ನವೆಂಬರ್-೮ ರಂದು ಗಂಗಾವತಿಯಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ

ಗಂಗಾವತಿ: ನಗರದ ಶ್ರೀ ಮಾತಾ ಕರೋಕೆ ಸ್ಟುಡಿಯೋ ಹಾಗೂ ಸಪ್ತಸ್ವರ ಸಾಂಸ್ಕೃತಿಕ ಕಲಾ ಬಳಗ ಇವರಿಂದ ನವೆಂಬರ್-೮ ಶನಿವಾರ ಸಂಜೆ ೫:೩೦ಕ್ಕೆ ಗಂಗಾವತಿಯ ಕೋರ್ಟ್ ಮುಂಭಾಗದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ನಗರಸಭೆ ಸದಸ್ಯರಾದ ಆರ್. ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯೋಧ್ಯಮಿಗಳಾದ ಶಿವಪ್ಪ ಗಾಳಿ ವಹಿಸಲಿದ್ದು, ಡಿ.ವೈ.ಎಸ್.ಪಿ ಆದ ಜಯಪ್ಪ ಎಸ್. ನ್ಯಾಮಗೌಡ್ರು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತರು, ನಗರಸಭೆ ಸದಸ್ಯರುಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಸಂಗೀತಾಸಕ್ತರು, ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳ ಪತ್ರಕರ್ತರು, ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. https://aratt.ai/@vishwaroopa_news_blog

 

ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪನೆಗಾಗಿ ನವೆಂಬರ್-೮ ರಂದು ಪೂರ್ವಸಿದ್ಧತಾ ಸಭೆ.

ಗಂಗಾವತಿ: ಪ್ರಸ್ತುತ ಈ ವರ್ಷ ನಡೆದ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೮ನೇ ಜಯಂತ್ಯೋತ್ಸವದ ಪ್ರಯುಕ್ತವಾಗಿ ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪಿಸಬೇಕೆಂದು ಇಚ್ಛೆಯನ್ನು ಹೊಂದಿ, ನವೆಂಬರ್-೮ ಶನಿವಾರ, ಸಂಜೆ ೦೪:೦೦ ಗಂಟೆಗೆ ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಶ್ರೀ ಕೊಟ್ಟೂರೇಶ್ವರ ಸಿಟಿ ಸ್ಕ್ಯಾನಿಂಗ್ ಸೆಂಟರ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಭಜನಾ ಮಂಡಳಿಯ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ ಎಂದು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.

ಈ ಪೂರ್ವಸಿದ್ಧತಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ ಅವರು ಪ್ರಸ್ತುತ ವರ್ಷದ ಶ್ರೀ ಹಾನಗಲ್ಲ ಕುಮಾರೇಶ್ವರರ ಜಯಂತಿ ಆಚರಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಸದ್ಭಕ್ತರಿಗೆ ಧನ್ಯವಾದಗಳನ್ನು ತಿಳಿಸುವುದರ ಮುಖಾಂತರವಾಗಿ ಮುಂಬರುವ ದಿನಗಳಲ್ಲಿ ನಿರಂತರವಾಗಿ ಎಲ್ಲಾ ಶರಣರನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವ ಸಲುವಾಗಿ ಗಂಗಾವತಿ ನಗರದಲ್ಲಿ ಶ್ರೀ ಹಾನಗಲ್ಲ ಕುಮಾರೇಶ್ವರರ ಭಜನಾ ಮಂಡಳಿ ಸ್ಥಾಪನೆಗಾಗಿ ಸಹಕರಿಸಲು  ತಿಳಿಸಿದ್ದಾರೆ.https://aratt.ai/@vishwaroopa_news_blog

ನವೆಂಬರ್-೦೯ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಿರಿಯ ಸಾಹಿತಿ ವೀರಣ್ಣ ವಾಲಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೧೧ನೇಯ ಚುಟುಕು ಸಾಹಿತ್ಯ ಸಮ್ಮೇಳನ

ಗಂಗಾವತಿ: ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನವಂಬರ್-೯ ಭಾನುವಾರದಂದು ಹಿರಿಯ ಸಾಹಿತಿಗಳಾದ ವೀರಣ್ಣ ವಾಲಿಯವರ ಸರ್ವಾಧ್ಯಕ್ಷತೆಯಲ್ಲಿ ಕೊಪ್ಪಳ ಜಿಲ್ಲಾ ೧೧ನೇ ಚುಟುಕು ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ತಿಳಿಸಿದರು.

