸಹಾಯಕರು, ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮಗೆ ಕೊಟ್ಟಿರುವಂತಹ ವಿಷಯಗಳ ಬಗ್ಗೆ ವಿವರಿಸಿ ಪೋಷಕರ ಗಮನ ಸೆಳೆದರು.

ತದನಂತರ ಎರಡನೆಯ ತರಗತಿಯ ಮಕ್ಕಳು ಭಾರತದ ಏಳು ಅದ್ಭುತಗಳ ಬಗ್ಗೆ ವಿವರಿಸಿದರು. ಅದರಲ್ಲಿ ತಾಜ್‌ಮಹಲ್ ಹಾಗೂ ಹಂಪಿಯ ಚಿತ್ರಗಳು ತುಂಬಾ ಆಕರ್ಷಣೀಯವಾಗಿ ಗಮನಿಸಳೆದವು ಹಾಗೂ ಸಂಚಾರ ಸಂಕೇತಗಳು, ಪ್ರಾಣಿಗಳ ಆಶ್ರಯ, ಗ್ರಾಮೀಣ ಮತ್ತು ನಗರಗಳು ಹಾಗೂ ವಿಧಾನಸೌಧದ ಮಾದರಿಗಳು ಕೇಂದ್ರಬಿಂದುಗಳಾಗಿ ನೋಡುಗರ ಗಮನಸೆಳೆದವು.
ಹಾಗೆ ಮಕ್ಕಳು ಕೇವಲ ಒಂದು ವಿಷಯಕ್ಕೆ ಸೀಮಿತವಾಗದೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಕಂಪ್ಯೂಟರ್, ವಿಷಯಗಳಲ್ಲಿ ತೊಡಗಿಸಿಕೊಂಡು ತಮ್ಮ ಚಾಕಚಾತುರ್ಯವನ್ನು ಹೊರಹಾಕಿದರು.

ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಪೋಷಕರು ಮಕ್ಕಳು ತಯಾರಿಸಿದ ಎಲ್ಲಾ ಮಾದರಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ಚ್-೨ ರಂದು ಸದ್ಧರ್ಮ ಶ್ರೀಗುರುಕುಲದ ದಶಮಾನೋತ್ಸವದಲ್ಲಿ ಆರು ಜನ ಸಾಧಕರಿಗೆ “ಸದ್ಧರ್ಮ ಶ್ರೀ ಪ್ರಶಸ್ತಿ” ಘೋಷಣೆ

