ಶ್ರೀ ಶಾರದಾ ಶರನ್‌ ನವರಾತ್ರಿ ಪ್ರಯುಕ್ತ ಅಕ್ಷರಭ್ಯಾಸ.

ಗಂಗಾವತಿ. ನಗರದ ಶಂಕರ ಮಠದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಸೋಮವಾರದಂದು ಅಕ್ಷರಭ್ಯಾಸವನ್ನು ಮಕ್ಕಳಿಗೆ ಆಯೋಜಿಸಲಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವಿನಾಯಕ್ ಭಟ್ ನೇತೃತ್ವದಲ್ಲಿ ಚಿಕ್ಕ ಮಕ್ಕಳ ಪಾಲಕರಿಗೆ ಮಹಾಸಂಕಲ್ಪ. ಗಣೇಶ ಪೂಜೆ. ಶ್ರೀ ಶಾರದಾ ದೇವಿಯ ಪೂಜೆಯೊಂದಿಗೆ ಪಾಲಕರ ಮಕ್ಕಳೊಂದಿಗೆ ಅಕ್ಷರಭ್ಯಾಸವನ್ನು ಭಕ್ತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಾಲಕರ ಪರವಾಗಿ ಕಿನ್ನಾಳ ಗ್ರಾಮದಿಂದ ಆಗಮಿಸಿದ ಅನಿಲ್ ಕುಮಾರ್ ದಂಪತಿಗಳು ಮಾತನಾಡಿ, ಗಂಗಾವತಿಯ ಶೃಂಗೇರಿ ಶಂಕರ ಮಠವು ಶೃಂಗೇರಿ ಶಾರದಾಂಬ ಪದ್ಧತಿಗೆ ಅನುಗುಣವಾಗಿ ದೇವಸ್ಥಾನದ ಅರ್ಚಕರು ಕ್ರಮಬದ್ಧವಾಗಿ ಅಕ್ಷರಭ್ಯಾಸ ನಡೆಸಿದ್ದು ಸಂತಸದಾಯಕವಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಯಾವುದೇ ಕೊರತೆ ಆಗದಂತೆ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಒಟ್ಟಾರೆ ಶ್ರೀ ಶಾರದಾಂಬೆಯ ಅನುಗ್ರಹ ಎಲ್ಲಾ ಮಕ್ಕಳಿಗೆ ಲಭಿಸಲಿ ಎಂದು ಹೇಳಿದರು. ಒಟ್ಟು ಹತ್ತಕ್ಕೂ ಮಕ್ಕಳು ಹಾಗೂ ಪಾಲಕರು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ರಾಘವೇಂದ್ರ ಜೋಶಿ ಪಾರಾಯಣ ನಡೆಸಿದರು, ಧರ್ಮದರ್ಶಿ ನಾರಾಯಣರಾವ್ ವೈದ್ಯ ವ್ಯವಸ್ಥಾಪಕ Chart ಅಳವಂಡಿ. ಶ್ರೀನಿವಾಸ್ ಕರಮುಡಿ. ಶಿಕ್ಷಕಿ ಕವಿತಾ ದಿಗ್ಗಾವಿ ಉಪಸ್ಥಿತರಿದ್ದರು.

ಶ್ರೀ ಶಾರದಾ ಶರನ್‌ ನವರಾತ್ರಿ ಮಹೋತ್ಸವ.. ಸಂಕಲ್ಪದಂತೆ ಹರಕೆ ಸಮರ್ಪಿಸಿದ ಮಹಿಳೆ.