ಈ ಸಮ್ಮೇಳನವು ಸದರಿ ದಿನದಂದು ಬೆಳಗ್ಗೆ ೧೦ ರಿಂದ ರಾತ್ರಿ ೧೦ ರವರೆಗೆ ಜರುಗಲಿದ್ದು, ಇದರ ದಿವ್ಯಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಕುಕನೂರು ಶಾಖಾಮಠದ ಡಾ. ಮಹಾದೇವ ಮಹಾಸ್ವಾಮಿಗಳು, ಗಜೇಂದ್ರಗಡ ಕಾಲಜ್ಞಾನಮಠದ ಶ್ರೀ ಶರಣಬಸವೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಎಂ.ಜಿ.ಆರ್. ಅರಸ್ ವಹಿಸಲಿದ್ದಾರೆ.

ಈ ಸಮ್ಮೇಳನದ ಗೋಷ್ಠಿ-೧ ರಲ್ಲಿ ಚುಟುಕು ಸಾಹಿತ್ಯ ವೈಶಿಷ್ಟ್ಯತೆ ಮತ್ತು ಅವಲೋಕನ ಮತ್ತು ಗೋಷ್ಠಿ-೨ ರಲ್ಲಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಸವಾಲುಗಳು : ಒಂದು ಚಿಂತನೆ ಕುರಿತು ಉಪನ್ಯಾಸ ನಡೆಯಲಿದೆ.

ಈ ಸಮ್ಮೇಳನದ ಆಯೋಜನೆಯನ್ನು ಕೊಪ್ಪಳ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ಹಾಗೂ ಕಾರ್ಯಕಾರಿ ಮಂಡಳಿಯವರು ಮಾಡಿದ್ದು, ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕವಿಗಳು ಹಾಗೂ ಕವಯಿತ್ರಿಗಳು ಪಾಲ್ಗೊಳ್ಳಲಿದ್ದು, ಕವಿಗೋಷ್ಠಿಗಳು, ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಚುಟುಕು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ವೀರಣ್ಣ ವಾಲಿಯವರು ಮೂಲತಃ ಯಲಬುರ್ಗಾ ತಾಲೂಕಿನ ಕರಮುಡಿಯವರು. ಇವರು “ಆಶಾಡ ವಿಭೂತಿಗಳು”. “ಮೌನ ನಿನಾದ”. “ನಮ್ಮ ನೆಲ ನಮ್ಮ ಜನ”. “ಲೇಖನ ಮಾಲೆ” ಸೇರಿದಂತೆ ಅನೇಕ ಕೃತಿಗಳನ್ನು ಸಾಹಿತ್ಯ ಚಂಪಾದಿತ ಚುಟುಕುಗಳನ್ನು ಪ್ರಕಟಿಸಿದ್ದು, ಹಲವಾರು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗಂಗಾವತಿ ಚುಟುಕು ಸಾಹಿತ್ಯ ಪರಿಷತ್ತು ಕೋರಿದೆ ಎಂದು ತಿಳಿಸಿದರು. https://aratt.ai/@vishwaroopa_news_blog

ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಚಿತ್ರಕಲಾ ಸ್ಪರ್ಧೆ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗೆ ಪ್ರಥಮ ಸ್ಥಾನ