ಗಂಗಾವತಿ: ತಾಲೂಕಿನ ಗಡ್ಡಿ ಗ್ರಾಮದ ಸದ್ಧರ್ಮ ಶ್ರೀ ಗುರುಕುಲದ ದಶಮಾನೋತ್ಸವ ಇದೇ ಮಾರ್ಚ್-೨ ಭಾನುವಾರ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಜಾತ ಅಪ್ಪಾಜಿಯವರ ಪವಿತ್ರ ಪುಣ್ಯಾಶ್ರಮದಡಿಯಲ್ಲಿ ಸದ್ಧರ್ಮ ಶ್ರೀ ಗುರುಕುಲದಿಂದ ನೀಡಲಾಗುವ ವಾರ್ಷಿಕ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಜನ ಸಾಧಕರಿಗೆ ಘೋಷಿಸಲಾಗಿದ್ದು, ಪ್ರಶಸ್ತಿಯನ್ನು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಪ್ರಧಾನ ಮಾಡಲಿದ್ದಾರೆ ಎಂದು ಶ್ರೀಮಠದ ಪರಮಪೂಜ್ಯ ಸಂಗಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತಿಹಾಸ ಹಾಗೂ ಗಂಗಾವತಿ ಪರಿಸರದ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಗಂಗಾವತಿ ಕಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಕೋಲ್ಕಾರ, ಗಂಗಾವತಿಯ ಸಾಹಿತಿ, ಸಂಶೋಧಕ ಡಾ.ಎನ್.ಡಿ. ತಿಪ್ಪೇಸ್ವಾಮಿ, ರಂಗಭೂಮಿ ಹಾಗೂ ಪತ್ರಿಕಾರಂಗದ ಸಾಧಕ ನಾಗರಾಜ ಇಂಗಳಗಿ, ಚಿತ್ರಕಲಾ ಕ್ಷೇತ್ರದ ಅನನ್ಯ ಸಾಧಕ ರಾಘವೇಂದ್ರ ಬಯ್ಯಾಪುರ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ಡಾ.ಬಸವರಾಜ ಗವಿಮಠ, ಸಮಾಜ ಸೇವಕ ಟಿ. ಆಂಜನೇಯ ಅವರಿಗೆ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ಮಠಾಧೀಶರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಸದಾನಂದ ಶಿವಯೋಗಿ ಮಠದ ಪರಮಪೂಜ್ಯ ನಾಗಭೂಷಣ ದೇವರು ಸಾನಿಧ್ಯ ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ವಹಿಸಲಿದ್ದು, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕೊಪ್ಪಳ ಎಸ್.ಎಫ್.ಎಸ್. ಶಾಲೆಯ ಪ್ರಾಚಾರ್ಯರಾದ ಪೂಜ್ಯ ಶ್ರೀ ಜಬಲಮಲೈ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಾಥ್, ಡಿ.ವೈ.ಎಸ್.ಪಿ. ಸಿದ್ಧಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ವೆಂಕಟಗಿರಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮ ಪರಸಪ್ಪ ಕಂದಕೂರು, ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ, ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರ್ಜುನ ನಾಯಕ, ವೆಂಕಟಗಿರಿ ಕ್ಲಸ್ಟರ್ ಸಿಆರ್.ಪಿ ಮಲ್ಲಿಕಾರ್ಜುನ, ಬಿಜೆಪಿ ಮುಖಂಡ ಮನೋಹರಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ದಾಸನಾಳ ಗ್ರಾಮದ ಕಾಟಮೇಶ್ವರ ದೇವರ ೧೬ನೇ ವರ್ಷದ ಜಾತ್ರಾ ಮಹೋತ್ಸವ, ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಕಾಟಮೇಶ್ವರ ದೇವರ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥರವರು ಯಾವುದೇ ಸಮುದಾಯದ ಅಭಿವೃದ್ಧಿಗೆ, ಪ್ರಗತಿಗೆ, ಅವರ ಕುಲದೇವರ ಅನುಗ್ರಹ ತುಂಬಾ ಅವಶ್ಯವಾಗಿದೆ. ಅದರಂತೆ ಕುಲ ಗುರುಗಳ ಮಾರ್ಗದರ್ಶನ, ಅವರ ಆಶೀರ್ವಾದವಿದ್ದಲ್ಲಿ ಸಮಾಜವು ಪ್ರಗತಿಯ ಕಡೆಗೆ ಸಾಗಲು ಸಾಧ್ಯ ಎಂದರು.

ಸಮಾಜದ ಎಲ್ಲ ಬಂಧುಗಳು ಎಲ್ಲಾ ಸಮಾಜ ಬಾಂಧವರೊಂದಿಗೆ ಸಾಮರಸ್ಯದಿಂದ ಬದುಕು ನಡೆಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಗಂಗಾವತಿಯ ವಕೀಲರು ಮತ್ತು ನಗರಸಭೆಯ ಕಾನೂನು ಸಲಹೆಗಾರರಾದ ನಾಗರಾಜ್ ಎಸ್. ಗುತ್ತೇದಾರ್ ರವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸಮುದಾಯದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಗುರು ಪರಂಪರೆಯನ್ನು, ದೈವತ್ವವನ್ನು ನಂಬಿ ನಡೆದಾಗ ಜೀವನ ಸಮೃದ್ಧವಾಗಲು ಸಾಧ್ಯ. ಸಮುದಾಯದ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಕಡೆಗೆ ಗಮನಹರಿಸಬೇಕು ಎಂದರು.

೧೪ನೇ ವರ್ಷದ ತುಲಾಭಾರ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿಗಳಾದ ಶ್ರೀ ರೇಣುಕಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ನಾರಾಯಣ ಗುರುಗಳ ಚಿಂತನೆ ಪರಂಪರೆಯನ್ನು ಸಮಾಜದ ಬಂಧುಗಳು ಮನವರಿಕೆ ಮಾಡಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಸಾಗಬೇಕು ಹಾಗೂ ಮಕ್ಕಳಿಗೆ ಮೌಲ್ಯಾಧಾರಿತ ಜೀವನವನ್ನು ರೂಪಿಸುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು.