ಗಂಗಾವತಿ: ನಗರದ ಶಂಕರ ಮಠದಲ್ಲಿ ಶ್ರೀ ಶಾರದಾದೇವಿ 8ನೆಯ ವರ್ಷದ ಶರನ್ ನವರಾತ್ರಿ ಪ್ರಯುಕ್ತ ಹಾಗೂ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವದ ಭಾರತಿ ಸಮಾರಂಭದ ಅಡಿಯಲ್ಲಿ ಶುಕ್ರವಾರದಂದು ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿಶೇಷವಾಗಿ ನಗರದ ಮಹಿಳೆ ಒಬ್ಬಳು ಕಳೆದ ವರ್ಷ ತನ್ನ ಮಗಳ ಮದುವೆಗಾಗಿ ಹರಕೆ ಹೊತ್ತು ಹುಲಿಗೆಮ್ಮ ಎಂಬ ಮಗಳನ್ನು ಮದುವೆ ಮಾಡಿದ ಪ್ರಯುಕ್ತ ತಾಯಿ ಮತ್ತು ಮಗಳು 400 ಅಧಿಕ ಮಹಿಳೆಯರಿಗೆ ಅರಿಶಿಣ ಕುಂಕುಮ ಜೊತೆಗೆ ಹೂವು ಹಸಿರು ಬಳೆಗಳನ್ನು ಸಮರ್ಪಿಸಿದ್ದು ಅವರಲ್ಲಿನ ಶ್ರೀ ಶಾರದಾಂಬೆಯ ಬಗ್ಗೆ ಇರುವ ನಂಬಿಕೆ ಅನುಗ್ರಹ ಭಕ್ತಾದಿಗಳಿಗೆ ಸಾಕ್ಷಿ ಯಾಗಿ ಕಂಡುಬಂದಿತು

ಇದೇ ಸಂದರ್ಭದಲ್ಲಿ ಆಚಾರ ನರಸಾಪುರ ಗ್ರಾಮದ ನಾಟಿ ವೈದ್ಯ ಮಲ್ಲೇಶಪ್ಪ ಹಾಗೂ ಕುಟುಂಬಸ್ಥರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಸನ್ಮಾನಿಸಿ ಆಶೀರ್ವದಿಸಿದರು. ಸನ್ಮಾನ ಸ್ವೀಕರಿಸಿದ ಡಾ|| ಪ್ರವೀಣ್ ಮಾತನಾಡಿ, ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ವ್ಯಕ್ತಿತ್ವ ಅಪಾರವಾಗಿದ್ದು. ಅವರು ಬ್ಯಾಂಕಿನಲ್ಲಿನ ಸೇವೆ ಗ್ರಾಹಕರು ಅವರ ಮೇಲೆ ಇಟ್ಟ ಪ್ರೀತಿ ವಿಶ್ವಾಸ ಸ್ಮರಿಸಿ ಪ್ರಸ್ತುತ ಈಗ ಶ್ರೀ ಶಾರದಾ ಪೀಠದ ಧರ್ಮದರ್ಶಿಗಳಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಿ ಧಾರ್ಮಿಕತೆ ಜೊತೆಗೆ ಅವರ ಸಂಘಟನಾ ಮನೋಭಾವನೆಯನ್ನು ಮುಕ್ತ ಕಂಡದಿಂದ ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ನಾರಾಯಣರಾವ್ ಮಾತನಾಡಿ ಶ್ರೀದೇವಿಯ ಅನುಗ್ರಹ, ಗುರುಗಳ ಅನುಗ್ರಹದ ಮೇರೆಗೆ ಶಂಕರ ಮಠ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಿರಿಯ ಸ್ವಾಮಿಗಳ 75 ವಜ್ರ ಮಹೋತ್ಸವ ಪ್ರಯುಕ್ತ ಧಾರ್ಮಿಕ ಆಚರಣೆ ಜೊತೆಗೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ದಿನಾಚರಣೆ: ಗಂಗಾವತಿ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಐತಿಹಾಸಿಕ ಸ್ಮಾರಕ ಛಾಯಾಚಿತ್ರಗಳೊಂದಿಗೆ ಸಿಂಗಾರ.

ಗಂಗಾವತಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಗಂಗಾವತಿ ಚಾರಣ ಬಳಗವು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಜಾಗೃತಿ ಮತ್ತು ಪ್ರಚಾರಕ್ಕೆ ಒಂದು ನೂತನ ಹೆಜ್ಜೆ ಇಟ್ಟಿದೆ. ನಗರದ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯನ್ನು ವಿವಿಧ ಪ್ರವಾಸಿ ತಾಣಗಳ ಛಾಯಾಚಿತ್ರಗಳಿಂದ ಅಲಂಕರಿಸಿ, ಅದನ್ನು ‘ಪ್ರವಾಸೋದ್ಯಮ ಪೂರಕ ಮಾದರಿ ಕೊಠಡಿ’ಯಾಗಿ ಪರಿವರ್ತಿಸಲಾಯಿತು. ಪ್ರವಾಸಿಗರು ವಿಶ್ರಾಂತಿ ಪಡೆಯುವ ಸ್ಥಳವನ್ನು ಸುಂದರ ಹಾಗೂ ಮಾಹಿತಿ ಪ್ರಧಾನವಾಗಿಸಲು ಈ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಯಿತು ಎಂದು ಗಂಗಾವತಿ ಚಾರಣ ಬಳಗದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್ ತಿಳಿಸಿದರು.

ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗರಾಜ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮವು ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಾಗಿರದೇ, ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ವೈಭವವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸೇತುವೆಯಾಗಿದೆ ಎಂದರು. ಗಂಗಾವತಿಯಂತಹ ಐತಿಹಾಸಿಕ ಪಟ್ಟಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳ ಸೌಂದರೀಕರಣ ಮತ್ತು ಪ್ರವಾಸೋದ್ಯಮ ಬೆಂಬಲವು ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಇನ್ನಷ್ಟು ವಿಸ್ತಾರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ತಜ್ಞರು ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ನಗರಗಳು ಬೆಳೆಯಬೇಕೆಂದರೆ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತುಕೊಟ್ಟು, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರಚಾರಪಡಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಚಾರಿ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಶಾರದಾ, ಪ್ರೊ.ಎಫ್.ಹೆಚ್. ಚಿತ್ರಗಾರ ಅವರು ಮಾತನಾಡಿ, ಪ್ರವಾಸಿಗರಿಗೆ ಪ್ರೇರಣೆ ನೀಡುವ ಈ ರೀತಿಯ ಕಾರ್ಯಕ್ರಮಗಳು ಸ್ಥಳೀಯರ ಸಹಭಾಗಿತ್ವದಿಂದ ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಯು. ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಹಕಾರದೊಂದಿಗೆ ಅವರ ಸಮ್ಮುಖದಲ್ಲಿಯೇ ತಹಶಿಲ್ದಾರರ ಕಚೇರಿ ಮತ್ತು ಉಪ ನೋಂದಣಿ ಕಚೇರಿಗಳ ಗೋಡೆಗಳ ಮೇಲೆ ಪ್ರವಾಸಿ ತಾಣಗಳ ಸ್ಮಾರಕಗಳ ಪೋಸ್ಟರ್‌ಗಳನ್ನು ಅಳವಡಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮ ತಾಣಗಳ ಪರಿಚಯ ಹಾಗೂ ಜಾಗೃತಿ ಮೂಡಿಸುವ ಉದ್ದೇಶ ಸಾಧಿಸಲಾಯಿತು.

ಈ ಕಾರ್ಯಕ್ರಮದ ಗಂಗಾವತಿ ಚಾರಣ ಬಳಗದ ಪ್ರಮುಖರಾದ ಪ್ರಹ್ಲಾದ್ ಕುಲಕರ್ಣಿ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಪ್ರೊ. ಕರಿಗೂಳಿ, ಮಹಮ್ಮದ್ ರಫಿ, ಉಲ್ಲಾಸ್, ರಮೇಶ್ ಗಬ್ಬೂರ್, ಮಹಾಲಕ್ಷ್ಮೀ ಕೇಸರಹಟ್ಟಿ, ಶಾಹೀನ್ ಕೌಸರ್, ಜಗದೀಶ ಪಾಟೀಲ್, ಚನ್ನಬಸವ ಜೇಕಿನ್, ಟಿ. ಆಂಜನೇಯ, ಮಂಜುನಾಥ ಗುಡ್ಲಾನೂರ್, ರಾಜೇಶ ನಾಯಕ, ಚನ್ನಬಸವ ಕೊಟಗಿ, ಅಲೆಮಾರಿ ಬುಡ್ಗಜಂಗಮ ಸಮಾಜದ ಮುಖಂಡ ಕೃಷ್ಣ, ಹರನಾಯಕ, ಚಿದಾನಂದ ಕೀರ್ತಿ, ಸರ್ವೇಶ ವಸ್ತ್ರದ, ಮಂಜುನಾಥ ಸೋನಾರ್ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರವಾಸೋದ್ಯಮ ದಿನಾಚರಣೆಯನ್ನು ಸಾರ್ಥಕಗೊಳಿಸಿದರು.