ಗಂಗಾವತಿ: ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಮಂಗಳವಾರದಂದು ೧೩ ವರ್ಷದ ಒಳಗಿನ ಮಕ್ಕಳಿಗಾಗಿ ಪೀಸ್ ಪೋಸ್ಟರ್ ಕಾಂಪಿಟೇಶನ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ನಗರದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಜಜಾ ಹುಸ್ನಾ ಹಾಗೂ ಕುಶ್ ರಾಜ್ ಪುರೋಹಿತ್ ಪ್ರಥಮ ಸ್ಥಾನ ಪಡೆದುಕೊಂಡರು. ಚಿತ್ರಕಲೆಯಲ್ಲಿ ಪಾಲ್ಗೊಂಡ ಮುದ್ದು ಮಕ್ಕಳು ಟುಗೆದರ್ ವನ್ ವಿಷಯ ಕುರಿತು ತಮ್ಮದೇ ಆದ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ ಬಾಲ್ಯದಲ್ಲಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಾಕಷ್ಟು ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಸ್ಪರ್ಧೆಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿಗಳಾದ ಜಂಬಣ್ಣ ಐಲಿ, ಖಜಾಂಚಿಗಳಾದ ಶಿವಪ್ಪ ಗಾಳಿ ಹಾಗೂ ಸ್ಪರ್ಧೆಯ ನಿರ್ಣಾಯಕರಾಗಿ ಖ್ಯಾತ ಚಿತ್ರ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ರಾಘವೇಂದ್ರ ಪುರೋಹಿತ್, ಹಿರಿಯ ವೈದ್ಯರಾದ ಡಾ|| ಜಿ. ಚಂದ್ರಪ್ಪ,. ಡಾ|| ಪಂಪಾಪತಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.https://aratt.ai/@vishwaroopa_news_blog

 

ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಭವ್ಯ ಮೆರವಣಿಗೆ ಮೂಲಕ ತಾಯಿ ಭುವನೇಶ್ವರಿಯ ಮೆರವಣಿಗೆ

ಗಂಗಾವತಿ: ನವೆಂಬರ್‌-01 ಶನಿವಾರ ಆರೋನ್ ಮಿರಜ್‌ಕರ್ ಹಾಗೂ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೈಕ್ ರೈಲಿಯ ಮೂಲಕ ಕನ್ನಡ ಮಾತೆಯನ್ನು ವೇದಿಕೆಗೆ ಬರಮಾಡಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಲ್ಲಿ ಕನ್ನಡದ ಜ್ಞಾನವನ್ನು ಹೆಚ್ಚಿಸಲು ರಂಗೋಲಿಗಳ ಮೂಲಕ ವ್ಯಾಕರಣ ಹಾಗೂ ಕವಿಗಳ ಭಾವಚಿತ್ರಗಳನ್ನು ಮಕ್ಕಳಿಂದ ಬಿಡಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಬೆಳಗಿಸುವುದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ರುಬಿನ್ ಮಿರಜ್‌ಕರ್ ಉದ್ಘಾಟಿಸಿ “ಕಲಿಯೋಕೆ ಕೋಟಿ ಭಾಷೆ, ಆದರೆ ಆಡೋಕೆ ಒಂದೇ ಭಾಷೆ ಅದುವೇ ನಮ್ಮ ಕನ್ನಡ ಭಾಷೆ” ಎಂದು ಹೇಳಿ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. “ಕನ್ನಡ ಭಾಷೆಯನ್ನುವುದು ಪುರಾತನವಾದದ್ದು, ಅದು ಪ್ರಪಂಚದೆಲ್ಲೆಡೆ ಪಸರಿಸಿ ತನ್ನದೇ ಆದ ಛಾಪನ್ನು ಮೂಡಿಸಿದೆ” ಎಂದು ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್ ಅವರು ತಿಳಿಸಿದರು.

“ನಾವು ನವೆಂಬರ್-೧ ರಂದು ಮಾತ್ರ ಕನ್ನಡಿಗರಾಗುವ ಬದಲು ಎಲ್ಲಾ ಸಮಯದಲ್ಲೂ ನಂಬರ್ ಒನ್ ಕನ್ನಡಿಗರಾಗುವ ಮೂಲಕ ಕನ್ನಡ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಆಡಳಿತಾಧಿಕಾರಿಗಳಾದ ಚಂದ್ರಕಾಂತರಾವ್ ಅವರು ಮಾರ್ಗದರ್ಶನ ಮಾಡಿದರು.