ಈ ವರ್ಷದ ಕಾರ್ಯಕ್ರಮದಲ್ಲಿ ಹಲವು ಭಕ್ತಾದಿಗಳು ಶ್ರೀ ನಾರಾಯಣ ಗುರು ಮಾಲೆಯನ್ನು ಧರಿಸಿದ್ದು ವಿಶೇಷವಾಗಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾಸನಾಳ ಗ್ರಾಮದ ಬಸವಣ್ಣಯ್ಯ ಶಾಸ್ತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಘದ ಕಾರಟಗಿ ತಾಲೂಕ ಅಧ್ಯಕ್ಷರಾದ ಈ.ವಿರೇಶ ಮರ್ಲಾನಹಳ್ಳಿ, ಕನಕಗಿರಿ ತಾಲೂಕ ಅಧ್ಯಕ್ಷರಾದ ಈ.ನಾಗೇಶ ಚಿಕ್ಕಡಂಕನಕಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಈ.ಶ್ರೀಕಾಂತ್ ಮರ್ಲನಹಳ್ಳಿ, ಶ್ರೀಹರಿಬಾಬು ಕಾರಟಗಿ. ಶ್ರೀನಾಥ ಕಾರಟಗಿ. ಶರಣಪ್ಪ ಮೈಲಾಪುರ್, ರಾಘವೇಂದ್ರ ಜಂತಕಲ್, ಶೇಖರಪ್ಪ ಚಳ್ಳೂರು, ಪ್ರಭು ಬಸಾಪಟ್ಟಣ, ರಂಗಪ್ಪ ಆರಾಳ, ಹನುಮಂತರಾಯ ವಡ್ಡರಹಟ್ಟಿ, ಭುವನೇಶಪ್ಪ ಉಡುಮಕಲ್, ತುಕಾರಾಮಪ್ಪ ಕಲಿಕೆರಿ, ಶರಣಪ್ಪ ಉಳೇನೂರು, ರಾಜಶೇಖರ್ ವೆಂಕಟಗಿರಿ, ಮಾರುತೇಶ ಊರಮುಂದಲರ, ಈ.ಮಾರ್ಕಂಡಯ್ಯ, ಪ್ರಕಾಶ್, ಬಸವರಾಜ್, ನಿರುಪಾದಿ, ರಾಜಕುಮಾರ, ರಾಜಶೇಖರ್, ವಿರುಪಣ್ಣ ಕುಣಿಕೇರಿ ಹಾಗೂ ವಿವಿಧ ತಾಲೂಕು ಜಿಲ್ಲೆಗಳಿಂದ ಸಾಕಷ್ಟು ಜನ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು.