ಎಸ್.ಎಲ್ ಭೈರಪ್ಪನವರಿಗೆ ಅ.ಭಾ.ಸಾ.ಪ ವತಿಯಿಂದ ನುಡಿನಮನ

ಗಂಗಾವತಿ: ಸೆಪ್ಟೆಂಬರ್-೨೪ ಮಧ್ಯಾಹ್ನ ೨:೩೦ ಗಂಟೆಗೆ ಬೆಂಗಳೂರಲ್ಲಿ ದೈವಾಧೀನರಾದ ಕರುನಾಡಿನ ಹಿರಿಯ ಖ್ಯಾತ ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಇಂದು ಸೆಪ್ಟೆಂಬರ್-೨೫ ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕ್ ಕುಮಾರ್ ರಾಯ್ಕರ್ ಮಾತನಾಡುತ್ತಾ ಒಬ್ಬ ಯುಗ ಪ್ರವರ್ತಕರಂತೆ ಹೊಸ ವೈಚಾರಿಕ ಜಗತ್ತಿನ ಸೃಷ್ಟಿಸಿ ಯುವ ಸಾಹಿತಿಗಳಿಗೆ ಭೈರಪ್ಪನವರು ಪ್ರೇರಣೆಯೆಂದು ಕೊಂಡಾಡಿದರು. ಯುವ ಸಾಹಿತಿಗಳು ಅವರ ಕಾದಂಬರಿ ವಿಮರ್ಶೆ ಹಾಗೂ ಜೀವನಕ್ರಮದಿಂದ ಪ್ರೇರಣೆ ಪಡೆದು ಹೊಸ ಸೃಷ್ಟಿಯ ವೈಚಾರಿಕ ವಲಯವನ್ನು ನಿರ್ಮಿಸಲಿ ಎಂದು ಕರೆ ನೀಡಿದರು.

ಕಾದಂಬರಿಗಳಲ್ಲದೆ ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ ಎಂಬ ಕೃತಿಗಳನ್ನು ಭೈರಪ್ಪ ರಚಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಅಭಿಪ್ರಾಯಪಟ್ಟರು. ಹಿರಿಯ ಉಪನ್ಯಾಸಕರಾದ ಶ್ರೀಯುತ ನಾರಾಯಣ ಕಂದಗಲ್ ಭೈರಪ್ಪನವರು ಓದುಗರ ಹಾಗೂ ವಿಮರ್ಶಕರ ಮನವನ್ನು ಗೆದ್ದವರೆಂದು ಹೇಳಿದರು.

ಬೈರಪ್ಪ ಅವರ ಸಾಧನೆ ನಡೆ-ನುಡಿ ಓದು ಬರಹ ಅನುಕರಣಿಯವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಳ್ಳಾರಿ ವಿಭಾಗದ ಸಂಯೋಜಕರಾದ ಟಿ. ಶ್ರೀಧರ್ ಹೇಳಿದರು.

ಬಡತನದಿಂದ ಬೆಳೆದು ಬಂದು ಜೀವನ ಅನುಭವದಿಂದ ಬರವಣಿಗೆಗೆ ಮೊದಲು ಅವರು ಆಳವಾಗಿ ಅಧ್ಯಯನ ಕೈಗೊಂಡು ಇದಕ್ಕೆ ಅವರ ಕಾದಂಬರಿಗಳು ಉತ್ಕೃಷ್ಟತೆಗೆ ಕಾರಣವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ನಗರದ ಉಪಾಧ್ಯಕ್ಷರಾದ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.