“ಕನ್ನಡ ಭಾಷೆಯು ಸಮೃದ್ಧವಾದದ್ದು, ಕನ್ನಡ ಎನ್ನುವುದು ತಾಯಿ ಭಾಷೆಯಾಗಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹರಡಿದೆ” ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ನಾಯಕ ಹೇಳಿದರು. “ಕರ್ನಾಟಕದ ಏಕೀಕರಣವು ಬಹಾಳ ರೋಚಕವಾದ ಘಟ್ಟವಾಗಿದ್ದು, ಇದರ ಕೊಡುಗೆ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ” ಎಂದು ಕರ್ನಾಟಕದ ಏಕೀಕರಣದ ಕುರಿತು ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಖಾ ಠಾಕೂರ್ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಾಸರ, ಸಂತರ ಮತ್ತು ಕವಿಗಳ ವೇಷಭೂಷಣಗಳನ್ನು ತೊಟ್ಟು ಕಾರ್ಯಕ್ರಮಕ್ಕೆ ಮೆರಗನ್ನು ತಂದರು. ವೇದಿಕೆ ಕಾರ್ಯಕ್ರಮದ ನಂತರ ಕನ್ನಡ ನಾಡು, ನುಡಿ, ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. https://aratt.ai/@vishwaroopa_news_blog

ಭಾರತ್ ವಿಕಾಸ್ ಪರಿಷತ್ ನಡೆಸಿದ ಪ್ರಾಂತಮಟ್ಟದ ಕ್ವಿಜ್ ಕಾಂಪಿಟೇಷನ್‌ನಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಾದೇಶಿಕ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಅಕ್ಟೋಬರ್-೨೬ ಭಾನುವಾರ ರಾಯಚೂರಿನಲ್ಲಿ ನಡೆದ ಭಾರತ್ ವಿಕಾಸ್ ಪರಿಷತ್ ನಡೆಸಿರುವ ಪ್ರಾಂತ ಮಟ್ಟದ ಕ್ವಿಜ್ ಕಾಂಪಿಟೇಶನ್‌ನಲ್ಲಿ ಮಹಾನ್ ಕಿಡ್ಸ್ ಶಾಲೆಯ ೮ನೇ ತರಗತಿಯ ಮಕ್ಕಳಾದ ಸಾತ್ವಿಕ್ ಮನ್ಸಾಲಿ ಹಾಗೂ ಕಾರ್ತಿಕ್ ಕೊಂಡುಕೊಂದಿ ಇವರು ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಾದೇಶಿಕ (ರೀಜಿನಲ್) ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಮಕ್ಕಳಿಗೆ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಶುಭ ಹಾರೈಸಿ, ಈ ಮಕ್ಕಳು ಪ್ರಾದೇಶಿಕ (ರೀಜಿನಲ್) ಮಟ್ಟದಲ್ಲಿ ಗೆದ್ದರೆ ರಾಷ್ಟçಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಸವಿತಾ ಗುರುವಿನಮಠ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.

https://aratt.ai/@vishwaroopa_news_blog

 

ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾದ ಐ.ಎಂ.ಎ ಸಮ್ಮೇಳನ: ಡಾ|| ಅಮರೇಶ್ ಪಾಟೀಲ್