ಹಂಪಿ ಉತ್ಸವದ ‘ಧ್ವನಿ ಮತ್ತು ಬೆಳಕು’ ಪ್ರದರ್ಶನಕ್ಕೆ ಗಂಗಾವತಿಯ ಎನ್.ಆರ್.ರಾಯಬಾಗಿ ಆಯ್ಕೆ

ಗಂಗಾವತಿ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ. ೨೮ ಶುಕ್ರವಾರ ಆರಂಭಗೊಳ್ಳುವ ಹಂಪಿ ಉತ್ಸವದ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ನಗರದ ಕಲಾವಿದ ಜೂನಿಯರ್ ರಾಜಕುಮಾರ ಎನ್.ಆರ್. ರಾಯಬಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ರ‍್ಕಾರದ ಮಾಹಿತಿ, ಪ್ರಸಾರ ಹಾಗೂ ಸಂಪರ್ಕ ಕೇಂದ್ರ (ಗಾಯನ ಮತ್ತು ನಾಟಕ ವಿಭಾಗ), ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತ ನೇತೃತ್ವದಲ್ಲಿ ಧ್ವನಿ ಮತ್ತು ಬೆಳಕು ಪ್ರರ‍್ಶನ ಫೆ.೨೮ ರಿಂದ ಆರಂಭಗೊಂಡು ಮಾ.೭ ರವರಗೆ ನಡೆಯಲಿದೆ. ಕಲಾವಿದ ನಾರಾಯಣ ರಾಯಬಾಗಿಯು ಸತತ ೧೬ನೇ ವರ್ಷದಲ್ಲಿ ಧ್ವನಿ ಬೆಳಕು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಈ ಮೊದಲು ‘ಕರ್ನಾಟಕ ವೈಭವ’, ‘ಶ್ರೀ ಕೃಷ್ಣದೇವರಾಯ’ ವಿಜಯನಗರ ವೈಭವ’ ಧ್ವನಿ ಬೆಳಕು ಪ್ರದರ್ಶನಗಳಲ್ಲಿ ಅಶೋಕ ಚಕ್ರವರ್ತಿ, ಶಂಕರಾಚಾರ್ಯರ, ಭರತ ಚಕ್ರವರ್ತಿ, ತಿಮ್ಮರಸ, ಅಪ್ಪಾಜಿ, ಪೊರ್ಚುಗೀಸ್ ಅಧಿಕಾರಿ, ಸಾಮಂತ ರಾಜ್, ಕನಕದಾಸ ಮತ್ತಿತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿಜಯನಗರ ವೈಭವದಲ್ಲಿ ಪುರಂದರ ದಾಸ, ಅಬ್ದುಲ್ ರಜಾಕ್, ಬ್ರಿಟಿಷ್ ಅಧಿಕಾರಿ ನಿಕೋಲಸ್ ಕೌಂಟಿ, ಗಜಪತಿ ರಾಜನ ಮಂತ್ರಿ, ಡೋಯಿಂಗ್ ಪಾಯಸ ಇನ್ನಿತರ ಪಾತ್ರಗಳಲ್ಲಿ ಅಭಿನಯಿಸುವರು.

ಮಹಾಶಿವರಾತ್ರಿ ಪ್ರಯುಕ್ತ ಗಂಗಾವತಿಯ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ

ಗಂಗಾವತಿ: ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು ಎಂದು ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದರು.

ಅಂದು ಸಂಜೆ ೬ಕ್ಕೆ ಶಿವಸ್ವರೂಪರಾದ ಶ್ರೀಗುರು ಮೌನೇಶ್ವರರಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲಿಯವರು ಚಾಲನೆ ನೀಡಿದರು.

ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸ್ಥಳೀಯ ಸಂಗೀತ ಕಲಾವಿದರಾದ ಕನಕಪ್ಪ ಚಿತ್ರಗಾರ, ಗಂಗಾಧರಯ್ಯ, ವೆಂಕಟೇಶ ದಾಸನಾಳ, ಕಾಶೀಂ ಅಲಿ ಮುದ್ದಾಬಳ್ಳಿ, ಶಿವಪ್ಪ ಹುಳ್ಳಿ, ನರಸಿಂದ ದರೋಜಿ, ಮಲ್ಲೇಶಪ್ಪ, ಸಮಾಜದ ಪ್ರತಿನಿಧಿಗಳಾದ ಸಣ್ಣೆಪ್ಪ ಕಮ್ಮಾರ, ನಾಗಪ್ಪ ಬಡಿಗೇರ ಸೇರಿದಂತೆ ಮುಂತಾದ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಸಿ.ವಿ ಸರ್ವಜ್ಞಾಚಾರ್, ಪ್ರಮುಖರಾದ ಹನುಮೇಶ ಬಡಿಗೇರ, ಬಸವರಾಜ ಬಡಿಗೇರ, ಛಾಯಾ ಭಾಸ್ಕರ, ಬಸವರಾಜ ವಣಗೇರಿ, ಶ್ರೀನಿವಾಸ ಪತ್ತಾರ, ದೇವೆಂದ್ರ ಅರ್ಕಸಾಲಿ, ಗುರುರಾಜ ಬಡಿಗೇರ, ಮಹಿಳಾ ಮಂಡಳಿಯವರು, ಯುವಮಿತ್ರರು ಪಾಲ್ಗೊಂಡು ಅಚ್ಚುಕಟ್ಟಾಗಿ ನಡೆಸಿದರು.