ದೇಶದ ಅತ್ಯಂತ ಉನ್ನತವಾದ ಗೌರವದ ಪದ್ಮಭೂಷಣರ ಗೌರವಕ್ಕೆ ಪಾತ್ರರಾದವರು ಎಂದು ಇತರ ಪ್ರಶಸ್ತಿಗಳ ಗೋಜಿಗೆ ಹೋಗಲಿಲ್ಲ. ಸಾಹಿತ್ಯವನ್ನು ಅವರಂತೆ ಸಮಗ್ರವಾಗಿ ವಿಮರ್ಶೆ ಮಾಡಿದ ಕನ್ನಡ ನಾಡಿನಲ್ಲಿ ಅತಿ ವಿರಳವೆಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಗಂಗಾವತಿ ನಗರದ ಅಧ್ಯಕ್ಷರಾದ ಜಡಿಯಪ್ಪ ಮೆಟ್ರಿ ಹಿರಿಯ ಸಾಹಿತಿ ಭೈರಪ್ಪನವರನ್ನು ಸ್ಮರಿಸಿದರು.

ಗಂಗವತಿ ನಗರ ಉಪಾಧ್ಯಕ್ಷರಾದ ಮಹಾದೇವ್ ಮೋತಿ ಇವರಿಂದ ಶಾಂತಿ ಮಂತ್ರ ಹಾಗೂ ಗಂಗಾವತಿ ನಗರ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲಾಲ್ ಇವರಿಂದ ವಂದನಾರ್ಪಣೆ ನಡೆಯಿತು.

ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ್ ಅವರಿಗೆ ಗಂಗಾವತಿ ವಕೀಲರ ಸಂಘದಿಂದ ಅಭಿನಂದನಾ ಪ್ರಶಸ್ತಿ ಪತ್ರ.

ಗಂಗಾವತಿ: ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ ಅವರಿಗೆ ಗಂಗಾವತಿ ವಕೀಲರ ಸಂಘದಿಂದ ಸೆಪ್ಟೆಂಬರ್-೨೫ ರಂದು ನ್ಯಾಯಾಲಯದ ಆವರಣದಲ್ಲಿ ಅಬಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ನರಸಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.ಕಲ್ಯಾಣಂ ನಾಗರಾಜ ಅವರು ಜಾನಪದ ಸಂಗೀತ, ಕಲೆ ಹಾಗೂ ಜಾನಪದ ಸಾಹಿತ್ಯದ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಸೇವೆ ಕರ್ನಾಟಕ ಮತ್ತು ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿದೆ. ಅವರ ಸೇವೆಯು ಗತವೈಭವದ ಕನ್ನಡ ನಾಡು ನುಡಿಗಳ ಹೆಮ್ಮೆಯ ಕನ್ನಡ ಮಣ್ಣಿನ ಜನತೆಗೆ ಮಾದರಿಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಇವರಿಗೆ ಕರ್ನಾಟಕ ಮೀಡಿಯಾ ಕ್ಲಬ್ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಬಿರುದು ನೀಡಿ ಸನ್ಮಾನಿಸಿದೆ. ಪ್ರಯುಕ್ತ ಗಂಗಾವತಿ ವಕೀಲರ ಸಂಘ ಕಲ್ಯಾಣಂ ನಾಗರಾಜ ಅವರ ಸೇವೆಗೆ ಪ್ರೋತ್ಸಾಹಿಸಿ, ಪ್ರಶಂಶಿಸಿ ಈ ಅಭಿನಂದನಾ ಪ್ರಶಸ್ತಿ ಪತ್ರ ನೀಡಲಾಗಿದೆ. ಕಲ್ಯಾಣಂ ನಾಗರಾಜ ಅವರ ಕಲೆ ಹಾಗೂ ಸೇವೆಯನ್ನು ಸರ್ಕಾರ ಗುರುತಿಸಿ ಉನ್ನತ ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶರದಕುಮಾರ ದಂಡಿನ್, ಕೆಂಚಪ್ಪ ವಕೀಲರು ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಮಹಿಳಾ ವಕೀಲರಾದ ಸೈಯ್ಯದಾಬಾನು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೈಸೂರು ದಸರಾ ಕ್ರೀಡಾಕೂಟ-೨೦೨೫ ರಲ್ಲಿ ಗಂಗಾವತಿಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಮೈಸೂರು ದಸರಾ ಕ್ರೀಡಾಕೂಟ ೨೦೨೫ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲ್ಯೂ ಡ್ರ‍್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ೩ ವಿದ್ಯಾರ್ಥಿಗಳು ವಿವಿಧ ಫೈಟ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೆಪ್ಟೆಂಬರ್-೨೨ ರಿಂದ ೨೪ರ ವರೆಗೆ ಮೈಸೂರಿನ ಯುವರಾಜ ಒಳ ಕ್ರೀಡಾಂಗಣದಲ್ಲಿ ನಡೆದಿರುತ್ತದೆ.