ಗಂಗಾವತಿ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗಂಗಾವತಿಯ ಅಮರ್ ಗಾರ್ಡನ್ ಸಭಾಂಗಣದಲ್ಲಿ ಜರುಗಿದ ಭಾರತೀಯ ವೈದ್ಯಕೀಯ ಸಂಘದ 91ನೆಯ ರಾಜ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಗೊಂಡಿತು ಎಂದು ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಡಾ|| ಅಮರೇಶ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ಅವರು ಅಕ್ಟೋಬರ್‌-26 ರವಿವಾರ ಸಮ್ಮೇಳನದ ಆಶಯ ನುಡಿಗಳನ್ನಾಡಿ, ಕಳೆದ ಶುಕ್ರವಾರದಿಂದ ಆರಂಭಗೊಂಡ ಈ ಸಮ್ಮೇಳನವು ರವಿವಾರದಂದು ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಬಂದ ನುರಿತ ತಜ್ಞರಿಂದ ಹಲವು ವೈವಿಧ್ಯಮಯ ವಿಷಯಗಳ ಕುರಿತು ಚಿಂತನ ಮಂಥನ ಹಾಗೂ ಅವರಿಂದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವುದರ ಮೂಲಕ ಕಿರಿಯ ವೈದ್ಯರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಸಿದ್ದಾರೆ ಎಂದು ತಿಳಿಸಿದ ಅವರು ಸಮ್ಮೇಳನಕ್ಕೆ ಆಗಮಿಸಿದ ಸಂಘದ ಪ್ರತಿನಿಧಿಗಳಿಗೆ ಕೃತಜ್ಞತಾ ಸಮರ್ಪಣೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಂಗಾವತಿ ವೈದ್ಯಕೀಯ ಸಂಘದ ನೂತನ ಅಧ್ಯಕ್ಷ ಡಾ|| ಮಲ್ಲನಗೌಡ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಡಾ|| ನಾಗರಾಜ್ ಲೋಕರೆ, ಖಜಾಂಚಿ ಡಾ|| ಅರವಿಂದ ಕೆ., ಸಹಕಾರ್ಯದರ್ಶಿ ಶ್ರೀ ಡಾ|| ಭಾನು ಪ್ರತಾಪ್ ಹೊಸಕೇರಿ ಇವರುಗಳಿಗೆ ರಾಜ್ಯಾಧ್ಯಕ್ಷ ವೀರಭದ್ರಪ್ಪ ಪ್ರಮಾಣವಚನ ಬೋಧಿಸಿದರೆ, ಈ ಹಿಂದಿನ ಅಧ್ಯಕ್ಷ ಡಾ|| ಎ.ಎಸ್ಎನ್‌ ರಾಜು ಹಾಗೂ ಕಾರ್ಯದರ್ಶಿ ಡಾ|| ನಾಗರಾಜ್ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಐ ಎಂ ಎ ಸಂಘದ ಮಾಜಿ ಅಧ್ಯಕ್ಷ ವಿವಿ ಚಿನಿವಾಲರ, ಡಾ|| ಮಲ್ಲನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಗಂಗಾವತಿ: ಕಳೆದ ೨೫ ವರ್ಷಗಳಿಂದಲೂ ಗಂಗಾವತಿಯಲ್ಲಿ ಶಂಕರಮಠ ನಿರ್ಮಾಣಕ್ಕೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿರುವ ದಿವಂಗತ ಭೀಮಸೇನ್‌ರಾವ್ ಅಳವಂಡಿಕರ್ ಹಾಗೂ ಅದ್ವೈತ ಸಿದ್ಧಾಂತದ ಬಗ್ಗೆ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದ ದಿವಂಗತ ಅಯೋದ್ಯ ರಾಮಾಚಾರ ಅವರನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇದೆ ಎಂದು ಗಂಗಾವತಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಅಕ್ಟೋಬರ್-೧೮ ಶನಿವಾರ ಶಾರದಾ ದೇವಸ್ಥಾನದಲ್ಲಿ ಗುರು ದ್ವಾದಶಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಶಂಕರ ಜಯಂತಿ, ದತ್ತಾತ್ರೇಯ ಜಯಂತಿ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪಂಪಾಪತಿ ದೇವಸ್ಥಾನ, ನಗರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಮೇಲಿನ ಹಿರಿಯರು ಹಾಗೂ ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ನಗರದಲ್ಲಿ ಈ ಎಲ್ಲಾ ಜಯಂತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಅತ್ಯಂತ ಸುಸಜ್ಜಿತವಾದ ಶಾರದಾ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಶಕುಂತಲಾ ಅವರು ಆಚರಣೆಯ ಮಹತ್ವ ಕುರಿತು ತಿಳಿಸುತ್ತಾ, ದತ್ತಾತ್ರೇಯ ಅವತಾರಿಗಳಾದ ಶ್ರೀಪಾದ ವಲ್ಲಭರು ಸಮೀಪದ ರಾಯಚೂರಿನ ಕುರುವಪುರ ಎಂಬಲ್ಲಿ ಹಲವಾರು ವರ್ಷಗಳಕಾಲ ವಾಸವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವುದರ ಮೂಲಕ ಈ ದಿನ ನಿಜಾಂಶವನ್ನು ಹೊಂದಿದ ದಿನಾಚರಣೆಯನ್ನು ಗುರು ದ್ವಾದಶಿ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ದತ್ತ ನಾಮಗಳಿಂದ ಸಂಕಷ್ಟಗಳು ದೂರವಾಗುವುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