ಮಾರ್ಚ್-05‌ ರಂದು ಗಂಗಾವತಿಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವ

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವವು ಮಾರ್ಚ್-೦೫ ಬುಧವಾರದಂದು ನಡೆಯಲಿದೆ ಎಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ರಾಮಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೫ನೇ ವಾರ್ಷಿಕೋತ್ಸವದ ನಿಮಿತ್ಯವಾಗಿ ಅಂದು ಭಕ್ತಾದಿಗಳಿಗೆ ಲೋಕಕಲ್ಯಾಣಾರ್ಥವಾಗಿ ಭಕ್ತ ಜನರಿಗೆ ಭೋಗ ಭಾಗ್ಯ ಆಯುರಾರೋಗ್ಯ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ನವಗ್ರಹ ಪರಿಹಾರಕ್ಕಾಗಿ ಅನೇಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಂದು ಬೆಳಿಗ್ಗೆ ೫:೧೫ಕ್ಕೆ ಕಾಕಡ ಆರತಿ, ನಂತರ ಶ್ರೀಸಾಯಿಬಾಬಾ ಅವರಿಗೆ ಪಂಚಾಮೃತ ಅಭಿಷೇಕ ಪೂಜಾದಿಗಳು ನಂತರ ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮತ್ತೆ ಮಧ್ಯಾಹ್ನದ ಆರತಿ ಹಾಗೂ ಸಂಜೆ ಸಂಧ್ಯಾ ಆರತಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಕಾರಣ ಎಲ್ಲಾ ಭಕ್ತಾದಿಗಳು ಆಗಮಿಸಿ, ಶ್ರೀ ಬಾಬಾರವರ ದರ್ಶನ ಪಡೆದು ತನು, ಮನ, ಧನದಿಂದ ಸೇವೆ ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿ, ಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಸಮಿತಿಯ ಆಡಳಿತ ಮಂಡಳಿ ಮನವಿ ಮಾಡಿದೆ.

ಮಹಾಶಿವರಾತ್ರಿ ಅಂಗವಾಗಿ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪ ನಾಮಫಲಕಕ್ಕೆ ಪೂಜಾ ಕಾರ್ಯಕ್ರಮ

ಗಂಗಾವತಿ: ನಗರದ ೪ನೇ ವಾರ್ಡ್ ಸಿದ್ದಿಕೆರೆಯಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಬೇಡರ ಕಣ್ಣಪ್ಪ ಭಾವಚಿತ್ರವಿರುವ ನಾಮಫಲಕಕ್ಕೆ ಗಂಗಾವತಿ ತಾಲೂಕ ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘದ ಅಧ್ಯಕ್ಷರಾದ ಜೆ. ಸೋಮಪ್ಪ ಕವಿಗಳು ಪ್ರಕಟಣೆ ಮೂಲಕ ತಿಳಿಸಿದರು.


ಅವರು ಮಹಾಶಿವರಾತ್ರಿಯ ದಿನ ಸಂಜೆ ೬ ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬೇಡರ ಕಣ್ಣಪ್ಪನು ಮಹಾಶಿವನ ಭಕ್ತನಾಗಿ ತನ್ನ ಕಣ್ಣುಗಳನ್ನು ದಾನ ನೀಡಿದ ದಿನವೇ ಮಹಾಶಿವರಾತ್ರಿಯಾಗಿದ್ದು, ಈ ಮಹಾಶಿವರಾತ್ರಿ ಅಂಗವಾಗಿ ಶಿವನ ಭಕ್ತ ಬೇಡರ ಕಣ್ಣಪ್ಪನಿಗೆ ನಮ್ಮ ಸಂಘದಿಂದ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಚಿಕ್ಕವಂಕಲಕುಂಟಾ ದೇವಸ್ಥಾನದ ಫಕೀರೇಶ್ವರ ತಾತನವರು, ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಸಿದ್ದಿಕೆರೆ ಮಾರೆಮ್ಮ ದೇವಸ್ಥಾನದ ಅರ್ಚಕರಾದ ಪ್ರಭಾಕರ, ಸಂಘದ ಗೌರವಾಧ್ಯಕ್ಷ ನಾಗಭೂಷಣ ನಾಯಕ ರಾಂಪುರ, ಉಪಾಧ್ಯಕ್ಷರಾದ ಸಿಂಗಾಪುರ ಭೀಮರಾಯ ನಾಯಕ, ಉಮೇಶಪ್ಪ ರಾಂಪುರ, ಕಾರ್ಯದರ್ಶಿಯಾದ ಟಿ. ಅನೀಲಕುಮಾರ, ಮುಖಂಡರಾದ ಸೋಮಲಾಪುರ ಬಸಪ್ಪ ನಾಯಕ, ಸೋಮಲಾಪುರ ಶೇಖರ ನಾಯಕ, ಕೋಲ್ಕಾರ ನಾಗರಾಜ ನಾಯಕ, ಮಣ್ಣೂರು ನಾಗಪ್ಪ ನಾಯಕ, ಗಿರೀಶ ನಾಯಕ ಬಸವನದುರ್ಗ, ಟಿ. ಬಸವರಾಜ ಮಲ್ಲಾಪುರ, ಸಿಂಗಾಪುರ ಶ್ರೀನಿವಾಸ ನಾಯಕ ಸೇರಿದಂತೆ ಸಿದ್ದಿಕೆರೆ, ಸಂಗಾಪುರ, ರಾಂಪುರ ಗ್ರಾಮದ ಗುರುಹಿರಿಯರು, ಸರ್ವ ಸಮಾಜಗಳ ಮುಖಂಡರು, ಪ್ರಮುಖರು ಪಾಲ್ಗೊಂಡಿದ್ದರು.