ಈ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ನಂದಿತಾ ಮಂಜುನಾಥ್-೫೫ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ, ಮಹಾಲಕ್ಷ್ಮಿ ಬಸವರಾಜ್-೭೦ ಕೆ.ಜಿ ಮೇಲ್ಭಾಗದ ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಸಿ.ಎಂ. ಮಣಿಕಂಠ ಸಿ.ಎಂ. ರಾಘವೇಂದ್ರ-೮೨ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಷಣ್ಮುಖಪ್ಪನವರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಮೋಹನ್ ಕುಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ರಂಗಮ್ಮ, ಷಣ್ಮುಖಪ್ಪ, ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಚಳಮರದ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಹ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.

ಸಮೀಕ್ಷೆಯಲ್ಲಿ ಧರ್ಮ ಹಿಂದೂ, ಜಾತಿ ವಿಶ್ವಕರ್ಮ ಎಂದು ನಮೂದಿಸಿ: ನಾಗೇಶರಾವ್‌ ಕಂಸಾಲ್

ಕೊಪ್ಪಳ: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಸಮಸ್ತ ವಿಶ್ವಕರ್ಮ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿಯ ಕಾಲಂನಲ್ಲಿ ವಿಶ್ವಕರ್ಮ ಎಂದು ನಮೂದಿಸಬೇಕೆಂದು  ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಕಂಸಾಲ್ ಕರೆ ನೀಡಿದ್ದಾರೆ.

ಅವರು ಸೆಪ್ಟೆಂಬರ್‌-25 ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ಹಿಂದುಳಿದ ಆಯೋಗದ ಮೂಲಕ ಮನೆ ಮನೆಗೆ ಗಣತಿದಾರರ ಮೂಲಕ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಪ್ರಾರಂಭಿಸಿದೆ. ಗಣತಿದಾರರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಮತ್ತು ಧರ್ಮ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ಸರಿಯಾಗಿ ನಮೂದಿಸಿ ಪರಿಶೀಲಿಸಬೇಕು. ಈ ಕುರಿತು ಸಮಾಜದ ಎಲ್ಲಾ ಬಂಧುಗಳು ಪ್ರತಿಯೊಂದು ಮನೆಯಲ್ಲಿ ಸರಿಯಾಗಿ ನಮೂದು ಮಾಡಿರುವ ಕುರಿತು ಪರಿಶೀಲಿಸಬೇಕು ಎಂದು ನಾಗೇಶಕುಮಾರ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಕೆ ಮತ್ತಿತರು ಇದ್ದರು.

ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ-೨೦೨೫

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್-೨೨ ಸೋಮವಾರ ಐ.ಎಂ.ಎ ಹಾಲ್‌ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಖ್ಯಾತ ವೈದ್ಯರಾದ ಡಾ|| ಜಿ ಚಂದ್ರಪ್ಪ ಸರ್ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಲಯನ್ಸ್ ಸದಸ್ಯರಾದ ಡಾ|| ವಿ.ವಿ ಚಿನಿವಾಲರ್ ಇವರು ವಹಿಸಿದ್ದರು.

ಶಿಕ್ಷಕರಾದ ಶ್ರೀ ಉಲ್ಲಾಸರೆಡ್ಡಿ ಸ್ವಾಗತಿಸಿದರೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಮುಖ್ಯ ಅತಿಥಿಗಳು ಶಿಕ್ಷಕರ ಮಹತ್ವ, ಜವಾಬ್ದಾರಿ &ಅರ್ಪಣ ಮನೋಭಾವ ಕುರಿತು ಮಾತನಾಡಿದರು.