ಇದಕ್ಕೂ ಪೂರ್ವದಲ್ಲಿ ದತ್ತ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪುಷ್ಪಾರ್ಚನೆ ಸೇರಿದಂತೆ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು. ಜೊತೆಗೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಮಹಾಪ್ರಸಾದ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ರಾಘವೇಂದ್ರ ಅಳವಂಡಿಕರ್, ಪ್ರಹ್ಲಾದರಾವ್ ಮಾಸ್ಟರ್, ಕಾಶಿನಾಥ್ ಜೋಶಿ, ಮಹೇಶ್ ಜೋಶಿ, ಬಾಲಕೃಷ್ಣ ದೇಸಾಯಿ


ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಸರಳತೆಯಿಂದ ಶ್ರೇಷ್ಠತೆಯೆಡೆಗೆ ಪಯಣಿಸಿದ ‘ದೇಶಪ್ರೇಮಿ- ಜನರಾಷ್ಟ್ರಪತಿ’ ಡಾ. ಎಪಿಜೆ ಅಬ್ದುಲ್ ಕಲಾಂ: ಪ್ರೊ. ಕರಿಗೂಳಿ

ತಾಲೂಕಿನ ಶ್ರೀರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಬ್ದುಲ್ ಕಲಾಂ ರವರ ಜಯಂತಿ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಡಗರ ಸಂಭ್ರಮದಿಂದ ಜರುಗಿದವು. ನನ್ನ ಜನುಮದಿನಕ್ಕೂ ಹಾಗೂ ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವುದರ ಮೂಲಕ ಯುವಕರಿಗೆ ಚಿರಸ್ಫೂರ್ತಿಯಾಗಿರುವ ಡಾ. ಕಲಾಂ ರವರ ಆಶಯದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಮ್ಮ ಕಾಲೇಜು ಸ್ವಚ್ಛ ಕಾಲೇಜು ಅಭಿಯಾನದ ಅಡಿಯಲ್ಲಿ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್‌-15 ರಂದು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೈನಂದಿನ ತರಗತಿಗಳ ನಂತರ ಬೆಳಿಗ್ಗೆ 11:30ಕ್ಕೆ ಕಾಲೇಜು ಆವರಣ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಖುಷಿಯಿಂದ ಪಾಲ್ಗೊಡು ಕಾಲೇಜಿನ ಮೈದಾನವನ್ನು ಸ್ವಚ್ಛಗೊಳಿಸಿದರು. ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಶೋಕ ಹಾಗೂ ಶಿವರಾಜಕುಮಾರ್ ಅವರನ್ನು ಕಾಲೇಜಿನ ಆವರಣ ಸುಂದರವಾಗಿ ಕಾಣುವಂತೆ ಮಾಡಲು ಸ್ವಯಂಪ್ರೇರಣೆಯಿಂದ ಯಂತ್ರೋಪಕರಣದ ಮುಖಾಂತರ ಸ್ವಚ್ಛಗೊಳಿಸಿದ್ದಕ್ಕಾಗಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಡಾ. ಸರಫರಾಜ್ ಅಹ್ಮದ್ ಅವರು ಸನ್ಮಾನ ಮಾಡಿದರು.

ಅಂತರಾಷ್ಟ್ರೀಯ ಕೈತೊಳೆಯುವ ದಿನ

ಕಾಲೇಜು ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಮೈದಾನದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಕೈತೊಳೆಯುವ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ಸೂಕ್ಷ್ಮಾಣುಜೀವಿ ನಮ್ಮ ಕೈ ಮೂಲಕ ದೇಹವನ್ನು ಸೇರಿ ಕಾಲರಾ, ಟೈಫಾಯ್ಡ್, ಹೆಪಿಟೈಟಸ್ ಬಿ, ರಕ್ತಹೀನತೆ, ಅಪೌಷ್ಟಿಕತೆಗೆ ಯಾವ ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ದೈನಂದಿನ ಜೀವನದಲ್ಲಿ ಕೈ ತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು. ನಂತರ ಅದೇ ಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕೈ ತೊಳೆಯುವ ಮುಖಾಂತರ ಅಂತರಾಷ್ಟ್ರೀಯ ಕೈತೊಳೆಯುವ ದಿನವನ್ನು ಆಚರಿಸಲಾಯಿತು.

ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜಯಂತಿ ಆಚರಣೆ

ನಂತರ ಕಾಲೇಜಿನ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯ ಅಂಗವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಗೂಳಿ ಅವರು ಮಾತನಾಡುತ್ತಾ ಕಲಾಂ ಜೀ ರವರ ಬಹುಮುಖ್ಯ ಹೇಳಿಕೆಯಾದ ‘ ಕನಸೆoದರೆ ನಿದ್ರೆಯ ಕಾಣುವುದು ಅಲ್ಲ ಬದಲಾಗಿ ನಿಮ್ಮನ್ನು ನಿದ್ರಿಸಲು ಬಿಡಲಾರದ್ದು ಕನಸು ಆದುದರಿಂದ ಕನಸುಗಳನ್ನು ಹಗಲು ಅಥವಾ ರಾತ್ರಿ ಕಾಣದೆ ದೊಡ್ಡ ಮಟ್ಟದಲ್ಲಿ ವಿಚಾರ ಮಾಡಿ ಅಂತಹ ಸಾಧನೆಗೋಸ್ಕರ ನಿಮ್ಮ ಸುಖನಿದ್ರೆ ತ್ಯಾಗ ಮಾಡಿ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಾಧಕರಾಗಿ ಹೊರಹೊಮ್ಮುವುದರಿಂದ ನಿಮ್ಮ ಬದುಕು ಹಸನಾಗುತ್ತದೆ ಹಾಗೂ ಕಾಲೇಜಿಗೆ ಗೌರವ ಬರುತ್ತದೆ. ನಿಮ್ಮ ಗುರಿಮುಟ್ಟಲು ಕಾಲೇಜಿನ ಸಕಲ ಸಂಪನ್ಮೂಲಗಳ ಸದ್ಬಳಕೆ ಮಾಡಕೊಳ್ಳಲು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ, ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯ ರಾಜಕೀಯ ನಾಯಕರು ಹಾಗೂ ಕ್ಷೇತ್ರದ ಶಾಸಕರು ಸೇರಿದಂತೆ ಎಲ್ಲರನ್ನೂ ಬಳಸಿಕೊಳ್ಳಿ ಎಂದು ಪ್ರಾಂಶುಪಾಲರಾದ ಕರಿಗೂಳಿ ಅವರು ತಿಳಿಸಿದರು.
ಇದೇ ಸಮಯದಲ್ಲಿ ನಮ್ಮ ಕಾಲೇಜಿನ ಗ್ರಂಥಾಲಯ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ವರ್ಷದ ಪುಸ್ತಕಗಳನ್ನು ವಿತರಿಸಲಾಯಿತು.