ಶ್ರದ್ಧೆ ಭಕ್ತಿಯಿಂದ ಜರುಗಿದ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ.

ಗಂಗಾವತಿ: ಸಮೀಪದ ಶ್ರೀ ರಾಮನಗರದ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಗೋವಿಂದಾಂಬ ಸಮಿತ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ. ಶ್ರೀಕಾಂತ್ ನೇತೃತ್ವದಲ್ಲಿ. ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವಿಶ್ವಕರ್ಮ ಸಮಾಜದ ದೇವಸ್ಥಾನ ಸಮಿತಿಯ ಯುವ ಮುಖಂಡ ರಾಮ ಬ್ರಹ್ಮ ದಂಪತಿಗಳಿಂದ ಮಹಾಸಂಕಲ್ಪ ಕಲ್ಯಾಣೋತ್ಸವ ಹಾಗೂ ವೆಂಕಟ ಸೋಮೇಶ್ವರ ದಂಪತಿಗಳು ನೇತೃತ್ವವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಮ ಬ್ರಹ್ಮ ಮಾತನಾಡಿ ಕಾಲಜ್ಞಾನಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಮಹಿಮೆ ಅಪಾರವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಂತ ಅವರ ಭವಿಷ್ಯತ್ಕಾಲದ ಕಾಲಜ್ಞಾನದ ಹೇಳಿಕೆಗಳು ಈಗಾಗಲೇ ಶೇಕಡ 80 ರಷ್ಟು ಕಲಿಯುಗದಲ್ಲಿ ಕಾಣಬಹುದಾಗಿದೆ. ಶೀಘ್ರದಲ್ಲಿ ಮತ್ತೊಂದು ಅವತಾರದಲ್ಲಿ ಜನ್ಮ ತಾಳುವುದಾಗಿ ಹೇಳಿದ ಅವರು, ತಮ್ಮನ್ನು ನಂಬಿದ ಭಕ್ತರಿಗೆ ಸದಾಕಾಲ ರಕ್ಷಿಸುವುದಾಗಿ. ತಿಳಿಸಿದ್ದಾರೆ ಎಂದು ಹೇಳಿದರು.

ಅರ್ಚಕ ಶ್ರೀಕಾಂತ್ ಮಾತನಾಡಿ ಕಲಿಯುಗದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಾಲಜ್ಞಾನ ಅತ್ಯಂತ ಮಹತ್ವವಾಗಿದೆ. ಅವರ ದ್ವಾದಶ ಮಂತ್ರದಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ಹೇಳಿದರು.

ಬಳಿಕ ಮಹಾಮಂಗಳಾರತಿ ಮಹಾಪ್ರಸಾದ ದೊಂದಿಗೆ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸೂರಿ ಬಾಬು, ಸತ್ಯನಾರಾಯಣ, ರಾಮಕೃಷ್ಣ, ಪರಬ್ರಹ್ಮ ಸೇರಿದಂತೆ ಗಂಗಾವತಿ ತಾಲೂಕ ಸೇರಿದಂತೆ ಹೊಸಪೇಟೆ, ಸಿಂಧನೂರು ಭಾಗದಿಂದ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮ

ಗಂಗಾವತಿ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಗತಿಸಿದ 40 ವರ್ಷದ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಅದರಂತೆ ಇಂದು ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಲೆಯ 350ಕ್ಕೂ ಹೆಚ್ಚು ಪಾಲಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳೊಂದಿಗೆ ತಮ್ಮ ಅಮೃತದ ಕೈಗಳಿಂದ ತುತ್ತು ಮಾಡಿ ಮಕ್ಕಳಿಗೆ ಊಟ ಮಾಡಿಸಿದರು. ಕಾರ್ಯಕ್ರಮವು ಪಾಲಕರಿಂದಲೇ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಗೌಡ ಪಾಟೀಲ್ ವಹಿಸಿ ಮಾತನಾಡಿದರು. ತಾಯಿಯು ದೇವರ ಸಮಾನರು ಬಾಲ್ಯದ ಮಗುವಿಗೆ ತೆಂಗಿನ ಎಳೆನೀರು ತೆಕ್ಕೊಂಡು ಬಂಗಾರದ ಮೋರೆ ತೊಳೆದವರು. ಇಂದಿನ ದಿನಮಾನಗಳಲ್ಲಿ ಅಂತಹ ಸಂಸ್ಕೃತಿಯನ್ನು ಬೆಳೆಸಿದರೆ ನಮ್ಮ ಸಮಾಜವನ್ನು ಎತ್ತರಕ್ಕೆ ಕಟ್ಟಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಾಲಪ್ಪ ಎಂ ಹಾಗೂ ಕಂಪ್ಯೂಟರ್ ಶಿಕ್ಷಕರಾದ ಮಂಜುನಾಥ್ ಎಂ. ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಶ್ರೀಮತಿ ಶಿವಗೀತಾ ಸಹ ಶಿಕ್ಷಕಿ ನುಡಿಯುತ್ತಾ ಮಕ್ಕಳ ಪ್ರೀತಿ ಹಾಗೂ ಹಾರೈಕೆಯ ಜೊತೆಗೆ ಕೈ ತುತ್ತಿನ ಮೌಲ್ಯವನ್ನು ಪಾಲಕರಿಗೆ ಮಕ್ಕಳಿಗೆ ಹೃದಯಕ್ಕೆ ಮುಟ್ಟುವಂತೆ ಹೇಳಿಕೊಟ್ಟರು. ಶಾಲೆಯ ಅನೇಕ ಮಕ್ಕಳು ತಮ್ಮ ತಾಯಂದಿರ ಬಗ್ಗೆ ಗೌರವದ ಹಾಗೂ ಮಮತೆಯ ಹಿರಿದಾದ ಮಾತುಗಳನ್ನು ನುಡಿದರು. ತಾಯಿಯ ಅಮೃತದ ಕೈತುತ್ತನ್ನು ಊಟ ಮಾಡಿ ಮಕ್ಕಳು ಹಿರಿಹಿರಿ ಹಿಗ್ಗಿದರು. ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ಮತ್ತೂ ಅಕ್ಷರ ದಾಸೋಹ ಸಿಬ್ಬಂದಿಯವರು ಭಾಗಿಯಾಗಿ ಪಾಲಕರಿಗೆ ಊಟದ ವ್ಯವಸ್ಥೆ ಕೈಗೊಂಡರು. ಎಲ್ಲ ಪಾಲಕರು ಅಭಾರಿಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತ, ಶ್ರೀಮತಿ ಸುಧಾಮಣಿ, ಶ್ರೀಮತಿ ನಾಗರತ್ನ, ಶ್ರೀಮತಿ ಲಕ್ಷ್ಮಿ ಹಾಗೂ ದೈಹಿಕ ಶಿಕ್ಷಕ ವಿರುಪಾಕ್ಷ, ಚಂದ್ರಕಲಾ, ಕುಮಾರ, ರೇಣುಕಾ ಹೆಚ್, ಶ್ರೀಮತಿ ಜುಲೇಖ, ಕು. ಶ್ರೀದೇವಿ ಎಲ್ಲರೂ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಕುಮಾರಿ ರೇಣುಕ ಶಿಕ್ಷಕಿಯರು ಮಾಡಿದರೆ, ಶ್ರೀಮತಿ ಚಂದ್ರಕಲಾ ವಂದಿಸಿದರು.