ಪ್ರಸ್ತುತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿವಿಧ ಶಾಲೆಗಳ ಏಳು ಶಿಕ್ಷಕರಾದ ಮಧುಕುಮಾರ ಕುಲಕರ್ಣಿ, ಯಮನೂರಪ್ಪ, ಮೆಹಬೂಬ ಕಿಲ್ಲೇದಾರ್, ಶ್ರೀಮತಿ ವಿಜಯಾ ದೊಡ್ಡ ಬಿದರಿ, ಶ್ರೀಮತಿ ಶರಣಮ್ಮ, ಶ್ರೀಮತಿ ಕಾಳಮ್ಮ, ಪರಶುರಾಮ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ಹರ್ಷ ವ್ಯಕ್ತಪಡಿಸಿ, ಲಯನ್ಸ್ ಕ್ಲಬ್‌ಗೆ ಧನ್ಯವಾದಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ|| ಜಿ. ಚಂದ್ರಪ್ಪ ಸರ್ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳು ಮಹತ್ವರ ಕೊಡುಗೆ ನೀಡಿರುತ್ತಾರೆ, ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸರಸ್ವತಿ, ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಡಾ|| ಜಂಬುನಾಥಗೌಡ, ಡಾ|| ಸೋಮಪ್ಪ, ಲ. ಸೋಮನಾಥ ಪಟ್ಟಣಶೆಟ್ಟಿ,
ಲ. ಸಿದ್ದಣ್ಣ ಜಕ್ಕಲಿ, ಪ್ರಭು ರೆಡ್ಡಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಚಂದ್ರಗೌಡ ಪೊ.ಪಾಟೀಲ್, ಕ್ಲಬ್ ಖಜಾಂಚಿಗಳಾದ ಲ. ಶಿವಕುಮಾರ ಗಾಳಿ ಉಪಸ್ಥಿತರಿದ್ದರು.

ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಸಂಭ್ರಮ. ಸರ್ವ ಜನಾಂಗದ ಮಹಿಳೆಯರ ಸಹಕಾರದಿಂದ ದಾಖಲೆಯ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣ: ನಾರಾಯಣ ವೈದ್ಯ.

ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರ ಪಾರಾಯಣ ಜರುಗಿರುವುದು ಸಂತಸದಾಯಕವಾಗಿದೆ ಎಂದು ಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಸೋಮವಾರದಂದು ಶಾರದಾ ನಗರದ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೫ ವರ್ಧಂತಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಕಳೆದ ಏಳು ವರ್ಷಕ್ಕಿಂತ ೮ನೇ ವರ್ಷದ ಆಚರಣೆಯಲ್ಲಿ ಶ್ರೀ ಶಾರದಾ ಮಾತೆಗೆ ನೂತನವಾದ ಬಹುವೆಚ್ಚದ ಮಂಟಪವನ್ನು ಬಾಲಕೃಷ್ಣ ದೇಸಾಯಿ ಕುಟುಂಬಸ್ಥರು ಸಮರ್ಪಿಸಿದ್ದರು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಹಿಳೆಯರು ಅತ್ಯಂತ ಉತ್ಸಾಹ ಭಕ್ತಿಯಿಂದ ಭಾಗವಹಿಸಿ ಶ್ರೀ ಶಾರದಾ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಧಾರ್ಮಿಕ ಆಚರಣೆ ವ್ಯಕ್ತಿಗೆ ಸನ್ಮಾರ್ಗ ಹಾಗೂ ಗುಣಮಟ್ಟದ ಸಂಸ್ಕಾರ ನೀಡಲು ಮೂಲ ಕಾರಣವಾಗಿದೆ. ಇದರಿಂದ ಪಾರಂಪರಿಕ ಸಂಸ್ಕೃತಿ ಧರ್ಮರಕ್ಷಣೆ ಸಂಘಟನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಪಾರಾಯಣಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಭಟ್ ಮಹಾಸಂಕಲ್ಪವನ್ನು ನೆರವೇರಿಸಿದರು.