ತಂಬಾಕು ವಿರೋಧಿ ದಿನ ದ ಅಂಗವಾಗಿ ವ್ಯಸನಮುಕ್ತ ಯುವಜನತೆಯಿಂದ ಸದೃಢ ಸಮಾಜದ ನಿರ್ಮಾಣ ಕಾರ್ಯಕ್ರಮ
ವ್ಯಸನಗಳು ವಿದ್ಯಾರ್ಥಿ ಜೀವನವನ್ನಷ್ಟೇ ಅಲ್ಲ, ಇಡೀ ಬದುಕನ್ನೇ ನಾಶ ಮಾಡುತ್ತವೆ. ಹಾಗಾಗಿ ಎಲ್ಲರೂ ವ್ಯಸನಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಮೊದಲು ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳು ವ್ಯಸನಗಳಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ರೀತಿಯಲ್ಲಿ ಅಗತ್ಯ ಸಹಾಯ ಮಾಡುವ ಮುಖಾಂತರ ವ್ಯಸನಗಳಿಂದ ಮುಕ್ತರಾಗುವಂತೆ ಮನಃಪರಿವರ್ತನೆ ಮಾಡಬೇಕು. ವಿದ್ಯಾರ್ಥಿಗಳೂ ಕೂಡ ವ್ಯಸನಗಳಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ನಡೆಸಿ ಉತ್ತಮ ಪ್ರಬಂಧ ರಚಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ತಂಬಾಕು ಸೇವನೆ, ಮದ್ಯ ಸೇವನೆ ಹಾಗೂ ಇನ್ನಿತರ ಮಾದಕ ವಸ್ತುಗಳ ಪರಿಚಯ ಗ್ರಾಮೀಣ ಭಾಗದಲ್ಲಿ ಕಡಿಮೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ವ್ಯಸನಗಳಿಂದ ದೂರ ಉಳಿಯಬೇಕು, ಇದರಿಂದ ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿ ಎಂದು ತಿಳಿಸಿದರು. ವ್ಯಸನಗಳಿಂದಾಗುವ ಹಾನಿಗಳನ್ನು ತಿಳಿಸುವ ಉದ್ದೇಶದಿಂದ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹೆಚ್.ಎಂ. ಗುರುರಾಜ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸಾಂಸ್ಕೃತಿಕ ಸಂಚಾಲಕರಾದ ವೀರೇಶ ಅವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತ ಮಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಕೊನೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

ಸಸಿಸನೆಡುವ ಕಾರ್ಯಕ್ರಮ

ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಶ್ರೀರಾಮನಗರ ರವರ ಸಹಯೋಗದಲ್ಲಿ ನಮ್ಮ ಕಾಲೇಜಿನಲ್ಲಿ ಸಸಿನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಾರ್ಫರಾಜ್ ಅಹ್ಮದ್ ವಿರುಪಾಕ್ಷ ಕೆ, ಡಾ. ಶಶಿಕುಮಾರ ರವಿಕುಮಾರ ಮತ್ತು ಉಪನ್ಯಾಸಕರಾದ ವೆಂಕಟರಾಜು ಈಶಪ್ಪ ಮೇಟಿ, ವಿಜಯಕುಮಾರ,
ಡಾ. ಅರ್ಜುನ್, ನಂದಕುಮಾರ, ಪರಶುರಾಮ, ಪೀರಾವಲಿ, ಗ್ರಂಥಪಾಲಕರಾದ ಡಾ. ದೇವರಾಜ ಹಾಗೂ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣ ಹಾಜರಿದ್ದರು.

ಸೌಂದರ್ಯ ಲಹರಿ ಪಾರಾಯಣದಿಂದ ಸಂಕಷ್ಟ ದೂರ: ವೀಣಾ ಅಳವಂಡಿಕರ್

ಗಂಗಾವತಿ: ನಗರದ ಶಂಕರ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ವಿರಚಿತ ಸೌಂದರ್ಯ ಲಹರಿ ಸಪ್ತಾಹವನ್ನು ಅಕ್ಟೋಬರ್‌-11 ರಿಂದ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ವೀಣಾ ರಾಘವೇಂದ್ರ ಅಳವಂಡಿಕರ್‌ ಹಾಗೂ ಸಂಚಾಲಕಿ ಗಾಯತ್ರಿ ಶ್ರೀಧರ್ ಅಳವಂಡಿಕರ್‌ ಮಾತನಾಡಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳ 75 ನೆಯ ವರ್ಧಂತಿ ಮಹೋತ್ಸವ ಹಾಗೂ ಆನಂದ ಭಾರತಿ ಅಡಿಯಲ್ಲಿ ದೇಶಾದ್ಯಂತ ಶಂಕರ ಮಠಗಳಲ್ಲಿ ಶ್ರೀ ಸೌಂದರ್ಯ ಲಹರಿ ಸಪ್ತಾಹವನ್ನು ನಡೆಸಲಾಗುತ್ತಿದ್ದು ಇದರಿಂದ ಸಂಕಷ್ಟಗಳು ದೂರವಾಗುವುದರ ಜೊತೆಗೆ ಪಾರಾಯಣದಿಂದ ಬಹು ರೋಗ ನಿವಾರಣೆ ಆಗುವುದು ಎಂದು ಪಾರಾಯಣದ ಮಹತ್ವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.