ಬೆಳಗ್ಗೆ ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್. ಶ್ರಿನಿವಾಸ ಕರಮುಡಿ, ವೇಣು ಅಳವಂಡಿ, ಕಾಶಿನಾಥ ಭಟ್. ಶೇಷಗಿರಿ ಗಡಾದ್, ಜಗನ್ನಾಥ್ ಅಳವಂಡಿಕರ್, ಭೀಮಾಶಂಕರ್ ಹೊಸಳ್ಳಿ, ಕೆ.ವಿ ಜೋಶಿ. ನಾಗೇಶ್ ಭಟ್ ಸೇರಿದಂತೆ ಮತ್ತಿತರ ಶಂಕರ ಸೇವಾ ಟ್ರಸ್ಟ್ನ ಸದಸ್ಯರು ಪಾಲ್ಗೊಂಡಿದ್ದರು.

ವಂಕಲಕುಂಟೆ ಶ್ರೀ ಮಾರುತೇಶ್ವರ ಟ್ರಸ್ಟ್ ಅಸ್ತಿತ್ವಕ್ಕೆ ನೂತನ ಪದಾಧಿಕಾರಿಗಳ ನೇಮಕ.

ಗಂಗಾವತಿ: ತಾಲೂಕಿನ ಬಸಾಪಟ್ಟಣ ಮತ್ತು ಮಲ್ಲಾಪುರ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಎಡದಂಡೆ ಕಾಲುವೆಯ ಬವಾರ್ ಪಕ್ಕದಲ್ಲಿರುವ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಮಲ್ಲಾಪುರ, ಬಸಾಪಟ್ಟಣ, ವೆಂಕಟಗಿರಿ, ಗಂಗಾವತಿ, ವಡ್ಡರಹಹಟ್ಟಿ ಹಾಗೂ ಇನ್ನಿತರ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಸಭೆ ಸೇರಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸಲುವಾಗಿ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೂತನವಾಗಿ ಗೌರವಾಧ್ಯಕ್ಷರನ್ನು, ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ದೇವಸ್ಥಾನದ ಪ್ರಮುಖ ಅರ್ಚಕರಾದ ಶ್ರೀ ಫಕೀರೇಶ್ವರಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವಾಧ್ಯಕ್ಷರಾಗಿ ಬಸವನಗೌಡ ಮಾಲಿಪಾಟೀಲ್ ಮಲ್ಲಾಪುರ, ನಾಗಪ್ಪ ಕಂಬಳಿ ಬಸಾಪಟ್ಟಣ, ಅಧ್ಯಕ್ಷರಾಗಿ ಶಿವಕುಮಾರ ಅರಿಕೇರಿ ಗಂಗಾವತಿ, ಉಪಾಧ್ಯಕ್ಷರುಗಳಾಗಿ ಹನುಮಂತಪ್ಪ ಯಾದವ್ ವೆಂಕಟಗಿರಿ, ವಿರುಪಣ್ಣ ಡಂಬರ್ ಬಸಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಪ್ಪ ತಳವಾರ್ ಬಸಾಪಟ್ಟಣ, ಸಹ ಕಾರ್ಯದರ್ಶಿಯಾಗಿ ಕೆ ನಿಂಗಜ್ಜ, ಖಜಾಂಚಿಯಾಗಿ ಅಯ್ಯನಗೌಡ ಮಲ್ಲಾಪುರ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಕೆ ಮಂಜುನಾಥ್ ಕುರುಗೋಡು ಗಂಗಾವತಿ, ಮಹದೇವಪ್ಪ ಫೊಟೋಗ್ರಾಫರ್ ಗಂಗಾವತಿ, ಭೀಮರಾಯ ಸಿಂಗಾಪುರ ಸಿದ್ದಿಕೆರೆ, ವಡ್ರಹಟ್ಟಿಕ್ಯಾಂಪ್ ರಾಘವಲು, ನಾಗರಾಜ ಮಡಿವಾಳ ಹಾಗೂ ಲೋಕೇಶ್ ಯಾದವ್ ವೆಂಕಟಗಿರಿ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷರಾಗಿರುವ ಹಿರಿಯ ಸದಸ್ಯರಾದ ಹನುಮಂತಪ್ಪ ಯಾದವ್ ವೆಂಕಟಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.